Saturday 3 December 2016

ರಾಜ್ಯೋತ್ಸವದ ನೆನಪು...

ತ್ರಿಕೆ ಬಳಗದ ರಾಜ್ಯೋತ್ಸವ ಸಮಾರಂಭವಿತ್ತು. ಕವಿಗೋಷ್ಠಿಗೆ ಕಾರ್ಯಕ್ರಮಕ್ಕೆ ಅನಿರೀಕ್ಷಿತ ಆಹ್ವಾನವೂ ಬಂದಿತು. ಶಿಕ್ಷಕನಾಗಿ  ಕವಿಗಳ ಕಾವ್ಯವನ್ನು ಭೋದಿಸುತ್ತಿದ್ದ ನನಗೆ ನನ್ನದೇ ಕವನಕ್ಕೆ ಕವಿಗೋಷ್ಠಿಯ ಭಾಗ್ಯ ಸಿಕ್ಕಿದ್ದು ಸಂತೋಷವಾಯಿತು.
ಹೋಗ್ಲಿ ಏನೋ ಒಂದ್ ದಬಾಕಿ ಬರೋಣ ಅಂತೆ ಹೊರಟೆ, ಪರಿಚಯದವರಾರೂ ಇರಲಿಲ್ಲ. ಎಲ್ಲಿ ಮೂಕ ಬಸವಣ್ಣನಂತೆ ಮೂಲೆಯಲ್ಲಿ ಕೂತು ಬರಬೇಕೆನೋ ಅಂದ್ಕಂಡಿದ್ದೆ. ಹಂಗಾಗ್ಲಿಲ್ಲ ಅನ್ನಿ....ತ್ರಿಕೆ ತೋರಿಸಿದ ಆತ್ಮೀಯತೆಗೆ ನಾನೇ ಮೂಕನಾಗಿ ಹೋದೆ.
ಆಹ್ವಾನಿಸಿದ್ದು ಮದ್ಯಾಹ್ನ ಮೂರು ಗಂಟೆಗೆ. ತಲುಪಿದ್ದೂ ಸರಿಯಾಗಿ ಮೂರು ಗಂಟೆಗೆ.  ಏನೋ ಬಾರಿ ಟೈಮ್ ಸೆನ್ಸ್ ಇರೋನ್ ತರ ಕರೆಕ್ಟಾಗಿ ಮೂರು ಗಂಟೆಗೆ ಬ್ಲಾಸುಮ್ ಶಾಲೆಗೆ ಎಂಟ್ರಿ ಕೊಟ್ಟೆ. ಸಮಯ ಪ್ರಜ್ಞೆ ಇರೋನು ಅಂದ್ಕೊಬೇಡಿ, ಬೆಂಗಳೂರಿನ ಟ್ರಾಫಿಕ್  ಸಹಕರಿಸಿದರೆ ಅದು ಸಾಧ್ಯವಾದೀತು ಅಷ್ಟೆ....

ಇನ್ನೂ ಬೈಕ್ ನಿಲ್ಸಿಸರಲಿಲ್ಲ ತ್ರಿಕೆಯ ಸದಸ್ಯರು ನಗು ಮುಖದಿಂದ ಸ್ವಾಗತಿಸಿದರು. ಫೇಸ್ ಬುಕ್ನಲ್ಲಿ ಆಧುನಿಕ ಟಚ್ ಅಪ್ ಕೊಟ್ಟ ಫೋಟೋ ನೋಡಿ ನನ್ನನ್ನಾರೂ ಗುರುತಿಸರು ಅಂದ್ಕಂಡಿದ್ದು ನನ್ನ ಮೂರ್ಖತನವಾಗಿತ್ತು. ಮೊದಲ ಎಂಟ್ರಿಯಲ್ಲೇ ನಗುಮುಖದ ಸ್ವಾಗತ ಖುಷಿಕೊಟ್ಟಿತು. ತ್ರಿಕೆಯ ಅಧ್ಯೆಕ್ಷೆ ರೂಪಕ್ಕನವರಿಂದ ಸ್ವಾಗತ. ಅಲ್ಲಿ ಕೂತ್ಕಂಡಾಗ ಉದಯೋನ್ಮುಖ ಕವಿ ವಿನಾಯಕ ಭಟ್ ರವರ ಪರಿಚಯ ಮಾಡಿಕೊಂಡೆ. ಕಾರ್ಯಕ್ರಮ ಇನ್ನೂ ಪ್ರಾರಂಭವಾಗಿರಲಿಲ್ಲ. ಅಲ್ಲಿ ಕೂತಾಗ ಕನ್ನಡದ ಹಾಡುಗಳು ಪ್ರಸಾರವಾಗುತ್ತಿದ್ದವು. ಕನ್ನಡ ಕಂಪಿನ ಹಾಡುಗಳಿಂದ ಮನಸ್ಸು ಪ್ರಫುಲ್ಲವಾಯಿತು.

"ಕನ್ನಡಮ್ಮನ ದೇವಾಲಯ ಕಂಡೆ ಆ ಹೆಣ್ಣಿನ ಕಂಗಳಲಿ"

ಎಂಬ ಹಾಡು ಬರೊ ಟೈಮಲ್ಲಿ ತ್ರಿಕೆ ಅಧ್ಯಕ್ಷೆ ರೂಪಕ್ಕ ಕನ್ನಡದ ಕಾರ್ಯಕ್ರಮಕ್ಕೆ ಆಸಕ್ತಿಯಿಂದ ಓಡಾಡುತ್ತಿದುದು ಕಾಣಿಸಿತು. ಈಗ ಈ ಹಾಡು ಸೂಕ್ತ ಎಂದೆನಿಸಿತು.
ಕನ್ನಡ ನಾಡು ನುಡಿಯ ಸೇವೆ ಮಾಡುವವರಿಗೆ ಹಾಡೊಂದು ಪ್ರಾಸಂಗಿಕವಾಗಿ ಬಿತ್ತರವಾದಾಗ ಮನಸ್ಸಿಗೆ ಮುದ ನೀಡಿತು. ಉತ್ತಮ ಕಾರ್ಯವೊಂದನ್ನು ಹೊಗಳಿ ಬರೆಯುವುದಕ್ಕಿಂತ ಈ ಹಾಡೇ ಸಮರ್ಪಿಸಬೇಕು ಎಂದು ಮನಸ್ಸು ಯೋಚಿಸಿದ್ದು ಸುಳ್ಳಲ್ಲ   ಅಲ್ಲಿ ಪ್ರಸಾರವಾದ ಆ ಹಾಡೇ ತ್ರಿಕೆ ಸದಸ್ಯರ ಕನ್ನಡ ಪ್ರೇಮ ಹೇಳಿ ಮುಗಿಸಿತ್ತು. ರೀಲ್ ನಲ್ಲಿ ಪ್ರಸಾರವಾದ ಆ ಗೀತೆಯ ಸಾರವನ್ನು ರಿಯಲ್ಲಾಗಿ ಕಂಡಂತಾಯಿತು.
"ಕನ್ನಡ ನಾಡಿನ ಚರಿತೆಯನೇ ಕಂಡೇ ಆ ಹೆಣ್ಣಿನ ಹೃದಯದಲಿ"
ಇಂಗ್ಲಿಷಿನ ವ್ಯಾಮೋಹದ ದಿನಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಚರಿತ್ರೆ ಅಲ್ಲಿ ಮೇಳೈಸಿತ್ತು. ಯಾವ ಲಾಭದ ಆಸೆಗೂ ಒಳಪಡದೇ ಕನ್ನಡದ ಕಂಕೈರ್ಯ ಮಾಡುತ್ತಿರುವುದೇನು ಸಾಮಾನ್ಯವೇ...? ಏನೋ ನಾಲ್ಕಕ್ಷರದ ಸಾಲನ್ನು  ಗೀಚುವ ನನ್ನಂತಹ ಸಾಮಾನ್ಯ ಶಿಕ್ಷಕನಿಗೆ ಮತ್ತು ಹಲವು ಯುವಕರಿಗೆ ಕವಿಯ ಸ್ಥಾನ ಕೊಟ್ಟು ಆ ವೇದಿಕೆಯಲ್ಲಿ ಅವಕಾಶ ಕೊಟ್ಟಿದ್ದರಿಂದ ಆ ವೇದಿಕೆಯು ನನ್ನ ಕಣ್ಣಿಗೆ ಸಾಮಾನ್ಯ ವೇದಿಕೆಯಂತೆ ಕಾಣಲಿಲ್ಲ. ಉದಯೋನ್ಮುಕ ಕವಿಗಳು ಎಂದು ಯಾರೋ ವೇದಿಕೆಯಲ್ಲಿ ಹೇಳಿದಾಗ ಮನದಲ್ಲೇನೋ ಪುಳಕ. ನಾನು ಅದಕ್ಕೆ ಅರ್ಹನೇ ಎಂದು ಮನಸ್ಸನ್ನೇ ಹತ್ತಾರು ಬಾರಿ ಕೇಳಿಕೊಂಡಿದ್ದುಂಟು. ಸಾಗ ಬೇಕಾದ ದಾರಿ ಇನ್ನೂ ತುಂಬಾ ದೂರವಿದೆ ಎನಿಸಿತು.

ತ್ರಿಕೆಯ ಸದಸ್ಯರು  ತೆಂಗಿನ ಎಳನೀರು ಕಾಯಿಗಳ ಗೊಂಚಲನ್ನು ಶಾಲೆಯ ಒಳ ಕೊಠಡಿಯಿಂದ ಹೊರ ತರಲಾರಂಭಿಸಿದರು. ರಾಸಾಯನಿಕ ಮಿಶ್ರಿತ ಹಾಳು ವಿದೇಶಿಯ ಪಾನೀಯಗಳಿಗಿಂತ ಆರೋಗ್ಯದಾಯಕ ಶುದ್ಧ ಎಳನೀರನ್ನು ಎಲ್ಲಾ ಅತಿಥಿಗಳಿಗೂ ಲೋಟದಲ್ಲಿ ಹಾಕಿ ಕೊಟ್ಟು ಜೀವ ತಂಪಾಗಿಸಿದರು. ಮೊನ್ನೆ ಸ್ನೇಹಿತರೊಬ್ಬರ ಮದುವೆಗೆ ಹೋದಾಗ ವೆಲ್ ಕಮ್ ಜ್ಯೂಸ್ ಅಂತ ಕಬ್ಬಿನ ಹಾಲನ್ನು ನೀಡಿದ್ದರು. ದೇಶಿಯ ಪಾನಿಯಗಳಿಗೆ ಮಹತ್ವ ನೀಡುತ್ತಿರುವ ನಮ್ಮವರ ಮನಃಸ್ಥಿತಿ ಬದಲಾದಂತೆ ಕಂಡಿತು. ಮದುವೆಯ ಆ ಕಬ್ಬಿನ ಹಾಲಿನ ನೆನಪು ಇನ್ನೂ ಮನಸ್ಸಿನಲ್ಲಿರುವಾಗಲೇ ತ್ರಿಕೆಯ ಸದಸ್ಯರು ಎಳನೀರು ಕೊಟ್ಟಿದ್ದು ವಿಶೇಷ ಎನಿಸಿತು. ಪ್ರಶಂಸನೀಯ ಎನಿಸಿತು. ಎಲ್ಲರಿಗೂ ಮಾದರಿಯಾಗುವಂತಹ ವಿಶೇಷತೆಯನ್ನು  ಪಾನೀಯದಲ್ಲಿಯೂ ತೋರಿಸಿದ್ದಕ್ಕೆ ಧನ್ಯತೆ ಮೂಡಿತು....

ಕಾರ್ಯಕ್ರಮದ ಉದ್ದಕ್ಕೂ ಹರಿದದ್ದು ಹಾಸ್ಯದ ಹೊನಲು. ಮಂಜುನಾಥ ಕೊಳ್ಳೆಗಾಲ ರವರು ಟಿಪಿ ಕೈಲಾಸಂ ರವರ ಕೆಲವು ಹಾಸ್ಯ ಪ್ರಸಂಗಗಳನ್ನು ಹೇಳಿದ್ದು ಕೇಳಿ ಮುಖ ನಗುವಿನಲ್ಲಿ ಅರಳಿತು. ಟಿ,ಪಿ, ಕೈಲಾಸಂ ರವರು ತಮ್ಮನ್ನು ತಾವು "ಪ್ರಹಸನ ಪಿತಾಮಹಾ" ಎಂದು ಕರೆದುಕೊಂಡಿದ್ದು ಕೇಳಿ ವಿಶಿಷ್ಟ ಎನಿಸಿತು. ಅಷ್ಟೊಂದು ಹಾಸ್ಯ ಪ್ರಹಸನ ರಚಿಸಿದ ಕೈಲಾಸಂ ರವರಿಗೆ ಆ ಬಿರುದನ್ನು ನೀಡುವ ಯೋಗ್ಯತೆ ನಿಜಕ್ಕೂ ಯಾರಲ್ಲೂ ಇರಲಿಲ್ಲ ಬಿಡಿ... ಅಂತಹ ಮಹಾನ್ ಕವಿಯ ಪರಿಚಯ ಮತ್ತು ಅವರ ಹಾಸ್ಯ ಪ್ರಜ್ಞೆ ಪರಿಚಯವಾದದ್ದು ಖುಷಿ ನೀಡಿತು. ನಂತರ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಣಿಕಾಂತ್ ರವರಿಗೆ ಸನ್ಮಾನ ನಡೆಯಿತು. ಕಾರ್ಯಕ್ರಮದ ನಿರೂಪಕರು ಮಧ್ಯೆ ಮಧ್ಯೆ ಹಾಸ್ಯದ ಧಾಟಿಯಲ್ಲಿ ಮಾಡಿದ ನಿರೂಪಣೆ ಗಮನ ಸೆಳೆಯಿತು. ಕವನ ವಾಚಿಸಿದ ಕವಿಗಳಿಗೆ ಪ್ರಶಸ್ತಿ ನೀಡಲಾಯಿತು. ನಾನು ಸಹ ಕ್ಯಾಮರಾ ಕಣ್ಣಿಗೆ ಫೋಸು ಕೊಟ್ಟು ಪ್ರಶಸ್ತಿಯನ್ನು ಸ್ವಿಕರಿಸಿದೆ.

ನನ್ನ ನಂತರ ಸುಂದರವಾಗಿ ಕವನ ವಾಚಿಸಿದ ಪ್ರಶಸ್ತಿ ಅನ್ನೋ ಕವಿಗೆ ಪ್ರಶಸ್ತಿ ಕೊಡಲು ವೇದಿಕೆಗೆ ಆಹ್ವಾನಿಸಿದರು. ಪ್ರಶಸ್ತಿಯ ಹೆಸರು ಕೇಳಿದ ಕೂಡಲೇ ಸಭಿಕರೆಲ್ಲಾ ಘೊಳ್ಳೆಂದು ನಕ್ಕರು. ಸೂರ್ಯನಿಗೆ ಟಾರ್ಚಾ...? ಸರಸ್ವತಿಗೇ ಟ್ಯೂಷನ್ನ...? ಪ್ರಶಸ್ತಿಗೆಯೇ ಪ್ರಶಸ್ತಿನಾ....? ಎಂಬ ಯೋಚನೆ ಅವರ ಮೆದುಳಿನಲ್ಲಿ ಆವರಿಸಿರೊಂಡಿದ್ದು ಸುಳ್ಳಲ್ಲ ಆ ಯೋಚನಯೇ ಅವರ ನಗುವಿಗೆ ಕಾರಣವಾಯಿತಷ್ಟೆ....

ನಂತರ ಶಶಿ ಗೋಪಿನಾಥ್ ಎಂಬುವರು ವೇದಿಕೆಗೆ ಆಗಮಿಸಿ ನಾನು ಕೊಡೊ ಟಾರ್ಚರನ್ನು ಸಭಿಕರು ಸ್ವಲ್ಪ ಹೊತ್ತು ಸಹಿಸಿಕೊಂಡರೆ ಸಾಕು ಎಂದು ಹೇಳುತ್ತಲೇ ತಮ್ಮ ಹಾಸ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಹಲವು ಹಾಸ್ಯ ನಟರ ಮಿಮೆಕ್ರಿ ನಡೆಯಿತು. ಸಾದು ಕೋಕಿಲಾ ಮಿಮೇಕ್ರಿ ಮಾಡುವಾಗ ಹಿಂದಿನಿಂದ ಯಾರೋ ಇದು ಟೆನ್ನಿಸ್ ಕೃಷ್ಣನ ತರ ಇದೆ ಎಂದು ಕಾಮೆಂಟ್ಸ್ ಕೊಟ್ಟರು ಸಭಿಕರು ಮತ್ತೆ ನಕ್ಕರು. ಶಶಿ ಗೋಪಿನಾಥ್ ರವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೇಗೆ ಬರೆಯುತ್ತಾರೆ ಎಂದು ಮೂಕಾಭಿನಯದ ಮೂಲಕ ತೋರಿಸಿದರು.
 
" ಹಿಂಗೆಲ್ಲಾ ಎಕ್ಸಾಮ್ ಬರೀತಾರಾ... ನಾನು ನೋಡೇ ಇಲ್ಲ ಬುಡಪ್ಪ....!!!"

ಹಿಂದಿನಿಂದ ಮತ್ತೊಬ್ಬ ಡೈಲಾಗ್ ಬಿಟ್ಟ. ಮತ್ತೆ ಜನ ನಕ್ಕುರು. ಸ್ಟೇಜ್ ಮೇಲಿನ ಹಾಸ್ಯದ ಜೊತೆಗೆ ಸಭಿಕರ ಹಾಸ್ಯದ ಕಮೇಂಟ್ಸ್ ಗಳು ಮತ್ತಷ್ಟು ಸಭಿಕರನ್ನು ನಗೆ ಕಡಲಿನತ್ತ ಕೊಂಡೊಯ್ಯಿತು. ಆತನ ಅಭಿನಯ ನಿಜಕ್ಕೂ ಅದ್ಭುತವಾಗಿತ್ತು. ಡ್ಯಾನ್ಸ್ ಅಭಿನಯಕ್ಕೆ ಹಾಡನ್ನು ಸಿದ್ಧಪಡಿಸಿಕೊಳ್ಳುವ ಸ್ವಲ್ಪ ಗ್ಯಾಪ್ ನಲ್ಲಿ ನಿರೂಪಕರಾದ ಅರುಣ್ ಶೃಂಗೇರಿಯವರು ತಾವೇ ಮೈಕ್ ಹಿಡಿದು ಹಾಸ್ಯ ಕಾರ್ಯಕ್ರಮ ನಡೆಸಿದರು. ನಿಜಕ್ಕೂ ಅಧ್ಬುತವಾಗಿತು. ಬಹುಮುಖ ಪ್ರತಿಭೆ ಅನಿಸ್ತು.....

ಅಂತಿಮವಾಗಿ ಅಧ್ಯಕ್ಷರ ಭಾಷಣ. ಅಧ್ಯಕ್ಷತೆ ವಹಿಸಿದ್ದ ಅಶೋಕ್ ಶೆಟ್ಟಿಯವರು ಹಾಸ್ಯದ ಧಾಟಿಯಲ್ಲೇ ಮಾತು ಪ್ರಾರಂಭಿಸಿದರು.
"ಎಲ್ಲಿ ನಾನು ಹೆಚ್ಚು ಸಮಯ ಮಾತಾಡಬೇಕಾಗುತ್ತೋ  ಅಂದ್ಕಂಡಿದ್ದೆ. ಮಂಜುನಾಥ್ ಕೊಳ್ಳೆಗಾಲ ರವರು ಜಾಸ್ತಿ ಮಾತಾಡಿ ನನ್ನ ಜವಬ್ದಾರಿ ಕಡಿಮೆ ಮಾಡಿದ್ರು ಅವರಿಗೆ ನನ್ನ ಧನ್ಯವಾದಗಳು.. ಈಗಾಗಲೇ ಸಮಯ ಮೀರಿ ಹೋಗಿದೆ. ನಾನು ಜಾಸ್ತಿ ಮಾತಾಡಲ್ಲ...." ಎಂದರು
ಹಿಂದಿನಿಂದ

"ಪರವಾಗಿಲ್ಲ ಜಾಸ್ತಿ ಮಾತಾಡಿ ನಾವ್ ಎಷ್ಟ್ಹೋತ್ತಾದರೂ ಕಾಯ್ತೀವಿ"

ಯಾರೋ ಕಿಚಾಯಿಸಿದರು
ಆದರೂ ಅಧ್ಯಕ್ಷರು ಜಾಸ್ತಿ ಮಾತಾಡೊಲ್ಲ ಅಂತ ಮನದಲ್ಲೇ ಶಪಥ ಮಾಡಿಯಾಗಿತ್ತು..
ಮತ್ತೆ ಮಾತು ಮುಂದು ವರೆಸಿದರು...

"ತ್ರಿಕೆಯ ಕಳೆದ ವರ್ಷದ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ನಾನೇ ಅಧ್ಯಕ್ಷನಾಗಿದ್ದೆ. ಆಗ ನಾನು ಗಡ್ಡ ಬಿಟ್ಟಿದ್ದೆ. ಇವನು ಬುದ್ಧಿಜೀವಿಯಿರಬೇಕು ಅಂತ ತಿಳ್ಕೊಂಡು ಅಧ್ಯಕ್ಷ ಮಾಡಿದ್ರು. ಈಗ ನುಣ್ಣಗೆ ಶೇವ್ ಮಾಡಿಕೊಂಡಿದ್ದೇನೆ. ತಲೆಯ ಮೇಲೆ ಕೂದಲು ಉದುರಿದೆ. ಮತ್ತೆ ಬುದ್ಧಿವಂತ ಅಂತ ತಿಳ್ಕೊಂಡು ನನ್ನ ಅಧ್ಯಕ್ಷರನ್ನಾಗಿ ಮಾಡಿರಬಹುದು"

ಹಾಸ್ಯಾತ್ಮಕವಾದ ಅವರ ಮಾತುಗಳು ಎಲ್ಲರ ಮೊಗದಲ್ಲೂ ನಗು ತರಿಸಿತು. ಅಧ್ಯಕ್ಷರ ಕೊನೆಯ ಪಂಚ್ ಡೈಲಾಗಗಳು ನಗು ನಗುತ್ತಲೇ ಕಾರ್ಯಕ್ರಮ ಮುಗಿಯಲು ಸಹಕಾರ ನೀಡಿದಂತಾಯಿತು. ತ್ರಿಕೆ ನೀಡಿದ ಲಘು ಉಪಹಾರ, ಅಲ್ಲಿ ನಡೆದ ಹರಟೆ ಖುಷಿ ನೀಡಿತು...
ಇಲ್ಲಿ ಬರೆದದ್ದಕ್ಕಿಂತ ಬರೆಯದೇ ಉಳಿದ ಎಷ್ಟೋ ವಿಷಯಗಳಿವೆ. ತ್ರಿಕೆಯ ಸುಂದರವಾದ ಸಂಪೂರ್ಣವಾದ ಕಾರ್ಯಕ್ರಮ ಹೊಗಳಾಗದೇ ಪದಗಳು ಮೌನ ವಹಿಸಿವೆಯಷ್ಟೆ.
ಕಾರ್ಯಕ್ರಮ ಆಯೋಜಿಸಿದ ತ್ರಿಕೆಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು.

ಪ್ರಕಾಶ್ ಎನ್. ಜಿಂಗಾಡೆ

No comments:

Post a Comment