Thursday 3 March 2016

ದೇವರು ಧರ್ಮ

ದೇವಸ್ಥಾನದಲ್ಲಿ ಘಂಟೆಯ ಸದ್ದು ಕೇಳಿಸುತ್ತಿತ್ತು. ಬಹುಷಃ ಸ್ವಲ್ಪ ಲೇಟಾಗಿ ಬಂದಿರಬಹುದು ಎಂದುಕೊಂಡು ಆತುರವಾಗಿ ಹೆಜ್ಜೆ ಹಾಕಿದೆ. ಬುಟ್ಟಿಯಲ್ಲಿ ತಂದ ಹಣ್ಣು ಕಾಯಿಗಳೊಂದಿಗೆ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿ ಒಳಗೆ ಪ್ರವೇಶಿಸಿದೆ. ಮಹಾಮಂಗಳಾರತಿಯ ದಿವ್ಯ ಪ್ರಭೆಯು ಪ್ರಾಂಗಣದ ತುಂಬೆಲ್ಲಾ ಪ್ರಜ್ವಲಿಸುತ್ತಿತ್ತು. ಮಿಂಚಿನ ಆ ಬೆಳಕಲ್ಲಿ ಭಕ್ತಿ ಪೂರ್ವಕವಾಗಿ ತಲ್ಲೀನ ಗೊಂಡಿರುವಾಗಲೇ ಮುದ್ದಾದ ಮುಖವೊಂದು ಕಣ್ಣ ಮುಂದೆ ಬಂದಂತಾಯಿತು. ಎಲ್ಲೋ ನೋಡಿದ ಪರಿಚಿತ ಎಂದೆನಿಸಿತು. ಆಕೆಯ ಗುಲಗಂಜಿಯಂತಿರುವ ಕಣ್ಣುಗಳ ಮೇಲೆ ನವಿಲು ಗರಿಯನ್ನು ಇಟ್ಟು ಯಾರೋ ಹುಬ್ಬುಗಳನ್ನು ತಿದ್ದಿ ತೀಡಿದ್ದಾರೆ ಎಂದೆನಿಸಿತು. ಕೆನ್ನೆಗಳು ಗುಲಾಬಿ ರಂಗಿನ ಹೊಳಪನ್ನು ಧರಿಸಿದ್ದವು. ಅಧರಗಳು ಜೇನು ಸವರಿದ ಒದ್ದೆಯಂತೆ ಫಳ ಫಳಿಸುತ್ತಿದ್ದವು.  ಬಯಸದ ಸೌಂದರ್ಯವೊಂದು ಕಣ್ಣ ಮುಂದೆ ಬಂದು ನನ್ನ ಮನಸನ್ನು ಪುಳಕಿತಗೊಳಿಸಿತು. ಆಕೆಯನ್ನು ದಿಟ್ಟಿಸಿ ನೋಡಿದೆ.

"ಅರೆ... ನೀವು ಸಲೋನಿ...!!  ಮೊನ್ನೆ ಚರ್ಚ್ ನಲ್ಲಿ  ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲವೆ...?"

ಎಂದು ಆಶ್ಚರ್ಯದಿಂದ ಕೇಳಿದೆ

"ಹೂಂ....ಹೌದು.... "
ಎಂದಳು

"ಮೊನ್ನೆ ಚರ್ಚ್ ಎದುರುಗಡೆಯ ಹಾಲ್ ನಲ್ಲಿ ನಡೆದ ನ್ಯಾನ್ಸಿಯ ಮದುವೆಗೆ ನಾನು ಬಂದಿದ್ದೆ... ಆಗ ನಿಮ್ಮನ್ನು ನೋಡಿದ್ದೆ... .. ಆಗ ನ್ಯಾನ್ಸಿ ನನ್ನ ಪರಿಚಯಿಸಿದ್ದು ನೀವು ಮರೆತಿರಬೇಕು"
ಎಂದೆನು.

"ಇಲ್ಲ, ಇಲ್ಲ , ಮರೆತಿಲ್ಲ....ನಿಮ್ಮ ಹೆಸರು ಪ್ರಕಾಶ್, ನೀವು ಬರೆಯುತ್ತಿರುವ ಪಿ,ಹೆಚ್,ಡಿ ಪ್ರಬಂಧಕ್ಕೆ ನನ್ನ ಸಹಾಯ ಕೇಳಲು ಬಂದಿದ್ರಿ ಅಲ್ಲವೇ....? "

ಸಲೋನಿ ನನ್ನ ನೆನಪಿಸಿಕೊಂಡು ಹೇಳಿದಳು.

"ಹೌದು... ಅಂದು ನೀವು ಕೊಟ್ಟ ಕೆಲವು ಮಾಹಿತಿಗಳು ನನ್ನ ಪ್ರಬಂದಕ್ಕೆ ಅನುಕೂಲವಾಯಿತು
 "ಆದರೆ ನೀವು ಈ ದೇವಸ್ಥಾನದಲ್ಲಿ...?"
ಅನುಮಾನದಿಂದ ಕೇಳಿದೆ.

"ಯಾಕೆ..? ಬರಬಾರದೇನು...? ಚರ್ಚ್ ನಲ್ಲಿ ಪ್ರಾರ್ಥಿಸುವವಳು ದೇವಸ್ಥಾನದಲ್ಲಿ ಅಂತ ಅನುಮಾನನಾ...?"

ನಗುತ್ತಾ ಕೇಳಿದಳು. ಆಕೆಯ ಆ ನಗು ಮಿಂಚಿನ ಬೆಳಕು ಚೆಲ್ಲಿದಂತಿತ್ತು.

ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠ ಎಂದು ಕಿತ್ತಾಡಿಕೊಳ್ಳುವ ಈ ಸಮಾಜದಲ್ಲಿ ಅನ್ಯ ಧರ್ಮವನ್ನು ಗೌರವಿಸುವ ಸಲೋನಿಯಂತಹ ಹುಡುಗಿಯನ್ನು ಕಂಡರೆ ಆಶ್ಚರ್ಯವಾಗುವುದೇನೋ ಸಹಜ.

" ಹಾಗೇನಿಲ್ಲ .. ಬರಬಹುದು, ಕೆಲವರು ವಿಗ್ರಹಾರಾದನೆಯನ್ನು ನಂಬುವುದಿಲ್ಲವಲ್ಲ. ಅದಕ್ಕೆ ಕೇಳಿದೆ"
ಎಂದು ಸಮಾಧಾನದಿಂದ ಉತ್ತರಿಸಿದೆ.

"ನೋಡಿ ದೇವರು ಮೂರ್ತ ಸ್ವರೂಪವೋ, ಅಮೂರ್ತ ಸ್ವರೂಪವೋ ನನಗೆ ತಿಳಿಯದು, ನನ್ನ ಪ್ರಕಾರ ದೇವರು ಒಬ್ಬನೆ, ದೈವ ಶಕ್ತಿ ಇರುವುದೂ ಒಂದೇ ಎಂದು ನಂಬಿದವಳು ನಾನು. ಕೆಲವರು ಅದನ್ನೇ ವಿಭಿನ್ನ ಹೆಸರಿನಲ್ಲಿ, ವಿಭಿನ್ನ ಧರ್ಮದ ಅಡಿಯಲ್ಲಿ ಆರಾಧಿಸುತ್ತಾರೆ. ಕೆಲವರು ಆ ಶಕ್ತಿಯನ್ನು ವಿಗ್ರಹದ ರೂಪದಲ್ಲಿ  ಪೂಜಿಸಿದರೆ, ಮತ್ತೆ ಕೆಲವರು ಅದೇ ಶಕ್ತಿಯನ್ನು ಅಮೂರ್ತ ಸ್ವರೂಪದಲ್ಲಿ ಪೂಜಿಸುತ್ತಾರೆ. ಇರುವ ಭೂಮಿಯೂ ಒಂದೇ... ಕುಡಿವ ನೀರು ಒಂದೇ... ವಾಯು,ಅಗ್ನಿ, ಸೂರ್ಯ, ಚಂದ್ರ, ಆಕಾಶ, ಗ್ರಹ, ತಾರೆ, ಇಡೀ ಜಗತ್ತು ಎಲ್ಲವೂ ಎಲ್ಲರ ಕಣ್ಣಿಗೆ ಒಂದೇ ರೀತಿಯಾಗಿ ಕಾಣುತ್ತಿರಬೇಕಾದರೆ, ದೇವರು ಮಾತ್ರ ಬೇರೆ ರೀತಿಯಾಗಿ ಕಾಣಲು ಹೇಗೆ ಸಾದ್ಯ ಹೇಳಿ...? ಗುರಿ ತಲುಪಲು ಯಾವ ಮಾರ್ಗ ಆರಿಸಿಕೊಂಡರೇನು.. ? ಎಷ್ಟೋ ಜನ ಮಾರ್ಗ ಮಧ್ಯದಲ್ಲಿಯೇ ನನ್ನ ದಾರಿಯೇ ಶ್ರೇಷ್ಠವೆಂದು ವಾದಿಸಿ, ಜಗಳ ಮಾಡಿ, ಇನ್ನೊಬ್ಬರನ್ನು ತೊಂದರೆಗೆ ಸಿಲುಕಿಸಿ, ತಾವು ತೊಂದರೆಗೆ ಸಿಲುಕುತ್ತಾರೆ. ಇಂಥವರು ಗುರಿ ಕಾಣದೇ ಪರಿತಪಿಸುತ್ತಾರೆ. ಮಾರ್ಗಕ್ಕಿಂತ ಗುರಿ ಮುಖ್ಯವಲ್ಲವೇ..?"

ಸಲೋನಿ ಹಾಗೆ ಹೇಳಬೇಕಾದರೆ. ಆಕೆ ಬರೆದ 'ದೇವರು ಮತ್ತು ಧರ್ಮ' ಎಂಬ ಪುಸ್ತಕ ಓದಿದ ನೆನಪು ಬಂದಿತು. ಆಕೆ ಧರ್ಮದ ಬಗ್ಗೆ ಬರೆದ ಆ ಪುಸ್ತಕ ಎಲ್ಲಾ ಧರ್ಮದವರನ್ನು ಬೆರಗು ಗೊಳಿಸಿತ್ತು. ಆ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವೂ ಬಂದಿತ್ತು. ಆ ಪುಸ್ತಕ ಓದಿದಾಗಿನಿಂದ ನಾನು ಅವಳ ಅಭಿಮಾನಿಯಾಗಿ ಬಿಟ್ಟೆ. ಚಿಕ್ಕ ವಯಸ್ಸಿನಲ್ಲಿಯೇ ಅದೆಂತಹ ಸಾದನೆ ಅವಳದು. ನ್ಯಾನ್ಸಿಯ ಮದುವೆಯಲ್ಲಿ  ಬರಹಗಾರ್ತಿ ಸಲೋನಿ ಬರುತ್ತಾಳೆ ಎಂಬ ವಿಷಯ ಗೊತ್ತಾದ ಕೂಡಲೇ ಸಲೋನಿಯನ್ನು ನನಗೆ ಪರಿಚಯಿಸುವಂತೆ ನ್ಯಾನ್ಸಿಯನ್ನು ಒಂದು ವಾರದಿಂದ ದಂಗಾಲು ಬಿದ್ದಿದ್ದೆ.

"ನನ್ನ ಮದುವೆಗಿಂತ ಸಲೋನಿ ಪರಿಚಯವೇ ನಿನಗೆ ಮುಖ್ಯವೇ...?  ಹಾಗಿದ್ದರೆ ನನ್ನ ಮದುವೆಗೆ ನೀನೇನು ಬರುವುದು ಬೇಡ"

ಎಂದು ನ್ಯಾನ್ಸಿ ನನಗೆ ಹಲವು ಸಲ ಬೈದಿದ್ದಳು. ಆದರೂ ಬೆನ್ನು ಬಿಡದ ಬೇತಾಳದಂತೆ ನ್ಯಾನ್ಸಿಯನ್ನು ಒಪ್ಪಿಸಿ ಸಲೋನಿಯನ್ನು ಪರಿಚಯ ಮಾಡಿಕೊಂಡಿದ್ದೆ. ಅದಕ್ಕೆ ಒಂದು ಕಾರಣವೂ ಇತ್ತು. ನಾನು ಬರೆಯ ಹೊರಟಿದ್ದ  "ಧರ್ಮದ ತತ್ವ ಮತ್ತು ಸಿದ್ಧಾಂತಗಳು"  ಎಂಬ ಪಿ,ಹೆಚ್,ಡಿ, ಪ್ರಬಂಧಕ್ಕೆ ಸಲೋನಿಯ ಸಹಾಯ ನನಗೆ ಅವಶ್ಯವಾಗಿತ್ತು.

ಇಂದು ಸಲೋನಿಯು ಮತ್ತೆ ದೇವಸ್ಥಾನದಲ್ಲಿ ಸಿಕ್ಕಿದ್ದು ನನ್ನ ಮತ್ತು ಅವಳ ಗೆಳೆತನ ಇನ್ನಷ್ಟು ಭದ್ರವಾಯಿತು.  ಧರ್ಮದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕೆನಿಸಿದರೂ ಆ ಕ್ಷಣಕ್ಕೆ ನನ್ನ ತಲೆಗೆ ಏನೂ ಹೊಳೆಯಲಿಲ್ಲ. ಆಕೆಯ ಮದ್ದಾದ ಮುಖವು ನನ್ನ ಮನಸ್ಸನ್ನು ಆಗಾಗ ವಿಷಯಾಂತರ ಮಾಡಿಸುತ್ತಿತ್ತು. ಕಣ್ಣುಗಳು ನಾಚಿಕೊಂಡು ಅತ್ತಿತ್ತ ನೋಡುವಂತೆ ನಟಿಸುತ್ತಿದ್ದವು.

"ಸರಿ ನಾನು ಬರುತ್ತೇನೆ"

ಎಂದು ಹೇಳಿ ಸಲೋನಿ ದೇವಾಲಯದ ಮೆಟ್ಟಿಲು ಇಳಿದಳು. ಹಾಗೆ ಇಳಿಯುವಾಗ ಆಕೆಯ ಗೆಜ್ಜೆಯ ಸದ್ದು ಎದೆಯೊಳಗೆ ನನ್ನ ಎದೆಯೊಳಗೆಯೇ ಮಾರ್ಧನಿಸಿದಂತಾಯಿತು. ಎದೆಯಲ್ಲಿ ಎಂಥದೊ ತಕಧಿಮಿತದ ಮಧುರ ರಾಗ ಮೀಟಿ ಹೋದಂತಾಯಿತು..

ಸಲೋನಿ ಮತ್ತೆ ನನಗೆ ಭೇಟಿಯಾಗಿದ್ದು ನ್ಯಾನ್ಸಿಯ ಮನೆಯಲ್ಲಿ. ಕ್ರಿಸ್ ಮಸ್ ಹಬ್ಬಕ್ಕೆಂದು ನ್ಯಾನ್ಸಿ ನನ್ನನ್ನು ಕರೆದಿದ್ದಳು. ಅಲ್ಲಿಗೆ ಸಲೋನಿಯೂ ಬಂದಿದ್ದಳು. ಅಷ್ಟೊತ್ತಿಗೆ ನಾನು ಸಲೋನಿ ಬರೆದ ಪುಸ್ತಕದ ಕೆಲವು ಮಾಹಿತಿಯನ್ನು ನನ್ನ ಪಿ,ಹೆಚ್,ಡಿ, ಪ್ರಬಂಧಕ್ಕೆ ಅಳವಡಿಸಿಕೊಂಡಿದ್ದೆ. ಅಳವಡಿಸಿಕೊಳ್ಳುವುದು ನನಗೆ ಅನಿವಾರ್ಯವಾಗಿತ್ತು. ಅಂದು ಸಲೋನಿಗೆ ನನ್ನ ಪ್ರಬಂಧವನ್ನು ತೋರಿಸಿ ಒಪ್ಪಿಗೆ ಪಡೆಯಬೇಕಿತ್ತು. ಕ್ರಿಸ್ ಮಸ್ ಹಬ್ಬದ ಆಚರಣೆ ಊಟದ ನಂತರ ಮನೆಯ ಟೆರೇಸ್ ಮೇಲೆ ನನ್ನ ಪ್ರಬಂಧದ ಪುಟಗಳನ್ನು ತೋರಿಸಿದೆ. ಸಲೋನಿ ಪ್ರಬಂಧವನ್ನು ಓದಿ ನನಗೆ ಹಲವು ಕಡೆ ಸಲಹೆಗಳನ್ನು ನೀಡಿದಳು. ನನಗಿಂತ ಒಂದೆರಡು ವರ್ಷ ಚಿಕ್ಕವಳಾದ ಸಲೋನಿಗೆ ಇಷ್ಟೊಂದು ಜ್ಞಾನ ಸಂಪಾದಿಸಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಾನು ಬರೆದ ಪ್ರಬಂಧ ಚೆನ್ನಾಗಿದೆ ಎಂದು ಹೇಳಿ ನನ್ನ ಬೆನ್ನು ತಟ್ಟಿದಳು.

"ನೀವು ಬರೆದ 'ದೇವರು ಮತ್ತು ಧರ್ಮ' ಎಂಬ ಕೃತಿಯಲ್ಲಿ ಎಷ್ಟೊಂದು ಸಹಿಷ್ಣುತೆಯ ವಿಚಾರಗಳನ್ನು ಬರೆದಿದ್ದೀರಿ. ಎಲ್ಲಾ ಧರ್ಮದ ತತ್ವಗಳನ್ನು ಮನ ಮುಟ್ಟುವಂತೆ ಹೇಳಿದ್ದೀರಿ ಇದೆಲ್ಲಾ ಹೇಗೆ ಸಾದ್ಯವಾಯಿತು..?"

ನಾನು ಕುತೂಹಲದಿಂದ ಕೇಳಿದೆ.

"ನನ್ನ ಮನೆಯ ವಾತಾವರಣವೇ ನನ್ನನ್ನು ಈ ಪುಸ್ತಕ ಬರೆಯಲು ಪ್ರೋತ್ಸಾಹ ಸಿಕ್ಕಿತು. ನಮ್ಮ ಮನೆಯಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಪ್ರಾಶಸ್ತ್ಯವಿದೆ. ಅಪ್ಪ ರಾಬರ್ಟ್, ಕ್ರಿಶ್ಚಿಯನ್ ಧರ್ಮದವರಾದರೆ, ಅಮ್ಮ ಶಾರದಾ ಸುಸಂಸ್ಕೃತ ಹಿಂದೂ ಮನೆತನದವಳು. ಇಬ್ಬರದೂ ಪ್ರೇಮ ವಿವಾಹ. ನಾನು ಹುಟ್ಟುವ ಮುನ್ನ ಅಪ್ಪ ನನ್ನ ಅಮ್ಮಳನ್ನು ತನ್ನ ಧರ್ಮಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದರಂತೆ, ಅಮ್ಮ ಇದಕ್ಕೆ ಒಪ್ಪಲಿಲ್ಲ. ಒಮ್ಮೆ ಪಾಸ್ಟರ್ ಫರ್ನಾಂಡಿಸ್ ರವರನ್ನು ಅಪ್ಪ ನಮ್ಮ  ಮನೆಗೆ ಕರೆಯಿಸಿದ್ದರು. ಫಾಸ್ಟರ್ ರವರಿಂದ ಬುದ್ಧಿವಾದ ಹೇಳಿಸಿದರೆ ಅಮ್ಮಳನ್ನು ಕ್ರಿಶ್ಚಿಯನ್ ಆಗಿ ಮತಾಂತರಗೊಳಿಸಬಹುದೆಂದು ಅಪ್ಪನ ಲೆಕ್ಕಾಚಾರವಾಗಿತ್ತು. ಅದರಂತೆ ಅವರು ಅಮ್ಮನನ್ನು ಮತಾಂತರಿಸಲು ಮನವೊಲಿಸಿದರು. ಪಾಸ್ಟರ್ ರವರು ಹೇಳಿದ್ದು ಸರಿಯಾಗಿತ್ತು...

"ಹೆಣ್ಣಾದವಳು ಗಂಡನ ಧರ್ಮ ಪಾಲಿಸುವುದು ಸೂಕ್ತ. ಗಂಡನ ಸಂಸೃತಿ ಸಿದ್ಧಾಂತಗಳನ್ನು ಗೌರವಿಸಬೇಕು. ಗಂಡನೊಂದಿಗೆ ತಾನೂ ಅದೇ ಧರ್ಮವನ್ನು ಪಾಲಿಸಬೇಕು. ಇಬ್ಬರೂ ಒಟ್ಟಾಗಿದ್ದರೆ ಸೂಕ್ತ. ಆಗ ಸಂಸಾರವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಮೋಕ್ಷ ಪಡೆಯುವ ದಾರಿ ಇಬ್ಬರದೂ ಒಂದೇಯಾಗಿರಬೇಕು. ಯಾವಾಗ ಗುರಿ ಮತ್ತು ದಾರಿ ಒಂದೇ ಆಗಿರುತ್ತದೆಯೋ ಆಗ ಸ್ನೇಹ ಪ್ರೀತಿ ಸಹಜವಾಗಿ ಬೆಳೆಯುತ್ತಾ ಹೋಗುತ್ತದೆ. ದಾಂಪತ್ಯವೂ ಸುಖಕರವಾಗಿರುತ್ತದೆ".

 ಎಂದು ಬುದ್ಧಿವಾದ ಹೇಳಿದ್ದರು. ಆಗ ಅಮ್ಮ ಪಾಸ್ಟರ್ ರವರ ಮಾತನ್ನು ಗೌರವಿಸಿದಳು. ಚರ್ಚಗೆ ಹೋಗಿ ಅಪ್ಪನ ಧರ್ಮಕ್ಕೆ ಬದಲಾದಳು.

ಮಾರನೆಯ ದಿನ ಅಮ್ಮ ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ಚರ್ಚ್ ಗೆ ಹೋದಳು. ಚರ್ಚ್ ನ ಪ್ರಶಾಂತವಾದ ವಾತಾವರಣ, ಏಸು ಸ್ವಾಮಿಯ ದಿವ್ಯ ಶಕ್ತಿ ಅಮ್ಮನನ್ನು ಭಕ್ತಿಯಲ್ಲಿ ಮುಳುಗಿಸಿತು. ಕ್ಷಣಕಾಲ ಅಪ್ಪನೊಂದಿಗೆ ಬೈಬಲ್ ನ ವಾಕ್ಯಗಳನ್ನು ಪಠಿಸಿದಳು. ಪ್ರಾರ್ಥನೆಯಾದ ನಂತರ ಪಾಸ್ಟರ್ ಅಮ್ಮನನ್ನು ಕರೆದು ಮಾತನಾಡಿಸಿದರು.
ಅಮ್ಮನ ಎರಡು ಕೈಯನ್ನು ಹಿಡಿದು ಪ್ರಾರ್ಥಿಸಿದರು. ಒಳ್ಳೆಯದಾಗಲಿ ಎಂದು ಹರಸಿದರು. ಹೀಗೆ ಒಂದು ವಾರ ಕಳೆಯಿತು.

ಒಂದು ದಿನ ಪಾಸ್ಟರ್ ಅಮ್ಮನನ್ನು ಕರೆದು

"ಈಗ ಹೇಗನ್ನಿಸುತ್ತಿದೆ...?"
ಎಂದು ಕೇಳಿದರು. 

ಆಗ ಅಮ್ಮ

"ಮನಸ್ಸು ಶಾಂತವಾಗಿದೆ. ದೇವರ ವಾಕ್ಯಗಳು ಮನಸ್ಸನ್ನು ಮುದಗೊಳಿಸಿವೆ. ಮನಸ್ಸು ಉಲ್ಲಾಸದಿಂದ ಕುಣಿಯುತ್ತಿದೆ ಎಂದೆನಿಸುತ್ತಿದೆ. ಸತ್ಯ, ಶಾಂತಿ, ಸಂತೋಷ ನನಗೆ ಸಿಕ್ಕಿದೆ ಎಂಬಂತೆ ಬಾಸವಾಗುತ್ತಿದೆ....
ಆದರೆ
ಒಂದು ವಿಷಯ ಪಾಸ್ಟರ್... ಮೊನ್ನೆ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಎದುರುಗಡೆ ದೇವಾಲಯದಲ್ಲಿಯ ಘಂಟೆಯ ಸದ್ಧು ಕೇಳಿಸಿತು. ಅದರ ಮಾರ್ಧನಿ ನನ್ನ ಹೃದಯದೊಳಗೆಯೇ ಪ್ರತಿಧ್ವನಿಸಿದಂತಾಯಿತು. ಕೂಡಲೇ ಹೊರಗೆ ಬಂದೆ ದೇವಾಲಯದ ಒಳಗಿನಿಂದ ಪಠಣೆಯಾಗುತ್ತಿದ್ದ ವೇದ ಮಂತ್ರ ಘೋಷಗಳು ನನ್ನ ಕಿವಿಯನ್ನು ಹೊಕ್ಕಾಗ ಮಹದಾನಂದವಾಯಿತು. ಯಾವುದೋ ಸೆಳೆತ, ಏನೋ ಒಂದು ರೀತಿಯ ತೃಪ್ತಿಯ ಭಾವ ಆ ಮಂತ್ರ ಘೋಷದಲ್ಲಿ ಕಂಡಂತಾಯಿತು. ಬೈಬಲ್ ಓದಿದಾಗ ಮನಸ್ಸು ಶಾಂತವಾಯಿತು. ವೇದ ಮಂತ್ರ ಘೋಷಗಳಿಂದ ಮನಸು ಅತ್ಯಾನಂದ ಅನುಭವಿಸಿತು. ಹಾಗಂದ ಮಾತ್ರಕ್ಕೆ ನನಗೆ ಭಗವದ್ಗೀತೆ ದೋಡ್ಡದೆಂದಾಗಲೀ ಅಥವಾ ಬೈಬಲ್ ದೊಡ್ಡದೆಂದಾಗಲೀ ಯಾವ ಭೇದ ಭಾವವೂ ಇಲ್ಲ. ನಾನು ಚಿಕ್ಕಂದಿನಿಂದ ಪಾಲಿಸಲ್ಪಟ್ಟ ಹಿಂದೂ ಸಂಸ್ಕೃತಿಯ ಕಾರಣದಿಂದ ಗೀತೆಯ ವೇದ ಘೋಷಗಳು ನನ್ನನ್ನು ಈ ರೀತಿ ಆಕರ್ಷಿಸಿರಬಹುದು. ಅಗಕ್ಕೆ ಒಂದು ಕಾರಣವೂ ಇದೆ..

ನಾನು ಚಿಕ್ಕವಳಿರುವಾಗ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದೆನಂತೆ. ಖಾಯಿಲೆ ಹೆಚ್ಚಾಗಿ ಸಾಯುವ ಹಂತಕ್ಕೆ ತಲುಪಿದ್ದೆ. ಯಾವ ಚಿಕಿತ್ಸೆಗೂ ನನ್ನ ದೇಹ ಸ್ಪಂದಿಸುತ್ತಿರಲಿಲ್ಲ. ಆಗ ನನ್ನ ತಾಯಿ ಊರ ದೇವಿಗೆ ಹರಕೆ ಹೊತ್ತಳು. ಪ್ರತಿ ಶುಕ್ರವಾರ ಮತ್ತು ಮಂಗಳವಾರ ದೇವಿಗೆ ತುಪ್ಪದ ದೀಪ ಹಚ್ಚಿದಳು ಇದರಿಂದ ನನ್ನ ಖಾಯಿಲೆಯೂ ಗುಣ ಮುಖವಾಗುತ್ತಾ ಬಂದಿತಂತೆ. ದೇವಿಯ ಆಶೀರ್ನವಾದದಿಂದ ನಾನು ಪುನರ್ಜೀವ ಪಡೆದೆನಂತೆ.  ಅಂದಿನಿಂದ ಪ್ರತಿ ಶುಕ್ರವಾರ ಮತ್ತು ಮಂಗಳವಾರ ನಾನು ಅಮ್ಮನ ಜೊತೆಗೆ ದೇವಾಲಯಕ್ಕೆ ಹೋಗುವ ಅಭ್ಯಾಸವಾಯಿತು. ದೇವಾಲಯದ ಒಳಗೆ ಹೋದ ಕೂಡಲೆ ನಾನು ಅಮ್ಮನ ಜೊತೆಯಲ್ಲಿ ಭಕ್ತಿಯಲ್ಲಿ ತಲ್ಲೀನನಾಗುತ್ತಿದ್ದೆ. ಇಂದಿಗೂ ದೇವಾಯಲದ ಘಂಟೆ, ಶಂಖ, ಜಾಗಟೆಗಳ ಧ್ವನಿ ಕೇಳಿದ ಕೂಡಲೆ ಯಾವುದೋ ಒಂದು ಸೆಳೆತ ನನ್ನನ್ನು ಆವರಿಸಿಕೊಂಡಾಂತಾಗುತ್ತದೆ. ಚಿಕ್ಕಂದಿನಿಂದಲೂ ಬೆಳೆದುಬಂದ ಆ ಭಾವನೆಗಳು ನನ್ನಿಂದ ತೆಗೆದು ಹಾಕಲಾಗುತ್ತಿಲ್ಲ. ಮನಸ್ಸಿನಲ್ಲಿಯೇ ಶಾಶ್ವತವಾಗಿ ಅವಿರ್ಭಸಿರುವ ಆ ನೆನಪುಗಳನ್ನು ನಾನು ಹೇಗೆ ತೆಗೆದು ಹಾಕಲಿ. ಬಾಲ್ಯದ ಸುಂದರ ಕನಸುಗಳೊಂದಿಗೆ ಬೆರೆತಿರುವ ಈ  ಮಂತ್ರ ಘೋಷಗಳನ್ನು ನಾನು ಹೇಗೆ ಮರೆಯಲಿ. ಗೆಳೆತಿಯರೊಂದಿಗೆ ಗಣೇಶನ ದೇವಾಲಯದಲ್ಲಿ ಹಾಡಿದ ಭಕ್ತಿ ಗೀತೆಯನ್ನು ಹೇಗೆ ಮರೆಯಲಿ,  ಬಣ್ಣ ಬಣ್ಣದ ರಂಗನ್ನು ಹಾಕಿ ಗೆಳತಿಯರೊಂದಿಗೆ ಜಗಳಕ್ಕಿಳಿದ ಆ ಹೋಳಿ ಹಬ್ಬವನ್ನು ಹೇಗೆ ಮರೆಯಲಿ?  ಹೊಸ ಬಟ್ಟೆ ಹಾಕಿ ಪಟಾಕಿ ಸಿಡಿಸಿದ ಸಂಭ್ರಮವನ್ನು ಮರೆಯಲು ಸಾದ್ಯವೇ..? ಯಾವುದನ್ನು ಹೇಗೆ ಮರೆಯಲಿ ... ಈ ಎಲ್ಲಾ ಧಾರ್ಮಿಕ ನಿಷ್ಠೆಗಳು ನನ್ನ ದೇಹದೊಂದಿಗೆ ಬಿಡಿಸಲಾಗಂತೆ ತಳುಕು ಹಾಕಿಕೊಂಡಿವೆ.  ನನಗೆ ಜನ್ಮ ನೀಡಿದ ಹೆತ್ತ ತಾಯಿ ದೇವರ ಹಾಡನ್ನು ಹಾಡುತ್ತಾ ತೊಟ್ಟಿಲನ್ನು ತೂಗುತ್ತಿದ್ದಳಂತೆ ಅಮ್ಮನ ಜೊತೆ ಆ ಹಾಡನ್ನು ಹೇಳಿಕೊಂಡು ಮಾಡಿದ ದೇವರ ಪೂಜೆಯನ್ನು ಮರೆಯುವುದಾದರೂ ಹೇಗೆ...? ಇದ್ದಕ್ಕಿದ್ದಂತೆ ನೀವು ನನ್ನ ಹೆತ್ತ ತಾಯಿ ಇವಳಲ್ಲ ಎಂದು ಹೇಳಿ ಬೇರೆ ಯಾವುದೋ ಸ್ತ್ರೀ ಯನ್ನು ತೋರಿಸಿ ಇವಳೇ ನಿನ್ನ ತಾಯಿ ಎಂದರೆ ಹೇಗೆ ಸ್ವೀಕರಿಸಲಿ ಪಾಸ್ಟರ್.....  ನನ್ನ ಆ ನೆನಪುಗಳು ನನ್ನ ಉಸಿರಿನೊಂದಿಗೆ ಬೆರೆತು ಬಿಟ್ಟಿವೆ... ನನಗೆ ಸ್ವಲ್ಪ ದಿನ ಕಾಲಾವಕಾಶ ಕೊಡಿ ನನ್ನಲ್ಲೇನಾದರೂ ಬದಾಲಾವಣೆಯಾದರೆ ಖಂಡಿತ ನಾನು ಗಂಡನೊಂದಿಗೆ ಮೇಣದಬತ್ತಿಯನ್ನು ಹಚ್ಚುತ್ತೇನೆ, ಇಲ್ಲದಿದ್ದರೆ ಗಂಡನಿಗೆ ತಕ್ಕ ಹೆಂಡತಿಯಾಗಿ ಕರ್ಪೂರವನ್ನು ಹಚ್ಚುತ್ತೇನೆ...."

 ಅಂದು ಅಮ್ಮ ಹೇಳಿದ ಆ ಮಾತುಗಳು ಪಾಸ್ಟರ್ ಗೆ ಮನವರಿಕೆಯಾಯಿತೋ ಇಲ್ಲವೋ ತಿಳಿಯದು. ಆದರೆ  ಮಹಾನ್ ಸಹಿಷ್ಣುತಾವಾದಿಯಾದ ಅವರು ಅಪ್ಪನಿಗೆ ಅಮ್ಮನ ಭಾವನೆಗಳನ್ನು ಮನವರಿಕೆ ಮಾಡಿಸಿದರು. ಅಮ್ಮನ ಇಚ್ಛೆಯಂತೆ ಮನೆಯಲ್ಲೂ ಸಹ ಎರಡೂ ಧರ್ಮಕ್ಕೆ ಪ್ರಾಶಸ್ತ್ಯವನ್ನು ನೀಡಲಾಯಿತು. ಎಲ್ಲಾ ಧರ್ಮವನ್ನು ಗೌರವಿಸುವಂತೆ ಅಪ್ಪನಿಗೆ ಹೇಳಿಕೊಟ್ಟ ಆ ಪಾಸ್ಟರ್ ನಿಜಕ್ಕೂ ದೈವ ಸ್ವರೂಪಿಗಳು. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠವೆಂದು ವಾದಿಸುವ ಈ ದಿನಗಳಲ್ಲಿ ಪಾಸ್ಟರ್ ಫರ್ನಾಂಡೀಸ್ ದೈವಸ್ವರೂಪಿಗಳಾಗಿದ್ದರು. ಸಾಕ್ಷಾತ್ ಏಸುವಿನ ಪ್ರತಿರೂಪದಂತೆ ಕಂಡರು. ತಮ್ಮ ಧರ್ಮದ ಜೊತೆಗೆ ಇನ್ನೊಂದು ಧರ್ಮವನ್ನು ಗೌರವಿಸುವ ಮಹಾನ್ ಸರ್ವ ಧರ್ಮ ಸಹಿಷ್ಣಿತಾವಾದಿಗಳಂತೆ ಗೋಚರಿಸಿದರು.

ಸಲೋನಿ ತನ್ನ ತಾಯಿಯ ಜೀವನದಲ್ಲಿ ನಡೆದ ಈ ಘಟನೆಯನ್ನು ಸವಿವರವಾಗಿ ವಿವರಿಸಿ ಹೇಳಿದಳು. ಧರ್ಮ, ಧರ್ಮ ಎಂದು ಕಿಚ್ಚಾಡುತ್ತಿರುವ ಇಂದಿನ ಸಮಾಜದಲ್ಲಿ ಸಲೋನಿಯ ಕುಟುಂಬವು ನನಗೆ ಮಾದರಿಯಾದಂತೆ ಕಂಡಿತು. ಸಲೋನಿಯು ನನ್ನ ನಡುವೆ ಇರುವ ಪ್ರೀತಿಯ ಆಪ್ತ ಸಂಗಾತಿ ಎಂಬಂತೆ ಅನುಭವವಾಯಿತು. ಜೊತೆಗೆ ಸಲೋನಿಯೂ ಸಹ ನನ್ನ ಮನಸಿಗೆ ಇನ್ನು ಹತ್ತಿರವಾದಳು.

"ನನ್ನ ಮದುವೆ ಆಗ್ತೀರಾ...?"

ಎಂದು ಕೇಳಿದೆ

ಸಲೋನಿ ಏನೂ ಮಾತನಾಡದೇ ಕ್ಷಣ ಕಾಲ ಮೌನ ವಹಿಸಿದಳು. ಮೌನದಲ್ಲೂ ಮುದ್ದಾಗಿ ಕಾಣುತ್ತಿದ್ದ ಆಕೆಯ ಮುಖ ಚೆಂದವಾಗಿ ಮನಸ್ಸನ್ನು ಮುದಗೊಳಿಸಿತು. ಉದ್ದವಾದ ಆಕೆಯ ಮುಂಗುರುಳು ಗಾಳಿಯೊಂದಿಗೆ ಹಾರಾಡುತ್ತಾ ಆಕೆಯ ಮುದ್ದಾದ ಕೆನ್ನೆಯನ್ನು ಸೋಕುತ್ತಿದ್ದವು. ಕಣ್ಣುಗಳು ನಾಚಿಕೆಯ ಆಭರಣಗಳನ್ನು ಧರಿಸಿದ್ದವು. ಪಟ ಪಟನೆ ಮುದ್ದಾಗಿ ಮಾತನಾಡುತ್ತಿದ್ದ ಅವಳ ನಾಲಿಗೆ ನನ್ನ ಪ್ರಶ್ನೆಗೆ ಉತ್ತರಿಸದಂತಾಯಿತು. ಆಕೆಯ ಮುದ್ದು ಮುಖ ಚಂದಿರನ ಬೆಳದಿಂಗಳನ್ನು ಮೀರಿಸುವಂತಿಹ ಕಾಂತಿ ಚೆಲ್ಲುತ್ತಿತ್ತು. ಆಕೆಯ ಸೌಂದರ್ಯಕ್ಕೆ ಮಾರು ಹೋದ ನನಗೆ ಕ್ಷಣ ಕಾಲ ಆಕೆ ಯಾವ ಧರ್ಮದವಳು ಎಂಬುದು ಮರೆತೇ ಹೋಗಿತ್ತು. ಆ ಕ್ಷಣ ನಮ್ಮಿಬ್ಬರ ಪ್ರೀತಿಗೆ ಜಾತಿಯಾಗಲಿ ಧರ್ಮವಾಗಲಿ ನೆನಪಿಗೆ ಬರಲೇ ಇಲ್ಲ.ಅದೊಂದು ಪ್ರಕೃತಿ ಸಹಜವಾಗಿ ಗಂಡು ಹೆಣ್ಣಿನ ಮನಸ್ಸಿನಲ್ಲಿ ಮೋಳಕೆಯೊಡೆಯುವಂತಹ ಸಹಜ, ನಿರ್ಮಲವಾದ ಪ್ರೀತಿ.  ಮನುಷ್ಯ ಹಾಕಿಕೊಂಡ ಧರ್ಮ ಮತ್ತು ಜಾತಿಯ ಕಟ್ಟುಪಾಡುಗಳನ್ನು ಮೀರಿನಿಂತ ದೈವದತ್ತವಾದ ಪ್ರೀತಿಯದು. ದೇವರು ಸೃಷ್ಟಿಸಿದ ಗಿಡ ಮರ, ಬೆಟ್ಟ ಗುಡ್ಡ ಭೂಮಿ ಆಕಾಶ, ನದಿ ಸಮುದ್ರದಂತೆಯೇ ಈ ಪ್ರೀತಿಯೂ ಸಹ ಸಹಜವಾದದ್ದು. ಧರ್ಮಕ್ಕೆ ಹೊರತಾಗಿ ನಿಂತಿರುವ, ಮತ್ತು ಮೇಲು, ಕೀಳು, ಮೈಲಿಗೆ ಎಂಬ ಪದಗಳೇ ಗೊತ್ತಿರದ ಭಾವನೆಯದು. ಪ್ರಕೃತಿಯಂತೆ  ಪ್ರೀತಿಯೂ ಸಹ ನಿರ್ಮಲ ಮತ್ತು  ನಿಷ್ಕಲ್ಮಶವಾದುದು. ಅದಕ್ಕೆ ಮನುಷ್ಯ ನಿರ್ಮಿಸಿಕೊಂಡ ಕಟ್ಟುಪಾಡುಗಳು ಅನ್ವಯಿಸದು....
 
ನನಗಾಗಲೀ ಸಲೋನಿಗಾಗಲೀ ಜಾತಿ ಮತ ಧರ್ಮಗಳ ಮೇಲೆ ಅಷ್ಟಾಗಿ ನಂಬಿಕೆಯಿರಲಿಲ್ಲ.  ದೇವರು ಧರ್ಮಗಳನ್ನು ಸೃಷ್ಠಿಸಿದನೋ.. ಅಥವಾ ಮಾನವನೇ ದೇವರನ್ನು ಸೃಷ್ಠಿಸಿಕೊಂಡು ಧರ್ಮವೆಂಬ ಬೇಲಿಯನ್ನು ಹಾಕಿಕೊಂಡನೋ ತಿಳಿಯದು. ಎಲ್ಲಾ ನಡೆ ನುಡಿಯಲ್ಲಿ ಧರ್ಮದ ವಿಧಿ ವಿಧಾನಗಳನ್ನು ವಿಧಿಸಿ ಮಾನವನ ನಡತೆಯನ್ನು ನಿಯಂತ್ರಿಸ ಬಹುದು. ಆದರೆ ಈ ಪ್ರೀತಿ ಅನ್ನೋ ಭಾವನೆಯನ್ನು ನಿಯಂತ್ರಿಸಲು ಯಾವ ಧರ್ಮಗಳೂ ಇನ್ನು ಸೃಷ್ಠಿಯಾಗಿಲ್ಲ. ಇಲ್ಲಿರುವ ಧರ್ಮಗಳು ಪ್ರೀತಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದರೂ ಸಹ ಪ್ರೀತಿ ಮಾತ್ರ ಆಗಾಗ ಪ್ರಕೃತಿಯ ಸಹಜ ಧರ್ಮದತ್ತ ವಾಲುತ್ತಲೇ ಇರುತ್ತವೆ. ಆಗಾಗ ಅಂತರ್ಜಾತೀಯ ಅಂತರ್ ಧರ್ಮೀಯ ವಿವಾಹಗಳು ನಡೆದು ಮಾನವ ಧರ್ಮವನ್ನು ಪರಿಪಾಲಿಸುತ್ತಲೇ ಇರುತ್ತವೆ....

ಕ್ಷಣ ಕಾಲದ ನಮ್ಮಿಬ್ಬರ ನಡುವಿನ ಮೌನದ ಮಧ್ಯೆಯೇ ಮನಸ್ಸು ಬಿಡುವು ಮಾಡಿಕೊಂಡು ಏನೇನೋ ಯೋಚಿಸಿತು. ಮತ್ತೆ ಸಲೋನಿಯನ್ನು ನೋಡಿದೆ. ಅದೇ ನೀರವ ಮೌನ. ಸೌಂದರ್ಯೋಪಸಕನಾದ ಶಿಲ್ಪಿಯೊಬ್ಬನು ಕಡೆದ ಬೊಂಬೆಯಂತೆಯೇ ಸಲೋನಿಯು ಸುಂದರ ಕಲಾಕೃತಿಯಂತೆ ನನ್ನ ಮುಂದೆ ನಿಂತಿದ್ದಳು. ನಮ್ಮಿಬ್ಬರ ನಡುವೇ ಯಾವ ಧರ್ಮವೂ ಇರಲಿಲ್ಲ. ಇದ್ದದ್ದು ಪ್ರಕೃತಿಯ ಸಹಜ ಧರ್ಮ ಒಂದೇ... ನಕ್ಷತ್ರದಂತಿರುವ ಆಕೆಯ ಕಣ್ಣುಗಳು ಹೊಳಪಿನಿಂದ ಕೂಡಿದ ಬೆಳಕಿನ ಧರ್ಮ ಸೂಚಿಸುತ್ತಿತ್ತು. ಸಂಪಿಗೆಯಂತಿರುವ ಅವಳ ನಾಸಿಕವು ಹೂವಿನ ಧರ್ಮಕ್ಕೆ ಸೇರಿತ್ತು. ಜೇನಿನಂತೆ  ಸವಿಯಂತಿರುವ ಅವಳ ತುಟಿಗಳು ಸಿಹಿಯಾದ ಧರ್ಮವನ್ನು ತೋರಿಸಿತ್ತು. ನಯವಾದ ಕೆನ್ನೆಗಳು ಮೃದುವಾದ ಧರ್ಮ ಹೊಂದಿತ್ತು. ಅವಳ ಬಳುಕುವ ಶರೀರವು ಪ್ರಕೃತಿಯಲ್ಲಿಯೇ ಬಳ್ಳಿಯಾಗಿ ಬಳುಕುವ  ಸಸ್ಯ ಧರ್ಮವನ್ನು ಸೂಚಿಸುತ್ತಿತ್ತು. ನನ್ನ ಕಣ್ಣಿಗೆ ಅವಳೊಂದು ಹೆಣ್ಣು ಧರ್ಮ,  ನಾನೊಂದು ಗಂಡು ಧರ್ಮ,  ದೇವರು ಸೃಷ್ಟಸಿದ ಈ ಎರಡು ಧರ್ಮಗಳು ಎಂದಾದರೂ ಕೋಮು ಗಲಭೆ ನಡೆಸಿದ್ದವೆ...?  ಪ್ರೀತಿ ಮೊಳಕೆಯೊಡೆಯುವಾಗ ಯಾವ ಧರ್ಮವು ನಮಗೆ ಅಡ್ಡಬರಲಿಲ್ಲ. ನಾವು ಸೌಂದರ್ಯವನ್ನು ಆಸ್ವಾಧಿಸುವಾಗಲೂ ಧರ್ಮದ ಗುರುತು ನಮಗೆ ಸಿಗಲೇ ಇಲ್ಲ....
ನನ್ನ ಮದುವೆ ಆಗ್ತಿರಾ...? 
ಎಂದು ನಾನು ಕೇಳಿದ ಪ್ರಶ್ನೆಗೆ ಸಲೋನಿಯ ಕೆನ್ನೆಯ ರಂಗು ಇನ್ನಷ್ಟು ಅಧಿಕವಾದಂತೆ ಕಂಡಿತು. ಆಕೆಯ ಮುದ್ದು ಮುಖಕ್ಕೆ ಮೆರಗು ನೀಡಿದ್ದ ಅವಳ ಗುಳಿಕೆನ್ನೆಯಲ್ಲಿಯೇ, ನಾನು ಗಿರಿಗಿಟ್ಟಲೆ ಹೊಡೆದು ಧರ್ಮಕ್ಕೂ ಆಚೆಯಿರುವ  ಪ್ರೀತಿ ಎಂಬ ಗುಡಿಯೊಳಗೆ ಬಿದ್ದಿದ್ದೆ.  ಕ್ಷಣ ಕಾಲ ನನ್ನ ಹುಟ್ಟಿಗೆ ಧರ್ಮದ ಹಣೆಪಟ್ಟಿ ಕೊಟ್ಟವರೂ ಸಹ ನೆನಪಿಗೆ ಬರಲೇ ಇಲ್ಲ. ಸಲೋನಿಯನ್ನು ನೋಡಿದಾಗ ಧರ್ಮವನ್ನು ಮರೆಸುವ ಇನ್ನೊಂದು ಆಕರ್ಷಣೆ ಇದೆ ಎನ್ನಿಸಿತು. ಧರ್ಮಕ್ಕೂ ಮಿಗಿಲಾದ ಭಾವವೊಂದಿದೆ ಎನ್ನಿಸಿತು. ಅಥವಾ ಈ ಆಕರ್ಷಣೆಯೇ ನಿಜವಾದ ಧರ್ಮವೇ..?  ಯಾಕಾಗಿರಬಾರದು..ಅದು ಗಂಡು ಮತ್ತು ಹೆಣ್ಣು ಎಂಬ ಎರಡೇ ಧರ್ಮ.. ಎರಡೇ ಜಾತಿ.. ಹೀಗೆ ಧರ್ಮ ಬಗ್ಗೆ ಎದ್ದಿರುವ ಗೊಂದಲಮಯವಾದ ಹಲವು ಪ್ರಶ್ನೆಗಳು ನನ್ನ ಮನದಲ್ಲಿ ಮೂಡುತ್ತಿರುವಾಗಲೇ ಸಲೋನಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಬಿಟ್ಟಳು.. 
ಆಕೆಯ ಆ ಸ್ಪರ್ಶದಲ್ಲಿ ಎಲ್ಲವನ್ನೂ ಮರೆಸುವ ಶಕ್ತಿಯಿತ್ತು..
ನವಿರಾದ ಸ್ಪರ್ಶ.. ಹಿತವಾದ ಭಾವ... ಬೌತಿಕ ಜಗತ್ತಿನಾಚೆ ವಿಹರಿಸಿಂತಹ ಅನುಭಾವ..
ಆ ಸ್ಪರ್ಶದಲ್ಲಿ ನಾನು ಅನುಭವಿಸಿದ್ದು ಪ್ರಕೃತಿಯ ಸಹಜ ಧರ್ಮ ಮಾತ್ರ. ಜಗತ್ತಿನ ಸೃಷ್ಠಿಗೆ ಮತ್ತು ಜೀವ ಜಗತ್ತಿನ ಇರುವಿಕೆಗೆ  ಕಾರಣವಾಗಿರುವ ಪ್ರೀತಿಯ ಧರ್ಮ, ಅದೊಂದೇ ನಿತ್ಯ ನಿರಂತರ....
                     
                        - ಪ್ರಕಾಶ್ ಎನ್ ಜಿಂಗಾಡೆ.

No comments:

Post a Comment