Sunday 8 October 2017

ಅಂತ... ಆತಂಕ -1

ಅಂತ...ಆತಂಕ. (ಭಾಗ-1)

ಸೂರ್ಯನ ಹೊಂಗಿರಣ ಭೂಮಿಯನ್ನು ಸ್ಪರ್ಶಿಸಿಯಾಗಿತ್ತು. ಮುಂಜಾನೆಯ ತಂಗಾಳಿ ಕಿಟಕಿಯಿಂದ ಬೀಸಿ ಮೈಯನ್ನು ಸ್ಪರ್ಶಿಸುತ್ತಿದ್ದರೂ ತನುಗೆ ನಿದ್ದೆಯ ಮಂಪರು ಇನ್ನೂ ಇಳಿದಿರಲಿಲ್ಲ. ಮುಂಜಾನೆಯ ಸಿಹಿಗನಸಿನ ಸವಿಯನ್ನು ಅನುಭವಿಸುತ್ತಲೇ ನಿದ್ರೆಯ ಸುಖವನ್ನು ಅನುಭವಿಸುತ್ತಿದ್ದಳು. ತುಂಬು ಯೌವ್ವನದ ಹೊಸ್ತಿಲಲ್ಲಿರುವ ಈ ಸುಂದರ ಕನ್ಯೆ ಕನಸಿನ ಲೋಕಕ್ಕೆ ಜಾರಿರಬೇಕು. ಅಷ್ಟರಲ್ಲೇ

"ಏಯ್ ,  ತನು... ತನು...ಏಳೆ ಮೇಲೆ, ಸ್ವಲ್ಪ ಗಡಿಯಾರದ ಮುಳ್ಳು ನೋಡು. ಆಗಲೇ ಒಂಬತ್ತು ಗಂಟೆಯಾಗಿದೆ. ಎಷ್ಟು ಹೊತ್ತೆ ಮಲಗೋದು, ಹನ್ನೆರಡಕ್ಕೆ ಹೊರಡಬೇಕು ನೆನಪಿದೆ ತಾನೆ, ಸರಿಯಾದ ಸಮಯಕ್ಕೆ ನಾವು ರೈಲು ನಿಲ್ದಾಣದಲ್ಲಿರಬೇಕು. ಸುಮ್ನೆ ಅಪ್ಪನಿಂದ ಮಂಗಳಾರತಿ ಎತ್ತಿಸ್ಕೋ ಬೇಡ, ಏಳು ಬೇಗ ಎದ್ದು ಸ್ನಾನ ಮಾಡಿ ರೆಡಿಯಾಗು"

ಹಾಗೆ ಹೇಳುತ್ತಲೇ ಅಮ್ಮ ಸರೋಜ, ತನು ಹೊದ್ದ ಕಂಬಳಿಯನ್ನು ಹಿಡಿದು ಎಳೆದಳು. ಇನ್ನೂ ನಿದ್ದೆ ಮಾಡಬೇಕೆನ್ನುವ ತನಿಷ್ಕಳ ಆಸೆಗೆ ತಣ್ಣೀರು ಹಾಕಿ ಎಬ್ಬಿಸಿದಂತಾಗಿತ್ತು. ಅಮ್ಮ ಯಾವಾಗ ಏರು ಧ್ವನಿಯಿಂದ ಕೂಗಾಡುತ್ತಾ ಕಂಬಳಿಯನ್ನು ಎಳೆದು ಹೊರಗೆ ಬಿಸುಟಿದಳೋ ಆಗಲೇ ತನುಗೆ ಎಚ್ಚರವಾಗಿದ್ದು

"ಏನಮ್ಮಾ ನೀನು....!! ಸರಿಯಾಗಿ ನಿದ್ದೆ ಮಾಡೋಕು ಬಿಡಲ್ಲ, ಇನ್ನರ್ದ ಗಂಟೆ ಮಲಗಿದ್ದರೆ ರೈಲೇನು ನಮ್ಮನ್ನು ಬಿಟ್ಟು ಹೋಗುತ್ತಿರಲಿಲ್ಲ. ವಯಸ್ಸಾಗಿರೋರಿಗೆ ಸ್ವಲ್ಪ ಅವಸರ ಜಾಸ್ತಿನೇ"

ಎಂದು ಗೊಣಗಿಕೊಳ್ಳುತ್ತಲೇ ತನಿಷ್ಕ ಎದ್ದು ಒಮ್ಮೆ ಮೈ ಮುರಿದಳು. ಇಪ್ಪತ್ತೊಂದು ವರುಷದ ತುಂಬು ಹರೆಯದ ಹುಡುಗಿಯವಳು. ಇನ್ನೂ ಕಾಲೇಜಿನ ಓದು ಸಹ  ಮುಗಿದಿರಲಿಲ್ಲ. ತಾಯಿ ಸರೋಜ ಮತ್ತು ತಂದೆ ಚಂದ್ರಶೇಖರರಿಗಿದ್ದ ಒಬ್ಬಳೇ ಮುದ್ದು ಮಗಳು. ಪ್ರೀತಿಯಿಂದ ಸಾಕಿದ್ದರಿಂದ ತನಿಷ್ಕ ಮೈ ಕೈ ತುಂಬಿಕೊಂಡು ಆರೋಗ್ಯದಿಂದ ಕಂಗೊಳಿಸುತ್ತಿದ್ದಳು. ಅವಳ ಹಾಲಿನಂತ ಬಿಳುಪಾದ ಮೈ ಆಗತಾನೇ ಎದ್ದಿದ್ದರಿಂದ ಅರೆಬರೆ ಪಾರದರ್ಶಕವಾಗಿ ಗೋಚರಿಸುತ್ತಿತ್ತು. ಕಪ್ಪಾದ ಕೇಶರಾಶಿ ಕೆದರಿಕೊಂಡಿದ್ದರೂ ಅದರೊಳಗಿನಿಂದ ಕಾಣುವ ಅವಳ ಮುಖವು ಸೌಂದರ್ಯದಿಂದ ಚಂದಿರನ ಕಳೆ ಕಟ್ಟಿಕೊಂಡಿತ್ತು. ಎದ್ದ ಅವಸರಕ್ಕೆ ಅವಳ ಉಡುಗೆ ತೊಡುಗೆ ಸಹ ಅಸ್ತವ್ಯಸ್ಥವಾಗಿ ಹೋಗಿತ್ತು. ಮೊಣಕಾಲೇರಿ ಕುಳಿತ ಅವಳ ತೊಡುಗೆ. ಎದೆಯ ಬಟನ್ ಬಿಚ್ಚಿಕೊಂಡಿದ್ದ ಅವಳ ನೈಟಿ, ಎಲ್ಲವನ್ನೂ ನೋಡಿ ತಾಯಿ ಸರೋಜಗೆ ಮತ್ತಷ್ಟು ಕೋಪ ಬರಲಾರಂಬಿಸಿತು. ಅಮ್ಮ ಸ್ವಲ್ಪ ಏರು ದನಿಯಲ್ಲಿಯೇ..

"ಛೀ.... ಎಳೇ ಮೇಲೆ, ಬಟ್ಟೆ ಮೇಲೂ ಜ್ಞಾನವಿಲ್ಲ ನಿನಗೆ, ಹೇಗೆ ಬಿದ್ಕೊಂಡಿದ್ದೀಯಾ ನೋಡು. ಅದೇನು ಶಿಸ್ತು ಅಂತ ಕಲ್ಕೊಂಡಿದಿರೋ ಏನೋ, ಈಗಿನ ಹುಡುಗಿಯರಿಗೆ ಬಟ್ಟೆನೇ ಮೈ ಮೇಲೆ ನಿಲ್ಲೊಲ್ಲ ನೋಡು. ಛೀ...! ಮಾನಗೆಟ್ಟೊಳೆ, ಏಳೆ ಮೇಲೆ"

ಎಂದು ಅಮ್ಮ ಗದರಿಸಿದಳು. ತನು ತಾನುಟ್ಟ ಬಟ್ಟೆಯನ್ನು ಸರಿಮಾಡಿಕೊಂಡು ತನು ಸ್ನಾನಕ್ಕೆ ಹೊರಟಳು...

ಎಲ್ಲರೂ ಸ್ನಾನ, ತಿಂಡಿ ಮುಗಿಸಿ ಸಿದ್ಧಾರಾಗುವಷ್ಟರಲ್ಲಿ ಗಡಿಯಾರದ ಮುಳ್ಳು ಹನ್ನೊಂದು ಗಂಟೆಗೆ ಬಂದಿತ್ತು.  ತನು, ಅವಳ ಅಮ್ಮ ಸರೋಜ ಮತ್ತು ಅಪ್ಪ ಚಂದ್ರಶೇಖರ್ ಬ್ಯಾಗ್ ಹಿಡಿದು ಮನೆಯಿಂದ ಹೊರಬಂದರು. ಮನೆಗೆ ಹಾಕಿದ್ದ ಬೀಗ ಭದ್ರವಾಗಿದೆಯೇ ಎಂಬುದನ್ನು ಚಂದ್ರಶೇಖರ್ ರವರು ಎರೆಡೆರಡು ಸಲ ಪರೀಕ್ಷಿಸಿಗ ನಂತರವೇ ಮನೆಯಿಂದ ಹೊರಬಂದರು. ಅಲ್ಲೇ ಸ್ವಲ್ಪ ದೂರದಲ್ಲಿ ಆಟೋ ಕಾಣಿಸಿತು. ಆಟೋದವನನ್ನು ಕರೆದರು. ಆಟೋ ಹಿಡಿದು ಅಲ್ಲಿಂದ ಅಲ್ಲಿಂದ ನೇರವಾಗಿ ರೈಲು ನಿಲ್ದಾಣಕ್ಕೆ ಹೊರಟರು. ರೈಲು ನಿಲ್ದಾಣದಲ್ಲಿ ಜನ ಜಂಗುಳಿ ಸ್ವಲ್ಪ ಜಾಸ್ತಿಯೇ ಇತ್ತು. ಆದರೆಮೊದಲೇ ಟಿಕೇಟ್ ಆಗಲೇ ಬುಕ್ ಮಾಡಿದ್ದರಿಂದ ಸೀಟು ಸಿಗುತ್ತದೆಯೋ ಇಲ್ಲವೋ ಎಂಬ ಆತಂಕವಾಗಲಿ ಅವಸರವಾಗಲಿ ಅವರ ಮುಖದಲ್ಲಿ ಕಾಣಿಸಲಿಲ್ಲ. ನಿರಾತಂಕವಾಗಿ ಸೀದ ಮೂರನೇ ಪ್ಲಾಟ್ ಫಾರಂ ಗೆ ಹೊರಟರು. ರೈಲು ಆಗಲೇ ಹೊರಡಲು ಸಿದ್ಧವಾಗಿತ್ತು. ಬೇಗ ಬೇಗನೆ ತಾವು ತಂದಿದ್ದ ಬ್ಯಾಗನ್ನು ಸುರಕ್ಷಿತವಾಗಿ ಹೊತ್ತುಕೊಂಡು ರೈಲಿನೊಳಗೆ ಹೋಗಲು ಮುಂದಾದದರು. ಅಪ್ಪ ಪ್ರಯಾಸದಿಂದ ಲಗೇಜನ್ನು ಹೊತ್ತು ಒಳಗೆ ಹೋಗಲು ನೋಡುತ್ತಿದ್ದರೆ ತನಿಷ್ಕ ಆತಂಕದಿಂದ ಹಿಂದೆ ಹಿಂದೆ ನೋಡಿಕೊಂಡೇ ಬರುತ್ತಿದ್ದಳು. ಆಟೋ ಹತ್ತಿದಾಗಿನಿಂದ ತನಿಷ್ಕಳ ಈ ನಡೆಯನ್ನು ಅಪ್ಪ ಗಮನಿಸುತ್ತಿದ್ದರು. ಪದೇ ಪದೇ ಹಿಂದೆ ನೋಡುವುದು, ಯಾರೋ ಬಂದವರಂತೆ ಮುಖ ಭಾವ ಪ್ರದರ್ಶಿಸುವುದು. ಮತ್ತೆ ಎಲ್ಲಿ ಅಪ್ಪನಿಗೆ ತಿಳಿದು ಬಿಡುತ್ತದೆ ಎಂದು ಕೃತಕ ನಗೆಯನ್ನು ಬೀರಿ ಮುಂದೆ ನಡೆಯುವುದು ಹೀಗೇ ಮಾಡುತ್ತಿದ್ದಳು. ಎಷ್ಟೇ ಆದರು ಅಪ್ಪ ಚಂದ್ರ ಶೇಖರ್ ಹಿರಿಯರು ಮತ್ತು ಅನುಭವಿಗಳು ಮಗಳ ಈ ಆತಂಕವನ್ನು ಕೇಳೋಣ ಎಂದು ಕೊಂಡರು ಸ್ವಲ್ಪ ತಾಳ್ಮೆಯ ಮನೋಭಾವದಿಂದ ಕಾದು ನೋಡುವ ತಂತ್ರವನ್ನು ಬಳಸಿ ಏನೂ ತಿಳಿಯದವರಂತೆ ಸುಮ್ಮನೇ ಇದ್ದರು. ಮಗಳ ಆತಂಕ ಹೆಚ್ಚುತ್ತಾ ಬಂದ ಕೂಡಲೇ ಚಂದ್ರ ಶೇಖರ್ ಮೌನ ಮುರಿದು ಕೇಳಿಯೇ ಬಿಟ್ಟರು.

"ಏನಮ್ಮ ಆಯ್ತು ನಿನಗೆ. ಮನೆ ಬಿಟ್ಟಾಗಿನಿಂದ ನೋಡ್ತಾ ಇದೀನಿ. ಆಗಾಗ ಹಿಂದಕ್ಕೆ ತಿರುಗಿ ತಿರುಗಿ ನೋಡಿಕೊಂಡೇ ಬರ್ತಾ ಇದಿಯಾ, ಯಾರಿಗಾದ್ರೂ ನಮ್ಮ ಜೊತೆ ಬರೋಕೆ ಹೇಳಿದ್ದೇನಮ್ಮಾ. ಏನಾಯ್ತು ಹೇಳು. ಯಾರೆ ಈ ಆತಂಕ..?"

ತಂದೆ ಹಾಗೆ ಕೇಳಿಗ ಕೂಡಲೇ ಮಗಳು ತನಿಷ್ಕ ತಬ್ಬಿಬ್ಬಾದಳು. ತಕ್ಷಣ ಏನು ಹೇಳಬೇಕೆಂದು ತೋಚಲೇ ಇಲ್ಲ ಸ್ವಲ್ಪ ಸುಧಾರಿಸಿಕೊಂಡು.

"ಅಪ್ಪಾ... ಸ್ವಲ್ಪ ಹಿಂದೆ ನೋಡು ನಮ್ಮನ್ನು ಆ ಹುಡುಗ ಫಾಲೋ ಮಾಡ್ತಾ ಇದಾನೆ... ನಾವು ಆಟೋದಲ್ಲಿ ಹತ್ತವಾಗಿನಿಂದ ಹಿಡಿದು ಇಳಿಯುವವರೆಗೂ ನಮ್ಮನ್ನೇ ಹಿಂಬಾಲಿಸಿಕೊಂಡು ಬರುತ್ತಿದ್ದಾನೆ. ಆಗಾಗ ನನ್ನನ್ನೇ ಗುರಾಯಿಸಿ ನೋಡುತ್ತಲೇ ಇದ್ದ , ಈಗಲೂ ಹಿಂದೆ ಹಿಂದೆನೇ ಬರುತ್ತಿದ್ದಾನೆ..."

ತನು ಅಪ್ಪನಿಗೆ ಮೆದು ಧ್ವನಿಯಲ್ಲಿಯೇ ಹೇಳಿದಳು,
ಅಪ್ಪ ಚಂದ್ರ ಶೇಖರ್ ಹಿಂದಕ್ಕೆ ತಿರುಗಿ ನೋಡಿದರು. ಮಗಳು ತನು ಹೇಳಿದಂತೆಯೇ ಆ ಹುಡುಗ ಹಿಂದೆ ಹಿಂದೆನೇ ಬರುತ್ತಿದ್ದ. ನೋಡಲು ಸುಂದರವಾಗಿದ್ದ. ಸುಮಾರು ಇಪ್ಪತ್ತೈದು ವರ್ಷದ ಯುವಕ. ಜೀನ್ಸ್ ಪ್ಯಾಂಟಿಗೆ ಬಿಳಿಯ ಟೀ ಷರ್ಟ್ ಹಾಕಿಕೊಂಡಿದ್ದ. ತಲೆಗೂದಲು ಉದ್ದವಾಗಿಯೇ ಇತ್ತು. ಚಿಗುರು ಮೀಸೆಯ ಆ ಯುವಕ ನೋಡಲು ಜೆಂಟಲ್ ಮೆನ್ ನಂತೆ ಕಾಣುತ್ತಿದ್ದ.

"ಯಾರೋ ಬಿಡಮ್ಮ, ಈ ಕಾಲೇಜ್ ಹುಡುಗರ ಬುದ್ದೀನೆ ಇಷ್ಟು ಯಾರಾದರು  ಸುಂದರ ಹುಡುಗಿಯರನ್ನು ಕಂಡ ಕೂಡಲೇ ಕಣ್ಣು ಕೆಕ್ಕರಿಸಿಕೊಂಡು ಹಿಂದೆನೇ ಬಿದ್ ಬಿಡ್ತಾವೆ. ಹುಡುಗಿ ಏನಾದ್ರೂ ಹಿಂದೆ ತಿರುಗಿ ಸ್ಮೈಲ್ ಕೊಟ್ರೆ ಮುಗೀತು, ಬಡ್ಡಿ ಮಕ್ಳು ನಾಲ್ಕೈದು ದಿನ ನಿದ್ದೆನೇ ಮಾಡೊಲ್ಲ. ಅದಕ್ಕೆ ಕಣಮ್ಮ ಹುಡುಗಿ ತುಂಬಾ ಹುಷರಾಗಿರಬೇಕು ಇಂಥವರನ್ನು ಕೇರ್ ಮಾಡ್ಲೇ ಬಾರ್ದು. ಅವರು ಹಿಂದೆ ಬಿದ್ರೂ ಸಹ ನಾವು ಸುಮ್ಮನೆ ಇದ್ರೆ ಮುಗೀತು. ಬಂದ ದಾರಿಗೆ ಸುಂಕ ಇಲ್ಲ ಅಂತ ಹಿಂದಿರುಗಿ ಹೋಗ್ತಾವೆ. ನೀನು ಸುಮ್ಮನೆ ಇರಮ್ಮ. ಈಗಿನ ಹುಡುಗರು ಈ ತರಹ ಫಾಲೋ ಮಾಡ್ತಾ ಬರೋದು ಕಾಮನ್ ಆಗಿ ಬಿಟ್ಟಿದೆ. ನೀನೇನೂ ಹೆದರಬೇಡ ನಡಿ ಬೇಗ ಬೇಗ..."

ಅಪ್ಪ ಮಗಳಿಗೆ ಧೈರ್ಯ ತುಂಬಿದರು.

ತನಿಷ್ಕ ಸಹ ತಂದೆ ಹೇಳಿದಂತೆಯೇ ಆ ಹುಡುಗನ ಕಡೆಗೆ ತಿರುಗಿ ನೋಡದೆ ರೈಲನ್ನು ಹತ್ತಿದಳು. ಚಂದ್ರ ಶೇಖರ್ ತಮ್ಮ ಕುಟುಂಬದ ಜೊತೆಗೆ ತಮ್ಮ ತಮ್ಮ ಸೀಟಿನ ನಂಬರನ್ನು ನೋಡಿ ಕುಳಿತುಕೊಂಡರು. ಸ್ವಲ್ಪ ಹೊತ್ತಿನಲ್ಲಿ ಸೀಟುಗಳೆಲ್ಲಾ ತುಂಬಿದವು. ಚಂದ್ರ ಶೇಖರರು ನಿರಾತಂಕವಾಗಿ ಕುಳಿತು ನಿಟ್ಟುಸಿರು ಬಿಟ್ಟರು.

ರೈಲು ಸರಿಯಾಗಿ ಹನ್ನೆರಡುಗಂಟೆಗೆ ಹೊರಟಿತು...

ರೈಲು ವೇಗವಾಗಿ ಸಾಗಲಾರಂಬಿಸಿತು. ಅರೆ...! ಅದೇ ಯುವಕ ತನು ಕುಳಿತ್ತಿದ್ದ ಸೀಟಿನ ಎದುರುಗಡೆಯೇ ನೇರವಾಗಿಯೇ ಕುಳಿತುಕೊಂಡಿದ್ದ. ಜನ ಜಂಗುಳಿಯ ನಡುವೆ ಆ ಯುವಕ ಅಲ್ಲೇ ಎಲ್ಲೋ ಕಳೆದು ಹೋಗಿರಬೇಕು ಅಂತ ಅಂದುಕೊಂಡದ್ದು ತಪ್ಪಾಯಿತು. ಆ ಹುಡುಗ ಮತ್ತೆ ತನಿಷ್ಕಳನ್ನೇ ಹಿಂಬಾಲಿಸಿಕೊಂಡು ಬಂದಿದ್ದನು. ಅಲ್ಲದೇ ತನಿಷ್ಕ ಕುಳಿತ್ತಿದ್ದ ಎದುರುಗಡೆಯ ಸೀಟಲ್ಲೇ ಕುಳಿತುಕೊಂಡು ಆಗಾಗ ತನಿಷ್ಕಳನ್ನು ನೋಡುತ್ತಾ ಕಣ್ಣು ತಂಪು ಮಾಡಿಕೊಳ್ಳುತ್ತಿದ್ದ. ಆದರೆ ತನಿಷಳಿಗೆ ಮಾತ್ರ ಹುಡುಗನ ಆ ನೋಟ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಮೂತಿ ತಿವಿದು ಅತ್ತ ಕಡೆ ದೃಷ್ಟಿ ಹಾಕದೇ ಕುಳಿತುಕೊಂಡಳು. ಚಂದ್ರ ಶೇಖರರಿಗೆ ಮಾತ್ರ ಆ ಹುಡುಗ ರೈಲಿನ ಒಳಗೂ ಬಂದು ಕುಳಿತ್ತಿದ್ದು ಗಮನಕ್ಕೆ ಬರಲೇ ಇಲ್ಲ.

ರೈಲು ವೇಗವಾಗಿ ಚಲಿಸುತ್ತಿದ್ದುದರಿಂದ ಅರಸಿಕೆರೆ ತಲಿಪಿದ್ದೂ ತಿಳಿಯಲಿಲ್ಲ. ಮಾತು ಮಾತುಗಳ ಮಧ್ಯೆ ಬಹುಬೇಗನೆ ದಾರಿ ಸವೆಸಿದಂತಾಯಿತು. ಅರಸಿಕೆರೆ ತಲುಪುವುದರಲ್ಲಿ ಮದ್ಯಾಹ್ನ ಒಂದುವರೆಗಂಟೆಯಾಗಿತ್ತು. ಚಂದ್ರ ಶೇಖರರಿಗೆ ಆಗಲೇ ಹೊಟ್ಟೆ ತಾಳ ಹಾಕಲಾರಂಬಿಸಿತ್ತು. ಅರಸೀಕೆರೆ ನಿಲ್ಲಾಣದಲ್ಲಿ ಬಿಸಿ ಬಿಸಿ ಇಡ್ಲಿ ವಡೆ ಮತ್ತು ಪಲಾವ್ ಈ ಸಮಯದಲ್ಲಿ ಸಿಗುತ್ತದೆ. ಬಹುಷಃ ಇದೇ ಸಮಯದಲ್ಲಿ ಅರಸೀಕೆರೆಗೆ ಒಂದೆರಡು ರೈಲುಗಳು ನಿಲ್ದಾಣಕ್ಕೆ ಬರುವುದರಿಂದ ನಿಲ್ಲಾಣದಲ್ಲಿ ಆಹಾರ ಮಾರುವ ಹೋಟೆಲ್ನವರು ಬಿಸಿ ಬಿಸಿಯಾದ ಆಹಾರವನ್ನು ಇದೇ ಸಮಯಕ್ಕೆ ತಾಜತನದಿಂದ ತಯಾರಿಸಿ ಕೊಡುವುದರಿಂದ ಹೋಟಲ್ ನವರನ್ನು ಜನ ಮುಗಿ ಬಿದ್ದು ಕೊಂಡುಕೊಳ್ಳುತ್ತಾರೆ. ತನಿಷ್ಕ ಅಪ್ಪನಿಂದ   ಅಪ್ಪನಿಂದ ದುಡ್ಡು ಪಡೆದು ಕೆಳಗೆ ಇಳಿದಳು. ಬಿಸಿ ಬಿಸಿಯಾದ ಇಡ್ಲಿಯ ಜೊತೆಗೆ ಉದ್ದಿನ ವಡೆಯನ್ನು ಜೊನ್ನೆಯಲ್ಲಿ ಹಾಕಿ ಕೊಡುತ್ತಿದ್ದ ಆ ತೆಳುಕಾಯದ ವ್ಯಕ್ತಿಯ ಬಳಿ ಹೋದಳು. ತನಿಷ್ಕ ಅವನಿಗೆ ದುಡ್ಡನ್ನು ಕೊಡಲು ತನ್ನ ಕೈಯನ್ನು ಮುಂದೆ ಚಾಚಿದಳು. 'ಅಂಕಲ್ ಎರಡು ಪ್ಲೇಟ್ ಇಡ್ಲಿ ವಡೆ ಕೊಡಿ' ಕೊಡಿ ಎಂದು ದುಡ್ಡನ್ನು ಕೊಡಲು ಮುಂದಾದಳು. ತಕ್ಷಣ ತನ್ನ ಕೈಯನ್ನು ಯಾರೋ ಹಿಡಿದಂತಾಯಿತು. ತಿರುಗಿ ನೋಡಿದರೆ ಅದೇ ಹುಡುಗ, ಜೀನ್ಸ್ ಪ್ಯಾಂಟ್ ಬಿಳಿ ಟೀ ಷರ್ಟ್ ಧರಿಸಿದವನು. ಕೈ ಹಿಡಿದುಕೊಂಡೇ ತನಿಷ್ಕಳ ಕಡೆಗೆ ಕೃತ್ರಿಮವಾದ ನಗೆಯನ್ನು ಬೀರಿದ್ದ. ತನ್ನ ಮನೆಯಿಂದ ಆಟೋ ಏರಿದಾಗಿನಿಂದಲೂ ಹಿಂಬಾಲಿಸಿಕೊಂಡು ಬಂದ ಆ ಯುವಕ ರೈಲು ನಿಲ್ದಾಣಕ್ಕೂ ಬಂದು, ರೈಲನ್ನೂ ಸಹ ಹತ್ತಿ ಮತ್ತೆ ಹಿಂಬಾಲಿಸುತ್ತಲೇ ಇರುವ ಆ ವ್ಯಕ್ತಿಯನ್ನು ನೋಡಿ ತನಿಷ್ಕಳಿಗೆ ಆ ಯುವಕನ ಮೇಲೆ ಕೋಪ ಬಂದಿತು. ಅಲ್ಲದೇ ತನ್ನ ಕೈ ಹಿಡಿಯುವ ಧೈರ್ಯ ತೋರಿದ ಆ ಯುವಕನ ಉದ್ಧಟತನ ಎಂತಹದು. ಆ ಯುವಕನ ಕಡೆಗೆ ಕೆಂಗಣ್ಣು ಬೀರುತ್ತಾ

'ಬಿಡೋ.. ಕೈನ, ಎಷ್ಟೋ ಧೈರ್ಯ ನಿನಗೆ ನನ್ನ ಕೈ ಹಿಡಿಯಲು, ಬಿಡೋ..'

ಎನ್ನುತ್ತಾ ತನಿಷ್ಕ ಆ ಯುವಕ ಹಿಡಿದುಕೊಂಡ ಕೈ ಯನ್ನು ಕೊಸರಾಡಿಕೊಳ್ಳುತ್ತಾ ಬಿಡಿಸಿಕೊಂಡಳು.

"ಪ್ಲೀಸ್... ತನು ಒಂದ್ನಿಮಿಷ ನನ್ ಮಾತು ಕೇಳು.... ತನಿಷ್ಕ ಪ್ಲೀಸ್... ಒಂದೇ ಒಂದು ನಿಮಿಷ ಮಾತನಾಡಲು ಅವಕಾಶ ಕೊಡು. ಸುಮ್ಮನೆ ನನ್ನನ್ನು Avoid ಮಾಡಬೇಡ, ಬರೀ ಒಂದೆರಡು ನಿಮಿಷ ಅಷ್ಟೆ..ನನ್ನ ಮಾತು ಕೇಳು ತನಿಷ್ಕ... ಪ್ಲೀಸ್.."

ಆ ಯುವಕ ಹಾಗೆ ಹೇಳುತ್ತಿದ್ದಂತೆ ತನಿಷ್ಕ  ಗಾಬರಿಗೊಂಡಳು. ತಾನು ಕೊಂಡುಕೊಳ್ಳಬೇಕೆಂದಿದ್ದ ಇಡ್ಲಿ ವಡೆಯನ್ನೂ ಅಲ್ಲಿಯೇ ಬಿಟ್ಟು  ಆ ಯುವಕನಿಂದ ತಪ್ಪಿಸಿಕೊಳ್ಳಲು ಮುಂದೆ ಓಡಿದಳು. ಆದರೂ ಆ ಯುವಕ ಬಿಡಲಿಲ್ಲ ಆಕೆಯನ್ನು ಹಿಂಬಾಲಿಸಿಕೊಂಡೇ ಓಡಿದ. ಜೀನ್ಸ್ ಪ್ಯಾಂಟ್ ಜೊತೆಗೆ ಪಿಂಕ್ ಟಾಪ್ ಧರಿಸಿದ ತನಿಷ್ಕ ಜಿಂಕೆಯಂತೆ ಓಡುತ್ತಿದ್ದಳು. ಅವಳ ಹಿಂದೆ ಯುವಕನು ಸಹ...

"ಪ್ಲೀಸ್ ತನಿಷ್ಕ.... ನಿಂತ್ಕೊ....ನನ್ ಮಾತು ಸ್ವಲ್ಪ ಕೇಳು.."

ಎನ್ನುತ್ತಲೇ ಅವಳ ಹಿಂದೆ ಹಿಂದೆ ಓಡುತ್ತಲೇ ಇದ್ದ. ಸುತ್ತ ಮುತ್ತ ನೆರೆದಿದದ್ದ ಜನರಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗಲೇ ಇಲ್ಲ. ನಿಲ್ದಾಣದಲ್ಲಿ ಎಲ್ಲರ ಕಣ್ಣಗಳು ಇವರತ್ತವೇ ತಿರುಗಿದವು. ಏನೋ ನಡೆಯುತ್ತಿದೆ ಎನ್ನುವಂತೆ ಜನರೆಲ್ಲಾ ನಿಂತು ನೋಡುತ್ತಿದ್ದರು. ಒಬ್ಬ ಹುಡುಗ ಹುಡುಗಿಯನ್ನು ಹಿಂದೆ ಹಿಂದೆ ಕೂಗಿಕೊಂಡು ಹಿಂಬಾಲಿಸುತ್ತಿದ್ದ ಆ ಪರಿ ಒಂದು ಕ್ಷಣ ಎಲ್ಲರನ್ನು ಸೆಳೆದುಕೊಂಡು ಬಿಟ್ಟಿತ್ತು. ತನಿಷ್ಕ ಮಾತ್ರ ರೌಡಿಯೊಬ್ಬ ಹಿಂದಿನಿಂದ ಅಟ್ಟಿಸಿಕೊಂಡು ಬರುತ್ತಿರುವ ರೀತಿಯಲ್ಲಿ ಓಡುತ್ತಿದ್ದಳು. ಈ ದೃಶ್ಯವನ್ನು ಮೂಕ ಪ್ರೇಕ್ಷಕರಂತೆ ನಿಂತು ನೋಡುತ್ತಿರುವ ಪ್ರಯಾಣಿಕರ ಮನದಲ್ಲೂ ಸಹ ಹೆಚ್ಚು ಕಡಿಮೆ ಇದೇ ಭಾವ ಆವರಿಸಿಕೊಂಡಿತ್ತು. ಪಾಪಾ ಆ ಹುಡುಗಿಯನ್ನು ಯಾರಾದರೂ ಕಾಪಾಡಬಾರದೇ ಎಂದು ಹಲವರು ಮನದಲ್ಲೇ ಯೋಚಿಸುತ್ತಿದ್ದರು. ಅಷ್ಟರಲ್ಲಿ  ಕೂಡಲೇ ಆ ಯುವಕನನ್ನು ಹಿಂದಿನಿಂದ ಯಾರೋ ಹಿಡಿದು ನಿಲ್ಲಿಸಿದರು. ಹುಡುಗಿ ಹಿಂದೆ ಓಡುತ್ತಿದ್ದ ಯುವಕನ ಕಾಲುಗಳು ತಕ್ಷಣ ಓಡುವುದನ್ನು ನಿಲ್ಲಿಸಿತು. ಯುವಕ ತಕ್ಷಣ ತಿರುಗಿ ನೋಡಿದ, ದಪ್ಪ ಮೀಸೆಯನ್ನು ಬಿಟ್ಟುಕೊಂಡಿದ್ದ ಒಬ್ಬ ರೈಲ್ವೇ ಪೋಲೀಸ್ ಆ ಯುವಕನನ್ನು ಹಿಡಿದುಕೊಂಡಿದ್ದನು. ಆ ಪೋಲೀಸಪ್ಪ ಗಾತ್ರದಲ್ಲಿ ಅಜಾನುಬಾಹು ವ್ಯಕ್ತಿಯಾಗಿದ್ದನು. ಗಾಳಕ್ಕೆ ಸಿಕ್ಕ ಮಿಕವನ್ನು ಹಿಡಿದುಕೊಂಡಂತೆ ಆತನು ಆ ಯುವಕನು ಧರಿಸಿದ್ದ ಅಂಗಿಯ ಹಿಂಬದಿಕಾಲರ್ ನ ಕೊರಳ ಪಟ್ಟಿಯನ್ನು ಹಿಡಿದು ಕೃತ್ರಮವಾದ ನಗೆಯನ್ನು ಬೀರಿದ್ದ, ಕಣ್ಣುಗಳನ್ನು ಕೆಂಪಾಗಿಸಿಕೊಂಡು ಆ ಯುವಕನನ್ನು ಕುರಿತು

"ಏನೋ... ಕತ್ತೆ ಬಡವ, ಹುಡುಗಿಯನ್ನು ಚುಡಾಯಿಸ್ತಿಯಾ...? ಎಷ್ಟೋ ಧೈರ್ಯ ನಿನಗೆ, ಈ ಪರಸಪ್ಪ ಇರೋ ಈ ನಿಲ್ದಾಣದಲ್ಲಿ ಇಂಥಾ ಘಟನೆಯಾ..?ನಡಿಯೋ ಸ್ಟೇಷನ್ನಿಗೆ. ಸ್ವಲ್ಪ ಲಾಟಿ ರುಚಿ ಬಿದ್ರೆ ಸರಿ ಹೋಗ್ತೀಯಾ ಮಗನೆ.."

ಎನ್ನುತ್ತಾ ಆ ಪೋಲೀಸನು ತನ್ನ ಕೈಯಿಂದ ಮೀಸೆಯನ್ನು ತಿರುವುತ್ತಾ ಮತ್ತೊಂದು ಕೈ ಯಿಂದ ಲಾಟಿಯನ್ನು ತೆಗೆದುಕೊಂಡು ಯುವಕನ ಮುಕುಳಿಯ ಮೇಲೆ ಒಂದು ಏಟನ್ನು ಸರಿಯಾಗಿಯೇ ಬಿಟ್ಟನು. ನಿಲ್ದಾಣದಲ್ಲಿ ನಿಂತಿದ್ದ ಜನರೆಲ್ಲಾ ಈ ದೃಶ್ಯವನ್ನು ಕಣ್ ತನಿಯೆ ಮನ ತಣಿಯೆ ನೋಡುತ್ತಿದ್ದರು. ಯಾವಾಗ ಜನರೆಲ್ಲಾ ತನ್ನನ್ನೇ ನೋಡುತ್ತಿದ್ದಾರೆ ಎಂಬ ಸಂಗತಿ ಆ ಯುವಕನ ಗಮನಕ್ಕೆ ಬಂದಿತೋ, ಆಗ ಆ ಯುವಕನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬ ತಪ್ಪು ಅರಿವಿಗೆ ಬಂದಿತು. ಹೀಗೆ ಹುಡುಗಿಯನ್ನು ಸಾರ್ವವಜನಿಕವಾಗಿ ಕೈ ಹಿಡಿದೆಳೆದು ಹಿಂಬಾಲಿಸಿಕೊಂಡು ಓಡಿದರೆ ಜನ ಏನೆಂದು ಕೊಂಡಾರು. ಪೋಲೀಸರು ಏನೆಂದು ಗ್ರಹಿಸಿ ಕೊಂಡಾರು. ಎಂದು ಆ ಯುವಕ ತನ್ನ ಮನದಲ್ಲೇ ಯೋಚಿಸಿಕೊಂಡು ಮುಜುಗರಕ್ಕೊಳಗಾದನು. ತಾನು ಎಚ್ಚೆತ್ತುಕೊಳ್ಳ ಬೇಕೆನಿಸುವಷ್ಟರಲ್ಲೇ ಪಾಪ ಅಷ್ಟರಲ್ಲೇ ಆ ಯುವಕ ಪೋಲೀಸನಿಗೆ ಸಿಕ್ಕಿ ಬಿದ್ದಿದ್ದನು.

"ಸರ್ ಸುಮ್ಮನಿರಿ ಸರ್. ಹಿಂಗೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹೊಡೆಯಬೇಡಿ. ನಾನೇನು ಅಂತವನಲ್ಲ, ಅವಳು ನನಗೆ ಗೊತ್ತಿರೊಳು. ನಾವಿಬ್ಬರೂ ಸ್ನೇಹಿತರು. ಒಂದೇ ಕಾಲೇಜಿನಲ್ಲಿ ಓದುತ್ತಿರೋರು. ತನಿಷ್ಕ ಪ್ಲೀಸ್ ನೀನಾದ್ರೂ ಹೇಳು.... ಪ್ಲೀಸ್ ತನಿಷ್ಕ... ಪ್ಲೀಸ್...."

ಆ ಯುವಕ ಅಲ್ಲಿಂದಲೇ ಕೂಗಿಕೊಳ್ಳುತ್ತಲೇ ಇದ್ದ. ತನಿಷ್ಕ ಮಾತ್ರ ತಿರುಗಿ ನೋಡದೇ ಮುಂದೆ ಮುಂದೆ ಹೋಗುತ್ತಿದ್ದಳು. ಪೋಲೀಸಿನವನು ಆಯುವಕನನ್ನು ಸರಿಯಾಗಿ ತರಾಟೆ ತೆಗೆದುಕೊಂಡನು. ಯುವಕ ತನ್ನನ್ನು ಬಿಡುವಂತೆ ಪರಿ ಪರಿಯಾಗಿ ಬೇಡಿಕೊಂಡರೂ ಆ ಮೀಸೆ ಮಾಮಾ ಅಲ್ಲೇ ಇರುವ ಸ್ಟೇಷನ್ ಒಳಗೆ ಕರೆದುಕೊಂಡು ಹೋದನು.

"ಸರ್.. ಪ್ಲೀಸ್ ಟ್ರೈನ್ ಹೊರಟು ಹೋಗುತ್ತೆ, ನನ್ನ ಬಿಟ್ಟು ಬಿಡಿ. ನೀವು ತಿಳಿದುಕೊಂಡಂತೆ ನಾನು ಅಂತಹ ಪೋಕರಿ ಅಲ್ಲ. ನಾನೇನೂ ಅವಳನ್ನು ಚುಡಾಯಿಸುತ್ತಲೂ ಇರಲಿಲ್ಲ.. ಪ್ಲೀಸ್ ನನ್ನ ಬಿಟ್ಟು ಬಿಡಿ ಸರ್"

ಆ ಯುವಕ ಇನ್ನು ಅಷ್ಟು ಹೇಳಿ ಮುಗಿಸಿರಲಿಲ್ಲ ಅಷ್ಟರಲ್ಲಿ ತನಿಷ್ಕ ಸಹ ಹಿಂದೆಯೇ ಬಂದಳು ನಿಂತಳು. ಅಚಾನಕಾಗಿ ಸ್ಟೇಷನ್ ಪ್ರವೇಶಿಸಿದ ತನಿಷ್ಕಳನ್ನು ಆ ದಪ್ಪ ಮೀಸೆಯ  ಪೋಲಿಸಪ್ಪ ತನಿಷ್ಕಳನ್ನು ಕೆಕ್ಕರಿಸಿ ನೋಡಿದ. ಒಮ್ಮೆ ಹುಡುಗನ ಕಡೆಗೆ ಕೋಪದಿಂದ ನೋಡಿ ಮತ್ತೆ ಹುಡುಗಿಯ ಕಡೆಗೆ ಕೆಕ್ಕರಿಸಿ ನೋಡಿದ...

"ಸರ್  .ಪ್ಲೀಸ್ ಬಿಟ್ಟು ಬಿಡಿ  ಆ ಹುಡುಗ ಅಂತವನಲ್ಲ. ನನಗೆ ಪರಿಚಯದವನೆ. ಹೆಸರು ರೋಹನ್ ಅಂತ, ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವವರು. ಅಷ್ಟಕ್ಕೂ ಅವನೇನು ನನ್ನ ಚುಡಾಯಿಸುತ್ತಿರಲಿಲ್ಲ. ಒಳ್ಳೆ ಹುಡುಗ. ಬಿಟ್ಟು ಬಿಡಿ ಸರ್, ಅವನೊಂದಿಗೆ ಕೋಪಿಸಿಕೊಂಡವಳಂತೆ ನಾಟಕವಾಡಿದ್ದು ನನ್ನದೇ ತಪ್ಪು. ಸಮ್ಮನೆ ಮಾತನಾಡಿಕೊಂಡಿದ್ದರೆ ಹೀಗೆ ಪೋಲೀಸರವರೆಗೂ ಬರುವಂತಹ ಪ್ರಮೆಯವೇ ನಮಗೆ ಬರುತ್ತಿರಲಿಲ್ಲ. ಪ್ಲೀಸ್ ಸರ್, ನನ್ನದೇ ತಪ್ಪು ಅವನನ್ನು ಬಿಟ್ಟು ಬಿಡಿ.. ಪ್ಲೀಸ್"

ತನಿಷ್ಕ ಕೈ ಮುಗಿದು ಪೋಲೀಸನವನಿಗೆ ಬೇಡಿಕೊಂಡಳು.

"ಏನಮ್ಮ ಇದು.. ನೋಡಿದವರು ಏನಂತ ತಿಳ್ಕೊಬೇಕು ಹೇಳಿ, ಪಬ್ಲಿಕ್ ಪ್ಲೇಸಲ್ಲಿ ಸ್ವಲ್ಪ ಸರಿಯಾಗಿ ಬಿಹೇವ್ ಮಾಡೋದನ್ನ ಕಲೀರಿ. ಕಾಲೇಜ್ ಹುಡುಗ್ರು ಅಂದ್ರೆ ಪೆದ್ದು ಪೆದ್ದಾಗಿ ಆಡೋದಲ್ಲ. ಜನರಿಗೆ ನೀವು ಮಾದರಿಯಾಗಿ ಇರ್ಬೇಕು. ಅದನ್ನ ಬಿಟ್ಟು ನೀವೇ ಕೋತಿಗಳ ತರ ಆಡಿದ್ರೆ ನೋಡಿದವರು ಏನಂತ ತಿಳ್ಕೊತಾರೆ.. ಬುದ್ಧಿ ಇಲ್ವಾ ನಿಮಗೆ, ಓದಿ ಬುದ್ದಿ ಇರೋರೆ ನೋಡಿ ಈ ತರ ಮಾಡೋದು ನಿಮಗಿಂತ ಅನ್ ಎಜುಕೇಟೆಡ್ ಜನಗಳೇ ಒಳ್ಳೆಯವರು. ಸರಿ ಇನ್ಮೇಲಾದ್ರು ಸ್ವಲ್ಪ ಜವಬ್ದಾರಿಯಿಂದ ನಡೆದುಕೊಳ್ಳಿ. ಸರಿ ಹೊರಡಿ ರೈಲು ಕೂಡ ಹೊರಡಲು ಸಿದ್ಧವಾಗಿ ನಿಂತಿದೆ."

ಪೋಲೀಸಪ್ಪ ಹಾಗೆ ಹೇಳಿ ಮುಗಿಸುವಷ್ಟರಲ್ಲಿಯೇ ರೈಲು ಮುಂದೆ ಹೊರಡಲು ಸೀಟಿ ಹಾಕಲಾರಂಭಿಸಿತು. ತನಿಷ್ಕ ತಕ್ಷಣ ರೈಲಿನ ಕಡೆಗೆ  ಓಡಿದಳು. ಅವಳ ಹಿಂದೆ ರೋಹನ್ ಸಹ ಓಡಿದನು. ರೈಲಿನೊಳಗೆ ಕುಳಿತ್ತಿದ್ದ ತನಿಷ್ಕಳ ತಂದೆ ತಾಯಿಗೆ ಹೊರಗೆ ನಡೆದಿದ್ದರ ಯಾವ ಪರಿವೂ ಸಹ ಇರಲಿಲ್ಲ. ಇಬ್ಬರೂ ಸಹ ಏನೂ ಆಗಿಲ್ಲವೆಂಬಂತೆ ಮತ್ತೆ ತಮ್ಮ ತಮ್ಮ ಸೀಟಿನಲ್ಲಿ ಹೋಗಿ ಕುಳಿತರು.

"ಯಾಕಮ್ಮಾ... ಇಡ್ಲಿ ತರ್ತೀನಿ ಅಂತ ಹೋದವಳು ಬರೀ ಕೈಲಿ ಬಂದಿದ್ದೀಯಾ...?"

ಅಮ್ಮ ಸರೋಜ ಮಗಳು ಬರಿ ಗೈಲಿ ಹಿಂದಿರುಗಿ ಬಂದಿದ್ದನ್ನು ನೋಡಿ ಕೇಳಿದಳು

"ಏನಿಲ್ಲಮ್ಮ... ಜನ ಎಲ್ಲಾ ಇಡ್ಲಿಯವನಿಗೆ ಮುಗಿ ಬಿದ್ದಿದ್ದರು.. ನನಗೆ ಕೊಡುವಷ್ಟರಲ್ಲಿ ಎಲ್ಲಾ ಖಾಲಿಯಾಯಿತು. ಮತ್ತೊಂದು ಕಡೆ ಹೋದ್ರು ಇದೆ ಪರಿಸ್ಥಿತಿ ಆಯ್ತು. ಸುಮ್ಮನೆ ನಿಂತು ಟೈಂ ವೇಸ್ಟ್ ಮಾಡ್ಕೊಂಡೆ ಅಲ್ಲೇ ದೂರದಲ್ಲಿ ಇನ್ನೊಬ್ಬ ಮಾರಾಟ ಮಾಡ್ತಾ ಇದ್ದ. ಅಷ್ಟರಲ್ಲಿ ರೈಲು ಹೊರಡಲು ಸಿದ್ಧ ಆಯ್ತಲ್ಲಮ್ಮ ವಾಪಸ್ ಬಂದು ಬಿಟ್ಟೆ. ಇರ್ಲಿ ಬಿಡಮ್ಮ ಇಲ್ಲೆ ರೈಲ್ವೇ ಕ್ಯಾಟರರ್ ತಂದಿದ್ದನ್ನೇ ತಿನ್ನೋಣ.."

ತನಿಷ್ಕ ಹೊರಗೆ ನಡೆದದ್ದನ್ನು ಏನೂ ಹೇಳದೇ ತನ್ನನ್ನು ತಾನು ಸಮರ್ಥಿಸಿಕೊಂಡು ಅಮ್ಮನಿಗೆ ನಂಬುವಂತಹ ಕಾರಣ ಹೇಳಿದಳು...

ಅಷ್ಟರಲ್ಲಿ ರೈಲು ತನ್ನ ವೇಗವನ್ನು ಹೆಚ್ಚಿಸಿಕೊಂಡು ಮುಂದೆ ಮುಂದೆ ಸಾಗುತ್ತಿತ್ತು.

ಮತ್ತೆ ಆ ಯುವಕ...ಅದೇ ಆ ರೋಹನ್ ತನಿಷ್ಕಳ ಕಾಲೇಜಲ್ಲಿ ಓದುತ್ತಿರುವ ಗೆಳೆಯ, ಅವನು ಮತ್ತೆ ತನಿಷ್ಕಳ  ಎದುರುಗಡೆಯ ಸೀಟಿನಲ್ಲೇ ಕುಳಿತನು. ತನು ಅವನ ಎದುರಾಗಿ ಕುಳಿತುಕೊಳ್ಳಲು ಮನಸ್ಸು ಬಾರದೇ ತನ್ನ ಸ್ಥಳವನ್ನು ಮತ್ತೆ ಬದಲಿಸಿ ಕುಳಿತಳು. ಎಲ್ಲಿ ತನಗೆ ಪರಿಚಿತ ಹುಡುಗ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವ ವಿಷಯ ತಂದೆ ತಾಯಿಗಳಿಗೆ ತಿಳಿದರೆ ಎಂಬ ಭಯ ತನಿಷ್ಕಳ ಮನದಲ್ಲಿತ್ತು. ಆದ್ದರಿಂದ ಸ್ವಲ್ಪವೂ ಅನುಮಾನ ಬರದ ರೀತಿಯಲ್ಲಿಯೇ ಸ್ಥಳ ಬದಾಲಾಯಿಸಿಕೊಂಡು ಕುಳಿತಳು.

ದಾವಣಗೆರೆ ಬರುವಷ್ಟರಲ್ಲಿ ರೈಲಿನಲ್ಲಿ ಶೇಕಡ ತೊಂಬತ್ತರಷ್ಟು ಜನ ಖಾಲಿಯಾಯಿತು. ಬೆಂಗಳೂರಿನಿಂದ ಹತ್ತಿದ ಎಲ್ಲಾ ಜನರು ಅರಸಿಕೆರೆ, ಬೀರೂರುನಲ್ಲೇ ಬಹಳಷ್ಟು ಜನ ಇಳಿದಿದ್ದರು. ಉಳಿದಿದ್ದ ಜನರಲ್ಲಿ ಹೆಚ್ಚಿನ ಸಂಖ್ಯೆಯ ಜನ ದಾವಣಗೆರೆಯಲ್ಲೇ ಇಳಿದರು. ಇನ್ನು ಬೋಗಿಯಲ್ಲಿ ಇದ್ದದ್ದು ಸೀಟಿಗೊಬ್ಬ ಪ್ರಯಾಣಿಕರು. ಅಲ್ಲಲ್ಲಿ ಖಾಲಿ ಖಾಲಿ ಸೀಟುಗಳು. ತನಿಷ್ಕಳ ಕುಟುಂಬದ ಅಕ್ಕ ಪಕ್ಕ ಹಿಂದೆ ಮುಂದೆ ಎಲ್ಲಾ ಸೀಟುಗಳು ಖಾಲಿ ಖಾಲಿ. ಅಲ್ಲೊಬ್ಬ ಇಲ್ಲೊಬ್ಬ ಇದ್ದರೂ ಸಹ ಇವರಿರು ಕಂಫಾರ್ಟ್ ಮೆಂಟ್ ಹೆಚ್ಚೇ ಖಾಲಿಯಾಗಿತ್ತು. ರೋಹನ್ ತನಿಷ್ಕ ಕುಳಿತ್ತಿದ್ದ ಕುಟಂಬದ ಹಿಂದೆ ನಾಲ್ಕೈದು ಸೀಟುಗಳ ಹಿಂದೆಯೇ ಕುಳಿತನು...

ದಾವಣಗೆರೆಯಲ್ಲಿ ಒಬ್ಬ ಮಧ್ಯ ವಯಸ್ಸಿನ ಕಟ್ಟು ಮಸ್ತಾದ ವ್ಯಕ್ತಿಯಬ್ಬನೆ ಹತ್ತಿದ್ದು. ಕಪ್ಪು ಕೋಟು ಕೈಯಲ್ಲಿ ಸೂಟ್ ಕೇಸ್ ಹಿಡಿದು ತನಿಷ್ಕ ಕುಳಿತ್ತಿದ್ದ ಎದುರುಗಡೆ ಬಂದು ಕುಳಿತನು. ನೋಡಲು ಸ್ವಲ್ಪ ರಫ್ ಅಂಡ್ ಟಫ್ ಆಗಿದ್ದನು. ಅವನ ಶರೀರ ಸ್ವಲ್ಪ ದಪ್ಪವಾಗಿಯೇ ಇತ್ತು. ಆಗಾಗ ತನ್ನ ಫ್ರೆಂಚ್ ದಾಡಿಯನ್ನು ಕೆರೆದುಕೊಳ್ಳುತ್ತಾ ಓರೇ ನೋಟದಿಂದ ತನಿಷ್ಕಳ ಕಡೆಗೆ ಕಳ್ಳ ನೋಟ ಬೀರುತ್ತಿದ್ದನು. ಒಮ್ಮೆ ಹಿಂದೆ ಮತ್ತೊಮ್ಮೆ ಮುಂದೆ ಯಾರನ್ನೋ ನೋಡುವಂತೆ, ಯಾರನ್ನೋ ಹುಡುಕುವಂತೆ, ಏನನ್ನೋ ಕಳೆದುಕೊಂಡವನಂತೆ, ಮತ್ತೇನನ್ನೋ ಪಡೆಯುವಂತೆ ಅವನ ನೋಟ ಕುತೂಹಲಕಾರಿಯಾಗಿತ್ತು. ಆ ವ್ಯಕ್ತಿ ಅಂತಹ  ಅನುಮಾನಕರವಾದ ದೃಷ್ಠಿಯನ್ನು ಎಲ್ಲೆಡೆ ಬೀರುತ್ತಾ ನೋಡುತ್ತಿದ್ದನು. ಸ್ವಲ್ಪ ಹೊತ್ತಿನಲ್ಲಿ ರೈಲು ಹರಿಹರ ನಿಲ್ದಾಣವನ್ನು ತಲುಪಿತು...

ಇದ್ದ ಬದ್ದ ಅಲ್ಪ ಸ್ವಲ್ಪ ಜನರು ಹರಿಹರದಲ್ಲಿ ಇಳಿದುಕೊಂಡರು. ಇಡೀ ಬೋಗಿಯಲ್ಲಿ ಇದ್ದದ್ದು. ತನಿಷ್ಕಳ ಕುಟುಂಬ, ಸ್ವಲ್ಪ ದೂರದಲ್ಲಿ ರೋಹನ್ ಮತ್ತು ಆ ಫ್ರೆಂಚ್ ದಾಡಿಯ ವ್ಯಕ್ತಿ ಮಾತ್ರ.

"ಮಸಲಾ ಮಂಡಕ್ಕಿ... ಮಸಾಲ ಮಂಡಕ್ಕಿ.. ಬರೀ ಹತ್ತು ರೂಪಾಯಿ ಬರಿ, ಹತ್ತು ರೂಪಾಯಿ..."

ರೈಲು ನಿಲ್ದಾಣದಲ್ಲಿ ಮಂಡಕ್ಕಿ ಮಾರುವ ವ್ಯಕ್ತಿಯೊಬ್ಬ ತನಿಷ್ಕ ಕುಳಿತ್ತಿದ್ದ ಕಿಟಕಿಯ ಬಳಿಯಿಂದಲೇ ಕೂಗುತ್ತಾ ಹಾದು ಹೋದನು. ತನಿಷ್ಕ ಕಿಟಕಿಯಿಂದಲೇ  ಗರಿ ಗರಿಯಾಗಿದ್ದ ಮಸಾಲ ಮಂಡಕ್ಕಿಯನ್ನು ಖರೀದಿಸಿದಳು. ರೈಲು ನಿಲ್ದಾಣದ ವಿಹಂಗಮ ನೋಟವನ್ನು ನೋಡುತ್ತಲೇ ತನಿಷ್ಕ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ತಿನ್ನತೊಡಗಿದಳು. ರೈಲು ನಿಧಾನವಾಗಿ ಮತ್ತೆ ಚಲಿಸಲಾರಂಭಿಸಿತು. ರೈಲು ಇನ್ನು ಸ್ವಲ್ಪ ದೂರವೂ ಚಲಿಸಿರಲಿಲ್ಲ. ಆಗ ತಾನೇ ರೈಲು  ಹರಿಹರದ ತುಂಗಾ ಭದ್ರಾ ನದಿಯ ಸೇತುವೆಯನ್ನು ದಾಟಿತ್ತು. ಆ ಫ್ರೆಂಚ್ ದಾಡಿಯ ಅನಾಮಿಕ ವ್ಯಕ್ತಿ ಎದ್ದು ಬಂದು ಸೀದಾ ಚಂದ್ರ ಶೇಖರ್ ಮತ್ತು ತನಿಷ್ಕ ಕುಳಿತ್ತಿದ್ದ ಎದುರುಗಡೆಯ ಸೀಟಿನ ಮುಂದೆ ಕುಳಿತನು. ಒಂದು ಕ್ಷಣ ಚಂದ್ರ ಶೇಖರ ರವರಿಗೆ ಆಶ್ಚರ್ಯವಾಯಿತು. ಇಷ್ಟೊಂದು ಖಾಲಿ ಸೀಟು ಇದ್ದರೂ ಸಹ ಈ ವ್ಯಕ್ತಿ ಇಲ್ಲ್ಯಾಕೆ ಬಂದು ಕುಳಿತ್ತಿದ್ದಾನೆ. ನೋಡಲು ಕ್ರಿಮಿನಲ್ ತರ ವಿಚಿತ್ರ ನೋಟ ಬೇರೆ, ಅನಾಮಿಕ ವ್ಯಕ್ತಿ ರೌಡಿ ತರ ಕಾಣ್ತಾ ಇದ್ದಾನೆ ಎಂದು ಮನಸ್ಸಿನಲ್ಲಿಯೇ ಯೋಚಿಸ ತೊಡಗಿದರು. ಆದರೆ ರೈಲು ಪ್ರಯಾಣ ಎದ್ದು ಹೋಗು ಅಂತ ಹೇಳುವಂತೆಯೂ ಇರಲಿಲ್ಲ. ಬೇರೆ ಏನೂ ಮಾಡದಂತಹ ಅಸಾಹಯಕ ಪರಿಸ್ಥಿತಿ. ಪ್ರಯಾಣಿಕರಿಗೆ ಅಲ್ಲಿ ಕುಳಿತು ಕೊಳ್ಳಿ, ಇಲ್ಲಿ ಕುಳಿತುಕೊಳ್ಳಿ ಎಂದು ನಿರ್ದೇಶನ ನೀಡಲು ಸಾಧ್ಯವೂ ಇರಲಿಲ್ಲ. ಒಂದು ವೇಳೆ ಆ ವ್ಯಕ್ತಿಯೇನಾದರೂ ಕೆಟ್ಟವನು ಎಂದೆನಿಸಿದರೆ ನಾವೇ ಸೀಟು ಬದಲಾಯಿಸಿದರಾಯಿತು ಎಂದು ಯೋಚಿಸಿ ಚಂದ್ರ ಶೇಖರ್ ರವರು ಸುಮ್ಮನಾದರು...

ರೈಲು ವೇಗವಾಗಿ ಚಲಿಸತೊಡಗಿತು. ತನಿಷ್ಕ ಹಿಡಿದು ತಿನ್ನುತ್ತಿದ್ದ ಮಸಾಲ ಮಂಡಕ್ಕಿಯ ಪೊಟ್ಟಣವೂ ಖಾಲಿಯಾಗತೊಡಗಿತು. ಖಾಲಿ ಪೊಟ್ಟಣವನ್ನು ಕಿಟಕಿಯಾಚೆಗೆ ಎಸೆದು ನೀರು ಕುಡಿದು ಮತ್ತೆ ತನ್ನ ದೃಷ್ಟಿಯನ್ನು ಕಿಟಕಿಯಾಚೆ ನೆಟ್ಟು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಕುಳಿತಳು. ರೈಲಿನ ಕಿಟಕಿಯಿಂದ ಬಂದ ತಂಪಾದ ಗಾಳಿಯು ಆಕೆಯ ಮುಂಗುರುಳುಗಳು ಉಯ್ಯಾಲೆಯಂತೆ ಅವಳ ಕೆನ್ನೆಗಳನ್ನು ಆಗೊಮ್ಮೆ ಈಗೊಮ್ಮೆ ಸ್ಪರ್ಶಿಸುತ್ತಾ  ಸರಸವಾಡುತ್ತಾ ಹಾರಾಡುತ್ತಿದ್ದವು. ಬಿಳಿಯ ಕೆನ್ನೆಗಳು ರೇಷಿಮೆಯ ಹೊಳಪನ್ನು ಧರಿಸಿದ್ದವು. ಕಣ್ಣುಗಳು ಮೀನಿನ ಆಕಾರವನ್ನು ಪಡೆದಿದ್ದವು. ಕಾಡಿಗೆಯಿಂದ ಶೃಂಗಾರಗೊಂಡ ನಯನಗಳು ನೋಡಲು ಮನೋಹರವಾಗಿದ್ದವು.  ತನಿಷ್ಕ ನಿಜವಾಗಿಯೂ ಸೌಂದರ್ಯದಲ್ಲಿ ಅಪ್ಸರೆ...

ರೈಲು ಈಗ ಮತ್ತಷ್ಟು ವೇಗದಿಂದ ಸಾಗಲಾರಂಭಿಸಿತು. ಎದುರುಗಡೆಯ ಕುಳಿತ್ತಿದ್ದ ಫ್ರೆಂಚ್ ದಾಡಿಯ ಅನಾಮಿಕ ವ್ಯಕ್ತಿ ನಿಧಾನವಾಗಿ ಸೂಟ್ ಕೇಸನ್ನು ತೆಗೆದನು. ಒಳಗೆ ಎರಡು ಆಧುನಿಕ ಪಿಸ್ತೂಲ್ ಗಳಿದ್ದವು. ರೈಲಿನ ವೇಗಕ್ಕೆ ನಿದ್ದೆಯ ಮಂಪರಿನಲ್ಲಿದ್ದ ಚಂದ್ರಶೇಖರ್ ರವರಿಗಾಗಲಿ. ಸರೋಜಳಿಗಾಗಲಿ ಎದುರುಗಡೆ ಕುಳಿತ್ತಿದ್ದ ವ್ಯಕ್ತಿಯು ಮಾಡುತ್ತಿದ ಯಾವ ಚಟುವಟಿಕೆಗಳಾಗಲಿ ಗಮನಕ್ಕೆ ಬಾರದಾಯಿತು. ಇನ್ನು ತನಿಷ್ಕಳ ದೃಷ್ಟಿ ಕಿಟಕಿಯಾಚೆಯಿದ್ದುದರಿಂದ ಆ ವ್ಯಕ್ಕಿ ರಿವಾಲ್ವರ್ ನ್ನು ಸೂಟ್ ಕೇಸನಿಂದ ಹೊರ ತೆಗೆದರೂ ಅದು ಅವಳ ಗಮನಕ್ಕೂ ಬಾರದೇ ಹೋಯಿತು. ಕೈಯಲ್ಲಿ ರಿವಾಲ್ವರ್ ಹಿಡಿದು ಮೇಲೆದ್ದ ಆ ವ್ಯಕ್ತಿ ನೇರವಾಗಿ ತನಿಷ್ಕಳ ಹಣೆಗೆ ಗುರಿಯಿಟ್ಟನು. ಎಲ್ಲೋ ದೃಷ್ಟಿ ನೆಟ್ಟಿದ್ದ ತನಿಷ್ಕಳ ಹಣೆಗೆ ರಿವಾಲ್ವರ್ ನ ತುದಿ ಆಕೆಯ ಹಣೆಯನ್ನು ಸ್ಪರ್ಶಿಸಿದಾಗಲೇ ಅವಳಿಗೆ ಗೊತ್ತಾಗಿದ್ದು ಎದುರುಗಡೆಯ ವ್ಯಕ್ತಿ ತನ್ನ ಹಣೆಗೆ ರಿವಾಲ್ವರ್ ನಿಂದ ಗುರಿ ಇಟ್ಟಿದ್ದಾನೆಂದು. ಕೂಡಲೇ ಬೆದರಿ ಕೂಗಿದಳು. ನಿದ್ದೆಯ ಮಂಪರಿನಿಂದ ಎದ್ದ ಚಂದ್ರ ಶೇಖರ್ ಮತ್ತು ಸರೋಜ ಏನಾಯಿತೆಂದು ನೋಡಿದರು.

ಫ್ರೆಂಚ್ ದಾಡಿಯ ಅನಾಮಿಕ ವ್ಯಕ್ತಿಯು ತನಿಷ್ಕಳ ಕಿವಿಯ ಮೇಲೆ ರಿವಾಲ್ವರ್ ನ್ನು ಹಿಡಿದಿದ್ದನು. ಒಂದು ಕ್ಷಣ ಇಲ್ಲಿ ಏನು ನಡೆಯುತ್ತಿದೆ ಎಂದು ಅರಿವಿಗೆ ಬರದಂತಾಯಿತು.

"ಯಾರೋ ನೀನು.... ಯಾರೋ, ಬಿಡೋ ನನ್ನ ಮಗಳನ್ನು...."

ಎಂದು ಕೂಗುತ್ತ ಚಂದ್ರಶೇಖರ್ ಆ ಅನಾಮಿಕ ವ್ಯಕ್ತಿ ಮೇಲೆರಗಿದನು. ತನಿಷ್ಕಳ ತಲೆಗೆ ಇಟ್ಟಿದ್ದ ರಿವಾಲ್ವರ್ ನ್ನು ಕಿತ್ತು ಕೊಳ್ಳಲು ಪ್ರಯತ್ನಿಸಿದರು.ಕೂಡಲೇ ಆ ವ್ಯಕ್ತಿ ಕೋಪದಿಂದ ಒಂದೇ ಒಂದು ಏಟನ್ನು ಚಂದ್ರ ಶೇಖರ್ ಗೆ ಹೊಡೆದನು. ಹೊಡೆದ ರಭಸಕ್ಕೆ ಚಂದ್ರ ಶೇಖರ್ ಕೆಳಗೆ ಬಿದ್ದರು. ಬಾಯಿಂದ ರಕ್ತ ಸುರಿಯಲಾರಂಬಿಸಿತು. ಇದನ್ನೆಲ್ಲಾ ನೋಡಲಾರದೆ ಸರೋಜ ಮೂರ್ಛೆ ಹೋಗಿ ಸೀಟಿನ ಮೇಲೆ ಧಡ್ ಅಂತ ಬಿದ್ದಳು. ತನಿಷ್ಕಳ ಹಣೆಯಿಂದ ಬೆವರು ಇಳಿಯಲಾರಂಬಿಸಿತು. ಆತ ದೃಢಕಾಯ ಶರೀರ ಹೊಂದಿದ್ದರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ರೈಲು ಮಾತ್ರ  "ಧಡ್ ಧಡಕ್...ಧಡ್ ಧಡಕ್...." ಎಂದು ಸದ್ದು ಮಾಡುತ್ತಾ ಮುಂದೆ ವೇಗವಾಗಿ ಸಾಗುತ್ತಲೇ ಇತ್ತು....

        (ಮುಂದು ವರೆಯುವುದು)

No comments:

Post a Comment