Monday 25 January 2016

ಗುಬ್ಬಚ್ಚಿಗಳು





ಗುಬ್ಬಚ್ಚಿಗಳು....


ನಮ್ಮ ಮನೆಯ ಕರಿ ಹಂಚಿನ ಸೂರಿನಲ್ಲಿ ಗುಬ್ಬಚ್ಚಿಯೊಂದು ಗೂಡು ಕಟ್ಟುತ್ತಿತ್ತು. ಗುಬ್ಬಚ್ಚಿಯು ಚೀಂವ್... ಚೀಂವ್...ಎಂದು ಪಟ ಪಟನೆ ರೆಕ್ಕೆ ಬಡಿಯುತ್ತಾ ನಮ್ಮ ಕಣ್ಣ ಮುಂದೆನೇ ಹಾದು ಹೊಗುತ್ತಿದ್ದರೆ ನನಗೆ ಒಂದು ರೀತಿಯ ಆನಂದ ಸಿಗುತ್ತಿತ್ತು. ಗುಬ್ಬಚ್ಚಿ ಗೂಡು ಹೆಣೆಯುವುದನ್ನು ನೋಡುವುದೇ ಒಂದು ಕುತೂಹಲ.ತನ್ನ ಕೊಕ್ಕಿನಿಂದ ಒಂದೊಂದೇ ಹುಲ್ಲಿನ ಗರಿಗಳನ್ನು ತಂದು ಸೂರಿನಡಿಯಲ್ಲಿ ಸೇರಿಸಿ ಗೂಡು ಕಟ್ಟುತ್ತಿತ್ತು. ಶಾಲೆಯಿಂದ ಬಂದ ಕೂಡಲೇ ನಾನು ಗುಬ್ಬಚ್ಚಿಯ ಗೂಡಿನ ಬಳಿ ಹೋಗಿ ಎಷ್ಟು ಮೊಟ್ಟೆ ಇಟ್ಟಿದೆಯೆಂದು ಪ್ರತಿದಿನ ಹೋಗಿ ನೋಡುತ್ತಿದ್ದೆವು. ಒಂದೊಂದು ಸಾರಿ ಗುಬ್ಬಚ್ಚಿಯೂ ಸಹ ಗೂಡಲ್ಲೇ ಇರುತ್ತಿತ್ತು. ನಾನು ಅದಕ್ಕೆ ಏನೂ ತೊಂದರೆ ಮಾಡದಂತೆ ಹಾಗೆಯೇ ಹಿಂದೆ ಸರಿಯುತ್ತಿದ್ದೆನು. ಹದಿನೈದು ದಿನಗಳ ಹಿಂದೆ ಗುಬ್ಬಚ್ಚಿ ಗೂಡು ಕಟ್ಟುತ್ತಿದ್ದಾಗ ನಾನು ಗುಬ್ಬಚ್ಚಿಗೆ ಸಹಾಯ ಮಾಡಲೆಂದೇ ಸಿದ್ದಣ್ಣನ ಕಣದಲ್ಲಿರುವ ಬಣವೆಯಿಂದ ಒಂದು ಹಿಡಿ ಹುಲ್ಲನ್ನು ತಂದು ಗುಬ್ಬಚ್ಚಿ ಗೂಡುಕಟ್ಟುತ್ತಿದ್ದ ಸ್ಥಳದ ಹತ್ತಿರಕ್ಕೆ ತಂದು ಇಟ್ಟೆವು. ಪಾಪ ಗುಬ್ಬಚ್ಚಿ ಬಹು ದೂರ ಹಾರಿ ಹೋಗಿ ಕಷ್ಟಪಟ್ಟು ಹುಲ್ಲನ್ನು ತಂದು ಗೂಡನ್ನು ಕಟ್ಟುತ್ತಿತ್ತು. ಈಗ ಗುಬ್ಬಚ್ಚಿಗೆ ಸ್ವಲ್ಪ ಅನುಕೂಲವಾಗಬಹುದೆಂದು ಭಾವಿಸಿದೆನು. ಆದರೆ ಗುಬ್ಬಚ್ಚಿ ನಾನು ತಂದ ಹುಲ್ಲನ್ನು ಮುಟ್ಟಲೇ ಇಲ್ಲ ಮತ್ತೆ ಬಹು ದೂರ ಹಾರಿಕೊಂಡೇ ಹುಲ್ಲನ್ನು ತರುತ್ತಿತ್ತು. ಗುಬ್ಬಚ್ಚಿಗೆ ನನ್ನ ಸಹಾಯ ಬೇಕಾಗಿರಲಿಲ್ಲ. ಇಲ್ಲೇ ಹತ್ತಿರದಲ್ಲಿ ಹುಲ್ಲು ಇದ್ದರೂ ಗುಬ್ಬಚ್ಚಿ ಹೀಗೇಕೆ ಮಾಡುತ್ತಿದೆ. ಅದಕ್ಕೆ ಮಾನವನ ಸಹಾಯ ಬೇಕಿಲ್ಲವೇ..? ಎಂದೆನಿಸಿತು.... 
ಒಂದು ದಿನ ಅಮ್ಮ ಸೂರಿನಲ್ಲಿರುವ ಗುಬ್ಬಚ್ಚಿ ಗೂಡನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಳು. ನಾನು ಗುಬ್ಬಚ್ಚಿ ಗೂಡು ಬೇಕೇ ಬೇಕೆಂದು ಹಟ ಹಿಡಿದೆ.
"ನಾಳೆ ಸರ್ಕಾರದಿಂದ ರೈತ ಹಿತರಕ್ಷಣ ಸಮಿತಿಯವರು ವ್ಯವಹಾರದ ಮಾತುಕತೆ ನಡೆಸಲು ನಮ್ಮ ಮನೆಗೆ ಬರುತ್ತಿದ್ದಾರೆ. ತುಂಬಾ ದೊಡ್ಡ ಮನುಷ್ಯರು.ಕಾರಿನಲ್ಲಿ ಬರುತ್ತಾರೆ. ಅವರ ಮುಂದೆ ಈ ಗಲೀಜು ಇದ್ದರೆ ಏನಂದುಕೊಳ್ಳುತ್ತಾರೆ. ನನಗೂ ಸಹ ದಿನಾ ಈ ಗುಬ್ಬಚ್ಚಿಯ ಪಿಕ್ಕೆಗಳನ್ನು ಗುಡಿಸಿ ಸಾಕಾಗಿದೆ"
ಎಂದು ಗೊಣಗಿದಳು.
ನಾನು ಗುಬ್ಬಚ್ಚಿ ಬೇಕೇ ಬೇಕು ಎಂದು ಹಠ ಹಿಡಿದು ಅಳಲು ಪ್ರಾರಂಭಿಸಿದೆ. ಅಮ್ಮ ನನ್ನ ಹಠಕ್ಕೆ ಮಣಿದು ಇನ್ನು ಮಂದೆ ನಿನ್ನ ಈ ಗುಬ್ಬಚ್ಚಿ ಗೂಡನ್ನು ತೆಗೆದು ಹಾಕುವುದಿಲ್ಲ ಎಂದು ಮಾತು ಕೊಟ್ಟ ಮೇಲೆ ಅಳುವುದನ್ನು ನಿಲ್ಲಿಸಿದೆ. ಅಂದಿನಿಂದ ನಾನು ಗುಬ್ಬಚ್ಚಿಗೆ ಇನ್ನೂ ಹತ್ತಿರವಾದೆ. ಪ್ರತಿನಿತ್ಯ ಗುಬ್ಬಚ್ಚಿಯನ್ನು ನೋಡುವುದು. ಅದರೊಡನೆ ಮಾತನಾಡುವುದು.ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಸಂತೋಷ ಪಡುವುದು, ಹೀಗೆ ದಿನವೂ ನಡೆಯುತ್ತಿತ್ತು. ಮೂರು ತಿಂಗಳಲ್ಲೇ ನನ್ನ ಮತ್ತು ಗುಬ್ಬಚ್ಚಿಯ ಸ್ನೇಹ ಗಾಢವಾಗಿ ಬೆಳೆಯಿತು. ಗುಬ್ಬಚ್ಚಿಯೂ ಸಹ ನನ್ನ ಪ್ರೀತಿಗೆ ಸ್ಪಂದಿಸುತ್ತಿತ್ತ....
ಆ ದಿನ ಅಪ್ಪ ತುಂಬಾ ದುಃಖದಿಂದ ಇದ್ದರು. ಮೂರು ತಿಂಗಳ ಹಿಂದೆ ನಮ್ಮ ಮನೆಗೆ ಬಂದ ರೈತ ಹಿತರಕ್ಷಣ ಸಮಿತಿಯವರು ಅಪ್ಪನಿಗೆ ಹಣಕಾಸಿನ ವಿಷಯದಲ್ಲಿ ಪಂಗನಾಮ ಹಾಕಿದ್ದರು . ಈ ಸಮಿತಿಯವರು ರೈತರು ನಮ್ಮಲ್ಲಿ ಹಣ ಹೂಡಿದರೆ ಮೂರು ತಿಂಗಳಲ್ಲೇ ಎರಡರಷ್ಟು ಹಣ ಕೊಡುತ್ತೇವೆ ಎಂದು ನಮ್ಮ ಊರಿನಲ್ಲಿ ಸುದ್ಧಿ ಹಬ್ಬಿಸಿದ್ದರು. ನಮ್ಮ ಪಕ್ಕದ ಮನೆಯ ಸಿದ್ದಣ್ಣ ಹತ್ತು ಸಾವಿರ ಹಣ ಹೂಡಿದ್ದರು. ಮೂರು ತಿಂಗಳಲ್ಲಿ ಸಿದ್ದಣ್ಣನಿಗೆ ಇಪ್ಪತ್ತು ಸಾವಿರ ಹಣ ಬಂದಿತ್ತು. ಈ ವಿಷಯ ತಿಳಿದ ಅಪ್ಪನಿಗೆ ತುಂಬಾ ಖುಷಿಯಾಯಿತು. ಎರಡು ವರ್ಷದಿಂದ ಅಮ್ಮನಿಗೆ ಎರಡೆಳೆಯ ಅವಲಕ್ಕಿ ಸರ ಮಾಡಿಸಲೆಂದು ಅಪ್ಪ ಹತ್ತು ಸಾವಿರ ಹಣ ಕೂಡಿಟ್ಟಿದ್ದರು.ಸಿದ್ದಣ್ಣ ಹೇಳಿದ್ದರಿಂದ ಅಪ್ಪ ಹತ್ತು ಸಾವಿರ ರೂಪಾಯಿಗಳನ್ನು ರೈತ ಹಿತರಕ್ಷಣ ಸಮಿತಿಯಲ್ಲಿ ಹೂಡಿದ್ದರು. ಕಾರಿನಲ್ಲಿ ಬಂದ ಆ ದೊಡ್ಡ ಮನುಷ್ಯರು ಅಪ್ಪನಿಂದ ಹಣ ಪಡೆದು ಇಪ್ಪತ್ತು ಸಾವಿರ ರೂಪಾಯಿಗಳು ಎಂದು ಬರೆದು ಅವರೇ ಸಹಿ ಹಾಕಿದ ಬಾಂಡ್ ಪತ್ರವನ್ನು ನೀಡಿದ್ದರು. ಈಗ ಆ ಪತ್ರ ನೀಡಿ ನಾಲ್ಕು ತಿಂಗಳಾಗಿತ್ತು. ಆದರೆ ಅಪ್ಪ ಹೂಡಿದ ಹಣಕ್ಕೆ ಪಂಗನಾಮ ಹಾಕಿದ್ದರು. ತುಂಬಾ ಕಡೆ ವಿಚಾರಿಸಿದಾಗ ಸರ್ಕಾರದಲ್ಲಿ ಆ ರೀತಿಯ ಯಾವುದೇ ಯೋಜನೆಗಳಿಲ್ಲ. ಆ ರೀತಿಯ ಯಾವುದೇ ಸಮಿತಿ ಸರ್ಕಾರದಲ್ಲಿ ಇಲ್ಲವೇ ಇಲ್ಲ ಎಂಬ ವಿಷಯ ತಿಳಿಯಿತು. ಅಪ್ಪನ ತರ ನಮ್ಮ ಹಳ್ಳಿಯಲ್ಲಿ ಹತ್ತಾರು ಜನ ಹಣ ಕಳೆದು ಕೊಂಡಿದ್ದರು.ಬಹು ದಿನಗಳಿಂದ ಎರಡೆಳೆಯ ಅವಲಕ್ಕಿ ಸರದ ಆಸೆ ಇಟ್ಟುಕೊಂಡು ಏನೆನೋ ಕಲ್ಪನೆ ಕಟ್ಟಿಕೊಂಡಿದ್ದ ಅಮ್ಮನಿಗೆ ಈ ವಿಷಯ ತಿಳಿದಾಗ ದುಃಖದಿಂದ ಕಣ್ಣೀರು ಹಾಕಿದ್ದಳು. 
ನಾನು ಪ್ರತಿದಿನ ಗುಬ್ಬಚ್ಚಿಗಾಗಿ ತೆಂಗಿನ ಚಿಪ್ಪಿನಲ್ಲಿ ನೀರು ಹಾಕಿ ಕುಡಿಯಲೆಂದೇ ಗೂಡಿನ ಪಕ್ಕದಲ್ಲಿ ಇಡುತ್ತಿದ್ದೆ. ಅಮ್ಮ ಅತ್ತ ಆ ದಿನ ಗುಬ್ಬಚ್ಚಿ ನಾನಿಟ್ಟ ನೀರು ಕುಡಿಯಲೇ ಇಲ್ಲ. ನನ್ನ ಕಣ್ಣ ಮುಂದೆಯೇ ನಮ್ಮ ಮನೆಯ ದೂರದಲ್ಲಿಯೇ ಇರುವ ಹೊಂಡದಿಂದ ಗುಬ್ಬಚ್ಚಿಯು ನೀರು ಕುಡಿದು ಬಂದಿತ್ತು ನನಗೆ ಗುಬ್ಬಚ್ಚಿಯ ಮೇಲೆ ಕೋಪ ಬಂದಿತು. ಈ ವಿಷಯ ಅಮ್ಮನ ಮುಂದೆ ಹೇಳಿಕೊಂಡು ನಾನೂ ದುಃಖಿಸಿದೆ..
" ನಿನ್ನೆ ಮಳೆ ಬಂದಿದೆಲ್ಲಾ ಮಗು, ಅದಕ್ಕೆ ಗುಬ್ಬಚ್ಚಿಯು ಪರಿಸರದಲ್ಲಿ ಸಿಗುವ ನೀರನ್ನೇ ಕುಡಿಯುತ್ತಿದೆ. ಹೊಂಡ ಬತ್ತಿ ಹೋದಾಗ ಮತ್ತೆ ನೀನಿಟ್ಟ ನೀರನ್ನೇ ಕುಡಿಯುತ್ತದೆ ಬಿಡು" ಎಂದು ನನ್ನನ್ನು ಸಮಾಧಾನ ಪಡಿಸಿದಳು.
"ಯಾಕಮ್ಮಾ ಗುಬ್ಬಚ್ಚಿಗೆ ನನ್ನ ಸಹಾಯ ಬೇಡವಾಯಿತಾ...?" ಎಂದು ನಾನು ಮುಗ್ದವಾಗಿ ಪ್ರಶ್ನಿಸಿದೆ.
"ಇಲ್ಲ ಮಗು ಗುಬ್ಬಚ್ಚಿಗಳು ಮನುಷ್ಯರಂತಲ್ಲ.ಮನುಷ್ಯರು ಬೀಸುವ ಜಾಲಕ್ಕೆ ಸುಲಭವಾಗಿ ಗುಬ್ಬಚ್ಚಿಗಳು ಸುಲಭವಾಗಿ ಬಲಿಯಾಗುವುದಿಲ್ಲ. ದುರಾಸೆ ಪಟ್ಟು ಇನ್ನೊಬ್ಬರ ಸಹಾಯ ಅಂತ ಬೇಡೋದು ಮನುಷ್ಯನೊಬ್ಬನೆ ಮಗು.... ಗುಬ್ಬಚ್ಚಿಗಳು ತಾವೇ ಕಷ್ಟಪಟ್ಟು ಆಹಾರ ನೀರನ್ನು ತಾವೇ ಸಂಪಾದಿಸಿಕೊಳ್ಳುತ್ತವೆ. ನಾವು ಹಾಗಲ್ಲ ಪುಕ್ಕಟ್ಟೆ ಏನೋ ಸಿಗುತ್ತೆ ಎಂದಾಕ್ಷಣ ಆಸೆ ಪಟ್ಟು ಜೊಲ್ಲು ಸುರಿಸುತ್ತೇವೆ. ಗುಬ್ಬಚ್ಚಿಯದೇ ಸರಿಯಾದುದು. ನೀನೂ ಗುಬ್ಬಚ್ಚಿಯ ಈ ನೀತಿಯನ್ನು ಕಲಿತು ಕೋ......"
ಅಮ್ಮ ಹೇಳಿದ ಈ ಮಾರ್ಮಿಕ ನುಡಿಗಳು ಅಂದು ನನಗೆ ಅರ್ಥವಾಗಲೇ ಇಲ್ಲ. ಸುಮ್ಮನೆ 'ಹೂಂ..' ಎಂದು ತಲೆ ಅಲ್ಲಾಡಿಸಿದೆ.
ಬಾಲ್ಯದ ಅಂದಿನ ಈ ಘಟನೆ ಮತ್ತೆ ನೆನಪಾದದ್ದು ಮೊನ್ನೆ ದಿನ ... ರಾತ್ರಿ ಊಟಮಾಡಿ ಮಲಗಿದ್ದೆ. ರಾತ್ರಿ ಸುಮಾರು ಒಂದು ಗಂಟೆಯಾಗಿರಬಹುದು. ನನ್ನ ಮೊಬೈಲ್ ಚಿಕ್ಕದಾಗಿ ರಿಂಗಣಿಸಿತು. ನಿದ್ದೆ ಕಣ್ಣಿನಿಂದಲೇ ಮೊಬೈಲನ್ನು ಎತ್ತಿಕೊಂಡೆ. ನನ್ನ ಮೈಲ್ ಇನ್ ಬಾಕ್ಸ ನಲ್ಲಿ ಹೊಸದೊಂದು ಮೇಲ್ ಬಂದಿತ್ತು. ಅದರಲ್ಲಿ
" ನಾನು ಎಡ್ವಿನ್ ರಾಸೋ..... ಇಂಡಿಯಾದವನು, ಎನ್,ಆರ್,ಐ..... ನನ್ನ ಅಂಕೌಟ್ ನಲ್ಲಿರುವ ಹತ್ತು ಕೋಟಿ ಹಣವನ್ನು ನಿಮಗೆ ವರ್ಗಾಯಿಸಬೇಕೆಂದಿದ್ದೇನೆ.... ಇಲ್ಲಿ ನನಗೆ ತೆರಿಗೆ ಕಟ್ಟುವ.... ಬ್ಲ್ಯಾಕ್ ಹಣ ಹೊಂದಿದ ,.ಇತ್ಯಾದಿ ತರಹದ ಸಮಸ್ಯೆಗಳಿವೆ. ನೀವು ಹಣ ವರ್ಗಾಯಿಸಲು ನಿಮ್ಮ ಬ್ಯಾಂಕ್ ನ ಡಿಟೈಲ್ಸ ನನಗೆ ಮೇಲ್ ಮಾಡಿ... ನನಗೆ ಸಹಾಯ ಮಾಡಿದರೆ ಶೇ ಐವತ್ತು ಹಣ ನಿಮಗೂ ಸಿಗುತ್ತದೆ"
ಈ ಮೇಲ್ ಓದಿದ ಕೂಡಲೆ ನನಗೆ ಸಂತೋಷವಾಯಿತು.
ಐದು ಕೋಟಿ ಹಣ ನನ್ನದಾಗುತ್ತದೆಯೆಂದು ನಾನು ಕಲ್ಪನಾ ಲೋಕದಲ್ಲಿ ತೇಲಿ ಹೋದೆ... ಹಾಗೆಯೇ ಮತ್ತೆ ನಿದ್ರೆ ಆವರಸಿತು. ಅದೇ ನೆನಪಲ್ಲಿ ಮಲಗಿದ್ದರಿಂದ ರಾತ್ರಿ ಕನಸಿನಲ್ಲಿ ದೊಡ್ಡದಾದ ಬಂಗಲೆಯಲ್ಲಿ ವಾಸವಾಗಿದ್ದೆ. ಆಳು ಕಾಳುಗಳು ನನ್ನ ಸೇವೆಯಲ್ಲಿ ನಿರತರಾಗಿದ್ದರು. ನಾಲ್ಕೈದು ಕಾರುಗಳು ನನ್ನ ಮನೆಯ ಮುಂದೆ ನಿಂತಿದ್ದವು......
ಬೆಳಗ್ಗೆಯಾಯಿತು. ಇನ್ನೂ ರಾತ್ರಿ ಬಂದ ಮೇಲ್ ಬಗ್ಗೆನೇ ಯೋಚಿಸುತ್ತಿದ್ದೆ. ತಕ್ಷಣ ಆಗ ನೆನಪಿಗೆ ಬಂದಿದ್ದು. ನನ್ನ ಗುಬ್ಬಚ್ಚಿಗಳು..... ಆ ದಿನ ಅಮ್ಮ ಹೇಳಿದಂತೆ
"ದುರಾಸೆ ಪಟ್ಟು ಇನ್ನೊಬ್ಬರ ಸಹಾಯಕ್ಕೆ ಹಾತೊರೆಯುವುದು ಮನುಷ್ಯನೇ ಹೊರತು ಗುಬ್ಬಚ್ಚಿಗಳಲ್ಲ."
ಎಂಬ ಮಾತುಗಳು ಸಹ ನೆನಪಿಗೆ ಬಂದಿತು. ಅಪ್ಪ ಇದೇ ರೀತಿ ಹತ್ತು ಸಾವಿರ ರೂಪಾಯಿಗಳನ್ನು ಕಳೆದು ಕೊಂಡಿದ್ದು ಕಣ್ಣ ಮುಂದೆಯೇ ಬಂದು ಹೋಯಿತು. ಯಾರೋ ಕೊಡುವ ಐದು ಕೋಟಿಗೆ ಆಸೆ ಪಟ್ಟು ಕಷ್ಟ ಪಟ್ಟು ದುಡಿದು ಸಂದಾದಿಸಿದ ಹಣ ಕಳೆದು ಕೊಳ್ಳುವುದು ಬೇಡವೆನಿಸಿತು. ಗುಬ್ಬಚ್ಚಿಗಳಂತೆ ಕಷ್ಟ ಪಟ್ಟು ದುಡಿದು ಗಳಿಸಬೇಕು ಎಂದುಕೊಂಡೆ. ಇದೇ ದುರಾಸೆಯ ಯೋಚನೆಯಲ್ಲಿದ್ದ ನಾನು ಅದರಿಂದ ಹೊರ ಬರಲು ಎಫ್,ಎಂ, ರೇಡಿಯೋ ಆನ್ ಮಾಡಿದೆ... ಸುಂದರವಾದ ಗೀತೆಯೊಂದು ನನ್ನ ಮನಸ್ಸನ್ನು ಮುದಗೊಳಿಸಿತು
"ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ... ಹಾಡೋಣ ನಾವು ಇಂದು ಕುಚಿ..ಕುಚಿ.........."
ಈ ಹಾಡು ಕೇಳಿ ಮತ್ತೆ ಗುಬ್ಬಚ್ಚಿಗಳು ನೆನಪಾದವು. ಗುಬ್ಬಚ್ಚಿ ಗೂಡಿನಂತಿರುವ ನನ್ನ ಸುಂದರ ಸಂಸಾರದಲ್ಲಿ ದರಾಸೆಯಿಂದಲೂ.... ಮೋಸದ ಜಾಲದಿಂದಲೂ ಕೂಡಿದ ಈ ತರಹದ ಹಣಕ್ಕೆ ಆಸೆ ಪಡಬಾರದೆಂದುಕೊಂಡೆನು......
                                                                                  - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment