Friday 30 December 2016

ಕಣ್ಣುಗಳು (ಕವನ)

ಕಾಡುತಿಹವು ಅವಳ ಕಣ್ಣುಗಳು
ಏನೇನೋ ಭಾಷೆಗಳು ಅದೆಂಥವೋ ಸನ್ನೆಗಳು
ಏನೇನೋ ಹೇಳಲು ಹೊರಟಿಹವು
ಪ್ರಶ್ನಾರ್ಥಕ ಚಿಹ್ನೆಯು ಅತಿಯಾಗಿ ಸಂಚಯಿಸಿ
ಅರ್ಥವಾಗದ ಗಣಿತದಂತೆ
ಈಗಲೂ ನನ್ನನು ಪೆದ್ದನಾಗಿಪವು....

ಸೋತು ಹೋಗಿಹೆನು ಕಣ್ಣ ಸೊಬಗಿಗೆ
ಏನೋ ಆಕರ್ಷಣೆ ಅದೆಂಥದೋ ಮೋಡಿ
ನೂರಾರು ಭಾವಗಳು ಕಲಿಯದ ಮಾತುಗಳು
ಕಣ್ಣಲ್ಲೇ ತೋರಿಹಳು...
ನಲಿಯುವಳು ನುಲಿಯುವಳು
ಅರ್ಥವಾಗದ ಹಾಡಾಗಿ ನಿಂತಿಹಳು

ಯಾವ ಶಾಲೆಯೂ ಕಲಿಸಲಿಲ್ಲ
ಯಾವ ಗುರುವೂ ತಿಳಿಸಲಿಲ್ಲ
ಪುಸ್ತಕವೂ ಮೀರಿ ನಿಂತಿಹ ನೋಟವದು...
ನಾಲಿಗೆಯ ತಿರುಗಿಸಿ ನನ್ನನು ಶಪಿಸಿ
ಹುಂಬನೆಂಬ ಬಿರುದನು ಪಾಲಿಸಿ
ಸೊಂಟವ ಕೊಂಕಿಸಿ ಕೋಪದಿ ಮುಂದೆ ಸಾಗಿಹಳು.

ಪ್ರಕಾಶ್ ಎನ್ ಜಿಂಗಾಡೆ.

Thursday 15 December 2016

ಕಾಣಿಕೆ

ಕಾಣಿಕೆ



ಶ್ರೀ ಶ್ರೀ ಶ್ರೀ ಸಾನಂದ ಶಾಸ್ತ್ರಿಗಳು ಜ್ಯೋತಿಷ್ಯದಲ್ಲಿ ಪ್ರಖಂಡ ಪಂಡಿತರು. ಅವರ ಶಾಸ್ತ್ರ ವಾಕ್ ಪ್ರಖರತೆಗೆ ಭವಿಷ್ಯದ ಸಂಗತಿಗಳೆಲ್ಲವೂ ಹೆದರಿ ಬೆದರಿ ಸೋತು ಸುಣ್ಣವಾಗಿಬಿಡುತ್ತವೆಯೆಂದು ಜನ ಮಾತನಾಡಿಕೊಳ್ಳುವುದುಂಟು. ಹಲವು ಜನರು ತಮ್ಮ ಮನದ ನೋವಿಗೆ ಶಾಶ್ವತ ಪರಿಹಾರವನ್ನು ಸಾನಂದ ಶಾಸ್ತ್ರಿಗಳಲ್ಲಿ ಕಂಡುಕೊಂಡಿದ್ದುಂಟು. ಒಮ್ಮೆ ಶಾಸ್ತ್ರಿಗಳು ಭವಿಷ್ಯ ನುಡಿದರೆಂದರೆ ಮುಗೀತು ಅದು ಸುಳ್ಳಾಗುವ ಮಾತೇ ಇಲ್ಲ. ಶಾಸ್ತ್ರಿಗಳ ಪಾಂಡಿತ್ಯದ ಜನಪ್ರಿಯತೆಯನ್ನು ಕೇಳಿದ ನನಗೆ ಶಾಸ್ತ್ರಿಗಳ ಹತ್ತಿರ ಹೋಗಲೇಬೇಕಾದ ಪ್ರಸಂಗವೊಂದು ಒದಗಿ ಬಂತು...
ಬಡತನದ ಬೇಗೆಯಿಂದ ಬೆಂದ ನನಗೆ ಶ್ರೀಮಂತನಾಗಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ವ್ಯಪಾರ ವ್ಯವಹಾರದಲ್ಲಿ ಪ್ರಗತಿ ಕಾಣಬೇಕೆಂಬ ಅಪೇಕ್ಷೆ ಅತಿಯಾಗಿತ್ತು. ನಾನೂ ಸಹ  ಒಂದು ಕೈ ನೋಡಿಯೇ ಬಿಡೋಣವೆಂದು ಸಾನಂದ ಶಾಸ್ತ್ರಿಗಳ ಬಳಿ ಹೋದೆ. ಶಾಸ್ತ್ರಿಗಳು ಪಟ್ಟೆ ನಾಮದ ಗಂಧವನ್ನು ಹಚ್ಚಿಕೊಂಡು ಹುಲಿ ಚರ್ಮದ ಮೇಲೆ ಆಸೀನರಾಗಿ ಕುಳಿತ್ತಿದ್ದರು. ಶಾಸ್ತ್ರಿಗಳ ಮುಖವು ದೈವ ಸ್ವರೂಪದ ಗಂಭೀರತೆಯನ್ನು ಪಡೆದಿತ್ತು.

ನನ್ನ ಆಸೆಯನ್ನು ಅವರಿಗೆ ಮನ ಮುಟ್ಟುವಂತೆ ಹೇಳಿಕೊಂಡೆ. ಶಾಸ್ತ್ರಿಗಳು ಕವಡೆ ಹಾಕಿ ನನ್ನ ಸಮಸ್ಯೆಗೆ ಪರಿಹಾರ ಸೂಚಿಸಿದರು. ತಿಮ್ಮಪ್ಪನ ಹುಂಡಿಗೆ ಸಾಧ್ಯವಾದಷ್ಟು ಕಾಣಿಕೆ ಸಲ್ಲಿಸು ನಿನಗೆ ಒಳ್ಳೆ ಫಲ ಲಭಿಸುತ್ತದೆಯೆಂದರು. ಎಷ್ಟು ಉದಾರಿಯಾಗುತ್ತಿಯೋ ಅಷ್ಟು ಸಂಪತ್ತನ್ನು ನೀನು ಕಾಣುತ್ತೀಯ ಎಂದರು...
ಅವರು ಹೇಳಿದಂತೆ ನಡೆದು ಕೊಳ್ಳಲು ಮನಸ್ಸು ಹಾತೊರೆಯುತ್ತಿತ್ತು. ಇದ್ದ ಬದ್ದ ಹಣ ಕೂಡಿ ಹಾಕಿ ತಿಮ್ಮಪ್ಪನ ಹುಂಡಿಗೆ ಹಾಕಲು ಕಾಣಿಕೆಯನ್ನೆಲ್ಲಾ ಸಂಗ್ರಹಿಸಿದೆ. ಸಾವಿರಾರು ರೂಪಾಯಿಗಳಷ್ಟು ಹಣವನ್ನು  ಹುಂಡಿಗೆ ಹಾಕಿದ್ದಾಯಿತು. ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. ಶ್ರೀಮಂತನಾಗಬೇಕೆಂಬ ಹಂಬಲ ನನ್ನಲ್ಲಿ ಹೆಚ್ಚಾಗಿತ್ತು.  ನಾನು ಬಹಳ ಉದಾರತೆಯನ್ನು ಪ್ರದರ್ಶಿಸಿ ಕೈಯಲ್ಲಿದ್ದ ಬಂಗಾರದ ಬ್ರಾಸ್ಲೆಟ್ಟನ್ನು ಸಹ ಹುಂಡಿಗೆ ಹಾಕಿಬಿಟ್ಟೆ.  ತುಂಬಾ ಉದಾರತೆ ತೋರಿದ ಹೆಮ್ಮೆಯು ಒಂದು ಕ್ಷಣ ನನ್ನ ಮನಸ್ಸನ್ನು ಸಂತೋಷವನ್ನಾಗಿರಿಸಿತು.

ದೇವರಿಗೆ ಹಣ ಹಾಕಿದ್ದೆನೆಂಬ ಕಾರಣಕ್ಕಾಗಿ ಮಾರನೆಯ ದಿನದಿಂದಲೇ ಪ್ರತಿಫಲವನ್ನು ನಿರೀಕ್ಷೆ ಮಾಡಲಾರಂಭಿಸಿದೆ. ವ್ಯಾಪಾರ ವ್ಯವಹಾರ ಪ್ರಗತಿಯಾಗುವ ಕನಸು ಕಂಡೆ. ಬೀದಿಯಲ್ಲಿ ಜನರ ಗುಂಪೇನಾದರೂ ಬರುತ್ತಿದ್ದರೆ ಅವರು ನಮ್ಮ ಅಂಗಡಿಗೇ ಬರಬಹುದು ಸಾವಿರಾರು ರೂಪಾಯಿಗಳ ವ್ಯಾಪಾರ ಮಾಡಬಹುದು ಎಂಬ ಆಸೆಯಿಂದ ಅವರತ್ತ ನೋಡುತ್ತಿದ್ದೆ. ಅಂತಹ ಹಲವಾರು ಜನರ  ಗುಂಪುಗಳು ನಮ್ಮ ಅಂಗಡಿಯ ಮುಂದೆ ಹಾದು ಹೋದರೇ ಹೊರತು ಯಾರೂ ಅಂಗಡಿಯನ್ನು ಮೂಸಿಯೂ ನೋಡಲಿಲ್ಲ. ಮೊದಲಿಗಿಂತಲೂ ವ್ಯವಹಾರ ಕಡಿಮೆಯಾಗಲಾರಂಭಿಸಿತು. ಪ್ರಖರ ಜ್ಯೋತಿಷ್ಯ ಶಿರೋಮಣಿ ಸಾನಂದ ಶಾಸ್ತ್ರಿಗಳು ಹೇಳಿದ ಯಾವ ಮಾತುಗಳೂ ನಿಜವಾಗಲಿಲ್ಲ. ಅದರಿಂದ ಯಾವ ಫಲವೂ ನನಗೆ ದಕ್ಕದಂತಾಯಿತು...

ಬೇಸರದಿಂದ ತಿಮ್ಮಪ್ಪನನ್ನು ಶಪಿಸುತ್ತಲೇ ಮನೆಯ ಕಡೆಗೆ ಹೆಜ್ಜೆ ಹಾಕಿದೆ.  ನಂಬಿದ ದೇವರು ತಿಮ್ಮಪ್ಪನು ನನ್ನ ಆಸೆ ಈಡೇರಿಸದಿದ್ದಕ್ಕೆ ತುಂಬಾ ಕೋಪ ಬಂದಿತು. ದಾರಿಯಲ್ಲಿ ಸಿಕ್ಕ ದೇವಸ್ಥಾನದ ಕಡೆಗೆ ಮುಖ ತಿರುಗಿಸಿಯೂ ನೋಡಲಿಲ್ಲ. ಮನೆಗೆ ಬರುವಷ್ಟರಲ್ಲಿ ಊಟದ ಸಮಯ ಆಗಲೇ ಮೀರಿತ್ತು. ಮನದಲ್ಲಿ ಅದೇ ನೋವು ಮತ್ತೆ ಮತ್ತೆ ಕಾಡುತ್ತಿತ್ತು. ಮನೆಗೆ ಬಂದಾಗ ಮಕ್ಕಳು ಹಾಲ್ ನಲ್ಲಿ ಟಿ.ವಿ. ನೋಡುತ್ತಾ ಕುಳಿತ್ತಿದ್ದರು. ಊಟ ಮಾಡಿ ಹಾಗೇ ಮೆತ್ತನೆಯ ಸೋಫಾದ ಮೇಲೆ ಒರಗಿದೆ. ನಿದ್ದೆಯ ಮಂಪರು ಆವರಿಸಿತು. ಕಣ್ಣಿಗೆ ಮಬ್ಬು ಆವರಿಸಿದಂತಾಯಿತು....ಕಣ್ಣುಗಳು ಮಂಜಾದವು.  ಬೆಳ್ಳನೆಯ ಮೋಡಗಳ ರಾಶಿ ಕಣ್ಣ ಮುಂದೆ ಕಂಡಂತಾಯಿತು. ಬಿಳಿಯ ಬಣ್ಣದ ಹೊಗೆ ಅಲೆಯಂತೆ ತೇಲುತ್ತಿದ್ದವು. ಕಣ್ಣು ತೆರದು ನೋಡಿದೆ. ಬಿಳಿ ಮೋಡದ ಮದ್ಯೆ ವೈಭವೋ ಪೇರಿತವಾದ ಸ್ವರ್ಗವೊಂದು ಗೋಚರಿಸಿತು. ಅಲ್ಲಿದ್ದ ಆಸ್ಥಾನ ಸಂಪೂರ್ಣವಾಗಿ ಚಿನ್ನದಿಂದ ತಯಾರಾಗಿತ್ತು. ಅದರ ಪ್ರತಿಬಿಂಬದ ಹೊಂಗಿರಣಗಳು ಕಣ್ಣುಗಳನ್ನು ಕೋರೈಸಿದವು. ಚಿನ್ನದ ಆಸ್ಥಾನದ ಮಧ್ಯೆ
ಎಲ್ಲಾ ದೇವಾನುದೇವತೆಗಳು ಸಭೆ ಸೇರಿದ್ದರು.

ಅರೆ......!!!! ಅಲ್ಲಿ ನಾನೂ ನಿಂತಿದ್ದೆ.

ತಿಮ್ಮಪ್ಪ ವೆಂಕಟೇಶ್ವರ ಸ್ವಾಮಿಯ ಮುಂದೆ ನಾನು ತಲೆ ತಗ್ಗಿಸಿ ಕೊಂಡಿದ್ದೆ. ನಾನು ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿದ್ದರೂ ನನ್ನ ಸಮಸ್ಯೆ ಪರಿಹಾರವಾಗದಿದ್ದರ ಬಗ್ಗೆ ಆ ಸಭೆಯಲ್ಲಿ  ಚರ್ಚೆ ನಡೆಯುತ್ತಿತ್ತು.

"ನೀನು ತಿಮ್ಮಪ್ಪ ಸ್ವಾಮಿಗೆ ಕಾಣಿಕೆಯನ್ನು ಸಲ್ಲಿಸಿ, ನಿನ್ನ ಮನದಾಸೆ ಈಡೇರದಿದ್ದಕ್ಕೆ ನೀನು ತಿಮ್ಮಪ್ಪನನ್ನೇ ಶಪಿಸಿದೆಯಾ...? ಮೂರ್ಖ ಮಾನವ"

ಶಶಿಭೂಷಣ ಶಂಕರನು ಕೋಪದಿಂದ ನೋಡುತ್ತಾ  ನನ್ನನ್ನು ಪ್ರಶ್ನಿಸಿದರು.

"ಹೌದು... ಸ್ವಾಮಿ ತಿಮ್ಮಪ್ಪನನ್ನು ಶಪಿಸಿದ್ದು ನಿಜ, ನನ್ನ ಬಡತನದ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಲಿ.  ನಾನು ಬೆವರು ಸುರಿಸಿ ದುಡಿದ ಸಾವಿರಾರು ರೂಪಾಯಿ ಹಣವನ್ನು ತಿಮ್ಮಪ್ಪನ ಹುಂಡಿಗೆ  ಅರ್ಪಿಸಿದ್ದೇನೆ. ಮನೆತನದ ನಿರ್ವಹಣೆಯ ಸಮಸ್ಯೆ ಎಷ್ಟೇ ಇದ್ದರೂ ಸಹ ನಾನು ತಿಮ್ಮಪ್ಪನಿಗೆ ಕಡಿಮೆಯೇನೂ ಮಾಡಲಿಲ್ಲ. ನಾನು ನಂಬಿದ ದೇವರು ನನಗೆ ವರ ನೀಡಲಿಲ್ಲವೆಂದರೆ ಶಪಿಸುವುದರಲ್ಲಿ ತಪ್ಪೇನಿದೆ"

ನಾನು ಶಂಕರನಿಗೆ ಧೈರ್ಯದಿಂದಲೇ ಉತ್ತರಿಸಿದೆ.
ನನ್ನ ಬಳಿಯಲ್ಲಿ ನಿಂತಿದ್ದ ತಿಮ್ಮಪ್ಪ ನನ್ನನ್ನು ನೋಡಿ ಕುಪಿತರಾದರು...

"ಏನು....!!!  ಆ ನಿನ್ನ ಮಾನವ ನಿರ್ಮಿತ ಹಣವನ್ನು ತೆಗೆದುಕೊಂಡು ನಾನೇನು ಮಾಡಲಿ. ನಿನ್ನ  ವಿನಿಮಯದ ಆ ಹಣವು ಒಂದು ಯಕಶ್ಚಿತ್ ವಸ್ತು. ಅದನ್ನು ನಿನ್ನ ಬಳಿಯೇ ಇಟ್ಟುಕೋ. ನಿನಗೇ ಉಪಯೋಗವಾದೀತು.... ಅದು ನಿನ್ನ ಬೆವರಿನ ಹನಿ ಎಂದ ಮಾತ್ರಕ್ಕೆ ನೀನು ಆಸೆಪಟ್ಟಂತೆ ನೆರವೇರಿಸಲು ಸಾಧ್ಯವೇ..? "

ತಿಮ್ಮಪ್ಪನ ಮಾತು ನನ್ನ ಪರವಾಗಿಲ್ಲದುದಕ್ಕೆ  ನನಗೆ ಮತ್ತೆ ಬೇಜಾರಾಯಿತು.

"ಏನು....!!??  ನಮ್ಮ ಹಣ ಯಕಶ್ಚಿತ್ ವಿನಿಮಯದ ವಸ್ತುವೇ...? "

ನಾನು ಆಶ್ಚರ್ಯದಿಂದ ಕೇಳಿದೆ

ಆಗ ಶಂಕರನು ಮಧ್ಯೆ ಪ್ರವೇಶಿಸಿ 

"ಹೌದು ಮಗು... ಮಾನವ ನಿರ್ಮಿತ ಹಣಕ್ಕೆ ನಮ್ಮಲ್ಲಿ ಯಾವ ಬೆಲೆಯೂ ಇಲ್ಲ. ಅದು ನೀವು ವಿನಿಮಯಕ್ಕಾಗಿ ಮಾಡಿಕೊಂಡ ವಸ್ತು ಅಷ್ಟೆ. ಇಂತಹ ಉಪಯೋಗಕ್ಕೆ ಬಾರದ  ವಸ್ತುವನ್ನು ದೇವರಿಗೆ ಅರ್ಪಿಸಿದ್ದೇನೆ ಎಂಬ ನಿನ್ನ ಮಾತು ಮೂರ್ಖತನದ್ದು. ಲಂಚ ಕೊಟ್ಟು ಕಾರ್ಯ ಸಾಧನೆಯ ಮಾತು ನಿಮ್ಮ ಮಾನವರಿಗಷ್ಟೇ ಸೀಮಿತವಾಗಿರಲಿ. ಹಣ ಆಮಿಷದ ವಿಷಯಗಳು ನಮ್ಮ ಪರಿಧಿಯಿಂದ ದೂರವಾಗಿಯೇ ಇವೆ. ನಿಮ್ಮ ಬದುಕಿಗೆ ರೂಪಿಸಿಕೊಂಡ ವಿನಿಮಯದ ವಸ್ತುಗಳು ಇಲ್ಲಿ ಮೌಲ್ಯವನ್ನು ಕಳೆದುಕೊಂಡು ಕೇವಲ ಒಂದು ವಸ್ತುವಿನಂತೆ ಕಾಣುತ್ತವೆಯಷ್ಟೆ. ಪಾಪ ಪುಣ್ಯಗಳ ಲೆಕ್ಕಾಚಾರ ಮಾಡುವ ಈ ಸ್ಥಳದಲ್ಲಿ ನೀವು ಹಣವೆಂದು ಕರೆಯುವ ಆ ವಸ್ತುವನ್ನು ನಾವು ಎಂದಿಗೂ ಲೆಕ್ಕಾಚಾರ ಮಾಡುವುದಿಲ್ಲ. ನೀವು ಸಲ್ಲಿಸಿದ ಆ ಕಾಣಿಕೆಗೆ ಅನುಗುಣವಾಗಿ ಪ್ರತಿಫಲವನ್ನು ಆಶಿರ್ವದಿಸುವ ಯಾವ ಮಾನದಂಡಗಳೂ ನಮ್ಮಲ್ಲಿ ಇಲ್ಲ. ಇನ್ನು ಹೆಚ್ಚಾಗಿ ಹೇಳಬೇಕೆಂದರೆ ಅಂತಹ ವಸ್ತುವಿಗೆ ನಮ್ಮಲ್ಲಿ ಜಾಗವೇ ಇಲ್ಲ".

ಶಂಕರನು ಸಮಾಧಾನದಿಂದಲೇ ಹೇಳಿದರು

"ಹಾಗದರೆ ದೇವರಿಗೆ ಸಂಪತ್ತನ್ನು ಅರ್ಪಿಸುವುದು ತಪ್ಪೇ..?"
ನಾನು ಗೊಂದಲದಿಂದ ಶಂಕರನನ್ನು ಪ್ರಶ್ನಿಸಿದೆ
"ದೇವರಿಗೆ ಸಂಪತ್ತನ್ನು ಅರ್ಪಿಸುವುದು ತಪ್ಪಲ್ಲ.. ಆದರೆ ನೀನು ಯಾವುದನ್ನು ಸಂಪತ್ತು ಎಂದು ತಿಳಿದುಕೊಂಡಿದ್ದೆಯೋ ಅದು ಸಂಪತ್ತೇ ಅಲ್ಲ. ಸಂಪತ್ತು ಎಂದರೆ ದೇವರಿಂದ ನಿರ್ಮಿತವಾದ ಬೆಟ್ಟ ಗುಡ್ಡ, ಮರ, ಗಿಡ ಗಾಳಿ, ನೀರು,ನದಿ, ಸಮುದ್ರ ಭೂಮಿ, ಗ್ರಹ, ತಾರೆ ಆಕಾಶಕಾಯಗಳು, ಸಮಸ್ತ ಭ್ರಹ್ಮಾಂಡ ಎಲ್ಲವೂ..... ಇವೇ ನಿಜವಾದ ಸಂಪತ್ತುಗಳು. ಭ್ರಹ್ಮಾಂಡದಲ್ಲಿ ವಾಸಿಸುವ ಸಕಲ ಜೀವರಾಶಿಗಳಿಗೆ ಆಹಾರ ಸಿಗಲೆಂದು ಕಡಿಮೆಯಾಗದಂತೆ ಎಲ್ಲವನ್ನೂ ಅಳೆದು ತೂಗಿ ಸೃಷ್ಟಿಸಲಾಗಿದೆ. ನೀನೂ ಒಂದು ಕಾಳನ್ನು ಭೂಮಿಯಲ್ಲಿ ಬಿತ್ತಿದರೆ ನೂರಾರು ಕಾಳುಗಳನ್ನು ಪಡೆಯುವ ವರವನ್ನು ಕರುಣಿಸಿದ್ದೇವೆ..... ಇವುಗಳನ್ನು ಉಪಯೋಗಿಸಿಕೊಂಡ ನೀನು ಕೆಲವು ಕರ್ತವ್ಯವನ್ನು ನಿಭಾಯಿಸಲೇ ಬೇಕು. 

ನೀನು ಮರದಿಂದ ಒಂದು ಹಣ್ಣನ್ನು ಕಿತ್ತರೆ, ನೀನು ಅದಕ್ಕೆ ಪ್ರತಿಫಲವಾಗಿ ಆ ಮರಕ್ಕೆ  ನೀರೆರೆದು ಪೋಷಿಸಬೇಕು. ಒಂದು ಮರ ಉರುಳಿಸಿದರೆ ಮತ್ತೊಂದು ಮರ ಬೆಳೆಸುವ ಹೊಣೆ ನಿನ್ನದು. ಗಾಳಿ, ನೀರು, ಭೂಮಿಯ ವಿಷಯದಲ್ಲೂ ಅಷ್ಟೆ ನೀನು ಅವುಗಳನ್ನು ಉಪಯೋಗಿಸಿದ ಹಾಗೆಯೇ ಅದರ ಋಣವನ್ನು ತೀರಿಸಬೇಕು. ನಾವು ಸೃಷ್ಟಿಸಿದ ಸಮಗ್ರ  ಸಂಪತ್ತನ್ನು ಮತ್ತೆ ಯಥಾಸ್ಥಿತಿಯಲ್ಲಿರುವಂತೆ ಮಾಡುವುದು ನಿನ್ನ ಹೊಣೆ. ಅಂತಹ ಸಂಪತ್ತನ್ನು ನಮಗೆ ಮರಳಿ ಸಮರ್ಪಿಸುವ ಸತ್ಕಾರ್ಯವನ್ನು ಮಾಡು. ನಾವೇ ಸೃಷ್ಠಿಸಿದ ಪ್ರಕೃತಿಯ ಒಂದು ವಸ್ತುವಿನಿಂದಲೇ ತಯಾರಿಸಿದ ಆ ಮಾನವ ನಿರ್ಮಿತ  ಹಣವನ್ನು ನೀಡುವುದರ ಮೂಲಕ ಅಲ್ಲ. ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ."

ಶಂಕರನ ಮಾತಿನಲ್ಲಿ ದೃಢ ನಿಶ್ಚಯವಿತ್ತು.

"ಹಾಗಾದರೆ ನಾವು ಬೆವರು ಸುರಿಸಿದ ಶ್ರಮವಾದರೂ ನೀವು ಪರಿಗಣಿಸಬಹುದಲ್ಲ. ಎಲ್ಲಾ ಕಡೆ ದೇವರಿಗೆ ಹಣ ಸಮರ್ಪಿಸುವ ಸಂಪ್ರದಾಯವಿದೆ. ಅದರಂತೆ ನಾವು ನಡೆದುಕೊಳ್ಳುವುದು ತಪ್ಪೇ"

ಶಂಕರನಲ್ಲಿ ನಾನು ಮತ್ತೆ ಪ್ರಶ್ನಿಸಿದೆ.

"ಮೂರ್ಖ ಮಾನವ.... ನೀವು ಸಮರ್ಪಿಸಿದ ಯಾವುದೇ ಹಣವನ್ನು ಪರಿಗಣಿಸಿ ನಾವು ನಿಮಗೆ ಯಾವುದೇ ಫಲಾಫಲಗಳನ್ನು ಆಶಿರ್ವದಿಸಲಾರೆವು. ಆಯಾ ದೇಶದ ಜನರು ಆಯಾ ದೇಶದ ಹಣವನ್ನು ನಮಗೆ ಸಮರ್ಪಿಸುತ್ತಾರೆ. ರೂಪಾಯಿ, ಡಾಲರ್, ಯೆನ್, ಯೂರೋ, ಇತ್ಯಾದಿ ಇತ್ಯಾದಿ ... ಇವೆಲ್ಲವೂ ನಮ್ಮ ದೃಷ್ಠಿಯಲ್ಲಿ ಸಂಪತ್ತೇ ಅಲ್ಲ.. ಯಾವತ್ತಾದರೂ ನಾವು ಅದನ್ನು ಪಡೆದುಕೊಂಡ ಉದಾಹರಣೆಯನ್ನು ಹೇಳಿಬಿಡು ನೋಡೋಣ. ನಾವು ಪರಿಗಣಿಸುವುದು ಪಾಪ ಪುಣ್ಯಗಳನ್ನು ಮಾತ್ರ. ನೀವು ನಿಮ್ಮ ಪುಣ್ಯದ ಕೆಲಸಗಳನ್ನು ದೇವರಿಗೆ ಸಮರ್ಪಿಸರಿ. ಆಗ ನೀವು ನಿಜವಾದ ಪ್ರತಿಫಲವನ್ನು ಪಡೆಯುತ್ತೀರಿ.... ನೀನು ಎಂದಾದರೂ ನಿನ್ನ ಪುಣ್ಯದ ಕೆಲಸವನ್ನು ತಿಮ್ಮಪ್ಪನ ಹುಂಡಿಗೆ ಹಾಕಿರುವೆಯಾ...? ಭಗವಂತನ ಹೆಸರಿನಲ್ಲಿ ಮಾಡಿದ ಸತ್ಕಾರ್ಯ ಯಾವುದಾದರು ಇದೆಯಾ...? ನೀನು ಎಂದಾದರೂ ಧರ್ಮ ಕರ್ಮದಂತೆ ನಡೆದುಕೊಂಡಿರುವೆಯಾ...? .."

ಶಂಕರನ ಮಾತು ಕೇಳಿ ನಾನು ನಾಚಿಕೆಯಿಂದ ತಲೆತಗ್ಗಿಸಿ ಹೇಳಿದೆ.

ಈಗ ನನ್ನ ಮಾತು ತೊದಲಲಾರಂಭಿಸಿತು

"ಪುಣ್ಯದ ಕೆಲಸವನ್ನು ಮಾತ್ರ ದೇವರಿಗೆ ಸಮರ್ಪಿಸ ಬೇಕೆಂಬ ನಿನ್ನ ಮಾತಿನಲ್ಲಿ ನ್ಯಾಯವಿದೆ ಶಿವಶಂಕರ. ಆದರೆ ಹಣ ಬೇಡವೆಂದರೆ ನೀವು ಹಣದ ದೇವತೆ ಲಕ್ಷ್ಮೀಗೆ ಅವಮಾನ ಮಾಡಿದಂತಾಗುವುದಿಲ್ಲವೇ..?"

ಮತ್ತೆ ನನ್ನ ಮನಸಿನ ಗೊಂದಲವನ್ನು ಶಂಕರನ ಬಳಿ ಹೇಳಿಕೊಂಡೆ

ಶಂಕರನು ನನ್ನ ಮಾತನ್ನು ಕೇಳಿ ನಗಲಾರಂಬಿಸಿದ.

"ಮೂರ್ಖ ಮಾನವ.... ಲಕ್ಷ್ಮಿಯ ಹೊಣೆ ನಿಜವಾದ ಸಂಪತ್ತನ್ನು ಸಕಲ ಜೀವರಾಶಿಗಳಿಗೂ ಕರುಣಿಸುವುದು. ನೀನು ನಿರ್ಮಿಸಿಕೊಂಡ ಆ ಹಣವನ್ನಲ್ಲ.  ನೀನು ಸೃಷ್ಟಿಸಿಕೊಂಡ ಆ ನಿನ್ನ ಹಣವನ್ನು ಇತರ ಯಾವ ಪ್ರಾಣಿಯೂ ಸಹ ಮೂಸಿ ನೋಡದು.. ಬೇಕಾದರೆ ಭೂಲೋಕದಲ್ಲಿಯೇ  ನಿನ್ನ ಆ ಹಣವನ್ನು ಪಶುಗಳ ಮುಂದೆ ಇಟ್ಟು ಪರೀಕ್ಷಿಸಿ ನೋಡು. ಆಗ ನಿನ್ನ ಹಣಕ್ಕಿರುವ ಬೆಲೆ ನಿನಗೆ ತಿಳಿದೀತು. ಇನ್ನು ಸಕಲ ಗ್ರಹ ತಾರೆ ಆಕಾಶಕಾಯಗಳ ಹೊಣೆ ಹೊತ್ತಿರುವ ದೇವರಿಗೆ ನಿನ್ನ ಆ ವಸ್ತು ಹೇಗೆ ಉಪಯೋಗವಾದೀತು. ಇಡೀ ಭ್ರಹ್ಮಾಂಡಕ್ಕೆ ಹೋಲಿಸಿದಾಗ ನೀನು ವಾಸಿಸುವ ಭೂಮಿ ಒಂದು ಚುಕ್ಕೆಯ ಗಾತ್ರದಲ್ಲಿ ಇದೆ. ಆ ಚುಕ್ಕಿಯ ಗಾತ್ರದ ಭೂಮಿಯ ಮೇಲೆ ಕೋಟ್ಯಾಂತರ ಜೀವರಾಶಿಗಳು. ಅವುಗಳ ನಡುವೆ ನೀವು ಊಹಿಸಿಕೊಳ್ಳಲಾರದಷ್ಟು ಅಲ್ಪರು. ನೀವೇ ಇಷ್ಟು ಅಲ್ಪರಾಗಿರುವಾಗ ನಿಮ್ಮಿಂದ ನಿರ್ಮಿತವಾದ ಆ ಯಕಶ್ಚಿತ್ ಹಣ ಇನ್ನೆಷ್ಟು ಅಲ್ಪವಾಗಿರಬಹುದೆಂದು ಯೋಚಿಸಿ ನೋಡು..."

ಶಂಕರನ ಮಾತಿನಿಂದ ನನಗೆ ಭಯವಾಗಲಾರಂಬಿಸಿತು. ಕೊನೆಯದಾಗಿ ಒಂದು ಕೋರಿಕೆ ಎನ್ನುತ್ತಲೇ ನನ್ನ ಮಾತು ಆರಂಭಿಸಿದೆ...

"ಮಾನವ ನಿರ್ಮಿತ ಹಣ ಅಷ್ಟೊಂದು ಅಲ್ಪವೇ ಶಂಕರ.... ನಮ್ಮ ಹಣವನ್ನು ಸ್ವೀಕರಿಸಿ, ಇಂದಿನಿಂದ ಅದಕ್ಕೂ ಗೌರವವನ್ನು ನೀಡಿ ನಮ್ಮ ಹಣಕ್ಕೂ ನೀವು ಮಾನ್ಯತೆಯನ್ನು  ಕರುಣಿಸಬಹುದಲ್ಲವೇ.......... "

ನಾನು ಇನ್ನು ಮಾತು ಮುಗಿಸಿರಲಿಲ್ಲ.
ನನ್ನ ಮಾತಿನಿಂದ ದೇವತೆಗಳ ಕೋಪ ನೆತ್ತಿಗೇರಿತು. ಅಲ್ಲಿರುವ ದೇವತೆಗಳೆಲ್ಲಾ ಒಕ್ಕೊರಲಿನಿಂದ ನನ್ನನ್ನು...

"ಮೂರ್ಖ ಮಾನವ..."

ಎಂದು ಜೋರಾಗಿ ಕೂಗಿಕೊಂಡರು
ಅವರ ಆ ಶಬ್ಧಕ್ಕೆ ಆಸ್ಥಾನವೇ ಕಂಪಿಸಿದ ಅನುಭವವಾಯಿತು.

ಶಂಕರನು ಸಹ ನನ್ನ ಕಡೆ ಕೋಪದ ಕೆಂಗಣ್ಣನ್ನು ಬೀರಿ
"ಈ ಅಲ್ಪ ಬುದ್ಧಿಯ ಮಾನವನಿಗೆ ಎಷ್ಟು ಉಪದೇಶ ಮಾಡಿದರು ಕಡಿಮೆಯೇ"

ಎಂದು ಬಯ್ಯುತ್ತಾ  ಕೋಪದಿಂದ ತನ್ನ ತ್ರಿಶೂಲದಿಂದ ನನ್ನ ಎದೆಗೆ ತಿವಿದನು. 

ನೋವು ತಾಳಲಾರದೇ 

'ಅಮ್ಮಾ' ...

ಎಂದು ಜೋರಾಗಿ ಕಿರುಚಿಕೊಂಡೆ.
ಕಣ್ಣು ಬಿಟ್ಟು ನೋಡಿದೆ ಸ್ವರ್ಗದಲ್ಲಿರುವಂತೆ ಯಾವ ಚಿನ್ನದ ಆಸ್ಥಾನವೂ ಕಾಣಿಸಲಿಲ್ಲ. ಅದೇ ಮನೆ, ಅದೇ ಸೋಫಾ, ಮಲಗಿದ್ದವನು ಹಾಗೆಯೇ ಎದ್ದು ಕುಳಿತೆ.  ಮಕ್ಕಳು ಇನ್ನು ಟಿ,ವಿ, ನೋಡುತ್ತಲೇ ಕುಳಿತ್ತಿದ್ದರು. ಶಂಕರನ ಮಾತು ಇನ್ನೂ ಮನದೊಳಗೆ ಗುಂಯ್ ಗುಡುತ್ತಿರುವಾಗಲೇ. ಟಿ,ವಿ, ಯಲ್ಲಿ ಬಿತ್ತರವಾಗುತ್ತಿದ್ದ ಸುದ್ಧಿಯೊಂದು ಗಮನ ಸೆಳೆಯಿತು. ದೇವರ ಹುಂಡಿಯ ಹಣವನ್ನು ಕದ್ದ ದೇವಾಲಯದ ಸಿಬ್ಬಂದಿ  ಪೂಜಾರಿಯೊಬ್ಬನಿಗೆ ಕೋಳ ತೊಡಿಸಿದ್ದರು. ಟಿ,ವಿ,ಯಲ್ಲಿ ಆತನ ಮುಖವನ್ನು ಪದೇ ಪದೇ ಝೂಮ್ ಮಾಡಿ ಮಾಡಿ ತೋರಿಸುತ್ತಿದ್ದರು. ಜನರು ದೇವರಿಗಾಗಿ ಹಾಕಿದ್ದ ಹಣವನ್ನು ಆತ ಲೂಟಿ ಮಾಡಿದ್ದನು. ಒಂಬೈನೂರು ಕೋಟಿ ರೂಪಾಯಿಗಳು. ನೂರು ಕೆ,ಜಿ, ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಟಿ,ವಿ,ಯವರು ಒಮ್ಮೆ ಆ ಕಳ್ಳ ಕಪಟಿಯ ಮುಖವನ್ನು ತೋರಿಸಿದರೆ, ಮತ್ತೊಂದು ಸಾರಿ ಅವನು ಲಪಟಾಯಿಸಿದ ಹಣ ಮತ್ತು ಚಿನ್ನದ ರಾಶಿಯತ್ತ ಝೂಮ್ ಮಾಡಿ ತೋರಿಸುತ್ತಲೇ ಇದ್ದರು. 

ಆ ಕ್ಯಾಮರಾದ ಬೆಳಕಲ್ಲಿ ಅವನು ಕದ್ದ ಚಿನ್ನವು ಫಳ ಫಳನೆ ಹೊಳೆಯುತ್ತಿತ್ತು. ನೆಕ್ಲೆಸ್. ಬಳೆ, ಹಾರ,ಉಂಗುರಗಳು ರಾಶಿ ರಾಶಿಯಾಗಿ ಬಿದ್ದಿದ್ದವು.

ಅರೆ.....!!!!

ನನಗೊಂದು ಆಶ್ಚರ್ಯ ಕಾದಿತ್ತು.
ಅವುಗಳ ಮಧ್ಯೆ ನನ್ನ ಚಿನ್ನದ ಬ್ರಾಸ್ಲೆಟ್.
ಅಂದು ನನ್ನ ಕೈಯಾರೆ ನಾನೇ ಹುಂಡಿಗೆ ಹಾಕಿದ್ದು .
ನನ್ನ ಚಿನ್ನದ ಬ್ರಾಸ್ಲೆಟನ್ನು ಆ ಪಾಪಿ ತನ್ನ ವಶ ಮಾಡಿಕೊಂಡಿದ್ದನ್ನು ಕಂಡು ಮನಸ್ಸು ದುಃಖದಲ್ಲಿ ಮುಳುಗಿತು. ಕದ್ದ ಚಿನ್ನದ ರಾಶಿಯ ಮದ್ಯೆ ನನ್ನ ಬ್ರಾಸ್ಲೆಟ್ ಫಳ ಫಳಾನೆ ಮಿಂಚುತ್ತಿರುವುದನ್ನು ನೋಡಲು ನನ್ನ ಎರಡು ದುಃಖದ ಕಣ್ಣುಗಳು ಸಾಲದಾದವು....

    ಪ್ರಕಾಶ್ ಎನ್ ಜಿಂಗಾಡೆ

Saturday 3 December 2016

ಪಟ್ಟಣ

ನಮ್ಮೂರು ಬಸವಾಪಟ್ಟಣ ದಾವಣಗೆರೆ ಜಿಲ್ಲೆಯ ಚಿಕ್ಕ ಹಳ್ಳಿ. ಹುಟ್ಟಿದಂದಿನಿಂದ ಊರನ್ನು  ನೋಡುತ್ತಲೇ ಬೆಳೆದೆ. ನಾನು ಉದ್ದ ಬೆಳೆದೆನೆ ಹೊರತು ಊರು ಮಾತ್ರ ಒಂದಿಂಚು ಸಹ ಬೆಳೆಯಲಿಲ್ಲ.. ನಮ್ಮೂರು ಯಾವಾಗ ಪಟ್ಟಣದ ರೂಪ ಪಡೆಯುತ್ತದೆಯೋ ಎಂದು ಕಾದು ಕಾದು ನನಗೂ ಸಾಕಾಯಿತು. ನಮ್ಮೂರಿನ ಹೆಸರಿನಲ್ಲಿ 'ಪಟ್ಟಣ' ಎಂಬ ಹೆಸರು ಇದೆಯಾದರೂ ಅದು ಇವತ್ತಿನವರೆಗೂ ವಾಸ್ತವವಾದ ಪಟ್ಟಣದ ಸ್ವರೂಪವನ್ನು ಪಡೆಯಲೇ ಇಲ್ಲ. ಹೆಸರಲ್ಲಿ ಮಾತ್ರ ಬಸವಾ'ಪಟ್ಟಣ' ಎಂದು ಚಿರ ನೂತನವಾಗಿ ಉಳಿದಿದೆ.

ಇಪ್ಪತ್ತೆರಡು ವರ್ಷದ ಹಿಂದೆ ನಮ್ಮ ಭಾವನವರು ನಮ್ಮಕ್ಕನನ್ನು ನೋಡಲು ಹುಬ್ಬಳ್ಳಿಯಿಂದ ಬಂದಿದ್ದರು ನಮ್ಮೂರಿನ ಹೆಸರನ್ನು ಕೇಳಿ ಕೂಡಲೇ ಇದು ಯಾವುದೋ ದೊಡ್ಡ ಪಟ್ಟಣವಿರಬೇಕೆಂದು ಊಹಿಸಿಕೊಂಡು ಬಂದಿದ್ದರಂತೆ. ನಮ್ಮೂರಿಗೆ ಕಾಲಿಟ್ಟಾಲೇ ಅವರಿಗೆ ಗೊತ್ತಾಗಿದ್ದು ನಮ್ಮೂರಿನ ಉದ್ದ ಅಗಲ ವಿಸ್ತೀರ್ಣ ಎಷ್ಟು ಎಂದು. ಆದರೂ ಪ್ರಕೃತಿ ಮಾತೆ ತನ್ನ ಸೌಂದರ್ಯವನ್ನು ನಮ್ಮೂರಿನಲ್ಲಿ ಸ್ವಲ್ಪ ಹೆಚ್ಚಾಗಿಯೇ ಹರಡಿ ಅಚ್ಚ ಹಸಿರಿನಿಂದ ಕಂಗೊಳಿತ್ತಿದ್ದಾಳೆ ಎನ್ನಿ.....

ನಮ್ಮೂರಿನಲ್ಲಿರುವ ಚಿರಡೋಣಿ ಎಂಬ ರೋಡಿನ ಬಲಭಾಗದ ಪ್ರದೇಶವು ತುಂಬಾ ಅಭಿವೃದ್ಧಿ ಕಂಡಿದೆ. ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡ ಹೊಂದಿದ ಹೆಗ್ಗಳಿಕೆ ನಮ್ಮೂರಿಗಿದೆ. ಶಾಂಘೈ ಟವರ್ ಗಿಂತಲೂ ಸುಂದರವಾದ ಮಿನಾರ್ ನಿರ್ಮಾಣವಾಗಿದೆ. ನಮ್ಮೂರಿನ ದುರ್ಗಾಂಬಿಕಾ ಬೆಟ್ಟದ ಮೇಲಿಂದ ಊರನ್ನು  ನೋಡಿದರೆ ಹೊಸದಾಗಿ ನಿರ್ಮಿತವಾದ ಆ ಊರಿನ ಸೌಂದರ್ಯ ವರ್ಣಿಸಲಾಗದು. ಎಲ್ಲಾ ಹೈ ಟೆಕ್ ಸಿಟಿಗಳನ್ನ ಹಿಂದೆ ಹಾಕಿದೆ. ಗೌಡನಕಟ್ಟೆ ಎಂಬ ನಾಲೆಯ ಪಕ್ಕದಲ್ಲೇ ಬೃಹತ್ ಬೌದ್ಧ ದೇವಾಲಯವೊಂದು ನಿರ್ಮಾಣವಾಗುತ್ತಿದೆ. ಹೊನ್ನಿನಂತೆ ಹೊಳೆಯುತ್ತಿರುವ ಸಂಪೂರ್ಣವಾದ ಸುವರ್ಣಮಂದಿರವದು. ಇದನ್ನೆಲ್ಲಾ ನೋಡಿದ ಮೇಲೆ ನನ್ನ ಜೀವ ತಡೆಯಲಿಲ್ಲ. ಹೊಸ ಊರಿನ ಸೌಂದರ್ಯ ಸವಿಯಬೇಕು ಎಂಬ ಆಸೆ ಮೂಡಿತು.  ಅಲ್ಲಿರುವ ಬುದ್ದನ ಸುವರ್ಣ ಮಂದಿರ ಹತ್ತಿರದಿಂದಲೇ ಕಣ್ಣು ತುಂಬಿಕೊಳ್ಳುವ ಬಯಕೆ ಅತಿಯಾಯಿತು. ಇನ್ನೇನು ಹೊಸ ಊರಿನೊಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಅಲ್ಲೇ ನಾಲೆಯಲ್ಲಿ ಎಮ್ಮೆಯ ಮೈ ತೊಳೆಯುತ್ತಿದ್ದ ಹುಡುಗನೊಬ್ಬ

"ಸರ್.... ಆಕಡೆ ಹೋಗ ಬೇಡಿ. ಅದು ನಮ್ಮ ದೇಶವಲ್ಲ. ಕೌಲಲಂಪುರ ಅನ್ನೋ ದೇಶ ನಿರ್ಮಾಣವಾಗುತ್ತಿದೆ. ವೀಸಾ ಪಾಸ್ ಪೋರ್ಟ್ ಇಲ್ದೇ ಹೋದರೆ ಅರೆಸ್ಟ್ ಆಗಿ ಹೋಗ್ತೀರಾ"

ಎಂದನು.

ಅರೆ.... ನಾನು ಎಷ್ಟೋ ಸಲ ಇದೇ ಮಾರ್ಗವಾಗಿ ಸಂಗಾಹಳ್ಳಿಗೆ ಹೋಗಿದ್ದನ್ನು ನೆನಪಿಸಿಕೊಂಡೆ. ಆಗ ಇದ್ದ ಸ್ವಾತಂತ್ರ ಈಗ ಇಲ್ಲದ್ದನ್ನು ಕಂಡು ಮನಸು ಬೇಸರವಾಯಿತು. ಇದ್ಯಾವ ದೇಶ ನಮ್ಮೂರಿಗೆ ಅಂಟಿಕೊಂಡೇ ನಿರ್ಮಾಣವಾಗುತ್ತಿದೆಯಲ್ಲಾ ಎಂದು ಯೋಚಿಸಿ ಗೂಗಲ್ ಸರ್ಚ್ ಮಾಡಿದೆ. which another country is situated inside of south India ಎಂದು ಟೈಪ್ ಮಾಡಿ ನೋಡಿದೆ. ಗೂಗಲ್ ಸಂಪೂರ್ಣ ಮಾಹಿತಿಯೊದಗಿಸಿತು. ಊರಿನ ಜನ ಮಾತನಾಡಿಕೊಳ್ಳುವಂತೆ ಅದು ಕೌಲಲಂಪುರ ಅನ್ನೋ ದೇಶವಾಗಿರಲಿಲ್ಲ. ಗೂಗಲ್ ಮಾಹಿತಿಯ ಪ್ರಕಾರ  "ಘಯಾನಾ" ಅನ್ನೋ ದೇಶವದು. ನಮ್ಮೂರಿನ ಪಕ್ಕದಲ್ಲೇ ನಿರ್ಮಾಣವಾಗುತ್ತಿದೆ.  ಹಿಂದೆ ಹದಿನಾರನೇ ಶತಮಾನದಲ್ಲಿ ಬಸವಾಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರನಾದ ಕೆಂಗಣ್ಣನಾಯಕನು ಫ್ರೆಂಚರೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದ್ದನಂತೆ. ಬಸವಾಪಟ್ಟಣವನ್ನು ಸ್ವತಂತ್ರವಾಗಿ ಬಿಟ್ಟರೆ ಬಲಭಾಗದ ಹತ್ತು ಮೈಲು ಗಳಷ್ಟು ಭೂಮಿಯನ್ನು ಫ್ರೆಂಚರಿಗೆ ಬಿಟ್ಟು ಕೊಡುವುದಾಗಿ ಹೇಳಿದ್ದನಂತೆ. ಅದೇ ಪ್ರಕಾರ ಫ್ರೆಂಚರು ಕೆಂಗಣ್ಣನಾಯಕನಿಂದ ಕಾನೂನಾತ್ಮಕವಾಗಿ ಒಪ್ಪಂದ ಮಾಡಿಕೊಂಡು ಆ ಭೂಮಿಯನ್ನು ಪಡೆದುಕೊಂಡರಂತೆ. ಹದಿನೇಳನೇ ಶತಮಾನದಲ್ಲಿ ಇಂಗ್ಲಿಷರ ಪ್ರಭಾವ ಹೆಚ್ಚಾಗಿದ್ದರಿಂದ ಫ್ರೆಂಚರು ತಮ್ಮ ದೇಶಕ್ಕೆ ಮರಳಿದರು...

ಮತ್ತೆ 2016 ರಲ್ಲಿ ಮತ್ತೆ ಕ್ಯಾತೆ ತೆಗೆದ ಫ್ರೆಂಚರು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಮತ್ತೆ ನಮ್ಮೂರಿನ ಪಕ್ಕದ ಹತ್ತು ಮೈಲಿ ಭೂ ಪ್ರದೇಶವನ್ನು ಮರಳಿ ಪಡೆದರು. ಈಗ ಅದೇ ಭೂ ಪ್ರದೇಶದಲ್ಲಿ ವೈಭವಯುತವಾದ 'ಘಯಾನಾ" ದೇಶ ನಿರ್ಮಾಣವಾಗುತ್ತಿದೆ. ಅದರ ಸೌಂದರ್ಯ ಕಣ್ಣು ಕುಕ್ಕುತ್ತಿದೆ. ಆದರೆ ಒಳಗೆ ಹೋಗಲಾರದೇ ಮನಸು ವಿಲ ವಿಲನೆ ಒದ್ದಾಡುತ್ತಿದೆ...

ಇಂದು ಬೆಳ್ಳಂಬೆಳಗ್ಗೆ ಬಿದ್ದ ಈ ವಿಚಿತ್ರ ಕನಸು ಹೇಗೆ ಅರ್ಥೈಸಿಕೊಳ್ಳಬೇಕೋ.....!!  ಕನಸನ್ನು ವ್ಯಾಖ್ಯಾನಿಸುವವರು, ಜ್ಯೋತಿಷ್ಯ ತಿಳಿದವರು ಯಾರಾದರೂ ಇದ್ದರೆ ಅರ್ಥೈಸಿರಿ.... ಮುಂಜಾನೆಯ ಕನಸುಗಳು ನಿಜ ಆಗುತ್ತೆ ಅಂತಾನೆ ಎಲ್ಲರೂ ಹೇಳ್ತಾರೆ. ಆದರೆ ನಮ್ಮೂರಿನ ಪಕ್ಕದಲ್ಲಿ ಮತ್ತೊಂದು ದೇಶ ನಿರ್ಮಾಣವಾಗೋ ಮಾತು  ತಿಪ್ಪರ್ ಲಾಗ ಹಾಕಿದರೂ ನಿಜವಾಗಲಾರದು. ಆದರೆ ಹಿಂದಿನ ಜನ್ಮದಲ್ಲಿ ನಾನೇನಾದರೂ ಪಾಳೆಯಗಾರ ಕೆಂಗಣ್ಣನಾಯಕ ಆಗಿದ್ದೆನೋ ಅಥವಾ ಫ್ರೆಂಚ್ ವೈಸ್ ರಾಯ್ ಏನಾದರೂ ಆಗಿರಬಹುದೆಂಬ ಒಂದು ಸಣ್ಣ ಶಂಕೆ ಮೂಡುತ್ತಿದೆ......

                              ಪ್ರಕಾಶ್ ಎನ್ ಜಿಂಗಾಡೆ

ರಾಜ್ಯೋತ್ಸವದ ನೆನಪು...

ತ್ರಿಕೆ ಬಳಗದ ರಾಜ್ಯೋತ್ಸವ ಸಮಾರಂಭವಿತ್ತು. ಕವಿಗೋಷ್ಠಿಗೆ ಕಾರ್ಯಕ್ರಮಕ್ಕೆ ಅನಿರೀಕ್ಷಿತ ಆಹ್ವಾನವೂ ಬಂದಿತು. ಶಿಕ್ಷಕನಾಗಿ  ಕವಿಗಳ ಕಾವ್ಯವನ್ನು ಭೋದಿಸುತ್ತಿದ್ದ ನನಗೆ ನನ್ನದೇ ಕವನಕ್ಕೆ ಕವಿಗೋಷ್ಠಿಯ ಭಾಗ್ಯ ಸಿಕ್ಕಿದ್ದು ಸಂತೋಷವಾಯಿತು.
ಹೋಗ್ಲಿ ಏನೋ ಒಂದ್ ದಬಾಕಿ ಬರೋಣ ಅಂತೆ ಹೊರಟೆ, ಪರಿಚಯದವರಾರೂ ಇರಲಿಲ್ಲ. ಎಲ್ಲಿ ಮೂಕ ಬಸವಣ್ಣನಂತೆ ಮೂಲೆಯಲ್ಲಿ ಕೂತು ಬರಬೇಕೆನೋ ಅಂದ್ಕಂಡಿದ್ದೆ. ಹಂಗಾಗ್ಲಿಲ್ಲ ಅನ್ನಿ....ತ್ರಿಕೆ ತೋರಿಸಿದ ಆತ್ಮೀಯತೆಗೆ ನಾನೇ ಮೂಕನಾಗಿ ಹೋದೆ.
ಆಹ್ವಾನಿಸಿದ್ದು ಮದ್ಯಾಹ್ನ ಮೂರು ಗಂಟೆಗೆ. ತಲುಪಿದ್ದೂ ಸರಿಯಾಗಿ ಮೂರು ಗಂಟೆಗೆ.  ಏನೋ ಬಾರಿ ಟೈಮ್ ಸೆನ್ಸ್ ಇರೋನ್ ತರ ಕರೆಕ್ಟಾಗಿ ಮೂರು ಗಂಟೆಗೆ ಬ್ಲಾಸುಮ್ ಶಾಲೆಗೆ ಎಂಟ್ರಿ ಕೊಟ್ಟೆ. ಸಮಯ ಪ್ರಜ್ಞೆ ಇರೋನು ಅಂದ್ಕೊಬೇಡಿ, ಬೆಂಗಳೂರಿನ ಟ್ರಾಫಿಕ್  ಸಹಕರಿಸಿದರೆ ಅದು ಸಾಧ್ಯವಾದೀತು ಅಷ್ಟೆ....

ಇನ್ನೂ ಬೈಕ್ ನಿಲ್ಸಿಸರಲಿಲ್ಲ ತ್ರಿಕೆಯ ಸದಸ್ಯರು ನಗು ಮುಖದಿಂದ ಸ್ವಾಗತಿಸಿದರು. ಫೇಸ್ ಬುಕ್ನಲ್ಲಿ ಆಧುನಿಕ ಟಚ್ ಅಪ್ ಕೊಟ್ಟ ಫೋಟೋ ನೋಡಿ ನನ್ನನ್ನಾರೂ ಗುರುತಿಸರು ಅಂದ್ಕಂಡಿದ್ದು ನನ್ನ ಮೂರ್ಖತನವಾಗಿತ್ತು. ಮೊದಲ ಎಂಟ್ರಿಯಲ್ಲೇ ನಗುಮುಖದ ಸ್ವಾಗತ ಖುಷಿಕೊಟ್ಟಿತು. ತ್ರಿಕೆಯ ಅಧ್ಯೆಕ್ಷೆ ರೂಪಕ್ಕನವರಿಂದ ಸ್ವಾಗತ. ಅಲ್ಲಿ ಕೂತ್ಕಂಡಾಗ ಉದಯೋನ್ಮುಖ ಕವಿ ವಿನಾಯಕ ಭಟ್ ರವರ ಪರಿಚಯ ಮಾಡಿಕೊಂಡೆ. ಕಾರ್ಯಕ್ರಮ ಇನ್ನೂ ಪ್ರಾರಂಭವಾಗಿರಲಿಲ್ಲ. ಅಲ್ಲಿ ಕೂತಾಗ ಕನ್ನಡದ ಹಾಡುಗಳು ಪ್ರಸಾರವಾಗುತ್ತಿದ್ದವು. ಕನ್ನಡ ಕಂಪಿನ ಹಾಡುಗಳಿಂದ ಮನಸ್ಸು ಪ್ರಫುಲ್ಲವಾಯಿತು.

"ಕನ್ನಡಮ್ಮನ ದೇವಾಲಯ ಕಂಡೆ ಆ ಹೆಣ್ಣಿನ ಕಂಗಳಲಿ"

ಎಂಬ ಹಾಡು ಬರೊ ಟೈಮಲ್ಲಿ ತ್ರಿಕೆ ಅಧ್ಯಕ್ಷೆ ರೂಪಕ್ಕ ಕನ್ನಡದ ಕಾರ್ಯಕ್ರಮಕ್ಕೆ ಆಸಕ್ತಿಯಿಂದ ಓಡಾಡುತ್ತಿದುದು ಕಾಣಿಸಿತು. ಈಗ ಈ ಹಾಡು ಸೂಕ್ತ ಎಂದೆನಿಸಿತು.
ಕನ್ನಡ ನಾಡು ನುಡಿಯ ಸೇವೆ ಮಾಡುವವರಿಗೆ ಹಾಡೊಂದು ಪ್ರಾಸಂಗಿಕವಾಗಿ ಬಿತ್ತರವಾದಾಗ ಮನಸ್ಸಿಗೆ ಮುದ ನೀಡಿತು. ಉತ್ತಮ ಕಾರ್ಯವೊಂದನ್ನು ಹೊಗಳಿ ಬರೆಯುವುದಕ್ಕಿಂತ ಈ ಹಾಡೇ ಸಮರ್ಪಿಸಬೇಕು ಎಂದು ಮನಸ್ಸು ಯೋಚಿಸಿದ್ದು ಸುಳ್ಳಲ್ಲ   ಅಲ್ಲಿ ಪ್ರಸಾರವಾದ ಆ ಹಾಡೇ ತ್ರಿಕೆ ಸದಸ್ಯರ ಕನ್ನಡ ಪ್ರೇಮ ಹೇಳಿ ಮುಗಿಸಿತ್ತು. ರೀಲ್ ನಲ್ಲಿ ಪ್ರಸಾರವಾದ ಆ ಗೀತೆಯ ಸಾರವನ್ನು ರಿಯಲ್ಲಾಗಿ ಕಂಡಂತಾಯಿತು.
"ಕನ್ನಡ ನಾಡಿನ ಚರಿತೆಯನೇ ಕಂಡೇ ಆ ಹೆಣ್ಣಿನ ಹೃದಯದಲಿ"
ಇಂಗ್ಲಿಷಿನ ವ್ಯಾಮೋಹದ ದಿನಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಚರಿತ್ರೆ ಅಲ್ಲಿ ಮೇಳೈಸಿತ್ತು. ಯಾವ ಲಾಭದ ಆಸೆಗೂ ಒಳಪಡದೇ ಕನ್ನಡದ ಕಂಕೈರ್ಯ ಮಾಡುತ್ತಿರುವುದೇನು ಸಾಮಾನ್ಯವೇ...? ಏನೋ ನಾಲ್ಕಕ್ಷರದ ಸಾಲನ್ನು  ಗೀಚುವ ನನ್ನಂತಹ ಸಾಮಾನ್ಯ ಶಿಕ್ಷಕನಿಗೆ ಮತ್ತು ಹಲವು ಯುವಕರಿಗೆ ಕವಿಯ ಸ್ಥಾನ ಕೊಟ್ಟು ಆ ವೇದಿಕೆಯಲ್ಲಿ ಅವಕಾಶ ಕೊಟ್ಟಿದ್ದರಿಂದ ಆ ವೇದಿಕೆಯು ನನ್ನ ಕಣ್ಣಿಗೆ ಸಾಮಾನ್ಯ ವೇದಿಕೆಯಂತೆ ಕಾಣಲಿಲ್ಲ. ಉದಯೋನ್ಮುಕ ಕವಿಗಳು ಎಂದು ಯಾರೋ ವೇದಿಕೆಯಲ್ಲಿ ಹೇಳಿದಾಗ ಮನದಲ್ಲೇನೋ ಪುಳಕ. ನಾನು ಅದಕ್ಕೆ ಅರ್ಹನೇ ಎಂದು ಮನಸ್ಸನ್ನೇ ಹತ್ತಾರು ಬಾರಿ ಕೇಳಿಕೊಂಡಿದ್ದುಂಟು. ಸಾಗ ಬೇಕಾದ ದಾರಿ ಇನ್ನೂ ತುಂಬಾ ದೂರವಿದೆ ಎನಿಸಿತು.

ತ್ರಿಕೆಯ ಸದಸ್ಯರು  ತೆಂಗಿನ ಎಳನೀರು ಕಾಯಿಗಳ ಗೊಂಚಲನ್ನು ಶಾಲೆಯ ಒಳ ಕೊಠಡಿಯಿಂದ ಹೊರ ತರಲಾರಂಭಿಸಿದರು. ರಾಸಾಯನಿಕ ಮಿಶ್ರಿತ ಹಾಳು ವಿದೇಶಿಯ ಪಾನೀಯಗಳಿಗಿಂತ ಆರೋಗ್ಯದಾಯಕ ಶುದ್ಧ ಎಳನೀರನ್ನು ಎಲ್ಲಾ ಅತಿಥಿಗಳಿಗೂ ಲೋಟದಲ್ಲಿ ಹಾಕಿ ಕೊಟ್ಟು ಜೀವ ತಂಪಾಗಿಸಿದರು. ಮೊನ್ನೆ ಸ್ನೇಹಿತರೊಬ್ಬರ ಮದುವೆಗೆ ಹೋದಾಗ ವೆಲ್ ಕಮ್ ಜ್ಯೂಸ್ ಅಂತ ಕಬ್ಬಿನ ಹಾಲನ್ನು ನೀಡಿದ್ದರು. ದೇಶಿಯ ಪಾನಿಯಗಳಿಗೆ ಮಹತ್ವ ನೀಡುತ್ತಿರುವ ನಮ್ಮವರ ಮನಃಸ್ಥಿತಿ ಬದಲಾದಂತೆ ಕಂಡಿತು. ಮದುವೆಯ ಆ ಕಬ್ಬಿನ ಹಾಲಿನ ನೆನಪು ಇನ್ನೂ ಮನಸ್ಸಿನಲ್ಲಿರುವಾಗಲೇ ತ್ರಿಕೆಯ ಸದಸ್ಯರು ಎಳನೀರು ಕೊಟ್ಟಿದ್ದು ವಿಶೇಷ ಎನಿಸಿತು. ಪ್ರಶಂಸನೀಯ ಎನಿಸಿತು. ಎಲ್ಲರಿಗೂ ಮಾದರಿಯಾಗುವಂತಹ ವಿಶೇಷತೆಯನ್ನು  ಪಾನೀಯದಲ್ಲಿಯೂ ತೋರಿಸಿದ್ದಕ್ಕೆ ಧನ್ಯತೆ ಮೂಡಿತು....

ಕಾರ್ಯಕ್ರಮದ ಉದ್ದಕ್ಕೂ ಹರಿದದ್ದು ಹಾಸ್ಯದ ಹೊನಲು. ಮಂಜುನಾಥ ಕೊಳ್ಳೆಗಾಲ ರವರು ಟಿಪಿ ಕೈಲಾಸಂ ರವರ ಕೆಲವು ಹಾಸ್ಯ ಪ್ರಸಂಗಗಳನ್ನು ಹೇಳಿದ್ದು ಕೇಳಿ ಮುಖ ನಗುವಿನಲ್ಲಿ ಅರಳಿತು. ಟಿ,ಪಿ, ಕೈಲಾಸಂ ರವರು ತಮ್ಮನ್ನು ತಾವು "ಪ್ರಹಸನ ಪಿತಾಮಹಾ" ಎಂದು ಕರೆದುಕೊಂಡಿದ್ದು ಕೇಳಿ ವಿಶಿಷ್ಟ ಎನಿಸಿತು. ಅಷ್ಟೊಂದು ಹಾಸ್ಯ ಪ್ರಹಸನ ರಚಿಸಿದ ಕೈಲಾಸಂ ರವರಿಗೆ ಆ ಬಿರುದನ್ನು ನೀಡುವ ಯೋಗ್ಯತೆ ನಿಜಕ್ಕೂ ಯಾರಲ್ಲೂ ಇರಲಿಲ್ಲ ಬಿಡಿ... ಅಂತಹ ಮಹಾನ್ ಕವಿಯ ಪರಿಚಯ ಮತ್ತು ಅವರ ಹಾಸ್ಯ ಪ್ರಜ್ಞೆ ಪರಿಚಯವಾದದ್ದು ಖುಷಿ ನೀಡಿತು. ನಂತರ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಣಿಕಾಂತ್ ರವರಿಗೆ ಸನ್ಮಾನ ನಡೆಯಿತು. ಕಾರ್ಯಕ್ರಮದ ನಿರೂಪಕರು ಮಧ್ಯೆ ಮಧ್ಯೆ ಹಾಸ್ಯದ ಧಾಟಿಯಲ್ಲಿ ಮಾಡಿದ ನಿರೂಪಣೆ ಗಮನ ಸೆಳೆಯಿತು. ಕವನ ವಾಚಿಸಿದ ಕವಿಗಳಿಗೆ ಪ್ರಶಸ್ತಿ ನೀಡಲಾಯಿತು. ನಾನು ಸಹ ಕ್ಯಾಮರಾ ಕಣ್ಣಿಗೆ ಫೋಸು ಕೊಟ್ಟು ಪ್ರಶಸ್ತಿಯನ್ನು ಸ್ವಿಕರಿಸಿದೆ.

ನನ್ನ ನಂತರ ಸುಂದರವಾಗಿ ಕವನ ವಾಚಿಸಿದ ಪ್ರಶಸ್ತಿ ಅನ್ನೋ ಕವಿಗೆ ಪ್ರಶಸ್ತಿ ಕೊಡಲು ವೇದಿಕೆಗೆ ಆಹ್ವಾನಿಸಿದರು. ಪ್ರಶಸ್ತಿಯ ಹೆಸರು ಕೇಳಿದ ಕೂಡಲೇ ಸಭಿಕರೆಲ್ಲಾ ಘೊಳ್ಳೆಂದು ನಕ್ಕರು. ಸೂರ್ಯನಿಗೆ ಟಾರ್ಚಾ...? ಸರಸ್ವತಿಗೇ ಟ್ಯೂಷನ್ನ...? ಪ್ರಶಸ್ತಿಗೆಯೇ ಪ್ರಶಸ್ತಿನಾ....? ಎಂಬ ಯೋಚನೆ ಅವರ ಮೆದುಳಿನಲ್ಲಿ ಆವರಿಸಿರೊಂಡಿದ್ದು ಸುಳ್ಳಲ್ಲ ಆ ಯೋಚನಯೇ ಅವರ ನಗುವಿಗೆ ಕಾರಣವಾಯಿತಷ್ಟೆ....

ನಂತರ ಶಶಿ ಗೋಪಿನಾಥ್ ಎಂಬುವರು ವೇದಿಕೆಗೆ ಆಗಮಿಸಿ ನಾನು ಕೊಡೊ ಟಾರ್ಚರನ್ನು ಸಭಿಕರು ಸ್ವಲ್ಪ ಹೊತ್ತು ಸಹಿಸಿಕೊಂಡರೆ ಸಾಕು ಎಂದು ಹೇಳುತ್ತಲೇ ತಮ್ಮ ಹಾಸ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಹಲವು ಹಾಸ್ಯ ನಟರ ಮಿಮೆಕ್ರಿ ನಡೆಯಿತು. ಸಾದು ಕೋಕಿಲಾ ಮಿಮೇಕ್ರಿ ಮಾಡುವಾಗ ಹಿಂದಿನಿಂದ ಯಾರೋ ಇದು ಟೆನ್ನಿಸ್ ಕೃಷ್ಣನ ತರ ಇದೆ ಎಂದು ಕಾಮೆಂಟ್ಸ್ ಕೊಟ್ಟರು ಸಭಿಕರು ಮತ್ತೆ ನಕ್ಕರು. ಶಶಿ ಗೋಪಿನಾಥ್ ರವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೇಗೆ ಬರೆಯುತ್ತಾರೆ ಎಂದು ಮೂಕಾಭಿನಯದ ಮೂಲಕ ತೋರಿಸಿದರು.
 
" ಹಿಂಗೆಲ್ಲಾ ಎಕ್ಸಾಮ್ ಬರೀತಾರಾ... ನಾನು ನೋಡೇ ಇಲ್ಲ ಬುಡಪ್ಪ....!!!"

ಹಿಂದಿನಿಂದ ಮತ್ತೊಬ್ಬ ಡೈಲಾಗ್ ಬಿಟ್ಟ. ಮತ್ತೆ ಜನ ನಕ್ಕುರು. ಸ್ಟೇಜ್ ಮೇಲಿನ ಹಾಸ್ಯದ ಜೊತೆಗೆ ಸಭಿಕರ ಹಾಸ್ಯದ ಕಮೇಂಟ್ಸ್ ಗಳು ಮತ್ತಷ್ಟು ಸಭಿಕರನ್ನು ನಗೆ ಕಡಲಿನತ್ತ ಕೊಂಡೊಯ್ಯಿತು. ಆತನ ಅಭಿನಯ ನಿಜಕ್ಕೂ ಅದ್ಭುತವಾಗಿತ್ತು. ಡ್ಯಾನ್ಸ್ ಅಭಿನಯಕ್ಕೆ ಹಾಡನ್ನು ಸಿದ್ಧಪಡಿಸಿಕೊಳ್ಳುವ ಸ್ವಲ್ಪ ಗ್ಯಾಪ್ ನಲ್ಲಿ ನಿರೂಪಕರಾದ ಅರುಣ್ ಶೃಂಗೇರಿಯವರು ತಾವೇ ಮೈಕ್ ಹಿಡಿದು ಹಾಸ್ಯ ಕಾರ್ಯಕ್ರಮ ನಡೆಸಿದರು. ನಿಜಕ್ಕೂ ಅಧ್ಬುತವಾಗಿತು. ಬಹುಮುಖ ಪ್ರತಿಭೆ ಅನಿಸ್ತು.....

ಅಂತಿಮವಾಗಿ ಅಧ್ಯಕ್ಷರ ಭಾಷಣ. ಅಧ್ಯಕ್ಷತೆ ವಹಿಸಿದ್ದ ಅಶೋಕ್ ಶೆಟ್ಟಿಯವರು ಹಾಸ್ಯದ ಧಾಟಿಯಲ್ಲೇ ಮಾತು ಪ್ರಾರಂಭಿಸಿದರು.
"ಎಲ್ಲಿ ನಾನು ಹೆಚ್ಚು ಸಮಯ ಮಾತಾಡಬೇಕಾಗುತ್ತೋ  ಅಂದ್ಕಂಡಿದ್ದೆ. ಮಂಜುನಾಥ್ ಕೊಳ್ಳೆಗಾಲ ರವರು ಜಾಸ್ತಿ ಮಾತಾಡಿ ನನ್ನ ಜವಬ್ದಾರಿ ಕಡಿಮೆ ಮಾಡಿದ್ರು ಅವರಿಗೆ ನನ್ನ ಧನ್ಯವಾದಗಳು.. ಈಗಾಗಲೇ ಸಮಯ ಮೀರಿ ಹೋಗಿದೆ. ನಾನು ಜಾಸ್ತಿ ಮಾತಾಡಲ್ಲ...." ಎಂದರು
ಹಿಂದಿನಿಂದ

"ಪರವಾಗಿಲ್ಲ ಜಾಸ್ತಿ ಮಾತಾಡಿ ನಾವ್ ಎಷ್ಟ್ಹೋತ್ತಾದರೂ ಕಾಯ್ತೀವಿ"

ಯಾರೋ ಕಿಚಾಯಿಸಿದರು
ಆದರೂ ಅಧ್ಯಕ್ಷರು ಜಾಸ್ತಿ ಮಾತಾಡೊಲ್ಲ ಅಂತ ಮನದಲ್ಲೇ ಶಪಥ ಮಾಡಿಯಾಗಿತ್ತು..
ಮತ್ತೆ ಮಾತು ಮುಂದು ವರೆಸಿದರು...

"ತ್ರಿಕೆಯ ಕಳೆದ ವರ್ಷದ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ನಾನೇ ಅಧ್ಯಕ್ಷನಾಗಿದ್ದೆ. ಆಗ ನಾನು ಗಡ್ಡ ಬಿಟ್ಟಿದ್ದೆ. ಇವನು ಬುದ್ಧಿಜೀವಿಯಿರಬೇಕು ಅಂತ ತಿಳ್ಕೊಂಡು ಅಧ್ಯಕ್ಷ ಮಾಡಿದ್ರು. ಈಗ ನುಣ್ಣಗೆ ಶೇವ್ ಮಾಡಿಕೊಂಡಿದ್ದೇನೆ. ತಲೆಯ ಮೇಲೆ ಕೂದಲು ಉದುರಿದೆ. ಮತ್ತೆ ಬುದ್ಧಿವಂತ ಅಂತ ತಿಳ್ಕೊಂಡು ನನ್ನ ಅಧ್ಯಕ್ಷರನ್ನಾಗಿ ಮಾಡಿರಬಹುದು"

ಹಾಸ್ಯಾತ್ಮಕವಾದ ಅವರ ಮಾತುಗಳು ಎಲ್ಲರ ಮೊಗದಲ್ಲೂ ನಗು ತರಿಸಿತು. ಅಧ್ಯಕ್ಷರ ಕೊನೆಯ ಪಂಚ್ ಡೈಲಾಗಗಳು ನಗು ನಗುತ್ತಲೇ ಕಾರ್ಯಕ್ರಮ ಮುಗಿಯಲು ಸಹಕಾರ ನೀಡಿದಂತಾಯಿತು. ತ್ರಿಕೆ ನೀಡಿದ ಲಘು ಉಪಹಾರ, ಅಲ್ಲಿ ನಡೆದ ಹರಟೆ ಖುಷಿ ನೀಡಿತು...
ಇಲ್ಲಿ ಬರೆದದ್ದಕ್ಕಿಂತ ಬರೆಯದೇ ಉಳಿದ ಎಷ್ಟೋ ವಿಷಯಗಳಿವೆ. ತ್ರಿಕೆಯ ಸುಂದರವಾದ ಸಂಪೂರ್ಣವಾದ ಕಾರ್ಯಕ್ರಮ ಹೊಗಳಾಗದೇ ಪದಗಳು ಮೌನ ವಹಿಸಿವೆಯಷ್ಟೆ.
ಕಾರ್ಯಕ್ರಮ ಆಯೋಜಿಸಿದ ತ್ರಿಕೆಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು.

ಪ್ರಕಾಶ್ ಎನ್. ಜಿಂಗಾಡೆ