Monday 23 May 2016

ಕೆಪ್ಪನ ಕಥೆ

ಕೆಪ್ಪನ ಕಥೆ 


ನಮ್ಮೂರಿನ ಕೆಪ್ಪಣ್ಣನಿಗೆ ಮಲ ಬಾಧೆ ರೋಗ. ದಿನಕ್ಕೆ ಏನಿಲ್ಲವೆಂದರೂ ನಾಲ್ಕೈದು ಬಾರಿ. ಒಂದೊಂದು ಸಲ ಪಂಚೆಯಲ್ಲೇ ಆಗಿ ಬಿಡುತ್ತಿತ್ತು. ಬೀದಿಯಲ್ಲಿ ನಡೆದುಕೊಂಡು ಬರುವಾಗಲೂ ಆಗಾಗ ಆಗುತ್ತಲೇ ಇರುತ್ತದೆ. ಇದೊಂದು ತರಹದ ವಿಚಿತ್ರವಾದ ಅಸಹ್ಯ ಪಟ್ಟುಕೊಳ್ಳುವ ರೋಗ ಕೆಪ್ಪಣ್ಣನ ಈ ರೋಗಕ್ಕೆ ಹೆಂಡತಿ ಈರವ್ವ ಸಾಕಾಗಿ ಹೋಗಿದ್ದಳು. ಈರವ್ವ ಈ ರೋಗಕ್ಕೆ ಹಲವು ಬಾರಿ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಹಲವು ಬಾರಿ ತೋರಿಸಿಕೊಂಡು ಬಂದಿದ್ದಳು. ಆದರೂ ಕೆಪ್ಪಣ್ಣನ ರೋಗ ಮಾತ್ರ ವಾಸಿಯಾಗಿರಲಿಲ್ಲ. ಸುಮಾರು ಹತ್ತು ವರ್ಷಗಳಿಂದ ಕೆಪ್ಪಣ್ಣನ ಬೇದಿಯನ್ನು ನೋಡಿ ನೋಡಿ ಈರವ್ವನಿಗೆ ಸಾಕಾಗಿ ಹೋಗಿತ್ತು. ಎಲ್ಲೆಂದರಲ್ಲಿ ಕೆಪ್ಪಣ್ಣನ ಬೇದಿ ನಡೆಯುತ್ತಿತ್ತು. ಅದು ಯಾವ ಮಾನ ಮರ್ಯಾದೆಗೆ ಅಂಜಿಕೊಳ್ಳದೇ, ಸ್ಥಳ, ಸಮಯ ನೋಡದೇ ಉಟ್ಟ ಚಡ್ಡಿಯಲ್ಲೇ ಸರಾಗವಾಗಿ ಹೋಗುತ್ತಿತ್ತು. ಈ ಕಾರಣದಿಂದಲೇ ಈರವ್ವ ಇಂತಹ ಗಂಡನನ್ನು ಕಟ್ಟಿಕೊಂಡು ಯಾವ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲ. ತವರುಮನೆಗೂ ಹೋಗುವುದನ್ನು ಸಹ ನಿಲ್ಲಿಸಿದ್ದಳು.. ಇದಕ್ಕೆ ಒಂದು ಕಾರಣವೂ ಇದೆ.
ಕೆಪ್ಪಣ್ಣನ ಈ ರೋಗದಿಂದ ಈರವ್ವ ತನ್ನ ತವರುಮನೆಯಲ್ಲೇ ಒಂದು ಸಲ ಅಪಮಾನಕ್ಕೀಡಾಗಿದ್ದಳು.
ಆಗ ಕೆಪ್ಪಣ್ಣನಿಗೆ ರೋಗ ಪ್ರಾರಂಭದ ಹಂತದಲ್ಲಿತ್ತು. ತನ್ನ ತವರುಮನೆಯ ಹತ್ತಿರದ ಸಂಬಂದಿಯೊಬ್ಬರ ಮದುವೆಗೆ ಈರವ್ವ ಗಂಡನನ್ನು ಕಟ್ಟಿಕೊಂಡು ಮದುವೆಗೆ ಹೋಗಿದ್ದಳು. ದಾವಣಗೆರೆಯ ಗುಂಡಿ ಮಹದೇವಪ್ಪನ ಛತ್ರದಲ್ಲಿ ಮದುವೆ. ಆಗ ನಮ್ಮೂರಿನ ಮದುವೆಗಳು ಛತ್ರದಲ್ಲಿ ನಡೆಯುತ್ತವೆಯೆಂದರೆ ಅದೊಂದು ವಿಜೃಂಬಣೆಯ ಶ್ರೀಮಂತರ ಮದುವೆ ಎಂದೇ ಅರ್ಥ. ಮನೆಯ ಮುಂದೆ ಚಪ್ಪರ ಹಾಕಿ ಲಾಡು ಚಿತ್ರಾನ್ನದೊಂದಿಗೆ ಮದುವೆಯನ್ನು ಸರಳವಾಗಿ ಮುಗಿಸುತ್ತಿದ್ದ ಕಾಲವದು. ಅಂಥದ್ದರಲ್ಲಿ ಛತ್ರದಲ್ಲಿ ಮದುವೆ ಎಂದರೆ ಕೇಳಬೇಕೆ... ಸಂಬಂದಿಕರೆಲ್ಲಾ ಮುಗಿಬಿದ್ದ ಹೋಗಿದ್ದರು. ಕೆಪ್ಪಣ್ಣನು ತನ್ನ ಹೆಂಡತಿಯ ಬಳಿ
"ನಾನು ಇದೇ ಮೊದಲ ಸಲ ಛತ್ರದಲ್ಲಿ ನಡೆಯುವ ಮದುವೆಗೆ ಹೋಗುತ್ತಿರುವುದು"
ಎಂದು ಈರವ್ವನ ಬಳಿ ಹೇಳಿಕೊಂಡು ಮದುವೆಗೆ ಹೋಗಲು ಹಲವು ದಿನಗಳ ಹಿಂದಿನಿಂದಲೂ ಕನಸು ಕಟ್ಟಿಕೊಂಡಿದ್ದ. ಬಿಸಿಲು ಹೆಚ್ಚಾಗಿರುವುದರಿಂದ ಕೆಪ್ಪಣ್ಣನಿಗೆ ಹೊಟ್ಟೆಯಲ್ಲಿ ಏನೋ ತಳಸಮಳವಾಗಿ ಸಾಮಾನ್ಯ ರೀತಿಯ ಬೇದಿಯಾಗುತ್ತಿದೇ ಎಂದು ಈರವ್ವ ಭಾವಿಸಿದ್ದಳು. ಪಾಪ ಅವಳಿಗೇನು ಗೊತ್ತಿತ್ತು ಕೆಪ್ಪಣ್ಣನ ಈ ರೋಗ ತನ್ನ ಜೀವನದುದ್ದಕ್ಕೂ ಕಾಡುತ್ತದೆಯೆಂದು...?
ಮದುವೆಯ ದಿನ ಕೆಪ್ಪಣ್ಣನಿಗೆ ಒಂದೆರಡು ಸಲ ಬೇದಿಯಾಗಿದ್ದಂತೂ ನಿಜ. ಅದು ಮರ್ಯಾದೆ ಪೂರ್ವಕವಾಗಿ ಆಗಿತ್ತು. ಆದ್ದರಿಂದ ಕೆಪ್ಪಣ್ಣ ಹೆಂಡತಿಯ ಬಳಿ ಹೇಳಿಕೊಳ್ಳಲಿಲ್ಲ... ಹೇಳಿಕೊಳ್ಳಲೇನು ಕೆಪ್ಪಣ್ಣ ಚಿಕ್ಕ ಮಗುವೇ..? ಆ ವಿಷಯ ಇರಲಿ ಮದುವೆಯ ಊಟಕ್ಕೆ ಬರೋಣ. ಬರಿಯ ಬೂಂದಿ ಪಾಯಸದಲ್ಲೇ ಮದುವೆಯಾಗುತ್ತಿದ್ದ ಕಾಲವದು. ಅಂತಹದ್ದರಲ್ಲಿ ಬೂಂದಿಯ ಬದಲಾಗಿ ಬಾದಾಮಿ ಹಾಲು ಚಿರೋಟಿ. ಪಾಯಸಕ್ಕೆ ಬದಲಾಗಿ ರಸ್ ಮಲಾಯಿ ಮಾಡಿಸಲಾಗಿತ್ತು. ಕೆಪ್ಪಣ್ಣ ಮದುವೆ ಊಟಕ್ಕೆ ಕುಂತಾಗ ತಾನು ಊಟ ಮಾಡುತ್ತಿರುವ ಸಿಹಿ ತಿಂಡಿಯ ಹೆಸರೇನು ಎಂದು ಸಹ ಗೊತ್ತಿರಲಿಲ್ಲ. ಚಿರೋಟಿಯನ್ನು ಎಲೆಯ ಮೇಲೆ ಇಟ್ಟಾಗ ಇದು ಪೂರಿಯಿರಬೇಕೆಂದು ತಿಳಿದು ಉಪ್ಪಿನಕಾಯಿ ಜೊತೆ ಮುರಿದುರೊಂಡು ತಿಂದಿದ್ದ. ಚಿತ್ರನ್ನಾಕ್ಕೆ ಬದಲಾಗಿ ಘಮ ಘಮಿಸುವ ಘೀ ರೈಸ್ ಎಲೆಯ ಮೇಲೆ ಬಿದ್ದಾಗ ಕೆಪ್ಪಣ್ಣ ಒಂದು ಸಲ ಖುಷಿಯಿಂದ ಧೀರ್ಘ ಉಸಿರನ್ನು ಎಳೆದುಕೊಂಡು ಘಮ ಘಮಿಸುವ ವಾಸನೆಯನ್ನು ಪಡೆದು ಸಂಭ್ರಮಿಸಿದ್ದ. ಅಲ್ಲಿ ಮದುವೆ ಊಟದ ಮೊದಲ ರುಚಿ ನೋಡುತ್ತಿರುವವರು ಬರೀ ಕೆಪ್ಪಣ್ಣ ಮಾತ್ರವಿರಲಿಲ್ಲ. ಕೆಪ್ಪಣ್ಣನ ತರಹ ಹಲವಾರು ಜನ ಹಳ್ಳಿಗರು ಅಲ್ಲಿದ್ದರು. ಅಮೇಲೇನಾಯಿತೋ ತಿಳಿಯಲಿಲ್ಲ ಊಟದ ಹಾಲ್ ನಲ್ಲಿ ಸ್ವಲ್ಪ ಕೋಲಾಹಲ ಉಂಟಾಯಿತು. ಜನ ತಮ್ಮ ತಮ್ಮ ಮೂಗುಗಳನ್ನು ಮುಚ್ಚಿಕೊಂಡು ಕೆಪ್ಪಣ್ಣನನ್ನು ಶಪಿಸುತ್ತಿದ್ದರು. ಕೆಪ್ಪಣ್ಣ ತನ್ನ ಹೆಗಲ ಮೇಲಿದ್ದ ಟವಲನ್ನು ತೆಗೆದುಕೊಂಡು ಒದ್ದೆಯಾಗಿದ್ದ ತನ್ನ ಮುಕುಳಿಗೆ ಕಟ್ಟಿಕೊಂಡು ಟಾಯ್ ಲೆಟ್ ಕಡೆಗೆ ಓಡಿ ಹೋದ. ಆಗ ಗಂಡಸರು ಏನು ಮಾತನಾಡದಿದ್ದರೂ ಹೆಂಗಸರು ಮಾತ್ರ ಕೆಪ್ಪಣ್ಣನ ಈ ಕೃತ್ಯಕ್ಕೆ ಈರವ್ವ ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಂದು ಈರವ್ವನಿಗಾದ ಅವಮಾನ ಅಷ್ಟಿಷ್ಟಲ್ಲ....
ಇನ್ನೊಂದು ಸಲ ಕೆಪ್ಪಣ್ಣನ ತಮ್ಮನ ಮೊಮ್ಮಗನ ನಾಮಕರಣ ಇತ್ತು. ಕೆಪ್ಪಣ್ಣನ ತಮ್ಮ ಅತ್ತಿಗೆಯನ್ನು ಮಾತ್ರ ನಾಮಕರಣಕ್ಕೆ ಬರುವಂತೆ ಹೇಳಿ ಹೋಗಿದ್ದನು. ಕೆಪ್ಪಣ್ಣನಿಗೆ ತಮ್ಮನ ಮನೆಯ ಕಾರ್ಯಕ್ರಮಕ್ಕೆ ಹೋಗದೇ ಇರಲು ಆಗಲಿಲ್ಲ. ತನ್ನ ಜೀವ ತಮ್ಮನ ಮನೆಯ ಕಡೆಗೇ ಎಳೆಯುತ್ತಿತ್ತು. ಕೆಪ್ಪಣ್ಣನ ಈ ಮನೋಸ್ಥಿತಿಯನ್ನು ನೋಡಲಾರದೇ ಎದುರುಮನೆಯ ತರ್ಲೆ ಹುಡುಗ ಸಿದ್ದ ಕೆಪ್ಪಣ್ಣನಿಗೆ ತರ್ಲೆ ಐಡಿಯವನ್ನು ಕೊಟ್ಟನು. ನಾಮಕರಣಕ್ಕೆ ಹೋಗುವಂತೆ ಕೆಪ್ಪಣ್ಣನನ್ನು ಹುರಿದುಂಬಿಸಿದ. ಸಿದ್ದನ ಅಕ್ಕ ಆಗ ತಾನೆ ಬೆಂಗಳೂರಿನಿಂದ ಬಂದಿದ್ದಳು. ಅಕ್ಕ ತನ್ನ ಮಗುವಿಗಾಗಿ ತಂದಿದ್ದ ಡೈಪರ್ಸ ಪಾಕೇಟೊಂದರಲ್ಲಿ ಸಿದ್ದ ಒಂದನ್ನು ಕದ್ದು ತಂದು ಕೆಪ್ಪಣ್ಣನಿಗೆ ಕೊಟ್ಟನು..
"ಕೆಪ್ಪಣ್ಣ ಇದು ಡೈಪರ್ಸ ಅಂತ. ಟೌನಲ್ಲಿರೊ ಜನ ಬಳಸ್ಥಾರಂತೆ. ಅಂದ್ರೆ ಮಕ್ಕಳಿಗೆ ಮಾತ್ರ... ಎಲ್ಲಾದ್ರೂ ಊರಿಗೆ, ಮದುವೆಗೆ ಹೋದಾಗ ಮಕ್ಕಳು ಇದರಲ್ಲಿ ಮಲ ಮಾಡಿದರೆ ಯಾರಿಗೂ ಏನೂ ಗೊತ್ತಾಗಲ್ಲಂತೆ.. ನೀನು ಇದನ್ನು ಹಾಕಿಕೊಂಡು ನಾಮಕರಣಕ್ಕೆ ಯಾಕಣ್ಣ ಹೋಗಬಾರದು"
ಸಿದ್ಧ ಹಾಗೆಂದ ಕೂಡಲೇ ಕೆಪ್ಪಣ್ಣ ಸಿದ್ದನ ಕೈಲಿದ್ದ ಡೈಪರ್ಸ ನ್ನು ಕಿತ್ತುಕೊಂಡು ನಾಲ್ಕೈದು ಸಲ ತಿರುವಿ ತಿರುವಿ ಪರೀಕ್ಷಿಸಿ ನೋಡಿದನು...
"ಅಣ್ಣ ಸೈಜ್ ಚಿಕ್ಕದು ... ಕತ್ತದ ದಾರ ಕಟ್ಟಿ ದೊಡ್ಡದು ಮಾಡಿ ಕೊಡ್ತೀನಿ. ನಿನಗೆ ಆಗೋ ತರ"
ಸಿದ್ದ ಹಾಗೆಂದ ಕೂಡಲೇ ಕೆಪ್ಪಣ್ಣ ತಲೆ ಅಲ್ಲಾಡಿಸಿದನು. ತಮ್ಮನ ಮನೆಗೆ ಹೋಗುವ ಆತುರದಲ್ಲಿ ಕೆಪ್ಪಣ್ಣನಿಗೆ ಸಿದ್ದನ ತರ್ಲೆ ಐಡಿಯಾ ಸಹ ಒಪ್ಪಿಗೆಯಾಗಿತ್ತು. ಕೆಪ್ಪಣ್ಣನ ಈ ರೋಗವೇ ಬೀದಿಯ ಮಕ್ಕಳಿಗೆ ತಮಾಷೆಯಾಗಿ ಹೋಗಿತ್ತು. ತಮ್ಮನ ಮನೆಯಲ್ಲೂ ಕೆಪ್ಪಣ್ಣನಿಗೆ ಅವಮಾನ ತಪ್ಪಲಿಲ್ಲ. ಮುಕುಳಿಯ ಒದ್ದೆ ಕಾಣಿಸದಿದ್ದರೂ ವಾಸನೆ ಮುಚ್ಚಿಡಲಾದೀತೇ...? ಬೆಂಕಿ ಇದ್ದಾಗ ಹೊಗೆಯಾಡದೇ ಇರುತ್ತದೆಯೇ...? ಅಂದಿನ ಈ ಅಪಮಾನದ ಘಟನೆಯೇ ಕೊನೆ, ಈರವ್ವ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿಯೇ ಬಿಟ್ಟಳು....
ಇಷ್ಟೆಲ್ಲಾ ಆದರೂ ಈರವ್ವ ಕೆಪ್ಪಣ್ಣನ ಜೊತೆಯಲ್ಲಿ ಸಂಸಾರ ಮಾಡುವುದಕ್ಕೆ ಒಂದು ಕಾರಣವಿದೆ. ಈರವ್ವ ಮದುವೆಯಾಗಿ ಬಂದಾಗ ಕೆಪ್ಪಣ್ಣನ ಬಳಿ ತಂದೆಯಿಂದ ಬಂದ ಒಂದು ಎಕರೆ ನೀರಾವರಿ ಮಾತ್ರ ಇತ್ತು. ಕೆಪ್ಪಣ್ಣ ಕಷ್ಟ ಜೀವಿ. ತನ್ನ ಜೋಡು ಎತ್ತುಗಳನ್ನು ತೆಗೆದುಕೊಂಡು ಗದ್ದೆಗೆ ಹೊರಟರೆ ಸಂಜೆಯ ವರೆಗೂ ಕಷ್ಟಪಟ್ಟು ದುಡಿಯುತ್ತಿದ್ದ. ಮಳೆ ಬಿಸಿಲು ಇದಾವುದು ಇವನಿಗೆ ಲೆಕ್ಕವಿರಲಿಲ್ಲ. ದುಡಿಮೆಯ ವೇಳೆಯಲ್ಲಿ ಯಾರಾದರು ಕರೆದರೆ ಆ ಗಡೆ ಗಮನ ಕೊಡುತ್ತಿರಲಿಲ್ಲ. ಕೂಗಿ ಕೂಗಿ ಕರೆದರೂ 'ಓ' ಎನ್ನದ ಇವನನ್ನು ಜನ ಕೆಪ್ಪಣ್ಣ ಎಂದು ಕರೆಯಲಾರಂಬಿಸಿದರು. ನಮ್ಮೂರಿನಲ್ಲಿ ಕಿವಿ ಸರಿಯಾಗಿ ಕೇಳಿಸುತ್ತಿದ್ದರೂ ಕೆಪ್ಪಣ್ಣ ಎಂಬ ಹೆಸರನ್ನು ಕರೆಸಿಕೊಂಡವನೆಂದರೆ ಇವನೆ. ಇವನ ಹೆಸರು ರತೀಂದ್ರ ಅಂತೆ. ನನಗೂ ಇವನ ನಿಜ ನಾಮಧೇಯ ಗೊತ್ತಾಗಿದ್ದು ಮೊನ್ನೆ ಊರಿಗೆ ಹೋದಾಗಲೆ....
ಕೆಪ್ಪಣ್ಣನ ದುಡಿಮೆಯಿಂದ ಒಂದು ಎಕರೆ ಇದ್ದ ನೀರಾವರಿ ಜಮೀನನ್ನು ಐದು ಎಕರೆಗೆ ಬೆಳೆಸಿದ್ದ. ಅದರಲ್ಲಿ ಮೂರು ಎಕರೆಗೆ ಅಡಿಕೆಯನ್ನು ಕಟ್ಟಿ ಒಳ್ಳೆ ಫಸಲು ಬರುವ ಹಾಗೆ ಮಾಡಿದ್ದಾನೆ...
ಈರವ್ವ ಮದುವೆಯಾದ ವರ್ಷದ ಕೊನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದಳು. ಎಲ್ಲಾ ಸರಿಸಾಗಿಯೇ ಇತ್ತು ಎನ್ನುವಾಗಲೇ ಈರವ್ವಳಿಗೆ 'ಸನ್ನಿ' ಎಂಬ ಬಾಣಂತನದ ರೋಗ ಅಂಟಿಕೊಂಡಿತ್ತು. ಆಗ ಈರವ್ವ ಒಂದು ರೀತಿ ಹುಚ್ಚಿಯಂತಾಗಿದ್ದಳು. ಒಂದೆರಡು ಸಲ ಮಾನಸಿಕ ಒತ್ತಡವನ್ನು ತಾಳಲಾರದೇ ಈರವ್ವ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆಗ ಅವಳನ್ನು ಮಗುವಿನಂತೆ ಕಾಪಾಡಿದ್ದು ಇದೇ ಕೆಪ್ಪಣ್ಣ. ಹಗಲು ರಾತ್ರಿ ಎನ್ನದೇ ಖಂಡಪ್ಪ ಡಾಕ್ಟರ್ ಮನೆ ಬಾಗಿಲು ಬಡಿದು ಅವರನ್ನು ಚಿಕಿತ್ಸೆಗಾಗಿ ಮನೆಗೆ ಕರೆ ತರುತ್ತಿದ್ದನು. ಕೆಪ್ಪಣ್ಣ ಎರಡು ತಿಂಗಳು ಸರಿಯಾಗಿ ನಿದ್ದೆಯೂ ಮಾಡದೇ ಈರವ್ವನ ಸೇವೆ ಮಾಡಿ ಆಕೆಯನ್ನು ಉಳಿಸಿಕೊಂಡನು. ಎರಡನೇ ಮಗುವಾದಾಗ ಈರವ್ವ ಬಲಹೀನತೆಯಿಂದ ಆರು ತಿಂಗಳು ಬಳಲಿದ್ದಳು. ಆಗಲೂ ಕೆಪ್ಪಣ್ಣ ಈರವ್ವನ ಸೇವೆ ಮಾಡಿ ಉಳಿಸಿಕೊಂಡಿದ್ದ. ಈಗ ಅವನಿಗೆ ಇಬ್ಬರು ಗಂಡು ಮಕ್ಕಳು ಸುಖವಾದ ಸಂಸಾರ. ದೊಡ್ಡ ಮಗನಿಗೆ ಊರಿನಲ್ಲಿ ಜಮೀನ್ದಾರ ಎಂಬ ಬಿರುದು ಚಿಕ್ಕ ಮಗ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ದೇಶ ವಿದೇಶವೆಲ್ಲಾ ಸುತ್ತುತ್ತಾನೆ. ಎಲ್ಲಾ ಕೆಪ್ಪಣ್ಣನ ದುಡಿಮೆಯ ಫಲ. ಈ ಫಲ ಅನುಭವಿಸುವ ಸಮಯ ಬಂದಾಗಲೇ ಕೆಪ್ಪಣ್ಣನಿಗೆ ತನ್ನ ಐವತ್ತೆರಡನೇ ವಯಸ್ಸಿನಲ್ಲಿ ಮಲರೋಗ, ವಾಸಿಯಾಗದ ಮಲರೋಗ ಎಲ್ಲಾ ವಿಧಿ ಲಿಖಿತ...
ಮೊನ್ನೆ ನಾನು ಊರಿಗೆ ಹೋದಾಗ ಕೆಪ್ಪಣ್ಣನ ಮನೆಯ ಮುಂದೆ ತರ್ಲೆ ಸಿದ್ದ ಕುಳ್ಳಿಗೆ ಬೆಂಕಿ ಹಾಕಿ ಹೊಗೆ ಎಬ್ಬಿಸುತ್ತಿದ್ದ. ಕೆಪ್ಪಣ್ಣನ ಮನೆಯಿಂದ ಅಳುವ ಶಬ್ಧ ಕೇಳಿಸುತ್ತಿತ್ತು. ಕೆಪ್ಪಣ್ಣನ ಹೆಣದ ಮುಂದೆ ಈರವ್ವ ಮುಗಿಲು ಮುಟ್ಟುವಂತೆ ರೋಧಿಸುತ್ತಿದ್ದಳು. ನಾನು ಈರವ್ವನನ್ನು ಸಮಾಧಾನ ಪಡಿಸುತ್ತಿದ್ದೆ. ತಂದೆ ಸತ್ತ ಸುದ್ದಿ ತಿಳಿದರೂ ದೊಡ್ಡಮಗ ಇನ್ನು ಬಂದಿರಲಿಲ್ಲ. ಅಪ್ಪನ ಮಲಬಾಧೆ ರೋಗಕ್ಕೆ ಸಾಕಾಗಿ ದೊಡ್ಡ ಮಗ ಹೆಂಡತಿ ಮಾತು ಕೇಳಿ ಬೇರೆ ಮನೆ ಮಾಡಿಕೊಂಡಿದ್ದ. ತರ್ಲೆ ಸಿದ್ದ ನಾಲ್ಕೈದು ಆಳುಗಳನ್ನು ಸೇರಿಸಿ ಚಟ್ಟ ರೆಡಿ ಮಾಡಿಸಿಟ್ಟು. ಸ್ಮಶಾನಕ್ಕೆ ಕಟ್ಟಿಗೆಯನ್ನು ಸಾಗಿಸಿದ್ದ. ನಂತರ ಬಂದ ದೊಡ್ಡ ಮಗ ಸ್ವಲ್ಪ ಸಮಯ ಕಣ್ಣೀರು ಹಾಕಿ ಮಣ್ಣಿನ ಮಡಕೆ ಹೊತ್ತು ಸ್ಮಶಾನದ ಕಡೆ ಹೆಜ್ಜೆ ಹಾಕುತ್ತಿದ್ದ. ಹಿಂದೆ ಕೆಪ್ಪಣ್ಣನು ಸಂಸಾರದ ಜಂಜಾಟವನ್ನೆಲ್ಲಾ ಮರೆತು, ಚಟ್ಟದ ಮೇಲೆ ಚಿರ ನಿದ್ರೆ ಮಾಡುತ್ತಾ ಸುಖವಾಗಿ ಅಂತಿಮ ಯಾತ್ರೆಗೆ ಹೊರಟಿದ್ದ. ಶವಸಂಸ್ಕಾರದ ಪದ್ದತಿಗಳೆಲ್ಲಾ ಮುಗಿಯಿತು. ಇನ್ನೇನು ಚಟ್ಟಕ್ಕೆ ಬೆಂಕಿ ಹತ್ತಿಸಬೇಕು ಎನ್ನುವಷ್ಟರಲ್ಲಿ ಚಿಕ್ಕ ಮಗ ಕಾರಿನಿಂದ ಇಳಿದು ಬಂದನು. ಮಕ್ಕಳಿಬ್ಬರೂ "ಅಪ್ಪಾ ..ಅಪ್ಪಾ.. ನಮ್ಮ ಕ್ಷಮಿಸಪ್ಪ" ಎಂದು ಹೇಳುತ್ತಾ ಕಾಲ ಬುಡದಲ್ಲಿ ಬಿದ್ದರು. ಮಕ್ಕಳಿಗೆ ವಿದ್ಯಭ್ಯಾಸ, ಆಸ್ಥಿ, ಎಲ್ಲವನ್ನು ಮಾಡಿಟ್ಟು ತನ್ನ ಕರ್ತವ್ಯ ಮಾಡಿ ಮುಗಿಸಿ ಕೆಪ್ಪಣ್ಣ ಸುಖವಾಗಿ ಮಲಗಿದ್ದ. ಇನ್ನೊಂದು ಕಡೆ ಮಕ್ಕಳು ವೃದ್ದ ತಂದೆ ತಾಯಿಯರಿಗೆ ಮಾಡಬೇಕಾದ ಕರ್ತವ್ಯಕ್ಕೆ ಲೋಪ ಬಗೆದು ತಮ್ಮ ಮನಸಾಕ್ಷಿಗೆ ದ್ರೋಹ ಬಗೆದು ಮಾನಸಿಕ ತೊಳಲಾಟದಿಂದ ಮಕ್ಕಳಿಬ್ಬರು ರೋಧಿಸುತ್ತಾ ನಿಂತಿದ್ದರು......

                                                                                          -ಪ್ರಕಾಶ್ ಎನ್ ಜಿಂಗಾಡೆ 

No comments:

Post a Comment