Monday 24 April 2017

ಪ್ರೇತಾತ್ಮದ ಮನೆಯಲ್ಲಿ (ಭಾಗ-9)

ಪ್ರೇತಾತ್ಮದ ಮನೆಯಲ್ಲಿ (ಭಾಗ-9)

ಪ್ರೇತಾತ್ಮದ ಮನೆಯಲ್ಲಿ (ಭಾಗ-8)

ಪ್ರೇತಾತ್ಮದ ಮನೆಯಲ್ಲಿ (ಭಾಗ-8)

ಪ್ರೇತಾತ್ಮದ ಮನೆಯಲ್ಲಿ (ಭಾಗ-7)

ಪ್ರೇತಾತ್ಮದ ಮನೆಯಲ್ಲಿ (ಭಾಗ-7)

ಪ್ರೇತಾತ್ಮದ ಮನೆಯಲ್ಲಿ (ಭಾಗ -6)

ಪ್ರೇತಾತ್ಮದ ಮನೆಯಲ್ಲಿ (ಭಾಗ -6)

ಪ್ರೇತಾತ್ಮದ ಮನೆಯಲ್ಲಿ (ಭಾಗ-5)

ಪ್ರೇತಾತ್ಮದ ಮನೆಯಲ್ಲಿ (ಭಾಗ-5)

ಪ್ರೇತಾತ್ಮದ ಮನೆಯಲ್ಲಿ (ಭಾಗ-4)

ಪ್ರೇತಾತ್ಮದ ಮನೆಯಲ್ಲಿ (ಭಾಗ-4)

ಪ್ರೇತಾತ್ಮದ ಮನೆಯಲ್ಲಿ, (ಭಾಗ-3)

ಪ್ರೇತಾತ್ಮದ ಮನೆಯಲ್ಲಿ, (ಭಾಗ-3)

ಪ್ರೇತಾತ್ಮದ ಮನೆಯಲ್ಲಿ (ಭಾಗ-2)

ಪ್ರೇತಾತ್ಮದ ಮನೆಯಲ್ಲಿ (ಭಾಗ-2)

ಪ್ರೇತಾತ್ಮದ ಮನೆಯಲ್ಲಿ. (ಭಾಗ-1)

ಪ್ರೇತಾತ್ಮದ ಮನೆಯಲ್ಲಿ.  (ಭಾಗ-1)

ಏನೋ ವಿಚಿತ್ರವಾದ ಸದ್ದು. ಕೆಲವೊಂದು ಸಲ ಯಾರೋ ಕೂಗಿದಂತೆಯೂ ಅಥವಾ ನರಳಾಡುತ್ತಿರುವಂತೆಯೂ ಕೂಗುತ್ತಿತ್ತು. ರಾತ್ರಿ ಒಬ್ಬನೇ ಬೇರೆ ಆ ದಿಕ್ಕಿನತ್ತ ಹೋಗಿ ನೋಡೋಣವೆಂದರೆ ಭಯ. ಒಂದು ವೇಳೆ ಅದು ಭೂತನೋ ಪಿಶಾಚಿಯೋ ಆಗಿದ್ದರೆ. ಛೇ ಹಾಗಾಗುವುದು ಬೇಡ ಎಂದು ಮನಸ್ಸು ಹೇಳುತ್ತಿತ್ತು. ಆದರೂ ದಿನ ರಾತ್ರಿ ಆ ದಿಕ್ಕಿನತ್ತ ಈ ರೀತಿಯಾಗಿ ವಿಚಿತ್ರವಾದ ಧ್ವನಿ ಬರಲು ಕಾಣವೇನು. ಯಾಕೋ ಕುತೂಹಲ ಮೂಡಲಾರಂಭಿಸಿತು. ಬೆಳಗ್ಗೆ ಎದ್ದು ಅಜ್ಜಿಯನ್ನು ಕೇಳಿದರಾಯಿತು ಎಂದು ಕೊಂಡು ಆ ದಿನ ರಾತ್ರಿ ಹಾಗೆಯೇ ಮಲಗಿಕೊಂಡೆ. ಹೇಗೋ ದೆವ್ವದ ತರದ ಆ ವಿಚಿತ್ರ ಧ್ವನಿಯನ್ನು ಕೇಳುತ್ತಲೇ ಮಲಗಿಕೊಂಡೆ. ನಿದ್ದೆ ಹತ್ತಿದಾಗ ಮತ್ತೆ ಆ ಧ್ವನಿಯ ಬಗ್ಗೆ ಏನೂ ಗೊತ್ತಾಗಲಿಲ್ಲ. ಬೆಳಗ್ಗೆ ಚಿಕ್ಕಮ್ಮ ಗಂಟೆ ಬಾರಿಸುತ್ತಾ ತುಳಸಿ ಪೂಜೆ ಮಾಡುವಾಗಲೇ ನನಗೆ ಎಚ್ಚರವಾಗಿದ್ದು...

 ಅಜ್ಜಿ ಆಗ ತಾನೇ ಸ್ನಾನ ಮಾಡಿಕೊಂಡು ತುಳಸಿ ಮಾಲೆಯ ಮಣಿಗಳನ್ನು ಎಣಿಸುತ್ತಾ ಜಪ ಮಾಡುತ್ತಾ ಕಟ್ಟೆಯ ಮೇಲೆ ಕುಳಿತ್ತಿದ್ದಳು. ಚಿಕ್ಕಮ್ಮ ಪೂಜೆ ಮುಗಿಸಿಕೊಂಡು ಒಳಗೆ ಹೋದಾಗ ಸೀದಾ ಅಜ್ಜಿಯ ಬಳಿ ಹೋಗಿ ಕುಳಿತುಕೊಂಡೆ. ಅಜ್ಜಿಯ ನೂರ ಒಂದನೇ ಮಣಿಯ ಶತನಾಮ ಜಪ ಮುಗಿಸುವ ಹಂತದಲ್ಲಿದ್ದಳು.  ಜಪ ಮುಗಿದ ಕೂಡಲೇ ಅಜ್ಜಿಯೊಡನೆ ಮಾತಿಗೆ ಕುಳಿತೆ.

"ಅಜ್ಜಿ.. ನಮ್ಮ ಮನೆಯ ಹಿಂಬಾಗದ ದಿಕ್ಕಿನತ್ತ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಏನೋ ವಿಚಿತ್ರವಾದ ಶಬ್ಧ ಕೇಳುತ್ತಿತ್ತು... ಏನಜ್ಜಿ ಅದು..?  ಏನೋ ಒಂಥರಾ ಸದ್ಧು. ದೆವ್ವನೋ ಪಿಶಾಚಿಯೋ ಇರಬೇಕೆಂದು ನನಗೆ ಭಯವಾಗಿತ್ತು..."

ನನ್ನ ಮಾತು ಕೇಳಿದ ಕೂಡಲೇ ಅಜ್ಜಿ  

"ಶ್ರೀ ಮಾರುತಿ, ಪವನ ಸುತ, ಆಂಜನೇಯಯಾ ನಮಃ" 

 ಎಂದು ಜಪ ಮಾಡುತ್ತಾ ನನ್ನತ್ತ ಕೋಪದ ದೃಷ್ಟಿಯನ್ನು ಬೀರುತ್ತಾ ಒಳಗೆ ಹೋದಳು. ಯಾವಾಗಲೂ ನನ್ನ ಜೊತೆ ಪ್ರೀತಿಯಿಂದ ಮಾತನಾಡುತ್ತಿದ್ದ ಅಜ್ಜಿ ಹೀಗೇಕೆ ಕೋಪಗೊಂಡಳು. ನನ್ನ ಮಾತಿಗೆ ಉತ್ತರಿಸದಂತೆ ಏಕೆ  ಮೌನವಾದಳು. ನಾನು ಏನೋ ತಪ್ಪು ಮಾಡಿರುವಂತೆ ವಕ್ರ ದೃಷ್ಠಿಯಿಂದ ನನ್ನ ನೋಡಲು ಕಾರಣವೇನು...?  ಇದರಲ್ಲಿ ಏನಾದರೂ ರಹಸ್ಯವಿದೆಯಾ..? !! ಅಜ್ಜಿ ಏನಾದರೂ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾಳೆಯೇ..? ಅಜ್ಜಿ ತೋರಿದ  ನಡತೆ ನನ್ನಲ್ಲಿ ಕುತೂಹಲ ಮೂಡಿಸಿತು. ಆದರೆ ನಾನು ಅಲ್ಲಿಗೆ ನಿಲ್ಲಿಸಲಿಲ್ಲ ಅಜ್ಜಿಯ ಹಿಂದೆ ಬಿದ್ದೆ. ಏನಾದರೂ ಮಾಡಿ ಅಜ್ಜಿಯ ಬಾಯಿಂದ ಈ ರಹಸ್ಯವನ್ನು ಹೊರ ತರಲೇ ಬೇಕು. ಅಜ್ಜಿಯು ಜಪ ತಪ ತಿಂಡಿ ತೀರ್ಥ ಮುಗಿಸುವವರೆಗೂ ಕಾಯುತ್ತಿದ್ದೆ. ಬೆಳಗ್ಗೆ ಹನ್ನೊಂದು ಗಂಟೆಯಾಗಿತ್ತು ಅಜ್ಜಿ ಮನೆ ಮುಂದಿರುವ ಜಗುಲಿಯ ಮೇಲೆ ಕುಳಿತ್ತಿದ್ದಳು. ಮತ್ತೆ ಅಜ್ಜಿಯ ಪಕ್ಕದಲ್ಲಿ ಕುಳಿತುಕೊಂಡೆ. ಅಜ್ಜಿ ಮಾತ್ರ ನಾನು ಏನೋ ತಪ್ಪು ಮಾಡಿದವನಂತೆ ನನ್ನನ್ನು ಅಪರಾಧಿಯಂತೆ ನೋಡಲಾರಂಭಿಸಿದಳು. ನಾನು ಮತ್ತೆ ಅಜ್ಜಿಯನ್ನು  ಮಾತಿಗೆ ಎಳೆದುಕೊಂಡೆ.

"ಅಜ್ಜಿ.. ನಾನು ಬೆಳಗ್ಗೆ ಕೇಳಿದ ಮಾತಿಗೆ ನೀನು ಏನು ಉತ್ತರ ಕೊಡಲಿಲ್ಲ. ಯಾರಜ್ಜಿ ಅದು .. ರಾತ್ರಿ ಯಾರೋ ಕೂಗಿದ ಧ್ವನಿ ಕೇಳಿಸಿತು ಅಂದಾಗ ನಿನಗೆ ಏನಾಯ್ತಜ್ಜಿ. ನಾನೇನಾದ್ರು ತಪ್ಪು ಕೇಳಿದ್ನ. ಯಾಕಜ್ಜಿ ನನ್ನ ಮೇಲೆ ಕೋಪ..?"

ನಾನು ಹಾಗೆ ಕೇಳಿದ ಕೂಡಲೇ ಅಜ್ಜಿ ಮತ್ತೆ ನನ್ನ ಮೇಲೆ ಕೋಪದಿಂದ ನೋಡಿದಳು.

"ರಜೆ ಅಂತ ಹೇಳಿಕೊಂಡು ಊರಿಗೆ ಬಂದಿದ್ದೀಯಾ ಸುಮ್ಮನೆ ರಜೆ ಮುಗಿಸಿಕೊಂಡು ಊರಿಗೆ ಹೋಗು. ಇಲ್ಲಿ ಏನೋ ಸದ್ಧಾಯಿತು...!!! ಅಲ್ಲಾರೋ ಮಾತಾಡಿದ್ರು..!! ಇಲ್ಲೇನೋ ಕೂಗಿದಂತಾಯಿತು...!!  ರಾತ್ರಿ ಹನ್ನೆರೆಡು ಗಂಟೆಯಾದಾಗ ದೆವ್ವ ಪಿಶಾಚಿ  ಶಬ್ಧ ಕೇಳಿಸಿತು .. ಇಲ್ಲಿ ಏನೋ ಇದೆ ಅಂತ ಏನೇನೆಲ್ಲಾ ಕಲ್ಪಿಸಿಕೊಂಡು ಮಾತಾಡಿದ್ರೆ ಸುಮ್ನಿರೋಕಾಗಲ್ಲ. ಕಾಲೇಜು ಓದುತ್ತಿದ್ದೇನೆ ಎಂಬ ಅಹಂಕಾರ ಬೇಡ.  ನನಗೂ ಮೀಸೆ ಬರುತ್ತಿದೆ ಅನ್ಕಂಡು ಇಲ್ಲದಿರುವ ವಿಷಯವನ್ನೆಲ್ಲಾ ಕೇಳ್ಕೊಂಡು ಅಹಂಕಾರದಿಂದ ಮೆರೆಯಬೇಡ... ಇಲ್ಲಾಂದ್ರೆ ನಿಮ್ಮಪ್ಪನಿಗೆ ಫೋನ್ ಮಾಡಿ ನಿನ್ನ ಊರಿಗೆ ಕಳುಹಿಸಿ ಬಿಡುತ್ತೇನೆ. ಸುಮ್ಮನೆ ತೆಪ್ಪಗೆ ಬಿದ್ಕಂಡು ರಜೆ ಮುಗಿಸಿ ಕೊಂಡು ಊರಿಗೆ ಹೋಗು ಅಷ್ಟೆ. ನಿನ್ನ ಚಿಕ್ಕಮ್ಮ ಹೊಸದಾಗಿ ಮದುವೆಯಾಗಿ ಬಂದವಳು. ಅವಳ ಕಿವಿಗೆ ಇಂತ ವಿಷಯಗಳನ್ನೆಲ್ಲಾ ಹಾಕಿ ತಲೆ ಕೆಡಿಸಬೇಡ. ದೆವ್ವ ಪಿಶಾಚಿ ಅಂತ ಏನೇನೋ ಹೇಳಿ ಭಯ ಬೀಳಿಸಬೇಡ. ನಿನ್ನ ಚಿಕ್ಕಮ್ಮನ ಹತ್ತಿರ ಇಂಥಹ ವಿಷಯ ಏನೂ ಹೇಳಲೇ ಬಾರದು ಏನೂ ಕೇಳಲೇ ಬೇಡ ಗೊತ್ತಾಯ್ತಾ..." 
ಅಜ್ಜಿ ರೋಷದಿಂದ ಹೇಳಿದಳು

"ಯಾಕಜ್ಜಿ ಕೇಳ ಬಾರದು... ನಾನು ಕೇಳೇ ಕೇಳ್ತೀನಿ. ಏನೋ ವಿಚಿತ್ರವಾದದ್ದನ್ನು ಕೇಳಿದರೆ. ನೋಡಿದರೆ ಅದರ ಬಗ್ಗೆ ಮಾತನಾಡಬಾರದು ಅಂದರೆ ಹೇಗೆ...? ಇಲ್ಲವಾದರೆ ಎಲ್ಲಾ ವಿಷಯವನ್ನು ನೀನೇ ಹೇಳಿಬಿಡು. ನೀನು ಹೇಳ್ತಿಯೋ ..? ಅಥವಾ ಚಿಕ್ಕಮ್ಮನ ಹತ್ರ ಕೇಳ್ ಬೇಕೋ ನೀನೆ ನಿರ್ಧಾರ ಮಾಡು. ಸುಮ್ಮನೆ ನನ್ನ ಹತ್ರ ಏನೂ ಮುಚ್ಚಿಡ ಬೇಡ. ರಾತ್ರಿ ನಮ್ಮನೆಯ ಹಿತ್ತಲ ದಿಕ್ಕಿನಲ್ಲಿ ಕೂಗಿದ್ದು ಯಾರು.. ? ಅಲ್ಲಿ ನಿಜವಾಗ್ಲೂ ದೆವ್ವ ಇದೆಯಾ...? ಇದ್ದರೆ ಆ ದೆವ್ವ ಯಾರದ್ದು...? ಹೇಳಜ್ಜಿ... ?"

ನಾನು ನನ್ನ  ಹಠವನ್ನು ಬಿಡಲೇ ಇಲ್ಲ. ಮತ್ತೆ ಅಜ್ಜಿಯನ್ನು ಸತಾಯಿಸಿದೆ.

ಆಗ ಅಜ್ಜಿ ನಿಧಾನವಾಗಿ ದೆವ್ವದ ರಹಸ್ಯ ಬಿಡಿಸಿ ಹೇಳಲಾರಂಭಿಸಿದಳು...

"ನೋಡು ಪ್ರಕಾಶ ಎಲ್ಲಾ ವಿಷಯಾನೂ ಹೇಳ್ತೀನಿ. ನೀನು ಯಾವ ಕಾರಣಕ್ಕೂ ಚಿಕ್ಕಮ್ಮನಿಗೆ ಏನೂ ಕೇಳಬಾರದು. ಯಾವುದೇ ರೀತಿಯಾದ ಪ್ರಶ್ನೆಯನ್ನು ಕೇಳ ಬಾರದು. ರಾತ್ರಿ ಹನ್ನೆರಡು ಗಂಟೆಗೆ ಮನೆಯ ಹಿತ್ತಲಿನಿಂದ ಬಂದ ವಿಚಿತ್ರ ಧ್ವನಿಯ ಬಗ್ಗೆಯಂತೂ ಕೇಳಲೇ ಬಾರದು.. ಅಥವಾ ಅಜ್ಜಿ ಹೀಗೆ ಹೇಳಿದಳು.. ಹಾಗೆ ಹೇಳಿದಳು.. ಎಂದು ಯಾರ ಹತ್ತಿರವೂ ಹೇಳಬಾರದು. ನಿಮ್ಮಪ್ಪನ ಹತ್ತಿರವೂ ಸಹ.. ನೀನು ಊರಿಗೆ ಹೋದಾಗಲಾಗಲಿ ಅಥವಾ ಈ ಊರಿನಲ್ಲಾಗಲಿ ಯಾರ ಹತ್ತಿರಾನೂ ಈ ವಿಷಯವನ್ನು ಕುರಿತು ಚರ್ಚೆ ಮಾಡಲೇ ಬಾರದು. ನಾನು ಹೇಳಿದಂತೆ ನಡೆದು ಕೊಳ್ಳುತ್ತೇನೆಂದು ಮಾತು ಕೊಡು ಹಾಗಿದ್ದರೆ ಮಾತ್ರ ಹೇಳುತ್ತೇನೆ. ಆದರೆ ಯಾವ ಕಾರಣಕ್ಕೂ ಕೊಟ್ಟ ಮಾತನ್ನು ಮರೆಯಬಾರದು. ಹಾಗಂತ ಆಣೆ ಮಾಡು..."

ಅಜ್ಜಿ ನನ್ನ ಕೈಯನ್ನು ತಲೆಯ ಮೇಲೆ ಇಟ್ಟುಕೊಂಡಳು. ನನಗೆ ಬೇರೆ ದಾರಿಯೇ ಇರಲಿಲ್ಲ. ನಾನು 'ಹ್ಞೂಂ' ಎಂದು ಒಪ್ಪಿಕೊಂಡೆ. 

ಆಗ ಅಜ್ಜಿ ತನ್ನ ಮಾತು ಮುಂದುವರೆಸಿದಳು.
"ನೋಡು ನಿನ್ನ ಚಿಕ್ಕಪ್ಪನಿಗೆ ಐದು ವರ್ಷದ ಹಿಂದೆಯೇ ಒಂದು ಮದುವೆಯಾಗಿತ್ತು. ಆಗ ನೀನಿನ್ನು ಹೈಸ್ಕೂಲಲ್ಲಿ ಓದ್ತಾ ಇದ್ದೆ. ನಿಮ್ಮಪ್ಪನಿಗೆ ನಿನ್ನ ಚಿಕ್ಕಪ್ಪನನ್ನು ಕಂಡರೆ ಆಗುತ್ತಿರಲಿಲ್ಲ. ಅವರ ಮೇಲೆ ಅತಿಯಾದ ಕೋಪವಿತ್ತು. ಮದುವೆಗೆ ಕರೆದರೂ ಬರಲಿಲ್ಲ. ನಿಮ್ಮ ಕುಟುಂಬದ ಗೈರು ಹಾಜರಿಯಲ್ಲೇ ಚಿಕ್ಕಪ್ಪನ ಮದುವೆ ನಡೆಯಿತು. ನಿಮ್ಮಪ್ಪನಾಗಲಿ, ನಮ್ಮಮ್ಮವಾಗಲೀ  ನಮ್ಮ ಹಳ್ಳಿಯ ಕಡೆಗೆ ಹತ್ತು ಹನ್ನೆರಡು ವರ್ಷದ ವರೆಗೂ ಬರಲೇ ಇಲ್ಲ.  ಈ ರೀತಿಯಾಗಿ ಮದುವೆಗೆ ಬಾರದೇ ನಿನ್ನ ಚಿಕ್ಕಪ್ಪನ ಮೇಲೆ ನಿಮ್ಮಪ್ಪ ಸೇಡು ತೀರಿಸಿಕೊಂಡಿದ್ದರು. ಚಿಕ್ಕಪ್ಪನ ವಿಷಯವಿರಲಿ ಹೆತ್ತ ತಾಯಿಯಾದ ನನ್ನನ್ನು ನೋಡಲೂ ಸಹ ಬರುತ್ತಿರಲಿಲ್ಲ. ಬೇಕಾದಾಗ ನಾನೇ ಬೆಂಗಳೂರಿಗೆ ಹೋಗಿ ಒಂದೆರಡು ದಿನ ಇದ್ದು ನಿಮ್ಮನ್ನೆಲ್ಲಾ ಮಾತನಾಡಿಸಿಕೊಂಡು ಬರುತ್ತಿದ್ದೆ... ಅದೆಲ್ಲಾ ಹಳೆ ಕತೆ ಬಿಡು.  ಈಗ ನಿಮ್ಮ ಚಿಕ್ಕಪ್ಪ ಎರಡನೇ ಮದುವೆಯಾಗಲು ನಿಮ್ಮಪ್ಪನೇ ಕಾರಣ. ನಿಮ್ಮಪ್ಪನೇ ಮುಂದೆ ನಿಂತು ನಿನ್ನ ಚಿಕ್ಕಪ್ಪನ ಮದುವೆ ಮಾಡಿಸಿದ. ಯಾವಾಗ ನಿಮ್ಮಪ್ಪ ಮತ್ತು ನಿನ್ನ ಚಿಕ್ಕಪ್ಪ ಮತ್ತೆ ಒಂದಾದ್ರೋ ಆವಾಗ ನಿಮ್ಮಪ್ಪ ನಿನ್ನನ್ನು ರಜೆಗೆ ಅಂತ ಈ ಅಜ್ಜಿ ಮನೆಗೆ ಕಳುಹಿಸಿದ್ದಾನೆ ಗೊತ್ತಾಯ್ತಾ... ಅದಿರಲಿ ಈಗ ಚಿಕ್ಕಪ್ಪನ ಮೊದಲ ಹೆಂಡತಿಯ ವಿಷಯಕ್ಕೆ ಬರುತ್ತೇನೆ. ಅವಳ ಹೆಸರು ಅಂಜಲಿ ಅಂತ. ನೀನು ಅವಳನ್ನು ನೋಡಿಲ್ಲ. ನೀನೇನು ನಿಮ್ಮಪ್ಪ, ನಿಮ್ಮಮ್ಮನೂ ಸಹ ಸಹ ನೋಡಿಲ್ಲ. ಆದರೆ ಅವಳು ಒಳ್ಳೆಯ ಸಂಸ್ಕಾರವಂತಳು. ಅವಳಿಗೆ ಅತ್ತೆಯನ್ನು ಕಂಡರೆ ಆಗುತ್ತಿರಲಿಲ್ಲ. ಊಟ ಬಡಿಸುವುದಾಗಲಿ. ಚಹ ಮಾಡಿ ಕೊಡುವುದಾಗಲೀ ಮಾಡುತ್ತಿರಲಿಲ್ಲ. ಅಡಿಗೆ ಮಾತ್ರ ರುಚಿ ರುಚಿಯಾಗಿ ಮಾಡುತ್ತಿದ್ದಳು. ಬೇಕಾದಾಗ ನಾನೇ ಹೋಗಿ ಬಡಿಸಿಕೊಳ್ಳುತ್ತಿದ್ದೆ. ಇದೇ ಕಾರಣಕ್ಕೆ ನಿನ್ನ ಚಿಕ್ಕಪ್ಪ ಹೆಂಡತಿಯೊಡನೆ ಜಗಳ ಮಾಡುತ್ತಿದ್ದ. ಒಂದೊಂದು ಸಲ ಜಗಳ ವಿಕೋಪಕ್ಕೂ ಹೋಗುತ್ತಿತ್ತು. ಹೀಗೆ ಜಗಳವಾಡುತ್ತಲೇ ಎರಡು ವರ್ಷ ಸಂಸಾರವೂ ಮಾಡಿದರು. ನಾನು ಒಂದು ವಾರ ಬೆಂಗಳೂರಿಗೆ ನಿಮ್ಮ ಮನೆಗೆ ಬಂದಾಗ ಅಂಜಲಿ ಸತ್ತ ವಿಷಯ ತಿಳಿಯಿತು. ಅವಳು ಹೇಗೆ ಸತ್ತಳೆಂಬ ವಿಷಯ ನಿನ್ನ ಚಿಕ್ಕಪ್ಪ ಸರಿಯಾಗಿ ಹೇಳಲೇ ಇಲ್ಲ. ಅವಳು ಸತ್ತು ಹೋದಾಗಿನಿಂದ ಪ್ರತಿ ಅಮಾವಾಸ್ಯೆಯಲ್ಲಿ ಅವಳ ಆತ್ಮ ವಿಚಿತ್ರವಾದ ಧ್ವನಿಯಿಂದ ಕೂಗುತ್ತದೆ. ಅದು ಅಮಾವಾಸ್ಯೆಯ ದಿನ ಮಾತ್ರ. ಮನೆಯಲ್ಲಿ ಅಂಜಲಿಯ ಧ್ವನಿ ಯಾರಿಗೂ ಕೇಳಿಸುವುದಿಲ್ಲ. ಇಷ್ಟು ದಿನ ಆ ಆತ್ಮದ ಚೀರಾಟ ನನಗೆ ಮಾತ್ರ ಕೇಳಿಸುತ್ತಿತ್ತು. ಅದು ಬಿಟ್ಟರೆ ನಮ್ಮ ಮನೆಯಲ್ಲಿ ಆ ಪ್ರೇತಾತ್ಮದ ಧ್ವನಿಯನ್ನು ಕೇಳಿದವನೆಂದರೆ ನೀನೊಬ್ಬನೇ... ಬಹುಷಃ ಆ ಆತ್ಮ ನಿನ್ನ ಬಳಿ ಏನೋ ಹೇಳಲು ಪ್ರಯತ್ನಿಸುತ್ತಿರಬಹುದು. ಆಂಜನೇಯ ಸ್ವಾಮಿಯ ತಾಯತವನ್ನು ಕಟ್ಟಿ ಕೋ ಏನೂ ಆಗದು..."
ಅಜ್ಜಿ ತನ್ನ ಚೀಲದಲ್ಲಿ ತಾಯತವೊಂದನ್ನು ತೆಗೆದು ಕೊಟ್ಟಳು.. 

ಅಜ್ಜಿ ಹೇಳಿದ ವಿಷಯ ಕೇಳಿ ಗಾಬರಿಯಾಯಿತು. ಚಿಕ್ಕಪ್ಪ ಏನಾದರೂ ಅಂಜಲಿ ಚಿಕ್ಕಮ್ಮಳನ್ನು ಸಾಯಿಸಿ ಎರಡನೇ ಮದುವೆಯಾದರೇ...? ಅಮವಾಸ್ಯೆಯ ದಿನ ಯಾರಿಗೂ ಕೇಳದ ಅಂಜಲಿಯ ಪ್ರೇತಾತ್ಮದ ಕೂಗು ನನಗೆ ಮಾತ್ರ ಕೇಳಿಸಿದ್ದು ಯಾಕೆ...? ಆ ಪ್ರೇತಾತ್ಮ ನನ್ನ ಜೊತೆ ಯಾಕೆ ಮಾತನಾಡಲು ಬಯಸುತ್ತಿದೆ.  ನಿನ್ನೆ ಮಾತ್ರ ಅಜ್ಜಿಯ ಊರಿಗೆ ಬಂದ ನನಗೆ ಈ ರೀತಿಯ ವಿಚಿತ್ರ ಅನುಭವ ಯಾಕಾಗುತ್ತಿದೆ. ಇಲ್ಲ ಹೇಗಾದರೂ ಈ ರಹಸ್ಯವನ್ನು ಕಂಡು ಹಿಡಿಯಲೇ ಬೇಕು. ಅಂತ ನಾನು ಮನದಲ್ಲೇ ತೀರ್ಮಾನಿಸಿಕೊಂಡೆ. ಆದರೆ ಅದಕ್ಕೆ ಮುಂದಿನ ಅಮವಾಸ್ಯೆವರೆಗೂ ಕಾಯಬೇಕು.

ಹೇಗೋ ಅಮವಾಸ್ಯೆ ಬಂದೇ ಬಿಟ್ಟಿತು. ರಾತ್ರಿ ಎಲ್ಲರ ಊಟವಾದನಂತರ ಹೊರಗಿನ ಕೋಣೆಯಲ್ಲಿ ಮಲಗುವ ತರಹ ನಾಟಕವಾಡಿದೆ. ರಾತ್ರಿ ಹನ್ನೊಂದು ಗಂಟೆಯಾಗುವರೆಗೆ ಮನೆಯಲ್ಲಿ ಎಲ್ಲರೂ ಮಲಗಿದ್ದರು. ನಾನು ಮಾತ್ರ ಆ ಪ್ರೇತಾತ್ಮದ ಹುಟುಕಾಟದಲ್ಲಿದ್ದೆ. ರಾತ್ರಿ ಸರಿಯಾಗಿ ಹನ್ನೆರಡು ಗಂಟೆಯಾದ ಕೂಡಲೇ ಮನೆಯ ಹಿಂದಿನಿಂದ ಪ್ರೇತಾತ್ಮದ ಸದ್ದು ಕೇಳಿಸಿತು. ನಾನು ನಿಧಾನವಾಗಿ ಎದ್ದು ಬಾಗಿಲು ತೆಗೆದು, ಶಬ್ಧ ಬಂದ ಕಡೆ ಹೋದೆ. ಕತ್ತಲು ಘನ ಘೋರವಾಗಿತ್ತು. ಟಾರ್ಚ್ ನ ಬೆಳಕಿನಿಂದ ನಿಧಾನವಾಗಿ ಹೆಜ್ಜೆ ಹಾಕುತ್ತಾ ಮುಂದೆ ಹೋದೆ. ಸ್ವಲ್ಪ ದೂರದಲ್ಲಿ ಸಮಾದಿ ಕಣಿಸಿತು. ಟಾರ್ಚ್ ನ ಬೆಳಕನ್ನು ಸಮಾದಿಯ ಕಡೆಗೆ ಹಾಯಿಸಿದೆ. ಯಾರೋ ಕುಳಿತಂತೆ ಭಾಸವಾಯಿತು. ಉದ್ದವಾದ ಕೂದಲುಗಳಿಂದ ಮುಖ ಮುಚ್ಚಿಹೋಗಿತ್ತು. ಕೂದಲಿನ ಮರೆಯಲ್ಲಿ ಕೆಂಪಾದ ಕಣ್ಣು ಗೋಚರಿಸಿತು. ಕಣ್ಣ ನೋಟವೇ ಭಯಾನಕವಾಗಿ ಕಾಣಿಸುತ್ತಿತ್ತು....

(ಮುಂದುವರೆಯುವುದು)