Tuesday 2 February 2016

ಭೂತ ಬಂಗಲೆ



ಭೂತ ಬಂಗಲೆ...

ಪಾಳು ಬಿದ್ದ ಬಂಗಲೆಯದು. ನಮ್ಮ ಹಳ್ಳಿಯಿಂದ ಕೊಂಚವೇ ದೂರವಿದೆ. ರಾತ್ರಿಯಾದ ತಕ್ಷಣ ಆ ಬಂಗಲೆಯಲ್ಲಿ ವಿಚಿತ್ರ ಘಟನೆಗಳು ನಡೆಯುವುದರಿಂದ ನಮ್ಮ ಹಿರಿಯರು ಆ ಬಂಗಲೆಯ ಸುತ್ತ ತಂತಿ ಬೇಲಿಯನ್ನು ಹಾಕಿದ್ದಾರೆ.ಅತ್ತ ಯಾರೂ ಅಲೆಯದಂತೆ ಕಟ್ಟಪ್ಪಣೆಯನ್ನು ಹೊರಡಿಸಿದ್ದಾರೆ. ಆ ದಿನ ಬಂಗಲೆಯ ಸುತ್ತಲೂ ತಂತಿ ಬೇಲಿ ಹಾಕಲು ಹೋದ ಮಾರ ಕೆಲಸ ಮುಗಿಸಿ ರಾತ್ರಿ ಮಲಗಿದನು. ಆದರೆ ಮಾರನಿಗೆ ಏನಾಯಿತೋ ತಿಳಿಯಲಿಲ್ಲ ರಾತ್ರಿ ಮಲಗಿದವನು ಮತ್ತೆ ಏಳಲೇ ಇಲ್ಲ. ಅವನು ಪರಲೋಕವನ್ನು ಸೇರಿದ್ದನು. ಅವನು ಈ ರೀತಿ ಆಶ್ಚರ್ಯಕರವಾಗಿ ಸತ್ತದ್ದರಿಂದ ನಮ್ಮೂರಿನ ಜನರಿಗೆ ಇನ್ನಷ್ಟು ಭಯವನ್ನುಂಟು ಮಾಡಿತ್ತು. ಮಾರ ಬಂಗಲೆಯ ಸುತ್ತ ಬೇಲಿ ಹಾಕಿದ್ದರಿಂದ ದೆವ್ವ ಸೇಡು ತೀರಿಸಿಕೊಂಡಿದೆ ಎಂದು ಊರಿನವರು ಮಾತನಾಡಿಕೊಂಡರು. ಹೀಗೆ ದೆವ್ವವು ಅನೇಕ ಜನರಿಗೆ ಕಾಟ ಕೊಟ್ಟಿದೆಯೆಂದು ಜನ ಆಗಾಗ ಮಾತನಾಡಿಕೊಳ್ಳುವುದುಂಟು. ಈಗಲೂ ಸಹ ನಮ್ಮ ಹಳ್ಳಿಯವರು ಆ ಬಂಗಲೆಯ ದಿಕ್ಕಿನತ್ತ ತಲೆ ಹಾಕಿಯೂ ಮಲಗುವುದಿಲ್ಲ. ನಮ್ಮೂರಿನ ಕೋಳಿ ಪಿಳ್ಳೆಯೂ ಸಹ ಅತ್ತ ಹೆಜ್ಜೆ ಹಾಕಲು ಹೆದರುತ್ತದೆ...

ರಾಜು ಮತ್ತು ನಾನು ಬಾಲ್ಯದಿಂದಲೂ ಗೆಳೆಯರು ಓದಿನಲ್ಲಿ ಯಾವಾಗಲೂ ಮುಂದು. ನಾವು ಸ್ನಾತಕ್ಕೋತ್ಕರ ಪದವಿಯೊಂದಿಗೆ ಬಿ,ಎಡ್ ಸಹ ಮುಗಿಸಿದ್ದೆವು. ಶಿಕ್ಷಕ ಮತ್ತು ಉಪನ್ಯಾಸಕರ ಹುದ್ದೆಗೆ ಹಲವು ಶಾಲಾ ಕಾಲೇಜ್ ಗಳನ್ನು ಸುತ್ತಿ ಅರ್ಜಿಯನ್ನು ಹಾಕಿದ್ದೆವು. ಎಲ್ಲಿ ಇಂಟರ್ ವ್ಯೂ ಗೆ ಹೋದರೂ ಬುದ್ಧಿ ಬಲಕ್ಕಿಂತ ಧನ ಬಲದ ಕೆಲಸವೇ ಜೋರಾಗಿ ನಡೆಯುತ್ತಿತ್ತು. ಐದರಿಂದ ಆರು ಲಕ್ಷ ಹಣ ನೀಡಿದವರಿಗೆ ಕೆಲಸ ಸುಲಭವಾಗಿ ಸಿಗುತ್ತಿತ್ತು. ಇದೇ ತರಹ ಐದಾರು ಕಡೆಗಳಲ್ಲಿ ನಡೆದು ಹೋಯಿತು. ನಮಗೆ ಅಷ್ಟೊಂದು ಹಣ ಕಟ್ಟಿ ಕೆಲಸಕ್ಕೆ ಸೇರುವ ಶಕ್ತಿ ಇರಲಿಲ್ಲ. ನಾವು ಓದಿ ತಪ್ಪು ಮಾಡಿದೆವು ಎಂದೆನಿಸಿತಿತ್ತು. ನಮಗೆ ಜೀವನವೇ ಸಾಕು ಎಂದೆನಿಸಿತು.

"ಎಲ್ಲಾದರು ಓಡಿ ಹೋಗಬೇಕು ಎನ್ನಿಸುತ್ತಿದೆ. ಮನೆಯ ಪರಿಸ್ಥಿತಿಯೂ ಸಹ ಸರಿಯಿಲ್ಲ. ಅಣ್ಣ ದುಡಿದಿದ್ದರಲ್ಲಿ ಎಷ್ಟು ದಿನ ಅಂತ ಕೂತು ತಿನ್ನುವುದು"

ರಾಜು ದುಃಖದಿಂದ ಹೇಳಿದ. ನನ್ನ ಪರಿಸ್ಥಿತಿಯೇನೂ ಭಿನ್ನವಾಗಿರಲಿಲ್ಲ. ಆ ದಿನ ರಾತ್ರಿ ಯಾರಿಗೂ ಹೇಳದೇ ನಮ್ಮ ಗಂಟು ಮೂಟೆ ಕಟ್ಟಿ ಕೊಂಡು ಬೆಂಗಳೂರಿಗೆ ಹೊರಡಲು ಸಿದ್ದರಾಗಿ ಬಂದೆವು. ರಾತ್ರಿ ಹತ್ತು ಗಂಟೆಯಾಗಿತ್ತು. ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತೆವು. ನಮ್ಮ ದುರಾದೃಷ್ಟವೇನೋ ಲಾಸ್ಟ್ ಬಸ್ ಆ ದಿನ ಬರಲೇ ಇಲ್ಲ. ಮನೆಯ ಕಡೆಗೆ ವಾಪಸ್ಸು ಹೆಜ್ಜೆ ಹಾಕಲು ಮನಸಾಗಲಿಲ್ಲ. ಯಾಕೆಂದರೆ ಮನೆಯಿಂದ ಇಬ್ಬರೂ ಹತ್ತತ್ತು ಸಾವಿರ ಹಣ ಕದ್ದಿದ್ದೆವು. ಬಡತನ ಇರುವ ಮನೆಯಲ್ಲಿ ಹತ್ತು ಸಾವಿರ ಕೂಡಿಡುವ ಕಷ್ಟವೇನೆಂದು ನಮಗೇ ತಿಳಿದೇ ಇತ್ತು.  ಈಗಾಗಲೇ ನಾವು ಹಣ ಕದ್ದ ವಿಷಯ ಮನೆಯವರಿಗೆ ಗೊತ್ತಾಗಿರುತ್ತದೆಯೆಂದು ನಾವಿಬ್ಬರೂ ಹೆದರಿದೆವು. ಮನೆಗೆ ಹಿಂದಿರುಗಿ ನಮ್ಮ ತಪ್ಪು ಒಪ್ಪಿಕೊಳ್ಳುವುದರಲ್ಲಿ ಯಾವ ಅರ್ಥವೂ ಇರಲಿಲ್ಲ. ಓದಿ ಕೆಲಸ ಮಾಡದ ದಂಡಪಿಂಡಗಳು ಎಂಬ ಹಣೆ ಪಟ್ಟಿ ನಮಗೆ ಬಂದಾಗಿತ್ತು. ಸಾಕಷ್ಟು ಅವಮಾನದಿಂದ ನೊಂದಿರುವ ನಮಗೆ ಕಳ್ಳತನದ ಆರೋಪವನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಈಗೇನು ಮಾಡಬೇಕು ಎಂಬ ನಮ್ಮ ಪ್ರಶ್ನೆಗೆ ಉತ್ತರವಾಗಿ ಕಾಣಿಸಿದ್ದೇ ಆ ಭೂತ ಬಂಗಲೆ.....!!! 
ಭೂತ ಬಂಗಲೆ ಪ್ರವೇಶಿಸಿ ಸತ್ತರೂ ಪರವಾಯಿಲ್ಲ ಜೀವನದಲ್ಲಿ ಇನ್ನೇನು ಉಳಿದಿದೆ , ಎಲ್ಲಾ ಅಪಮಾನ ಅವಮಾನ ಸಹಿಸಿಕೊಂಡಾಗಿದೆ...

ರಾತ್ರಿ ಸುಮಾರು ಹತ್ತು ಗಂಟೆಯಾಗಿರಬಹುದು. ಹುಣ್ಣಿಮೆ ಚಂದಿರ ದೊಡ್ಡದಾಗಿ ನಗುತ್ತಿದ್ದ. ಆ ಬೆಳದಿಂಗಳ ಬೆಳಕಲ್ಲಿ ಬಂಗಲೆಯ ಗೇಟಿನ ಸಮೀಪ ಬಂದು ನಿಂತೆವು. ಗೇಟನ್ನು ತಳ್ಳಿ ಒಳ ಹೋಗಲು ಕೈಗಳು ನಡುಗುತ್ತಿದ್ದವು. ಒಂದೈದು ನಿಮಿಷ ಉಸಿರನ್ನು ಧೀರ್ಘವಾಗಿ ಎಳೆದುಕೊಂಡೆವು ಸ್ವಲ್ಪ ಧೈರ್ಯ ಬಂದಂತಾಯಿತು. ರಾಜು ಗೇಟನ್ನು ತಳ್ಳಿದ
" ಗಿರ್...ರ್....ರ್..ರ್."
ಸದ್ದು ಸ್ವಲ್ಪ ಜೋರಾಗಿಯೇ ಕೇಳಿಸಿತು. ಅಕ್ಕಪಕ್ಕದ ಮರದಲ್ಲಿ ಕುಳಿತ್ತಿದ್ದ ಹಕ್ಕಿಗಳು ಹೆದರಿ ಪಟಪಟನೆ ರೆಕ್ಕೆ ಬಡಿದು ಮೇಲಕ್ಕೇರಿದವು. ವಾತಾವರಣ ಸಹಜ ಸ್ಥಿತಿ ತಲುಪಲು ಐದು ನಿಮಿಷ ಬೇಕಾಯಿತು. ಬೆಳದಿಂಗಳ ಚಂದ್ರನ ಚಲನೆಯಿಂದಾಗಿ ಪಾಳು ಬಂಗಲೆಯೂ ಎತ್ತಲೋ ಚಲಿಸುತ್ತಿರುವಂತೆ ಭಾಸವಾಯಿತು. ಜನರು ಮಾತನಾಡಿಕೊಳ್ಳುತ್ತಿರುವಂತೆ ನಮ್ಮೂರಿನ ಗಂಗಜ್ಜ ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಬಂಗಲೆಯಲ್ಲೇ ..ಎಂದು ಆ ಸಮಯ ನನ್ನ ನೆನೆಪಿಗೆ ಬಂದಿತು. ಕೂಡಲೇ ಕೈ ಕಾಲುಗಳಿಗೆ ಮುಂದೆ ಹೆಜ್ಜೆ ಹಾಕಲು ಶಕ್ತಿ ಇಲ್ಲದಂತಾಯಿತು.

"ರಾಜು ಬಾರೋ ಹೋಗೋಣ... ನನಗೆ ಹೆದರಿಕೆಯಾಗುತ್ತಿದೆ"

ನಡುಗುತ್ತಲೇ ಹೇಳಿದೆ. ರಾಜು ನನ್ನ ಮಾತು ತಿರಸ್ಕರಿಸಿದ.

"ನೀನು ಬೇಕಿದ್ದರೆ ಹೋಗು .... ನಾನು ಸತ್ತರೆ ಇದೇ ಪಾಳು ಬಂಗಲೆಯಲ್ಲೇ ಸಾಯುವೆ"

ಅವನ ಮಾತಿನಲ್ಲಿ ಧೃಡತೆ ಇತ್ತು. ನನಗೆ ಅವನ ಜೊತೆ ಇರುವುದೊಂದೆ ಅನಿವಾರ್ಯತೆ, ಬೇರೆ ದಾರಿನೇ ಇರಲಿಲ್ಲ.
ಬಂಗಲೆಯ ಒಳ ಹೊಕ್ಕಾಗ ಕತ್ತಲು ಆವರಿಸಿಕೊಂಡಿದ್ದರಿಂದ ಎಲ್ಲಾ ವಸ್ತುಗಳು ಅಸ್ಪಷ್ಟವಾಗಿ ಕಾಣಿಸುತ್ತಿದ್ದವು. ಅಲ್ಲಲ್ಲಿ ಜೇಡ ಹೆಣೆದಿದ್ದ ಬಲೆಯು ಚಂದಿರನ ಅಲ್ಪ ಬೆಳಕಿನಲ್ಲಿಯೆ ರೇಷಿಮೆ ನೂಲಿನಂತೆ ಹೊಳೆಯುತ್ತಿತ್ತು.

"ಸರ್...ರ್...ರ್.."

ಏನೋ ಸರಿದು ಹೋದಂತೆ ಸದ್ದಾಯಿತು.ನಾವು ಕಾಲಿಡುತ್ತಿದ್ದಂತೆಯೇ ಹೆಗ್ಗಣವೊಂದು ಹೆದರಿ ಓಡಿ ಹೋದಂತೆ ಕಾಣಿಸಿತು.

"ಗಂಗಜ್ಜ ಸತ್ತಿದ್ದು ಇದೇ ಕೋಣೆಯಲ್ಲಿರಬೇಕು"

ಬಾಗಿಲು ಹಾಕಿದ್ದ ಕೋಣೆಯೊಂದನು ತೋರಿಸಿ ರಾಜು ಹೇಳಿದ.
ನನ್ನ ಮೈ ನಡುಕ ಇನ್ನೂ ಹೆಚ್ಚಾಯಿತು. ಗಂಗಜ್ಜ ಸತ್ತು ಪ್ರೇತಾತ್ಮವಾಗಿ ಅಲೆಯುತ್ತಿದ್ದಂತೆ ಮನಸು ಭಾವಿಸಿತು. ನಾನು ತೊದಲಿಸುತ್ತಾ

" ಪ್...ಪ್..ಲೀ..ಲೀ...ಸ್...ಸ್.... ರಾಜು ಇಂಥದ್....ದ್...ದೆಲ್ಲಾ .... ನ್... ನ್...ನೆನಪಿಸ ..ಬ್...ಬೇಡ..."

ಹೆದರುತ್ತಲೇ ಹೇಳಿದೆ....

"ಆಯ್ತು ಬಾರೋ....."
ರಾಜು ಧೈರ್ಯದಿಂದ ನನ್ನ ಕೈ ಹಿಡಿದು ಕೊಂಡ..
ಆ ನೀರವ ಕತ್ತಲೆಯಲ್ಲಿ ಕಪ್ಪೆಗಳ ಗೂಂಯ್ ಗುಡುವ ಕಿಟಾರ್.ರ್...ರ್.. ಎಂಬ ಸದ್ದು, ಕಿವಿಗೊಟ್ಟು ಆಲಿಸಿದರೆ ಏನೋ ವಿಚಿತ್ರವಾದ ಕೂಗು ಕೇಳಿಸುತ್ತಿತ್ತು

ಹಿಂದಿನಿಂದ ಯಾರೋ ಒದ್ದಂತಾಯಿತು.

"ಅಮ್ಮಾ ....."
ಎಂದು ಜೋರಾಗಿ ಕೂಗಿಕೊಂಡು ದೊಪ್ಪನೆ ನೆಲಹಿಡಿದು ಬಿದ್ದೆ....
ಕಣ್ಣು ಮಂಜು ಕವಿದಂತಾಯಿತು. ಕತ್ತಲೆ...!! ಕತ್ತಲೆ... !! ಸುತ್ತಲೂ ಆವರಿಸಿದಂತಾಯಿತು. ಅಮೆಲೇನಾಯಿತು ನನ್ನ ಅರಿವಿಗೆ ಬಾರದ ಹಾಗೆ ಪ್ರಜ್ಞೆ ತಪ್ಪಿ ಹೋಗಿದ್ದೆ. ಅಲ್ಲಿಂದ ಎಲ್ಲವೂ ಅಸ್ಪಷ್ಟ.. ನಿದ್ದೆಯ ಮಂಪರು...
ಕಣ್ಣು ಬಿಟ್ಟು ನೋಡಿದಾಗ ಇನ್ನೂ ಅದೇ ಬಂಗಲೆಯಲ್ಲಿ ಬಿದ್ದಿದ್ದೆ. ನಾನು ಇನ್ನೂ ಜೀವಂತವಾಗಿರುವುದನ್ನು ಕಂಡು ನನಗೇ ಆಶ್ಚರ್ಯವಾಯಿತು. ನನ್ನ ರಟ್ಟೆಯನ್ನೊಮ್ಮೆ ಚಿವುಟಿ ಕೊಂಡೆ.. ಹೌದು ಇದು ನಿಜ..ನಿಜವಾಗಲೂ ನಾನು ಬದುಕಿದ್ದೇನೆ....!!!

ಸುತ್ತಲೂ ನೋಡಿದೆ... ಭೂತ ಬಂಗಲೆಯಂತೆ ಕಾಣಿಸಲೇ ಇಲ್ಲ.. ಎಲ್ಲಾ ಕಡೆ ಸ್ವಚ್ಛವಾಗಿತ್ತು. ರಾತ್ರಿ ಗೇಟ್ ತೆಗೆದು ಒಳ ಬಂದಾಗ ಇದ್ದ ಕಸ ಕಡ್ಡಿಗಳನ್ನು ಗುಡಿಸಿ ರಾಜು ಸ್ವಚ್ಛವಾಗಿರಿಸಿದ್ದ. ಬಂಗಲೆ ಮುಂಬಾಗದ ಗಿಡ ಗಂಟೆಗಳೆಲ್ಲಾ ಕತ್ತರಿಸಿ ಸ್ವಚ್ಛ ಮಾಡಿದ್ದ. ಬಂಗಲೆಯ ಗೋಡೆಯ ಮೇಲಿದ್ದ ಧೂಳೂ ಸಹ ಕಾಣಲಿಲ್ಲ.....

"ಏನೋ ರಾಜು ಇದೆಲ್ಲಾ"

ಆಶ್ಚರ್ಯದಿಂದ ಕೇಳಿದೆ

"ಪ್ಲೀಸ್.... ನನ್ನ ಕ್ಷಮಿಸಿ ಬಿಡೋ.."
ರಾಜು ನನ್ನ ಬಿಗಿದಪ್ಪಿಕೊಂಡು ಹೇಳಿದ

"ಏನಾಯ್ತೋ ರಾಜು....!!! ಏನೋ ಇದೆಲ್ಲಾ.. !!!"
ಎಂದೆ ...

ನನಗೆ ಏನೂ ತೋಚದಂತಾಯಿತು..

ಆಗ ರಾಜು ಎಲ್ಲವನ್ನು ವಿವರಿಸಿ ಹೇಳಿದ

"ನಾನು ನಿನ್ನೆ ಮನೆ ಬಿಟ್ಟು ಬೆಂಗಳೂರಿಗೆ ಹೋಗುತ್ತೇನೆ ಎಂದು ಬಂದಿದ್ದು ಸುಳ್ಳು... ನಾನು ಬಂದಿದ್ದು ಈ ಬಂಗಲೆಗೆ ಅಂತಾನೇ... ನಮ್ಮಣ್ಣನೆ ಭಯವಾದರೆ ನಿನ್ನನ್ನು ಕರೆದುಕೊಂಡು ಹೋಗು ಎಂದಿದ್ದ... ನಾನು ಬಂಗಲೆಗೆ ಎಂದರೆ ನೀನು ಖಂಡಿತ ಬರುವುದಿಲ್ಲಾ ಅಂತ ಗೊತ್ತಿತ್ತು . ಅದಕ್ಕೆ ಬೆಂಗಳೂರಿಗೆ ಹೋಗೋಣ ಎಂದು ನಿನ್ನನ್ನು ಹುರಿದುಂಬಿಸಿ ಇಲ್ಲಿಯ ವರೆಗೂ ಕರೆದು ತಂದೆ... ಲಾಸ್ಟ್ ಬಸ್ ಬರುವುದು ನಿಂತು ಈಗಾಗಲೇ ಮೂರು ದಿನ ವಾಗಿದೆ ಕಲಕ್ಷನ್ ಇಲ್ಲವಂತೆ.. ಇದು ನನಗೆ ಮೊದಲೇ ಗೊತ್ತಿತ್ತು. ನನ್ನ ಸುಳ್ಳಿಗೆ ದಯಮಾಡಿ ಕ್ಷಮಿಸು ಬಿಡು. ನಾನು ಬೇಕಂತಲೇ ನಿನ್ನನ್ನು ಕರೆದುಕೊಂಡು ಈ ಭೂತಬಂಗಲೆಗೆ ಬಂದೆ"

ರಾಜು ನನಗೆ ಕೈ ಮುಗಿದು ಬೇಡಿಕೊಂಡ.

"ಸರಿ.... ಈ ರೀತಿಯ ಸುಳ್ಳು ಯಾಕೆ... ಏನಾಯ್ತೋ...?? ನನಗೇನೂ ಅರ್ಥ ವಾಗ್ತಿಲ್ಲ"

ನಾನು ಕುತೂಹಲದಿಂದ ಕೇಳಿದೆ

" ನೀನು ತಿಳಿದಂತೆ ಗಂಗಜ್ಜ ಆತ್ಮಹತ್ಯೆಯಿಂದ ಸತ್ತಿದ್ದಲ್ಲ... ಹಾರ್ಟ್ ಅಟ್ಯಾಕ್ ನಿಂದ... ಗಂಗಜ್ಜನಿಗೆ ಐದು ಜನ ಗಂಡು ಮಕ್ಕಳು.ಅವರಲ್ಲಿ ನಮ್ಮಪ್ಪನೂ ಒಬ್ಬರು. ಗಂಗಜ್ಜನಿಗೆ ನಮ್ಮಪ್ಪನೇ ಕೊನೆಯವನು. ಗಂಗಜ್ಜ ಸತ್ತ ಘಳಿಗೆ ಮತ್ತು ನಕ್ಷತ್ರ ಸರಿಯಿಲ್ಲ ಎಂದು ಪುರೋಹಿತರು ಹೇಳಿದ್ದರಿಂದ ನಮ್ಮಪ್ಪ ಮೂರು ತಿಂಗಳವರೆಗೆ ಈ ಬಂಗಲೆಯನ್ನು ಬಿಟ್ಟು ಬಾಡಿಗೆ ಮನೆಯಲ್ಲಿ ನೆಲೆಸಿದರು. ನಮ್ಮಪ್ಪನ ನಾಲ್ಕು ಅಣ್ಣಂದಿರು ಒಳ್ಳೇ ಕೆಲಸ ಹಿಡಿದು ಬೇರೆ ಬೇರೆ ಕಡೆ  ನೆಲಸಿದ್ದಾರೆ. ಅವರಾರಿಗೂ ಅಂತಹ ಬಡತನವಿಲ್ಲ. ಅವರು ನೆಲೆಸಿರುವ ಪಟ್ಟಣಗಳಲ್ಲಿಯೇ ಸಾಕಷ್ಟು ಆಸ್ತಿ ಪಾಸ್ತಿ ಸಂಪಾದಿಸಿಕೊಂಡಿದ್ದಾರೆ. ಅವರಲ್ಲಿ ಏನೂ ಇಲ್ಲದೆಯೇ ಬಡತನದಿಂದ ಜೀವನ ನಡೆಸುತ್ತಿರುವವರೆಂದರೆ ನಮ್ಮಪ್ಪ ಒಬ್ಬರೇ...ಈ ಬಂಗಲೆಯನ್ನು ಬಿಟ್ಟು ತನಗೇ ಬಿಟ್ಟು ಕೊಡುವಂತೆ ಅಪ್ಪ ಕೇಳಿಕೊಂಡರೂ ಯಾರೂ ಬಿಟ್ಟು ಕೊಡಲಿಲ್ಲ. ಎಲ್ಲರೂ  ಇದು ಪಿತೃಾರ್ಜಿತ ಆಸ್ತಿ ಸಮ ಪಾಲು ಬೇಕೆಂದು ಹಠ ಹಿಡಿದರು. ನಮ್ಮಪ್ಪ ಎಲ್ಲರಿಗಿಂತ ಕಡು ಬಡವರು ಬಂಗಲೆ ಮಾರಿ ಹಂಚಿಕೊಂಡರೆ ಏನೂ ಸಿಗಲಾರದು ಎಂದುಕೊಂಡು ಭೂತದ ಕತೆ ಕಟ್ಟಿದರು. ಪ್ರಕೃತಿಯಲ್ಲಿ ನಡೆಯುತ್ತಿದ್ದ ಸದ್ದು ವಿಸ್ಮಯಗಳಿಗೆ ಭೂತಬಂಗಲೆಯನ್ನೇ ಕಾರಣ ಕೊಡುತ್ತಾ ಬಂದರು. ಮೂರು ತಿಂಗಳ ನಂತರ ಮತ್ತೆ ಮನೆಯನ್ನು ಸೇರಬೇಕಾಗಿದ್ದ ನಾವುಗಳು ಬೇಕಂತಲೇ ಮನೆಯನ್ನು ಸೇರದೇ ದೂರ ಉಳಿದೆವು. ನಮ್ಮಪ್ಪನ ಅಣ್ಣಂದಿರೂ ಸಹ ಭೂತದ ಕತೆಯನ್ನು ನಿಜವೆಂದೇ ನಂಬುತ್ತಾ ಹೋದರು. ಬಂಗಲೆಯನ್ನು ಮಾರಿ ಹಂಚಿಕೊಳ್ಳಬೇಕೆನ್ನುವ ಅಣ್ಣಂದಿರ ಆಸೆಗೆ ನಮ್ಮಪ್ಪ ಸಹಕರಿಸಲಿಲ್ಲ.ಭೂಕದ ಕತೆ ಕಟ್ಟುತ್ತಲೇ ಹೋದರು. ಬಂಗಲೆಕೊಳ್ಳಲು ಬಂದವರೆಲ್ಲಾ ಹಾಗೇ ಹಿಂದಿರುಗಿದರು. ಈ ಬಂಗಲೆ ನಮ್ಮಪ್ಪನ ಹೆಸರಿಗೆ ಬರುವುದಕ್ಕೆ ಸುಮಾರು ಹತ್ತು ವರ್ಷವೇ ಆಗಿ ಹೋಯಿತು. ಅಲ್ಲಿಂದ ತಕ್ಷಣ ನಾವು ನೆಲೆಸಲು ಬಂಗಲೆಗೆ ಬರುವಂತೆಯೂ ಇರಲಿಲ್ಲ. ಏಕೆಂದರೆ ಇದರಿಂದ ಊರಿನ ಜನರಿಗೆ ಅನುಮಾನ ಬರುವ ಸಾಧ್ಯತೆ ಹೆಚ್ಚಾಗಿತ್ತು. ಮೊನ್ನೆ  ನಮ್ಮ ಅಪ್ಪ ತೀರಿಹೋದ ವಿಷಯ ನಿನಗೆ ಗೊತ್ತೇ ಇದೆ. ಸಾಯುವ ಮುನ್ನ ಅಪ್ಪ ಈ ವಿಷಯವನ್ನು ಹೇಳಿ ಸತ್ತರು. ನನಗೂ ಬಡತನ ಸಾಕಾಗಿ ಹೋಗಿದೆ. ಹೆದ್ದಾರಿ ಪಕ್ಕದಲ್ಲಿರುವುದರಿಂದ ಬಂಗಲೆಗೆ ಒಳ್ಳೆ ಬೆಲೆ ಸಿಕ್ಕಿದೆ. ಯಾವುದೋ ಒಂದು ಕಂಪನಿ ಹೋಟೆಲ್ ತೆರೆಯಲು ಮುಂದೆ ಬಂದಿದೆ ಮೂವತ್ತೈದು ಲಕ್ಷಕ್ಕೆ ಕೇಳುತ್ತಿದ್ದಾರೆ"

ರಾಜು ಎಲ್ಲವನ್ನೂ ಹೇಳಿದ

"ಅಯ್ಯೋ ರಾಮ... ಇದಕ್ಕೆ ರಾತ್ರಿ ಹೊತ್ತು ನನ್ನನ್ನು ಕರೆದುಕೊಂಡು ಬಂದು ಸಾಯಿಸುತ್ತಿದ್ದೆಲ್ಲೋ... ಪಾಪಿ"

ಎಂದು ಬೈಯ್ದೆ..

"ರಾತ್ರಿ ಬರುವುದಕ್ಕೂ ಒಂದು ಕಾರಣವಿದೆ. ಅಪ್ಪ ಸಾಯುವ ಮುನ್ನ ಬಂಗಲೆ ಸುತ್ತಾ ತಂತಿ ಬೇಲಿ ಹಾಕಿಸಿದರು. ಕೆಲವು ಹಳ್ಳಿ ಮುಖಂಡರು ಅಪ್ಪನ ಮೇಲೆ ಅನುಮಾನ ಪಟ್ಟರು. ಬಂಗಲೆ ತನ್ನ  ಹೆಸರಿಗೆ ಬಂದ ಕೂಡಲೇ ತಂತಿ ಬೇಲಿ ಹಾಕಿಸಿದ. ಭೂತದ ಕತೆ ಸುಳ್ಳಿರಬೇಕು ಎಂದು ಕೆಲವರು ಮಾತನಾಡಿಕೊಂಡರು. ಮಾರನೇ ದಿನ ತಂತಿ ಬೇಲಿ ಹಾಕಿದ ಮಾರ ಸತ್ತು ಹೋದ, ಅವನಿಗೆ ಯಾವುದೋ ರೋಗವಿತ್ತು. ಅಪ್ಪ  ಬಾಯಿ ಮುಚ್ಚಿಸಲು ಮತ್ತೆ ಭೂತದ ಕತೆ ಕಟ್ಟಿದರು. ಮಾರ ಸತ್ತಿರುವುದಕ್ಕೂ ಬಂಗಲೇಯ ಸುತ್ತ ಬೇಲಿ ಹಾಕಿದ್ದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಎಲ್ಲವೂ ಕಾಕತಾಳಿಯ. ಎಲ್ಲರೂ ಮತ್ತೆ ಅಪ್ಪನ ಮಾತನ್ನು ನಂಬಿದರು. ಅಂದಿನಿಂದ ಹಳ್ಳಿಯವರು ಬಂಗಲೆಯ ಕಡೆಗೆ ಯಾರೂ ಹೋಗದಂತೆ ಕಟ್ಟಪ್ಪಣೆ ಮಾಡಿದ್ದು ನಿನಗೆ ಗೊತ್ತೇ ಇದೆ. ಈಗ ನಮ್ಮಪ್ಪನೂ ಸತ್ತು ಹೋಗಿ ಒಂದು ವರ್ಷವಾಯಿತು ಈಗಾದರೂ ಈ ಬಂಗಲೆಯನ್ನು ಮಾರೋಣವೆಂದು ಅಣ್ಣ ಹೇಳಿದ್ದಾರೆ. ನಾವು ಒಂದು ದಿನ ರಾತ್ರಿ ಬಂಗಲೆಯಲ್ಲಿ ನೆಲೆಸಿದರೆ ಭೂತದ ಬಗ್ಗೆ ಇರುವ ಕಲ್ಪನೆ ಜನರಿಂದ ಮಾಯವಾಗುತ್ತದೆ. ಅಥವಾ ನಾವೇ ಎಲ್ಲರಿಗೂ ಯಾವ ಭೂತವೂ ಇಲ್ಲವೆಂದು ಹೇಳಬಹುದು. ಆದ್ದರಿಂದ ರಾತ್ರಿ ನಿನ್ನನ್ನು ಕರೆದುಕೊಂಡು ಬಂದಿದ್ದು. ನೀನು ಅತಿಯಾಗಿ ಹೆದರುತ್ತಿದುದರಿಂದ ನಾನೇ ಹಿಂದಿನಿಂದ ನಿನಗೆ ಗೊತ್ತಾಗದಂತೆ ಕೈ ಹಾಕಿ ತಳ್ಳಿ ಬೀಳಿಸಿಬಿಟ್ಟೆ..."

ರಾಜು ಮತ್ತಷ್ಟು ವಿವರಿಸಿ ಹೇಳಿದ

"ಈಗ ಜನರಿಗೆ ಅನುಮಾನ ಬರಲ್ವೇನೋ..?"
ಎಂದೆ

"ಇಲ್ಲ ಅನುಮಾನ ಬರಲು ಸಾದ್ಯವಿಲ್ಲ. ನಮ್ಮಿಬ್ಬರಿಗೆ ಕೆಲಸ ಸಿಗದಿದ್ದರಿಂದ ಸಾಯಲು ಭೂತ ಬಂಗಲೆಗೆ ಹೋಗಿದ್ದಾರೆಂದು ಅಣ್ಣ ಈಗಾಗಲೇ ಹೇಳಿಕೊಂಡು ಬಂದಿರುತ್ತಾನೆ.ಎಲ್ಲವೂ ಅಣ್ಣ ಮಾಡಿದ ಉಪಾಯದಂತೆ ನಡೆಯುತ್ತಿದೆ. ಅಪ್ಪ ಮಾಡಿದ ಭೂತದ ಕತೆಯಿಂದ ನಾವು ಆಸ್ತಿಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಇನ್ನೇನು ಕೆಲವು ಗಂಟೆಯಲ್ಲಿ ಜನ ಬಂದು ಸೇರುತ್ತಾರೆ ನೋಡ್ತಾ ಇರು. ಬಂದ ಜನರಿಗೆ ನಾವೇ ಭೂತವಿಲ್ಲ ಎಂದು ಹೇಳಬೇಕು. ಬಂಗಲೆ ಮಾರಿ ಬಂದ ಹಣದಲ್ಲಿ ನಿನಗೂ ಐದು ಲಕ್ಷ ಪಾಲಿದೆ. ಅದು ಕೆಲಸಕ್ಕೆ ಸೇರಲು ಮಾತ್ರ. ನಿನ್ನ ಬಡತನದಿಂದ ಅಣ್ಣ ಈ ನಿರ್ಧಾರ ಮಾಡಿದ್ದಾರೆ. ಇಬ್ಬರೂ ಲಂಚ ಕೊಟ್ಟಾದರೂ ಸರಿ ಕೆಲಸಕ್ಕೆ ಸೇರಿ ಬಿಡೋಣ. ಜನ ಸೇರಿದಾಗ ನಾವು ಸಾಯಲು ಬಂದಿದ್ದು. ಆದರೆ ಇಲ್ಲಿ ಯಾವ ಭೂತವಿಲ್ಲ ಎಂದು ಹೇಳಿ ಜನರಲ್ಲಿಯ ಭಯ ದೂರ ಮಾಡಿದರೆ ಸಾಕು. ನಾವು ಒಂದು ವಾರ ಇಲ್ಲಿಯೇ ನೆಲಸೋಣ. ಇದರಿಂದ ನಿನಗೂ ಲಾಭ.. ಯೋಚಿಸಿ ನೋಡು"
ಎಂದನು..

ನನಗೆ ಈಗ ಎಲ್ಲಾ ವಿಷಯ ಸ್ಪಷ್ಟವಾಯಿತು. ಬಡತನದಿಂದ ಬೇಸತ್ತ ನನಗೆ ರಾಜು ಹೇಳಿದ್ದೇ ಸರಿ ಎನಿಸಿತು.....ಅದರಂತೆಯೇ ನಡೆಯಿತು.
ನಾನೀಗ ಕಾಲೇಜೊಂದರಲ್ಲಿ ಉಪನ್ಯಾಸಕ. ರಾಜು ಸಹ ಕಂದಾಯ ಇಲಾಖೆಯಲ್ಲಿ ಲಾಭದಾಯಕ ಹುದ್ದೆಯಲ್ಲಿದ್ದಾನೆ. 

 ಯಾವಾಗಲಾದರೂ ನಾವು ಹಳ್ಳಿಕಡೆ ಹೋದರೆ ಆ ಭೂತ ಬಂಗಲೆಯನ್ನು ನೋಡದೇ ಇರುವುದಿಲ್ಲ. ಊರಿನ ಪ್ರವೇಶದಲ್ಲೇ ದ್ವಾರದಲ್ಲೇ ಆ ಬಂಗಲೆ ಇದೆ. ಆದರೆ ಆ ಬಂಗಲೆಯ ಜಾಗದಲ್ಲಿ ಒಂದು ದೊಡ್ಡ ಹೋಟೇಲು ತಲೆ ಎತ್ತಿದೆ. ಯಾವಾಗಲೂ ಆ ಹೋಟೇಲಿನಲ್ಲಿ ಜನರ ಗುಂಪು ಇದ್ದೇ ಇರುತ್ತದೆ. ನಾವೂ ಸಹ ಗಂಗಜ್ಜ ಆತ್ಮಹತ್ಯೆ ಮಾಡಿಕೊಂಡ ಕೊಠಡಿ ಎಂದು ನಂಬಿಸಲಾಗಿದ್ದ ಆ ಸ್ಥಳದಲ್ಲೇ ಹೋಟೆಲಿನವರು ಹಾಕಿದ್ದ ಕುಷನ್ ಸೋಫಾದ ಮೇಲೆ ಕುಳಿತು ಇಡ್ಲಿ ವಡೆಯನ್ನು ತಿಂದೆವು. ನಮ್ಮ ಲಾಭಕ್ಕೆ ಅನುಕೂಲಕ್ಕೆ ತಕ್ಕಂತೆ ನಾವು ಕತೆಯನ್ನು ಹೆಣೆದು ಬಿಡುತ್ತೇವೆ ಜನರನ್ನು ನಂಬಿಸಿಬಿಡುತ್ತೆವೆಯಲ್ಲವೆ.....? "ಉದರ ನಿಮಿತ್ತಂ ಬಹುಕೃತ ವೇಷಂ" ಎನ್ನುವಂತೆ.
-ಪ್ರಕಾಶ್ ಎನ್ ಜಿಂಗಾಡೆ


No comments:

Post a Comment