Friday 25 November 2016

ಬರಿಯ ಜಲವಲ್ಲ (ಕವನ)

ಬರಿಯ ಜಲವಲ್ಲ

ಚರಾಚರಗಳಿಗೆ ಜೀವಾಮೃತವಿದು
ನಿತ್ಯ ಬಯಕೆಗೆ ಜೀವ ಹನಿಯಿದು
ಹಸಿರು ಗಿಡ ನೆಲ ಉಸಿರು ಜೀವಜಾಲ
ಗಿರಿ ವನ ನಭ ಶಿಖರ ಮುಕುಟ ಮಾಲ
ಭೂ ಮಂಡಲ ಸುತ್ತಿ ಹರಿವ ನಾಗಿನಿ
ಸಲಿಲ ಜಲ ಹಾಲ ಜೀವ ಸಂಜೀವಿನಿ
ಬರಿಯ ಜಲವಿದಲ್ಲ....

ಅಗಸ್ತ್ಯ ಕಮಂಡಲವಾರಿ ಕಾವೇರಿ
ಶಿವನ ಜಟಧಾರಿ ಗಂಗೇಯಿ
ಬ್ರಹ್ಮಪುತ್ರ ಸಿಂಧು ಸರಸ್ವತಿ ತಾಯಿ
ಕೃಷ್ಣ ಗೋಧಾವರಿ ಭೀಮಾರತಿ ಮಾಯಿ
ಹೊಳೆಯಾಗಿ ಹೊಳೆದೊಳೆದು
ಜೀವ ರಸ ತಣಿ ತಣಿದು
ಬರಿಯ ಜಲವಿದಲ್ಲ...

ಬೆಳೆ ನೆಲೆ ನಾಗರೀಕತೆಗೆ ನಾಡಿಯು
ಖಗ ಮಿಕ ನರ ನಾಡಿಗೆ ನಾಂದಿಯು
ಹರಪ್ಪ ಮೆಹೆಂಜೋದಾರೊ ಸಂಸ್ಕೃತಿ
ಗ್ರೀಕ್ ಈಜಿಫ್ಟ್ ರೋಮನ್ನರ ಉನ್ನತಿ
ಬೆಳಸಿ ಹರಸಿ ತೋರಿಸಿದವೋ
ನಶಿಸಿ ಕೆಡಿಸಿ ಕಲಿಸಿದವೋ
ಬರಿಯ ಜಲವಿದಲ್ಲ...

ಮಾತೆಯಾಗಿ ಸಲುಹಿದಳೋ
ಬೆಳೆಸಿ ನಲಿಸಿ ತುತ್ತ ಅನ್ನ ನೀಡಿ
ಮೃತ್ಯುವಾಗಿ ಹರಿದಳೋ
ನರನ ಅಟ್ಟಹಾಸ ದಮನ ಮಾಡಿ
ಆರಿಯಬೇಕು ಜಲ ಸಂಸ್ಕೃತಿ ಇತಿಹಾಸವ
ಮಾಡಬೇಕು ನಾವು ಜಲ ರಕ್ಷಣೆ ಕಾರ್ಯವ
ಬರಿಯ ಜಲವಿದಲ್ಲ...

                           - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment