Wednesday 20 September 2017

ಮಗಳು (ಕವನ)

ಮಗಳು

ತೊದಲು ನಾಲಿಗೆಯ ನುಡಿ
ಮುದ್ದಾದ ಮುಖ
ತುಟಿಯಂಚಿನ ತುಂಟತನ
ಕಣ್ಣಲ್ಲಿಯ ಪ್ರೀತಿ ನೋಡಿ
ದಣಿದು ಬಂದ ಅಪ್ಪ
ಎಲ್ಲೋ ಕಳೆದು ಹೋಗುವನು.....

ಸತ್ತಾಗ ಕಂಬನಿಗೆರೆವರು
ಯಾರೆಂದು ತಿಳಿಯದ 
ಮೂರ್ಖರು
ಕುಡಿಯಲ್ಲೇ ಚಿವುಟುವರು
ಅಜ್ಞಾನವ ಮೆರೆವರು
ಹೆಣ್ಣ ಪ್ರೀತಿ ಕಾಣದ ಗಾವಿಲರು....

                -ಪ್ರಕಾಶ್ ಎನ್ ಜಿಂಗಾಡೆ

ಮೌನ (ಕವನ)

ಮೌನ...

ಹೃದಯಗಳ ನೋವಿನಲಿ
ಮನ ಮನಸುಗಳ ಸಂಘರ್ಷದಲಿ
ಅವಳಿಗೂ ಮಾತನಾಡುವ ತವಕ
ಇವನಿಗೂ ಮಾತನಾಡಿಸುವ ಕಾತುರ
ಮಧ್ಯೆ ಪ್ರವೇಶಿಸಿದ್ದು ಮೌನ..

ಬರಿಯ ಕಣ್ಣ ಭಾಷೆ
ಮೂಕ ನೋಟ
ಮನಸಿನ ಮಾತುಗಳು
ತುಟಿಯ ಕಂಪನಗಳು
ಆಗಲೂ ಮೌನದ್ದೇ ಕಾರುಬಾರು..

ಮಾತಿಗಿಂತಲೂ ಮೇಲಾಗಿ
ಭಾವನೆಗಿಂತಲೂ ಮಿಗಿಲಾಗಿ
ನೂರೊಂದು ಅರ್ಥ ನೀಡಿ
ಎಲ್ಲವನು ತಿಳಿಸುತಿಹುದು
ಬರಿಯ ಮೌನ..!! ಮೌನ...!!! ಮೌನ...!!!

               -ಪ್ರಕಾಶ್.ಎನ್.ಜಿಂಗಾಡೆ

ಪ್ರೀತಿ (ಕವನ)

ಎಂದೋ ಮನದಲಿ ಹುಟ್ಟಿದ ಪ್ರೀತಿ
ಇಂದಿಗೂ ನವನವೀನವಾಗಿ ಕಾಡುತಿಹುದು...

ರಂಗು ರಂಗಿನ ಚಿತ್ತಾರವ ಬಿಂಬಿಸಿ
ಯೌವ್ವನದ ಕನಸು ಹಿತವಾಗಿಹುದು...

ಪ್ರೀತಿಯೆಂಬ ಶರಧಿಯ ಮೇಲೆ
ಬಾಳ ನೌಕೆ ಮುಂದೆ ಸಾಗಿಹುದು..

ಇಳಿ ವಯಸಲೂ ಅದೇ ನೆನಪುಗಳು
ದುಗುಡದಲೂ ತಿಳಿ ಹಿತವ ತರುತಿಹುದು..

ಅದಕೆಯೇ ಅಜ್ಜ ನಾಚುತಿಹನು
ಯೌವ್ವನದ ಕನಸ ನೆನೆ ನೆನೆದು...

ಅಜ್ಜಿಗೆ ಮತ್ತೆ ಯೌವ್ವನ ಮುತ್ತುವುದು
ಮೊದಲ ಸ್ಪರ್ಶದ ಆ ಪ್ರೀತಿಯ ನೆನೆದು...

ಸಾವು ಸಹ ಸುಖವೆನಿಸುವುದು
ಜೊತೆಯಿರಲು ಪ್ರೀತಿ ಅನುದಿನವೂ...

                 -ಪ್ರಕಾಶ್ ಎನ್ ಜಿಂಗಾಡೆ

ಓಡಿ ಹೋದವರು...

ಓಡಿ ಹೋದವರು...

ಅವನು ಜಿಂಗಿಲಾಲ ಉಡುಪಿನಲಿ ಜಗಮಗ
ಇವಳು ಸುಪನಾತಿ ಸೀರೆಯಲಿ ಮಿರ ಮಿರ
ಏನೋ ಸೆಳೆತ ಇಬ್ಬರಲೂ
ಹೊರಟಿದ್ದು ಇಂದ್ರನೂರಿಗೆ ಕನಸ ಹೊತ್ತು
ಪ್ರಾಯದ ಲೇಖನಿ ಹಿಡಿದು
ಕಾಣದೂರಿನಲಿ ಕಾವ್ಯ ಬರೆಯಲು
ಒಲವ ತೋಳಿನಲಿ ಗೀತಯೊಂದನು ಹಾಡಲು.....

ಎಲ್ಲವನು ಮರೆತರು ಕ್ಷಣ ಕಾಲ
ತುತ್ತು ನೀಡಿದವರು ನೆನಪಾಗಲಿಲ್ಲ
ಕೂಸುಮರಿ ಹೊತ್ತವರು ಕಾಣಲಿಲ್ಲ
ಕೂಳನ್ನ ಹಂಚಿಕೊಂಡವರೂ ಅರಿವಿಗೆ ಬರಲಿಲ್ಲ
ಮರೆತರು ಮರೆತೇ ಹೋದರು
ಪ್ರಣಯ ಗೀತೆ ಹಾಡಿದರು
ಬಿಸಿಲಿನ ತಾಪ ಇಳಿಯುವ ತನತ.....

ಕೃಷ್ಣ ರಾಧೆಯರ ಪ್ರೇಮ ಪೂಜಾರ್ಹ
ದುಷ್ಯಂತ ಶಾಕುಂತಲೆಯರದ್ದುರದು ನಿರ್ಮಲ
ಷಹಜಾನ್ ಮುಮ್ತಾಜ್ ರದ್ದು ಐತಿಹಾಸಿಕ
ಹೇಳದಿರಿ ಅವರ ಹೆಸರುಗಳನು
ಅಂತಹ ನಿಷ್ಠೆಯಿದೆಯೇ ನಿಮ್ಮಲಿ
ಬದುಕಿ ತೋರುವ ಛಲವಿದೆಯೇ ನಿಮ್ಮಲಿ
ಇಲ್ಲವಾದರೆ ನನ್ನದೂಂದು ದಿಕ್ಕಾರ ವಿರಲಿ...

                    - ಪ್ರಕಾಶ್. ಎನ್. ಜಿಂಗಾಡೆ

ವೇದನೆ (ಕವನ)

ಹಿಂದೆನೇ ಬಿದ್ದು
ಬಣ್ಣದ ಮಾತಿನಲಿ ಲಲನೆಯ ಗೆದ್ದು
ಒಲಿಸಿಕೊಂಡೆ ಅವಳ ಪ್ರೀತಿಯನು
ಸಂವೇದನೆಯಿಂದ ...

ಛೇಡಿಸಿ ಚುಡಾಯಿಸಿ
ಅಹಂಮಿನಲಿ ಮುಳುಗಿ
ಪಡೆಯಲಾರದೇ ಪ್ರೀತಿಯ
ನರಳುವರು ಕೆಲವರು some  ವೇದನೆಯಿಂದ..

-ಪ್ರಕಾಶ್ ಎನ್ ಜಿಂಗಾಡೆ

ಬಿಸಿ ಚಹ...

ಬಿಸಿ ಚಹ...

ಅದ್ಯಾರು ಹೇಳಿದ್ದರೊ
ಗಿಡದ ಎಲೆಯೊಂದನಂ ಹುಡಿಯಾಡಿಸಿ
ಕುದಿಸಿ ಸುವಾಸನಾ ಬಿಸಿ ಪಾನಂ ತಯಾರಿಸಿ
ಪ್ರಾತಃ ಕಾಲದಿ ಉದರಕೆ ಹಾಕಿ
ದಿನದ ಕಜ್ಜಕೆ ಸನ್ನದ್ಧಗಳಿಸಲು...

ನೀರಿಕ್ಷೆಗಳೊಂದಿಗೆ ಧಾಳಿಯಿಟ್ಟ
ಬಂಧುವಂ ತಣಿಸುವ ಪಾನರಸವಿದು
ಸ್ನೇಹಕ್ಕೆ ಪ್ರೀತಿಗೆ ರಾಯಭಾರಿಯಿದು
ಸಾಮರಸ್ಯದಿ ಮಧುರ ಹಿತವನೀಯುದು
ಅಮೃತ ಪಾನವಿದು ಹೊಸ ದಿನಕೆ ನಾಂದಿಯಿದು...

ವಧು ಶಾಸ್ತ್ರದಿ ವರನಂ ಸೆಳೆದುದು
ತಾಣದಲಿ ಪ್ರೇಮಿಗಳಂ ಬೆರೆಸಿದುದು
ಅಜ್ಞಾತ ಜನರ ಜ್ಞಾತರಂ ಮಾಡಿದಿದು
ಸರ್ವರಂ ಸರ್ವತ್ರಂ ಸ್ವಾದವೀಯುವುದು
ಬಿಸಿ ಪಾನಂ... ಎನ್ನ ಮನ ರಸಂ..

ವ್ಯವಹಾರದಲಿ ಕುಚ್ಯೋದ್ಯಂ ಬೆರೆಸಿ
ಮಂದಹಾಸದಿ ಬಿಸಿ ಚಹವಂ ತರಿಸಿ
ಪಾನದ ನೆಪದಲಿ ಮೋಸವ ತೋರಿಸಿ
ಮಾಡಿಹರು ದ್ರೋಹಂ ಕಪಟ ನಾಟಕಂ
ಚಹದಲೂ ಸ್ವಾರ್ಥಂ ಬಿಡನ್ ಈ ನರನ್...

                 -ಪ್ರಕಾಶ್ ಎನ್ ಜಿಂಗಾಡೆ

Friday 8 September 2017

ಅಂತ... ಆತಂಕ (ಭಾಗ-4)

ಅಂತ... ಆತಂಕ (ಭಾಗ-4)

ಕಾರಿನಿಂದ ಇಳಿದ ಕೂಡಲೇ ತನಿಷ್ಕ, ರೋಹನ್ ಮತ್ತು ತಂದೆ ತಾಯಿಯರೊಂದಿಗೆ ಅಲ್ಲೇ ಇರುವ ಚಿಕ್ಕ ಬೆಟ್ಟದಂತಿರುವ ದಿಬ್ಬವನ್ನು ಏರಿದರು. ತಾಯಿ ಸರೋಜಮ್ಮ ಮಾತ್ರ ಬಹಳ ಪ್ರಯಾಸದಿಂದಲೇ ದಿಣ್ಣೆಯನ್ನು ಏರಿದಳು. ಇನ್ನೇನು ಸರೋಜಮ್ಮ ಪೂರ್ತಿ ದಿಣ್ಣೆ ಏರಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇತ್ತು. ಒಂದು ಕಾಲು ದಿಣ್ಣೆಯ ತುದಿಯಲ್ಲಿತ್ತು ಇನ್ನೇನು ಅದನ್ನು ಮೇಲಿಟ್ಟಿದ್ದರೆ ದಿಣ್ಣೆಯ ತುದಿಯನ್ನು ಮುಟ್ಟಿ ಮತ್ತೊಂದು ಪಾರ್ಶ್ವಕ್ಕೆ ಹೊರಳಿ ಆ ದುಷ್ಟರಿಂದ ಕಣ್ಮರೆಯಾಗ ಬೇಕು  ಎನ್ನುವಷ್ಟರಲ್ಲಿ, ಕಾರಿನಿಂದ ಇಳಿದ ದುಷ್ಟರು ಬಂದೂಕಿನಿಂದ ಗುಂಡನ್ನು ಹಾರಿಸಲಾರಂಬಿಸಿದರು. ಒಂದು ಗುಂಡು ಸರೋಜಮ್ಮನ ಕಾಲಿಗೆ ತಗುಲಿಯೇ ಬಿಟ್ಟಿತು. ಮೊದಲೇ ಆಯಾಸವಾಗಿದ್ದ ಸರೋಜಮ್ಮಳಿಗೆ ಗುಂಡಿನ ಏಟು ತಗುಲಿದ್ದು ಸಹಿಸಲಾಗಲಿಲ್ಲ. ಮಗಳು ತನಿಷ್ಕ ಅಮ್ಮನನ್ನು ಮೇಲೆಳೆದುಕೊಂಡು ರಕ್ಷಿಸಿದಳು...

ಅವರ ಬೆನ್ನು ಬಿದ್ದ ದುಷ್ಟರು ಸುಮ್ಮನೇ ಇರಲಿಲ್ಲ. ಅವರನ್ನು ಹಿಡಿಯಲು ಆ ಚಿಕ್ಕ ಬೆಟ್ಟವನ್ನು ಏರಲಾರಂಬಿಸಿದರು. ಇನ್ನೇನು ಆ ದಿಣ್ಣೆ ಏರಿದರೆ ಸಾಕು ಸಿಕ್ಕೇ ಸಿಗುವರು ಎಂಬ ಆತುರತೆ ಆ ದುಷ್ಟ ನಾಯಕನ ಮುಖದಲ್ಲಿ ಕಾಣುತ್ತಿತ್ತು. ಇನ್ನೇನು ಸಿಕ್ಕೇ ಬಿಟ್ಟರು ಎನ್ನುವಂತೆ ಆ ದುಷ್ಟರ ನಾಯಕ ಸಂತೋಷದಿಂದ ಚೀರಲಾರಂಭಿಸಿದ. ಆ ಆರು ಜನ ದುಷ್ಟರು ಬೇಗ ಬೇಗನೇ ಬೆಟ್ಟವನ್ನೇರಲಾರಂಬಿಸಿದರು. ಎಲ್ಲರೂ ಅವಸರವಸರವಾಗಿ ಬೆಟ್ಟ ಏರಿದರು. ಬೆಟ್ಟವನ್ನೇರಿ ನೋಡಿದರು. ಆದರೆ ಅವರ ಸುಳಿಯೂ ಎಲ್ಲಿಯೂ ಕಾಣಿಸಲಿಲ್ಲ.

"ಅರೆ ಈಗ ತಾನೆ ದಿಣ್ಣೆಯನ್ನೇರಿದವರು ಎಲ್ಲಿ ಮಾಯವಾದರೂ....!!"

ಎಲ್ಲರ ಮುಖದಲ್ಲಿ ಆಶ್ಚರ್ಯದ ಭಾವ ಕಾಣಲಾರಂಬಿಸಿತು. ಜಿಂಕೆಯನ್ನು ಹಿಡಿಯುವ ಹಸಿದ ಹುಲಿಯಂತೆ ಸುತ್ತಲೂ ತಡಕಾಡಿದರೂ ಆದರೂ ಅವರಿರುವ ಸುಳಿವು ಎಲ್ಲಿಯೂ ಕಾಣಲಿಲ್ಲ. ಬೆಟ್ಟ ಏರಿದ ಕೂಡಲೇ ಎಲ್ಲಾ ಕಡೆಯೂ ಬಯಲು ಪ್ರದೇಶವೇ ಇತ್ತು.  ಜೊತೆಗೆ ವಾಹನಗಳು ಚಲಿಸುವ ಮಣ್ಣಿನ ರಸ್ತೆಯೊಂದಿತ್ತು. ಆ ದುಷ್ಟರಲ್ಲಿ ಒಬ್ಬ ಪಂಟನು ಮಣ್ಣಿನ ರಸ್ತೆಯಲ್ಲಿ ಸ್ವಲ್ಪ ದೂರ ಹೋಗಿ ಮುಂದೆ ಬಲಕ್ಕೆ ತಿರುಗಿಕೊಳ್ಳುವ ರಸ್ತೆಯ ತಿರುವಿನ ವರೆಗೂ ಹೋಗಿ ಅವರನ್ನು ಹುಡುಕಿದನು. ಆದರೆ ಅಲ್ಲಿಯೂ ಅವರ ಸುಳಿವು ಕಾಣಲಿಲ್ಲ. ..

"ಅಣ್ಣ ಅವರು ಮುಂದಕ್ಕೆ ಹೋಗಿರಲು ಸಾಧ್ಯವೇ ಇಲ್ಲ. ಇಲ್ಲೇ ಎಲ್ಲಾದರೂ ಅವಿತುಕೊಂಡಿರಬೇಕು. ಇರುವ ಐದ್ಹತ್ತು ನಿಮಿಷದ ಸಮಯದಲ್ಲಿ ಅವರು ಬಹಳ ದೂರದ ವರೆಗೂ ಹೋಗಲು ಸಹ ಸಾಧ್ಯವೇ ಇಲ್ಲ. ಅಣ್ಣ.., ಅಲ್ಲಿ ಕಾಣುವ ಕಲ್ಲಿನ ಗೋಡೆಯಿರುವ ಪಾಳು ಮನೆಯಲ್ಲಿ ಹೋಗಿರಬೇಕು. ನಿಜವಾಗಿಯೂ ಅಲ್ಲಿ ಅವರು ಸಿಕ್ಕೇ ಸಿಗುತ್ತಾರೆ "

ಆ ಪಂಟನು ಹಾಗೆ ಹೇಳಿದ ಕೂಡಲೇ ಎಲ್ಲರೂ ಬಂದೂಕನ್ನು ಹಿಡಿದು ಆ ಪಾಳು ಮನೆಯತ್ತ ಧಾವಿಸಿದರು. ಹೊಂಚು ಹಾಕಿ ಕುಳಿತ ಮೃಗಗಳಂತೆ ನಿಧಾನವಾಗಿ ಹೆಜ್ಜೆ ಇಡಲಾರಂಬಿಸಿದರು. ಬಂದೂಕನ್ನು ಗುಂಡು ಹಾರಿಸಲು ಸಿದ್ಧವಾಗಿರಿಸಿಕೊಂಡು ಕಲ್ಲಿನ ಗೊಡೆಯ ಅಂಚಿನಲ್ಲಿ ನಿಧಾನವಾಗಿ ಹೆಜ್ಜೆ ಇಡಿಸಿ ಒಳ ಹೋಗಲು ಇಣುಕಿ ನೋಡಿದರು. ಆದರೆ ಒಳಗೆ ಯಾರೂ ಕಾಣಿಸಲಿಲ್ಲ. ಆ ದುಷ್ಟ ನಾಯಕನ ನಿರೀಕ್ಷೆ ಸುಳ್ಳಾಗಿದ್ದರಿಂದ ಆತ ಕಾಲನ್ನು ಜೋರಾಗಿ ನೆಲಕ್ಕೆ ಬಡಿದು ತನ್ನ ಕೋಪವನ್ನು ಪ್ರದರ್ಶಿಸಿದನು....

"ಅಣ್ಣ ಬಹುಷಃ ಅವರು ಇಲ್ಲೇ ಎಲ್ಲೋ ಬಚ್ಚಿಟ್ಟು ಕೊಂಡಿದ್ದಾರೆ. ಅಗೋ ಅಲ್ಲಿ ರಸ್ತೆ ರಿಪೇರಿಗೆ ಅಂತ ಹಾಕಿರೋ ಜಲ್ಲಿ ಕಲ್ಲಿನ ಹಿಂಬಾಗದಲ್ಲಿ ಅವಿತುಕೊಂಡಿರ ಬಹುದು.."

ಇನ್ನೊಬ್ಬ ಪಂಟ ಹಾಗೆ ಹೇಳಿದ ಕೂಡಲೇ ಎಲ್ಲರೂ ಆ ಜಲ್ಲಿ ಕಲ್ಲಿನ ಕಡೆಗೆ ಧಾವಿಸಿದರು. ಅಲ್ಲಿಯೂ ಅವರು ಕಾಣಲಿಲ್ಲ. ದುಷ್ಟರ ಆ ನಾಯಕನು ಕೋಪದಿಂದ ಅಬ್ಬರಿಸಿದನು...

"ನನ್ನ ತಮ್ಮನ ಜೀವ ತೆಗೆದ ಅವರನ್ನು ನಾನು ಸುಮ್ಮನೇ ಬಿಡುವುದಿಲ್ಲ. ಅವರು ಯಾವ ಪಾತಾಳದಲ್ಲೇ ಅಡಗಿಕೊಂಡಿರಲಿ ನೆಲವನ್ನು ಬಗಿದರೂ ಪರವಾಯಿಲ್ಲ. ಅವರನ್ನು ಸಾಯಿಸದೇ ಇರುವುದಿಲ್ಲ..."

ಹಾಗೆ ಹೇಳುವಾಗ ಆ ದುಷ್ಟನ ಕಣ್ಣಲ್ಲಿ ಕೋಪದ ಜ್ವಾಲೆ ರಕ್ತದಂತೆ ಕೆಂಪಾಗಿತ್ತು. ಮತ್ತೆ ಆತ ಸುತ್ತಲೂ ನೋಡಿದನು. ಅವರು ಎಲ್ಲಿಯೂ ಕಾಣಲಿಲ್ಲ. ಸುತ್ತಲೂ ಬರಿ ಬಯಲು. ಮನೆಗಳೇ ಇಲ್ಲದ ಆ ನಿರ್ಜನ ಪ್ರದೇಶದಲ್ಲಿ ಅವರು ಎಲ್ಲಿ ಹೋಗಲು ಸಾಧ್ಯ ಎಂದು ಎಲ್ಲರೂ ತಲೆ ಕೆರೆದುಕೊಂಡು ಯೋಚಿಸಿದರು. ಆದರೂ ಸಹ ಅವರು ಇರುವಿಕೆಯ ಸುಳಿವು ಎಲ್ಲಿಯೂ ಕಾಣಲಿಲ್ಲ. ಅಷ್ಟರಲ್ಲಿ ಮತ್ತೊಬ್ಬ ಪಂಟನು..

"ಅಣ್ಣ ಬರಿ ಐದೇ ನಿಮಿಷದ ಅಂತರದಲ್ಲಿ ಇವರು ಹೀಗೆ ನಮ್ಮಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ. ಒಂದು ವೇಳೆ ಇಲ್ಲೇ ಅವಿತುಕೊಂಡಿದ್ದರೆ ಇಷ್ಟರೊಳಗೆ ನಮ್ಮ ಕಣ್ಣಿಗೆ ಬೀಳಲೇ ಬೇಕಿತ್ತು.... ಅಣ್ಣ ನನಗೊಂದು ಅನುಮಾನ. ಇವರು ಈ ದಿಬ್ಬವನ್ನು ಏರಿದ ಕೂಡಲೇ ಯಾವುದೋ ಒಂದು ವಾಹನ ಬಂದಿರಬಹುದು. ಇವರು ಆ ವಾಹನದಲ್ಲಿ ಲಿಫ್ಟ್ ತೆಗೆದುಕೊಂಡು ಮುಂದೆ ಹೋಗಿರಬಹುದು. ನಾವು ಈ ದಿಣ್ಣೆಯನ್ನು ಹತ್ತುವುದರೊಳಗೆ ಆ ವಾಹನ ನಮ್ಮ ಕಣ್ಣಿನಿಂದ ದೂರ ಹೋಗಿದ್ದರಿಂದ ನಮಗೆ ಗೊತ್ತಾಗದೇ ಇರಬಹುದು. ಹೀಗೆ ಬಿಟ್ಟರೆ ಅವರು ನಮ್ಮಿಂದ ಇನ್ನೂ ದೂರಕ್ಕೆ ತಪ್ಪಿಸಿಕೊಂಡು ಹೋಗಬಹುದು, ಬೇಗ ಈ ರಸ್ತೆಯಲ್ಲಿ ಹೋಗೋಣ"

ಎಂದು ಹೇಳಿದನು.

ಎಲ್ಲರಿಗೂ ಅವನ ಮಾತು ಸರಿಯಂತೆ ಕಂಡಿತು.

"ಲೋ .. ಸೀನ ಕೆಳಗೆ ಹೋಗಿ ಗಾಡಿ ತಗಂಡ್ ಬಾರ್ಲಾ, ನಾನು ನೋಡೇ ಬಿಡ್ತೀನಿ, ಅದೆಷ್ಟು ದೂರ ಹೋಗ್ತಾರೆ ಅಂತ, ಈ ಮಹದೇವನ ಕೋಟೆಯಿಂದ ಅದೆಂಗೆ ತಪ್ಪಿಸಿಕೊಂಡು ಹೋಗ್ತಾರೆ ಅಂತ ನಾನು ನೋಡೇ ಬಿಡ್ತೀನಿ..."

ಆ ದುಷ್ಟರ ನಾಯಕ ಹಾಗೆ ಹೇಳಿದ ಕೂಡಲೇ ಆ ಪಂಟ ಸೀನ ಕೂಡಲೇ ಕೆಳಗೆ ಇಳಿದು ಮತ್ತೆ ತಮ್ಮ ಕಾರನ್ನು ತೆಗೆದನು. ಆ ಚಿಕ್ಕ ಬೆಟ್ಟದಂತಿರುವ ದಿಣ್ಣೆಯ ಮೇಲೆ ಬರಲು ಇದ್ದ ಒಂದು ಸುತ್ತಿನ ಮಣ್ಣ ರಸ್ತೆಯನ್ನು ಬಳಸಿಕೊಂಡು ಮೇಲೆ ಬಂದನು. ಕೂಡಲೇ ಕಾರನ್ನೇರಿದ ದಷ್ಟರು ಪೂರ್ವ ದಿಕ್ಕಿನ ಕಡೆಗೆ ಕಾರನ್ನು ಜೋರಾಗಿ ಚಲಿಸಿಕೊಂಡು ಹೋದರು.

ಅವರು ಹೋದ ಕೂಡಲೆ. ಪಾಳು ಮನೆಯ ಹಿಂಬಾಗದಲ್ಲಿರುವ ಪಾಳು ಬಾವಿಯಲ್ಲಿ ಅವಿತ್ತಿದ್ದ ರೋಹನ್ ಮತ್ತು ತನಿಷ್ಕ ನಿಟ್ಟುನಿರು ಬಿಟ್ಟರು. ಗುಂಡು ತಗುಲಿದ್ದರಿಂದ ಸರೋಜಮ್ಮನ ಕಾಲಿನಿಂದ ರಕ್ತ ಸುರಿಯಲಾರಂಬಿಸಿತು. ಸರೋಜಮ್ಮಳಿಗಂತೂ ಈಗ ನಡೆಯಲು ಸಾಧ್ಯವೇ ಇರಲಿಲ್ಲ ಒಂದು ವೇಳೆ ಆ ದುಷ್ಟರು ಮತ್ತೆ ತಿರುಗಿ ಬಂದರೆ ನಮ್ಮ ಗತಿ ಏನು...!!! ಇದನ್ನು ನೆನದ ಕೂಡಲೇ ಎಲ್ಲರ ಮುಖದಲ್ಲಿ ಭಯ ಆತಂಕಗಳೆರಡು ಕಾಣತೊಡಗಿದವು.

ಆ ಪಾಳು ಬಾವಿಯಿಂದ ನಿಧಾನವಾಗಿ ಮೇಲೆದ್ದು, ಪಾಳು ಬಿದ್ದಿರುವ ಮನೆಯೊಳಗೆ ಬಂದರು. ತಾಯಿ ಸರೋಜಮ್ಮ ನೋವಿನಿಂದ ನರಳುತ್ತಿದ್ದಳು. ವಿಶ್ರಾಂತಿಗಾಗಿ ಅಲ್ಲೇ  ಮಲಗಿಸಿದರು.

"ಅಪ್ಪ... ಯಾರಪ್ಪ ಇವರು ? ನಮ್ಮನ್ನ ಯಾಕೆ ಹಿಡಿದಿದ್ದಾರಪ್ಪ ? ಆ ದುಡ್ಡಿನ ಲಾರಿ...!! ಮತ್ತೊಂದು ಕಾರಿನಲ್ಲಿದ್ದ ಕೊಂಪೆ ಕೊಂಪೆ ನೋಟುಗಳು. ಏನಪ್ಪ ಇವೆಲ್ಲಾ,  ನಮ್ಮನ್ನೆಲ್ಲಾ ಹಿಡಿದ ಇವರ ಉದ್ದೇಶ ಏನಪ್ಪಾ..? ಬ್ಯಾಂಕ್ ಏನಾದ್ರೂ ದರೋಡೆ ಮಾಡಿದ್ರಾ...? ಹೇಳಪ್ಪ ನನಗಂತೂ ಒಂದೂ ಅರ್ಥ ಆಗ್ತಾ ಇಲ್ಲ"

ತನಿಷ್ಕ ಕುತೂಹಲದಿಂದ ಕೇಳಿದಳು.

ನಾಲಿಗೆಯ ತುದಿಯಲ್ಲೇ ಇದ್ದ ಕುತೂಹಲಕರವಾದ ಹಿಂದಿನ ರಹಸ್ಯವನ್ನು ಚಂದ್ರ ಶೇಖರರು ಹೇಳಲಾರಂಬಿಸಿದರು...

"ನಾನೊಬ್ಬ ಬೆಂಗಳೂರಿನಲ್ಲಿರುವ ರಿಜರ್ವ ಬ್ಯಾಂಕಿನ ಉಪ ಶಾಖೆಯೊಂದರ ಬ್ಯಾಂಕ್ ಮ್ಯಾನೆಜರ್ ಅಂತ ನಿನಗೆ ಗೊತ್ತಿದೆ. ಸುಮಾರು ಇಪ್ಪತ್ತೈದು ವರ್ಷದಿಂದ ನೆಮ್ಮದಿಯಿಂದ ಬ್ಯಾಂಕ್ ಕೆಲಸ ಮಾಡುತ್ತಿದ್ದ ನನಗೆ ಹೀಗೊಂದು ಆಘಾತ ಬರುತ್ತದೆ ಎಂದು ಯಾವತ್ತೂ ಕನಸಿನಲ್ಲಿಯೂ ಊಹಿಸಿರಲಿಲ್ಲ. ಮೊನ್ನೆ ಅಂದರೆ ಐದಾರು ದಿನದ ಹಿಂದೆ ಕೇಂದ್ರ ಸರ್ಕಾರವು ಹಳೆಯ ಐನೂರು ಮತ್ತು ಸಾವಿರರ ನೋಟುಗಳನ್ನು ಬ್ಯಾನ್ ಮಾಡಿತು. ಅವತ್ತಿನಿಂದ ನಮ್ಮ ಬ್ಯಾಂಕಿನ ಕೆಲಸದಲ್ಲಿ ಒತ್ತಡ ಜಾಸ್ತಿಯಾಯಿತು. ರಿಸರ್ವ ಬ್ಯಾಂಕಿನಿಂದ ಬಂದ ಹೊಸ ನೋಟುಗಳು ಮೊದಲು ನಮ್ಮ ಶಾಖೆಗೆ ಬರುತ್ತದೆ. ನಂತರ ಆ ಹೊಸ ನೋಟುಗಳನ್ನು ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕುಗಳಿಗೂ ವಿತರಿಸುವುದು ನಮ್ಮ ಬ್ಯಾಂಕಿನ ಜವಬ್ದಾರಿ. ನೋಟ್ ಬ್ಯಾನ್ ಆದ ನಂತರ ಸಾರ್ವಜನಿಕ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಜನ ಹೊಸ ಹಣ ಪಡೆಯಲು ಎಲ್ಲಾ ಬ್ಯಾಂಕಿನ ಮುಂದೆ ಉದ್ದುದ್ದ ಕ್ಯೂ ನಿಲ್ಲಲಾರಂಬಿಸಿತು. ಜನರ ಈ ಬೇಡಿಕೆಯನ್ನು ಪೂರೈಸಲು ಕೇಂದ್ರದ ರಿಜರ್ವ ಬ್ಯಾಂಕು ಹೊಸ ನೋಟುಗಳನ್ನು ಎಲ್ಲಾ ರಾಜ್ಯಗಳಲ್ಲಿರುವ ತನ್ನ ಉಪ ಶಾಖೆಗಳಿಗೂ ಕಳಿಸಲಾರಂಬಿಸಿತು. ಅದರಂತೆಯೇ ಕರ್ನಾಟಕದ ನಮ್ಮ ಶಾಖೆಗೂ ಐವತ್ತು ಐವತ್ತು ಕೋಟಿ ಹೊತ್ತ ನಾಲ್ಕು ಟೆಂಪೋ ಲಾರಿಗಳು ನಿನ್ನೆ ಶನಿವಾರ ನಮ್ಮ ಬ್ಯಾಂಕಿಗೆ ಬಂದವು. ಹಳೆ ನೋಟುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವ ಮಾಫಿಯಾ ದಂಧೆ ಕೆಲವು ಬ್ಯಾಂಕುಗಳಲ್ಲಿ ಕಮಿಷನ್ ಆಧಾರದ ಮೇಲೆ ನಡೆಯಲಾರಂಬಿಸಿತು. ಹಾಗೆಯೇ ನಾಲ್ಕೈದು ದಿನದ ಹಿಂದೆ ಒಬ್ಬ ವ್ಯಕ್ತಿ ನನ್ನನ್ನು ಬೇಟಿಯಾಗಲು ಬ್ಯಾಂಕಿಗೆ  ಬಂದ. ಆತ ನೋಟುಗಳನ್ನು ಬದಾಲಾಯಿಸಿಕೊಳ್ಳಲು  ಹಣದ ಆಮಿಷವನ್ನು ತೋರಿದ. ಶನಿವಾರ ರಿಸರ್ವ ಬ್ಯಾಂಕಿನಿಂದ  ಐವತ್ತು ಐವತ್ತು ಕೋಟಿಗಳಿರು  ಹೊಸ ನೋಟುಗಳಿರುವ ಟೆಂಪೋ ಲಾರಿಗಳು ನಮ್ಮ ಬ್ಯಾಂಕಿಗೆ ಬರುವ ಮಾಹಿತಿ ಆತನಿಗೆ ನಮಗಿಂತ ಮೊದಲೇ ಅದು ಹೇಗೋ ತಿಳಿದು ಬಿಟ್ಟಿತ್ತು. ಆತ ಸಂಪೂರ್ಣ ಐವತ್ತು ಕೋಟಿಯಿರುವ ಒಂದು ಟೆಂಪೋ ಲಾರಿಯ ಡೀಲ್ ಬೇಕು ಎಂದು ಕೇಳಿದ. ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಟ್ಟರೆ ಇಪ್ಪತ್ತು ಪರ್ಸೆಂಟ್ ಹಣ ನಿಮಗೆ ಕೊಡುತ್ತೇನೆ ಎಂದ. ಅಂದರೆ ಹೊಸ ನೋಟುಗಳನ್ನು ಹಳೇ ನೋಟುಗಳಿಗೆ ಬದಲಾಯಿಸಿದರೆ ನಮಗೆ ಹತ್ತು ಕೋಟಿ ಕಮಿಷನ್ ಸಿಗುತ್ತಿತ್ತು. ಈ ಬಹು ದೊಡ್ಡ ಮೊತ್ತದ ಡೀಲ್ ಗೆ ಬ್ಯಾಂಕಿ ಒಂದೆರಡು ಅಧಿಕಾರಿಗಳು ಸಮ್ಮತಿಸಿದರು. ತಮ್ಮ ಜೀವಮಾನದಲ್ಲೇ ದುಡಿಯಲು ಸಾಧ್ಯವಿಲ್ಲದ ಹಣ ಹೀಗೆ ಸಿಗುತ್ತಿದೆ ಎಂದರೆ ಯಾರು ತಾನೆ ಬಿಟ್ಟಾರು..? ಅವರು ನನ್ನನ್ನು ಸಹ ಒಪ್ಪಿಸಲು ಪ್ರಯತ್ನಿಸಿದರು. ಬ್ಯಾಂಕಿನ ಸಂಪೂರ್ಣ ಜವಬ್ದಾರಿ ಹೊತ್ತ ನನಗೆ ಈ ಕೆಲಸ ಮಾಡಲು ಮನಸ್ಸು ಒಪ್ಪಲಿಲ್ಲ. ಕಾಳ ಸಂತೇಕೋರರನ್ನು ಮಟ್ಟ ಹಾಕಲು ಸರ್ಕಾರ ಪ್ರಯತ್ನಿಸುತ್ತಿರಬೇಕಾದರೆ ನಾವುಗಳೇ ಈ ರೀತಿಯ ದಂಧೆಗೆ ಇಳಿದರೆ ದೇಶ ಹೇಗೆ ಉದ್ಧಾರವಾಗಲು ಸಾಧ್ಯ ಹೇಳು..? ನಾನು ಯಾವ ಕಾರಣಕ್ಕೂ ಈ ಕೆಲಸಕ್ಕೆ ಒಪ್ಪಲಿಲ್ಲ. ಯಾವಾಗ ನನ್ನ ನಿರ್ಧರ ಗಟ್ಟಿಯಾಯಿತೋ ಅಲ್ಲಿಂದ ನನಗೆ ದಿನವೂ ಬೆದರಿಕೆಯ ಕರೆಗಳು ಬರಲಾರಂಬಿಸಿದರು. ನಾನು ಹೆದರಲಿಲ್ಲ. ಆದರೆ ಯಾವಾಗ ಈ ತರಹದ ಅನ್ಯಾಯದ ಕೆಲಸಕ್ಕೆ ನಮ್ಮ ಬ್ಯಾಂಕ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆಂದು ತಿಳಿಯಿತೋ ಆಗ ನನ್ನ ಮೇಲೆ ಅತಿಯಾದ ಒತ್ತಡ ಬರಲಾರಂಬಿಸಿತು. ಶನಿವಾರ ಮಧ್ಯಾಹ್ನದಿಂದಲೇ ಬ್ಯಾಂಕಿಗೆ ಮೂರು ದಿನ ರಜೆ ಹಾಕಿದೆ. ಅಲ್ಲಿಂದ ಮುಂದೆ ಆಗುವ ಅನಾಹುತಗಳಿಗೆ ಬ್ಯಾಂಕಿನ ಇತರ ಸಿಬ್ಬಂದಿಗಳು ಹೊಣೆಯಾಗಿರುತ್ತಾರೆ. ನನ್ನ ಕೈ ಕೆಳಗಿರುವ ಅಸಿಸ್ಟೆಂಟ್ ಮ್ಯಾನೇಜರ್ ನಾನು ಮೂರು ದಿನ ರಜೆ ಹಾಕಿದ್ದು ಕಂಡು ಸಂತೋಷ ಪಟ್ಟ. ಆದರೆ ಕೇಂದ್ರ ರಿಜರ್ವ್ ಬ್ಯಾಂಕ್ ಸ್ವಲ್ಪ ಬುದ್ದಿವಂತಿಕೆಯನ್ನು ಪ್ರದರ್ಶಿಸಿ ಹೊಸ ನೋಟುಗಳಿರುವ ಟೆಂಪೋ ಲಾರಿಯನ್ನು ಆಧುನಿಕ ತಂತ್ರ ಜ್ಞಾನವನ್ನು ಬಳಸಿತು. ಅದರ ಪಾಸ್ ವರ್ಡ್ ನ್ನು ಒಂದು ದಿನದ ನಂತರ ಬ್ಯಾಂಕಿನ ಮುಖ್ಯ ಮ್ಯಾನೇಜರ್ ಗೆ ಮಾತ್ರ ಸಿಗುವಂತೆ ಮಾಡಿತು. ಆದ್ದರಿಂದ ನಾನಿಲ್ಲದೇ ಆ ಹೊಸ ನೋಟುಗಳಿರುವ ಲಾರಿಯನ್ನು ತೆರೆಯಲು ಸಾಧ್ಯವೇ ಇಲ್ಲದಂತಾಯಿತು. ಕಪ್ಪು ಹಣವನ್ನು ಬಿಳಿ ಮಾಡುವ ದುಷ್ಟರ ತಂತ್ರವೆಲ್ಲಾ ವಿಫಲವಾಯಿತು. ಇದರ ಫಲವಾಗಿ ನಾನಿಂದು ದುಷ್ಟರ ಕಪಿ ಮುಷ್ಠಿಯಲ್ಲಿ ಸಿಲುಕಿದ್ದೇನೆ.."

ಚಂದ್ರ ಶೇಖರರು ಸವಿವರವಾಗಿ ಎಲ್ಲವನ್ನು ಹೇಳಿದರು.

ಕುತೂಹಲದಿಂದ ಕೇಳುತ್ತಿದ್ದ ರೋಹನ್ ತನಿಷ್ಕಳ ಕೈಯಿಂದ ಮೊಬೈಲನ್ನು ಕಿತ್ತುಕೊಂಡು,

"ಈ ದುಷ್ಟರನ್ನು ನಾವು ಸುಮ್ಮನೆ ಬಿಡುವುದು ಬೇಡ, ಅವರ ಕೈಯಲ್ಲಿ  ನಾವುಗಳು ಸಿಲುಕಿ ಹಾಕಿಕೊಳ್ಳುವ  ಮೊದಲೇ ನಾವು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡೋಣ. ಆಗ ಮಾತ್ರ ದುಷ್ಟರನ್ನು ನಿಯಂತ್ರಿಸ ಬಹುದು. ನಾವೂ ಸಹ ಸುರಕ್ಷಿತವಾಗಿ ಈ ದುಷ್ಟರ ಜಾಲದಿಂದ ಹೊರ ಬರ ಬಹುದು..."

ಎನ್ನುತ್ತಾ ರೋಹನ್ ಮೊಬೈಲ್ ನಲ್ಲಿ ತಾವು ಚಿತ್ರೀಕರಿಸಿದ ವಿಡಿಯೋವೊಂದನ್ನು ತೆಗೆದ ಇನ್ನೇನು ಅಪ್ ಲೋಡ್ ಮಾಡಬೇಕು ಎನ್ನುವಷ್ಟರಲ್ಲಿ ಮೊಬೈಲ್ನಲ್ಲಿ ಯಾವ ನೆಟ್ ವರ್ಕ್ ಇಲ್ಲದಿರುವುದು ಗಮನಕ್ಕೆ ಬಂತು. 'ಛೆ.....!!!' ಎಂದು ಬೇಸರದಿಂದ ಮತ್ತೆ ಮೊಬೈಲನ್ನು ತನಿಷ್ಕಗೆ ಹಿಂದಿರುಗಿಸಿದ....

ಕೂಡಲೇ ತನಿಷ್ಕ ಏನೋ ಆದಂತೆ ಚಿಟ್ಟನೆ ಚೀರಿದಳು. ಅವಳು ಹಾಗೆ ಚೀರಿದ ರಭಸಕ್ಕೆ ಒಂದು ಕ್ಷಣ ಭೂಮಿಯೇ ನಡುಗಿದಂತೆ ಭಾಸವಾಯಿತು..

ಹಿಂದೆ ತಿರುಗಿ ನೋಡಿದರೆ ರಾಕ್ಷಸರಂತೆ ಭಯಾನಕವಾಗಿ ಕಾಣುತ್ತಿದ್ದ ಇಬ್ಬರು ವ್ಯಕ್ತಿಗಳು ಉದ್ದನೆಯ ಕೋಲನ್ನು ಹಿಡಿದು ನಿಂತಿದ್ದರು. ಅವರ ಹಣೆಯಿಂದ ರಕ್ತ ಸುರಿಯುತ್ತಿತ್ತು. ತೊಟ್ಟ ಬಟ್ಟೆಗಳು ರಕ್ತದ ಕಲೆಯಿಂದ ಕೂಡಿತ್ತು. ಅವರ ಕಣ್ಣುಗಳು ರಕ್ತದಿಂದ ಅದ್ದಿ ತೆಗೆದಂತೆ ಕೆಂಪಾಗಿ ಭಯಂಕರವಾಗಿ ಕಾಣುತ್ತಿದ್ದವು...

ಹೌದು ಅದು ಅವರೇ, ಕಾರಿನಲ್ಲಿ ಕುಳಿತ್ತಿದ್ದಾಗ ಬಂದೂಕು ಹಿಡಿದು ಕಾವಲಿದ್ದ ಇಬ್ಬರು ವ್ಯಕ್ತಿಗಳು. ಅವರ ತಲೆಗೆ ಹೊಡೆದು ಗುಂಡಿಯಲ್ಲಿ ಹಾಕಿ ಅವರಿಬ್ಬರನ್ನು ಕಟ್ಟಿ ಹಾಕಿದ್ದರಲ್ಲಾ... ಅದೇ ವ್ಯಕ್ತಿಗಳು....!!!
ಅದು ಹೋಗೋ ತಪ್ಪಿಸಿಕೊಂಡು ಬಂದು, ಹಸಿದ ಹೆಬ್ಬುಲಿಗಳಂತೆ ಇವರ ಮುಂದೆ ಬಂದು ನಿಂತಿದ್ದರು. ಹೇಗೋ ಆ ದುಷ್ಟರಿಂದ ತಪ್ಪಿಸಿಕೊಂಡೆವು ಎಂದು ನಿಟ್ಟುಸಿರು ಬಿಟ್ಟಿದ್ದ ಇವರಿಗೆ ಮತ್ತೊಂದು ಆತಂಕ ಕಣ್ಣ ಮುಂದೆಯೇ ಬಂದು ನಿಂತಿತ್ತು.

ಸೇಡಿನ ಜ್ವಾಲೆಯಿಂದ ಕೆಕ್ಕರಿಸಿ ನೋಡುತ್ತಿದ್ದ ಅವರು ಇದ್ದಕ್ಕಿಂದ್ದಂತೆಯೇ ಕೈಯಲ್ಲಿದ್ದ ಕೋಲಿನ್ನು ತೆಗೆದುಕೊಂಡು ತನಿಷ್ಕಳ ಮೇಲೆ ಬೀಸಿದರು.....

(ಮುಂದುವರೆಯುವುದು)

ಅಂತ... ಆತಂಕ (ಭಾಗ-3)

ಅಂತ... ಆತಂಕ (ಭಾಗ-3)

ಹೆಜ್ಜೆ ಹೆಜ್ಜೆಗೂ ತನಿಷ್ಕಳಿಗೆ ಆತಂಕ ಆತಂಕ ಉಂಟಾಗುತ್ತಿತ್ತು. ಎಲ್ಲಿ ತನ್ನ ತಂದೆಗೆ ಆ ದುಷ್ಟರು ಏನಾದರೂ ಮಾಡಿದರೋ ಎಂಬ ಅನುಮಾನದಿಂದಲೇ ಆ ದುಷ್ಟರು ತನ್ನ ತಂದೆಯನ್ನು ಕರೆದುಕೊಂಡು ಹೋದ ದಿಕ್ಕಿನ ಕಡೆಗೆ ರೋಹನ್ ಜೊತೆ ಬಂದೂಕು ಹಿಡಿದು ನಿಧಾನವಾಗಿ ಹೆಜ್ಜೆ ಹಾಕಿದರು. ಸ್ವಲ್ಪ ಎತ್ತರದ ದಿಬ್ಬವನ್ನು ಏರಿದರು. ಯಾರಿಗೂ ಕಾಣದ ಆ ತಗ್ಗು ಪ್ರದೇಶದಲ್ಲಿ ಒಂದು ಕಾರು ಮತ್ತು ಒಂದು ಮಿನಿ ಲಾರಿ ನಿಂತಿತ್ತು. ಕಾರಿನ ಡಿಕ್ಕಿಯ ತುಂಬಾ ಸಾವಿರ, ಐನೂರರ ನೋಟುಗಳೇ ನೋಟುಗಳು. ಮತ್ತೊಂದು ಬದಿಯಲ್ಲಿ ಒಂದು ಟೆಂಪೋ ಲಾರಿ ನಿಂತಿತ್ತು. ಆ ಲಾರಿಯನ್ನು  ಜಾಲರಿಯಿಂದ ಭದ್ರಗೊಳಿಸಲಾಗಿತ್ತು. ಬೀಗ ಜಡಿದಿದ್ದ ಆ ಟೆಂಪೋ ಲಾರಿಯ ಕೆಳಗೆ ತನಿಷ್ಕಳ ತಂದೆಯನ್ನು ಕೂರಿಸಿದ್ದರು. ಅವರ ಬಾಯಿಂದ ರಕ್ತ ಸುರಿಯುತ್ತಿತ್ತು. ನಾಲ್ಕೈದು  ಮಧ್ಯವಯಸ್ಸಿನ ಗಂಡಸರು ಆಯುಧ ಹಿಡಿದು ಸುತ್ತಲೂ ತಿರುಗುತ್ತಿದ್ದರು. ಒಬ್ಬನ ಕೈಯಲ್ಲಿ ಲಾಂಗ್ ಇತ್ತು ಮತ್ತೊಬ್ಬನ ಕೈಯಲ್ಲಿ ರಿವಾಲ್ವರ್. ಇನ್ನೊಬ್ಬನ ಸೊಂಟದಲ್ಲಿ ಚಾಕು ಹೀಗೆ ಪ್ರತಿಯೊಬ್ಬರು ಯಾವುದೋ ಕ್ರೈಂ ಕೆಲಸ ಮಾಡಲು ಸ್ಕೆಚ್ ಹಾಕಿದವರಂತೆ ಕಾಣುತ್ತಿತ್ತು. ಈ ದೃಶ್ಯವನ್ನು ಕಂಡ ತನಿಷ್ಕ ಬೆದರಿದಳು. ಎಲ್ಲಿ ತನ್ನ ತಂದೆಗೆ ಏನಾದರೂ ಮಾಡಿ ಬಿಡುವರೋ ಎಂಬ ಆತಂಕ ಮುಖದಲ್ಲಿ ಮೂಡಿತು. ರೋಹನ್ ಅವಳನ್ನು ಸಮಾಧಾನ ಪಡಿಸಿ, ಅಲ್ಲೇ ಪೊದೆಯೊಂದರಲ್ಲಿ ಬಚ್ಚಿಟ್ಟುಕೊಂಡರು....

ಅವರಲ್ಲಿರುವವರಲ್ಲಿ ಟ್ರೈನ್ ನಲ್ಲಿ ಸಿಕ್ಕ ಫ್ರೆಂಚ್ ದಾಡಿಯ ವ್ಯಕ್ತಿ ಸ್ವಲ್ಪ ಕ್ರೂರಿಯಂತೆ ಕಾಣುತ್ತಿದ್ದನು.ಆತ ಚಂದ್ರ ಶೇಖರನ್ನು ಮತ್ತೆ ಮತ್ತೆ ಹೊಡೆದು ಯಾವುದೋ ರಹಸ್ಯವೊಂದನ್ನು ಅವರ ಬಾಯಿಂದ ಹೊರ ಬರಿಸಲು ಪ್ರಯತ್ನಿಸುತ್ತಿದ್ದನು..

"ನೋಡು ಒಳ್ಳೆಯ ಮಾತಲ್ಲೇ ಹೇಳುತ್ತಿದ್ದೇನೆ, ಸುಮ್ಮನೆ ಪಾಸ್ ವರ್ಡ್ ನ್ನು ಹೇಳಿ ಆ ಲಾರಿಯ ಬೀಗವನ್ನು ಓಪನ್ ಮಾಡೋ... ಇಲ್ಲದಿದ್ದರೆ ಸುಮ್ಮನೆ ತೊಂದರೆ ಅನುಭವಿಸಬೇಕಾಗುತ್ತದೆ. ಹೇಗಿದ್ದರೂ ನಿನ್ನ ಫ್ಯಾಮಿಲಿ ಇನ್ನೂ ಕಾರಲ್ಲೇ ಕುಳಿತಿದೆ. ನಾವು ಹೇಳಿದಂತೆ ನೀನು ಪಾಸ್ ವರ್ಡ್ ಹಾಕಿ ಲಾರಿಯ ಬೀಗ ತೆಗೆಯದಿದ್ದರೆ. ನಿನ್ನ ಕುಟುಂಬವನ್ನು ಸಾಯಿಸಿ ಬಿಡಬೇಕಾಗುತ್ತದೆ. ಬೇಗ ತೆಗೆಯೋ ..."

ಎನ್ನುತ್ತಾ ಆ ವ್ಯಕ್ತಿ ಇನ್ನೊಂದು ಏಟನ್ನು ಹೊಡೆದನು...

"ನನಗೆ ಗೊತ್ತಿಲ್ಲ... ಗೊತ್ತಿಲ್ಲ ಅಂತ ಅರ್ದ ಗಂಟೆಯಿಂದಲೂ ಹೇಳುತ್ತಿದ್ದೇನೆ... ರಿಸರ್ವ ಬ್ಯಾಂಕಿನವರು ಮೊದಲು ಹಣವನ್ನು ಕಳುಹಿಸುತ್ತಾರೆ ನಂತರ ಇ-ಮೇಲ್ ಮೂಲಕವೇ ಹಣವಿರುವ ಆ ಖಜಾನೆಯನ್ನು ಓಪನ್ ಮಾಡಲು ಪಾಸ್ವರ್ಡ್ ಕಳುಹಿಸುತ್ತಾರೆ. ನಿನ್ನೆ ಶನಿವಾರ ಇವತ್ತು ಭಾನುವಾರ ರಜಾದಿನವಾದ್ದರಿಂದ ನಾಳೆ ಸೋಮವಾರ ಕಳುಹಿಸುತ್ತಾರೆ. ಅಲ್ಲಿಯವರೆಗೆ ಯಾವ ಬ್ರಹ್ಮ ಬಂದರೂ ಈ ಟೆಂಪೋ ಲಾರಿಯಲ್ಲಿ ಫಿಕ್ಸ್ ಆಗಿರುವ ಖಜಾನೆಯನ್ನು ಯಾರೂ ಓಪನ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನೀವೇನಾದರೂ ಆಧುನಿಕ ಉಪಕರಣಗಳಿಂದ ಕೊರೆದು  ಕಬ್ಬಿಣದ ಈ ಖಜಾನೆಯನ್ನು ತೆಗೆಯಲು ಪ್ರಯತ್ನಿಸಿದರೆ. ಈ ರೀತಿ ನೀವು ವಾಮ ಮಾರ್ಗದಿಂದ ಖಜಾನೆಯನ್ನು  ತೆರೆದರಿ ಎನ್ನಿ, ಖಜಾನೆಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾದ್ದರಿಂದ ತಕ್ಷಣ ರೆಡ್ ಸಿಗ್ನಲ್ ರಿಜರ್ವ್ ಬ್ಯಾಂಕಿನ ಸಿಗ್ನಲ್ ಗೆ ತಲುಪುತ್ತದೆ. ರೆಡ್ ದೀಪ ಹತ್ತಿದರೆ ಖಜಾನೆ ತೊಂದರೆಯಲ್ಲಿ ಸಿಲುಕಿದ್ ಎಂದಾರ್ಥ. ಈ ತಂತ್ರಜ್ಞಾನದ  ನೆರವಿನಿಂದ ತಕ್ಷಣ ನೀವಿರುವ ಸ್ಥಳದ ಮಾಹಿತಿ ರಿಸರ್ವ ಬ್ಯಾಂಕಿನ ಶಾಖೆಗೆ ತಲುಪುತ್ತದೆ. ಅಲ್ಲಿಂದ ಹಣ ಹೊತ್ತ ಟೆಂಪೋ ಲಾರಿ ಎಲ್ಲಿದೆ ಎಂದು ಭದ್ರತಾ ಸಿಬ್ಬಂದಿಗೆ ತಿಳಿಯುತ್ತದೆ. ಲಾರಿ ನಿಂತಿರುವ ಸ್ಥಳದ ಹತ್ತಿರವಿರುವ  ಪೋಲೀಸ್ ಠಾಣೆಗಳಿಗೆ ಶೀಘ್ರವೇ ಸಂದೇಶವೂ ಸಹ ರವಾನೆಯಾಗುತ್ತದೆ. ದಯವಿಟ್ಟು ನನ್ನ ಮಾತು ಕೇಳಿ, ನೀವು ಹಣ ಬದಲಾವಣೆ ಮಾಡಿಕೊಳ್ಳಬೇಕೆಂಬ ಮಾರ್ಗ ಸರಿಯಾಗಿಲ್ಲ. ಈ ಲಾರಿಯನ್ನು ಬೆಂಗಳೂರಿನ ಶಾಖೆ ಕಳುಹಿಸಿ ಬಿಡಿ..."

ಚಂದ್ರ ಶೇಖರರು ಆ ಕ್ರೂರ ದುಷ್ಟರಿಗೆ ತಿಳಿಸಲು ಪ್ರಯತ್ನಿಸಿದರು...

ಆ ಗುಂಪಿಗೆ ನಾಯಕನಂತೆ ಕಾಣುತ್ತಿದ್ದ ವ್ಯಕ್ತಿ ಮುಂದೆ ಬಂದು ಮತ್ತೆ ಕೋಪದಿಂದ ಚಂದ್ರ ಶೇಖರ್ ಗೆ ಮತ್ತೆ ಹೊಡೆದನು. ಹೊಡೆದ ರಭಸಕ್ಕೆ ಮತ್ತೆ ಚಂದ್ರಶೇಖರ್ ಕೆಳಗೆ ಬಿದ್ದರು.

"ಏನ್ಲಾ ಇದು, ಈ ಮನುಷ್ಯ ಸುಮಾರು ಒಂದು ಗಂಟೆಯಿಂದ ಹೀಗೆ ಸತಾಯಿಸುತ್ತಾ ಇದ್ದಾನೆ...ಇವನು ಹೇಳಿದಂತೆ ಸೋಮವಾರದ ವರೆಗೆ ಕಾದರೆ ನಮಗೆ ನಿಜಕ್ಕೂ ಪಂಗನಾಮ ಗ್ಯಾರಂಟಿ, ಹೋಗ್ಲಾ ಮಂಜ ಆ ಕಾರಲ್ಲಿ ಕುಳಿತಿರುವ ಹುಡುಗಿಯನ್ನ ಕರೆದುಕೊಂಡು ಬಾರ್ಲಾ ಇವನಿಗೆ ಹೆಂಗೆ ಬುದ್ದಿ ಕಲಿಸಬೇಕು ಅಂತ ನನಗೂ ಗೊತ್ತು.."

ಹಾಗೆಂದ ಕೂಡಲೇ ಫ್ರೆಂಚ್ ದಾಡಿ ಬಿಟ್ಟಿರುವ ರೈಲಿನಲ್ಲಿ ಸಿಕ್ಕ ವ್ಯಕ್ತಿ ಮಂಜನು ರಿವಾಲ್ವರ್ ನ್ನು ಹಿಡಿದು ಕಾರಿನ ಕಡೆನೇ ಧಾವಿಸಿದನು. ಪೊದೆಯ ಹಿಂದೆ ಅವಿತುಕೊಂಡು ಈ ಎಲ್ಲಾ ಸನ್ನಿವೇಶವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ತನಿಷ್ಕ ಮೊಬೈಲ್ ನ್ನು ಹಿಂತೆಗೆದುಕೊಂಡಳು. ಆ ಮಂಜ ಎಲ್ಲಿ ಏನಾದರೂ ಅನಾಹುತ ಮಾಡುವನೋ ಎಂದು ತನಿಷ್ಕ ಒಮ್ಮೆ ಹೆದರಿದಳು. ಮಂಜ ದಿಬ್ಬವನ್ನೇರಿ ಕಾರು ನಿಂತಿರುವ ಸ್ಥಳದ ಕಡೆಗೆ ಬರುತ್ತಿದ್ದನು. ಇನ್ನೇನು ದಿಬ್ಬ ಇಳಿದು ಕಾರಿನ ಹತ್ತಿರ ಧಾವಿಸಬೇಕು ಎನ್ನುವಷ್ಟರಲ್ಲಿ  ಹಿಂದಿನಿಂದ ಬಂದ ರೋಹನ್ ತಕ್ಷಣ ಮಂಜನ ಮೇಲೆ ಎರಗಿದನು. ಆವನ ತಲೆಗೆ ಬಲವಾದ ಏಟನ್ನು ಹೊಡೆದು, ತಕ್ಷಣ ಅವನ ಬಾಯನ್ನು ಮುಚ್ಚಿ ಹಿಡಿದನು. ಆತ ಸದ್ಧು ಮಾಡದಂತೆ ನೋಡಿಕೊಂಡನು...
ಸುತ್ತಲೂ ನೀರವ ಮೌನ ಆವರಿಸಿತ್ತು. ದುಷ್ಟರಿರುವ ಆ ಪ್ರದೇಶದವೆಲ್ಲಾ ಭಯದ ವಾತಾವರಣವೂ ಆವರಿಸಿತು.  ಇಷ್ಟೆಲ್ಲಾ ಘಟನೆಯನ್ನು ನೋಡುತ್ತಿದ್ದ ತನಿಷ್ಕಳ ಎದೆ ಬಡಿತವೂ ಹೆಚ್ಚಾಗಲಾರಂಭಿಸಿತು. ತಾವು ದುಷ್ಟರ ಜಾಲದಲ್ಲಿ ಸಿಲುಕಿದ್ದೇವೆ ಹೇಗಾದರೂ ಆ ಜಾಲದಿಂದ ತಪ್ಪಿಸಿಕೊಳ್ಳಲು ಅವರು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದರು. ರೋಹನ್ ಮಾತ್ರ ತನಿಷ್ಕಳಿಗೆ ಧೈರ್ಯ ತುಂಬುತ್ತಲೇ ಇದ್ದನು. ರೋಹನ್ ಸ್ವಲ್ಪವೂ ಹೆದರದೆ ಮಂಜನ ತಲೆಗೆ ಬಂದೂಕಿನ ಗುರಿಯಿಟ್ಟು ನಿಂತನು. ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಮಂಜನನ್ನೇ ದಾಳವಾಗಿ ಉಪಯೋಗಿಸಿಕೊಂಡನು. ಅವನಿಂದ ರಿವಾಲ್ವರನ್ನು ಕಸಿದುಕೊಂಡು ತನ್ನ ಸೊಂಟದೊಳಗೆ ಸಿಕ್ಕಿಸಿಕೊಂಡನು. ಹಣೆಗೆ ಬಂದೂಕಿನ ಗುರಿಯನ್ನಿಟ್ಟುಕೊಂಡೇ ಮಂಜನನ್ನು ಧೈರ್ಯದಿಂದ ಎಳೆದುಕೊಂಡು ದಿಬ್ಬವನ್ನೇರಿ ಆ ದುಷ್ಟರಿರುವ ಗುಂಪಿನ  ಎದುರು ಸ್ವಲ್ಪ ಅಂತರದಲ್ಲಿ ನಿಂತುಕೊಂಡನು ...

"ನೋಡಿ... ನಿಮ್ಮ ಬಳಿ ಇರುವ ಚಂದ್ರ ಶೇಖರನ್ನು ಬಿಟ್ಟು ಬಿಡಿ ಇಲ್ಲದಿದ್ದರೆ. ಈ ವ್ಯಕ್ತಿಯನ್ನು ಮುಗಿಸಿ ಬಿಡಬೇಕಾಗುತ್ತದೆ"

ರೋಹನ್ ಹೀಗೆ ಹೇಳಿದ ಕೂಡಲೇ ಎಲ್ಲರೂ ತಮ್ಮ ತಮ್ಮ ರಿವಾಲ್ವರನ್ನು ಎತ್ತಿಕೊಂಡು ರೋಹನ್ ಕಡೆಗೆ ಗುರಿಯಿಟ್ಟರು. ಅದರಲ್ಲಿ ಒಬ್ಬ ಚಂದ್ರ ಶೇಖರ್ ರವರ ಹಣೆಗೆ ಗುರಿಯಿಟ್ಟನು. ಆಗ ಗುಂಪಿನ ನಾಯಕನು ವಕ್ರವಾಗಿ ನಗುತ್ತಾ..

"ನೋಡಿ ಮಂಜನನ್ನು ಬಿಟ್ಟು ಬಿಡಿ. ಇಲ್ಲದಿದ್ದರೆ ಈ ನಿಮ್ಮ ಪ್ರೀತಿಯ ಬ್ಯಾಂಕ್ ಮ್ಯಾನೇಜರ್ ಚಂದ್ರ ಶೇಖರರ ಪ್ರಾಣ ತೆಗೆಯಬೇಕಾಗುತ್ತದೆ. ನೀವು ಏನೂ ಮಾಡಲು ಸಾಧ್ಯವಿಲ್ಲ. ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಎಲ್ಲರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ... ಹುಷಾರ್. ಮಂಜನನ್ನು ಬಿಟ್ಟು ಬಿಡಿ.."

ಆ ದುಷ್ಟ ಹಾಗೆ ಹೇಳುವಾಗ ತನಿಷ್ಕ ತನ್ನ ಮೊಬೈಲ್ ನಿಂದ ಎಲ್ಲವನ್ನೂ ಚಿತ್ರೀಕರಿಸುತ್ತಿದ್ದಳು.

"ನೋಡಿ ನೀವು ನನ್ನ ತಂದೆಗೆ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ನಿಮ್ಮ ಈ ಎಲ್ಲಾ ಚಟುವಟಿಕೆಗಳನ್ನು ನಾನು ಈಗಾಗಲೇ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದೇನೆ. ಮನಸ್ಸು ಮಾಡಿದರೆ ಈಗಲೇ ಎಲ್ಲವನ್ನು ಸೋಶಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡಿಬಿಡುತ್ತೇನೆ. ಜೊತೆಗೆ ನಿಮ್ಮ ಪ್ರೀತಿಯ ವ್ಯಕ್ತಿ ಮಂಜನ ಪ್ರಾಣವೂ ನಮ್ಮ ಕೈಯಲ್ಲಿದೆ. ಹೇಗಾದರೂ ನಾವು ನಿಮ್ಮ ಈ ದುಷ್ಟಜಾಲದಲ್ಲಿ ಸಿಲುಕಿಯಾಗಿದೆ. ನಿಮ್ಮ ಮಾತು ಕೇಳಿದರೆ ನಮ್ಮ ಪ್ರಾಣ ಉಳಿಯುತ್ತದೆ ಎಂಬ ನಂಬಿಕೆಯೇನೂ ನಮಗಿಲ್ಲ. ಸುಮ್ಮನೆ ನಮ್ಮ ಮಾತು ಕೇಳು. ನನ್ನ ತಂದೆಯನ್ನು ಬಿಟ್ಟು ಬಿಡು..."

ತನಿಷ್ಕ ಧೈರ್ಯವಾಗಿಯೇ ಹೇಳಿದಳು.

ಹಾಗೆಂದ ಕೂಡಲೇ ತನಿಷ್ಕಳ ಮಾತಿಗೆ ಹೆದರಿದ ಆ ಗುಂಪಿನ ದುಷ್ಟ ನಾಯಕ. ತನ್ನೆಲ್ಲಾ ಗುಂಪಿನ ಸದಸ್ಯರಿಗೆ ರಿವಾಲ್ವರನ್ನು ಕೆಳಗೆ ಇಳಿಸುವಂತೆ ಹೇಳಿದನು..

"ಸರಿ ನಿಮ್ಮ ಮಾತು ಕೇಳುತ್ತೇನೆ... ನಿನ್ನ ತಂದೆಯನ್ನು ಬಿಡುತ್ತೇವೆ ಆದರೆ ನೀವು ನಿಮ್ಮ ಮೊಬೈಲ್ ಹಾಗು ಮಂಜನನನ್ನು ನಮಗೆ ಒಪ್ಪಿಸಬೇಕು"

ಆ ದುಷ್ಟ ಹಾಗೆ ಹೇಳಿದ ಕೂಡಲೇ ರೋಹನ್ ಮತ್ತು ತನಿಷ್ಕ ಒಪ್ಪಿಕೊಂಡಂತೆ ತಲೆಯನ್ನಾಡಿಸಿದರು. ಆ ಕಡೆಯಿಂದ ಒಬ್ಬ ವ್ಯಕ್ತಿ ನಿಧಾನವಾಗಿ ಚಂದ್ರ ಶೇಖರ್ ರನ್ನು ಕರೆದು ಕೊಂಡು ಬಂದರು. ರೋಹನ್ ಮತ್ತು ತನಿಷ್ಕ ನಿಧಾನವಾಗಿ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಾ ಕಾರು ನಿಂತಿರುವ ಸ್ಥಳದ ಕಡೆಗೆ ಹೆಜ್ಜೆ ಹಾಕಿದರು. ಅವರು ಚಂದ್ರ ಶೇಖರರನ್ನು ಕರೆದುಕೊಂಡು ಮುಂದೆ ಮುಂದೆ ಬಂದಂತೆ ಇವರು ಹಿಂದೆ ಹಿಂದೆ ಹೆಜ್ಜೆ ಹಾಕುತ್ತಾ ಕಾರಿನ ಬಳಿ ತಲುಪಿದರು. ತನಿಷ್ಕ ನಿಧಾನವಾಗಿ ಕಾರಿನ ಬಾಗಿಲನ್ನು ತೆಗೆದಳು. ಸ್ವಲ್ಪ ಹಿಂದೆ ಸರಿದು...

"ನೋಡಿ ನಮ್ಮ ತಂದೆಯನ್ನು ಈ ಕಾರಿನಲ್ಲಿ ಕೂರಿಸಿ ನೀವು ಹಿಂದೆ ಸರಿದು ನಿಂತು ಕೊಳ್ಳಿ. ನಂತರ ಮಂಜನನ್ನು ಮತ್ತು ನನ್ನ ಮೋಬೈಲನ್ನು ಕೊಡುತ್ತೇನೆ"

ತನಿಷ್ಕ ಆ ದುಷ್ಟ ನಾಯಕನಿಗೆ ಹೇಳಿದಳು.

"ಸರಿ ನೀನು ಮೊದಲು ಮೊಬೈಲನ್ನು ಒಪ್ಪಿಸಬೇಕು... ಹಾಗಾದರೆ ಮಾತ್ರ"

ಆ ದುಷ್ಟ ನಾಯಕ ಹೇಳಿದನು.

"ಇಲ್ಲ ಮೊಬೈಲ್ ಮೊದಲೇ ನಿಮ್ಮ ಕೈಗೆ ಕೊಟ್ಟರೆ ನೀವು ನಮ್ಮ ಮೇಲೆ ಮತ್ತಿಗೆ ಹಾಕ ಬಹುದು. ನೀವು ಮೊದಲು ತಂದೆ ಯನ್ನು ಕಾರಿನಲ್ಲಿ ಕೂರಿಸಿ. ಅಗೋ ... ಅಲ್ಲಿ ಕಾಣುವ ಆ ಎತ್ತರದ ಕಲ್ಲಿನ ಮೇಲೆ ನನ್ನ ಮೊಬೈಲ್ ಇಟ್ಟು ಬರುತ್ತೇನೆ. ನಾವು ಇಲ್ಲಿಂದ ಹೋದ ತಕ್ಷಣ ನಿಮಗೆ ವಿಡಿಯೋ ಚಿತ್ರೀಕರಿಸಿದ ಆ ಮೊಬೈಲ್ ಸಿಗುತ್ತದೆ. ನಾವೆಲ್ಲಾ ಕಾರಿನಲ್ಲಿ ಕುಳಿತ ಮೇಲೆ ನಿಮ್ಮ ಮಂಜನನ್ನು ಬಿಟ್ಟು ಬಿಡುತ್ತೇವೆ. ಇಲ್ಲದಿದ್ದರೆ ಈ ವಿಡಿಯೋವನ್ನ ಸಾಮಾಜಿಕ ಜಾಲಗಳಲ್ಲಿ ಕಳುಹಿಸಬೇಕಾಗುತ್ತದೆ. ಹೇಗಿದ್ದರೂ ನಮಗೆ ನಮ್ಮ ಪ್ರಾಣ ಉಳಿಯುತ್ತೆ ಅನ್ನೊ ನಂಬಿಕೆ ನಮಗಿಲ್ಲ. ಸುಮಾರು ಐದಾರು ಗಂಟೆಯಿಂದ ಹೆದರಿ ಹೆದರಿ ನಾವೂ ನಮ್ಮ ಪ್ರಾಣ ಭಯವನ್ನು ಕಳೆದುಕೊಂಡಿದ್ದೇವೆ. ನೀವು ನಮ್ಮ ಮಾತನ್ನು ಕೇಳಲೇಬೇಕು. ಇಲ್ಲದಿದ್ದರೆ ಇಲ್ಲಿ ಏನಾದರೂ ಆಗಲಿ. ನಮಗೆ ನಿಮ್ಮ ಮಾತು ಕೇಳಲು ಸಾಧ್ಯವಿಲ್ಲ.."

"ಸರಿ ಹಾಗೇ ಹಾಗಲಿ..."

ದುಷ್ಟ ನಾಯಕ ಹೇಳಿದನು.

ತನಿಷ್ಕ ಹಾಗೆ ಹೇಳುತ್ತಾ ತನ್ನ ಮೊಬೈಲನ್ನು ದೂರದ ಕಲ್ಲಿನ ಮೇಲೆ ಇಟ್ಟು ಬಂದಳು

ಹಾಗೆಯೇ ಚಂದ್ರ ಶೇಖರರನ್ನು ನಿಧಾನವಾಗಿ ಕಾರಿನಲ್ಲಿ ಕೂರಿಸಿದರು. ನಂತರ ಸ್ವಲ್ಪ ದೂರ ಸರಿದರು. ರೋಹನ್ ನಿಧಾನವಾಗಿ ಮಂಜನ ಹಣೆಗೆ ಬಂದೂಕಿನ ಗುರಿ ಇಟ್ಟುಕೊಂಡೇ ಕಾರಿನ ಬಳಿಗೆ ಬಂದನು. ಹಿಂದಿನ ಸೀಟಲ್ಲಿ ತಾಯಿ ಸರೋಜ ತಂದೆ ಚಂದ್ರಶೇಖರರು ಕುಳಿತ್ತಿದ್ದರು ಮುಂದಿನ ಸೀಟಲ್ಲಿ ತನಿಷ್ಕ ಕುಳಿತಳು. ರೋಹನ್ ಆ ವ್ಯಕ್ತಿಯನ್ನು ಎಳೆದುಕೊಂಡೇ ನಿಧಾನವಾಗಿ ಕಾರಿನ ಡ್ರೈವರ್ ಸೀಟಲ್ಲಿ ಕುಳಿತನು. ಕಾರು ಸ್ಟಾರ್ಟ್ ಆದ ನಂತರ ಆ ಮಂಜನನ್ನು ರಭಸವಾಗಿ ದೂರ ತಳ್ಳಿದನು. ತಳ್ಳಿದ ರಭಸಕ್ಕೆ ಮಂಜನ ತಲೆ ಅಲ್ಲಿರುವ ಕಲ್ಲಿಗೆ ಜೋರಾಗಿ ಬಡಿಯಿತು. ಕಾರು ಜೋರಾಗಿ ಮುಂದೆ ಚಲಿಸಲಾರಂಬಿಸಿತು. ಅಲ್ಲೇ ಸ್ವಲ್ಪ ದೂರದಲ್ಲಿ ಕಲ್ಲಿನ ಮೇಲೆ ಇಟ್ಟ ಮೊಬೈಲನ್ನು ಕಾರು ಚಲಿಸುವಾಗಲೇ ವಿಂಡೋ ಹೊರಗೆ ಕೈ ಹಾಕಿ ಮತ್ತೆ ತನಿಷ್ಕ ಆ ಮೊಬೈಲನ್ನು ತೆಗೆದು ಕೊಂಡಳು...

ಇಷ್ಟೆಲ್ಲಾ ಬುದ್ದಿವಂತಿಕೆಯ ಆಟವನ್ನು ನೋಡುತ್ತಿದ್ದ ದುಷ್ಟರ ನಾಯಕ ಬೆಪ್ಪನಾಗಿ ಹೋದ. ತಮ್ಮ ದುಷ್ಕೃತ್ಯವನ್ನೆಲ್ಲಾ ಚಿತ್ರೀಕರಸಿದ ಮೊಬೈಲ್ ಸಹ ತನಗೆ ಸಿಗದಂತಾಯಿತು. ಒಮ್ಮೆ ಕೋಪದಿಂದ ಕೂಗಿದನು. ಅಲ್ಲೇ ಕಲ್ಲಿಗೆ ಪೆಟ್ಟು ತಿಂದ ಮಂಜನನ್ನು ಎಬ್ಬಿಸಲು ಹೋದನು. ಆದರೆ ಮಂಜ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅಲ್ಲೇ ಕೊನೆಯುಸಿರು ಎಳೆದಿದ್ದನು...

"ಅಯ್ಯೋ... ಮಂಜ ಸತ್ತೇ ಹೋದ, ಇರೋ ಒಬ್ಬ ತಮ್ಮನನ್ನು ಅವರು ಸಾಯಿಸಿ ಬಿಟ್ಟರು. ಇಲ್ಲ ಇವರನ್ನು ಸಮ್ಮನೆ ಬಿಡಲ್ಲ... ಗಾಡಿಗಳನ್ನ ತೆಗಿರೋ.. ಅವರನ್ನು ಬಿಡಬೇಡಿ. ನನ್ನ ತಮ್ಮನನ್ನು ಸಾಯಿಸಿದ ಅವರನ್ನು ಸಮ್ಮನೇ ಬಿಡಲ್ಲ..."

ಆ ದುಷ್ಟ ಹುಚ್ಚನಂತೆ ರೋಧಿಸಿದನು. ಅಲ್ಲಿ ನಿಂತ ಅವರ ಕಾರನ್ನು ತೆಗೆದರು. ಮತ್ತೆ ತಮ್ಮ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡರು. ಅವರು ಸುಮಾರು ಆರೇಳು ಜನರಿರಬೇಕು. ಎಲ್ಲರೂ ಕಾರಲ್ಲಿ ಕುಳಿತುಕೊಂಡು ತನಿಷ್ಕ ರೋಹನ್ ಕುಳಿತ್ತಿದ್ದ ಕಾರನ್ನು ಹಿಂಬಾಲಿಸ ತೊಡಗಿದರು. ಅಲ್ಲಿಂದ ತಪ್ಪಿಸಿಕೊಂಡೆವು ಎಂದು ನಿಟ್ಟುಸಿರು ಬಿಟ್ಚ ತನಿಷ್ಕ ಮತ್ತು ರೋಹನ್ ಗೆ ಮತ್ತೆ ಆತಂಕಗಳು ಅವರ ಬೆನ್ನ ಹಿಂದೆಯೇ ಬರುತ್ತಿತ್ತು. ನಿರ್ಜನವಿರುವ ಆ ಮಣ್ಣಿನ ರಸ್ತೆಯಲ್ಲಿ ರೋಹನ್ ಆದಷ್ಟು ಜೋರಾಗಿಯೇ ಕಾರನ್ನು ಚಲಿಸುತ್ತಿದ್ದನು. ಹಿಂದೆಯೇ ಬರುತ್ತಿದ್ದ ಆ ದುಷ್ಟರ ಗುಂಪು ಗುಂಡಿನ ಧಾಳಿ ನಡೆಸುತ್ತಿದ್ದರೂ. ಅದೃಷ್ಟವಶಾತ್ ಕಾರು ಸ್ವಲ್ಪ ಹೆಚ್ಚೇ ದೂರದಲ್ಲಿದುದರಿಂದ ಅವರು ಶೂಟ್ ಮಾಡಿದ ಯಾವ ಗುಂಡು ಸಹ ಕಾರಿಗೆ ಬಡಿಯಲಿಲ್ಲ. ಗುಂಡಿನ ಗುರಿಯನ್ನು ತಪ್ಪಿಸುತ್ತಾ ರೋಹನ್ ಬಹಳ ಬುದ್ಧಿವಂತಿಕೆಯಿಂದ ಕಾರನ್ನು ಚಲಿಸುತ್ತಿದ್ದನು. ಆ ದುಷ್ಟ ನಾಯರ ಅವರನ್ನು ಹಿಡಿಯುವಂತೆ ಕಾರಿನಿಂದಲೇ ಅಬ್ಬರಿಸುತ್ತಿದ್ದನು. ಎರಡೂ ಕಾರುಗಳು ಧೂಳನ್ನೆಬ್ಬಿಸುತ್ತ ಮುಂದೆ ಮುಂದೆ ಸಾಗುತ್ತಿದ್ದವು. ತಗ್ಗು ದಿಣ್ಣೆಯಲ್ಲಿ ಹಾರುತ್ತಾ ಇಳಿಯುತ್ತಾ ಕಾರುಗಳು ಚಲಿಸುತ್ತಿದ್ದವು. ಪ್ರಾಣ ಭಯವಿರುವವರಿಗೆ ಕಾರು ಸುರಕ್ಷಿತವಾಗಿ ಚಲಿಸಬೇಕು ಎಂಬ ತಾಳ್ಮೆ ಎಲ್ಲಿಂದ ಬರಲು ಸಾಧ್ಯ ಹೇಳಿ. ಅವರನ್ನು ಹಿಡಿಯುವ ಆತುರ ಆ ದುಷ್ಟರಿಹಿದ್ದರೆ. ದುಷ್ಟರಿಂದ ತಪ್ಪಿಸುಕೊಳ್ಳು ಭಯ ಇವರಲ್ಲಿತ್ತು. ಕೊನೆಗೂ ಆ ದುಷ್ಟರು ಹಾರಿಸಿದ ಗುಂಡು ರೋಹನ್ ಚಲಿಸುತ್ತಿದ್ದ ಕಾರಿನ ಚಕ್ರಕ್ಕೆ ಬಡಿದೇ ಬಿಟ್ಟಿತು. ಯಾವಾಗ ಗುಂಡು ತಗುಲಿತೋ ಕಾರಿನ ಚಕ್ರ ಪಂಕ್ಚರ್ ಆಗಿ ದಿಕ್ಕು ತಪ್ಪಿ ಸ್ವಲ್ಪ ದೂರ ಚಲಿಸಿ. ಅಲ್ಲೇ ಇರುವ ಮಣ್ಣಿನ ದಿಬ್ಬಕ್ಕೆ ಬಡಿಯಿತು. ಅದೃಷ್ಟಕ್ಕೆ ಪ್ರಾಣಾಪಯವಾಗಲಿಲ್ಲ. ಆತುರದಿಂದ ಎಲ್ಲರೂ ಕಾರಿನಿಂದ ಇಳಿದರು. ಆ ದುಷ್ಟರ ಕಾರು ಇನ್ನೇನು ಸ್ವಲ್ಪ ದೂರದಲೇ ಇತ್ತು...

(ಮುಂದುವರೆಯುವುದು)