Friday 5 February 2016

ಈಜು

ಈಜು .. 

ಬಾಲ್ಯದ ಹುರುಪು ಮತ್ತು ಉತ್ಸಾಹಗಳು ಬಾಲ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಆ ಉತ್ಸಾಹ ಜೀವನಪೂರ್ತಿ ಇರುತ್ತದೆ ಎಂದುಕೊಂಡು ನಡೆಯುವುದು ತಪ್ಪು.
ಒಂದು ಸಲ ನನಗೆ ಇಂತಹ ಅನುಭವವಾಯಿತು.ನಾನು ಬೆಳೆದಿದ್ದು ಹಳ್ಳಿಯ ಪರಿಸರದಲ್ಲಿ. ಬಾಲ್ಯದಲ್ಲಿ ನಾನು ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದೆ . ರಜೆ ಬಂತೆಂದರೆ ಸಾಕು ಗೆಳೆಯರೊಡನೆ ಆಟಕ್ಕೆ ಹೋಗುತ್ತಿದ್ದೆ. ಗೋಲಿ, ಚಿನ್ನಿದಾಂಡು, ಮರಕೋತಿ ದಿನ ನಿತ್ಯದ ಆಟಗಳಾಗಿದ್ದವು. ನಮ್ಮೂರಿನಲ್ಲಿ ಭದ್ರಾ ನಾಲೆಯೊಂದಿದೆ. ಆಟವಾಡಿ ಆಯಾಸವಾದರೆ ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಗೆಳೆಯರೊಂದಿಗೆ ಸೇರಿ ಈಜಲು ಹೋಗುತ್ತಿದ್ದೆವು. ಗುಡ್ಡವನ್ನು ಕೊರೆದು ನಾಲೆ ನಿರ್ಮಿಸಿದ್ದರಿಂದ ನಾವೆಲ್ಲಾ ಬಂಡೆಯ ಮೇಲಿಂದ ನಾಲೆಗೆ ಜಿಗಿದು ಹರಿಯುವ ನಿರಿನೊಡನೆ ತೇಲಿಕೊಂಡು ಒಂದರ್ದ ಕಿಲೋಮೀಟರ್ ಈಜಿ ಮತ್ತೆ ಅದೇ ಸ್ಥಾನಕ್ಕೆ ಬರುತ್ತಿದ್ದೆವು. ಹೀಗೆ ಪ್ರತಿ ದಿನವೂ ಈಜು ನಮಗೆಲ್ಲಾ ಅಭ್ಯಾಸವಾಗಿ ಹೋಗಿತ್ತು. ಈಜಿನ ವಿಷಯ ಬಂದರೆ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಈಜು ಕಲಿಯುವವರ ಮುಂದೆ ನನ್ನನ್ನು ನಾನು ಹೊಗಳಿಕೊಳ್ಳುತ್ತಿದ್ದೆ. ಈಗ ಅದೆಲ್ಲಾ ನೆನಪು...

ನಾನು ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ.ಆ ಶಾಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ವೊಂದು ಇತ್ತು. ನನ್ನ ಸಹಪಾಠಿ ಹಿಂದಿ ಶಿಕ್ಷಕ ರಾಕೇಶ್ ಎಂಬುವನು ಬಿಹಾರದವನು. ನನ್ನಂತೆ ಅವನು ಸಹ ಗಾಂಗಾ ನದಿಯಲ್ಲಿ ಈಜಿಕೊಂಡೇ ಬಾಲ್ಯ ಕಳೆದವನು. ಗೌರಿಶಂಕರ್ ಎಂಬ ಕನ್ನಡ ಶಿಕ್ಷಕರು ಕನಕಪುರದವರು. ಕಾವೇರಿ ನದಿಯಲ್ಲಿ ಈಜಿ ಅಭ್ಯಾಸ ಮಾಡಿಕೊಂಡವರು. ಇಂತವರು ಶಾಲೆಯಲ್ಲಿ ಗೆಳೆಯರಾಗಿ ಸಿಕ್ಕಿದ್ದರಿಂದ ನನ್ನ ಈಜಿಗೆ ಮರು ಜೀವ ಬಂದಂತಾಗಿತ್ತು. ಮೂವರು ಮಾತನಾಡಿಕೊಂಡು ಪ್ರಿನ್ಸಿಪಲ್ ಕಣ್ಣು ತಪ್ಪಿಸಿ ಪಿರಿಯಡ್ ಇಲ್ಲದ ಶನಿವಾರದಂದು ಸ್ವಿಮ್ಮಿಂಗ್ ಫೂಲ್ ಗೆ ಹೋಗುತ್ತಿದ್ದೆವು. ನದಿಯಲ್ಲಿ ಈಜಿದವರಿಗೆ ಈ ಸ್ವಿಮ್ಮಿಂಗ್ ಪೂಲ್ ಅಷ್ಟೊಂದು ತೃಪ್ತಿ ಕೊಡುತ್ತಿರಲಿಲ್ಲ. ಬಾವಿಯೊಳಗಿನ ಕಪ್ಪೆಯಂತೆ ಕೈಕಾಲಾಡಿಸಿಕೊಂಡು ಬರುತ್ತಿದ್ದೆವು. ನದಿಯ ಈಜು ಮತ್ತೆ ಯಾವಾಗ ಸಿಗುವುದೋ ಎಂದು ಆಗಾಗ ಅತೃಪ್ತಿ ತೋರ್ಪಡಿಸಿ ಕೊಳ್ಳುತ್ತಿದ್ದೆವು.
ಹೀಗಿರುವಾಗ ಒಂದು ದಿನ ನದಿಯಲ್ಲಿ ಈಜುವ ಅವಕಾಶವೊಂದು ಸಿಕ್ಕಿತು. ನಮ್ಮ ಶಾಲೆಯಲ್ಲಿ ಪರೀಕ್ಷೆ ಮುಗಿದ ನಂತರ ರಜೆ ಪ್ರಾರಂಭವಾಗುವ ಹಿಂದಿನ ದಿನ ಎಲ್ಲಾ ಶಿಕ್ಷಕರಿಗೆ ಒಂದು ಪಿಕ್ನಿಕ್ ವ್ಯವಸ್ಥೆ ಇರುತ್ತದೆ. ಪಿಕ್ನಿಕ್ ಸ್ಥಳವನ್ನು ಆಯ್ಕೆ ಮಾಡುವ ಅವಕಾಶ ನಮಗೆ ಸಿಕ್ಕಿತು. ನನ್ನ ಸ್ನೇಹಿತ ಗೌರಿಶಂಕರ್ ಮುತ್ತತ್ತಿ ಸ್ಥಳವನ್ನು ಸೂಚಿಸಿದರು. ಆಗ 2010 ಏಪ್ರಿಲ್ ತಿಂಗಳು. ಎಲ್ಲರೂ ಶಾಲೆಯಿಂದ ಹೊರಟು ಸುಂದರ ಪ್ರಕೃತಿಯನ್ನೊಳಗೊಂಡ ಮುತ್ತತ್ತಿ ತಲುಪಿದವು. ಕಾವೇರಿ ನದಿಯ ಜುಳು ಜುಳು ನಾದ ಕೇಳಿದೊಡನೆ ಮನಸು ಈಜಲು ಬಯಸಿತು. ರಾಕೇಶ್ ಈಜಲು ರೆಡಿಯಾಗಿ ನಿಂತ. ನೀರಿಗೆ ದುಮುಕಿ ಬೇಗ ಬೇಗನೆ ಈಜಿ ಮತ್ತೊಂದು ದಡ ಸೇರಿಯೇ ಬಿಟ್ಟ. ನಾನು ಮತ್ತು ಗೌರಿಶಂಕರಿ ಈಜಲು ನೀರಿಗಿಳಿದೆವು.ಹುರುಪಿನಿಂದ ಈಜತೊಡಗಿದೆವು ಮತ್ತೊಂದು ಕಡೆ ದಡ ಸೇರಿದ್ದ ರಾಕೇಶ್ ನಮ್ಮನ್ನು ಅಲ್ಲಿಂದಲೇ ಕರೆಯುತ್ತಿದ್ದ . ನಾನು ಅರ್ದ ನದಿಯನ್ನಷ್ಟೇ ಈಜಿದ್ದೆ . ಮುಂದೆ ಈಜಲು ಶಕ್ತಿ ಸಾಲದಾಯಿತು. ಮುಂದೆ ಹೋಗಲು ಸಾದ್ಯವಾಗುತ್ತಿರಲಿಲ್ಲ. ಹಿಂದೆ ಬರವುದು ಸಹ ಕಷ್ಟವಾಗಿತ್ತು. ವಾಪಾಸು ಹಿಂದಿರುಗಿ ಸ್ವಲ್ಪ ಈಜಿದೆಯಷ್ಟೆ. ಆಯಾಸಗೊಂಡು ಕಾಲನ್ನು ನೆಲಕ್ಕೆ ಊರಲು ಯತ್ನಿಸಿದೆ. ನೆಲ ಸಿಗಲಿಲ್ಲ ಮುಳುಗಲಾರಂಬಿಸಿದೆ. ನೀರು ರಭಸವಾಗಿ ಹರಿಯುತ್ತಿತ್ತು. ನಾನು ಅಪಾಯಕ್ಕೆ ಸಿಲುಕಿದ್ದೇನೆಂದು ಅರಿವಾಯಿತು.
"ಸರ್ ...ಗೌರಿಶಂಕರ್ ಸರ್ ಪ್ಲೀಸ್ ಕಾಪಾಡಿ"
ಎಂದು ಕೂಗಿಕೊಂಡೆನು. ನಾನು ನನ್ನ ಪ್ರಾಣದ ಆಸೆಯನ್ನು ಆಗಲೇ ತೊರೆದಿದ್ದೆ. ಆಯಾಸದಿಂದ ಮುಳುಗೇಳುತ್ತಾ ದಡ ಸೇರಲು ಪ್ರಯತ್ನಿಸುತ್ತಿದ್ದೆ. ಆಗಲಿಲ್ಲ. ನೀರು ಆಗಲೇ ಉಸಿರಿನ ಮೂಲಕ ನನ್ನ ದೇಹದೊಳಗೆ ಪ್ರವೇಶಿಸಲಾರಂಭಿಸಿತ್ತು.
ನನ್ನ ಕೂಗನ್ನು ಆಲಿಸಿದ ಗೌರಿಶಂಕರ್ ಹಿಂದಿನಿಂದ ನನ್ನನ್ನು ತಳ್ಳಿದರು. ತಳ್ಳಿದ ರಭಸಕ್ಕೆ ಒಂದು ಮಾರು ಮುಂದೆ ಹೋದೆ. ಅಲ್ಲಿಂದ ಮುಂದೆ ಈಜುವುದು ಕಷ್ಟವಾಗಿತ್ತು. ಪಾಪ ಆತನೂ ಸಹ ಈಜಿ ದಣಿದಿದ್ದ . ಏನಾದರೂ ಆಗಲಿ ಎಂದು ತೀರ್ಮಾನಿಸಿ ನಾನು ನನ್ನ ಕಾಲನ್ನು ನೆಲ ಸಿಗುವುದೇನೋ ಎಂಬ ಆಸೆಯಿಂದ ನೀರಿನಾಳಕ್ಕೆ ಇಳಿ ಬಿಟ್ಟೆ.. ಆ ದಿನ ದೇವರು ನನ್ನ ಮೇಲೆ ಕೃಪೆ ತೋರಿದ್ದ. ನಾನು ಮುಳುಗಲಿಲ್ಲ. ಕಲ್ಲು ಬಂಡೆಯೊಂದು ನದಿಯ ಮದ್ಯದಲ್ಲಿತ್ತು. ನಾನು ಅದರ ಮೇಲೆ ನಿಂತಿದ್ದೆ. ನನಗೆ ಮರು ಜೀವ ಬಂದಂತಾಗಿತ್ತು. ಸ್ವಲ್ಪ ಹೊತ್ತು ಆ ಕಲ್ಲಿನ ಮೇಲೆ ನಿಂತುಕೊಂಡು ಸುಧಾರಿಸಿಕೊಂಡೆ. ಮನಸಿನಲ್ಲೇ ದೇವರನ್ನು ಪ್ರಾರ್ಥಿಸಿದೆ. ಸಾವು ನನ್ನ ಕಣ್ಣ ಮಂದೆಯೇ ಬಂದು ಹೋಗಿದ್ದು ಕಂಡು ನನ್ನಲ್ಲಿ ಭಯ ಆವರಿಸಿಕೊಂಡಿತ್ತು. ಅಲ್ಲಿಂದ ಹೇಗೋ ಈಜಿಕೊಂಡು ದಡ ಸೇರಿ ನಿಟ್ಟಿಸಿರು ಬಿಟ್ಟೆ. ಈ ಘಟನೆ ನಡೆದು ಇಂದಿಗೆ ಐದು ವರ್ಷ ಕಳೆಯಿತು. ಅಂದಿನಿಂದ ಸ್ವಿಮ್ಮಿಂಗ್ ಪೂಲ್ ಕಡೆಯೂ ಕಣ್ಣೆತ್ತಿಯೂ ಸಹ ನೋಡುತ್ತಿಲ್ಲ..
ಎಂದೋ ಬಾಲ್ಯದಲ್ಲಿ ಭರ್ಜರಿಯಾಗಿ ಈಜಿದ್ದೆನೆಂದ ಮಾತ್ರಕ್ಕೆ ಈಗಲೂ ಅದೇ ಉತ್ಸಾಹ ಹುರುಪು ಇದೆ ಎಂದುಕೊಂಡಿದ್ದು ನನ್ನ ಮೂರ್ಖತನ. ನಮ್ಮ ಹಿಂದಿನ ವೈಭವಗಳು ಆಗಿನ ಕಾಲಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದನ್ನು ಈಗಲೂ ನೆನಪಿಸಿಕೊಂಡು ಮಂದುವರಿಯುವುದು ಸರಿಯಲ್ಲ. ಹಿಂದೆ ಹಾಗಿದ್ದೆ ,ಹೀಗಿದ್ದೆ ಎಂದು ಬೀಗುತ್ತಾ ಪ್ರಸ್ತುತ ಸನ್ನಿವೇಶವನ್ನು ಮರೆತು ಮುನ್ನಡೆಯುತ್ತಿರುವ ನನ್ನಂತಹ ಎಷ್ಟೋ ಜನ ಮೂರ್ಖರನ್ನು ನಾನು ಈಗಲೂ ಕಾಣುತ್ತಿದ್ದೇನೆ. ಪ್ರಸ್ತುತ ಸನ್ನಿವೇಶದಲ್ಲಿ ನೀವು ಹೇಗಿದ್ದೀರಿ ಎಂದು ನೆನೆದು ಅದರಂತೆ ನಡೆದುಕೊಂಡರೆ ಸಾಕು.ಜೀವನ ಸುಂದರವಾಗಿರುತ್ತದೆ. ಅಲ್ಲವೇ..?
                                                - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment