Wednesday 15 June 2016

ಕನಸುಗಳು

ಕನಸುಗಳು

ನಮಗೆ ಕನಸು ಬಿತ್ತು ಎನ್ನಿ ಆ ಕನಸಿಗೆ ಅರ್ಥ ಕೊಡುವವರು ಸಾಕಷ್ಟು ಜನರಿದ್ದಾರೆ. ಅದರಲ್ಲೂ ಮುಂಜಾನೆ ಬಿದ್ದ ಕನಸುಗಳು ನಿಜವೆಂದೇ ಭಾವಿಸುತ್ತೇವೆ. ಭಯಂಕರ ಕನಸುಗಳೇನಾದರೂ ಬಿದ್ದರೆ ಅದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳುತ್ತೇವೆ... ಕೆಲವರು ಕನಸನ್ನು ನಿರ್ಲಕ್ಷಿಸುತ್ತಾರೆ. ಮತ್ತೆ ಕೆಲವರು ಕನಸನ್ನು ನಿಜ ಜೀವನದಂತೆ ಗಣನೆಗೆ ತೆಗೆದು ಕೊಳ್ಳುತ್ತಾರೆ.
ಮೊನ್ನೆ ನನ್ನ ಸ್ನೇಹಿತನ ಕನಸಿನಲ್ಲಿ ಅವನ ಅಣ್ಣನ ಒಬ್ಬಳು ಬಂದಿದ್ದಳಂತೆ. "ಚಿಕ್ಕಪ್ಪ ಪ್ಲೀಸ್ ನನ್ನನ್ನು ಕಾಪಾಡು.... ನನ್ನನ್ನು ಕಾಪಾಡು ನಾನು ತಂಬಾ ಕಷ್ಟದಲ್ಲಿದ್ದೇನೆ"
ಅಂತ ಗೋಗರೆಯುತ್ತಿದ್ದಳಂತೆ. ಆ ಕನಸು ಅಷ್ಟೇ. ಅದನ್ನು ಕನಸು ಅಂತಾನೆ ಪರಿಗಣಿಸಿದ ನನ್ನ ಸ್ನೇಹಿತ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟನು. ಒಂದೆರಡು ದಿನಗಳ ನಂತರ ಕನಸಿನಲ್ಲಿ ಕಂಡ ಆ ಹುಡುಗಿಯನ್ನು ಯಾರೋ ಸಾಯಿಸಿ ಬಿಟ್ಟಿದ್ದರು. ಆಕೆ ಕನಸಿನಲ್ಲಿ ಹೇಳಿಕೊಂಡಂತೆ ತುಂಬಾ ತೊಂದರೆಯಲ್ಲಿ ಸಿಲುಕಿದ್ದಳು. ನನ್ನ ಸ್ನೇಹಿತ ಈ ಘಟನೆ ಹೇಳಿದ ಮೇಲೆ ಕನಸನ್ನು ಕನಸಿನಂತೆಯೇ ಕಾಣುತ್ತಿದ್ದ ನನಗೆ ಕನಸಿನ ಬಗ್ಗೆ ಸ್ವಲ್ಪ ವಿಶೇಷ ಆಸಕ್ತಿ ಮೂಡಲಾರಂಭಿಸಿತು....
ಜರ್ಮನಿಯ ವಿಜ್ಞಾನಿಯಾದ ಕೊಕುಲೆಗೆ ಒಂದು ಸಮಸ್ಯೆಗೆ ಉತ್ತರ ಸಿಗಲಾರದೇ ಪರದಾಡುತ್ತಿದ್ದನು. ಬೆಂಜಿನ್ ಪರಮಾಣುವಿನಲ್ಲಿ ಏನಿರುತ್ತದ ಎಂದು ಕಂಡು ಹಿಡಿಯುವುದೇ ಅವನ ಸಮಸ್ಯೆಯಾಗಿತ್ತು. ಹೇಗೆ ಯೋಚಿಸಿ ಅಧ್ಯಯನ ನಡೆಸಿದರೂ ತನ್ನ ಸಮಸ್ಯೆಗೆ ಉತ್ತರ ಕಂಡು ಕೊಳ್ಳಲಾಗಲಿಲ್ಲ. ಆ ದಿನ ರಾತ್ರಿ ಕೊಕುಲೆಯ ಕನಸಿನಲ್ಲಿ ಒಂದು ಹಾವು ತನ್ನ ಬಾಲವನ್ನೇ ಕಚ್ಚಿಕೊಂಡಂತಹ ಕನಸು ಕಂಡನಂತೆ. ಈ ಕನಸನ್ನು ಅರ್ಥೈಸಿಕೊಂಡಾಗ ಕೊಕುಲೆಗೆ ತನ್ನ ಸಮಸ್ಯೆಯ ಉತ್ತರ ದೊರೆಯಿತಂತೆ. ಮುಚ್ಚಿದ ಸರಪಳಿಯ ಕಾರ್ಬನ್ನಿನ ರಚನೆಯೇ ಬೆಂಜಮಿನ್ ಪರಮಾಣುವಿನ ಸಂರಚನೆಯಾಗಿತ್ತು. ಅಧ್ಯಯನದಿಂದ, ಸಂಶೋದನೆಯಿಂದ ತಿಳಿಯದ ವಿಷಯ ಕೊಕುಲೆಗೆ ಕನಸಿನಿಂದ ಉತ್ತರ ಸಿಕ್ಕಿತ್ತು. ಈ ತರಹ ಕನಸಿನಲ್ಲಿ ಉತ್ತರ ಕಂಡು ಕೊಂಡವರು ಇನ್ನೂ ಹಲವರಿದಿದ್ದಾರೆ. 1869 ರಲ್ಲಿ ಡಿಮೆಟ್ರಿ ಮೆಂಡಲೀವ್ ಎಂಬ ವಿಜ್ಞಾನಿ ಮೂಲವಸ್ತುವಿನ ಆಧುನಿಕ ಆವರ್ತಕ ಕೋಷ್ಠಕವನ್ನು ರಚಿಸಲು ಸಾಕಷ್ಟು ಪರದಾಡಿದ್ದನಂತೆ. ಆವರ್ತಕ ಕೊಷ್ಠಕದ ಯೋಚನೆಯಲ್ಲೇ ತೊಡಗಿದ ಮೆಂಡಲೀವ್ಗೆ ಉತ್ತರ ಸಿಗಲಿಲ್ಲ. ಆ ದಿನ ರಾತ್ರಿ ಕನಸಿನಲ್ಲಿ ಕಂಡ ಆವರ್ತಕ ಕೋಷ್ಠಕವನ್ನೇ ಕಾಗದದಲ್ಲಿ ಬರೆದು ನೋಡಿದನಂತೆ. ಅದನ್ನೇ ಪ್ರಸ್ತುತ ಪಡಿಸಿ ಆಧುನಿಕ ಆವರ್ತಕ ಕೋಷ್ಠಕ ರಚಿಸಿದ್ದನಂತೆ. ಇನ್ನು ಪ್ರಸಿದ್ಧ ವಿಜ್ಞಾನಿಗಳಾದ ಥಾಮಸ್ ಆಲ್ವ ಎಡಿಸನ್ನು ಬಲ್ಪ್ ಕಂಡುಹಿಡಿಯುವಾಗಲೂ, ಐನ್ ಸ್ಟಿನ್ ರವರು ಸಾಫೇಕ್ಷ ಸಿದ್ಧಂತ ಕಂಡು ಹಿಡಿಯುವಾಗಲೂ ಅವರಿಗೆ ಕನಸೇ ಸಹಕಾರಿಯಾಗಿತ್ತು. ಹಾಗೆಂದ ಮಾತ್ರಕ್ಕೆ ಅವರು ಪ್ರಯತ್ನ ಪಡಲಿಲ್ಲ ಎಂಬ ಅರ್ಥವಲ್ಲ. ನಮ್ಮ ನಿದ್ರಾ ಚಕ್ರವು ನಮ್ಮ ಅಂತರ್ಗತದ ಭಾಗವೇ ಆಗಿರುವುದರಿಂದ ಅವರು ಪಡುತ್ತಿರುವ ಪ್ರಯತ್ನಗಳು ಕನಸಿನಲ್ಲಿ ಆವರಿಸಿಕೊಂಡು ಉತ್ತರ ಪಡೆದುಕೊಂಡರು. ಅವರು ಕಂಡ ಆ ಕನಸುಗಳು ನಮ್ಮಂತ ಸಾಮಾನ್ಯರು ಕಾಣುವುದು ಸಾದ್ಯವಿಲ್ಲ....
ನಮ್ಮ ಜೀವನದ ಎಲ್ಲಾ ಅಂತರ್ಗತ ವಿಷಯಗಳೇ ಕನಸುಗಳು. ಎಷ್ಟೋ ವಿಷಯಗಳಿಗೆ ಕನಸುಗಳೇ ಉತ್ರವಾಗಿರುತ್ತದೆ. ಮೊನ್ನೆ ನನ್ನ ವಿಧ್ಯಾರ್ಥಿಯೊಬ್ಬ ನೋಟ್ಸ್ ಬರೆಯಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಒಂದೆರಡು ಏಟು ಹಾಕಿ ಶಿಕ್ಷೆ ಕೊಟ್ಟಿದ್ದೆ. ಆತನಿಗೆ ಎಷ್ಟು ಕೋಪ ಬಂದಿತ್ತೆಂದರೆ ನನ್ನನ್ನು ಸಿಟ್ಟಿನಿಂದ ನೋಡಿದ. ಮಾರನೆಯ ದಿನ ಆತ ಕನಸಿನಲ್ಲಿ ಕಂಡ ವಿಷಯವನ್ನು ತನ್ನ ಸ್ನೇಹಿತನ ಬಳಿ ಹೇಳಿಕೊಳ್ಳುತ್ತಿದ್ದ. "ಲೋ ಹರ್ಷ... ನಿನ್ನೆ ಕನಸಿನಲ್ಲಿ ಪ್ರಕಾಶ್ ಸರ್ ರನ್ನು ನಾನು ಸಿಕ್ಕಾ ಪಟ್ಟೆ ಹೊಡೆಯುತ್ತಿದ್ದೆ ಕಣೊ"
ಆ ವಿಷಯ ನನ್ನ ಕಿವಿಗೂ ಬಿತ್ತು ನಾನು ನಕ್ಕು ಸುಮ್ಮನಾದೆ.
ವಾಸ್ತವವಾಗಿ ಸಾಧ್ಯವಾಗದ ಎಷ್ಟೋ ವಿಷಯಗಳನ್ನು ನಾವು ನಮ್ಮ ಕನಸಿನಿಂದ ಈಡೇರಿಸಿಕೊಳ್ಳುತ್ತೇವೆ. ನನ್ನ ಮೇಲಿನ ಕೋಪವನ್ನು ಆ ವಿಧ್ಯಾರ್ಥಿ ಕನಸಿನ ಮೂಲಕ ಈಡೇರಿಸಿಕೊಂಡು ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳುತ್ತಾನೆ. ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳಲು ಕನಸುಗಳು ಎಷ್ಟೋ ಸಹಾಯ ಮಾಡುತ್ತವೆ. ಕನಸು ಕಾಣದ ವ್ಯಕ್ತಿ ಮಾನಸಿಕ ಅಸಮತೋಲನದಿಂದ ಇದ್ದಾನೆ ಎಂದಾರ್ಥವಲ್ಲ. ಪ್ರತಿಯೊಬ್ಬರೂ ಕನಸನ್ನು ಕಂಡೇ ಕಾಣುತ್ತಾರೆ. ಕನಸು ಕಾಣಲಿಲ್ಲವೆಂದರೆ ಮನುಷ್ಯ ಹುಚ್ಚನಾಗುತ್ತಾನೆ. ಆದರೆ ನಾವು ಕಂಡ ಎಷ್ಟೋ ಕನಸುಗಳು ನಮ್ಮ ನೆನಪಿಗೆ ಬರುವುದೇ ಇಲ್ಲ. ಶೇಕಡ ತೊಂಬತ್ತರಷ್ಟು ಕನಸುಗಳು ನೆನಪಿಗೆ ಬಾರದೇ ಹಾಗೆಯೇ ಜಾರಿ ಹೋಗಿ ಬಿಡುತ್ತವೆ. ಒಬ್ಬ ಮನುಷ್ಯ ತಮ್ಮ ಜೀವಿತವಧಿಯಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಅವಧಿಯಷ್ಟು ಕನಸು ಕಾಣುತ್ತಾನಂತೆ. ಕನಸುಗಳು ನಮ್ಮ ಮನಸ್ಸನ್ನು ಸ್ವಾಸ್ಥ್ಯವಾಗಿಡುತ್ತವೆ. ನಾವು ಕಾಣುವ ಕನಸುಗಳು ಭಯಂಕರವೋ ಅಥವಾ ವಿಚಿತ್ರವೋ ಆಗಿದ್ದರೆ. ಅದಕ್ಕೆ ಕೆಲವು ಘಟನೆಗಳು ಕಾರಣವಾಗಿರಬಹುದು. ಕನಸುಗಳು ನಮ್ಮ ಜೀವನದಲ್ಲಿ ನಡೆದ ಘಟನೆಗಳ ಪ್ರತಿಬಿಂಬಗಳು. ಮೆದುಳಿನ ಮೂಲೆಯಲ್ಲಿ ಸ್ತಪ್ತವಾಗಿರುವ ಇಂತಹ ಘಟನಾವಳಿಗಳು ಆಗಾಗ ಕನಸಿನ ರೂಪದಲ್ಲಿ ಮರುಕಳಿಸಬಹುದು.....
ಇನ್ನು ಕೆಲವರು ಕನಸಿನ ಕೆಲವು ಘಟನೆಗಳು ವಾಸ್ತವದಂತೆ ಫೀಲ್ ಆಗುತ್ತವೆ. ಮೊನ್ನೆ ನನ್ನ ಸ್ನೇಹಿತ ತನ್ನ ಅಣ್ಣನ ಮನೆಗೆ ಹೋದಾಗ ಅವರ ಮಗಳು ಮತ್ತೆ ಕನಸಿನಲ್ಲಿ ಬಂದಿದ್ದಳಂತೆ. ಸತ್ತು ಹೋದ ಆಕೆ ಮತ್ತೆ ಬಂದು ತಾನು ಮಲಗಿದ ಕಡೆ ಬಂದು ತಲೆ ಸವರುತ್ತಿದ್ದಳಂತೆ. ತಲೆಯನ್ನು ಸವರಿದಂತಹ ಸ್ಪರ್ಶ ಜ್ಞಾನದ ಅನುಭವಗಿದ್ದರಿಂದ ನನ್ನ ಸ್ನೇಹಿತ ಬೆಚ್ಚಿ ಕೂಗಿಕೊಂಡು ಎದ್ದನಂತೆ, ಸುತ್ತಲೂ ಯಾರೂ ಕಾಣಿಸಲಿಲ್ಲ. ಪ್ರೀತಿಗೆ ಪಾತ್ರರಾಗಿರುವವರು ಕನಸಿನಲ್ಲಿ ಬರುವುದು ಮಾತ್ರವಲ್ಲ ಆತ್ಮವೂ ಸುತ್ತಮುತ್ತಲು ಸಂಚರಿಸುತ್ತಿತ್ತಂತೆ. ಆತ್ಮ ಮತ್ತು ಕನಸಿಗೆ ಏನಾದರು ಸಂಬಂಧ ಇರಬಹುದೇ ಎಂಬ ಪ್ರಶ್ನೆ ಆಗಾಗ ನನ್ನನ್ನು ಕಾಡುತ್ತಿರುತ್ತದೆ. ಕನಸು ನಿಜವೆಂದು ನಂಬುವ ನಾವು ಕನಸಿನಂತೆಯೇ ಆತ್ಮಗಳು ಸಹ ನಮ್ಮ ಸುತ್ತಮುತ್ತ ಸಂಚರಿಸುವುದನ್ನು ಅನುಭವಿಸುತ್ತೇವೆ...
ನನಗೆ ಆಗ ಇಪ್ಪತ್ತೊಂದು ವರ್ಷ ನನ್ನ ವಿಧ್ಯಾಭ್ಯಾಸವೆಲ್ಲಾ ಮುಗಿದಿತ್ತು. ಸರ್ಕಾರಿ ಕೆಲಸ ಸಿಗುವ ವರೆಗೂ ಊರಲ್ಲೇ ಇದ್ದು ಏನಾದರೂ ಕೆಲಸ ಮಾಡಬೇಕು ಎಂದು ಮನೆಯಲ್ಲಿ ತಾಕೀತು. ನಾನು ಮಾಡಿದ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಹೋಗಿ ಯಾವುದಾದರೂ ಖಾಸಗಿ ಕಂಪನಿಲ್ಲಿ ಕೆಲಸಕ್ಕೆ ಸೇರಿ ಸಂಪಾದನೆ ಮಾಡಬಹುದಿತ್ತು. ಆದರೆ ಮನೆಯಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಇರುವ ಟೈಲರ್ ಅಂಗಡಿಯಲ್ಲಿ ನಾನು ಎರಡು ವರ್ಷದ ವರೆಗೆ ಟೈಲರಿಂಗ್ ವೃತ್ತಿ ಮಾಡಿದೆ. ಒಂದೇ ಅಂಗಡಿಯಲ್ಲಿ ನಾನು ಮತ್ತು ಇಬ್ಬರು ಅಣ್ಣಂದಿರ ಅವಲಂಬನೆ.. ಸಂಸಾರ ದೊಡ್ಡದಾದಂತೆ ಒಂದೇ ಅಂಗಡಿಯಲ್ಲಿ ಎಲ್ಲರೂ ಅವಲಂಬಿತವಾಗಿರುವುದು ಸಾಧ್ಯವಿರಲಿಲ್ಲ. ನಾನು ಅಂಗಡಿಯಿಂದ ಹೊರಬಂದು ಬೇರೆ ವೃತ್ತಿಯಲ್ಲಿ ತೊಡಗುವುದು ಅನಿವಾರ್ಯವಾಗಿತ್ತು. ನನ್ನ ಜೊತೆ ಓದಿದ ಒಂದಿಬ್ಬರು ಲೇವಾದೇವಿ ವ್ಯೆವಹಾರ ಮಾಡೋಣ ಎಂಬ ಸಲಹೆ ನೀಡಿದರು. ಇದರ ಪ್ರತಿಫಲವಾಗಿ ಫೈನಾನ್ಸ್ ಕಂಪನಿಯೊಂದು ಪಾರ್ಟ್ನರ್ ಶಿಪ್ ನಲ್ಲಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಇಂತಿಷ್ಟು ಹಣ ಹೂಡುವುದಾಗಿ ಹೇಳಿದ ಗೆಳೆಯರು ಅಲ್ಪ ಸ್ವಲ್ಪ ಹಣಹೂಡಿ ಸುಮ್ಮನಾಗಿ ಬಿಟ್ಟರು.
ಇರುವ ಅಲ್ಪ ಸ್ವಲ್ಪ ಹಣದಿದಂಲೇ ಫೈನಾನ್ಸ ಆರಂಭಿಸಿದೆವು. ಅದರೆ ನನ್ನ ಈ ಗೆಳೆಯರು ಬಂಡವಾಳ ಹಾಕಿ ವ್ಯವಹಾರ ಬೆಳೆಸುವ ಬದಲು. ತಮ್ಮ ತಮ್ಮ ಸಂಬಂದಿಕರನ್ನು ಕರೆದುಕೊಂಡು ಬಂದು ತಾವು ಮಾಡಿದ ವೈಯುಕ್ತಿಕ ಸಾಲಗಳಿಗೆ ಕಂಪನಿಯಿಂದ ಸಾಲ ಪಡೆದ ಹಾಗೆ ಪತ್ರಗಳನ್ನು ತಯಾರಿಸಿ ಅವರಿಗೆ ಹಣ ನೀಡುತ್ತಿದ್ದರು. ಫೈನಾನ್ಸ್ ವ್ಯವಹಾರವನ್ನು ನೋಡಿಕೊಳ್ಳುವ ಜವಬ್ದಾರಿ ಸಂಪೂರ್ಣ ನನಗೆ ವಹಿಸಲಾಗಿತ್ತು. ಫೈನಾನ್ಸ್ ನಲ್ಲಿ ಕೂರುವುದು ಲೆಕ್ಕಾಚಾರವನ್ನೆಲ್ಲಾ ಬರೆಯುವುದು ನಾನೇ ನಿರಿವಹಿಸುತ್ತಿದುದರಿಂದ ಸಾರ್ವಜನಿಕರೆಲ್ಲಾ ಫೈನಾನ್ಸ್ ನನ್ನದೇ ಎಂದು ನಂಬಿದ್ದರು. ಇಂತವರ ಸಹಭಾಗಿತ್ವದಿಂದ ಫೈನಾನ್ಸ್ ಮುಳುಗುವ ಹಂತಕ್ಕೆ ಬಂದಿತ್ತು. ಜನರ ಷೇರ್ ಹಣ ಬೇರೆ ನಮ್ಮ ಮೇಲಿತ್ತು. ನಾನು ಒಂದು ರೀತಿಯಲ್ಲಿ ಯಾರಿಗೂ ಹೇಳಲಾರದಂತಹ ಸಂಕಷ್ಟಕ್ಕೆ ಸಿಲುಕಿದ್ದೆ. ಫೈನಾನ್ಸ್ ನ ಈ ಸ್ಥಿತಿ ಹೇಳಿಕೊಂಡಿದ್ದರೆ ಜನ ತಾವು ಹಾಕಿರುವ ಷೇರು ಹಣಕ್ಕೆ ತಕ್ಷಣವೇ ನನ್ನನ್ನು ಪೀಡಿಸುತ್ತಿದ್ದರು. ಪಾರ್ಟ್ನರ್ ಗಳ ಈ ಅವ್ಯೆವಹಾರಕ್ಕೆ ಕಡಿವಾಣ ಹಾಕಿ. ಜನರ ಷೇರು ಹಣವನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತಹ ಒಂದು ದೊಡ್ಡ ಜವಬ್ದಾರಿ ನನ್ನ ಮೇಲಿತ್ತು. ಆದರೆ ಇದು ಕಷ್ಟದ ಕೆಲಸವಾಗಿತ್ತು. ಸಾರ್ವಜನಿಕರಿಂದ ಪಡೆದ ಷೇರು ಹಣ ಸಾರ್ವಜನಿಕರಿಗೆ ಸಾಲವಾಗಿ ನೀಡಲಾಗಿತ್ತು. ಫೈನಾನ್ಸ್ ನಲ್ಲಿ ಪಾರ್ಟ್ನರ್ ಗಳ ಈ ರೀತಿ ಅವ್ಯವಹಾರ ಯಾರಲ್ಲಿಯೂ ಹೇಳಿಕೊಳ್ಳುವಂತಿರಲಿಲ್ಲ. ನಾನು ಒಂದು ರೀತಿ ಭೇಧಿಸಲಾಗದ ಮೋಸದ ಚಕ್ರವ್ಯೂಹದಲ್ಲಿ ಸಿಲುಕಿದ್ದೆ.. ಒಂದು ಅದನ್ನು ಭೇದಿಸಿ ಹೊರಬರಬೇಕಿತ್ತು... ಇಲ್ಲವೇ ಅದೇ ಮೋಸದ ಚಕ್ರವ್ಯೂಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಿತ್ತು. ನನಗೆ ಪ್ರಾಣ ಕಳೆದುಕೊಳ್ಳಲು ಮನಸ್ಸಾಗಲಿಲ್ಲ. ಏಕೆಂದರೆ ನಾನು ಓದಿದ ವಿದ್ಯಾಭ್ಯಾಸವೇ ನನ್ನಲ್ಲಿ ಅತಿಯಾದ ಆತ್ಮ ವಿಶ್ವಾಸವನ್ನು ತುಂಬಿತ್ತು. ಗೆಳೆಯರನ್ನು ನಂಬಿದ ತಪ್ಪಿಗೆ ಒಂದೆರಡು ವಾರ ಭದ್ರಾನಾಲೆಯ ಕಟ್ಟೆಯ ಮೇಲೆ ಕುಳಿತು ಒಬ್ಬನೇ ಅತ್ತು ಅತ್ತು ಮನಸನ್ನು ಹಗುರ ಮಾಡಿಕೊಳ್ಳುತ್ತಿದ್ದೆ. ಮನಸು ಸಂಪೂರ್ಣ ಹಗುರವಾದ ಮೇಲೆ ನನ್ನ ಫೈನಾನ್ಸ್ ನಲ್ಲಿ ಸಹಭಾಗಿಯಾದ ಗೆಳೆಯರನ್ನೂ ಯಾವ ಮೀನ ಮೇಷವೂ ಏಣಿಸದೇ ಕಿತ್ತೆಸೆದೆ. ಅಲ್ಲಿಂದ ಮತ್ತೊಂದು ಕಷ್ಟದ ಅಧ್ಯಾಯ ಪ್ರಾರಂಭವಾಯಿತು ಒಬ್ಬನೇ ಇರುವುದರಿಂದ ಹಣದ ಕೊರತೆಯುಂಟಾಯಿತು. ಫೈನಾನ್ಸ್ ಗೆ ಮತ್ತಿಬ್ಬರು ಒಳ್ಳೆಯ ಗೆಳೆಯರನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿತ್ತು. ನನ್ನ ಸಂಭಂದಿಕರೇ ಒಂದಿಬ್ಬರು ಸಿಕ್ಕರು. ಫೈನಾನ್ಸ್ ಗೆ ಬಂಡವಾಳವನ್ನೂ ಹಾಕಿದರು. ಅಲ್ಲಿ ಅವರಲ್ಲಿ ಬೇಗನೇ ಹಣ ಮಾಡಬೇಕೆಂಬ ದುರಾಸೆಯೇ ಹೆಚ್ಚಾಗಿತ್ತು. ಅಲ್ಲಿ ಮತ್ತೊಂದು ರೀತಿಯ ಸಮಸ್ಯೆಗೆ ಸಿಲುಕಿದೆ. ನಮ್ಮವರೇ ನನಗೆ ಮುಳ್ಳಾದರು. ಅಲ್ಲಿಯೂ ವ್ಯವಹಾರ ಬೆಳೆಯಲಿಲ್ಲ. ಅವರಿಗೂ ಬಂಡವಾಳ ವಾಪಸ್ ಕೊಟ್ಟೆ. ನಾನು ಫೈನಾನ್ಸ್ ಮುಚ್ಚುವಂತೆಯೂ ಇರಲಿಲ್ಲ ನಡೆಸಲೂ ಸಾಧ್ಯವಿರಲಿಲ್ಲ. ನಾನು ಚಕ್ರವ್ಯೂಹದಲ್ಲಿ ಸಿಲುಕಿದ್ದೆ. ಆ ಚಕ್ರವ್ಯೂಹದಲ್ಲಿ ಸೈನಿಕರ ಬದಲಾಗಿ ಕತ್ತಿ ಹಿಡಿದು ನಿಂತಿರುವ ನನ್ನ ಗ್ರಾಹಕರೇ ಕಾಣುತ್ತಿದ್ದರು.. ಬೇರೆ ದಾರಿನೇ ಇಲ್ಲ ಬೇಧಿಸಿ ಹೊರಬರಬೇಕು...ಈ ವ್ಯೂಹವನ್ನು ಬೇಧಿಸುವ ದಾರಿಯಲ್ಲಿ ಅನೇಕ ಜಗಳಗಳು ನಡೆದವು... ಚಿಕ್ಕ ಬಾಲಕ ಅಭಿಮನ್ಯೂವಿನಂತೆ ಒಬ್ಬನದೇ ಹೋರಾಟ. ಯಾರೂ ಇಲ್ಲ ಶಕ್ತಿ ಇದ್ದಷ್ಟು ಸೆಣಸಿದೆ. ಗೆದ್ದೆ. ಆದರೆ ಶರೀರಕ್ಕಾದ ಗಾಯಕ್ಕಿಂತ ಮಾನಸಿಕ ಆಘಾತ ಅತಿಯಾಗಿತ್ತು. ನಾನು ಈ ಜಾಲಕ್ಕೆ ಸಿಲುಕ್ಕಿದ್ದರಿಂದ ಮನೆಯಲ್ಲಿ ನನ್ನನ್ನು ನೋಡುತ್ತಿದ್ದ ವಿಧಾನವೇ ಬೇರೆ ರೀತಿಯಲ್ಲಿತ್ತು. ನನಗೆ ಬಂದ ಒಂದೆರಡು ಮದುವೆಯ ಸಂಬಂಧಗಳು ಮುರಿದು ಬಿದ್ದವು. ಮತ್ತೆ ಕೆಲವನ್ನು ನಾನೇ ಮುರಿದು ಹಾಕಿದೆ. ನನಗೆ ಮದುವೆಗಿಂತ ಹೆಚ್ಚಾಗಿ ಸುತ್ತಲೂ ನನಗರಿವಿಲ್ಲದಂತೆ ಕಟ್ಟಿಕೊಂಡಿದ್ದ ಮೋಸದ ವ್ಯೂಹದಿಂದ ಹೊರಬರಬೇಕಿತ್ತು. ನಾನು ಯಾರಿಗೂ ನನ್ನ ಮನಃಸ್ಥಿತಿಯನ್ನು ಹೇಳಿಕೊಳ್ಳದೇ ನನಗೆ ಬಂದ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಾ ಹೋದೆ. ಹೋರಾಟ ಮಾಡಿ ಗೆದ್ದೆ. ಸಾರ್ವಜನಿಕರ ಷೇರು ಹಣವೆಲ್ಲಾ ಹಿಂದಿರುಗಿಸಿದೆ. ಇನ್ನು ಅಲ್ಪ ಸ್ವಲ್ಪ ಉಳಿದವರು ಗಲಾಟೆ ಮಾಡಿದರು. ಮನೆಯ ಹೊರಗೆ ಬಂದರೆ ಜನಗಳಿಂದ ಜಗಳ. ಮನೆಗೆ ಹೋದರೆ ಒಳಗಿನವರ ಜಗಳ... ನನ್ನ ಮೆದುಳು ತಡೆದುಕೊಳ್ಳಲು ಸಾಧ್ಯವಿಲ್ಲದಂತಹ ನೋವುಗಳು ಸಹಿಸುತ್ತಾ ಬಂದವು. ಇವು ಎಲ್ಲೋ ನನ್ನ ಮೆದುಳಿನ ಸುಪ್ತಾವಸ್ತೆಯಲ್ಲಿ ಸೇರಿಕೊಂಡು ಕನಸಿನ ರೂಪದಲ್ಲಿ ಕಾಡಿದ್ದೂ ಉಂಟು. ಹತ್ತಿರದ ಸಂಬಂಧಿಗಳಿಂದ ಕುಹಕ ಮಾತುಗಳನ್ನು ಕೇಳಿದೆ ಈ ಎಲ್ಲಾ ಆಘಾತಗಳು ಈಗಲೂ ನನ್ನ ಮನಸಿನಲ್ಲಿ ಸುಪ್ತ ಪ್ರಜ್ಞಾವಸ್ತೆಯಲ್ಲಿ ಸೇರಿಕೊಂಡವು. ಈ ತರಹದ ಯಾವುದಾದರೊಂದು ಆಹಿತಕರವಾದ ಘಟನೆಗಳು ಎಲ್ಲರ ಜೀವನದಲ್ಲಿಯೂ ನಡೆದಿರುತ್ತದೆ...
ಈ ಮೇಲಿನ ನನ್ನ ಉದಾಹರಣೆಯನ್ನು ನೋಡಿದಾಗ ಪ್ರೌಢಾವಸ್ತೆಯಲ್ಲಿದ್ದ ನನ್ನ ಮೆದುಳು ಈ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿತ್ತು. ಇನ್ನು ಕೆಲವರ ಜೀವನದಲ್ಲಿ ಬಾಲ್ಯದ ಹಂತದಲ್ಲಿಯೇ ಅಹಿತಕರವಾದ ನೋವಿನ ಘಟನೆಗಳು ನಡೆದು ಬಿಡುತ್ತವೆ. ಅಚಾತುರ್ಯವಾದ ರಕ್ತಪಾತ, ತಂದೆ ತಾಯಿಯರ ಅಗಲುವಿಕೆ, ಅವಮಾನದಿಂದ ಕೂಡಿದ ಬಡತನದ ಜೀವನ, ಹೀಗೆ ಇತ್ಯಾದಿ ನೋವುಗಳನ್ನು ಬಾಲ್ಯದಿಂದಲೇ ಸಹಿಸಿಕೊಂಡು ಬಂದವರು ಭಾರತದಲ್ಲಿ ಸಾಕಷ್ಟು ಜನರಿದ್ದಾರೆ. ಚಿಕ್ಕ ಮಕ್ಕಳಲ್ಲಿಯ ಮೆದುಳು ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಅಲ್ಪ ಪ್ರಮಾಣದ ನೋವನ್ನು ಸಹಿಸುವ ಶಕ್ತಿಯನ್ನು ಮಾತ್ರ ಹೊಂದಿರುತ್ತದೆ. ಮೆದುಳು ತಡೆದುಕೊಳ್ಳುವ ಶಕ್ತಿಗಿಂತ ನೋವಿನ ಪ್ರಮಾಣ ಅತಿಯಾದಾಗ ಮನಸು ಅನಾರೋಗ್ಯವಾಗಿ ಬೆಳೆಯುತ್ತಾ ಹೋಗುತ್ತದೆ. ಬಾಲ್ಯದ ಈ ನೋವುಗಳು ಸುಪ್ತಾವಸ್ತೆಯಲ್ಲಿ ಹಾಗೆಯೇ ಉಳಿದು ಬಿಡುತ್ತವೆ. ಮುಂದೆ ದೊಡ್ಡವರಾದಾಗಲೂ ಸುಪ್ತಾವಸ್ತೆಯಲ್ಲಿ ಉಳಿದಿರುವ ಈ ಘಟನೆಗಳು ಕೆಟ್ಟ ಕನಸುಗಳ ಮೂಲಕ ಹೊರ ಬರುತ್ತವೆ. ಯಾರಾದರು ಸತ್ತಾಗ ಆತ್ಮಗಳು ರಾತ್ರಿಯ ವೇಳೆ ತಮ್ಮ ಹತ್ತಿರವೇ ಬಂದಂತೆ. ದೆವ್ವಗಳನ್ನು ನೋಡಿದ ಅನುಭವ ಹೀಗೆ ಇತ್ಯಾದಿ ಭಯಾನಕ ಘಟನೆಗಳಂತೆ ಕಾಣುತ್ತವೆ...
ನನಗೂ ಆಗಾಗ ನನ್ನ ಜೀವನದ ಈ ಕೆಟ್ಟ ಅನುಭವವು ಆಗಾಗ ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವಷ್ಟು ಭಯಾನಕವಾಗಿರುವುದಿಲ್ಲ. ಏಕೆಂದರೆ ಈ ಘಟನೆ ನಡೆದಾಗ ಮೆದುಳು ಸಂಪೂರ್ಣವಾಗಿ ಬೆಳೆದಿತ್ತು. ನೋವು ಸಹಿಸಿಕೊಳ್ಳುವ ಶಕ್ತಿ ಪಡೆದುಕೊಂಡಿತ್ತು. ಅದೇ ಘಟನೆ ಜೀವನದ ಪಾಠವಾಗಿ ನನ್ನನ್ನು ಎತ್ತರಕ್ಕೆ ಬೆಳೆಸಿದೆ. ಆದರೆ ಚಿಕ್ಕ ಮಕ್ಕಳಲ್ಲಿ ಅಂದರೆ ಐದು ವರ್ಷದಿಂದ ಹದಿನೆಂಟು ವರ್ಷದವರೆಗೆ ನಮ್ಮ ಮೆದುಳು ಸಿಮಿತ ಪ್ರಮಾಣದಷ್ಟು ಮಾತ್ರ ನೋವನ್ನು ಸಹಿಸಿಕೊಳ್ಳುತ್ತದೆ. ಅತಿಯಾದ ಭಯಾನಕ ಕೃತ್ಯ ಮತ್ತು ನೋವುಗಳನ್ನು ಸಹಿಸಿಕೊಳ್ಳಲು ಶಕ್ತವಾಗಿರುವುದಿಲ್ಲ. ಒಂದನೇ ತರಗತಿಯಲ್ಲಿ ಓದುವ ಮಗು ಅದರ ಬುದ್ಧಿ ಸಾಮರ್ಥಕ್ಕನುಗುಣವಾಗಿ ಪಠ್ಯಕ್ರಮವನ್ನು ಮಾತ್ರ ರಚಿಸಲಾಗುತ್ತದೆ. ಆ ಮಗುವಿಗೆ ಐದನೇ ತರಗತಿಯ ಬುದ್ಧಿ ಸಾಮರ್ಥ್ಯದ ಪಠ್ಯಕ್ರಮವನ್ನು ಒದಗಿಸಲು ಸಾಧ್ಯವಿಲ್ಲ. ಹಾಗೆಯೇ ಐದನೇ ತರಗತಿಯ ಮಗುವಿಗೆ ಹತ್ತನೇ ತರಗತಿಯ ಪಠ್ಯ ಕೊಡಲು ಸಾಧ್ಯವಿಲ್ಲ. ಹಾಗೆಯೇ ನೋವಿನ ವಿಷಯದಲ್ಲಿಯೂ ಅಷ್ಟೆ ಆಯಾ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ನಮ್ಮ ಮೆದುಳು ನೋವನ್ನು ಪಡೆದುಕೊಳ್ಳುವ ಶಕ್ತಿ ಇರುತ್ತದೆ. ಅದಕ್ಕಿಂತ ನೋವು ಬವಣೆಗಳು ಹೆಚ್ಚಾದಾಗ ಮನಸ್ಸು ಬಳಲಿ ಹೋಗುತ್ತದೆ. ಭಯ, ಹಠ, ಉಧ್ವೇಗ, ಹತಾಷೆ, ಮುಂತಾದ ಅನಾರೋಗ್ಯಕರವಾದಂತಹ ಅಂಶಗಳು ನಮ್ಮ ಮೆದುಳಿನ ಸುಪ್ತಾವಸ್ತೆಯಲ್ಲಿ ಸಂಗ್ರಹವಾಗಿ ಆಗಾಗ ಕೆಟ್ಟ ಕನಸಾಗಿಯೂ ಕಾಡಬಹುದು.
ಪ್ರತಿಯೊಬ್ಬ ಮನುಷ್ಯನ ಆಲೋಚನೆಗಳು ಎರಡು ಸ್ತರಗಳಲ್ಲಿ ನಡೆಯುತ್ತದೆ. ಒಂದು ಸುಪ್ತಾವಸ್ತೆ ಮತ್ತೂಂದು
ಜಾಗೃತಾವಸ್ತೆ. ಪ್ರಾಯ್ಡ ಮತ್ತು ಯಂಗ್ ಎಂಬ ಮನೋ ವಿಜ್ಞಾನಿಗಳು ಈ ರೀತಿ ಮನೋರೋಗದಿಂದ ಬಳಲುತ್ತಿದ್ದರ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸಿದರು. ಅವರು ಕಂಡ ಕನಸುಗಳನ್ನು ಬರೆದುಕೊಂಡರು. ಅನೇಕರಲ್ಲಿ ತಾವು ಬಾಲ್ಯದಲ್ಲಿ ಅನುಭವಿಸಿದ ನೋವಿನ ಘಟನೆಗಳಿಗೂ ತಾವು ಕಂಡ ಕನಸುಗಳಿಗೂ ಸ್ವಾಮ್ಯತೆಯನ್ನು ಗಮನಿಸಿದರು. ಸುಪ್ತಾವಸ್ತೆಯಲ್ಲಿರುವ ದಮನಿತ ಆಕಾಂಕ್ಷೆಗಳು ಈ ರೀತಿ ಕನಸಿನ ರೂಪದಲ್ಲಿ ಮೂಡುತ್ತವೆ. ಈ ದಮನಿತ ಘಟನೆಗಳು ಜಾಗೃತಾವಸ್ತೆಗೆ ಬರುವುದೇ ಇಲ್ಲ. ವಿವೇಚನಾ ಶಕ್ತಿ ತುಂಬಾ ಬಲಶಾಲಿಯಾದಾಗ ಕೆಲವು ದಮನಿತ ಘಟನೆ ಆಕಾಂಕ್ಷೆಗಳು ಕೆಟ್ಟ ಕನಸಿನ ರೂಪದಲ್ಲೋ ಅಥವಾ ದೆವ್ವ ಪ್ರೇತವನ್ನು ಕಂಡಂತಲೋ ಬೆಚ್ಚಿ ಹೆದರುತ್ತೇವೆ....
ಎಷ್ಟೋ ಸಲ ಕೆಲವು ಪೋಷಕರು ತಮ್ಮ ಮಕ್ಕಳ ಬಗ್ಗೆ ಕೆಲವು ವಿಚಿತ್ರ ಘಟನೆಗಳನ್ನು ನನ್ನ ಬಳಿ ಹೇಳಿಕೊಂಡದ್ದೂ ಉಂಟು. ಅಥವಾ ತರಗತಿಯಲ್ಲಿ ನಾನು ಪಾಠ ಮಾಡುತ್ತಿರುವಾಗ ಅತೀ ಕಡಿಮೆ ಆತ್ಮ ವಿಶ್ವಾಸ ಹೊಂದಿದ ಮಕ್ಕಳನ್ನೂ ಗಮನಿಸಿದ್ದೇನೆ. ಕೆಲವು ಮಕ್ಕಳು ಅನಾರೋಗ್ಯಕರವಾದ ಮನೆಯ ವಾತಾವರಣದಲ್ಲಿ ಬೆಳೆಯುತ್ತಿರುವುದನ್ನೂ ಕಂಡಿದ್ದೇನೆ.. ಇಂತವರಿಗೆಲ್ಲಾ ನನ್ನ ಸಲಹೆ ಏನೆಂದರೆ ನಿನ್ನ ಮಕ್ಕಳ ಪುಟ್ಟ ಮನಸ್ಸಿನ ಮೇಲೆ ಭಯ, ನೋವು, ಹೆದರಿಕೆ, ಮುಂತಾದ ಋಣಾತ್ಮಕ ಮತ್ತು ನಿಷೇದಾತ್ಮಕ ಭಾವನೆಗಳನ್ನು ಅತಿಯಾಗಿ ಹೇರಬೇಡಿ. ಅಂತಹ ಘಟನೆಗಳು ಮನೆಲ್ಲಿ ನಡೆದರೂ ಮಕ್ಕಳ ಮುಂದೆ ಬುದ್ಧಿವಂತಿಕೆಯಿಂದ ವರ್ತಿಸಿ. ಆದಷ್ಟು ಹದಿನೆಂಟು ವರ್ಷಗಳ ವರೆಗೆ ನಿಮ್ಮ ಮಕ್ಕಳ ಮನಸ್ಸನ್ನು ಸಂತೋಷಕರವಾಗಿರುವಂತೆ ನೋಡಿಕೊಳ್ಳಿ. ಆಟ ಪಾಠ, ಹೊಗಳಿಗೆ, ಶಿಕ್ಷೆ, ನೋವುಗಳನ್ನು ಸಹ ಅಲ್ಪ ಪ್ರಮಾಣದಲ್ಲಿ ಮಾತ್ರವೇ ಪರಿಚಯಿಸಿರಿ. ಇಷ್ಟು ಮಾಡಿದರೆ ಸಾಕು ನಿಮ್ಮ ಮಕ್ಕಳು ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಲ್ಲರು....

ಪ್ರಕಾಶ್ ಎನ್ ಜಿಂಗಾಡೆ..

No comments:

Post a Comment