Monday 8 February 2016

ಕಡಲ ಕಿನಾರೆಯ ಹುಡುಗಿ

ಕಡಲ ಕಿನಾರೆಯ ಹುಡುಗಿ....

ಸೂರ್ಯನ ಹೊಂಬಿಸಿಲು ಆಗಲೇ ಭೂಮಿಯನ್ನು ಸ್ಪರ್ಶಿಸಿಯಾಗಿತ್ತು. ಕಡಲ ಅಲೆಗಳು ಎಂದಿಗಿಂತ ಸ್ವಲ್ಪ ಶಾಂತ ರೂಪವನ್ನು ಪಡೆದುಕೊಂಡಿದ್ದವು. ಕಡಲ ಕಿನಾರೆಯ ಮರಳಿನಲ್ಲಿ ಓಡಿ ಓಡಿ ಸುಸ್ತಾಗಿ ಸ್ವಲ್ಪ ನಿಂತುಕೊಂಡೆ. ಪ್ರತಿದಿನ ಎರಡು ಕಿಲೋಮೀಟರಷ್ಟಾದರೂ ಓಡುತ್ತಿದ್ದ ನನಗೆ ಇಂದು ಬಹುಬೇಗ ಆಯಾಸವಾಗಿತ್ತು. ಹಾಗೆಯೇ ವಿಶ್ರಾಂತಿಗಾಗಿ ಮರಳಿನಲ್ಲಿ ಬಿದ್ದುಕೊಂಡೆ..

"ಸರ್... ಈ ಹೂವು ಬೇಕಾ...? ಯಾವ್ ಕಲರ್ ನಾದ್ದರೂ ತಗೋಳಿ ಬರೀ ಐದು ರೂಪಾಯಿಗಳು"
ಹಿಂದಿನಿಂದ ಬಂದ ಹುಡುಗಿಯೊಬ್ಬಳು ಗುಲಾಬಿ ಹೂವಿನ ಬುಟ್ಟಿಯನ್ನು ನನ್ನ ಮುಂದೆ ಚಾಚಿ ಹೇಳಿದಳು. ಹೂವಿನ ಬುಟ್ಟಿಯಲ್ಲಿ ಹಲವು ರಂಗಿನ ಹೂವುಗಳು ತಾಜಾತನದಿಂದ ಕೂಡಿದ್ದವು. ಆಕೆಯ ಮುಖವನ್ನೊಮ್ಮೆ ನೋಡಿದೆ. ಅವಳ ಮುಖದ ಸೌಂದರ್ಯ ತಾನು ತಂದ ಹೂವಿಗಿಂತಲೂ ಹೆಚ್ಚಿನ ತಾಜಾತನದಿಂದ ಕಂಗೊಳಿಸುತ್ತಿತ್ತು. ಮುಂಜಾನೆಯ ಮಂಜನ್ನೇ ಹಿನ್ನಲೆಯಾಗಿರಿಸಿಕೊಂಡು ನಿಂತಿರುವ ಆ ಹುಡುಗಿಯು ರೂಪದಲ್ಲಿ ಯಾವ ಅಪ್ಸರೆಗಿಂತ ಕಡಿಮೆ ಇರಲಿಲ್ಲ. ಕೆಂಪು ಗುಲಾಬಿ ಬಣ್ಣದ ಲಂಗ, ಬಿಳಿಯ ಅತಿ ಶುಭ್ರವಾದ ರವಿಕೆ, ತಲೆಗೆ ಹಳದಿ ಬಣ್ಣದ ಬಟ್ಟೆಯನ್ನು ಪೇಟದಂತೆ ಸುತ್ತಿಕೊಂಡಿದ್ದಳು. ಪೇಟದಿಂದ ಇಳಿದು ಬಿದ್ದ ಉದ್ದನೆಯ ಕಪ್ಪು ಕೂದಲುಗಳು ಮುಂಜಾನೆಯ ತಂಗಾಳಿಯೊಡನೆ ಅಲೆಯಾಗಿ ಈಜುತ್ತಿವೆಯೇನೊ ಎಂಬಂತೆ ಕಾಣುತ್ತಿದ್ದವು. ಗುಲಾಬಿ ಬಣ್ಣದ ಆಕೆಯ ಕೆನ್ನೆಯ ಮುಂದೆ, ತಾಜಾ ಹೂವಿನ ಬಣ್ಣವೂ ಮಾಸಿದಂತೆ ಕಾಣುತ್ತಿತ್ತು.
ಆಕೆಯ ಸೌಂದರ್ಯವನ್ನು ನೋಡಿ ಮನಸಿನಲ್ಲಿ ಇಂಪಾದ ಭಾವವೊಂದು ಹೊಕ್ಕಂತಾಯಿತು.. ಬರಿದಾದ ಹೃದಯದಲ್ಲಿ ಸಂತಸದ ಜೀವಜಲವನ್ನು ಸಿಂಪಡಿಸಿದಂತಾಯಿತು. ಕಿತ್ತು ಹೋದ ಹೃದಯ ವೀಣೆಯ ತಂತಿಯನ್ನು ಬಿಗಿದು ಒಲವ ರಾಗವನ್ನು ನುಡಿಸಿದ್ದಳು. ಆಕೆಯ ಸೌಂದರ್ಯವನ್ನು ಸವಿಯುತ್ತಾ ಹಾಗೆಯೇ ಒಂದು ಕ್ಷಣ ಕಲ್ಪನಾ ಲೋಕದಲ್ಲಿ ತೇಲಿಹೋದೆ......
"ರೀ.....ಪ್ಲೀಸ್... ಒಂದು ಹೂವಾದ್ರೂ ತಗೋಳಿ"
ಮತ್ತೆ ಆಕೆ ಹೇಳಿದಳು.
ಆಕೆಯ ರೂಪ ನೋಡಿ ಮೈ ಮರೆತ್ತಿದ್ದ ನಾನು ಎಚ್ಚೆತ್ತುಕೊಂಡೆ..
ನನ್ನಲ್ಲಿದ್ದ ಐದು ರೂಪಾಯಿಗಳನ್ನು ಆಕೆಯ ಕೈಗೆ ಕೊಟ್ಟೆ. ತಿಳಿ ಹಳದಿ ಬಣ್ಣದ ಗುಲಾಬಿ ಹೂವೊಂದು ಕೊಟ್ಟಳು. ನಾನು ಹೂವನ್ನು ಪಡೆದು ಮತ್ತೆ ಅದೇ ಹೂವನ್ನು ಅವಳ ಕೈಗೆ ನೀಡಿ
"ನಿನ್ನ ಸೌಂದರ್ಯಕ್ಕೆ, ನನ್ನದೊಂದು ಚಿಕ್ಕ ಹೂ ಕಾಣಿಕೆ... ಈ ಹೂ ನಿನ್ನಿಂದ ಕೊಂಡದ್ದು ನಿನಗಾಗಿಯೇ, ಪ್ಲೀಸ್ ಸ್ವೀಕರಿಸು.. ಬೇಡ ಎನ್ನಬೇಡ"
ಎಂದು ಬೇಡಿಕೊಂಡೆ...
ಆಕೆ ನನ್ನಿಂದ ಆ ಹೂವನ್ನು ಪಡೆದು ಕೊಂಡಳು. ಆದರೆ ಒಂದು ಕ್ಷಣ ಕೈಯಲ್ಲಿ ಹಿಡಿದು ಹಾಗೆಯೇ ನಾನು ಕುಳಿತ್ತಿದ್ದ ಪಕ್ಕದಲ್ಲೇ ಮರಳಿನಲ್ಲಿ ಸಿಕ್ಕಿಸಿ ನನ್ನ ಮುಖವನ್ನೊಮ್ಮೆ ನೋಡಿ ನಸು ನಕ್ಕು ಹೊರಟಳು.
"ಹಲೋ... ಏಯ್... ನಿನ್ನ ಹೆಸರೇನು...? ಪ್ಲೀಸ್"
ಎಂದು ಕೂಗಿಕೊಂಡೆ.
ಅವಳು ತಿರುಗಿ ನೋಡಿ ಮತ್ತೊಮ್ಮೆ ನಕ್ಕಳು.
ಆಕೆಯ ಆ ನಗುವಿನಲ್ಲಿ ಚಂದಿರನು ಸಹ ನಾಚುವಂತಹ ಸೌಂದರ್ಯವಿತ್ತು. ಮಿಂಚಿನ ಹೊಳಪಿತ್ತು. ಹೃದಯವನ್ನು ಇರಿಯುವಂತಹ ತೀಕ್ಷ್ಣತೆ ಇತ್ತು. ಹಾಗೆಯೇ ಎದೆಯನ್ನೊಮ್ಮೆ ಗಟ್ಟಿಯಾಗಿ ಹಿಡಿದು ಕೊಂಡು ಕಡಲ ಕಿನಾರೆಯ ಮರಳಿನಲ್ಲಿ ದೊಪ್ಪನೇ ಬಿದ್ದೆ......
ಆಕೆಯ ನೆನಪಿನಿಂದ ಮನೆಗೆ ಬಂದಾಗ ಆಗಲೇ ಹತ್ತು ಗಂಟೆಯಾಗಿತ್ತು. ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪ್ಪ ಸತ್ತು ಹೋದಾಗಿನಿಂದ ಬದುಕು ಕಷ್ಟಕರವಾಗಿತ್ತು. ಎರಡು ತಿಂಗಳ ಹಿಂದೆ ಕಡಲಿನಲ್ಲಿ ಮೀನು ಹಿಡಿಯಲು ಬಹುದೂರ ಹೋಗಿದ್ದ ಅಪ್ಪ ಮರಳಿ ಬರಲೇ ಇಲ್ಲ. ಅಪ್ಪ ಚಲಿಸುತ್ತಿದ್ದ ಹಡಗಿನಲ್ಲಿ ತಾಂತ್ರಿಕ ದೋಷ ಕಾಣಿಸಿದ್ದರಿಂದ ಹಡಗು ಕಡಲಿನ ಮಧ್ಯೆ ನೀರಿನಲ್ಲಿ ಮುಳುಗಿ ಹೋಗಿತ್ತು. ಆ ದಿನ ಹಡಗಿನಲ್ಲಿ ಮೀನು ಹಿಡಿಯಲು ಹೋಗಿದ್ದ ಯಾವ ಹತ್ತು ಜನರ ಹೆಣವೂ ಸಿಕ್ಕಿರಲಿಲ್ಲ. ಅಪ್ಪ ಮರಳಿ ಬರಬಹುದು ಎಂಬ ಆಸೆಯಿಂದ ಕಾದ ನನಗೆ ಎರಡು ತಿಂಗಳು ಕಳೆದದ್ದು ಗೊತ್ತಾಗಲಿಲ್ಲ. ಈ ಘಟನೆಯ ಬೆನ್ನಲ್ಲೇ ಮತ್ತೊಂದು ಬರಸಿಡಿಲು ಬಂದೆರಗಿತ್ತು. ಅಪ್ಪ ಹೊಸದಾದ ಹಡಗು ಕಟ್ಟಿಸಲು ಕೋ- ಅಪರೇಟಿವ್ ಬ್ಯಾಂಕ್ನಿಂದ ಐದು ಲಕ್ಷ್ಯ ಸಾಲ ಪಡೆದಿದ್ದರಂತೆ. ಸಾಲದ ಕಂತು ಆರು ತಿಂಗಳಿನಿಂದ ಸರಿಯಾಗಿ ಕಟ್ಟಿಲ್ಲ ಎಂಬ ಕಾರಣಕ್ಕೆ ಅಪ್ಪ ಕಾಣೆಯಾದ ಎರಡು ತಿಂಗಳಲ್ಲೇ ಬ್ಯಾಂಕಿನವರು ಇದ್ದ ಒಂದು ಮನೆಯನ್ನೂ ಹರಾಜು ಮಾಡಿದರು. ಅಪ್ಪ ಕಳೆದುಕೊಂಡ ದುಃಖ ಒಂದು ಕಡೆಯಾದರೆ. ಮನೆ ಹರಾಜು ಮಾಡಿದ ದುಃಖ ಇನ್ನೊಂದು ಕಡೆ ಇತ್ತು. ನನ್ನ ಎದುರು ಮನೆಯ ಪೂವಯ್ಯ ನನ್ನ ಕಷ್ಟ ನೋಡಲಾರದೆ ತನ್ನ ಎರಡನೇ ಅಂತಸ್ತಿನಲ್ಲಿರುವ ಚಿಕ್ಕ ಮನೆಯೊಂದನ್ನು ವಾಸಿಸಲು ನನಗೆ ನೀಡಿದ್ದರು. ಅಪ್ಪ ಇಲ್ಲದ್ದರಿಂದ ನನ್ನ ನಾಲ್ಕನೇ ಸೆಮಿಸ್ಟರ್ ನ ಇಂಜಿನಿಯರಿಂಗ್ ಓದು ಸಹ ಅರ್ದಕ್ಕೆ ನಿಂತು ಹೋಗಿತ್ತು. ಈ ಆಘಾತದಿಂದ ಕಣ್ಣೀರು ಹಾಕುತ್ತಿದ್ದ ನನಗೆ ಈ ದಿನ ಬದುಕಿನಲ್ಲಿ ಮಿಂಚೊಂದು ಗೋಚರಿಸಿದ ಅನುಭವವಾಯಿತು....
ಮಾರನೆಯ ದಿನ ಬೆಳಗ್ಗೆ ಮತ್ತೆ ಕಡಲ ಕಿನಾರೆಯ ಮರಳಿನಲ್ಲಿ ಓಟ ಆರಂಭಿಸಿದೆ. ನನ್ನ ಕಣ್ಣುಗಳು ಮತ್ತೆ ಆ ಹುಡುಗಿಯನ್ನು ಹುಡುಕುತ್ತಿದ್ದವು. ಎಲ್ಲಿಯೂ ಕಾಣಲಿಲ್ಲ. ಕಡಲ ತೀರದಲ್ಲಿ ಹೂವಿನ ಅಂಗಡಿ ಅಂತ ಇದ್ದದ್ದು ಲಿಂಗಪ್ಪನದು ಮಾತ್ರ. ಅವನ ಮಗಳು ಕಮಲಿ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಬಂದ ನಮ್ಮಂತವರಿಗೆ ಗುಲಾಬಿ ಹೂಗಳನ್ನು ಮಾರುತ್ತಿದ್ದಳು. ಕಮಲಿಯನ್ನು ಬಿಟ್ಟು ಬೇರೆಯವರು ಈ ರೀತಿ ಹೂಗಳನ್ನು ಮಾರಿದವರು ನಾನು ಎಂದಿಗೂ ನೋಡೇ ಇರಲಿಲ್ಲ. ಮತ್ತೆ ಅವಳು ಸಿಗಬಹುದೇನೋ ಎಂದು ಎಲ್ಲಾ ಕಡೆ ದೃಷ್ಟಿ ಹಾಯಿಸಿದೆ. ಎಲ್ಲಿಯೂ ಕಾಣದಾದಳು. ಅಲ್ಲೇ ಇರುವ ಲಿಂಗಪ್ಪನ ಅಂಗಡಿಗೆ ಹೋದೆ. ಕಮಲಿಯೂ ಅಲ್ಲೇ ಇದ್ದಳು. 

"ಕಮಲಿ... ನಿನ್ನ ಬಿಟ್ಟು ಕಡಲ ತೀರದಲ್ಲಿ ಯಾರಾದರೂ ಗುಲಾಬಿ ಹೂ ಮಾರ್ತಾರ...?"
ಎಂದೆ..
ಆಕೆ ಇಲ್ಲವೆಂದು ತಲೆಯಾಡಿಸಿದಳು..
ನಾನು ನಂಬಲಿಲ್ಲ..
"ಇಲ್ಲ ಕಮಲಿ....ನಿನ್ನೆ ಹೊಸ ಹುಡುಗಿಯೊಬ್ಬಳು ಗುಲಾಬಿ ಮಾರಿದ್ದನ್ನು ನಾನೇ ನೋಡಿದ್ದೇನೆ"
"ಅಯ್ಯೋ.....ಅದಾ ನಿನ್ನೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ನಾಲ್ಕೈದು ಹುಡುಗಿಯರು ಪಿಕ್ನಿಕ್ ಗೆ ಅಂತ ಇಲ್ಲಿಗೆ ಬಂದಿದ್ದರು. ಅವರಲ್ಲಿ ಒಬ್ಬಳು ತನ್ನ ಗೆಳತಿಯರೊಡನೆ ಒಂದು ಗುಲಾಬಿಯನ್ನಾದರೂ ಇಲ್ಲಿ ಮಾರಾಟ ಮಾಡಿ ತೋರಿಸುತ್ತೇನೆಂದು ಬೆಟ್ಸ್ ಕಟ್ಟಿಕೊಂಡಿದ್ದಳು. ಅದರಂತೆ ಅವಳು ನನಗೆ ನೂರು ರೂಪಾಯಿಗಳನ್ನು ಕೊಟ್ಟು ನನ್ನ ಹೂ ಬುಟ್ಟಿಯನ್ನು ತೆಗೆದುಕೊಂಡು ಒಂದು ಗುಲಾಬಿಯನ್ನು ಮಾರಾಟಮಾಡಿ ತನ್ನ ಗೆಳತಿಯರಿಂದ ಸಾವಿರ ರೂಪಾಯಿಗಳನ್ನು ಗೆದ್ದು ಕೊಂಡಿದ್ದಳು"
ಕಮಲಿ ನಿನ್ನೆ ನಡೆದ ಎಲ್ಲಾ ವಿಷಯವನ್ನು ಹೇಳಿದಳು.
" ಬಾ ..ಪ್ರಕಾಶ...ಇಲ್ಲಿ ಕೂತ್ಕೊ, ನಿಮ್ಮಪ್ಪ ಕಾಣೆಯಾಗಿ ಇಲ್ಲಿಗೆ ಎರಡು ತಿಂಗಳಾಯಿತು. ನಿಮ್ಮ ಹೊಸ ಹಡಗಿಗೆ ಪೂಜೆಮಾಡಲು ಪ್ರತಿದಿನವೂ ನಾನೇ ಹೂಗಳನ್ನು ಕೊಡುತ್ತಿದ್ದೆ. ನಿಮ್ಮಪ್ಪ ಎಷ್ಟು ಒಳ್ಳೆಯವರು. ಶ್ರಮ ಜೀವಿ , ನೀನೂ ಏನಾರ ಕೆಲಸ ಮಾಡು, ಸುಮ್ನೆ ಕಾಲ ನೂಕಬೇಡ, ನನ್ನ ಮಗಳು ಕಮಲಿಯನ್ನೇ ನೋಡು, ಇನ್ನೂ ಒಂಬತ್ತನೇ ತರಗತಿ, ನಿನಗಿಂತ ಐದು ವರ್ಷ ಚಿಕ್ಕವಳು ದಿನ ಬೆಳಗ್ಗೆ ಒಂದೈವತ್ತು ಗುಲಾಬಿ ಹೂಗಳನ್ನು ಮಾರಿ, ಆಮೇಲೆ ಶಾಲೆಗೆ ಹೋಗ್ತಾಳೆ. ಇಲ್ದಿದ್ರೆ ನಮ್ ಜೀವನಾನೂ ಕಷ್ಟವೇ..."
ಲಿಂಗಪ್ಪ ಮುದ್ದಾಗಿದ ತನ್ನ ಮಗಳು ಕಮಲಿಯ ತಲೆಯನ್ನು ಸವರುತ್ತಾ ಹೇಳಿದನು.
ಲಿಂಗಪ್ಪನ ಮಾತು ಸರಿಯೆನಿಸಿತು. ನಾನು ಎರಡು ತಿಂಗಳಿನಿಂದಲೂ ಹಣಕ್ಕೆ ಪರದಾಡುತ್ತಿದ್ದೆ...
"ಲಿಂಗಣ್ಣ ಬೆಂಗಳೂರಿಗೆ ಹೋಗಬೇಕೆಂದು ಇದ್ದೇನೆ.. ಯಾರಾದ್ರೂ ಪರಿಚಯದವರಿದ್ರೆ ಹೇಳಿ ಕೆಲಸ ಕೊಡಿಸ್ತೀಯಾ..?"
ಲಿಂಗಣ್ಣ ಬೆಂಗಳೂರಿನಲ್ಲಿರುವ ಹೋಟೆಲ್ ಒಂದರಲ್ಲಿ ಕೆಲಸ ಮಾಡುವಂತೆ ನನ್ನ ಕೈಯಲ್ಲಿ ವಿಳಾಸವೊಂದನ್ನು ಕೊಟ್ಟರು. ಹೊಟಲ್ ವಿಳಾಸವು ಮೌಂಟ್ ಕಾರ್ಮಲ್ ಕಾಲೇಜಿನ ಎದುರುಗಡೆ ಎಂದು ಬರೆದಿದ್ದನ್ನು ನೋಡಿ ಖುಷಿಯಾದೆ. ಕಡಲ ಕಿನಾರೆಯಲ್ಲಿ ಸಿಕ್ಕ ಹುಡುಗಿಯನ್ನು ಮತ್ತೆ ನೋಡಬಹುದೆಂದು ಮನಸು ಹಾತೊರೆಯುತ್ತಿತ್ತು...
ಆ ಹುಡುಗಿಯನ್ನು ನೋಡಿದಂದಿನಿಂದ ನನ್ನಲ್ಲಿ ಸಾಕಷ್ಟು ಬದಲಾವಣೆಯುಂಟಾಗಿತ್ತು. ಆಕೆ ಸೌಂದರ್ಯವತಿ ಅವಳನ್ನು ಪಡೆಯಬೇಕು ಎನ್ನುವ ಸ್ವಾರ್ಥಕ್ಕಿಂತ. ಅವಳಿರವಂತೆ ನಾನು ಸಹ ಆತ್ಮ ವಿಶ್ವಾಸದಿಂದಿರಬೇಕು. ಜೀವನದಲ್ಲಿ ಸಂತೋಷದಿಂದ ಇರಬೇಕು ಎನ್ನುವ ಹುಮ್ಮಸ್ಸು ಬಂದಿತ್ತು. ಒಣಗಿ ಹೋಗುತ್ತಿರುವ ಗಿಡಕ್ಕೆ ಸೋನೆ ಮಳೆಯು ಬಿದ್ದಾಗ ಹೇಗೆ ಮತ್ತೆ ಹಸಿರು ಚಿಗುರೊಡೆಯುತ್ತದೆಯೋ ಹಾಗೆಯೇ ಅವಳ ನಡೆಯನ್ನು ಕಂಡಾಗ ನನ್ನ ಮನಸಿನಲ್ಲಿ ಹೊಸ ಹೊಸ ಆಸೆಗಳು ಮೂಡಲಾರಂಭಿಸಿದವು. ಸೂರ್ಯಕಾಂತಿಯ ಹೂವು ಸೂರ್ಯನತ್ತ ಆಕರ್ಷಣೆಗೊಂಡಂತೆ,.. ಹುಣ್ಣಿಮೆಯ ಚಂದ್ರನನ್ನು ಕಂಡಾಗ ಅಲೆಗಳು ಮೇಲೇಳುವಂತೆ,... ಕೋಗಿಲೆಯು ಮಾಮರದಲ್ಲಿ ಇಂಪಾಗಿ ಹಾಡಿದಂತೆ,... ದುಂಬಿಗಳು ಹೂಗಳನ್ನು ಬಯಸಿದಂತೆ,... ಸೂರ್ಯನ ಸುತ್ತ ಭೂಮಿ ತಿರುಗಿದಂತೆ,... ಎಲ್ಲವಕ್ಕೂ ಯಾವುದೋ ಅಗೋಚರ ಶಕ್ತಿಯೊಂದು ಸೆಳೆದಿರುತ್ತವೆ. ನನ್ನಲ್ಲಿಯೂ ಸಹ ಯಾವುದೋ ಒಂದು ಸೆಳೆತ ಮೋಡಿಯನ್ನುಂಟು ಮಾಡಿತ್ತು.... ಹಬ್ಬಲು ಬಯಸಿದ ಬಳ್ಳಿಯು ತನಗೆ ಆಸರೆಯಾಗುತ್ತಿರುವ ಮರ ಯಾವುದೆಂದು ನೋಡುತ್ತದೆಯೆ...? ಹಾಗೆಯೇ ನನಗೆ ಅವಳು ಯಾರಾದರೇನು..? ಬದುಕಿನಲ್ಲಿ ಹುಮ್ಮಸ್ಸು ತುಂಬಿದ ವಿಷಯ ಯಾವುದಾದರೇನು..? ಮರಳುಗಾಡಿನಂತೆ ಬತ್ತಿ ಹೋದ ನನ್ನ ಬದುಕಿಗೆ ಆ ಹುಡುಗಿಯ ನೋಟವೇ ನನ್ನಲ್ಲಿ ಬದುಕಿನ ಬಗ್ಗೆ ಮತ್ತೆ ಆಸೆ ಚಿಗುರಿಸಿತ್ತೇ...? ಗೊತ್ತಿಲ್ಲ....!! ಆದರೆ ಯಾಕೆ ಹೀಗಾಯಿತು...? ಇದೆಲ್ಲಾ ಹೇಗೆ ..? ಇದು ಸಾದ್ಯವೇ...? ಎಂಬ ಪ್ರಶ್ನೆಗಳು ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ...ನಾನಿದ್ದ ಪರಿಸ್ಥಿತಿಗೆ ಯಾವುದೋ ಒಂದು ಸೆಳೆತ ನನ್ನನ್ನು ಜಾಗೃತ ಗೊಳಿಸಿರಬೇಕು ಅಷ್ಟೆ.....

ಮಾರನೇ ದಿನವೇ ಲಿಂಗಣ್ಣ ಕೊಟ್ಟ ವಿಳಾಸ ಹಿಡಿದು ಬೆಂಗಳೂರಿಗೆ ಹೊರಟೆ. ಮೌಂಟ್ ಕಾರ್ಮೆಲ್ ಕಾಲೇಜಿನ ಎದುರುಗಡೆ ಸ್ವಲ್ಪ ದೂರದಲ್ಲಿರುವ ಹೋಟೇಲಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಾನು ಬಯಸಿದ್ದರೆ ಮತ್ತೆ ಆ ಹುಡುಗಿಯನ್ನು ನೋಡುವ ಪ್ರಯತ್ನ ಮಾಡಬಹುದಿತ್ತು. ಆದರೆ ನಾನು ಕಾಲೇಜಿನ ಕಡೆಗೆ ಮುಖ ಎತ್ತಿಯೂ ನೋಡಲಿಲ್ಲ. ಅವಳೊಡನೆ ಪ್ರೀತಿ, ಪ್ರೇಮ ಅಂತ ಹಿಂದೆ ಸುತ್ತುವ ಮನಸ್ಥಿತಿಯೂ ನನಗಿರಲಿಲ್ಲ. ಹಾಗೇನಾದರೂ ಮಾಡಿದ್ದರೆ ಹೊಟೆಲ್ ಕೆಲಸ ಮಾಡುವ ನನ್ನಂತವನಿಗೆ ಅವಮಾನ ಕಟ್ಟಿಟ್ಟ ಬುತ್ತಿ. ತಂದೆ ತಾಯಿಯನ್ನು ಕಳೆದುಕೊಂಡು ಬದುಕನ್ನು ಕಟ್ಟಲು ಹೋರಾಡಬೇಕಿದ್ದ ನಾನು ಹುಡುಗಿಯ ಹಿಂದೆ ಬಿದ್ದು ಪ್ರೀ ಪ್ರೇಮ ಅಂತ ಸುತ್ತುವುದಾದರೂ ಹೇಗೆ..? ಕಾಣದ ಬದುಕಿಗೆ ಆಸೆ ಪಡುವುದಕ್ಕಿಂತ, ನೋಡಿದ ಬದುಕನ್ನು ಕಲ್ಪಿಸಿಕೊಳ್ಳುವುದು ಸುಖವೆಂದುಕೊಂಡೆ. ಬದುಕಿನಲ್ಲಿ ಸಾಧಿಸುವುದು ಬೇಕಾದಷ್ಟಿತ್ತು. ಬಾಲ್ಯದಲ್ಲಿ ಅಪ್ಪನೊಂದಿಗೆ ಮೀನು ಹಿಡಿಯಲು ಹೋಗುತ್ತಿದ್ದ ನನಗೆ ಕಡಲು ಸಾಕಷ್ಟು ಪಾಠವನ್ನು ಕಲಿಸಿತ್ತು. ಜೀವ ಬಿಗಿ ಹಿಡಿದು ಬಿರುಗಾಳಿಗೆ ಎದೆಯೊಡ್ಡಿ ಕಡಲ ಒಡಲನ್ನು  ಪ್ರವೇಶಿಸಿ, ಮೀನು ಹಿಡಿದು ಬದುಕನ್ನು ಸಾಗಿಸುವ ಕಷ್ಟವನ್ನು ಅಪ್ಪ ನನಗೆ ಬಾಲ್ಯದಲ್ಲೀಯೇ ಪರಿಚಯಿಸಿದ್ದರು.....
ನಾನು ನನ್ನ ಇಂಜಿನಿಯರಿಂಗ್ ಓದನ್ನು ಮತ್ತೆ ಬೆಂಗಳೂರಿಗೆ ವರ್ಗಾಯಿಸಿಕೊಂಡೆ. ಹೋಟೆಲ್ ಕೆಲಸ ಮಾಡುತ್ತಲೇ ನನ್ನ ಓದನ್ನು ಪೂರ್ಣ ಗೊಳಿಸಿಕೊಂಡೆ. ಎರಡು ವರ್ಷಗಳ ನಂತರ ಒಳ್ಳೆ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಈಗ ನನಗೆ ಆರಂಕಿಯ ಸಂಬಳ. ಅಂದು ಕಳೆದುಕೊಂಡಕ್ಕಿಂತ ಇಂದು ಹೆಚ್ಚಾಗಿಯೇ ಗಳಿಸಿದ್ದೇನೆ.
ಬಸ್ಸಿನಲ್ಲಿ ಕೂತು ನಮ್ಮೂರಿಗೆ ಹೊರಟಿದ್ದೆ. ನಮ್ಮೂರಿನ ಕಡಲಿನ ವಾಸನೆ... ಭೋರ್ಗರೆತದ ಸದ್ದು ಇಂದ್ರಿಯಗಳಿಗೆ ತಲುಪಿದ ಕೂಡಲೇ ನಿದ್ದೆಯಿಂದ ಎಚ್ಚೆತ್ತುಕೊಂಡೆ. ಐದು ವರ್ಷದ ನಂತರ ನಮ್ಮೂರನ್ನು ನೋಡಿದ ಕೂಡಲೇ ಏನೋ ತೃಪ್ತಿಯ ಭಾವ ಮುಖದಲ್ಲಿ ಮೂಡಿತು. ನಮ್ಮ ಮನೆಯನ್ನು ಅಂದು ಹರಾಜಿನಲ್ಲಿ ಕೊಂಡವರು ಇಂದು ಮಾರಲು ಹೊರಟಿದ್ದರು. ಈ ವಿಷಯವನ್ನು ಪೂವಯ್ಯನವರು ಪತ್ರ ಬರೆದು ತಿಳಿಸಿದ್ದರು. ಹದಿನೈದು ಲಕ್ಷ ರೂಪಾಯಿಗಳಿಗೆ ನಮ್ಮ ಮನೆಯನ್ನು ಮತ್ತೆ ಕೊಂಡುಕೊಂಡೆ. ಒಂದು ವಾರ ರಜೆಯ ಯೋಜನೆ ಹಾಕಿಕೊಂಡು ಊರಲ್ಲೇ ಆರಾಮಾಗಿ ಇರೋಣವೆಂದು ಬಂದಿದ್ದೆ. ಮನೆ ಕೊಂಡುಕೊಳ್ಳುವ ಕಛೇರಿ ಕೆಲಸದ ಭರಾಟೆಯಲ್ಲಿ ಸಮುದ್ರ ತೀರದ ಕಡೆಗೆ ಹೋಗಿರಲಿಲ್ಲ. ಐದನೆಯ ದಿನ ಮುಂಜಾನೆ ಜಾಗಿಂಗ್ ಸೂಟು ಹಾಕಿಕೊಂಡು ಸಮುದ್ರ ತೀರದ ಕಡೆಗೆ ಹೊರಟೆ.
ಸೂರ್ಯ ಆಗ ತಾನೆ ಕಡಲ ಅಲೆಗಳ ಮೇಲೆ ಹೊಂಗಿರಣವನ್ನು ಹರಡಿದ್ದನು. ಕಡಲ ಅಲೆಗಳು ಶಾಂತ ಸ್ವರೂಪವನ್ನು ಪಡೆದಿದ್ದವು. ಕೇವಲ ಅರ್ದ ಕಿಲೋಮೀಟರ್ ಓಡಿ ಬಂದ ನನಗೆ ಆಗಲೇ ಆಯಾಸವಾಗಿ ಹೋಗಿತ್ತು. ವಿಶ್ರಾಂತಿಗಾಗಿ ಅಲ್ಲೇ ಮರಳ ಮೇಲೆ ಬಿದ್ದು ಕೊಂಡೆ.
" ರೀ... ಹೂವು ಬೇಕಾ...? ಯಾವ ಕಲರ್ ಹೂವನ್ನು ತೆಗೆದುಕೊಳ್ಳಿ ಬರೀ ಹತ್ತು ರೂಪಾಯಿಗಳು ಮಾತ್ರ"
ಹಿಂದಿನಿಂದ ಬಂದ ಹುಡುಗಿಯೊಬ್ಬಳು ತನ್ನ ಗುಲಾಬಿ ಹೂವಿನ ಬುಟ್ಟಿಯನ್ನು ನನ್ನ ಮುಂದೆ ಚಾಚಿ ಹೇಳಿದಳು. ತಕ್ಷಣ ಅವಳನ್ನು ನೋಡಿದೆ. ಕೆಂಪು ಬಣ್ಣದ ಲಂಗ, ಬಿಳಿಯ ಶುಭ್ರವಾದ ರವಿಕೆ. ತಲೆಗೆ ಹಳದಿ ಬಣ್ಣದ ಬಟ್ಟೆಯನ್ನು ಪೇಟದಂತೆ ಕಟ್ಟಿದ್ದಳು. ಅದೇ ಸೌಂದರ್ಯ, ಅದೇ ರೂಪ, ಮತ್ತೆ ಅಂದು ಸಿಕ್ಕ ಹುಡುಗಿಯೇನಾದರೂ ಬಂದಿರಬಹುದೇ...? ಎಂದು ಯೋಚಿಸುತ್ತಿರುವಾಗಲೇ..
"ರೀ... ಒಂದನ್ನಾದರೂ ತಗೋಳಿ ಎಂದು, ತಿಳಿ ಹಳದಿ ಬಣ್ಣದ ಹೂವೊಂದನ್ನು ತೆಗೆದು ಕೊಟ್ಟಳು"
ನಾನು ಹೂವೊಂದನ್ನು ಪಡೆದು, ಮತ್ತೆ ಅವಳ ಕೈಗೆ ನೀಡಿ
" ಇದು ನಿನ್ನಿಂದ... ನಿನಗಾಗಿಯೇ... ಈ ಹೂವನ್ನು ಕೊಂಡದ್ದು, ನಿನ್ನ ಸೌಂದರ್ಯಕ್ಕೆ ನನ್ನದೊಂದು ಹೂ ಕಾಣಿಕೆ"
ಎಂದು ಆಕೆಯ ಕೈಗೆ ಕೊಟ್ಟೆ... ಹೂವನ್ನು ಪಡೆದ ಅವಳು ತನ್ನ ನಗುವನ್ನು ತೋರಿಸಿ ಓಡಿ ಹೋದಳು.
" ಹಲೋ.... ಏಯ್ ...ನಿನ್ನ ಹೆಸರೇನು..?"
ಎಂದು ಕೂಗಿಕೊಂಡೆ.
ಸ್ವಲ್ಪ ದೂರ ಹೋದ ಅವಳು ತಿರುಗಿ ನೋಡಿ.
" ಕಮಲೀೕೕ...."
ಎಂದು ಹೇಳಿ ನಾಚುತ್ತಾ ಓಡಿ ಹೋದಳು.
ಈ ಸಲ ಬಿಡಬಾರದೆಂದು ಅವಳ ಹಿಂದೆಯೇ ಓಡಿದೆ. ಅವಳು ಲಿಂಗಣ್ಣನ ಅಂಗಡಿಯ ಮುಂದೆ ನಿಂತಳು.
ನಾನು ಎದರುಸಿರು ಬಿಡುತ್ತಾ
"ನನ್ನ ಮದುವೆ ಆಗ್ತೀಯಾ ಎಂದೆ"
ಅವಳು ಉತ್ತರಿಸಲಿಲ್ಲ. ಅವಳ ಕಣ್ಣುಗಳು ನೆಲವನ್ನು ನೋಡುತ್ತಿದ್ದವು. ಮುಂಜಾನೆಯ ಮಂಜನ್ನೇ ಹಿನ್ನಲೆಯಾಗಿಸಿಕೊಂಡು ನಿಂತ ಅವಳು ರೂಪದಲ್ಲಿ ಯಾವ ಅಪ್ಸರೆಗಿತಲೂ ಕಡಿಮೆಯಿರಲಿಲ್ಲ..
ಲಿಂಗಣ್ಣ ಅಂಗಡಿಯಿಂದ ಹೊರಬಂದು
"ನಿನ್ನ ಉಪಕಾರ ಮರೆಯೊಲ್ಲಪ್ಪಾ... ನನ್ನ ಮಗಳು ಕಮಲಿಯನ್ನು ಒಪ್ಪಿರುವೆ. ನಿನ್ನಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ"
ಎಂದು ನನ್ನನ್ನು ಬಿಗಿಯಾಗಿ ಅಪ್ಪಿಕೊಂಡರು. ನಾನು ಸಹ ಲಿಂಗಪ್ಪ ಮಾಡಿದ ಸಹಾಯ ಮರೆತಿರಲಿಲ್ಲ. ಅಂದು ಯಾರೋ ಅಂದು ಸಿಕ್ಕ ಹುಡುಗಿಗಿಂತ, ನನಗೆ ಬದುಕಲು ಸರಿ ದಾರಿ ತೋರಿದ ಲಿಂಗಪ್ಪನ ಕುಟುಂಬ ಇಂದು ಆಪ್ತವಾಗಿ ಕಂಡಿತು. ಕಮಲಿ ಹೂವನ್ನು ಮಾರಿಕೊಂಡೇ ಓದಿದವಳು. ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದುದು ಕಮಲಿಯ ಚಿಕ್ಕಪ್ಪನವರದೇ ಆಗಿತ್ತು. ಕಮಲಿ ತನ್ನ ಚಿಕ್ಕಪ್ಪನಿಗೆ ಪತ್ರ ಬರೆಯುವಾಗ ಪ್ರತಿಸಾರಿಯೂ ನನ್ನ ಬಗ್ಗೆ ಒಂದೆರಡು ಸಾಲುಗಳನ್ನು ಬರೆದು ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದಳು. ಈಗ ಕಮಲಿ ದಂತದ ಗೊಂಬೆಯಂತಾಗಿದ್ದಳು. ಮತ್ತೊಮ್ಮೆ ಕಮಲಿಯನ್ನು ನೋಡಿದೆ. ಹಳದಿ ಬಣ್ಣದ ಪೇಟದಿಂದ ಇಳಿ ಬಿದ್ದ ಆಕೆಯ ಕಪ್ಪನೆ ಕೂದಲುಗಳು ತಂಗಾಳಿಯಲ್ಲಿ ಅಲೆಯಂತೆ ಹಾರಾಡುತ್ತಿದ್ದವು........
                                 
- ಪ್ರಕಾಶ್ ಎನ್ ಜಿಂಗಾಡೆ

No comments:

Post a Comment