Friday 26 August 2016

ಬಸ್ಸು...





ಅದು ತೊಂಬತ್ತರ ದಶಕ. ಆಗ ಕಾಲೇಜ್ ಓದುತ್ತಿದ್ದೆವು. ಹೊನ್ನಾಳಿಯ ಹಿರೇ ಕಲ್ಮಠದ ಕಾಲೇಜಿಗೆ ನಮ್ಮೂರಿನಿಂದ ದಿನವೂ ಪ್ರಯಾಣಿಸಬೇಕಿತ್ತು. ಹತ್ತೊಂಬತ್ತು ಕೀ. ಮೀ ದೂರವಿತ್ತು. ಬಸವಾಪಟ್ಟಣದಿಂದ ನಾವು ಕುಮದ್ವತಿ ಎಂಬ ಡಕೋಟ ಬಸ್ಸು ಹತ್ತಿದರೆ ಅದು ಹೊನ್ನಾಳಿ ತಲುಪಲು ಸುಮಾರು ಒಂದುವರೆ ಗಂಟೆ ಸಮಯ ತೆಗೆದು ಕೊಳ್ಳುತ್ತಿತ್ತು. ಕೇವಲ ಹತ್ತೊಂಬತ್ತು ಕಿ.ಮೀ. ಗೆ ಇಷ್ಟು ಸಮಯವೇ ಎಂದು ಹುಬ್ಬೇರಿಸಬೇಡಿ. ಆ ಬಸ್ಸಿಗೆ ಅಡೆ ತಡೆಗಳು ಜಾಸ್ತಿನೇ ಇದ್ದವು...
ನಮ್ಮೂರಿನಿಂದ ಬಸ್ಸು ಹೊರಟಿತು ಎನ್ನಿ ...ಮೂರು ಕಿ.ಮೀ ದೂರವಿರುವ ದಾಗಿನಕಟ್ಟೆ ಎಂಬ ಊರು ತಲುಪುವುದಕ್ಕೇ ಇಪ್ಪತ್ತು ನಿಮಿಷಗಳು. ಯಾಕೆಂದರೆ ಬಸ್ಸು ಹೋಗುವ ಸಮಯಕ್ಕೆ ಸರಿಯಾಗಿ ನೂರಾರು ದನ ಕರುಗಳು ಹೊಲ ಗದ್ದೆಗಳಿಗೆ ಹೋಗುತ್ತಿದ್ದವು. ಈ ದನ ಕರುಗಳು ದಾರಿಯಲ್ಲಿ ಬಸ್ಸಿಗೆ ಅಡ್ಡ ಬಂದು ನಿಂತು.... "ಅದೆಂಗೆ ಮುಂದೆ ಹೋಗ್ತಿಯಾ ನಾವು ನೋಡೇ ಬಿಡ್ತೀವಿ" ಎಂದು ಡ್ರೈವರ್ ಗೆ ಸವಾಲು ಎಸೆಯುವ ರೀತಿಯಲ್ಲಿ ನಡು ರಸ್ತೆಯಲ್ಲಿಯೇ ನಿಂತು ಬಿಡುತ್ತಿದ್ದವು. ಪಾಪ ಡ್ರೈವರ್ ಎಷ್ಟೇ ಹಾರ್ನ್ ಮಾಡಿದರೂ ಅವು ಅತ್ತಿತ್ತ ಕದಲುತ್ತಲೇ ಇರಲಿಲ್ಲ. ಕೊನೆಗೆ ಕಂಡಕ್ಟರ್ ಇಳಿದು ಕೋಲು ತೆಗೆದುಕೊಂಡು ಬಾರಿಸಿದಾಗಲೇ ರಸ್ತೆ ಬಿಟ್ಟು ಕೆಳಗೆ ಇಳಿಯಲು ಮನಸ್ಸು ಮಾಡುತ್ತಿದ್ದವು. ಪಾಪ ಕಂಡಕ್ಟರ್ ನಮ್ಮೂರಿಗೆ ಬರುವಾಗ ಯಾವಾಗಲು ಒಂದು ಆಳು ಮಟ್ಟ ಎತ್ತರದಷ್ಟು ಉದ್ದನೆಯ ಕೋಲು ಇಟ್ಟುಕೊಂಡೇ ಬರುತ್ತಿದ್ದ. ಇನ್ನು ಎಮ್ಮೆ ಅಡ್ಡ ಬಂದರಂತೂ ಮುಗೀತು. ಹಾರ್ನ್ ಶಬ್ಧಕ್ಕೆ ಡೋಂಟ್ ಕೇರ್...!!! ಬಸ್ಸಿನ ಮೂತಿ ಎಮ್ಮೆಯ ಶರೀರಕ್ಕೆ ತಿವಿದರೂ ಸಹ ಅವು ಜುಪ್ಪಯ್ಯ ಎನ್ನುತ್ತಿರಲಿಲ್ಲ.
"ಅದೇನು ಮಾಡ್ಕೊತಿಯಾ ಮಾಡ್ಕೋ ಹೋಗು.... ನಮ್ಮ ಮೇಲೆ ಬಸ್ ಹತ್ತಿಸಿದರೂ ಅಷ್ಟೆ"
ಎನ್ನುವ ರೀತಿಯಲ್ಲಿ ಎಮ್ಮೆಗಳು ತಮ್ಮ ಮೊಂಡು ಸ್ವಭಾವವನ್ನು ಪ್ರದರ್ಶಿಸುತ್ತಿದ್ದವು.
ಆ ಎಮ್ಮೆಗಳನ್ನು ಹೊಡೆದು ದಾರಿಯಿಂದ ಆಚೆ ಅಟ್ಟಿ ಬಸ್ ಗೆ ದಾರಿ ಮಾಡಿಕೊಳ್ಳುವಷ್ಟರಲ್ಲಿ ಕಂಡಕ್ಟರ್ ಗೆ ಸಾಕಾಗಿ ಹೋಗಿಬಿಡುತ್ತಿತ್ತು. ಇಷ್ಟೆಲ್ಲಾ ಸವಾಲನ್ನು ಎದುರಿಸಿ ಬಸ್ಸು ಮುಂದೆ ಹೋಗ ಬೇಕಿತ್ತು...


ಬಸ್ಸು ದಾಗಿನಕಟ್ಟೆಯ ಕೆರೆಯ ತಿರುವಿನ ಬಳಿ ತಲುಪಿತು ಎನ್ನಿ ಅಲ್ಲಿಂದ ನಾಲ್ಕೈದು ಕಿ.ಮೀ ದೂರದ ವರೆಗೂ ರಸ್ತೆಯ ತುಂಬಾ ರೈತರು ಜೋಳ, ರಾಗಿಯ ತೆನೆ ಹರಡಿರುತ್ತಿದ್ದರು. ರಸ್ತೆಯಲ್ಲಿ ಜೋಳ ಮತ್ತು ರಾಗಿಯ ತೆನೆಯೇ ಎಂದು ಆಶ್ಚರ್ಯ ಪಡಬೇಡಿ. ರಾಗಿ ಮತ್ತು ಜೋಳದ ತೆನೆಯನ್ನು ತುಳಿಸಲು ನಮ್ಮ ರೈತರು ಕಂಡುಕೊಂಡ ದಾರಿಯದು. ರೈತರು ತಾವು ಬೆಳೆದ ಧಾನ್ಯವನ್ನು ಹಸನು ಮಾಡಿ ಕಾಳು ತೆಗೆಯಬೇಕಾದರೆ ಯಾವುದಾದರೂ ಕಣವನ್ನು ಬಾಡಿಗೆ ಪಡೆಯಬೇಕಿತ್ತು. ಹೊಲದಲ್ಲಿ ಕಟಾವುಮಾಡಿದ ಆ ರಾಗಿ ಮತ್ತು ಜೋಳದ ತೆನೆಗಳನ್ನು ಹೊಲದಿಂದ ಆ ಕಣಕ್ಕೆ ಸಾಗಿಸಿ. ಆ ಕಣದಲ್ಲಿ ಕೂಲಿಯಾಳುಗಳನ್ನು ಗೊತ್ತು ಮಾಡಿ ಅಲ್ಲಿ ಕಾಳನ್ನು ಹಸನು ಮಾಡಿ ಚೀಲಕ್ಕೆ ತುಂಬಬೇಕಾದರೆ ರೈತನಿಗೆ ಖರ್ಚು ಜಾಸ್ತಿ. ಅದರ ಬದಲು ಕಟಾವು ಆದ ತೆನೆಗಳನ್ನು ಅಲ್ಲೇ ಹೊಲದ ಪಕ್ಕದಲ್ಲಿರುವ ರಸ್ತೆಗೆ ಹರಡಿದರೆ ಆಯಿತು. ಬಸ್ಸುಗಳು ತೆನೆಯ ಮೇಲೆ ಹಾದು ಹೋದರೆ ತೆನೆಯಿಂದ ಕಾಳು ತಾನಾಗಿಯೇ ಹಸನಾಗುತ್ತಿತ್ತು. ಬಸ್ಸಿನ ಚಕ್ರವನ್ನು ಡ್ರೈವರನು ಈ ತೆನೆಯ ಮೇಲೆ ನಿಧಾನವಾಗಿ ಹಾಯಿಸಬೇಕಿತ್ತು.
ಯದ್ವ ತದ್ವ ಏನಾದರೂ ಗಾಡಿ ಓಡಿಸಿದ ಎನ್ನಿ ರೈತರು ಡ್ರೈವರನ ಮೇಲೆಯೇ ಹರಿ ಹಾಯುತ್ತಿದ್ದರು. ನಮ್ಮ ಹಳ್ಳಿಗರ ಭಾಷೆ ಗೊತ್ತಲ್ಲ....!!! ಎಲ್ಲಾ ಸಂಸ್ಕೃತ, ಇಂಗ್ಲಿಷ್ ಭಾಷೆಗಳೆ....ಆ ಭಾಷೆಯನ್ನು ಅರಗಿಸಿಕೊಳ್ಳಲಾಗದ ಆ ಡ್ರೈವರನು ದಾಗಿನಕಟ್ಟೆಯ ಆಸುಪಾಸಿನಲ್ಲಿ ಬಸ್ಸನ್ನು ಆಮೆಯ ನಡಿಗೆಯಂತೆ ನಡೆಸುತ್ತಿದ್ದ.

ಬಸ್ಸು ದಾಗಿನಕಟ್ಟೆಯ ನಿಲ್ದಾಣ ತಲುಪುತ್ತಿದ್ದಂತೆ ಡ್ರೈವರ್ ಬಸ್ ನ ಇಂಜಿನೆ ಆಫ್ ಮಾಡಿಕೊಂಡು ನಿರುಮ್ಮಳನಾಗಿ ಕುಳಿತುಕೊಳ್ಳುತ್ತಿದ್ದ. ಯಾಕೆ ಅಂತಿರಾ...? ದಾಗಿನ ಕಟ್ಟೆಯಿಂದ ನಮ್ಮ ಕಾಲೇಜಿಗೆ ಓದಲು ಹಲವಾರು ಹುಡುಗಿಯರು ಬರುತ್ತಿದ್ದರು. ಎಲ್ಲಾ ದೊಡ್ಡ ದೊಡ್ಡ ಶ್ರೀಮಂತರ ಮಕ್ಕಳೇ... ಒಬ್ಬ ಹುಡುಗಿಯನ್ನು ಬಿಟ್ಟು ಹೋದರೆ ಮುಗಿತು. ಊರಿನ ಜನ ಆ ಬಸ್ಸನ್ನು ಸುತ್ತಲೂ ಮುತ್ತಿಕೊಂಡು ಅಲ್ಲೇ ನಿಂತಿರುವ ಎತ್ತಿನ ಗಾಡಿಯ ಕೀಲೆಣ್ಣೆಯಿಂದ ಬಸ್ಸಿನ ಮೇಲೆ ಅಸಹ್ಯವಾದ ಪದಗಳನ್ನು ಬರೆದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರು. ಆದ್ದರಿಂದ ಸ್ವಲ್ಪ ತಡವಾದರೂ ಸಹ ಡ್ರೈವರ್ ಅವರನ್ನೆಲ್ಲಾ ಹತ್ತಿಸಿಕೊಂಡೆ ಮುಂದೆ ಹೋಗುತ್ತಿದ್ದನು. ಇದರಲ್ಲಿ ಡ್ರೈವರನದೂ ಸ್ವಲ್ಪ ಸ್ವಾರ್ಥ ಮತ್ತು ಆಸೆ ಇರುತ್ತಿತ್ತು.....
ಕಾಲೇಜಿಗೆ ಹೋಗುತ್ತಿದ್ದ ಆ ಕನ್ಯಾ ಮಣಿಗಳು ಆಗ ತಾನೆ ಸ್ನಾನ ಮಾಡಿಕೊಂಡು, ಶುಭ್ರವಾದ ಲಂಗ ದಾವಣಿಯನ್ನು ಹಾಕಿಕೊಂಡು. ಪುಸ್ತಕಗಳನ್ನು ಎದೆಗೆ ಒತ್ತಿ ಹಿಡಿದು ಬಸ್ಸನ್ನು ಹತ್ತುತ್ತಿದ್ದರೆ. ಆ ಅಂದವನ್ನು ನೋಡುವುದೇ ಡ್ರೈವರ್ ಕಂಡಕ್ಟರ್ ಗಳಿಗೆ ಏನೋ ಒಂಥರಾ ಖುಷಿ. ಇಂಥಹ ಸುಂದರ ಬೆಡಗಿಯರನ್ನು ಡ್ರೈವರ್ ತನ್ನ ಆಸುಪಾಸಿನಲ್ಲಿಯೇ ಸೀಟಿದ್ದರೆ ಕುಳ್ಳಿರಿಸಿ ಕೊಳ್ಳುತ್ತಿದ್ದ , ಇಲ್ಲದಿದ್ದರೆ ನಿಲ್ಲಿಸಿಕೊಳ್ಳುತ್ತಿದ್ದ. ಕಾಲೇಜ್ ಹುಡುಗಿಯರ ಮಧ್ಯೆ ವಿರಾಜಮಾನವಾಗಿ ಕುಳಿತು ಬಸ್ಸು ಓಡಿಸುತ್ತಿದ್ದ ಚಾಲಕನ ಆ ಗತ್ತು ಹೇಳತೀರದು. ಆಗ ಆತ ಥೇಟ್ ಶ್ರೀಕೃಷ್ಣ ಪರಮಾತ್ಮನೇ ಆಗಿ ಬಿಡುತ್ತಿದ್ದ. ಎಲ್ಲಿಲ್ಲದ ಉತ್ಸಾಹ ಹುಮ್ಮಸ್ಸುಗಳನ್ನು ಆತನಲ್ಲಿ ತಾನಾಗಿಯೇ ಮೂಡಿ ಬರುತ್ತಿದ್ದವು. ಆಗಾಗ ಹುಡುಗಿಯರು ಎದೆಗೆ ಒತ್ತಿ ಹಿಡಿದುಕೊಂಡ ಆ ಬುಕ್ ಗಳ ಕಡೆಗೆ ಕಳ್ಳ ನೋಟವನ್ನು ಬೀರುತ್ತಿದ್ದ.....
ಬಸ್ಸು ಕಂಚುಗಾರನ ಹಳ್ಳಿಯ ತಿರುವಿನ ಬಳಿ ಹೋಗುವಷ್ಟರಲ್ಲಿ. ಬಸ್ಸಿಗಾಗಿ ಹತ್ತಾರು ಸೊಪ್ಪು ಮಾರುವ ರೈತ ಹೆಗಸರು ಕಾಯುತ್ತಾ ನಿಂತಿರುತ್ತಿದ್ದರು. ಬಸ್ ನಿಲ್ಲಿಸಿದ ಕೂಡಲೇ ಕಂಡಕ್ಟರನು ಆ ಸೊಪ್ಪಿನ ಪುಟ್ಟಿಗಳನ್ನು ಬಸ್ಸಿನ ಟಾಪ್ ಮೇಲೆ ಒಂದೊಂದಾಗಿ ಜೋಡಿಸಿ, ಅವು ಬೀಳದಂತೆ ಹಗ್ಗದಿಂದ ಬಿಗಿಯುತ್ತಿದ್ದನು. ಈ ಎಲ್ಲಾ ಕೆಲಸ ಮುಗಿಸಿ ಬಸ್ ಮುಂದಕ್ಕೆ ಹೊರಡಲು ಗ್ರೀನ್ ಸಿಗ್ನಲ್ ಕೊಡುವಷ್ಟರಲ್ಲಿ ಹತ್ತು ಹನ್ನೆರಡು ನಿಮಿಷ ವ್ಯಯವಾಗುತ್ತಿತ್ತು. ಬಸ್ಸಿನ ಮಂದಗತಿಯ ವೇಗ ಮತ್ತು ಬಸ್ಸಿನ ಇಷ್ಟೆಲ್ಲಾ ಅವಾಂತರಗಳನ್ನು ವೀಕ್ಷಿಸುತ್ತಾ ಬಂದ ಪ್ರಯಾಣಿಕರಿಗೆ ಬಸ್ಸಿನ ಡ್ರೈವರ್ ನ್ನು ಸಾಯಿಸಿಬಿಡಬೇಕು ಎನ್ನುವಂತಹ ಕೋಪ ಬರುತ್ತಿತ್ತು.

ಅಷ್ಟೇ ಅಲ್ಲದೇ ಬಸ್ಸು ಜನರಿಂದ ತುಂಬಿ ತುಳುಕುತ್ತಿತ್ತು. ಹೆಜ್ಜೆ ಇಡಲೂ ಸಹ ಪರದಾಡಬೇಕಾದ ಆ ಪರಿಸ್ಥಿತಿಯಲ್ಲಿ ಕಂಡಕ್ಟರನು ಯಾವ ಪ್ರಯಾಣಿಕರನ್ನು ಬಿಟ್ಟು ಹೋಗಲು ಮನಸ್ಸು ಮಾಡುತ್ತಿರಲಿಲ್ಲ. ಪ್ರಯಾಣಿಕರನ್ನೆಲ್ಲಾ ಹತ್ತಿಸಿಕೊಳ್ಳುತ್ತಿದ್ದ ಆ ಕಂಡಕ್ಟರ್ ಗೋಡೌನ್ ನಲ್ಲಿ ಭತ್ತದ ಮೂಟೆಗಳನ್ನು ಒಂದು ಕಡೆಯಿಂದ ಸರಿಯಾಗಿ ಜೋಡಿಸಿಕೊಂಡು ಬರುವಂತೆಯೇ ಬಸ್ಸಿನಲ್ಲಿ ಜನರನ್ನು ಒಂದು ಕಡೆಯಿಂದ ನೀಟಾಗಿ ನಿಲ್ಲಿಸಿಕೊಂಡು ಬರುತ್ತಿದ್ದನು. ಅವನು ಪ್ರಯಾಣಿಕರನ್ನು ಇಕ್ಕಟ್ಟಾಗಿ ನಿಲ್ಲಿಸುತ್ತಿದ್ದ ಆ ಪರಿ ಹೇಗಿರುತ್ತಿತ್ತು ಎಂದರೆ. ಪ್ರಯಾಣಿಕರು ತಮ್ಮ ಅಂಡುಗಳನ್ನು ಸಹ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಎತ್ತಿನ ಗಾಡಿಯಂತೆ ನಿಧಾನವಾಗಿ ಬಸ್ಸು ಓಡಿಸುತ್ತಿದ್ದ ಆ ಡ್ರೈವರ್ ನನ್ನು ಹಿಡಿದು ಚಚ್ಚಬೇಕು ಎನ್ನುವಷ್ಟು ರೋಷವೇಷಗಳು ತಾನಾಗಿಯೇ ಉಕ್ಕಿ ಬರುತ್ತಿದ್ದವು..... ಪಾಪ ಡ್ರೈವರನದೇನು ತಪ್ಪು ಹೇಳಿ....? ಆ ಸಮಯಕ್ಕೆ ಇರುವುದೊಂದೇ ಬಸ್ಸು ಎಲ್ಲಾ ಪ್ರಯಾಣಿಕರನ್ನು ಹೊತ್ತೊಯ್ಯುವ ಜವಬ್ದಾರಿ ಅವನದು.....
ಅಲ್ಲಿಂದ ಮುಂದೆ ಬಸ್ಸು ರಸ್ತೆಯಲ್ಲಿರುವ ಹಳ್ಳ ತಗ್ಗುಗಳನ್ನು ದಾಟಿ ಮುಂದೆ ಸಾಗಬೇಕಿತ್ತು. ಬಸ್ಸಿನ ಚಕ್ರ ರಸ್ತೆಯಲ್ಲಿರುವ ಗುಂಡಿಗೆ ಇಳಿಯದಂತೆ... ಬಸ್ಸಿಗೆ ಯಾವ ರೀತಿಯಿಂದಲೂ ಹಾನಿಯಾಗದಂತೆ ಡ್ರೈವರನು ಬಹು ಎಚ್ಚರದಿಂದ ಚಾಲನೆ ಮಾಡುತ್ತಿದ್ದನು. ಎಲ್ಲಿ ಬಸ್ಸಿಗೆ ಹಾನಿಯುಂಟಾದರೆ ಬಸ್ಸಿನ ಮಾಲೀಕ ತನ್ನ ಸಂಬಳದಲ್ಲಿ ಹಣ ಹಿಡಿದುಕೊಳ್ಳುವನೋ ಎಂಬ ಭಯ ಅವನಿಗೆ. ಆದಷ್ಟು ನಿಧಾನವಾಗಿ ಹೂವಿನ ಹಾಸಿಗೆ ಮೇಲೆ ನಡೆಸಿದಂತೆಯೇ ಬಸ್ಸನ್ನು ನಿಧಾನವಾಗಿ ಸಾಗಿಸುತ್ತಿದ್ದನು...
ಬೆನಕನಹಳ್ಳಿ ತಲುಪಿದ ಕೂಡಲೇ ಬುಡೇನ್ ಸಾಬ್ ಮಂಡಕ್ಕಿ ಮೂಟೆಗಳನ್ನು ಬಸ್ಸಿನ ಮೇಲೆ ಹೇರುತ್ತಿದ್ದನು.... ಅಲ್ಲಿ ಒಂದ್ಹತ್ತು ಬಸ್ಸು ನಿಂತುಕೊಂಡು ಸುಧಾರಿಸಿಕೊಳ್ಳುತ್ತಿತ್ತು. ಅಲ್ಲಿಂದ ಮುಂದೆ ಬಸ್ಸು ಕೆಲವು ಹಳ್ಳಿಗಳನ್ನು ದಾಟಿ, ಅಲ್ಲಲ್ಲಿ ನಿಲ್ಲುತ್ತಾ.... ಸುಧಾರಿಸಿತೊಳ್ಳುತ್ತಾ.....ಗರ್... ಗರ್... ಗರ್ .... ಎಂದು ಘರ್ಜಿಸುತ್ತಾ....... ಒಳಗಡೆ ಸುಸ್ತಾಗಿ ನಿಂತಿದ್ದ ಪ್ರಯಾಣಿಕರ ಹಿಡಿ ಶಾಪವನ್ನು ಸಹಿಸಿಕೊಳ್ಳುತ್ತಾ......ನಿಲ್ಲಿಸಿ ಬಸ್ಸು ತನ್ನ ಗುರಿಯತ್ತ ನಿಧಾನವಾಗಿ ತಲುಪುತ್ತಿತ್ತು. ಹಾಗೋ ಹೀಗೋ ಮಾಡಿ ನಮ್ಮನ್ನು ಹೊನ್ನಾಳಿಯ ವರೆಗೆ ತಲುಪಿಸಿದ ಸಾಹಸ ಕೀರ್ತಿ ಆ ಡ್ರೈವರನಿಗೆ ಸಲ್ಲುತ್ತಿತ್ತು. ಬಸ್ಸಲ್ಲೇ ಹಣ್ಣುಗಾಯಿ ನೀರುಗಾಯಿಗಳಾಗಿದ್ದ ನಾವು ಕಾಲೇಜಿನ ಕಡೆಗೆ ಆಯಾಸದ ಪೆಚ್ಚು ಮೋರೆ ಹಾಕಿಕೊಂಡು ನಡೆದು ಹೋಗುತ್ತಿದ್ದವು....
ಹಾಗೆ ನೋಡಿದರೆ ನಾವು ಕಾಲೇಜಿನಲ್ಲಿ ಓದಿ ದಬಾಕಿದ್ದು ಅಷ್ಟಕ್ಕಷ್ಟೇ. ನಮಗೆ ನಿಜವಾದ ಜೀವನ ದರ್ಶನವಾಗಿದ್ದು ಬಸ್ಸಿನಲ್ಲಿ. ಹಲವು ಜನರನ್ನು ಭೇಟಿಯಾದದ್ದು. ಜನರ ನೋವು ನಲಿವುಗಳನ್ನು ಕಂಡದ್ದು ಆ ಬಸ್ಸಿನಲ್ಲಿಯೇ. ಟಿಕೇಟ್ ದರ ಹೆಚ್ಚಾಯಿತೆಂದು ಕಂಡಕ್ಟರ್ ಮೇಲೆ ಜಗಳ ತೆಗೆಯುತ್ತಿದ್ದ ಹಳ್ಳಿಯ ಹೆಂಗಸರು ಹಣದ ಬೆಲೆ ಏನೆಂಬುದನ್ನು ತಿಳಿಸಿಕೊಟ್ಟಿದ್ದರು. ದಿನ ಪೂರ್ತಿ ಕೂಲಿ ಮಾಡಿ ಕಷ್ಟ ಪಡುತ್ತಿದ್ದ ಆ ಹೆಂಗಸರು ಕಂಡಕ್ಟರ್ ಬಳಿ ಸ್ವಲ್ಪ ಚೌಕಾಸಿ ಮಾಡಿದರೆ ನಾಕಾಣೆಯಾದರೂ ತಮ್ಮ ಮಕ್ಕಳಿಗೆ ಉಳಿಸಬಹುದೆಂಬ ಆಸೆ ಅವರ ಮಾತಿನಲ್ಲಿ ಕಾಣುತ್ತಿತ್ತು. ದುಡಿಮೆಯ ಕಷ್ಟಗಳು. ತಂದೆ ತಾಯಿಯರು ಮಕ್ಕಳಿಗಾಗಿ ಪಡುತ್ತಿದ್ದ ನೋವುಗಳು ನಾವು ಬಸ್ಸಿನಲ್ಲೇ ಕಾಣುತ್ತಿದ್ದವು....
ಮುಂದಿನ ಕೆಲವು ಸೀಟಿನಲ್ಲಿ ಕುಳಿತ್ತಿದ್ದ ಹೆಂಗಸರಿಂದ ಅತ್ತೆ ಸೊಸೆ ಜಗಳದ ವಿಷಯಗಳು ಪ್ರಸ್ತಾಪವಾಗುತ್ತಿದ್ದವು. ಕೆಲವು ಸಲ ನಮಗೆ ಅತ್ತೆ ಸರಿಯೆಂದು ಕಾಣಿಸಿದರೆ ಕಲವೊಂದು ಸಲ ಸೊಸೆಯದು ಸರಿಯೆಂದೆನಿಸುತ್ತಿತ್ತು. ಈ ಜಗಳದ ಮಾತುಗಳು ನಮಗೆ ಚಿಂತನೆಗೀಡುಮಾಡುತ್ತಿದ್ದವು. ಇಲ್ಲಿ ಕೇಳಿದ ಕತೆಗಳು, ಜಗಳದ ಸ್ವರೂಪಗಳು, ಸಂಭಾಷಣೆಗಳು ಇದು ವರೆಗೂ ಯಾವ ಧಾರಾವಾಹಿಗಳಲ್ಲಿ ಬಿತ್ತರವಾಗಿಲ್ಲ.... ಯಾವ ಟಿ. ವಿ. ಚಾನಲ್ ಗಳು ತೋರಿಸಿಲ್ಲ.... ಇಲ್ಲಿಯ ಹಲವು ವಿಷಯಗಳು ನಮ್ಮ ಮನೆಯ ಕನ್ನಡಿಯಂತೆಯೇ ಕಾಣುತ್ತಿದ್ದವು....
"ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಮದುವೆಗೋ ಮಸಣಕೋ" ಎಂಬಂತೆ ದಿನವೂ ಪಯಣಿಸುತ್ತಿದ್ದ ಜನರು ಗೊತ್ತು ಗುರಿಯಿಲ್ಲದ ಗಂತವ್ಯದತ್ತ ಸಾಗುತ್ತಿದ್ದಾರೋ ಎಂದೆನಿಸುತ್ತಿತ್ತು. ಯಾವಾಗ ಊರು ತಲುಪುವೆವೋ ಎಂಬಂತೆ ಬಸ್ಸು ಹತ್ತುವವರ ಆತುರದ ನಡವಳಿಕೆಗಳು... ಯಾವಾಗ ಮನೆ ತಲುಪುವೆನೋ ಎಂಬಂತೆ ಬಸ್ಸಿನಿಂದ ಇಳಿಯುವವರ ಕಾತುರ ನಿರೀಕ್ಷೆಗಳು..... ಮತ್ತೆನನ್ನೋ ಹೇಳಲು ಹೊರಟಂತೆ ಕಾಣುತ್ತಿದ್ದವು...
ಇನ್ನು ಪ್ರಯಾಣಿಕರ ಲಗೇಜುಗಳನ್ನು ನೋಡಬೇಕು. ಒಂದೆರಡು ದಿನ ಪರವೂರಿನ ಬೀಗರ ಮನೆಯಲ್ಲಿ ನೆಲೆಸಲು ಹೊರಟ ಪ್ರಯಾಣಿಕರು ಸಂಸಾರ ಹೂಡಲು ಹೊರಟಿರುವಂತೆ ದೊಡ್ಡ ದೊಡ್ಡ ಬ್ಯಾಗುಗಳನ್ನು ಹೊತ್ತು ನಡೆಯುತ್ತಿದ್ದರು. ಕೆಲವರು ಹಬ್ಬಕ್ಕೆ ಹೊರಟಿದ್ದರೆ. ಮತ್ತೆ ಕೆಲವರು ತಿಥಿಗೆ. ಇನ್ನು ಹಲವರು ನಾಮಕರಣಕ್ಕೋ... ಮುಂಜಿಗೋ... ತಂದೆ ತಾಯಿಯರನ್ನು ನೋಡಲೋ ಅಥವಾ ಅವರ ಶ್ರಾದ್ಧಕ್ಕೋ.... ರೋಗಿಗಳನ್ನು ಕಾಣಲೋ ಅಥವಾ ಸೌಖ್ಯರನ್ನು ಮಾತನಾಡಿಸಲೋ.. ಹೀಗೆ ಅವರವರು ಹೊರಟಿರುವ ಗುರಿ ಮತ್ತು ಉದ್ದೇಶಗಳಿಗುಣವಾಗಿ ಅವರವರ ಮುಖ ಭಾವಗಳು ಕಾಣುತ್ತಿದ್ದವು...
ಮತ್ತೆ ಕೆಲವರು ಕುಳಿತು ಕೊಳ್ಳುವ ಸೀಟಿಗಾಗಿ ಜಗಳ. ಅರ್ದ ತಾಸು ಪ್ರಯಾಣಕ್ಕೆ ಜೀವನ ಪೂರ್ತಿ ಬಸ್ಸಿನಲ್ಲೇ ಕೂರುವೆನೆಂಬಂತಹ ಆಲೋಚನೆ ಅವರಿಗೆ. ಸ್ವಲ್ಪ ಸಮಯದ ಸುಖಕ್ಕೂ ಹಾತೊರೆಯುವ ಈ ಜನರನ್ನು ಕಂಡ ನಮಗೆ ಈ ಸಮಾಜದಲ್ಲಿ ಎಷ್ಟೊಂದು ಸ್ವಾರ್ಥ ದುರಾಸೆಗಳು ಇವೆ ಎಂದೆನಿಸುತ್ತಿತ್ತು. ದೇವರು ಏನಾದರೂ ಮನುಷ್ಯನಿಗೆ ಸಾವೇ ಇಲ್ಲ ಎಂದಿದ್ದರೆ ಇನ್ನು ಏನೇನು ಅನಾಹುತಗಳು ಜರುಗುತ್ತಿದ್ದವೇನೋ.....!!! ಬಸ್ಸಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಕಂಡರೆ ನಾವು ಯಾವುದೋ ಲೋಕಕ್ಕೆ ತೇಲಿ ಹೋಗುತ್ತಿದ್ದೆವು. " ಗಾನ ಯಾವುದೋ ಗೂಢ ಭಾವವನು ಬಿಚ್ಚುತಿಹದು" ಎಂದು ದಾಸರ ಪದ ದಂತೆಯೇ... ಬಸ್ಸು ಯಾವುದೋ ಭಾವವನ್ನು ಮೂಡಿಸುತ್ತಿತ್ತು. ಬಸ್ಸಿನಲ್ಲಿ ನಡೆಯುವ ಮಾತುಗಳು ಯಾವ ಉಪದೇಶ, ಪ್ರವಚನಗಳಿಗಿಂತಲೂ ಕಡಿಮೆ ಇರಲಿಲ್ಲ. ಹಿರಿಯರ ಬಿಟ್ಟಿ ಸಲಹೆಗಳು. ಹೆಂಗಸರ ಮನೆತನದ ಕತೆಗಳು. ರಾಜಕೀಯ ವಿಷಯಗಳು, ಕುಡುಕರ ತೊದಲು ನುಡಿಗಳು, ಕಾಲೇಜು ಹುಡುಗರ ಚೇಷ್ಟೆಗಳು, ಹುಡುಗಿಯರ ಕಳ್ಳ ನೋಟಗಳು, ಲೈನು ಹೊಡೆಯುತ್ತಿರುವ ಪೋಕರಿಗಳು, ಮಳೆ,ಬೆಳೆ, ಹವಮಾನ, ಭವಿಷ್ಯ ಹೀಗೆ ಹತ್ತು ಹಲವಾರು ವಿಷಯಗಳನ್ನು ಕೇಳಿದ್ದು ಕಲಿತದ್ದು ಬಸ್ಸಿನಲ್ಲಿಯೇ....
ಮೊನ್ನೆ ಹವಾನಿಯಂತ್ರಿತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಅಲ್ಲಿ ಯಾವ ವಿಶೇಷತೆಯೂ ಇರಲಿಲ್ಲ. ಅವರವರ ಮೊಬೈಲಲ್ಲಿ ಬ್ಯೂಸಿಯಾಗಿರುವ ಆಧುನಿಕ ಶ್ರೀಮಂತರನ್ನು ಕಂಡು ಬೇಸರವೆನಿಸಿತು. ಮಾತಿಲ್ಲ ...ಕತೆಯಿಲ್ಲ.. ಜನರೊಡನೆ ಬೆರೆಯಬೇಕೆಂಬ ಉತ್ಸಾಹವೂ ಅವರಲ್ಲಿರಲಿಲ್ಲ... ಜೀವನದ ನಿಜವಾದ ಪಾಠಗಳು ಸಿಗುವುದೇ ಜನ ಸಾಮಾನ್ಯರಲ್ಲಿ ಬೆರೆತಾಗಲೇ ಮಾತ್ರ.....
ಅದು ಜನ ಸಾಮಾನ್ಯರು ಪ್ರಯಾಣಿಸುವ ಡಕೋಟ ಬಸ್ಸಿನಲ್ಲಿ. ಪ್ಯಾಸೆಂಜರ್ ರೈಲಿನಲ್ಲಿ ಮಾತ್ರವೇ ಎಂದೆನಿಸಿತು. ಮೂರು ವರ್ಷದ ನಮ್ಮ ಬಸ್ಸಿನ ಓಡಾಟವು ನಮಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಟ್ಟಿತ್ತು. ಬಸ್ಸು ಕಲಿಸಿದ ಆ ಪಾಠ ಯಾವ ವಿಶ್ವ ವಿದ್ಯಾಲಯಕ್ಕಿಂತ ಕಡಿಮೆಯೇನು ಇರಲಿಲ್ಲ......

Monday 22 August 2016

ಹುರುಳಿಯ ಪುರಾಣ

ಹುರುಳಿಯ ಪುರಾಣ...


ಚಿತ್ರದುರ್ಗದಲ್ಲಿ ಬಿ.ಎಡ್ ಓದುತ್ತಿದ್ದ ಸಮಯ . ಅಲ್ಲಿ ಹಾಸ್ಟಲ್ ನಲ್ಲಿ ಇದ್ದಾಗ ವಿಧ ವಿಧವಾದ ಊಟವೂ ಸಿಗುತ್ತಿತ್ತು. ಅಂದು ಮೈದಾನದಲ್ಲಿ ಸ್ವಲ್ಪ ಹೆಚ್ಚಾಗಿಯೇ ಆಟವಾಡಿದ್ದರಿಂದ ತುಂಬಾ ಹಸಿವಾಗಿತ್ತು. ಹಾಸ್ಟೆಲ್ ನ ಪಾಕಶಾಲೆಯಲ್ಲಿ ಆರಾಮಾಗಿ ಊಟಮಾಡೋಣವೆಂದು ಕುಳಿತುಕೊಂಡೆ . ಬಿಸಿ ಬಿಸಿಯಾದ ಹುರುಳಿ ಕಟ್ಟಿನ ಸಾರಿಗೆ ಮುದ್ದೆ ತಯಾರಾಗಿತ್ತು. ಇನ್ನೇನು ನುಂಗೋಣವೆಂದು ಮುದ್ದೆಯನ್ನು ಮುರಿದುಕೊಂಡೆ, ಎಲ್ಲಿದ್ದನೋ ಏನೋ ಆ ಪಾಪಿ .... ನನ್ನ ಸ್ನೇಹಿತ ಮಿಂಚಿನಂತೆ ನನ್ನ ಮುಂದೆ ವಕ್ಕರಿಸಿದ . ನನ್ನ ಊಟದ ತಟ್ಟೆಗೆ ಪಿಳಿ ಪಿಳಿ ಕಣ್ಣುಬಿಡುತ್ತಾ ಏನೋ ತಿನ್ನಬಾರದ್ದನ್ನು ತಿನ್ನುತ್ತಿದ್ದೆನೆ ಎಂಬಂತೆ ಗುರಾಯಿಸಿ ನೋಡತೊಡಗಿದ.




"ಎಂಥಾ ಮಾರಾಯಾ... ಈ ಹುರುಳಿ ಕಾಳಿನ ಸಾರು .... !!! ನಮ್ಮ ಕಡೆ ಇದನ್ನು ದನ ಕರುಗಳಿಗೆ ಹಾಕುವುದುಂಟು ಇದನ್ನು ತಿನ್ನಲು ಕುಳಿತಿರುವೆಯಲ್ಲಾ... ? "

ಆ ಪಾಪಿ ನಗುತ್ತಲೇ ಈ ಮಾತನ್ನು ಹೇಳಿದ. ಮೊದಲೇ ಭಯಂಕರವಾಗಿ ಹಸಿದಿದ್ದ ನನಗೆ ಇವನ ಮಾತನ್ನು ಕೇಳಿ ಹೇಗಾಗಿರಬೇಡ ...? ಊಟಮಾಡಬೇಕೋ ಬೇಡವೋ ಎಂಬ ಅನುಮಾನ...!!! ಅವನ ಮಾತನ್ನು ಧಿಕ್ಕರಿಸಿ ಊಟಕ್ಕೆ ಕುಳಿತುಕೊಂಡರೆ. ಆತನ ದೃಷ್ಟಿಯಲ್ಲಿ ನಾನು ಪಶುವಿಗೆ ಸಮಾನನಾಗಿ ಬಿಡುತ್ತಿದ್ದೆ. ತಿನ್ನದೇ ಇದ್ದರೆ ನನ್ನ ಹೊಟ್ಟೆ ಪೂಜೆ ಹೇಗೆ ಮಾಡಿಕೊಳ್ಳಬೇಕೆಂಬ ಚಿಂತೆ. ಏನು ಮಾಡಬೇಕೆಂದು ತಿಳಿಯದಂತಾಯಿತು. ನನ್ನ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನು ಕಟ್ಟಿದ ಆ ಪಾಪಿಗೆ ಕೊಂದು ಹಾಕುವಷ್ಟು ಕೋಪ ಬಂದಿತು.....

ಹುರುಳಿಕಾಳು ನಿಜವಾಗಿಯೂ ದನ ಕರುಗಳಿಗೆ ಹಾಕುವಷ್ಟು ನಿಷ್ಪ್ರಯೋಜಕವೇ ....? ಮನುಷ್ಯ ತಿಂದರೆ ಏನಾದರೂ ತೊಂದರೆ ಯಾಗುತ್ತದೆಯೇ ಹೀಗೆ ಹಲವು ಪ್ರಶ್ನೆಗಳು ಮೂಡಿದವು. ಆ ಪ್ರಶ್ನೆಗಳಿಗೆ ಉತ್ತರ ಹುಡುಕಲಾರಂಭಿಸಿದೆ.
ಹುರುಳಿಯನ್ನು ಇಂಗ್ಲಿಷಿನಲ್ಲಿ "horse gram (ಹಾರ್ಸ್ ಗ್ರ್ಯಾಮ್)" ಎಂದು ಕರೆಯುತ್ತಾರೆ. ವಿದೇಶಗಳಲ್ಲಿ ಇದನ್ನು ಕುದುರೆಗೆ ತಿನ್ನಿಸಲು ಬಳಸುತ್ತಾರಂತೆ. ನಮ್ಮ ದೇಶದಲ್ಲಿ ಹುರುಳಿಯನ್ನು "ಬಡವರ ಆಹಾರ" ವೆಂದು ಕರೆಯುತ್ತಾರೆ. ಕೆಲವು ಕಡೆಗಳಲ್ಲಿ ಇದನ್ನು ದನ ಕರುಳಿಗೂ ಹಾಕುವುದುಂಟು. ಬಡವರು ಇದನ್ನು ಹೆಚ್ಚಾಗಿ ಬಳಸುವುದರಿಂದಲೋ ಅಥವಾ ಹುರುಳಿಯ ಬೆಲೆ ಕಡಿಮೆ ಇರುವುದರಿಂದಲೋ ಈ ಹೆಸರು ಬಂದಿರಬೇಕು. ಹೀಗೆ ಹುರುಳಿಗೆ " ಬಡವರ ಆಹಾರ" ಎಂದು ಹಣೆ ಪಟ್ಟಿ ಕಟ್ಟುವುದು ನನಗೆನೋ ಒಪ್ಪಿಕೊಳ್ಳಲು ಆಗುತ್ತಿಲ್ಲ. ಆಹಾರದಲ್ಲಿ ಇದು ಬಡವರದು ಇದು ಶ್ರೀಮಂತರದು ಎಂದು ವರ್ಗೀಕರಿಸುವುದೇ ತಪ್ಪು. ಆಹಾರ ಎಲ್ಲರ ಸ್ವತ್ತೂ ಆಗಿದೆ.
ಒಮ್ಮೆ ಮೈಸೂರು ಸಂಸ್ಥಾನದ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಸುತ್ತೂರು ಮಠಕ್ಕೆ ಹೋಗಿದ್ದರಂತೆ. ಸುತ್ತೂರು ಮಠದಲ್ಲಿ ಭಕ್ತರಿಗಾಗಿ ಹಂಡೆಗಟ್ಟಲೆ ಹುರುಳಿಯ ಕಟ್ಟನ್ನು ಬೇಯಿಸುತ್ತಿದ್ದರಂತೆ. ಅಂದು ಮಹಾರಾಜರು ಹುರುಳಿಯ ಕಟ್ಟನ್ನು ಮೊದಲ ಬಾರಿ ಸವಿದರಂತೆ, ಯಾವಾಗ ಮಹಾರಾಜರು ಹುರುಳಿಯ ಸಾರನ್ನು ಸವಿದರೋ ಅಂದಿನಿಂದ ಹುರುಳಿಯ ಅಸಾಧಾರಣ ರುಚಿಗೆ ಮಾರುಹೋಗಿಬಿಟ್ಟರು. ಮಠದ ಅಧಿಕಾರಿಗಳಿಗೆ ಪ್ರತಿದಿನವೂ ಹುರುಳಿಯ ಕಟ್ಟನ್ನು ರಾಜನ ಆಸ್ಥಾನಕ್ಕೆ ತಂದು ಕೊಡಬೇಕೆಂದು ಆದೇಶ ನೀಡಿದರಂತೆ. ಹುರುಳಿಯ ಅಸಾಧಾರಣ ರುಚಿಯಿಂದಲೋ ಅಥವಾ ಹುರುಳಿಯ ಮಹಿಮೆಯಿಂದಲೋ ಏನೋ ಮಹಾರಾಜರು ಸುತ್ತೂರು ಮಠಕ್ಕೆ ಸಾಕಷ್ಟು ಭೂಮಿಯನ್ನು ಕಾಣಿಕೆಯನ್ನಾಗಿ ನೀಡಿದರಂತೆ. ಹೀಗೆ ಮಹಾರಾಜರಿಗೂ ಮೋಡಿ ಮಾಡಿದ್ದ ಈ ಹುರುಳಿಯನ್ನು ಬಡವರ ಆಹಾರ ಎಂದು ಕರೆಯಲು ಸಾಧ್ಯವೇ.....?

ಕರ್ನಾಟಕದಲ್ಲಿ ಭಾವಸಾರ ಕ್ಷತ್ರಿಯ ಎಂಬ ಜನಾಂಗವಿದೆ. ಒಮ್ಮೆ ನಾನು ಭಾವಸಾರ ಸ್ನೇಹಿತನೊಬ್ಬನ ಮನೆಗೆ ಊಟಕ್ಕೆಂದು ಹೋಗಿದ್ದೆ. ಭಾವಸಾರರು ರುಚಿಕರವಾದ ಊಟ ತಯಾರಿಸುವುದರಲ್ಲಿ ಸಿದ್ಧಹಸ್ತರು. ಭಾವಸಾರರು ಮೂಲತಃ ಸೌರಾಷ್ಟ್ರದವರು. ಹನ್ನೆರಡನೇ ಶತಮಾನದಲ್ಲಿ ಮೊಘಲರ ಮತಾಂತರಕ್ಕೆ ಹೆದರಿ ಸೌರಾಷ್ಟ್ರದಿಂದ ಚದುರಿ ವಲಸೆ ಹೋಗಲಾರಂಭಿಸಿದರು. ಮತಾಂತರದ ಒತ್ತಡಗಳು ಹೆಚ್ಚಾದಾಗ ಕೆಲವು ಭಾವಸಾರ ಪಂಗಡಗಳು ದಕ್ಷಿಣ ಭಾರತದತ್ತ ವಲಸೆ ಬಂದರು. ಹಾಗೆ ಬರುವಾಗ ಭಾವಸಾರರು ಉತ್ತರದ ಆಹಾರ ಪದ್ಧತಿಯ ಶೈಲಿಯನ್ನು ಕರ್ನಾಟಕಕ್ಕೂ ತಂದರು. ಕರ್ನಾಟಕದಲ್ಲಿಯ ಹುರುಳಿಯು ಭಾವಸಾರರಿಗೆ ಸ್ವಲ್ಪ ಹೆಚ್ಚಾಗಿಯೇ ರುಚಿಸಿದಂತೆ ಕಂಡಿರಬೇಕು. ಮೊಗಲರ ಮಾಂಸಹಾರಿ ಭಕ್ಷ್ಯವಾದ ಖೀಮಾ ಶೈಲಿಯನ್ನು ಹುರುಳಿಗೆ ಅಳವಡಿಸಿದರು. ಮೊಳಕೆ ಕಟ್ಟಿದ ಹುರುಳಿಗೆ ಖೀಮಾಗೆ ಹಾಕುವ ಪದಾರ್ಥಗಳನ್ನು ಹಾಕಿ ಅರೆದು ಹುರುಳಿಯ ಉಂಡೆಗಳನ್ನು ತಯಾರಿಸಿದರು.
ಹೀಗೆ ತಯಾರಿಸಿದ ಉಂಡೆಗಳನ್ನು ಹಬೆಯಲ್ಲಿ ಬೇಯಿಸಿ ಒಗ್ಗರಣೆ ಹಾಕುತ್ತಾರೆ. ಈ ಉರುಳಿಯ ಉಂಡೆಗಳು ಮಾಂಸಹಾರಿ ಖೀಮಾ ಉಂಡೆಗಳಿಗಿಂತಲೂ ಸ್ವಾಧಿಷ್ಟವಾದುದು ಮತ್ತು ಆರೋಗ್ಯಕರವಾದುದೆಂದು ಹೇಳುತ್ತಾರೆ. ಕರುನಾಡಿನಲ್ಲಿ ಬೆಳೆದ ಈ ಹುರುಳಿಯು ಭಾವಸಾರರಿಗೆ ಮೋಡಿ ಮಾಡಿತ್ತೆಂದರೆ ಹುರುಳಿಯು ರುಚಿಕರವಾದ ಆಹಾರವೆಂದು ನೀವು ಒಪ್ಪಲೇಬೇಕು.....

ನೀವು ಹುರುಳಿಯನ್ನು ಉಪಯುಕ್ತ ಆಹಾರ ಎಂಬುದನ್ನು ಒಪ್ಪಿಕೊಳ್ಳಿ ಇಲ್ಲವೇ ಬಿಡಿ. ಅವರವರ ಭಾವ ಅವರಿಗೆ. ಬಡವರ ಆಹಾರವಾದ ಹುರುಳಿಯ ಬಗ್ಗೆ ಹೀಗೆ ಏನೇನೋ ಹೇಳಿ ನಮಗೆ ತಿನ್ನುವಂತೆ ಪ್ರೇರೇಪಿಸುತ್ತಿರಬಹುದೆಂದು ನೀವು ನನ್ನನ್ನು ದೂಷಿಸುತ್ತಿರಬಹುದು. ಶ್ರೀಮಂತರಾದ ನಿಮಗೆ ಹುರುಳಿಯನ್ನು ತಿನ್ನಿ ಎಂದು ಒತ್ತಡವೇನೂ ಹಾಕುತ್ತಿಲ್ಲ. ಆದರೆ ಒಂದು ಸಾರಿ ಪ್ರಯೋಗಿಸಿ ನೋಡಿ, ಆಗ ಮಾತ್ರವೇ ಹುರುಳಿಯ ಮಹಿಮೆ ನಿಮಗೂ ಅರ್ಥವಾಗುತ್ತದೆ. ಇಲ್ಲದಿದ್ದರೆ ನನ್ನ ಮಾತುಗಳು ನಿಮಗೆ ಗೌಣ ಎಂದೆನಿಸುತ್ತದೆ. ಅಂಥ ಮೈಸೂರಿನ ಮಹಾರಾಜರಾದ ಮಮ್ಮುಡಿ ಕೃಷ್ಣರಾಜರೇ ಅರಮನೆಯ ಭಕ್ಷ್ಯ ಭೋಜನವನ್ನು ಮರೆತು ಹುರುಳಿಯ ಸ್ವಾದಿಷ್ಟಕ್ಕೆ ಮಾರುಹೋದರೆಂದರೆ ಹುರುಳಿಯು ರುಚಿಕರವಾದ ಆಹಾರವೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಹುರುಳಿಯ ರುಚಿ ಎಷ್ಟು ಮೋಡಿ ಮಾಡಿತ್ತು ಎಂದರೆ ಆಸ್ಥಾನದ ಕಲಾವಿದರು ಮತ್ತು ವಿಧ್ವಾಂಸರೊಂದಿಗೆ ಚರ್ಚಿಸುವಾಗಲೂ ಹುರುಳಿಯ ಹಪ್ಪಳದ ರುಚಿಯನ್ನು ಸವಿಯುತ್ತಿದ್ದರಂತೆ. ಮಹಾರಾಜರು ಆಸ್ಥಾನದ ಕಲಾವಿದರೊಂದಿಗೆ ಹರಟೆ ಮಾಡುವ ಹವ್ಯಾಸವನ್ನು ಬೆಳಸಿಕೊಂಡಿದ್ದರು. ಹೀಗೆ ಹರಟೆ ಹೊಡೆಯುವ ಸಂದರ್ಭದಲ್ಲಿ ಮಹಾರಾಜರ ಕುರ್ಚಿಯ ಹಿಂದೆಯೇ ಬಾಣಸಿಗನೊಬ್ಬ ಹುರುಳಿ ಹಪ್ಪಳವನ್ನು ಸುಟ್ಟು ಅದಕ್ಕೆ ನವಿರಾಗಿ ತುಪ್ಪವನ್ನು ಸವರಿ ಕೊಡುತ್ತಿದ್ದನಂತೆ...... ಮಹಾರಾಜರಿಗಿದ್ದ ಹುರುಳಿಯ ಈ ಪ್ರೀತಿಯನ್ನು ಪ್ರಖ್ಯಾತ ಸಂಗೀತಗಾರರಾದ ವಾಸುದೇವಾಚಾರ್ಯರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. 

ಇನ್ನು ನಮ್ಮ ಜನಪದ ಸಂಸ್ಕೃತಿಯಲ್ಲಿಯೂ ಸಹ ಹುರುಳಿಯು ಎಲ್ಲರ ಜೀವನದಲ್ಲಿ ಹಾಸು ಹೊಕ್ಕಿದೆ. ಮದ್ಯ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನಾಗರ ಪಂಚಮಿಯ ಹಬ್ಬದಲ್ಲಿ ಹುರುಳಿಯಿಂದ ಮಾಡಿದ ಸಿಹಿ ಭಕ್ಷ್ಯಗಳನ್ನು ತಯಾರಿಸುತ್ತಾರೆ. ರೈತ ಹೆಂಗಸರು ಇನ್ನೂ ಪಂಚಮಿ ಹಬ್ಬ ಮೂರ್ನಾಲ್ಕು ದಿನ ಇದೆ ಎನ್ನುವಾಗಲೇ ನೆನಸಿದ ಹುರುಳಿಯನ್ನು ಮಡಕೆಯಲ್ಲಿ ಹಾಕಿ ಬೇಯಿಸಲಾರಂಬಿಸುತ್ತಾರೆ. ಅಡಿಗೆಯಾದ ನಂತರ ಈ ಮಡಕೆಯನ್ನು ಕೆಂಡದ ಮೇಲೆ ಬೇಯಿಸಲು ಬಿಟ್ಟು ಹೊಲಗದ್ದೆಗಳಿಗೆ ತೆರಳುತ್ತಾರೆ. ರಾತ್ರಿ ಅಡುಗೆಯ ನಂತರವೂ ಈ ಹುರುಳಿಯ ಮಡಕೆ ಕೆಂಡದ ಗದ್ದುಗೆಯನ್ನೇರುತ್ತದೆ. ಹೀಗೆ ದಿನ ಪೂರ್ತಿ ಕೆಂಡದಲ್ಲೇ ಬೆಂದ ಈ ಹುರುಳಿಗೆ ಹಬ್ಬದ ದಿನ ಬೆಲ್ಲ ಹಾಲು ತುಪ್ಪ ಮಿಶ್ರಣ ಮಾಡುತ್ತಾರೆ. ಹಬ್ಬದ ದಿನ ಹುರುಳಿಯ ಅದ್ಭುತ ಸಿಹಿ ಭಕ್ಷ್ಯವನ್ನು ಸವಿಯುತ್ತಾರೆ. ನಮ್ಮ ಜನಪದರು ಕಂಡುಕೊಂಡ ಈ ಸಿಹಿ ಭಕ್ಷ್ಯದ ರುಚಿಯು ಆಧುನಿಕವಾಗಿ ತಯಾರಾಗುತ್ತಿರುವ ಇಂದಿನ ಯಾವ ಹಲ್ವದಲ್ಲಿಯೂ ಕಾಣಸಿಗದು.....

ಯಾವ ಪದಾರ್ಥವನ್ನೇ ತೆಗೆದುಕೊಳ್ಳಿ ಅದನ್ನು ಬಳಸುವುದರಲ್ಲೇ ಅದರ ರುಚಿ ಮಹತ್ತ್ವ ಅಡಗಿದೆ. ಪಶುಗಳಿಗೆ ಬಳಸುತ್ತಿದ್ದ ಮುಸುಕಿನ ಜೋಳವನ್ನು ಇಂದು ಕೋಸುಂಬರಿಗೆ. ಅದರ ಎಳಸು ದಿಂಡನ್ನು ಬೇಬಿ ಕಾರ್ನ್ ಮಂಚೂರಿಗಳಿಗೆ ಬಳಸುತ್ತಾರೆ. ಮಸಾಲೆ ಮಿಶ್ರಿತ ಮಾಡಿ ಬೇಯಿಸಿದ ಮುಸುಕಿನ ಕಾಳುಗಳನ್ನು ಜನ ಮುಗಿ ಬಿದ್ದು ತಿನ್ನುವುದನ್ನು ಕಾಣುವುದಿಲ್ಲವೇ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯ ಹೊಲ ಗದ್ದೆಗಳಲ್ಲಿ ಕಣ್ಣ ಮುಂದೆನೇ ರಾಶಿ ರಾಶಿ ತೆನೆ ಬಿದ್ದಿದ್ದರೂ ಅದನ್ನು ನಾವು ಮೂಸಿ ಸಹ ನೋಡುತ್ತಿರಲಿಲ್ಲ. ಆದರೆ ಇಂದು ರಸ್ತೆ ಬದಿಯಲ್ಲಿ ಕೆಂಡದಲ್ಲಿ ಸುಡುತ್ತಿದ್ದ ತೆನೆಯನ್ನು ನೋಡಿದರೆ ಬಾಯಲ್ಲಿ ನೀರು ಬರುತ್ತದೆ. ಹುರುಳಿಯ ವಿಷಯವೂ ಹಾಗೆಯೇ ಸರಿಯಾಗಿ ಬಳಸಿದರೆ ಅದೂ ಶ್ರೀಮಂತರ ಆಹಾರವೇ..?
ಹುರುಳಿ ಶ್ರಿಮಂತ ಆಹಾರ ಎನ್ನುವುದಕ್ಕೆ ಹಲವು ಕಾರಣಗಳಿವೆ. ಹುರುಳಿಕಾಳು ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಗಳನ್ನು ಒದಗಿಸುತ್ತದೆ. ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹುರುಳಿ ಕಾಳಿಗೆ ವಿಶೇಷ ಮಹತ್ತವಿದೆ. ಶೀತ ಜ್ವರದಿಂದ ಬಳಲುತ್ತಿರುವವರಿಗೆ ಹುರುಳಿಕಾಳಿನ ಸೂಪ್ ಅತ್ಯುಪಯುಕ್ತ. ಅಸ್ತಮಾ ಇದ್ದವರು ಹುರುಳಿಕಾಳನ್ನು ಉಪಯೋಗಿಸಿದರೆ ಉಸಿರಾಟ ಸುಗಮವಾಗುತ್ತಂತೆ. ಹುರುಳಿಕಾಳು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕಾಲ ಕಾಲಕ್ಕೆ ಋತುಚಕ್ರಕ್ಕೆ ಹುರುಳಿಕಾಳಿನ ಉಪಯೋಗ ಉತ್ತಮ. ಮಧುಮೇಹಿ ರೋಗಿಗಳಿಗಂತೂ ಹುರುಳಿಕಾಳು ರಾಮಬಾಣವಿದ್ದಂತೆ. ಚಿಕ್ಕ ಚಿಕ್ಕ ಕಿಡ್ನಿ ಕಲ್ಲುಗಳ ನಿವಾರಣೆಗೆ ಹುರುಳಿಯನ್ನು ಉಪಯೋಗಿಸುವುದುಂಟು. ಇನ್ನು ನಿಮ್ಮ ದೇಹದ ಕೊಬ್ಬನ್ನು ಕರಗಿಸಿ ತೂಕ ಕಡಿಮೆ ಮಾಡಿಕೊಳ್ಳಲೂ ಸಹ ಹುರುಳಿ ಅತ್ಯುತ್ತಮವಾದುದು. ಹುರುಳಿಯು ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸುತ್ತದೆ. ಅತಿ ಹೆಚ್ಚಿನ ನಾರಿನಾಂಶ ಮತ್ತು ಕಬ್ಬಿಣಾಂಶ ಹೊಂದಿದ ಹುರುಳಿ ಆರೋಗ್ಯಕ್ಕೂ ಒಳ್ಳೆಯದು...ಈಗ ಹೇಳಿ ಹುರುಳಿ ಬಡವರ ಆಹಾರವೇ ಅಥವಾ ಶ್ರೀಮಂತರ ಆಹಾರವೇ ಎಂದು. ಬೆಲೆಯಲ್ಲಿ ಬಡವರ ಆಹಾರವಾದರೂ ಇದು ಎಲ್ಲರಿಗೂ ಉಪಯೋಗವಾಗುವ ಅತಿ ಶ್ರೀಮಂತ ಆಹಾರ...
ಪಿಜ್ಜಾ, ಬರ್ಗರ್, ಮಂಚೂರಿಯನ್ಸ್ ಗಳು, ನೂಡಲ್ಸ್, ಚೀಸ್, ಕಾಬುಲ್ ಕಡ್ಲೆ, ಶಿಮ್ಲಾ ಮಿರ್ಚಿ, ಮುಂತಾಂತ ವಿದೇಶಿ ಆಹಾರಗಳ ಧಾಳಿಯಿಂದ ಅಪ್ಪಟ ದೇಶಿ ಸೊಗಡಿನ ಹುರುಳಿಯು ತನ್ನ ಮಹತ್ವ ಕಳೆದುಕೊಳ್ಳುತ್ತಿದೆಯೇನೋ ಎನಿಸುತ್ತಿದೆ....

ಹಿಂದೆ ನಮ್ಮೂರಿನಲ್ಲಿ ಸ್ನೇಹಿತನ ಹೋಟಲ್ ಗೆ ಹೋದಾಗ ಆತ ರುಚಿಕರವಾದ ಊಟದ ಆತಿಥ್ಯವನ್ನು ಕೊಟ್ಟ. ನಾನು ನಿಮ್ಮ ಹೋಟಲ್ ನಲ್ಲಿ ರುಚಿಕರವಾದ ಹುರುಳಿಯ ಕಟ್ಟು ಯಾಕೆ ಮಾಡಬಾರದು ಎಂದು ಸಲಹೆ ನೀಡಿದೆ.
"ಜನ ತಿನ್ನಬೇಕಲ್ಲ... ? ಯಾಕೆ ಹೋಟಲ್ ಚನ್ನಾಗಿ ನಡೆಸುವುದು ನಿನಗೆ ಇಷ್ಟವಿಲ್ಲವೇ ..? ಅಂದ.
ಹೋಟೆಲ್ ಗಳು ಎಷ್ಟೇ ಆದರೂ ವ್ಯವಹಾರ ದೃಷ್ಟಿಯಿಂದ ರಚನೆಯಾದಂತವು. ಅಲ್ಲಿ ನಾಲಿಗೆ ರುಚಿ ಮುಖ್ಯವೇ ಹೊರತು ಆರೋಗ್ಯವಲ್ಲ. ಜನ ಬಯಸುವುದನ್ನೇ ಅಲ್ಲಿ ನೀಡಬೇಕು ಎಂದುಕೊಂಡು ನಾನು ಅಷ್ಟಕ್ಕೇ ಸುಮ್ಮನಾದೆ.
ಮೊನ್ನೆ ಮತ್ತೆ ಹಳ್ಳಿಗೆ ಹೋಗಿದ್ದೆ. ಊಟ ಮಾಡಲು ಅದೇ ಹೋಟಲ್ ಗೆ ಹೋದೆ. ಘಮ ಘಮಿಸುವ ಹುರುಳಿ ಕಟ್ಟಿನ ವಾಸನೆ ಮೂಗಿಗೆ ಬಡಿಯಿತು. ಬಿಸಿಯಾದ ಮುದ್ದೆಯೊಂದಿಗೆ ಮೂರು ನಾಲ್ಕು ಪಲ್ಯಗಳನ್ನು ಸೇರಿಸಿ ಬಡಿಸಿದ. ವಾವ್....!!! ರುಚಿ ಅದ್ಭುತವಾಗಿತ್ತು. ನನ್ನಂತೆ ಹುರುಳಿ ಕಟ್ಟನ್ನು ಬಡಿಸಿಕೊಂಡು ಮುದ್ದೆ ಮುರಿಯುತ್ತಿದ್ದ ಹಲವು ಗಿರಾಕಿಗಳನ್ನು ಕಂಡೆ. ಕುದಿಸಿದಷ್ಟು ಅತಿಯಾಗಿ ರುಚಿ ಬಿಟ್ಟುಕೊಳ್ಳುವ ಸಾರು ಎಂದರೆ ಅದು ಹುರುಳಿಯ ಸಾರು ಮಾತ್ರ... ಅದು ನೆನ್ನೆ ಮಾಡಿದ ಸಾರು ಇದ್ದರೆ ಮುಗೀತು.. ಇನ್ನೂ ರುಚಿ ಅದ್ಭುತವಾಗಿ ಬಂದಿರುತ್ತದೆ. ಅಷ್ಟರಲ್ಲಿ ಸ್ನೇಹಿತ ಕಣ್ಣಮುಂದೆ ಪ್ರತ್ಯೆಕ್ಷನಾದ. ಹುರುಳಿಯ ರುಚಿಯನ್ನು ಹೊಗಳುತ್ತಾ ಕುಶಲೋಪರಿಯನ್ನು ವಿಚಾರಿಸಿದೆ. ಡುಮ್ಮಣ್ಣನಾಗಿದ್ದ ನನ್ನ ಸ್ನೇಹಿತ ಸ್ವಲ್ಪ ಕೊಬ್ಬನ್ನೂ ಕರಗಿಸಿದ್ದ..



"ಏನೋ ಸುಬ್ಬಾ ಸ್ವಲ್ಪ ತೆಳ್ಳಗಾಗಿ ಬಿಟ್ಟಿದ್ದೀಯಾ...!!!! ಯೋಗ ಏನಾದ್ರೂ ಮಾಡ್ತಿದ್ದಿಯೇನೋ..."
ಎಂದು ಕೇಳಿದೆ...
ಅದಕ್ಕೆ ಆತ
"ಏನಿಲ್ಲ ಕಣ್ಲೆ..... ವಾರಕ್ಕೊಂದು ಸಾರಿಯಾದರು ಮೊಳಕೆ ಕಟ್ಟಿದ ಹುರುಳಿಯ ಆಹಾರವನ್ನು ತಿಂತೀನಿ.... ಎಲ್ಲಾ ಹುರುಳಿಯ ಮಹಿಮೆ'
ಅಂದ
ಪ್ರಕಾಶ್ ಎನ್ ಜಿಂಗಾಡೆ

Wednesday 17 August 2016

huruli

 ಚಿತ್ರದುರ್ಗದಲ್ಲಿ ಬಿ.ಎಡ್ ಓದುತ್ತಿದ್ದ ಸಮಯ . ಅಲ್ಲಿ ಹಾಸ್ಟಲ್ ನಲ್ಲಿ ಇದ್ದಾಗ ವಿಧ ವಿಧವಾದ ಊಟವೂ ಸಿಗುತ್ತಿತ್ತು. ಅಂದು ಮೈದಾನದಲ್ಲಿ ಸ್ವಲ್ಪ ಹೆಚ್ಚಾಗಿಯೇ ಆಟವಾಡಿದ್ದರಿಂದ ತುಂಬಾ ಹಸಿವಾಗಿತ್ತು. ಹಾಸ್ಟೆಲ್ ನ ಪಾಕಶಾಲೆಯಲ್ಲಿ ಆರಾಮಾಗಿ ಊಟಮಾಡೋಣವೆಂದು ಕುಳಿತುಕೊಂಡೆ . ಬಿಸಿ ಬಿಸಿಯಾದ ಹುರುಳಿ ಕಟ್ಟಿನ ಸಾರಿಗೆ ಮುದ್ದೆ ತಯಾರಾಗಿತ್ತು. ಇನ್ನೇನು ನುಂಗೋಣವೆಂದು ಮುದ್ದೆಯನ್ನು ಮುರಿದುಕೊಂಡೆ, ಎಲ್ಲಿದ್ದನೋ ಏನೋ ಆ ಪಾಪಿ .... ನನ್ನ ಸ್ನೇಹಿತ  ಮಾದೇವ ಮಿಂಚಿನಂತೆ ನನ್ನ ಮುಂದೆ ವಕ್ಕರಿಸಿದ . ನನ್ನ ಊಟದ ತಟ್ಟೆಗೆ ಪಿಳಿ ಪಿಳಿ ಕಣ್ಣುಬಿಡುತ್ತಾ ಏನೋ ತಿನ್ನಬಾರದ್ದನ್ನು ತಿನ್ನುತ್ತಿದ್ದೆನೆ ಎಂಬಂತೆ ಗುರಾಯಿಸಿ ನೋಡತೊಡಗಿದ.

"ಎಂಥಾ ಮಾರಾಯಾ... ಈ ಹುರುಳಿ ಕಾಳಿನ ಸಾರು .... !!! ನಮ್ಮ ಕಡೆ ಇದನ್ನು ದನ ಕರುಗಳಿಗೆ ಹಾಕುವುದುಂಟು ಇದನ್ನು ತಿನ್ನಲು ಕುಳಿತಿರುವೆಯಲ್ಲಾ... ? "

ಆ ಪಾಪಿ ನಗುತ್ತಲೇ ಈ ಮಾತನ್ನು ಹೇಳಿದ. ಮೊದಲೇ ಭಯಂಕರವಾಗಿ ಹಸಿದಿದ್ದ ನನಗೆ ಇವನ ಮಾತನ್ನು ಕೇಳಿ ಹೇಗಾಗಿರಬೇಡ ...? ಮನದಲ್ಲೇ ಊಟಮಾಡಬೇಕೋ ಬೇಡವೋ ಎಂಬ ಅನುಮಾನ...!!! ಅವನ ಮಾತನ್ನು ಧಿಕ್ಕರಿಸಿ ಊಟಕ್ಕೆ ಕುಳಿತುಕೊಂಡರೆ. ಆತನ ದೃಷ್ಟಿಯಲ್ಲಿ ನಾನು ಪಶುವಿಗೆ ಸಮಾನನಾಗಿ ಬಿಡುತ್ತಿದ್ದೆ. ತಿನ್ನದೇ ಇದ್ದರೆ ನನ್ನ ಹೊಟ್ಟೆ ಪೂಜೆ ಹೇಗೆ ಮಾಡಿಕೊಳ್ಳಬೇಕೆಂಬ ಚಿಂತೆ. ಏನು ಮಾಡಬೇಕೆಂದು ತಿಳಿಯದಂತಾಯಿತು. ನನ್ನ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನು ಕಟ್ಟಿದ ಆ ಪಾಪಿಗೆ ಕೊಂದು ಹಾಕುವಷ್ಟು ಕೋಪ ಬಂದಿತು.....

ಹುರುಳಿಕಾಳು ನಿಜವಾಗಿಯೂ ದನ ಕರುಗಳಿಗೆ ಹಾಕುವಷ್ಟು ನಿಷ್ಪ್ರಯೋಜಕವೇ ....?  ಮನುಷ್ಯ ತಿಂದರೆ ಏನಾದರೂ ತೊಂದರೆ ಯಾಗುತ್ತದೆಯೇ ಹೀಗೆ ಹಲವು ಪ್ರಶ್ನೆಗಳು ಮೂಡಿದವು.  ಆ ಪ್ರಶ್ನೆಗಳಿಗೆ ಉತ್ತರ ಹುಡುಕಲಾರಂಭಿಸಿದೆ.

ಹುರುಳಿಯನ್ನು ಇಂಗ್ಲಿಷಿನಲ್ಲಿ "horse gram (ಹಾರ್ಸ್ ಗ್ರ್ಯಾಮ್)" ಎಂದು ಕರೆಯುತ್ತಾರೆ. ವಿದೇಶಗಳಲ್ಲಿ ಇದನ್ನು ಕುದುರೆಗೆ ತಿನ್ನಿಸಲು ಬಳಸುತ್ತಾರಂತೆ. ನಮ್ಮ ದೇಶದಲ್ಲಿ ಹುರುಳಿಯನ್ನು "ಬಡವರ ಆಹಾರ" ವೆಂದು ಕರೆಯುತ್ತಾರೆ. ಕೆಲವು ಕಡೆಗಳಲ್ಲಿ ಇದನ್ನು ದನ ಕರುಳಿಗೂ ಹಾಕುವುದುಂಟು. ಬಡವರು ಇದನ್ನು ಹೆಚ್ಚಾಗಿ ಬಳಸುವುದರಿಂದಲೋ ಅಥವಾ ಹುರುಳಿಯ ಬೆಲೆ ಕಡಿಮೆ ಇರುವುದರಿಂದಲೋ ಈ ಹೆಸರು ಬಂದಿರಬೇಕು.  ಹೀಗೆ ಹುರುಳಿಗೆ " ಬಡವರ ಆಹಾರ" ಎಂದು ಹಣೆ ಪಟ್ಟಿ ಕಟ್ಟುವುದು  ನನಗೆನೋ ಒಪ್ಪಿಕೊಳ್ಳಲು ಆಗುತ್ತಿಲ್ಲ. ಆಹಾರದಲ್ಲಿ ಇದು ಬಡವರದು ಇದು ಶ್ರೀಮಂತರದು ಎಂದು ವರ್ಗೀಕರಿಸುವುದೇ ತಪ್ಪು. ಆಹಾರ ಎಲ್ಲರ ಸ್ವತ್ತೂ ಆಗಿದೆ. 

ಒಮ್ಮೆ ಮೈಸೂರು ಸಂಸ್ಥಾನದ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಸುತ್ತೂರು ಮಠಕ್ಕೆ ಹೋಗಿದ್ದರಂತೆ.  ಸುತ್ತೂರು ಮಠದಲ್ಲಿ ಭಕ್ತರಿಗಾಗಿ ಹಂಡೆಗಟ್ಟಲೆ ಹುರುಳಿಯ ಕಟ್ಟನ್ನು ಬೇಯಿಸುತ್ತಿದ್ದರಂತೆ. ಅಂದು ಮಹಾರಾಜರು ಹುರುಳಿಯ ಕಟ್ಟನ್ನು ಮೊದಲ ಬಾರಿ ಸವಿದರಂತೆ, ಯಾವಾಗ ಮಹಾರಾಜರು ಹುರುಳಿಯ ಸಾರನ್ನು ಸವಿದರೋ ಅಂದಿನಿಂದ ಹುರುಳಿಯ ಅಸಾಧಾರಣ ರುಚಿಗೆ ಮಾರುಹೋಗಿಬಿಟ್ಟರು. ಮಠದ ಅಧಿಕಾರಿಗಳಿಗೆ ಪ್ರತಿದಿನವೂ ಹುರುಳಿಯ ಕಟ್ಟನ್ನು ರಾಜನ ಆಸ್ಥಾನಕ್ಕೆ ತಂದು ಕೊಡಬೇಕೆಂದು ಆದೇಶ ನೀಡಿದರಂತೆ. ಹುರುಳಿಯ ಅಸಾಧಾರಣ ರುಚಿಯಿಂದಲೋ ಅಥವಾ ಹುರುಳಿಯ ಮಹಿಮೆಯಿಂದಲೋ ಏನೋ ಮಹಾರಾಜರು ಸುತ್ತೂರು ಮಠಕ್ಕೆ ಸಾಕಷ್ಟು ಭೂಮಿಯನ್ನು ಕಾಣಿಕೆಯನ್ನಾಗಿ ನೀಡಿದರಂತೆ. ಹೀಗೆ ಮಹಾರಾಜರಿಗೂ ಮೋಡಿ ಮಾಡಿದ್ದ ಈ ಹುರುಳಿಯನ್ನು ಬಡವರ ಆಹಾರ ಎಂದು ಕರೆಯಲು ಸಾಧ್ಯವೇ.....?


ಬಹುಶಃ ೭ನೇ ಶತಮಾನದಲ್ಲಿ, ಮುಹಮ್ಮದ್ ಬಿನ್ ಕಾಸಿಮ್ ಆಕ್ರಮಣ ಹಾಗೊ ಮತಾಂತರ ಶುರು ಮಾಡಿದಾಗೆ, ಇವರ ವಲಸೆ ಶುರುವಾಗಿರಬಹುದು ಎಂದುಕೊಂಡೆ.

Tuesday 16 August 2016

ಬಸ್ಸು

ಬೆಳಗ್ಗೆ ಒಂಬತ್ತು ಆಗಿತ್ತು. ಬಸ್ ಸ್ಟ್ಯಾಂಡ್ ಕಡೆ ತಿರುಗಿ ಬರೋಣ ಬಾ ಎಂದು ಸತ್ಯ ನನ್ನನ್ನು ಬಲವಂತ ಮಾಡುತ್ತಿದ್ದ. ನಾನು ಬರಲ್ಲ ಎಂದರೂ ಸತ್ಯ ನನ್ನನ್ನು ಬಲವಂತವಾಗಿ ಬಸ್ಟ್ಯಾಂಡ್ ಗೆ ಕರೆದುಕೊಂಡು ಹೋದ. ಗಜಾನನ ಬಸ್ಸಿಗಾಗಿ ಸುಮಾರು ಹೊತ್ತು ಕಾದಿದ್ದಾಯಿತು. ಬಸ್ಸು ಸರಿಯಾದ ವೇಳೆಗೆ ಬರದಿದ್ದರಿಂದ ನನಗೆ ಒಳಗೊಳಗೆ ಸತ್ಯನ ಮೇಲೆ  ಕೋಪ ಬರಲಾರಂಬಿಸಿತು. ಏನೋ ಸಬೂಬು ಹೇಳಿ ಮನೆಯ ಕಡೆಗೆ ವಾಪಸ್ಸು ಹೋದರಾಯಿತು ಎಂದು ನಿರ್ಧರಿಸಿಕೊಂಡೆ. ಅಷ್ಟರಲ್ಲೇ ಆ ಡಕೋಟ ಬಸ್ಸು
"ಬುರ್ ರ್ ರ್ ರ್........." 
ಎಂದು ಸೌಂಡು ಮಾಡುತ್ತಾ ತನ್ನ ಜೊತೆ ಜೊತೆಗೆ ಧೂಳನ್ನೆಬ್ಬಿಸಿಕೊಂಡು ನಮ್ಮ ಕಡೆಗೆ ಬರುತ್ತಿತ್ತು.

"ನೋಡೋ ಸತ್ಯ....ಇವತ್ತೇ ಕೊನೆ, ಇನ್ಮೇಲೆ ನನ್ನನ್ನು ಬಸ್ ಸ್ಟಾಂಡ್ ಗೆ ವರೆಗೆ ಕರೆಯಬೇಡ, ಬೇಕಿದ್ದರೆ ನೀನೊಬ್ಬನೆ ಬಂದು ಹೋಗು... ನೀನುಂಟು ಅವಳುಂಟು. ನಿಮ್ಮಿಬ್ಬರ ಮದ್ಯೆ ನಾನ್ಯಾಕೋ... ಶಿವಪೂಜೆಯ ಮದ್ಯೆ ಕರಡಿಯಂತೆ"

ಸುಮಾರು ಹೊತ್ತು ಬಸ್ಸಿಗಾಗಿ ಕಾದ ಸಿಟ್ಟು ನನ್ನನ್ನು ಹಾಗೆ ಹೇಳಿಸಿತು.

"ಸರಿ ಸರಿ ಬಿಡು....!!!  ಬಸ್ ಬಂದಾಯ್ತು ಕ್ಯಾತೆ ತಗೆಯಬೇಡ. ಸ್ವಲ್ಪ ಹೊತ್ತು ಸುಮ್ನಿರು"
ಅಂದ

ಆಗಲೇ ಸತ್ಯನ ದೃಷ್ಠಿ ಬಸ್ಸಿನ ವಿಂಡೋ ಸೀಟ್ ನಲ್ಲಿ ಕುಳಿತಿದ್ದ ಮಾನಸ ಕಡೆಗೆ ನೆಟ್ಟಿತ್ತು. ..... ಅವಳೂ ಸಹ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ಸತ್ಯನ ಇರುವಿಕೆಯನ್ನೇ ನಿರೀಕ್ಷಿಸಿದ್ದಳು. ಬಸ್ಸು ಬಂದು ನಿಂತ ಕೂಡಲೇ ಸತ್ಯ ಅವಳನ್ನೇ ಎವೆ ಇಕ್ಕಿ ನೋಡತೊಡಗಿದ. ಅವಳು ಸತ್ಯನ ಕಡೆಗೊಮ್ಮೆ ನೋಡಿ ಮಿಂಚಿನಂತಹ ಸ್ಮೈಲ್ ಕೊಟ್ಟಳು. ನನಗೆನೋ ಅವಳು ಕೊಟ್ಟ ಆ ಸ್ಮೈಲು ಸತ್ಯನ ಹೃದಯಕ್ಕೇ ಸಿಡಿಲು ಬಡಿದ ತರಹನೇ ಕಂಡಿತು. ಸತ್ಯ ಆ ಸ್ಮೈಲಿಗೆ ಕ್ಲೀನ್ ಬೋಲ್ಡ ಆಗಿ ಹೋದ. ಕರೆಂಟ್ ಹೊಡೆದ ಕಾಗೆ ತರಹ ನಿಂತ. ಸತ್ಯ ತನ್ನ ಹೃದಯವನ್ನು ಹಿಡಿದು ಕೊಂಡು ಅವಳ ಜೊತೆ ಮಾತನಾಡಲು ಬಸ್ಸ್ ಹತ್ತಿಯೇ ಬಿಟ್ಟ. ನಾನು ಒಂಟಿಯಾಗಿ ನಿಂತು ಅವರಿಬ್ಬರಿರು ಹತ್ತಿರುವ ಬಸ್ಸು ಕಣ್ಣಿಂದ ದೂರವಾಗುವವರೆಗೂ ನೋಡುತ್ತಾ ನಿಂತೆ.  ಬಸ್ಸು ಮತ್ತೆ ಧೂಳನ್ನೆಬ್ಬಿಸುತ್ತಾ ಮುಂದೆ ಸಾಗುತ್ತಿತ್ತು.

ಮಾನಸ ಮುದ್ದಾದ ಹುಡುಗಿ. ಹಳ್ಳಿ ಹುಡುಗಿಯಾದರೂ ರೂಪದಲ್ಲಿ ಯಾವ ಅಪ್ಸರೆಗಿಂತಲೂ ಕಡಿಮೆಯಿರಲಿಲ್ಲ. ಅಂದು ಮುಂಜಾನೆಯ ಹೊಂಬಣ್ಣದಲ್ಲಿ ಅವಳ ಮುಖ ತಾಜಾತನದಿಂದ ಕಂಗೊಳಿಸುತ್ತಿತ್ತು. ಕಣ್ಣಂಚಿನಲ್ಲಿ ತೀಡಿದ್ದ ಕಾಡಿಗೆಯಿಂದ ಅವಳ ಕಣ್ಣು ಮೀನಿನಂತೆ ಕಾಣುತ್ತಿತ್ತು. ತಲೆಯ ಮೇಲಿಂದ ಇಳಿಬಿದ್ದ ಮುಂಗುರುಳುಗಳು ಆಕೆಯ ಮುದ್ದಾದ ಕೆನ್ನೆಯನ್ನು ಸ್ಪರ್ಶಿಸುತ್ತಿದ್ದವು. ಮಾನಸಳ ಆ ಸೌಂದರ್ಯ ನೈಜತೆಯಿಂದಲೂ, ಪ್ರಕೃತಿಯ ಸಹಜತೆಯಿಂದಲೂ ಕೂಡಿತ್ತು.ಅವಳ ಸುಂದರ ಸರಳ ಸೌಂದರ್ಯಕ್ಕೆ ಸತ್ಯ ಪ್ರೇಮ ಪೂಜಾರಿಯಾಗಿ ಬಿಟ್ಟಿದ್ದ.

ಮಾನಸ ಕಾಲೇಜ್ ಓದುತ್ತಿದ್ದ ಹುಡುಗಿ. ತನ್ನೂರಲ್ಲಿ ಕಾಲೇಜ್ ಇಲ್ಲವಾದ್ದರಿಂದ ದಿನಾ ಗಜಾನನ ಬಸ್ಸಿನಲ್ಲಿ ತನ್ನೂರಾದ ಗೊರವನಹಳ್ಳಿಯಿಂದ ಹೊನ್ನವಳ್ಳಿಗೆ ಓದಲು ಹೋಗುತ್ತಿದ್ದಳು. ಅದರ ಮಧ್ಯದಲ್ಲಿರುವುದೇ ನಮ್ಮೂರು ಬಸಾಪುರ. ನಮ್ಮ ಸತ್ಯ ಒಂದು ದಿನ ಹೊನ್ನವಳ್ಳಿಗೆ ಹೋಗುವಾಗ ಈ ಮಾನಸಳನ್ನು ನೋಡಿದ್ದನಂತೆ. ಅವಳ ಸುಂದರ ರೂಪ ಕಂಡು ಬಸ್ಸಲ್ಲೇ ಗರ ಬಡಿದವನಂತೆ ನಿಂತು ಕೊಂಡನಂತೆ. ಅಲ್ಲೇ ಪ್ರೇಮ ಲೋಕದ ಕನಸು ಕಾಣುತ್ತಾ ಮದುವೆಯಾದರೆ ಇವಳನ್ನೇ ಎಂದು ನಿರ್ಧರಿಸಿದ್ದನಂತೆ. ಅಂದಿನಿಂದ ಸತ್ಯ ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಬಸ್ ಸ್ಟಾಂಡ್ ಗೆ ಹೋಗೋದು. ಬಸ್ ಹತ್ತುವುದು ಮನಸ್ಸು ತೃಪ್ತಿಯಾಗುವವರೆಗೂ ಮಾನಸ ಜೊತೆ ಮಾತನಾಡುವುದು. ಮತ್ತೆ ಮುಂದಿನ ಸ್ಟಾಪಲ್ಲಿ ಇಳಿಯುವುದು. ಹೀಗೆ ದಿನಾಲೂ ಅಭ್ಯಾಸ ಮಾಡಿಕೊಂಡಿದ್ದ. ಒಂದೊಂದು ಸಲ ಮಾತು ಮುಗಿಯದೇ ಇದ್ದಾಗ ಅಥವಾ ಮಾನಸ ಸುಂದರವಾಗಿ ಕಂಡಾಗ ಸತ್ಯ ಹೊನ್ನವಳ್ಳಿಯ ವರೆಗೂ ಪ್ರಯಾಣ ಮಾಡಿದ ಎಷ್ಟೋ ಉದಾಹರಣೆಗಳಿವೆ. ಮನೆಯಲ್ಲಿ ಅವರಮ್ಮ ಮಗ ಎಲ್ಲಿ ಹೋಗಿದ್ದಾನೆ ಟಿಫನ್ ಮಾಡಲು ಬರಲಿಲ್ಲ ಎಂದು ಕಾಯುತ್ತಿದ್ದರೆ ಸತ್ಯ ಮಾತ್ರ ಮಾನಸಗಾಗಿ ಬಸ್ ಸ್ಟಾಂಡ್ ಕಾಯುತ್ತಿದ್ದ. ಮಾನಸಳ ಸುಂದರ ರೂಪ ನೋಡುವ ಸಲುವಾಗಿಯೇ ಎಷ್ಟೋ ಸಲ ಬೆಳಗಿನ ಉಪಹಾರ ವಿಲ್ಲದೆ ಉಪವಾಸ ಅನುಭವಿಸಿದ್ದೂ ಇದೆ.

ನನಗೇನು ಸತ್ಯನ ಲವ್ ಸ್ಟೋರಿಯಲ್ಲಿ ವಿಶೇಷತೆ ಕಾಣುತ್ತಿರಲಿಲ್ಲ. ಅವನು ಹುಡುಗಿಯರಿಗೆ ಕಾಳು ಹಾಕುವುದರಲ್ಲಿ ನಿಸ್ಸೀಮ. ಅವನ ಮನೆಯ ಹತ್ತಿರದಲ್ಲೆ ಹೈಸ್ಕೂಲ್ ಇತ್ತು.  ಈ ಹೈಸ್ಕೂಲ್ ಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯಿಂದ ಹುಡುಗರು ಹುಡುಗಿಯರು ಓದಲು ಬರುತ್ತಿದ್ದರು. ಮಾನಸ ಸಿಗುವುದಕ್ಕಿಂತ ಮೊದಲು ಹೈಸ್ಕೂಲ್ ನಲ್ಲಿದ್ದ ಸುಂದರ ಹುಡುಗಿಯರನ್ನು ಪಟಾಯಿಸುವುದೇ ಇವನ ಕೆಲಸವಾಗಿತ್ತು. ತನ್ನ ಚಿಕ್ಕಪ್ಪನ ಬುಕ್ ಸ್ಟಾಲ್ ಅಂಗಡಿಯಲ್ಲಿ ಕುಳಿತುಕೊಂಡು ಹುಡುಗಿಯರನ್ನು ಪಟಾಯಿಸಲು ಬಣ್ಣ ಬಣ್ಣದ ಮಾತುಗಳನ್ನಾಡುತ್ತಿದ್ದ. ಅಬ್ಬಾ....!!! ಈ ಹುಡುಗಿಯರೋ......!!! ಅವರೇನು ಕಡಿಮೆಯಿರಲಿಲ್ಲ ಕೆಲವರು ಅವನ ಬಣ್ಣದ ಮಾತಿಗೆ ಮರುಳಾಗಿ ಹೋಗಿದ್ದರು. ನನಗೆ ಗೊತ್ತಿರುವಂತೆ ಅವನು ಹಾಕಿದ ಕಾಳಿಗೆ ನಾಲ್ಕೈದು ಹುಡುಗಿಯರು ಬಲೆಗೆ ಬಿದ್ದಿದ್ದು ಉಂಟು. ಅವರಲ್ಲಿ ನಮ್ಮನೆ ಹತ್ತಿರದ ಹುಡುಗಿ ಶಬಾನಾ ಒಬ್ಬಳು. ಅವಳು ಪ್ರೇಮಿಗಳದಿನದಂದು ಸತ್ಯನಿಗೆ "ಐ ಲವ್ ಯೂ"  ಅಂತ ಬರೆದು ಗ್ರಿಟಿಂಗ್ಸ ಕಾರ್ಡು ಕೊಟ್ಟಿದ್ಲು. ಕೆಇಬಿ ಆಫೀಸ್ ನಲ್ಲಿ ಕ್ಲರ್ಕ್ ಆಗಿದ್ದ ತುಳಜಾ ನಾಯ್ಕನ ಮಗಳು ಲಲಿತ ಸಹ ಅತಿ ಉದ್ದವಾದ ಪ್ರೇಮ ಪತ್ರವನ್ನು ಕಳುಹಿಸಿದ್ದಳು. ಕೋಟೆ ಮಲ್ಲೂರಿನ ಹುಡುಗಿ ಲಕ್ಷ್ಮೀ ಶಾಲೆಯ ಬಿಡುವಿನ ವೇಳೆಯಲ್ಲಿ ಪೆನ್ಸಿಲ್ ರಬ್ಬರ್ ಕೊಳ್ಳುವ ನೆಪದಲ್ಲಿ ಸತ್ಯನನ್ನು ನೋಡಲು ಆಗಾಗ ಬುಕ್ ಸ್ಟಾಲ್ ನಲ್ಲಿ ಹಾಜರಾಗುತ್ತಿದ್ದಳು. ಕಣಿವೆ ಹಳ್ಳದಿಂದ ಬರುತ್ತಿದ್ದ ಹುಡುಗಿ ಶೋಭ ಸತ್ಯನನ್ನು ನೋಡಲೆಂದೇ ಹೈಸ್ಕೂಲ್ ಗೆ ಬರುತ್ತಿದ್ದೇನೆ ಎಂಬಂತೆ ವರ್ತಿಸುತ್ತಿದ್ದಳು. ಇನ್ನು ಎಷ್ಟು ಹುಡುಗಿಯರು ಸತ್ಯನ ಬಣ್ಣದ ಮಾತಿಗೆ ಮರುಳಾಗಿದ್ದರೋ ನನಗೆ ಅಷ್ಟಾಗಿ ತಿಳಿಯದು...

"ಲೋ... ಸತ್ಯ ಯಾಕೋ ಈ ಹುಡುಗಿಯರ ತಲೆ ಕೆಡಿಸ್ತಿಯಾ...?  ಲವ್ವು ಗಿವ್ವು ಅಂತ ಸಿರಿಯಸ್ಸಾಗಿ ತಗೊಂಡ್ರೆ ಏನೋ ಮಾಡ್ತಿಯಾ..? ಪಾಪ ಓದಲು ಬಂದ ಹುಡುಗಿಯರನ್ನ ಈ ತರ ಸತಾಯಿಸಬಾರದು.."

ಅಂತ ಒಂದು ಸಲ ಬುದ್ದಿವಾದ ಹೇಳಿದೆ.
ನನ್ನ ಎದುರಿಗೆ "ಹ್ಞೂಂ.... ಸತಾಯಿಸಲ್ಲ ಬಿಡು" ಎಂದು ಹೇಳುತ್ತಿದ್ದನೇ ಹೊರತು ಹುಡುಗಿಯರನ್ನು ಚುಡಾಯಿಸುವುದು, ಅವರನ್ನು ಪಟಾಯಿಸುವುದು ಮಾತ್ರ ಬಿಟ್ಟಿರಲಿಲ್ಲ. ದಿನ ಬೆಳಗ್ಗೆ ಹೈಸ್ಕೂಲ್ ಗೆ ಬರುವ ಹುಡುಗಿಯರ ದಾರಿಯನ್ನೇ ಕಾಯುತ್ತಾ ನಿಂತಿರುತ್ತಿದ್ದ..

ಸತ್ಯನ ಕಾಲೇಜು ವ್ಯಾಸಂಗ ನಮ್ಮೂರಲ್ಲಿ ಮುಗಿದಾಗ ಉನ್ನತ ವ್ಯಾಸಂಗಕ್ಕೆ ಮೈಸೂರಿಗೆ ಹೋಗಬೇಕಾಗಿ ಬಂತು. ಸರ್ಕಾರಿ ಖೋಟದ ಡಿಪ್ಲಮೋ ಸೀಟು ಮೈಸೂರಿನಲ್ಲಿ ಸಿಕ್ಕಿತ್ತು. ಸತ್ಯನ ಜೊತೆ ಮೈಸೂರಿಗೆ ಹೋಗಲು ಅವರ ಚಿಕ್ಕಪ್ಪ ನನ್ನನ್ನೂ ಕಳುಹಿಸಿದರು. ನಾನು ಸತ್ಯನ ಜೊತೆ ಮೈಸೂರಿಗೆ ಹೋಗಿ ಕಾಲೇಜಿನಲ್ಲಿ  ಅಡ್ಮಿಷನ್ ಮಾಡಿಸಿದೆ. ಉಳಿದುಕೊಳ್ಳಲು ನಮ್ಮೂರಿನ ಕಡೆಯವರೇ ಆದ ಮೂರ್ನಾಲ್ಕು ಹುಡುಗರನ್ನು ಕೌನ್ಸಿಲಿಂಗ್ ನಲ್ಲೇ ಗುರುತಿಸಿ, ಒಟ್ಟಾಗಿ ಸೇರಿಸಿ ಹಾಲ್ ಅಡಿಗೆ ಕೋಣೆ ಇರುವಂತಹ ಚಿಕ್ಕ ಮನೆಯ ವ್ಯವಸ್ಥೆಯನ್ನೂ ಮಾಡಿದ್ದಾಯಿತು. ಹುಡುಗರೆಲ್ಲರೂ ಒಟ್ಟಿಗೆ ಸೇರಿ ಕಷ್ಟ ಪಟ್ಟು ಓದಲಾರಂಬಿಸಿದರು. ಹುಡುಗಿಯರನ್ನು ಪಟಾಯಿಸಲು ಐಲು ಬೈಲಾಗಿ ವರ್ತಿಸುತ್ತಿದ್ದ ನಮ್ಮ ಸತ್ಯನಿಗೆ ಇನ್ನಾದರೂ ಹುಡುಗತನದ ಬುದ್ಧಿ ಹೊರಟು ಹೋಗಿ ಜವಬ್ದಾರಿಯಿಂದ ವರ್ತಿಸುತ್ತಾನೆ ಅಂತ ನಾನು ಊಹಿಸಿದ್ದೆ. ಆದರೆ ನನ್ನ ಊಹೆ ತಪ್ಪಾಗಿ ಹೋಯಿತು. ಊರಲ್ಲಿ ಹುಡುಗಿಯರಿಗೆ ಕಾಳು ಹಾಕಿ ಹಾಕಿ ಪಟಾಯಿಸುವ ಅಭ್ಯಾಸ ಮಾಡಿಕೊಂಡಿದ್ದ ಸತ್ಯ ಅದನ್ನು ಮೈಸೂರಿನಲ್ಲಿಯೂ ಮುಂದುವರೆಸಿದ.
ಸತ್ಯನ ಮೈಸೂರಿ ಪ್ರೇಮ ಪುರಾಣ ನನಗೆ ಗೊತ್ತಾಗಿದ್ದು ಆತ ಓದು ಮುಗಿಸಿ ನಮ್ಮೂರಿಗೆ ವಾಪಸ್ಸು ಬಂದಾಗಲೇ. ಅಲ್ಲಿಯ ವರೆಗೂ ಸತ್ಯ ಮೈಸೂರಿನಲ್ಲಿ ಚನ್ನಾಗಿ ಓದುತ್ತಿದ್ದಾನೆ. ಎಂದೇ ನಾನು ತಿಳಿದು ಕೊಂಡಿದ್ದೆ. ಅವನು ಓದು ಪೂರೈಸಿ ಬಂದ ಕೂಡಲೇ ಅವನಿಗೆ ನೌಕರಿ ಹುಡುಕಿ ಓದಿರುವ ಕನ್ಯೆಯನ್ನೇ ನೋಡಿ ಮದುವೆ ಮಾಡಿದರಾಯಿತು ಎಂದು ಅವನ ಚಿಕ್ಕಪ್ಪ ಯೋಚಿಸುತ್ತಿದ್ದರೆ. ಸತ್ಯ ಊರಿಗೆ ಬಂದು ಮೂರ್ನಾಲ್ಕು ತಿಂಗಳು ಕಳೆದರೂ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದ. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಗೆಳೆಯರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಗರ ಬಡಿದವನಂತೆ ಏನೋ ಯೋಚನೆ ಮಾಡಿಕೊಂಡೇ ಕುಳಿತಿರುತ್ತಿದ್ದ. ಇದನ್ನೆಲ್ಲಾ ಗಮನಿಸಿದ ಅವನ ಚಿಕ್ಕಪ್ಪ ಒಂದು ದಿನ ನಮ್ಮ ಮನೆಗೆ ಬಂದರು.

"ಸತ್ಯ ಮೈಸೂರಿನಿಂದ ವಾಪಾಸ್ಸಾದಾಗಿನಿಂದ ಸರಿಯಾಗಿ ವರ್ತಿಸುತ್ತಿಲ್ಲ. ಸರಿಯಾಗಿ ಊಟಾನೂ ಮಾಡುತ್ತಿಲ್ಲ. ಬಹುಷಃ ಮೈಸೂರಿನಲ್ಲಿ ಏನೋ ಘಟನೆ ನಡೆದಿರಬೇಕು. ಏನಂತ ಸ್ವಲ್ಪ ತಿಳ್ಕೊ ಅವನಿಗೆ ಸರಿಯಾಗಿ ಬುದ್ಧಿವಾದ ಹೇಳು. ಎಷ್ಟೇ ಆದರೂ ತಂದೆ ಇಲ್ಲದ ಹುಡುಗ"

ಅವನ ಚಿಕ್ಕಪ್ಪ ಸ್ವಲ್ಪ ಆತಂಕದಿಂದಲೇ ಹೇಳಿದರು.
ಹಿರಿಯರಾಗಿ ಅವರು ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ನಿರ್ವಹಿಸಲೇ ಬೇಕಿತ್ತು. ಒಂದು ದಿನ ಹೊರಗೆ ಕರೆದುಕೊಂಡು ಆತ್ಮೀಯವಾಗಿ ಮಾತನಾಡಿಸಿ ಅವನ ಮನಸ್ಸಿನಲ್ಲಿರುವ ವಿಚಾರವನ್ನು ಹೊರಗೆ ತಗೆದೆ. ಆಗ ಅವನು ಹೇಳಿದ್ದು "ಸಮ್ರೀನ್ ತಾಜ್' ಎನ್ನು ಸುಂದರ ಹುಡುಗಿಯ ಕತೆಯನ್ನ......

ಸಮ್ರೀನ್ ತಾಜ್ ಮೈಸೂರಿನಲ್ಲಿದ್ದಾಗ ಸಿಕ್ಕ ಹುಡುಗಿ. ಸುಕೋಮಲವಾದ ಸುಂದರವಾದ ಕನ್ಯೆ. ಪ್ರತಿದಿನ ಕಾಲೇಜಿಗೆ ಹೋಗುತ್ತಿದ್ದಳು. ಸತ್ಯನ ಮನೆಯ ಪಕ್ಕದಲ್ಲೇ ಇದ್ದವಳು. ಬಟ್ಟೆ ಒಣಗಿಸಲೆಂದು ಟೆರೇಸ್ ಮೇಲೆ ಬಂದಾಗಲೇ ಸತ್ಯ ಆ ಸುಂದರ ಹುಡುಗಿಯನ್ನು  ಮೊದಲು ನೋಡಿದ್ದು. ಹಳ್ಳಿ ಹುಡುಗಿಯರನ್ನು ನೋಡಿ ಬೆಳೆದ ಸತ್ಯನಿಗೆ ಮೈಸೂರು ಹುಡುಗಿಯ ನಯ ನಾಜೂಕುತನ ಸುಂದರ ರೂಪ ಬಹುವಾಗಿ ಆಕರ್ಷಿಸಿತ್ತು. ಅವಳ ಜಿಂಕೆಯಂತಹ ನಡೆ, ಕೋಗಿಲೆಯಂತಹ ಸುಮಧುರ ಸ್ವರ, ಮಿಂಚಿನಂತೆ ಹೊಳೆಯುತ್ತಿದ್ದ ಆಕೆಯ ಬಟ್ಟಲು ಕಣ್ಣುಗಳು. ಬಳ್ಳಿಯಂತೆ ಬಳುಕುವ ಅವಳ ನಡು. ಅವಳು ಹೆಜ್ಜೆ ಹಾಕಿ ನಡೆಯುತ್ತಿದ್ದರೆ ಅದರ ಗೆಜ್ಜೆಯ ಸದ್ದು ಹೃದಯದೊಳಗೆ ಮಾರ್ಧನಿಸುತ್ತಿದೆಯೇನೋ ಎಂಬಂತಹ ಅಂತರ್ನಾದ. ಇವೆಲ್ಲಾ ರೂಪ ಹೊಂದಿದ್ದ ಸಮ್ರೀನ್ ರೂಪದಲ್ಲಿ ಶ್ರಿಮಂತಿಕೆಯಿಂದ ಕಂಗೊಳಿಸುತ್ತಿದ್ದಳು. ಸಮ್ರೀನ್ ಎದುರಿಗೆ ಬಂದಾಗಲೆಲ್ಲಾ ಸತ್ಯನ ಹೃದಯದಲ್ಲಿ ಅದೆಂತದೋ ಒಲವಗೀತೆ ಹಾಡಿದಂತಾಗುತ್ತಿತ್ತು. ಪದೇ ಪದೇ ತನ್ನ ಹೃದಯದಲ್ಲಿ ಕಚಗುಳಿಯಿಡುತ್ತಿದ್ದ ಆ ನವಿರು ಭಾವನೆ ಸತ್ಯನ ಮನಸಿನಲ್ಲಿ ಬೆಳೆಯುತ್ತಾ ಹೋಯಿತು.....
ಸಮ್ರೀನ್ ಕಾಲೇಜ್ ಗೆ ಹೋಗುವ ಸಮಯ ಮತ್ತು ಸತ್ಯನ ಸಮಯ ಒಂದೇಯಾದ್ದರಿಂದ ಆಗಾಗ ದಾರಿಯಲ್ಲಿಯೂ ಸಿಗುತ್ತಿದ್ದಳು. ಮೊದ ಮೊದಲು ಕಣ್ಣುಗಳಲ್ಲೇ ಮಾತು. ಸನ್ನೆಗಳು. ಆಗಾಗ ಟೆರೆಸ್ ಮೇಲೆ ಮೌನ ಮಾತುಗಳು, ಮನಸುಗಳು ಏನೆನೋ ಮಾತನಾಡಿದಂತೆ ಇಬ್ಬರಿಗೂ ಹಿತ ಅನುಭವವನ್ನು ನೀಡಿದ್ದವು. ಸತ್ಯ ಹೇಗೋ ಅವಳ ತಮ್ಮನ ಗೆಳೆತನ ಮಾಡಿ ಸಮ್ರೀನ್ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲಾರಂಭಿಸಿದ. ಸಮ್ರೀನ್ ಗೂ ಸಹ ಅವಳ ತಮ್ಮನೇ ಮದ್ಯವರ್ತಿಯಾಗಿದ್ದ. ಹೇಗೋ ಇಬ್ಬರ ಪ್ರೇಮ ಸುಭದ್ರವಾಯಿತು. ಅವರ ಪ್ರೇಮ ಸುಭದ್ರವಾಗಲು ಹೆಚ್ಚಿನ ಸಮಯ ತೆಗೆದು ಕೊಂಡಿದ್ದರಿಂದಲೋ ಏನೋ ಆಗಲೇ ಸತ್ಯನ ಓದು ಅಂತಿಮ ಹಂತಕ್ಕೆ ಬಂದಿತ್ತು. ಇನ್ನೇನಿದ್ದರೂ ಸತ್ಯನ ಓದು ಮೈಸೂರಿನಲ್ಲಿ ಬರಿಯ ಒಂದು ತಿಂಗಳು ಮಾತ್ರ ಬಾಕಿ ಉಳಿದಿತ್ತು. ಪರೀಕ್ಷೆಯೆಲ್ಲಾ ಮುಗಿದ ಮೇಲೆ ಗಂಟು ಮೂಟೆ ಕಟ್ಟಿಕೊಂಡು ಬಸಾಪುರಕ್ಕೆ ವಾಪಸ್ಸಾಗಬೇಕಿತ್ತು. ವಾಪಸ್ಸು ಹೋಗುವುದಾದರೂ ಹೇಗೆ.....?  ಸಮ್ರೀನ್ ಪ್ರೀತಿಯನ್ನು ಬಿಟ್ಟು ಬರಬೇಕೇ....? ಅವಳು ಜೊತೆಗೆ ಬರಲು ಒಪ್ಪಿಗೆ ಸೂಚಿಸಿದಳಾದರೂ ಇನ್ನೂ ಹದಿನೆಂಟರ ಹೊಸ್ತಿಲಲ್ಲಿರುವ ಅಪ್ರಾಪ್ತೆ. ಕೋಮು ಗಲಬೆಗಳು ನಡೆಯುತ್ತಿದ್ದ ಆ ಸಂದರ್ಭದಲ್ಲಿ ಸಮ್ರೀನ್ ಳನ್ನು ಊರಿಗೆ ತರುವುದಾದರೂ ಹೇಗೆ...?  ಮನೆಯಲ್ಲಿ ಸಮ್ರೀನ್ ಳನ್ನು ಒಪ್ಪುವರೇ...? ಇನ್ನೂ ಸ್ವಂತ ಕಾಲಲ್ಲಿ ನಿಲ್ಲದೇ, ಕೆಲಸವೇ ಇಲ್ಲದಿರುವಾಗ ಪ್ರೀತಿಯನ್ನು ಹೇಗೆ ಮುನ್ನಡೆಸಬೇಕು...? ಇಷ್ಟೆಲ್ಲಾ ಸಮಸ್ಯೆಯನ್ನು ಹೊತ್ತು ಕೊಂಡು ಊರಿಗೆ ವಾಪಾಸ್ಸಾದ ಸತ್ಯ ಹೇಗಿರಲು ಸಾಧ್ಯ ಹೇಳಿ.... ? ಅವಳದೇ ಯೋಚನೆ... ಮನಸಿನಲ್ಲಿ ಅವಳೇ ತುಂಬಿರುವಾಗ ವಾಸ್ತವದಲ್ಲಿ ನಡೆಯುವ ಪ್ರಾಪಂಚಿಕ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಾದರೂ ಹೇಗೆ...?  ದೇಹವೆಲ್ಲೋ.... ಮನಸ್ಸು ಎಲ್ಲೋ.... ಸರಿಯಾಗಿ ಮಾತಿಲ್ಲ.... ಹೊಟ್ಟೆಗೆ ಊಟವಿಲ್ಲ.... ಮನಸು ಏನೋ ಕಳೆದುಕೊಂಡಿದೆ ಎನ್ನುವಂತಹ ನಶ್ವರ ಭಾವ. ಊರಿಗೆ ವಾಪಸ್ಸು ಬಂದಿದ್ದು ಸತ್ಯನ ದೇಹವೇ ಹೊರತು ಮನಸ್ಸಲ್ಲ.

ಮೈಸೂರಿನಲ್ಲೇ ಇದ್ದ ಅವನ ಮನಸ್ಸನ್ನು  ಅವನಿಗೂ ತಿಳಿಯದಂತೆ ನಿಧಾನವಾಗಿ ವಾಪಸ್ಸು ತರಲಾರಂಭಿಸಿದೆ. ನೌಕರಿ ಹುಡುಕುವಂತೆ ಹೇಳುತ್ತಿದ್ದೆ. ಹಿರಿಯ ಮಗನಾಗಿ ತನ್ನ ಜವಬ್ದಾರಿಯನ್ನು ಸ್ವಲ್ಪ ಸ್ವಲ್ಪವೇ ಗಮನಕ್ಕೆ ತಂದೆ. ಮನೆಯ ಪರಿಸ್ಥಿತಿ ತಾನು ಮಾಡಬೇಕಾದ ಕೆಲಸಗಳು ಎಲ್ಲವೂ ಚರ್ಚಿಸುತ್ತಿದ್ದೆವು. ನಿಧಾನವಾಗಿ ಸಮ್ರೀನ್ ಮನಸ್ಸಿನಿಂದ ದೂರವಾಗಲಾರಂಭಿಸಿದಳು. ಸಮ್ರೀನ್ ಗಿಂತ ದುಡಿಮೆಯ ಅವಶ್ಯಕ ಯಾವಾಗ ಜಾಸ್ತಿಯಾಯಿತೋ ಅವಳು ನಿಧಾನವಾಗಿ ಮನಸ್ಸಿನಿಂದ ದೂರವಾಗಿಯೇ ಬಿಟ್ಟಳು..

ಕೆಲಸ ದುಡಿಮೆ ಅಂತ ಆತ ಹೋರಾಡಿದ್ದರಿಂದಲೋ ಏನೋ ಆತ ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಿದ. ಪ್ರಾರಂಭದಲ್ಲಿ ಕುಂಟುತ್ತಾ ನಡೆಯಿತಾದರೂ ಮೂರ್ನಾಲ್ಕು ತಿಂಗಳಲ್ಲಿ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲಾರಂಭಿಸಿದ. ತಿಂಗಳಿಗೆ ಐವತ್ತು ಅರವತ್ತು ಸಾವಿರ ರೂಪಾಯಿಗಳ ಲಾಭ ಸಿಗುತ್ತಿತ್ತು. ತಾನಂದುಕೊಂಡಂತೆ ಸಂಪಾದನೆಯಾಗುತ್ತಿರುವಾಗ ಸಮ್ರೀನ್ ತಾಜ್ ಮತ್ತೆ ನೆನಪಿಗೆ ಬಂದಳು. ಅದಾಗಲೇ ಕಾಲ ಮಿಂಚಿಯಾಗಿತ್ತು. ಅವಳನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ದುಡಿಮೆ ಹಣ ಅಂತ ಸಿಕ್ಕಾಗ ಪ್ರಿತಿ ಕಣ್ಮರೆಯಾಗಿತ್ತು. ಸಮ್ರೀನ್ ಳನ್ನು ಪಡೆಯುವ ಸಮಯವೂ ಮೀರಿ ಹೋಗಿತ್ತು...

ಒಂದು ದಿನ ಹೊನ್ನವಳ್ಳಿಗೆ ಗಜಾನನ ಬಸ್ಸಿನಲ್ಲಿ ಹೋಗುವಾಗ ಸಮ್ರೀನ್ ತಾಜ್ ನಂತೆಯೇ ಕಾಣುತ್ತಿದ್ದ ಮಾನಸಳನ್ನು ಕಂಡ. ಅವಳಲ್ಲಿ ಸಮ್ರೀನ್ ರೂಪ ಗುಣಗಳೆಲ್ಲಾ ಇದ್ದವು. ಅದೇ ಮಾತು, ಅದೇ ನಡೆ, ಯಾವುದರಲ್ಲಿಯೂ ಸಮ್ರೀನ್ ಳನ್ನು ತೆಗೆದು ಹಾಕುವಂತಿರಲಿಲ್ಲ. ಮನಸ್ಸಿನಲ್ಲಿ ಅವಿರ್ಭವಿಸಿಕೊಂಡಿದ್ದ ಪ್ರೀತಿಯ ಭಾವನೆಗಳು ಮತ್ತೆ ಚಿಗುರೊಡೆಯಲಾರಂಭಿಸಿದ್ದವು. ಮಾನಸಳನ್ನು ಹಿಂಬಾಲಿಸಿದ.  ದಿನಾಲೂ ಅವಳಿಗಾಗಿ ಬಸ್ ಸ್ಟ್ಯಾಂಡ್ ಕಾದ. ಅವಳ ಪ್ರೀತಿ ಪಡೆಯಲು ಕೆಲಸ ವಿಲ್ಲದಿದ್ದರೂ ಹೊನ್ನವಳ್ಳಿಯವರೆಗೂ ಹೋದ. ಅವಳೂ ಒಪ್ಪಿಕೊಂಡಳು. ಸಮ್ರೀನ್ ಗಿಂತಲೂ ಹೆಚ್ಚಾಗಿಯೇ ಹತ್ತಿರವಾದಳು. ಸತ್ಯನಿಗೆ ಈಗ ಯಾವುದೇ ಸಮಸ್ಯೆಗಳಿರಲಿಲ್ಲ.  ಕೈ ತುಂಬಾ ಸಂಪಾದನೆ. ಮದುವೆಯ ವಯಸ್ಸು ಬೇರೆ. ಮನೆಯವರನ್ನು ಎದುರಿಸುವಷ್ಟು ಧೈರ್ಯವೂ ಬಂದಿತ್ತು.  ಜೊತೆಗೆ ತಾನೇ ಇಷ್ಟಪಟ್ಟ ಸುಂದರ ಹುಡುಗಿ, ಮಾನಸಳ ಸಂಪೂರ್ಣ ಒಪ್ಪಿಗೆಯೂ ಇತ್ತು... ಇನ್ನೇನು ವಾಲಗ ಊದಿಸುವುದೊಂದೇ ಬಾಕಿ ಇತ್ತು....

ಅಷ್ಟರಲ್ಲಿ ನನ್ನ ವ್ಯವಹಾರ ಕೈ ಕೊಟ್ಟಿತ್ತು. ನಾನು ಊರು ಬಿಟ್ಟು ಬೆಂಗಳೂರು ಸೇರಿಕೊಂಡೆ. ಅಲ್ಲಿಂದ ಮುಂದೆ ಸತ್ಯ ಮತ್ತು ಮಾನಸಳ ಪ್ರೀತಿ ಏನಾಯಿತೋ ತಿಳಿಯಲಿಲ್ಲ.....
ಸತ್ಯ ಮತ್ತೆ ನನಗೆ ಸಿಕ್ಕಿದ್ದು ಎರಡು ವರ್ಷಗಳ ನಂತರ. ತನ್ನ ವಿವಾಹ ಸಮಾರಂಭದ ಆಹ್ವಾನ ಪತ್ರಿಕೆ ನೀಡಲು ಬೆಂಗಳೂರಿಗೆ ಬಂದಾಗ. ತನ್ನ ವಿವಾಹದ ಮೊದಲ ಪತ್ರಿಕೆ ನಿನಗೆ ಕೊಡುತ್ತಿದ್ದೇನೆ ಬರಲೇ ಬೇಕು ಎಂದು ಆಹ್ವಾನಿಸಿದನು. ಕುತೂಹಲಕ್ಕೆ ಪತ್ರಿಕೆಯನ್ನು ತೆಗೆದು ಓದಲಾರಂಭಿಸಿದೆ. ನನಗೆ ಆಶ್ಚರ್ಯವಾಯಿತು. ವದುವಿನ ಹೆಸರು "ಸಿಂಚನ" ಎಂದು ಬರೆದಿತ್ತು. ಹಾಗಾದರೆ ಮಾನಸ ಏನಾದಳು...? ಅವಳೇನಾದರೂ ಸತ್ಯನನ್ನು ತಿರಸ್ಕರಿಸಿದಳೆ....? ಪ್ರೇಮ ವಿವಾಹಕ್ಕೆ ಮನೆಯವರೇನಾದರೂ ಅಡ್ಡ ಬಂದರೆ....?  ಪ್ರೇಮ ವಿವಾಹದಿಂದಾಗುವ ತೊಂದರೆಗಳಿಗೆ ಸತ್ಯ ಹೆದರಿದನೇ....? ಹೀಗೆ ಹಲವು ಪ್ರಶ್ನೆಗಳು ಮೂಡಿದವು. ಮಾನಸ ವಿಷಯದ ಬಗ್ಗೆ ಸತ್ಯನನ್ನು ಕೇಳಲು ಮನಸ್ಸಾಗಲಿಲ್ಲ. ಸಿಂಚನಾ ಬಾಳ ಸಂಗಾತಿಯಾಗಿ ಆಯ್ಕೆಯಾದ ಮೇಲೆ ಮನಸ ವಿಷಯವನ್ನು ಕೆದಕುವುದು ಸರಿಯೇ..? ಒಂದು ವೇಳೆ ಕೇಳಿದೆ ಎನ್ನಿ ಅದು ಅವನಿಗೆ ಕಹಿ ನೆನಪಾಗಿರಬಹುದು. ಅಥವಾ ಮಾನಸಾಳನ್ನು ಬಿಡಲು ಕಾರಣವಾದ ಆ ಘಟನೆ ಅವನಿಗೆ ನೋವು ತರಬಹುದು. ಎಂದು ಕೊಂಡು ಸುಮ್ಮನಾದೆ.

ಬೆಂಗಳೂರಿನ ಇನ್ನಿತರ ಮನೆಗಳಿಗೆ ಆಹ್ವಾನ ಪತ್ರಿಕೆ ಹಂಚಲು ಸತ್ಯನೊಂದಿಗೆ ಹೊರಟೆ. ಹತ್ತಾರು ಮನೆಗಳಿಗೆ ತಿರುಗಿದ ನಂತರ ಕೋರಮಂಗಲಕ್ಕೆ ಹೊರಟೆವು. ಕೋರಮಂಗಲದಲ್ಲಿರುವವರು ತುಂಬಾ ಬೇಕಾದವರು ಅಲ್ಲಿಗೆ ಹೋಗಲೇ ಬೇಕು ಎಂದು ಸತ್ಯ ಹಲವು ಬಾರಿ ಒತ್ತಿ ಒತ್ತಿ ಹೇಳಿದ್ದ. ಕೋರಮಂಗಲ ತಲುಪಿದ ಕೂಡಲೇ ಸತ್ಯನಷ್ಟೇ ವಯಸ್ಸಾದ ತರುಣನೊಬ್ಬ ಮನೆಗೆ ಕರೆದುಕೊಂಡು ಹೋದ. ಚಿಕ್ಕದಾದ ಮನೆ. ಹಾಲ್ನಲ್ಲಿ ಟಿ.ವಿ. ಯಾರಾದರೂ ಬಂದರೆ ಕುಳಿತುಕೊಳ್ಳಲು ದಿವಾನ್ ಕಾಟನ್ನು ಹಾಕಿದ್ದರು. ನವಜೋಡಿಗಳು ಆಗ ತಾನೆ ಹೊಸದಾಗಿ ಸಂಸಾರ ಹೂಡಿದಂತೆ ಕಂಡಿತು. ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನನಗೊಂದು ಆಶ್ಚರ್ಯ ಕಾದಿತ್ತು. ಆ ತರುಣನ ಜೊತೆಗೆ ಮಾನಸ ಪತ್ನಿಯಂತೆ ನಿಂತಿದ್ದಳು. ಅದೇ ಮಾನಸ.....!!!  ಗಜಾನನ ಬಸ್ಸಿನಲ್ಲಿ ಸತ್ಯನಿಗೆ ದಿನವೂ ಸಿಗುತ್ತಿದ್ದವಳು.

ಅವಳನ್ನು ಗಮನಿಸಿ ನೋಡಿದೆ. ಕೊರಳಲ್ಲಿ ಅರಿಶಿಣ ಕುಂಕುಮದಿಂದ ಶೋಭಿತವಾದ ಮಾಂಗಲ್ಯ ಸರ ಕಾಣಿಸಿತು. ಸಂಸಾರದ ಜಂಜಾಟಗಳಿಗೆ ಸಿಲುಕಿ ಮಾನಸಳ ಮುಖ ಸ್ವಲ್ಪ ಬಾಡಿ ಹೋಗಿತ್ತು. ಅವಳ ಮನಸಿನಲ್ಲಿ ಹಲವು ಗೊಂದಲಗಳು ಇವೆಯೇನೋ ಎಂಬಂತೆ ಮುಖದ ಚರ್ಯೆ  ಪ್ರಶ್ನಾತೀತವಾಗಿ ಕಾಣಲಾರಂಭಿಸಿತು. ಸತ್ಯನನ್ನು ಕಂಡ ಕೂಡಲೇ ಮುಖದಲ್ಲಿ ಮೌನತೆ ಆವರಿಸಿಕೊಂಡಿತು. ಸತ್ಯ ಮದುವೆಗೆ ಬರಲೇ ಬೇಕು ಎಂದು ಆಹ್ವಾನಿಸಿದ. ಮಾನಸ   'ಹ್ಞೂಂ'  ಎಂದು ಹೇಳಿದಳು ನಾವು ಅಲ್ಲಿಂದ ಹೊರಟಾಗ ಮಾನಸ ವಿನಮ್ರತೆಯಿಂದ ಕೈ ಮುಗಿದು ನಿಂತಿದ್ದಳು. ನನ್ನ ಮನಸಿನಲ್ಲಿ ಮೂಡಿದ ಹಲವು ಪ್ರಶ್ನೆಗಳಿಗೆ ಸತ್ಯನಲ್ಲಿ ಮಾತ್ರ ಉತ್ತರವಿತ್ತು.  ಎಲ್ಲಿ ಸತ್ಯ ಮಾನಸಳ ಪ್ರೀತಿಯನ್ನು  ತಿರಸ್ಕರಿಸಿದನೋ ಎಂದೆನಿಸಿತು. ನಾನು ಮಾನಸಳ ವಿಷಯ ಕೇಳಬೇಕು ಎನ್ನುವಷ್ಟರಲ್ಲಿ ಸತ್ಯ ಎಲ್ಲ ಕತೆಯನ್ನು ಹೇಳಲಾರಂಭಿಸಿದ..........

ಪ್ರತಿದಿನವೂ ಮಾನಸಳಿಗಾಗಿ ಗಜಾನನ ಬಸ್ಸಲಿ ಹತ್ತಿಕೊಂಡು ಮನಃಸ್ಪೂರ್ತಿಯಾಗಿ ಮಾತನಾಡಿ ಮುಂದಿನ ಊರಾದ ದೋನಿಯ ಕಟ್ಟೆಯಲ್ಲಿ ಇಳಿಯುತ್ತಿದ್ದೆ. ಜಾಸ್ತಿ ಮಾತು ಇದ್ದಾಗ ಹೊನ್ನವಳ್ಳಿಯ ವರೆಗೂ ಹೋಗಿ ಬರುತ್ತಿದ್ದೆ. ಹೀಗೆ ನಮ್ಮ ಪ್ರೀತಿ ಎರಡು ವರ್ಷದ ವರೆಗೂ ಮುಂದುವರೆಯಿತು. ಇದ್ದಕ್ಕಿದ್ದಂತೆ ಒಂದು ದಿನ ಮಾನಸ ತುಂಬಾ ದುಃಖದಿಂದ ಇದ್ದಳು ಕಾರಣ ಮನೆಯಲ್ಲಿ ಅವಳಿಗೆ ಗಂಡು ನೋಡಿದ್ದರು. ನಿಶ್ಚಿತಾರ್ಥ ಮುಂದಿನ ರವಿವಾರ ನಿಶ್ಚಯವೂ ಆಗಿತ್ತು. ಮಾನಸಳಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಮಗೆ ಓಡಿ ಹೋಗಿ ಮದುವೆಯಾಗುವುದೊಂದೇ ದಾರಿ. ಒಂದು ದಿನ ಅದಕ್ಕೆಂದೇ ನಿರ್ಧರಿಸಿಕೊಂಡೆವು. ಆ ದಿನ ಮಾನಸ ಕಾಲೇಜ್ ಹೋಗುವ ನೆಪದಲ್ಲಿ ಹೊನ್ನವಳ್ಳಿಗೆ ಬಂದಳು. ನಾನೂ ಸಹ ಹೊನ್ನವಳ್ಳಿಗೆ ಹೋಗಿದ್ದೆ. ಮಠದಲ್ಲಿ ಸ್ವಲ್ಪ ಹೊತ್ತು ಕುಳಿತು ಮಾತನಾಡಿಕೊಂಡೆವು.
ಮಾನಸ ಅವರ ಮನೆಯಲ್ಲಿ ಹಿರಿಯ ಮಗಳು. ಚಿಕ್ಕಂದಿನಲ್ಲೇ ತಂದೆ ತೀರಿಕೊಂಡಿದ್ದರು. ಇರುವ ಎರಡು ಎಕರೆ ನೀರಾವರಿ ಜಮೀನಿನಿಂದ ಬರುವ ಆದಾಯದಲ್ಲಿ ಮಕ್ಕಳ ಓದು ಮನೆತನ ಎಲ್ಲಾ ನಡೆಯಬೇಕಿತ್ತು. ಮಾನಸಾಗೆ ಇಬ್ಬರು ಪುಟ್ಟ ತಂಗಿಯರು. ಒಬ್ಬಳು ಎಂಟನೇ ತರಗತಿ ಮತ್ತೊಬ್ಬಳು ಆರನೇ ತರಗತಿಯಲ್ಲಿ ಓದುತ್ತಿದ್ದರು. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಮದುವೆ ಮಾಡಿ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿಸಲು ಮಾನಸ ತಾಯಿ ಹಗಲಿರಳು ಶ್ರಮಿಸುತ್ತಿದ್ದಳು. ಗಂಡು ಮಕ್ಕಳಿಲ್ಲದ ಕುಟುಂಬಕ್ಕೆ ಹಿರಿಯ ಮಗಳ ಜವಾಬ್ದಾರಿ ಹೆಚ್ಚಿರುತ್ತದೆ. ಇಬ್ಬರು ತಂಗಿಯರ ಜವಾಬ್ದಾರಿ ಹೋರಬೇಕಾದ ಅಕ್ಕಳೇ ಮನೆತನದ ಗೌರವವನ್ನು ಧಿಕ್ಕರಿಸಿ ಓಡಿ ಹೋಗಿ ಮದುವೆ ಆಗುವುದು ಸಾಧ್ಯವೇ...?  ಏನೂ ತಪ್ಪು ಮಾಡದ ಆ ಪುಟ್ಟ ತಂಗಿಯರನ್ನು ಯಾರಾದರೂ ಮದುವೆಯಾಗುತ್ತಾರೆಯೇ...? ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂದು ಜನ ಮಾತನಾಡಿಕೊಳ್ಳದೇ ಇರುತ್ತಾರೆಯೇ...?  ತನ್ನ ಈ ಪ್ರೇಮ ವಿವಾಹದಿಂದ ಇಬ್ಬರು ತಂಗಿಯರ ಜೀವನ ಹಾಳಾಗುತ್ತದೆಯೆಂದರೆ ಆ ಮದುವೆ ಯಾರಿಗೆ ಸುಖ ಸಂತೋಷ ನೀಡುತ್ತೆ ಹೇಳಿ....?  ನನ್ನ ಪರಿಸ್ಥಿತಿಯೂ ಸಹ ಮಾನಸಳ ಪರಿಸ್ಥಿತಿಗಿಂತ ಭಿನ್ನವೇನಿರಲಿಲ್ಲ. ನಾನು ಏಳನೇ ತರಗತಿ ಓದುವಾಗ ಅಪ್ಪ ತೀರಿಕೊಂಡರು. ಅಮ್ಮನಿಗೆ ಬರುವ ಪೆನ್ಷನ್ ಹಣದಿಂದ ನಮ್ಮ ಜೀವನ. ಅಪ್ಪ ಸತ್ತಾಗ ಬಂದ ಹಣದಿಂದ ನಾವು ಮೂವರು ಮಕ್ಕಳ ಭವಿಷ್ಯಕ್ಕೆಂದು ಹಣವನ್ನು ಬ್ಯಾಂಕಲ್ಲಿ ಇರಿಸಿದ್ದರು. ಆ ಹಣವೂ ಸಹ ವಿದ್ಯಾಭ್ಯಾಸಕ್ಕೆಂದು ಖಾಲಿಯಾಗಿ ಹೋಗಿತ್ತು. ಈಗ ನಾನು ದುಡಿಮೆಯ ಕಡೆಗೆ ಆದ್ಯತೆ ಕೊಡಬೇಕಿತ್ತು. ತಮ್ಮನ ಭವಿಷ್ಯವೂ ರೂಪಿಸಬೇಕಿತ್ತು. ಇಷ್ಟೆಲ್ಲಾ ಜವಾಬ್ದಾರಿಯಿರುವ ನಾವಿಬ್ಬರೂ ಮನೆತನದ ಗೌರವಗಳನ್ನು ಹರಾಜು ಹಾಕಿ ಓಡಿಹೋಗುವುದು ಸರಿ ಕಾಣಲಿಲ್ಲ. ನಿಜವಾದ ಪ್ರೀತಿ ಎಂದರೆ ಮದುವೆ ಆಗುವುದು ಒಂದೇನಾ....? ಹಾಗೆ ಮಾಡಿದರೆ ಅದು ಸ್ವಾರ್ಥ ಎನಿಸುವುದಿಲ್ಲವೇ... ನಮ್ಮಿಬ್ಬರ ಮದುವೆಯಿಂದ ನಮಗೆ ಅವಲಂಬಿಸಿದ ಇತರ ಸದಸ್ಯರ ಜೀವನ ಹಾಳಾಗುತ್ತೆ ಎನ್ನುವುದಾದರೆ ಅಂತಹ ಮದುವೆ ಯಾಕಾದರೂ ಆಗಬೇಕು...?  ನಿಜವಾದ ಪ್ರೀತಿ ಅಡಗಿರುವುದು ತ್ಯಾಗದಲ್ಲಿ. ನಿಸ್ವಾರ್ಥ ಯೋಚನೆಯಲ್ಲಿ...... ನಿಜವಾದ ಪ್ರೀತಿ ಇರುವುದು ಕರ್ತವ್ಯವನ್ನು ನಿಭಾಯಿಸುವುದರಲ್ಲಿ. ಮನೆತನದ ಗೌರವಗಳನ್ನು ಕಾಪಾಡುವುದರಲ್ಲಿ.... ನಿಜವಾದ ಪ್ರೀತಿ ಅಡಗಿರುವುದು ನಮ್ಮನ್ನು ಹೆತ್ತ ತಂದೆ ತಾಯಿಗಳಿಗೆ ನೋವನ್ನುಂಟು ಮಾಡದೇ ಇರುವುದು......
ತ್ಯಾಗ ಪ್ರೀತಿಯ ಇನ್ನೊಂದು ಮುಖ. ತ್ಯಾಗ ಮತ್ತು ಪ್ರೀತಿ ನಾಣ್ಯದ ಎರಡು ಮುಖಗಳಿದ್ದಂತೆ. ನಾಣ್ಯವನ್ನು ಚಿಮ್ಮಿ ಟಾಸ್ ಹಾಕಿದಾಗ ಕೆಲವರಿಗೆ ಪ್ರೀತಿಯ ಮುಖ ಕಾಣುತ್ತದೆ. ಮತ್ತೆ ಕೆಲವರಿಗೆ ತ್ಯಾಗದ ಮುಖ ಕಾಣುತ್ತದೆ. ಆದರೆ ನಾವು ಎಷ್ಟು ಸಲ ನಾಣ್ಯವನ್ನು ಚಿಮ್ಮಿ ಟಾಸ್ ಹಾಕಿದರೂ ಸಹ  ತ್ಯಾಗದ ಮುಖವೇ ಕಾಣ ಸಿಗುತ್ತಿತ್ತು. ದೇವರು ನಮಗೆ ಪ್ರೀತಿಯ ಮುಖವನ್ನು ತೋರಿಸಲೇ ಇಲ್ಲ. ಕೊನೆಗೆ ಇಬ್ಬರೂ ನಿರ್ಧರಿಸಿ ತ್ಯಾಗವನ್ನೇ ಆರಿಸಿಕೊಂಡೆವು. ಅಂದು ತೆಗೆದುಕೊಂಡು ಹೋಗಿದ್ದ ಇಪ್ಪತ್ತು ಸಾವಿರ ಹಣ ಮಾನಸಳ ವಿವಾಹಕ್ಕೆ ಅನುಕೂಲವಾಗಲೆಂದು ಅವಳ ಕೈಗೆ ನೀಡಿದೆ. ಮಗಳ ಮದುವೆಗೆಂದು ಹಗಲಿರುಳು ಶ್ರಮ ವಹಿಸಿ ಸಾಲ ಸೋಲ ಮಾಡಿಕೊಂಡಿದ್ದ ಅವಳ ತಾಯಿಗೆ ಇದರಿಂದ ಸ್ವಲ್ಪ ಸಹಾಯವೂ ಆಯಿತು. ಅಲ್ಲಿಂದ ನಮ್ಮಿಬ್ಬರ ಸ್ವಾರ್ಥದ ಪ್ರೀತಿ ಮುಕ್ತಾಯವಾಗಿ... ತ್ಯಾಗದ ನಿಜವಾದ ಪ್ರೀತಿ ಪ್ರಾರಂಭವಾಯಿತು. ಅಲ್ಲಿಂದ ಇಬ್ಬರೂ ಸಂಪರ್ಕವನ್ನು ಕಳೆದುಕೊಂಡೆವು.  ಫೋನ್ ಸಹ ಮಾಡುವುದಿಲ್ಲ. ಗಂಡನ ಜೊತೆ ಆಕೆ ಎದುರು ಸಿಕ್ಕಾಗಲೂ ಸಹ ನಾವಿಬ್ಬರು ಮಾತನಾಡುವುದಿಲ್ಲ. ಆದರೆ ಈಗಲೂ ಪ್ರೀತಿಸುತ್ತೇವೆ.  ಸ್ನೇಹಿತರಂತೆ.... ಒಂದೇ ಕುಟುಂಬದಲ್ಲಿ ಬೆಳೆದ ಸದಸ್ಯರಂತೆ..... ತಾಯಿಯ ಮಮತೆಯಂತೆ.... ತಂದೆಯ ಆರೈಕೆಯಂತೆ... ಸೋದರನ ಅಕ್ಕರೆಯಂತೆ.... ಪ್ರೇಮಿಗಳ ಕನಸಿನಂತೆ ಅಷ್ಟೇ..... ಈಗ ಅವಳ್ಯಾರೋ.... ನಾನ್ಯಾರೋ... ಇದು ಇಬ್ಬರೂ ಮಾಡಿಕೊಂಡ ನಿರ್ಧಾರ"

ಅಷ್ಟು ಹೇಳಿ ಸತ್ಯ ಸುಮ್ಮನಾದ.......

ಸತ್ಯನ ಮದುವೆಯಾಗಿ ಒಂದು ತಿಂಗಳಾಗಿತ್ತು. ನಾನು ಸಹ ಊರಲ್ಲೇ ಇದ್ದೆ. ಇಬ್ಬರೂ ಗೌಡನ ಕಟ್ಟೆ ಚಾನಲ್ ಮುಂದೆ ಕಾರಿನಲ್ಲಿ ಕುಳಿತು ಜ್ಯೂಸ್ ಕುಡಿಯುತ್ತಿದ್ದವು. ನಾನು ಬೇಕಂತಲೇ ಮಾನಸ ಈಗ ಹೇಗಿದ್ದಾಳೋ ಎಂದೆ...
"ಯಾರವಳು...?"
ನನ್ನನ್ನೇ ಪ್ರಶ್ನಿಸಿದ
"ಸಿಂಚನಾ ಹೇಗಿದ್ದಾಳೋ...?"  ಎಂದೆ
"ನಿಜವಾಗಿಯೂ ನಾನು ಪುಣ್ಯವಂತ ಅವಳಂತವರು ಹೆಂಡತಿಯಾಗಿ ಸಿಗುವುದು ಲಕ್ಷಕ್ಕೊಬ್ಬರಿಗೆ ಮಾತ್ರ. ನನಗೆ, ನಮ್ಮ ಮನೆಯ ಪರಿಸರಕ್ಕೆ ಚನ್ನಾಗಿ ಹೊಂದಿಕೊಂಡಿದ್ದಾಳೆ. ನಮ್ಮ ತಂದೆ ತಾಯಿಯರು ಮಾಡಿದ ಪುಣ್ಯದ ಫಲದಿಂದಲೋ ಏನೋ ನನಗೆ ಒಳ್ಳೆಯ ಹೆಂಡತಿ ಸಿಕ್ಕಿದ್ದಾಳೆ"

ಸತ್ಯ ಸಂತೋಷದಿಂದ ಹೇಳಿದ...

ನಾನು ಸತ್ಯನ ಮಾತನ್ನು ಕೇಳಿ ಇನ್ನೊಂದು ಸಿಪ್ ಜ್ಯೂಸ್ ಹೀರಲಾರಂಬಿಸಿದೆ. ಅಷ್ಟರಲ್ಲಿ ಗಜಾನನ ಬಸ್ಸು ಜೋರಾಗಿ ಬರುತ್ತಿತ್ತು. ಈ ಸಲ ಬಸ್ಸು ಧೂಳನ್ನೆಬ್ಬಿಸಲಿಲ್ಲ. ಏಕೆಂದರೆ ಆ ರಸ್ತೆಯಲ್ಲಿ ಹೊಸದಾಗಿ ಟಾರ್ ಹಾಕಿದ್ದರು......