Monday, 20 June 2016

ನಮ್ಮೂರು

ನಮ್ಮೂರು

ಬಸವನೊಮ್ಮೆ ಹೂಂಕರಿಸಿ ಗೂಳಿಟ್ಟಿಸಿ
ಆಶೕಿರ್ವದಿಸಿದ ಪುಣ್ಯಭೂಮಿಯೇ
ನಮ್ಮೂರು ಬಸವಾಪಟ್ಟಣ
ಪಟ್ಟಣವೆಂಬುದು ಅನ್ವರ್ಥನಾಮ ಅಷ್ಟೇ
ಗಗನಚುಂಬಿ ಕಟ್ಟಡಗಳೇನೂ ಇಲ್ಲ
ವಿಶಾಲ ಹೃದಯಗಳಿಗೇನೂ ಕೊರತೆ ಇಲ್ಲ

ಮೂರು ಕಡೆ ಸುತ್ತಲೂ ಬೆಟ್ಟಗಳು
ಬೆಟ್ಟಕ್ಕೆ ಮುತ್ತಿಕ್ಕಿ ಹರಿಯುವ ಭದ್ರಾನಾಲೆ
ವೈವಿದ್ಯದ ರಾಜಬೀದಿಯಲಿ ಕಾಲಿಟ್ಟರೆ
ಕೋಶ ಓದುವುದೇನೂ ಬೇಡ
ಅಲ್ಲಿಯ ತರಲೇ ಮಾತುಗಳು
ಸೋಮಾರಿ ಕಟ್ಟೆಯ ಚರ್ಚೆಗಳೇ ಸಾಕು...

ಹಾಲಸ್ವಾಮಿ ಬೆಟ್ಟದ ಹಿತನುಡಿಗಳು
ದುರ್ಗಮ್ಮ ಗುಡ್ಡದ ವೇದಾಂತಗಳು
ಜನರ ಐಲು ಬೈಲು ರಾಜಕೀಯ ನುಡಿಗಳು
ರಾಜಧಾನಿಯಲ್ಲೂ ಸಿಗಲಾರದ ಸಿದ್ಧಾಂತಗಳು
ಕುಡುಕರು ಅಭಿನಯದ ಸಂಜೆ ಬೀದಿಗಳು
ಬಿಳಿ ಲುಂಗಿ ಪರದೆಯಲ್ಲಿನ ಟೆಂಟ್ ಸಿನಿಮಾಗಳು

ದಿನದ ದುಡಿಮೆ ಇಲ್ಲದಿದ್ದರೂ ಚಿಂತೆಯಿಲ್ಲ
ಪಕ್ಕದ ಮನೆಯ ಕಡ ಇದ್ದೇ ಇದೇ
ಕೂಡಿ ಬದುಕುವ ಕಲ್ಚರ್ ಇದೆ
ಇಲ್ಲಿನಂತೆ ಮೋಸದ ಜಾಲವಿಲ್ಲ
ಕಳ್ಳ ಬಂದರೂ ಚಿಂತೆಯಿಲ್ಲ
ಅಲ್ಲೇ ಡ್ರಾ ಅಲ್ಲೇ ಬಹುಮಾನ...

ವೈಫೈ ಯುಗದಲ್ಲೂ ಹೈಫೈ ಆಗಲಿಲ್ಲ
ಸಂಸ್ಕೃತಿ ಸಂಸ್ಕಾರಕ್ಕೆ ಆಧುನಿಕತೆ ಸಿಗಲಿಲ್ಲ
ಇಂಗ್ಲಿಷಿನ ಭಾಷೆ ನಾಲಿಗೆಗೆ ಬರಲಿಲ್ಲ
ಅದೇ ಜನ, ಅದೇ ಮನ
ಪ್ರೀತಿ ವಿಶ್ವಾಸದ ಆರಾಧಕರು
ದೇವರ ಪ್ರತಿನಿಧಿಗಳು....
                      
                     - ಪ್ರಕಾಶ್.ಎನ್.ಜಿಂಗಾಡೆ

Wednesday, 15 June 2016

ಕನಸುಗಳು

ಕನಸುಗಳು

ನಮಗೆ ಕನಸು ಬಿತ್ತು ಎನ್ನಿ ಆ ಕನಸಿಗೆ ಅರ್ಥ ಕೊಡುವವರು ಸಾಕಷ್ಟು ಜನರಿದ್ದಾರೆ. ಅದರಲ್ಲೂ ಮುಂಜಾನೆ ಬಿದ್ದ ಕನಸುಗಳು ನಿಜವೆಂದೇ ಭಾವಿಸುತ್ತೇವೆ. ಭಯಂಕರ ಕನಸುಗಳೇನಾದರೂ ಬಿದ್ದರೆ ಅದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳುತ್ತೇವೆ... ಕೆಲವರು ಕನಸನ್ನು ನಿರ್ಲಕ್ಷಿಸುತ್ತಾರೆ. ಮತ್ತೆ ಕೆಲವರು ಕನಸನ್ನು ನಿಜ ಜೀವನದಂತೆ ಗಣನೆಗೆ ತೆಗೆದು ಕೊಳ್ಳುತ್ತಾರೆ.
ಮೊನ್ನೆ ನನ್ನ ಸ್ನೇಹಿತನ ಕನಸಿನಲ್ಲಿ ಅವನ ಅಣ್ಣನ ಒಬ್ಬಳು ಬಂದಿದ್ದಳಂತೆ. "ಚಿಕ್ಕಪ್ಪ ಪ್ಲೀಸ್ ನನ್ನನ್ನು ಕಾಪಾಡು.... ನನ್ನನ್ನು ಕಾಪಾಡು ನಾನು ತಂಬಾ ಕಷ್ಟದಲ್ಲಿದ್ದೇನೆ"
ಅಂತ ಗೋಗರೆಯುತ್ತಿದ್ದಳಂತೆ. ಆ ಕನಸು ಅಷ್ಟೇ. ಅದನ್ನು ಕನಸು ಅಂತಾನೆ ಪರಿಗಣಿಸಿದ ನನ್ನ ಸ್ನೇಹಿತ ಅಷ್ಟಕ್ಕೆ ಸುಮ್ಮನಾಗಿ ಬಿಟ್ಟನು. ಒಂದೆರಡು ದಿನಗಳ ನಂತರ ಕನಸಿನಲ್ಲಿ ಕಂಡ ಆ ಹುಡುಗಿಯನ್ನು ಯಾರೋ ಸಾಯಿಸಿ ಬಿಟ್ಟಿದ್ದರು. ಆಕೆ ಕನಸಿನಲ್ಲಿ ಹೇಳಿಕೊಂಡಂತೆ ತುಂಬಾ ತೊಂದರೆಯಲ್ಲಿ ಸಿಲುಕಿದ್ದಳು. ನನ್ನ ಸ್ನೇಹಿತ ಈ ಘಟನೆ ಹೇಳಿದ ಮೇಲೆ ಕನಸನ್ನು ಕನಸಿನಂತೆಯೇ ಕಾಣುತ್ತಿದ್ದ ನನಗೆ ಕನಸಿನ ಬಗ್ಗೆ ಸ್ವಲ್ಪ ವಿಶೇಷ ಆಸಕ್ತಿ ಮೂಡಲಾರಂಭಿಸಿತು....
ಜರ್ಮನಿಯ ವಿಜ್ಞಾನಿಯಾದ ಕೊಕುಲೆಗೆ ಒಂದು ಸಮಸ್ಯೆಗೆ ಉತ್ತರ ಸಿಗಲಾರದೇ ಪರದಾಡುತ್ತಿದ್ದನು. ಬೆಂಜಿನ್ ಪರಮಾಣುವಿನಲ್ಲಿ ಏನಿರುತ್ತದ ಎಂದು ಕಂಡು ಹಿಡಿಯುವುದೇ ಅವನ ಸಮಸ್ಯೆಯಾಗಿತ್ತು. ಹೇಗೆ ಯೋಚಿಸಿ ಅಧ್ಯಯನ ನಡೆಸಿದರೂ ತನ್ನ ಸಮಸ್ಯೆಗೆ ಉತ್ತರ ಕಂಡು ಕೊಳ್ಳಲಾಗಲಿಲ್ಲ. ಆ ದಿನ ರಾತ್ರಿ ಕೊಕುಲೆಯ ಕನಸಿನಲ್ಲಿ ಒಂದು ಹಾವು ತನ್ನ ಬಾಲವನ್ನೇ ಕಚ್ಚಿಕೊಂಡಂತಹ ಕನಸು ಕಂಡನಂತೆ. ಈ ಕನಸನ್ನು ಅರ್ಥೈಸಿಕೊಂಡಾಗ ಕೊಕುಲೆಗೆ ತನ್ನ ಸಮಸ್ಯೆಯ ಉತ್ತರ ದೊರೆಯಿತಂತೆ. ಮುಚ್ಚಿದ ಸರಪಳಿಯ ಕಾರ್ಬನ್ನಿನ ರಚನೆಯೇ ಬೆಂಜಮಿನ್ ಪರಮಾಣುವಿನ ಸಂರಚನೆಯಾಗಿತ್ತು. ಅಧ್ಯಯನದಿಂದ, ಸಂಶೋದನೆಯಿಂದ ತಿಳಿಯದ ವಿಷಯ ಕೊಕುಲೆಗೆ ಕನಸಿನಿಂದ ಉತ್ತರ ಸಿಕ್ಕಿತ್ತು. ಈ ತರಹ ಕನಸಿನಲ್ಲಿ ಉತ್ತರ ಕಂಡು ಕೊಂಡವರು ಇನ್ನೂ ಹಲವರಿದಿದ್ದಾರೆ. 1869 ರಲ್ಲಿ ಡಿಮೆಟ್ರಿ ಮೆಂಡಲೀವ್ ಎಂಬ ವಿಜ್ಞಾನಿ ಮೂಲವಸ್ತುವಿನ ಆಧುನಿಕ ಆವರ್ತಕ ಕೋಷ್ಠಕವನ್ನು ರಚಿಸಲು ಸಾಕಷ್ಟು ಪರದಾಡಿದ್ದನಂತೆ. ಆವರ್ತಕ ಕೊಷ್ಠಕದ ಯೋಚನೆಯಲ್ಲೇ ತೊಡಗಿದ ಮೆಂಡಲೀವ್ಗೆ ಉತ್ತರ ಸಿಗಲಿಲ್ಲ. ಆ ದಿನ ರಾತ್ರಿ ಕನಸಿನಲ್ಲಿ ಕಂಡ ಆವರ್ತಕ ಕೋಷ್ಠಕವನ್ನೇ ಕಾಗದದಲ್ಲಿ ಬರೆದು ನೋಡಿದನಂತೆ. ಅದನ್ನೇ ಪ್ರಸ್ತುತ ಪಡಿಸಿ ಆಧುನಿಕ ಆವರ್ತಕ ಕೋಷ್ಠಕ ರಚಿಸಿದ್ದನಂತೆ. ಇನ್ನು ಪ್ರಸಿದ್ಧ ವಿಜ್ಞಾನಿಗಳಾದ ಥಾಮಸ್ ಆಲ್ವ ಎಡಿಸನ್ನು ಬಲ್ಪ್ ಕಂಡುಹಿಡಿಯುವಾಗಲೂ, ಐನ್ ಸ್ಟಿನ್ ರವರು ಸಾಫೇಕ್ಷ ಸಿದ್ಧಂತ ಕಂಡು ಹಿಡಿಯುವಾಗಲೂ ಅವರಿಗೆ ಕನಸೇ ಸಹಕಾರಿಯಾಗಿತ್ತು. ಹಾಗೆಂದ ಮಾತ್ರಕ್ಕೆ ಅವರು ಪ್ರಯತ್ನ ಪಡಲಿಲ್ಲ ಎಂಬ ಅರ್ಥವಲ್ಲ. ನಮ್ಮ ನಿದ್ರಾ ಚಕ್ರವು ನಮ್ಮ ಅಂತರ್ಗತದ ಭಾಗವೇ ಆಗಿರುವುದರಿಂದ ಅವರು ಪಡುತ್ತಿರುವ ಪ್ರಯತ್ನಗಳು ಕನಸಿನಲ್ಲಿ ಆವರಿಸಿಕೊಂಡು ಉತ್ತರ ಪಡೆದುಕೊಂಡರು. ಅವರು ಕಂಡ ಆ ಕನಸುಗಳು ನಮ್ಮಂತ ಸಾಮಾನ್ಯರು ಕಾಣುವುದು ಸಾದ್ಯವಿಲ್ಲ....
ನಮ್ಮ ಜೀವನದ ಎಲ್ಲಾ ಅಂತರ್ಗತ ವಿಷಯಗಳೇ ಕನಸುಗಳು. ಎಷ್ಟೋ ವಿಷಯಗಳಿಗೆ ಕನಸುಗಳೇ ಉತ್ರವಾಗಿರುತ್ತದೆ. ಮೊನ್ನೆ ನನ್ನ ವಿಧ್ಯಾರ್ಥಿಯೊಬ್ಬ ನೋಟ್ಸ್ ಬರೆಯಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಒಂದೆರಡು ಏಟು ಹಾಕಿ ಶಿಕ್ಷೆ ಕೊಟ್ಟಿದ್ದೆ. ಆತನಿಗೆ ಎಷ್ಟು ಕೋಪ ಬಂದಿತ್ತೆಂದರೆ ನನ್ನನ್ನು ಸಿಟ್ಟಿನಿಂದ ನೋಡಿದ. ಮಾರನೆಯ ದಿನ ಆತ ಕನಸಿನಲ್ಲಿ ಕಂಡ ವಿಷಯವನ್ನು ತನ್ನ ಸ್ನೇಹಿತನ ಬಳಿ ಹೇಳಿಕೊಳ್ಳುತ್ತಿದ್ದ. "ಲೋ ಹರ್ಷ... ನಿನ್ನೆ ಕನಸಿನಲ್ಲಿ ಪ್ರಕಾಶ್ ಸರ್ ರನ್ನು ನಾನು ಸಿಕ್ಕಾ ಪಟ್ಟೆ ಹೊಡೆಯುತ್ತಿದ್ದೆ ಕಣೊ"
ಆ ವಿಷಯ ನನ್ನ ಕಿವಿಗೂ ಬಿತ್ತು ನಾನು ನಕ್ಕು ಸುಮ್ಮನಾದೆ.
ವಾಸ್ತವವಾಗಿ ಸಾಧ್ಯವಾಗದ ಎಷ್ಟೋ ವಿಷಯಗಳನ್ನು ನಾವು ನಮ್ಮ ಕನಸಿನಿಂದ ಈಡೇರಿಸಿಕೊಳ್ಳುತ್ತೇವೆ. ನನ್ನ ಮೇಲಿನ ಕೋಪವನ್ನು ಆ ವಿಧ್ಯಾರ್ಥಿ ಕನಸಿನ ಮೂಲಕ ಈಡೇರಿಸಿಕೊಂಡು ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳುತ್ತಾನೆ. ಮಾನಸಿಕ ಸಮತೋಲನವನ್ನು ಕಾಯ್ದು ಕೊಳ್ಳಲು ಕನಸುಗಳು ಎಷ್ಟೋ ಸಹಾಯ ಮಾಡುತ್ತವೆ. ಕನಸು ಕಾಣದ ವ್ಯಕ್ತಿ ಮಾನಸಿಕ ಅಸಮತೋಲನದಿಂದ ಇದ್ದಾನೆ ಎಂದಾರ್ಥವಲ್ಲ. ಪ್ರತಿಯೊಬ್ಬರೂ ಕನಸನ್ನು ಕಂಡೇ ಕಾಣುತ್ತಾರೆ. ಕನಸು ಕಾಣಲಿಲ್ಲವೆಂದರೆ ಮನುಷ್ಯ ಹುಚ್ಚನಾಗುತ್ತಾನೆ. ಆದರೆ ನಾವು ಕಂಡ ಎಷ್ಟೋ ಕನಸುಗಳು ನಮ್ಮ ನೆನಪಿಗೆ ಬರುವುದೇ ಇಲ್ಲ. ಶೇಕಡ ತೊಂಬತ್ತರಷ್ಟು ಕನಸುಗಳು ನೆನಪಿಗೆ ಬಾರದೇ ಹಾಗೆಯೇ ಜಾರಿ ಹೋಗಿ ಬಿಡುತ್ತವೆ. ಒಬ್ಬ ಮನುಷ್ಯ ತಮ್ಮ ಜೀವಿತವಧಿಯಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಅವಧಿಯಷ್ಟು ಕನಸು ಕಾಣುತ್ತಾನಂತೆ. ಕನಸುಗಳು ನಮ್ಮ ಮನಸ್ಸನ್ನು ಸ್ವಾಸ್ಥ್ಯವಾಗಿಡುತ್ತವೆ. ನಾವು ಕಾಣುವ ಕನಸುಗಳು ಭಯಂಕರವೋ ಅಥವಾ ವಿಚಿತ್ರವೋ ಆಗಿದ್ದರೆ. ಅದಕ್ಕೆ ಕೆಲವು ಘಟನೆಗಳು ಕಾರಣವಾಗಿರಬಹುದು. ಕನಸುಗಳು ನಮ್ಮ ಜೀವನದಲ್ಲಿ ನಡೆದ ಘಟನೆಗಳ ಪ್ರತಿಬಿಂಬಗಳು. ಮೆದುಳಿನ ಮೂಲೆಯಲ್ಲಿ ಸ್ತಪ್ತವಾಗಿರುವ ಇಂತಹ ಘಟನಾವಳಿಗಳು ಆಗಾಗ ಕನಸಿನ ರೂಪದಲ್ಲಿ ಮರುಕಳಿಸಬಹುದು.....
ಇನ್ನು ಕೆಲವರು ಕನಸಿನ ಕೆಲವು ಘಟನೆಗಳು ವಾಸ್ತವದಂತೆ ಫೀಲ್ ಆಗುತ್ತವೆ. ಮೊನ್ನೆ ನನ್ನ ಸ್ನೇಹಿತ ತನ್ನ ಅಣ್ಣನ ಮನೆಗೆ ಹೋದಾಗ ಅವರ ಮಗಳು ಮತ್ತೆ ಕನಸಿನಲ್ಲಿ ಬಂದಿದ್ದಳಂತೆ. ಸತ್ತು ಹೋದ ಆಕೆ ಮತ್ತೆ ಬಂದು ತಾನು ಮಲಗಿದ ಕಡೆ ಬಂದು ತಲೆ ಸವರುತ್ತಿದ್ದಳಂತೆ. ತಲೆಯನ್ನು ಸವರಿದಂತಹ ಸ್ಪರ್ಶ ಜ್ಞಾನದ ಅನುಭವಗಿದ್ದರಿಂದ ನನ್ನ ಸ್ನೇಹಿತ ಬೆಚ್ಚಿ ಕೂಗಿಕೊಂಡು ಎದ್ದನಂತೆ, ಸುತ್ತಲೂ ಯಾರೂ ಕಾಣಿಸಲಿಲ್ಲ. ಪ್ರೀತಿಗೆ ಪಾತ್ರರಾಗಿರುವವರು ಕನಸಿನಲ್ಲಿ ಬರುವುದು ಮಾತ್ರವಲ್ಲ ಆತ್ಮವೂ ಸುತ್ತಮುತ್ತಲು ಸಂಚರಿಸುತ್ತಿತ್ತಂತೆ. ಆತ್ಮ ಮತ್ತು ಕನಸಿಗೆ ಏನಾದರು ಸಂಬಂಧ ಇರಬಹುದೇ ಎಂಬ ಪ್ರಶ್ನೆ ಆಗಾಗ ನನ್ನನ್ನು ಕಾಡುತ್ತಿರುತ್ತದೆ. ಕನಸು ನಿಜವೆಂದು ನಂಬುವ ನಾವು ಕನಸಿನಂತೆಯೇ ಆತ್ಮಗಳು ಸಹ ನಮ್ಮ ಸುತ್ತಮುತ್ತ ಸಂಚರಿಸುವುದನ್ನು ಅನುಭವಿಸುತ್ತೇವೆ...
ನನಗೆ ಆಗ ಇಪ್ಪತ್ತೊಂದು ವರ್ಷ ನನ್ನ ವಿಧ್ಯಾಭ್ಯಾಸವೆಲ್ಲಾ ಮುಗಿದಿತ್ತು. ಸರ್ಕಾರಿ ಕೆಲಸ ಸಿಗುವ ವರೆಗೂ ಊರಲ್ಲೇ ಇದ್ದು ಏನಾದರೂ ಕೆಲಸ ಮಾಡಬೇಕು ಎಂದು ಮನೆಯಲ್ಲಿ ತಾಕೀತು. ನಾನು ಮಾಡಿದ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಹೋಗಿ ಯಾವುದಾದರೂ ಖಾಸಗಿ ಕಂಪನಿಲ್ಲಿ ಕೆಲಸಕ್ಕೆ ಸೇರಿ ಸಂಪಾದನೆ ಮಾಡಬಹುದಿತ್ತು. ಆದರೆ ಮನೆಯಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಇರುವ ಟೈಲರ್ ಅಂಗಡಿಯಲ್ಲಿ ನಾನು ಎರಡು ವರ್ಷದ ವರೆಗೆ ಟೈಲರಿಂಗ್ ವೃತ್ತಿ ಮಾಡಿದೆ. ಒಂದೇ ಅಂಗಡಿಯಲ್ಲಿ ನಾನು ಮತ್ತು ಇಬ್ಬರು ಅಣ್ಣಂದಿರ ಅವಲಂಬನೆ.. ಸಂಸಾರ ದೊಡ್ಡದಾದಂತೆ ಒಂದೇ ಅಂಗಡಿಯಲ್ಲಿ ಎಲ್ಲರೂ ಅವಲಂಬಿತವಾಗಿರುವುದು ಸಾಧ್ಯವಿರಲಿಲ್ಲ. ನಾನು ಅಂಗಡಿಯಿಂದ ಹೊರಬಂದು ಬೇರೆ ವೃತ್ತಿಯಲ್ಲಿ ತೊಡಗುವುದು ಅನಿವಾರ್ಯವಾಗಿತ್ತು. ನನ್ನ ಜೊತೆ ಓದಿದ ಒಂದಿಬ್ಬರು ಲೇವಾದೇವಿ ವ್ಯೆವಹಾರ ಮಾಡೋಣ ಎಂಬ ಸಲಹೆ ನೀಡಿದರು. ಇದರ ಪ್ರತಿಫಲವಾಗಿ ಫೈನಾನ್ಸ್ ಕಂಪನಿಯೊಂದು ಪಾರ್ಟ್ನರ್ ಶಿಪ್ ನಲ್ಲಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಇಂತಿಷ್ಟು ಹಣ ಹೂಡುವುದಾಗಿ ಹೇಳಿದ ಗೆಳೆಯರು ಅಲ್ಪ ಸ್ವಲ್ಪ ಹಣಹೂಡಿ ಸುಮ್ಮನಾಗಿ ಬಿಟ್ಟರು.
ಇರುವ ಅಲ್ಪ ಸ್ವಲ್ಪ ಹಣದಿದಂಲೇ ಫೈನಾನ್ಸ ಆರಂಭಿಸಿದೆವು. ಅದರೆ ನನ್ನ ಈ ಗೆಳೆಯರು ಬಂಡವಾಳ ಹಾಕಿ ವ್ಯವಹಾರ ಬೆಳೆಸುವ ಬದಲು. ತಮ್ಮ ತಮ್ಮ ಸಂಬಂದಿಕರನ್ನು ಕರೆದುಕೊಂಡು ಬಂದು ತಾವು ಮಾಡಿದ ವೈಯುಕ್ತಿಕ ಸಾಲಗಳಿಗೆ ಕಂಪನಿಯಿಂದ ಸಾಲ ಪಡೆದ ಹಾಗೆ ಪತ್ರಗಳನ್ನು ತಯಾರಿಸಿ ಅವರಿಗೆ ಹಣ ನೀಡುತ್ತಿದ್ದರು. ಫೈನಾನ್ಸ್ ವ್ಯವಹಾರವನ್ನು ನೋಡಿಕೊಳ್ಳುವ ಜವಬ್ದಾರಿ ಸಂಪೂರ್ಣ ನನಗೆ ವಹಿಸಲಾಗಿತ್ತು. ಫೈನಾನ್ಸ್ ನಲ್ಲಿ ಕೂರುವುದು ಲೆಕ್ಕಾಚಾರವನ್ನೆಲ್ಲಾ ಬರೆಯುವುದು ನಾನೇ ನಿರಿವಹಿಸುತ್ತಿದುದರಿಂದ ಸಾರ್ವಜನಿಕರೆಲ್ಲಾ ಫೈನಾನ್ಸ್ ನನ್ನದೇ ಎಂದು ನಂಬಿದ್ದರು. ಇಂತವರ ಸಹಭಾಗಿತ್ವದಿಂದ ಫೈನಾನ್ಸ್ ಮುಳುಗುವ ಹಂತಕ್ಕೆ ಬಂದಿತ್ತು. ಜನರ ಷೇರ್ ಹಣ ಬೇರೆ ನಮ್ಮ ಮೇಲಿತ್ತು. ನಾನು ಒಂದು ರೀತಿಯಲ್ಲಿ ಯಾರಿಗೂ ಹೇಳಲಾರದಂತಹ ಸಂಕಷ್ಟಕ್ಕೆ ಸಿಲುಕಿದ್ದೆ. ಫೈನಾನ್ಸ್ ನ ಈ ಸ್ಥಿತಿ ಹೇಳಿಕೊಂಡಿದ್ದರೆ ಜನ ತಾವು ಹಾಕಿರುವ ಷೇರು ಹಣಕ್ಕೆ ತಕ್ಷಣವೇ ನನ್ನನ್ನು ಪೀಡಿಸುತ್ತಿದ್ದರು. ಪಾರ್ಟ್ನರ್ ಗಳ ಈ ಅವ್ಯೆವಹಾರಕ್ಕೆ ಕಡಿವಾಣ ಹಾಕಿ. ಜನರ ಷೇರು ಹಣವನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತಹ ಒಂದು ದೊಡ್ಡ ಜವಬ್ದಾರಿ ನನ್ನ ಮೇಲಿತ್ತು. ಆದರೆ ಇದು ಕಷ್ಟದ ಕೆಲಸವಾಗಿತ್ತು. ಸಾರ್ವಜನಿಕರಿಂದ ಪಡೆದ ಷೇರು ಹಣ ಸಾರ್ವಜನಿಕರಿಗೆ ಸಾಲವಾಗಿ ನೀಡಲಾಗಿತ್ತು. ಫೈನಾನ್ಸ್ ನಲ್ಲಿ ಪಾರ್ಟ್ನರ್ ಗಳ ಈ ರೀತಿ ಅವ್ಯವಹಾರ ಯಾರಲ್ಲಿಯೂ ಹೇಳಿಕೊಳ್ಳುವಂತಿರಲಿಲ್ಲ. ನಾನು ಒಂದು ರೀತಿ ಭೇಧಿಸಲಾಗದ ಮೋಸದ ಚಕ್ರವ್ಯೂಹದಲ್ಲಿ ಸಿಲುಕಿದ್ದೆ.. ಒಂದು ಅದನ್ನು ಭೇದಿಸಿ ಹೊರಬರಬೇಕಿತ್ತು... ಇಲ್ಲವೇ ಅದೇ ಮೋಸದ ಚಕ್ರವ್ಯೂಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಿತ್ತು. ನನಗೆ ಪ್ರಾಣ ಕಳೆದುಕೊಳ್ಳಲು ಮನಸ್ಸಾಗಲಿಲ್ಲ. ಏಕೆಂದರೆ ನಾನು ಓದಿದ ವಿದ್ಯಾಭ್ಯಾಸವೇ ನನ್ನಲ್ಲಿ ಅತಿಯಾದ ಆತ್ಮ ವಿಶ್ವಾಸವನ್ನು ತುಂಬಿತ್ತು. ಗೆಳೆಯರನ್ನು ನಂಬಿದ ತಪ್ಪಿಗೆ ಒಂದೆರಡು ವಾರ ಭದ್ರಾನಾಲೆಯ ಕಟ್ಟೆಯ ಮೇಲೆ ಕುಳಿತು ಒಬ್ಬನೇ ಅತ್ತು ಅತ್ತು ಮನಸನ್ನು ಹಗುರ ಮಾಡಿಕೊಳ್ಳುತ್ತಿದ್ದೆ. ಮನಸು ಸಂಪೂರ್ಣ ಹಗುರವಾದ ಮೇಲೆ ನನ್ನ ಫೈನಾನ್ಸ್ ನಲ್ಲಿ ಸಹಭಾಗಿಯಾದ ಗೆಳೆಯರನ್ನೂ ಯಾವ ಮೀನ ಮೇಷವೂ ಏಣಿಸದೇ ಕಿತ್ತೆಸೆದೆ. ಅಲ್ಲಿಂದ ಮತ್ತೊಂದು ಕಷ್ಟದ ಅಧ್ಯಾಯ ಪ್ರಾರಂಭವಾಯಿತು ಒಬ್ಬನೇ ಇರುವುದರಿಂದ ಹಣದ ಕೊರತೆಯುಂಟಾಯಿತು. ಫೈನಾನ್ಸ್ ಗೆ ಮತ್ತಿಬ್ಬರು ಒಳ್ಳೆಯ ಗೆಳೆಯರನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿತ್ತು. ನನ್ನ ಸಂಭಂದಿಕರೇ ಒಂದಿಬ್ಬರು ಸಿಕ್ಕರು. ಫೈನಾನ್ಸ್ ಗೆ ಬಂಡವಾಳವನ್ನೂ ಹಾಕಿದರು. ಅಲ್ಲಿ ಅವರಲ್ಲಿ ಬೇಗನೇ ಹಣ ಮಾಡಬೇಕೆಂಬ ದುರಾಸೆಯೇ ಹೆಚ್ಚಾಗಿತ್ತು. ಅಲ್ಲಿ ಮತ್ತೊಂದು ರೀತಿಯ ಸಮಸ್ಯೆಗೆ ಸಿಲುಕಿದೆ. ನಮ್ಮವರೇ ನನಗೆ ಮುಳ್ಳಾದರು. ಅಲ್ಲಿಯೂ ವ್ಯವಹಾರ ಬೆಳೆಯಲಿಲ್ಲ. ಅವರಿಗೂ ಬಂಡವಾಳ ವಾಪಸ್ ಕೊಟ್ಟೆ. ನಾನು ಫೈನಾನ್ಸ್ ಮುಚ್ಚುವಂತೆಯೂ ಇರಲಿಲ್ಲ ನಡೆಸಲೂ ಸಾಧ್ಯವಿರಲಿಲ್ಲ. ನಾನು ಚಕ್ರವ್ಯೂಹದಲ್ಲಿ ಸಿಲುಕಿದ್ದೆ. ಆ ಚಕ್ರವ್ಯೂಹದಲ್ಲಿ ಸೈನಿಕರ ಬದಲಾಗಿ ಕತ್ತಿ ಹಿಡಿದು ನಿಂತಿರುವ ನನ್ನ ಗ್ರಾಹಕರೇ ಕಾಣುತ್ತಿದ್ದರು.. ಬೇರೆ ದಾರಿನೇ ಇಲ್ಲ ಬೇಧಿಸಿ ಹೊರಬರಬೇಕು...ಈ ವ್ಯೂಹವನ್ನು ಬೇಧಿಸುವ ದಾರಿಯಲ್ಲಿ ಅನೇಕ ಜಗಳಗಳು ನಡೆದವು... ಚಿಕ್ಕ ಬಾಲಕ ಅಭಿಮನ್ಯೂವಿನಂತೆ ಒಬ್ಬನದೇ ಹೋರಾಟ. ಯಾರೂ ಇಲ್ಲ ಶಕ್ತಿ ಇದ್ದಷ್ಟು ಸೆಣಸಿದೆ. ಗೆದ್ದೆ. ಆದರೆ ಶರೀರಕ್ಕಾದ ಗಾಯಕ್ಕಿಂತ ಮಾನಸಿಕ ಆಘಾತ ಅತಿಯಾಗಿತ್ತು. ನಾನು ಈ ಜಾಲಕ್ಕೆ ಸಿಲುಕ್ಕಿದ್ದರಿಂದ ಮನೆಯಲ್ಲಿ ನನ್ನನ್ನು ನೋಡುತ್ತಿದ್ದ ವಿಧಾನವೇ ಬೇರೆ ರೀತಿಯಲ್ಲಿತ್ತು. ನನಗೆ ಬಂದ ಒಂದೆರಡು ಮದುವೆಯ ಸಂಬಂಧಗಳು ಮುರಿದು ಬಿದ್ದವು. ಮತ್ತೆ ಕೆಲವನ್ನು ನಾನೇ ಮುರಿದು ಹಾಕಿದೆ. ನನಗೆ ಮದುವೆಗಿಂತ ಹೆಚ್ಚಾಗಿ ಸುತ್ತಲೂ ನನಗರಿವಿಲ್ಲದಂತೆ ಕಟ್ಟಿಕೊಂಡಿದ್ದ ಮೋಸದ ವ್ಯೂಹದಿಂದ ಹೊರಬರಬೇಕಿತ್ತು. ನಾನು ಯಾರಿಗೂ ನನ್ನ ಮನಃಸ್ಥಿತಿಯನ್ನು ಹೇಳಿಕೊಳ್ಳದೇ ನನಗೆ ಬಂದ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಾ ಹೋದೆ. ಹೋರಾಟ ಮಾಡಿ ಗೆದ್ದೆ. ಸಾರ್ವಜನಿಕರ ಷೇರು ಹಣವೆಲ್ಲಾ ಹಿಂದಿರುಗಿಸಿದೆ. ಇನ್ನು ಅಲ್ಪ ಸ್ವಲ್ಪ ಉಳಿದವರು ಗಲಾಟೆ ಮಾಡಿದರು. ಮನೆಯ ಹೊರಗೆ ಬಂದರೆ ಜನಗಳಿಂದ ಜಗಳ. ಮನೆಗೆ ಹೋದರೆ ಒಳಗಿನವರ ಜಗಳ... ನನ್ನ ಮೆದುಳು ತಡೆದುಕೊಳ್ಳಲು ಸಾಧ್ಯವಿಲ್ಲದಂತಹ ನೋವುಗಳು ಸಹಿಸುತ್ತಾ ಬಂದವು. ಇವು ಎಲ್ಲೋ ನನ್ನ ಮೆದುಳಿನ ಸುಪ್ತಾವಸ್ತೆಯಲ್ಲಿ ಸೇರಿಕೊಂಡು ಕನಸಿನ ರೂಪದಲ್ಲಿ ಕಾಡಿದ್ದೂ ಉಂಟು. ಹತ್ತಿರದ ಸಂಬಂಧಿಗಳಿಂದ ಕುಹಕ ಮಾತುಗಳನ್ನು ಕೇಳಿದೆ ಈ ಎಲ್ಲಾ ಆಘಾತಗಳು ಈಗಲೂ ನನ್ನ ಮನಸಿನಲ್ಲಿ ಸುಪ್ತ ಪ್ರಜ್ಞಾವಸ್ತೆಯಲ್ಲಿ ಸೇರಿಕೊಂಡವು. ಈ ತರಹದ ಯಾವುದಾದರೊಂದು ಆಹಿತಕರವಾದ ಘಟನೆಗಳು ಎಲ್ಲರ ಜೀವನದಲ್ಲಿಯೂ ನಡೆದಿರುತ್ತದೆ...
ಈ ಮೇಲಿನ ನನ್ನ ಉದಾಹರಣೆಯನ್ನು ನೋಡಿದಾಗ ಪ್ರೌಢಾವಸ್ತೆಯಲ್ಲಿದ್ದ ನನ್ನ ಮೆದುಳು ಈ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿತ್ತು. ಇನ್ನು ಕೆಲವರ ಜೀವನದಲ್ಲಿ ಬಾಲ್ಯದ ಹಂತದಲ್ಲಿಯೇ ಅಹಿತಕರವಾದ ನೋವಿನ ಘಟನೆಗಳು ನಡೆದು ಬಿಡುತ್ತವೆ. ಅಚಾತುರ್ಯವಾದ ರಕ್ತಪಾತ, ತಂದೆ ತಾಯಿಯರ ಅಗಲುವಿಕೆ, ಅವಮಾನದಿಂದ ಕೂಡಿದ ಬಡತನದ ಜೀವನ, ಹೀಗೆ ಇತ್ಯಾದಿ ನೋವುಗಳನ್ನು ಬಾಲ್ಯದಿಂದಲೇ ಸಹಿಸಿಕೊಂಡು ಬಂದವರು ಭಾರತದಲ್ಲಿ ಸಾಕಷ್ಟು ಜನರಿದ್ದಾರೆ. ಚಿಕ್ಕ ಮಕ್ಕಳಲ್ಲಿಯ ಮೆದುಳು ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಅಲ್ಪ ಪ್ರಮಾಣದ ನೋವನ್ನು ಸಹಿಸುವ ಶಕ್ತಿಯನ್ನು ಮಾತ್ರ ಹೊಂದಿರುತ್ತದೆ. ಮೆದುಳು ತಡೆದುಕೊಳ್ಳುವ ಶಕ್ತಿಗಿಂತ ನೋವಿನ ಪ್ರಮಾಣ ಅತಿಯಾದಾಗ ಮನಸು ಅನಾರೋಗ್ಯವಾಗಿ ಬೆಳೆಯುತ್ತಾ ಹೋಗುತ್ತದೆ. ಬಾಲ್ಯದ ಈ ನೋವುಗಳು ಸುಪ್ತಾವಸ್ತೆಯಲ್ಲಿ ಹಾಗೆಯೇ ಉಳಿದು ಬಿಡುತ್ತವೆ. ಮುಂದೆ ದೊಡ್ಡವರಾದಾಗಲೂ ಸುಪ್ತಾವಸ್ತೆಯಲ್ಲಿ ಉಳಿದಿರುವ ಈ ಘಟನೆಗಳು ಕೆಟ್ಟ ಕನಸುಗಳ ಮೂಲಕ ಹೊರ ಬರುತ್ತವೆ. ಯಾರಾದರು ಸತ್ತಾಗ ಆತ್ಮಗಳು ರಾತ್ರಿಯ ವೇಳೆ ತಮ್ಮ ಹತ್ತಿರವೇ ಬಂದಂತೆ. ದೆವ್ವಗಳನ್ನು ನೋಡಿದ ಅನುಭವ ಹೀಗೆ ಇತ್ಯಾದಿ ಭಯಾನಕ ಘಟನೆಗಳಂತೆ ಕಾಣುತ್ತವೆ...
ನನಗೂ ಆಗಾಗ ನನ್ನ ಜೀವನದ ಈ ಕೆಟ್ಟ ಅನುಭವವು ಆಗಾಗ ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವಷ್ಟು ಭಯಾನಕವಾಗಿರುವುದಿಲ್ಲ. ಏಕೆಂದರೆ ಈ ಘಟನೆ ನಡೆದಾಗ ಮೆದುಳು ಸಂಪೂರ್ಣವಾಗಿ ಬೆಳೆದಿತ್ತು. ನೋವು ಸಹಿಸಿಕೊಳ್ಳುವ ಶಕ್ತಿ ಪಡೆದುಕೊಂಡಿತ್ತು. ಅದೇ ಘಟನೆ ಜೀವನದ ಪಾಠವಾಗಿ ನನ್ನನ್ನು ಎತ್ತರಕ್ಕೆ ಬೆಳೆಸಿದೆ. ಆದರೆ ಚಿಕ್ಕ ಮಕ್ಕಳಲ್ಲಿ ಅಂದರೆ ಐದು ವರ್ಷದಿಂದ ಹದಿನೆಂಟು ವರ್ಷದವರೆಗೆ ನಮ್ಮ ಮೆದುಳು ಸಿಮಿತ ಪ್ರಮಾಣದಷ್ಟು ಮಾತ್ರ ನೋವನ್ನು ಸಹಿಸಿಕೊಳ್ಳುತ್ತದೆ. ಅತಿಯಾದ ಭಯಾನಕ ಕೃತ್ಯ ಮತ್ತು ನೋವುಗಳನ್ನು ಸಹಿಸಿಕೊಳ್ಳಲು ಶಕ್ತವಾಗಿರುವುದಿಲ್ಲ. ಒಂದನೇ ತರಗತಿಯಲ್ಲಿ ಓದುವ ಮಗು ಅದರ ಬುದ್ಧಿ ಸಾಮರ್ಥಕ್ಕನುಗುಣವಾಗಿ ಪಠ್ಯಕ್ರಮವನ್ನು ಮಾತ್ರ ರಚಿಸಲಾಗುತ್ತದೆ. ಆ ಮಗುವಿಗೆ ಐದನೇ ತರಗತಿಯ ಬುದ್ಧಿ ಸಾಮರ್ಥ್ಯದ ಪಠ್ಯಕ್ರಮವನ್ನು ಒದಗಿಸಲು ಸಾಧ್ಯವಿಲ್ಲ. ಹಾಗೆಯೇ ಐದನೇ ತರಗತಿಯ ಮಗುವಿಗೆ ಹತ್ತನೇ ತರಗತಿಯ ಪಠ್ಯ ಕೊಡಲು ಸಾಧ್ಯವಿಲ್ಲ. ಹಾಗೆಯೇ ನೋವಿನ ವಿಷಯದಲ್ಲಿಯೂ ಅಷ್ಟೆ ಆಯಾ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ನಮ್ಮ ಮೆದುಳು ನೋವನ್ನು ಪಡೆದುಕೊಳ್ಳುವ ಶಕ್ತಿ ಇರುತ್ತದೆ. ಅದಕ್ಕಿಂತ ನೋವು ಬವಣೆಗಳು ಹೆಚ್ಚಾದಾಗ ಮನಸ್ಸು ಬಳಲಿ ಹೋಗುತ್ತದೆ. ಭಯ, ಹಠ, ಉಧ್ವೇಗ, ಹತಾಷೆ, ಮುಂತಾದ ಅನಾರೋಗ್ಯಕರವಾದಂತಹ ಅಂಶಗಳು ನಮ್ಮ ಮೆದುಳಿನ ಸುಪ್ತಾವಸ್ತೆಯಲ್ಲಿ ಸಂಗ್ರಹವಾಗಿ ಆಗಾಗ ಕೆಟ್ಟ ಕನಸಾಗಿಯೂ ಕಾಡಬಹುದು.
ಪ್ರತಿಯೊಬ್ಬ ಮನುಷ್ಯನ ಆಲೋಚನೆಗಳು ಎರಡು ಸ್ತರಗಳಲ್ಲಿ ನಡೆಯುತ್ತದೆ. ಒಂದು ಸುಪ್ತಾವಸ್ತೆ ಮತ್ತೂಂದು
ಜಾಗೃತಾವಸ್ತೆ. ಪ್ರಾಯ್ಡ ಮತ್ತು ಯಂಗ್ ಎಂಬ ಮನೋ ವಿಜ್ಞಾನಿಗಳು ಈ ರೀತಿ ಮನೋರೋಗದಿಂದ ಬಳಲುತ್ತಿದ್ದರ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸಿದರು. ಅವರು ಕಂಡ ಕನಸುಗಳನ್ನು ಬರೆದುಕೊಂಡರು. ಅನೇಕರಲ್ಲಿ ತಾವು ಬಾಲ್ಯದಲ್ಲಿ ಅನುಭವಿಸಿದ ನೋವಿನ ಘಟನೆಗಳಿಗೂ ತಾವು ಕಂಡ ಕನಸುಗಳಿಗೂ ಸ್ವಾಮ್ಯತೆಯನ್ನು ಗಮನಿಸಿದರು. ಸುಪ್ತಾವಸ್ತೆಯಲ್ಲಿರುವ ದಮನಿತ ಆಕಾಂಕ್ಷೆಗಳು ಈ ರೀತಿ ಕನಸಿನ ರೂಪದಲ್ಲಿ ಮೂಡುತ್ತವೆ. ಈ ದಮನಿತ ಘಟನೆಗಳು ಜಾಗೃತಾವಸ್ತೆಗೆ ಬರುವುದೇ ಇಲ್ಲ. ವಿವೇಚನಾ ಶಕ್ತಿ ತುಂಬಾ ಬಲಶಾಲಿಯಾದಾಗ ಕೆಲವು ದಮನಿತ ಘಟನೆ ಆಕಾಂಕ್ಷೆಗಳು ಕೆಟ್ಟ ಕನಸಿನ ರೂಪದಲ್ಲೋ ಅಥವಾ ದೆವ್ವ ಪ್ರೇತವನ್ನು ಕಂಡಂತಲೋ ಬೆಚ್ಚಿ ಹೆದರುತ್ತೇವೆ....
ಎಷ್ಟೋ ಸಲ ಕೆಲವು ಪೋಷಕರು ತಮ್ಮ ಮಕ್ಕಳ ಬಗ್ಗೆ ಕೆಲವು ವಿಚಿತ್ರ ಘಟನೆಗಳನ್ನು ನನ್ನ ಬಳಿ ಹೇಳಿಕೊಂಡದ್ದೂ ಉಂಟು. ಅಥವಾ ತರಗತಿಯಲ್ಲಿ ನಾನು ಪಾಠ ಮಾಡುತ್ತಿರುವಾಗ ಅತೀ ಕಡಿಮೆ ಆತ್ಮ ವಿಶ್ವಾಸ ಹೊಂದಿದ ಮಕ್ಕಳನ್ನೂ ಗಮನಿಸಿದ್ದೇನೆ. ಕೆಲವು ಮಕ್ಕಳು ಅನಾರೋಗ್ಯಕರವಾದ ಮನೆಯ ವಾತಾವರಣದಲ್ಲಿ ಬೆಳೆಯುತ್ತಿರುವುದನ್ನೂ ಕಂಡಿದ್ದೇನೆ.. ಇಂತವರಿಗೆಲ್ಲಾ ನನ್ನ ಸಲಹೆ ಏನೆಂದರೆ ನಿನ್ನ ಮಕ್ಕಳ ಪುಟ್ಟ ಮನಸ್ಸಿನ ಮೇಲೆ ಭಯ, ನೋವು, ಹೆದರಿಕೆ, ಮುಂತಾದ ಋಣಾತ್ಮಕ ಮತ್ತು ನಿಷೇದಾತ್ಮಕ ಭಾವನೆಗಳನ್ನು ಅತಿಯಾಗಿ ಹೇರಬೇಡಿ. ಅಂತಹ ಘಟನೆಗಳು ಮನೆಲ್ಲಿ ನಡೆದರೂ ಮಕ್ಕಳ ಮುಂದೆ ಬುದ್ಧಿವಂತಿಕೆಯಿಂದ ವರ್ತಿಸಿ. ಆದಷ್ಟು ಹದಿನೆಂಟು ವರ್ಷಗಳ ವರೆಗೆ ನಿಮ್ಮ ಮಕ್ಕಳ ಮನಸ್ಸನ್ನು ಸಂತೋಷಕರವಾಗಿರುವಂತೆ ನೋಡಿಕೊಳ್ಳಿ. ಆಟ ಪಾಠ, ಹೊಗಳಿಗೆ, ಶಿಕ್ಷೆ, ನೋವುಗಳನ್ನು ಸಹ ಅಲ್ಪ ಪ್ರಮಾಣದಲ್ಲಿ ಮಾತ್ರವೇ ಪರಿಚಯಿಸಿರಿ. ಇಷ್ಟು ಮಾಡಿದರೆ ಸಾಕು ನಿಮ್ಮ ಮಕ್ಕಳು ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಲ್ಲರು....

ಪ್ರಕಾಶ್ ಎನ್ ಜಿಂಗಾಡೆ..

Friday, 10 June 2016

Suma Vasanth Bantwal- Thatt Anta Heli Episode



ಇದು ಥಟ್ ಅಂತ ಹೇಳಿ ಅನ್ನೋ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ನಾನು ಬರೆದ " ನಮ್ಮ ದಿನಾಚರಣೆಗಳು " ಅನ್ನೋ ಪುಸ್ತಕವನ್ನು ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ನೀಡುತ್ತಿರುವುದು. 

Saturday, 4 June 2016

Selfee

ಸೆಲ್ಫಿ

ಬೆಳಗ್ಗೆಯಿಂದ ನನ್ನ ಸುಕೋಮಲವಾದ ವದನವನ್ನು ಬಹು ಬಗೆಯಲ್ಲಿ ಸೆರೆಹಿಡಿಯಬೇಕೆಂದು ಮೋಬೈಲನ್ನು ತೆಗೆದುಕೊಂಡು ಎಲ್ಲಾ ಕೋನದಿಂದ ತಿರುಗಿಸಿ ತಿರುಗಿಸಿ ನನ್ನ ನಾ ಸೆರೆ ಹಿಡಿದುಕೊಳ್ಳಲು ನೋಡಿದೆ. ಯಾವ ಯ್ಯಾಂಗಲ್ ನಿಂದಲೂ ನಾನು ಚನ್ನಾಗಿ ಕಾಣಲಿಲ್ಲ. ನಾನು ರಾಜ್ ಕುಮಾರ್ ನಂತೆಯೋ, ದೇವಲೋಕದ ಇಂದ್ರನಂತೆಯೋ ಕಾಣಬೇಕೆಂದು ಹಂಬಲಿಸಿದ್ದು ತಪ್ಪಾಯಿತೋ ಏನೋ.....? ಆದರೂ ನನ್ನ ಪ್ರಯತ್ನ ಬಿಡಲಿಲ್ಲ . ಮುಂದುವರೆಸಿದೆ. ನಾನೇ ಹಲವು ರೀತಿಯಲ್ಲಿ ಭಿನ್ನ ಭಿನ್ನ ಭಂಗಿಯಲ್ಲಿ ಕುಳಿತು ನೋಡಿದೆ. ಹಿಂದೆ, ಮುಂದೆ, ಅಕ್ಕ-ಪಕ್ಕ, ಮೇಲೆ, ಕೆಳಗೆ ಎಲ್ಲಾ ರೀತಿಯಲ್ಲೂ ಕುಳಿತೆ. ಹೀಗೆ ಮಗ್ಗುಲನ್ನು ಬದಲಿಸಿ, ಬದಲಿಸಿ ನೋಡಿದೆ. ಎಷ್ಟೇ ಹೊಸ ಹೊಸ ಭಂಗಿಯಲ್ಲಿ ಪ್ರಯತ್ನಿಸಿ ನೋಡಿದರೂ ಹಳೆಯ ಬ್ಲ್ಯಾಕ್ ಅಂಡ್ ವೈಟ್ ಪಿಕ್ಚರ್ ನ ವಿಲನ್ ನಂತೆಯೇ ಕಾಣುತ್ತಿದ್ದೆ. ನನ್ನ ಈ ಸೆಲ್ಫಿ ತೆಗೆಯುವ ಮಂಗನಾಟವನ್ನು ಯಾರಾದರೂ ನೋಡಿದರೆ ಎಷ್ಟು ನಗುತ್ತಿದ್ದರೋ ಏನೋ..ನಗುವುದು ಹಾಗಿರಲಿ ನನ್ನನ್ನೇ ಹುಚ್ಚನೆಂದು ಅಂದು ಕೊಂಡರೇ..? ಅಂದು ಕೊಂಡರೂ ತಪ್ಪೇನಿಲ್ಲ ಬಿಡಿ ನನ್ನ ಸೆಲ್ಫಿಯ ಗೀಳು ಹೆಚ್ಚು ಕಡಿಮೆ ಹಾಗೇ ಇತ್ತು. ನಾನು ಎಲ್ಲಾ ರೀತಿಯ ಹಾವ ಭಾವವನ್ನು ನನ್ನ ಮೊಬೈಲ್ ಕ್ಯಾಮರಾದ ಮುಂದೆ ಪ್ರದರ್ಶಿಸುತ್ತಿದ್ದೆ. ಅಂದರೆ ವಕ್ರ ವಕ್ರವಾಗಿಯೂ ಅಂಕುಡೊಂಕಾಗಿಯೂ... ಮುಖದಲ್ಲಿ ನವರಸಗಳೆಲ್ಲವನ್ನು ಕಿತ್ತು ಬರುವ ಹಾಗೆ ತೋರಿಸಿಕೊಂಡೆ. ಯಾವ ರಸವೂ ನನ್ನ ಮುಖಕ್ಕೆ ಚಂದವಾಗಿ ಕಾಣಿಸಲೇ ಇಲ್ಲ. ಒಂದೊಂದು ಮುಖದ ರಸಭಾವಗಳೂ ಸಹ ಒಬ್ಬೊಬ್ಬ ವಿಲನ್ ಗಿಂತಲೂ ಕಡಿಮೆಯೇನೂ ಇರಲಿಲ್ಲ. ಹೀಗೆ ಕಾಣುತ್ತಿದ್ದ ವಿಲನ್ ಗಳಿಗೆ ಇನ್ನಷ್ಟು ವಕ್ರತನ, ಕುರೂಪವನ್ನು ಮಿಕ್ಸ್ ಮಾಡಿ ನೋಡಿದರೆ ಹೇಗಿರುತ್ತಿದ್ದರೋ ಅದಕ್ಕಿಂತ ಕೆಟ್ಟದಾಗಿಯೇ ನನ್ನ ಮುಖ ಕಾಣುತ್ತಿತ್ತು. ಕೊನೆಗೆ ಮೊಬೈಲ್ ಸರಿಯಿಲ್ಲವೇನೋ ಎಂದು ಅನುಮಾನಿಸಿದೆ. ಎಕ್ಟ್ರ ಫೋಟೋ ಎಡಿಟರ್ ಅಪ್ಲಿಕೇಷನ್ ನಲ್ಲಿ ನಾನು ತೆಗೆದ ಪೋಟೋವನ್ನು ಮಿಕ್ಸಿಂಗ್ ಮಾಡಿ, ಸ್ವಲ್ಪ ಆಧುನಿಕತೆಯ ಟಚ್ ಕೊಟ್ಟು ನೋಡಿದೆ. ಆದರೆ ಅದರಲ್ಲಿ ಅತಿಯಾದ ಮೇಕಪ್ ನಿಂದಾಗಿ ಯಕ್ಷಗಾನ ಕಲಾವಿದನಂತೆಯೂ. ಬೂದಿ ಬಳಿದುಕೊಂಡ ಅಘೋರಿಯಂತೆ ಕಂಡೆನೇ ಹೊರತು ನಾನಂದು ಕೊಂಡಂತೆ ರಾಜಕುಮಾರನ ರೂಪ ನನ್ನಲ್ಲಿ ಬರಲೇ ಇಲ್ಲ.

ನಾನು ನನ್ನ ಪೋಟೋ ಶೂಟ್ ಮಾಡಿಕೊಂಡ ಸ್ಥಳಗಳನ್ನು ಹೇಳಿಕೊಂಡರೆ ನಕ್ಕು ಬಿಡುತ್ತೀರಿ. ಬೆಡ್ ರೂಮಲ್ಲಿ ಮಂಚದ ಮೇಲೆ... ಮನೆಯ ಮುಂಬಾಗ ಯಾರೋ ನಿಲ್ಲಿಸಿದ ಕಾರಿನ ಮುಂದೆ ನಿಂತು... ಅಡುಗೆ ಮನೆಯಲ್ಲಿ ಸೌಡನ್ನು ಹಿಡಿದು... ಅಡುಗೆಯವನ ರೂಪದಲ್ಲಾದರೂ ಚನ್ನಾಗಿ ಕಾಣುವೆನೇನೋ ಎಂಬ ಪ್ರಯತ್ನವೂ ಸಹ ನಡೆದು ಹೋಯಿತು... ಹಾಲ್ ನಲ್ಲಿ ತಲೆಗೆ ಟವಲ್ ಸುತ್ತಿಕೊಂಡು ನೋಡಿದೆ... ಇವೆಲ್ಲಾ ಪ್ರಯತ್ನದ ನಂತರ ಬಾತ್ ರೂಮ್ ನಲ್ಲಿ ಸೇವಿಂಗ್ ಮಾಡುವಾಗಲೂ ಒಂದೆರೆಡು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡೆ.. ಯಾರಾದರೂ ಇಂತಹ ಫೋಟೋಗಳನ್ನು ನೋಡಿದರೆ ನಗದೇ ಇರುತ್ತಾರೆಯೇ...? ಖಂಡಿತ ನೋಡಿ ನಗುವರು ಎಂದು ಅನುಮಾನಿಸಿ ಆ ಪೋಟೋಗಳನ್ನು ಅಲ್ಲೇ ಡಿಲೀಟ್ ಮಾಡಿಬಿಟ್ಟೆ. ಸ್ಥಳ ಯಾವುದಾದರೇನು.. ರೂಪ ಅದೆಯಲ್ಲವೇ..? ಆದರೂ ಸಹ ಚನ್ನಾಗಿ ಕಾಣಲೇ ಬೇಕು ಎನ್ನುವ ಛಲ ಇದೆಯಲ್ಲ ಅದು ನನ್ನಲ್ಲಿ ಶತಾಯು ಗತಾಯುವಾಗಿ ನಡೆಯುತ್ತಲೇ ಇತ್ತು...

ಇವತ್ತು ಇಷ್ಟೆಲ್ಲಾ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಕ್ಕೆ ಒಂದು ಕಾರಣವೂ ಇದೆ. ಅಮ್ಮ ಒಂದು ವಾರದ ಹಿಂದೆ ನನಗೆ ಗೊತ್ತಿಲ್ಲದೆ ನನಗೆ ಹೆಣ್ಣು ನೋಡುತ್ತಿದ್ದರು. ನನಗೆ ಈ ವಿಷಯ ಗೊತ್ತಾಗುವ ವೇಳೆಗಾಗಲೇ ನನ್ನ ಅತಿ ಕೆಟ್ಟದಾದ ಫೋಟೋವೊಂದನ್ನು ಹುಡುಗಿಯ ಕಡೆಯವರಿಗೆ ಕಳುಹಿಸಿಕೊಟ್ಟಿದ್ದಳು. ಅಂತಹ ಕೆಟ್ಟ ಪೋಟೋ ಕಳುಹಿಸಿದ ವಿಷಯ ಗೊತ್ತಾದ ಕೂಡಲೇ ನಾನು ಕೆಂಡಮಂಡಲವಾದೆ. ಅಂತಹ ಪೋಟೋ ಯಾವ್ ಹುಡುಗಿ ತಾನೆ ಒಪ್ಕೋತಾಳೆ ಹೇಳಿ... ಒಂದು ಆಂಗಲ್ ನಲ್ಲಿ ಹಳೆಯ ಬ್ಲಾಕ್ ಅಂಡ್ ವೈಟ್ ಪಿಕ್ಚರ್ ನ ವಿಲನ್ ನಾಗಪ್ಪನಂತೆ ಕ್ರೂರ ದೃಷ್ಠಿ ತೋರಿಸಿದ್ದೆ. ಇನ್ನೊಂದು ಕಡೆಯಿಂದ ನೋಡಿದರೆ ಥೇಟ್ ವಜ್ರುಮುನಿಯ ಖಳ ನೋಟ.. ಹುಡುಗ ಚಾಕೊಲೇಟ್ ಹೀರೋ ತರಹ ಇರಬೇಕು ಎಂದು ಬಯಸುವ ಹುಡುಗಿಯರು ಯಾರು ತಾನೆ ಇಂತಹ ಫೋಟೋ ಒಪ್ಕೋತಾರೆ ಹೇಳಿ... ಅಮ್ಮ ಆರಿಸಿ ಕಳುಹಿಸಿ ಈ ಫೋಟೋದಿಂದಲೇ ಈ ಸಂಬಂದ ಮುರಿದು ಬೀಳುವುದು ಗ್ಯಾರಂಟಿಯಾಗಿತ್ತು.. ಹುಡುಗಿ ಕಡೆಯವರನ್ನು ನೋಡಿ ಎಂತಹ ಫೋಟೋ ಕಳುಹಿಸಿದ್ದರು ಗೊತ್ತಾ...? ಹುಡುಗಿ ಅಪ್ಸರೆ. ಕೈ ತೊಳೆದುಕೊಂಡು ಮುಟ್ಟುವ ಹಾಗಿದ್ದಳು.. ಅವಳ ಜೊತೆ ನನ್ನನ್ನು ಹೋಲಿಸಿಕೊಂಡರೆ ಅವರು ನನ್ನನ್ನು ಮುಟ್ಟಿ ಕೈ ತೊಳೆದುಕೊಳ್ಳಬೇಕು ಬಿಡಿ.

ಅವಳ ಆ ಸುಂದರ ರೂಪ ನೋಡಿ ನಾನು ಕನಸಿನ ಲೋಕದಲ್ಲಿ ವಿಹರಿಸಲಾರಂಭಿಸಿದೆ. ಗುಲಾಬಿ ಕೆನ್ನೆಗಳು, ಸಾಫ್ಟ್ ಆಗಿ ಕಾಣುತ್ತಿದ್ದ ಆ ನಾಸಿಕ, ಗಾಳಿಗೆ ಉಯ್ಯಾಲೆಯಾಡುತ್ತಿರುವ ಆ ಮುಂಗುರುಳುಗಳು, ಜೇನಿನ ಅಧರಗಳು, ಅಬ್ಬಾ....!! ರವಿವರ್ಮನ ಕಲಾ ಪ್ರಪಂಚವೇ ಅದರಲ್ಲಿ ಅಡಗಿತ್ತು. ಮೊನಾಲಿಸಾಳ ನಗು ಸಹ ಈ ಪೋಟೋ ಮುಂದೆ ಕಳಪೆಯಂತೆ ಕಂಡಿತು. ಅಂತಹ ಗಂಧರ್ವ ಕನ್ಯೆಗೆ ನನ್ನ ಕೆಟ್ಟ ಚಿತ್ರ ಪಟ ಕಳುಹಿಸಿದರೆ ನನಗೆ ಹೇಗಾಗುವುದಿಲ್ಲ ಹೇಳಿ...

ಒಂದು ವಾರದ ನಂತರ ಹುಡುಗಿ ನೋಡುವ ಶಾಸ್ತ್ರ ನಡೆಯಿತು. ಹುಡುಗಿ ಘಮ ಘಮಿಸುವ ಉಪ್ಪಿಟ್ಟಿನೊಂದಿಗೆ ಬಂದಳು. ಫೋಟೋದಲ್ಲಿ ನೋಡಿದ ಹಾಗೆಯೇ ಹುಡುಗಿಯು ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಅವಳನ್ನು ನೋಡುತ್ತಿದ್ದ ಹಾಗೆ ಅಮ್ಮ ಇವರಿಗೆ ಕಳುಹಿಸಿದ್ದ ನನ್ನ ಕೆಟ್ಟ ಫೋಟೋ ನೆನಪಿಗೆ ಬಂತು. ಇಂತಹ ಅಪ್ಸರೆ ನನ್ನನ್ನು ಒಪ್ಪಲು ಸಾಧ್ಯವೇ..ಸಿಟ್ಟಿನಿಂದ ಅಮ್ಮನ ಕಡೆಯೊಮ್ಮೆ ನೋಡಿದೆ. ಅಮ್ಮ ಆ ತರಹದ ಪೋಟೋ ಕಳುಹಿಸಿದ್ದರಿಂದ ನನ್ನ ಪಾಲಿಗೆ ವಿಲನ್ ನಂತೆ ಕಾಣುತ್ತಿದ್ದಳು. ಒಂದು ರೀತಿ ಹಳೆ ಸಿನಿಮಾದ ಘಟವಾಣಿ ಪಾತ್ರಧಾರಿ ಉಮಾ ಶಿವಕುಮಾರಿಯಂತೆ ಹೊಸ ಸೀರೆ ಧರಿಸಿ ಕುಳಿತ್ತಿದ್ದಳು. ಮತ್ತೊಮ್ಮೆ ಹುಡುಗಿಯನ್ನು ನೋಡಿದೆ ಅದೇನು ನಯ... ಅದೇನು ನಾಜೂಕು... ನಾಚಿಕೆಯ ಆಭರಣವನ್ನು ಧರಿಸಿ, ರೇಷ್ಮೆಯಂತೆ ಹೊಳೆಯುವ ಮೈ ಬಣ್ಣದಿಂದ ಕಣ್ಣು ಕುಕ್ಕುವಂತೆ ಕುಳಿತ್ತಿದ್ದಳು.

ಅಷ್ಟರಲ್ಲಿ ಹುಡುಗಿಯ ತಂದೆ ಮೌನ ಮುರಿದರು

"ನಮ್ ಹುಡುಗಿ ಮಾನಸಗೆ ನೀವು ಕಳುಹಿಸಿದ ಫೋಟೋ ತುಂಬಾ ಹಿಡಿಸಿದೆ. ಸಿನಿಮಾ ಹೀರೋ ತರ ಇದ್ದಾರೆ ಅಂತ ಅವಳು ತನ್ನ ಗೆಳತಿಯರ ಹತ್ತಿರ ಹೇಳ್ಕೊಳ್ತಾ ಇದ್ಳು. ಇಷ್ಟು ದಿನ ಎಷ್ಟೊಂದು ಹುಡುಗರನ್ನು ನೋಡಿದ್ವಿ ಯಾವ್ ಹುಡುಗನೂ ಅವಳಿಗೆ ಇಷ್ಟ ಆಗಿರ್ಲಿಲ್ಲ. ನಮ್ ಹುಡುಗಿಗೆ ಹಣ ಆಸ್ತಿ ಮುಖ್ಯವಲ್ಲ ಹುಡುಗ ಚನ್ನಾಗಿದ್ದರೆ ಸಾಕು. ನೀವು ಕಳುಹಿಸಿದ ಫೋಟೋನೇ ನಮ್ಮ ಹುಡುಗಿಗೆ ಮೋಡಿ ಮಾಡಿಬಿಡ್ತು ನೋಡಿ.... ಅದರಂತೆ ಹುಡುಗನು ಸಹ ಹ್ಯಾಂಡ್ ಸಮ್ ಆಗಿದಾನೆ ಬಿಡಿ"

ಅವರು ನಮ್ಮಮ್ಮನ ಕಡೆ ನೋಡಿ ಹೇಳಿದರು. ನನಗೆ ಸಂತೋಷವಾಯಿತು ಅಮ್ಮನ ಕಡೆಗೆ ನೋಡಿದೆ. ಅಮ್ಮ ಪಂಡರಿಬಾಯಿಯಂತೆ ಶಾಂತ ರೂಪವನ್ನು ಧರಿಸಿ ಮುಗುಳ್ನಗೆ ಬೀರಿ ಕುಳಿತ್ತಿದ್ದಳು. ಅಮ್ಮ ಈಗ ನನ್ನ ಕಣ್ಣಿಗೆ ಬದಲಾದ ರೂಪದಲ್ಲಿ ಕಂಡಳು. ಈ ಮನಸ್ಸೇ ಹಾಗೆ ನಾವು ಸಂತೋಷವಾಗಿದ್ದಾಗ ಎಲ್ರೂ ಚೆನ್ನಾಗಿಯೇ ಕಾಣಿಸ್ತಾರೆ. ಇಲ್ಲದಿದ್ದರೆ ವಿಲನ್ ಗಳು. ಅಮ್ಮ ಕಳುಹಿಸಿದ ಈ ನನ್ನ ಕೆಟ್ಟ ಫೋಟೋ ಇನ್ನೊಬ್ಬರ ಮನಸ್ಸು ಕದಿಯುತ್ತೆ ಅಂತ ನನಗೆ ಗೊತ್ತಿರಲಿಲ್ಲ. ನಮಗೆ ನಾವು ಯಾವತ್ತೂ ಸುಂದರವಾಗಿ ಕಾಣುವುದಿಲ್ಲ. ಕನ್ನಡಿಯ ಮುಂದೆ ಎಷ್ಟು ಸರಿ ನೋಡಿಕೊಂಡರು ನಾವು ಸುಂದರರು ಅಂತ ಅನ್ನಿಸುವುದಿಲ್ಲ. ಈ ಕಾರಣದಿಂಗಲೇ ಈ ಸೆಲ್ಫಿ ತೆಗೆಯುವ ಹುಚ್ಚು ಎಲ್ಲರಲ್ಲಿಯೂ ಅಂಟಿಕೊಂಡಿರುತ್ತೋ ಏನೋ...ಕ್ಲಿಕ್ಕಿಸುವುದು, ಅಪ್ ಲೋಡ್ ಮಾಡುವುದು, ಗೆಳೆಯರ ಕಮೆಂಟ್ಸ್ ಓದಿ ಖುಷಿ ಪಡುವುದು. ನಾವು ಇನ್ನೊಬ್ಬರನ್ನು ಹೊಗಳಿ ಕಾಮೆಂಟ್ಸ್ ಮಾಡುವುದಕ್ಕಿಂತ ಇನ್ನೊಬ್ಬರಿಂದ ಹೊಗಳಿಸಿಕೊಂಡರೆ ಮಾತ್ರ ನಮಗೆ ತೃಪ್ತಿ ಸಿಗುತ್ತದೆ. ನಾವು ಸುಂದರ ವಾಗಿರುವುದನ್ನು ಸುಂದರ ಎನ್ನುವುದರಲ್ಲಿ ತಪ್ಪೇನಿದೆ ಹೇಳಿ...

ಹೀಗೆ ಯೋಚಿಸುತ್ತಾ ಕುಳಿತ್ತಿರುವಾಗಲೇ ಅಮ್ಮ ಅಪ್ಪ ಎಲ್ಲರೂ ಎದ್ದು ಹುಡುಗಿಯ ಹೊಸ ಮನೆಯನ್ನು ನೋಡಲು ಹೊರಟರು. ಹುಡುಗಿ ಮಾತ್ರ ಇನ್ನೂ ತಲೆತಗ್ಗಿಸಿ ನಾಚಿಕೆಯಿಂದ ಕುಳಿತ್ತಿದ್ದಳು. ಯಾರೂ ಇರಲಿಲ್ಲ. ತಕ್ಷಣ ಅವಳ ಪಕ್ಕ ಹೋಗಿ ಕುಳಿತೆ. ಇನ್ನಷ್ಟು ನಾಚಿಕೊಂಡಳು.
"ನೀವು ಅಪ್ಸರೆಯಂತೆ ಸುಂದರವಾಗಿದ್ದೀರಿ"
ಎನ್ನುತ್ತಾ ಅವಳ ಕೆನ್ನೆಯನ್ನು ಹಿಂಡಿದೆ. ಅವಳು ನಾಚಿ ಇನ್ನೊಂದು ಕೆನ್ನೆ ಕೆಂಪಾಗಿಸಿಕೊಂಡಳು...

" ನಿಮ್ಮಷ್ಟು ಸುಂದರವಿಲ್ಲ ಬಿಡಿ.."

ಎಂದು ಹೇಳುತ್ತಾ ಅವಳು ಇನ್ನೇನು ನನ್ನ ಎದೆಯ ಗೂಡಿನಲ್ಲಿ ಗುಬ್ಬಚ್ಚಿಯಂತೆ ಅವಿತುಕೊಳ್ಳಲು ಮುಂದಾದಳು. ಕೂಡಲೇ ಅವಳ ತಂಗಿ ನಮ್ಮ ಮೊದಲ ಪ್ರೇಮ ಸ್ಪರ್ಶಕ್ಕೆ ಅಡ್ಡಲಾಗಿ ಬಂದಳು...
"ಏನ್ ಭಾವ... ನಿಮ್ ಫೋಟೋ ಅಕ್ಕನಿಗೆ ಎಷ್ಟು ಮೋಡಿ ಮಾಡಿದೆ ಗೊತ್ತಾ... ನಿಮ್ ಫೋಟೋ ನನ್ಹತ್ರ ಇಟ್ಕೊಂಡು ಅಕ್ಕನಿಗೆ ಎಷ್ಟು ಆಟ ಆಡಿಸಿದ್ದೀನಿ ಗೊತ್ತಾ.?
ಎನ್ನುತ್ತಾ ನನ್ನ ಫೋಟೋ ಕೈಯಲ್ಲಿ ಹಿಡಿದು ಮತ್ತೆ ತನ್ನಕ್ಕನಿಗೆ ಸತಾಯಿಸಲು ಮುಂದಾದಳು.
ಮಾನಸ ಮಾತ್ರ ತಂಗಿಯ ಮಾತಿಗೆ ಉತ್ತರಿಸದೇ ನಾಚಿಕೆಯಿಂದ ಮೌನವಾಗಿ ಕುಳಿತ್ತಿದ್ದಳು. ನಾನು ಅಂದುಕೊಂಡಿದ್ದ ಆ ಕೆಟ್ಟ ಫೋಟೋ ಈ ತರಹದ ಮೋಡಿ ಮಾಡಿದ್ದು ನೋಡಿ ನಾನು ತುಟಿಯಂಚಿನಲ್ಲೇ ನಕ್ಕು ಸುಮ್ಮನಾದೆ. ಅವತ್ತೇ ನನಗೂ ಗೊತ್ತಾಗಿದ್ದು. ನಾವು ಸಹ ರೂಪ ಲಾವಣ್ಯದಲ್ಲಿ ಒಂದು ಕೈ ಮೇಲೆನೇ ಇದ್ದೕವಿ ಅಂತ. ನನಗೆ ಮಾತ್ರ ನನಗಿಂತ ಸುಂದರ ಹುಡುಗಿ ಸಿಕ್ಕಳೆಂಬ ಸಂತಸ ಇತ್ತು. ಅವಳು ನನ್ನ ಕಡೆ ನೋಡುತ್ತಿದ್ದ ಆ ಕಳ್ಳ ನೋಟ ಎದೆಯೊಳಗೆ ಇನ್ನಷ್ಟು ಕಚಗುಳಿಯನ್ನು ಇಟ್ಟಿತ್ತು.....
- ಪ್ರಕಾಶ್ ಎನ್ ಜಿಂಗಾಡೆ

Monday, 23 May 2016

ಕೆಪ್ಪನ ಕಥೆ

ಕೆಪ್ಪನ ಕಥೆ 


ನಮ್ಮೂರಿನ ಕೆಪ್ಪಣ್ಣನಿಗೆ ಮಲ ಬಾಧೆ ರೋಗ. ದಿನಕ್ಕೆ ಏನಿಲ್ಲವೆಂದರೂ ನಾಲ್ಕೈದು ಬಾರಿ. ಒಂದೊಂದು ಸಲ ಪಂಚೆಯಲ್ಲೇ ಆಗಿ ಬಿಡುತ್ತಿತ್ತು. ಬೀದಿಯಲ್ಲಿ ನಡೆದುಕೊಂಡು ಬರುವಾಗಲೂ ಆಗಾಗ ಆಗುತ್ತಲೇ ಇರುತ್ತದೆ. ಇದೊಂದು ತರಹದ ವಿಚಿತ್ರವಾದ ಅಸಹ್ಯ ಪಟ್ಟುಕೊಳ್ಳುವ ರೋಗ ಕೆಪ್ಪಣ್ಣನ ಈ ರೋಗಕ್ಕೆ ಹೆಂಡತಿ ಈರವ್ವ ಸಾಕಾಗಿ ಹೋಗಿದ್ದಳು. ಈರವ್ವ ಈ ರೋಗಕ್ಕೆ ಹಲವು ಬಾರಿ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಹಲವು ಬಾರಿ ತೋರಿಸಿಕೊಂಡು ಬಂದಿದ್ದಳು. ಆದರೂ ಕೆಪ್ಪಣ್ಣನ ರೋಗ ಮಾತ್ರ ವಾಸಿಯಾಗಿರಲಿಲ್ಲ. ಸುಮಾರು ಹತ್ತು ವರ್ಷಗಳಿಂದ ಕೆಪ್ಪಣ್ಣನ ಬೇದಿಯನ್ನು ನೋಡಿ ನೋಡಿ ಈರವ್ವನಿಗೆ ಸಾಕಾಗಿ ಹೋಗಿತ್ತು. ಎಲ್ಲೆಂದರಲ್ಲಿ ಕೆಪ್ಪಣ್ಣನ ಬೇದಿ ನಡೆಯುತ್ತಿತ್ತು. ಅದು ಯಾವ ಮಾನ ಮರ್ಯಾದೆಗೆ ಅಂಜಿಕೊಳ್ಳದೇ, ಸ್ಥಳ, ಸಮಯ ನೋಡದೇ ಉಟ್ಟ ಚಡ್ಡಿಯಲ್ಲೇ ಸರಾಗವಾಗಿ ಹೋಗುತ್ತಿತ್ತು. ಈ ಕಾರಣದಿಂದಲೇ ಈರವ್ವ ಇಂತಹ ಗಂಡನನ್ನು ಕಟ್ಟಿಕೊಂಡು ಯಾವ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲ. ತವರುಮನೆಗೂ ಹೋಗುವುದನ್ನು ಸಹ ನಿಲ್ಲಿಸಿದ್ದಳು.. ಇದಕ್ಕೆ ಒಂದು ಕಾರಣವೂ ಇದೆ.
ಕೆಪ್ಪಣ್ಣನ ಈ ರೋಗದಿಂದ ಈರವ್ವ ತನ್ನ ತವರುಮನೆಯಲ್ಲೇ ಒಂದು ಸಲ ಅಪಮಾನಕ್ಕೀಡಾಗಿದ್ದಳು.
ಆಗ ಕೆಪ್ಪಣ್ಣನಿಗೆ ರೋಗ ಪ್ರಾರಂಭದ ಹಂತದಲ್ಲಿತ್ತು. ತನ್ನ ತವರುಮನೆಯ ಹತ್ತಿರದ ಸಂಬಂದಿಯೊಬ್ಬರ ಮದುವೆಗೆ ಈರವ್ವ ಗಂಡನನ್ನು ಕಟ್ಟಿಕೊಂಡು ಮದುವೆಗೆ ಹೋಗಿದ್ದಳು. ದಾವಣಗೆರೆಯ ಗುಂಡಿ ಮಹದೇವಪ್ಪನ ಛತ್ರದಲ್ಲಿ ಮದುವೆ. ಆಗ ನಮ್ಮೂರಿನ ಮದುವೆಗಳು ಛತ್ರದಲ್ಲಿ ನಡೆಯುತ್ತವೆಯೆಂದರೆ ಅದೊಂದು ವಿಜೃಂಬಣೆಯ ಶ್ರೀಮಂತರ ಮದುವೆ ಎಂದೇ ಅರ್ಥ. ಮನೆಯ ಮುಂದೆ ಚಪ್ಪರ ಹಾಕಿ ಲಾಡು ಚಿತ್ರಾನ್ನದೊಂದಿಗೆ ಮದುವೆಯನ್ನು ಸರಳವಾಗಿ ಮುಗಿಸುತ್ತಿದ್ದ ಕಾಲವದು. ಅಂಥದ್ದರಲ್ಲಿ ಛತ್ರದಲ್ಲಿ ಮದುವೆ ಎಂದರೆ ಕೇಳಬೇಕೆ... ಸಂಬಂದಿಕರೆಲ್ಲಾ ಮುಗಿಬಿದ್ದ ಹೋಗಿದ್ದರು. ಕೆಪ್ಪಣ್ಣನು ತನ್ನ ಹೆಂಡತಿಯ ಬಳಿ
"ನಾನು ಇದೇ ಮೊದಲ ಸಲ ಛತ್ರದಲ್ಲಿ ನಡೆಯುವ ಮದುವೆಗೆ ಹೋಗುತ್ತಿರುವುದು"
ಎಂದು ಈರವ್ವನ ಬಳಿ ಹೇಳಿಕೊಂಡು ಮದುವೆಗೆ ಹೋಗಲು ಹಲವು ದಿನಗಳ ಹಿಂದಿನಿಂದಲೂ ಕನಸು ಕಟ್ಟಿಕೊಂಡಿದ್ದ. ಬಿಸಿಲು ಹೆಚ್ಚಾಗಿರುವುದರಿಂದ ಕೆಪ್ಪಣ್ಣನಿಗೆ ಹೊಟ್ಟೆಯಲ್ಲಿ ಏನೋ ತಳಸಮಳವಾಗಿ ಸಾಮಾನ್ಯ ರೀತಿಯ ಬೇದಿಯಾಗುತ್ತಿದೇ ಎಂದು ಈರವ್ವ ಭಾವಿಸಿದ್ದಳು. ಪಾಪ ಅವಳಿಗೇನು ಗೊತ್ತಿತ್ತು ಕೆಪ್ಪಣ್ಣನ ಈ ರೋಗ ತನ್ನ ಜೀವನದುದ್ದಕ್ಕೂ ಕಾಡುತ್ತದೆಯೆಂದು...?
ಮದುವೆಯ ದಿನ ಕೆಪ್ಪಣ್ಣನಿಗೆ ಒಂದೆರಡು ಸಲ ಬೇದಿಯಾಗಿದ್ದಂತೂ ನಿಜ. ಅದು ಮರ್ಯಾದೆ ಪೂರ್ವಕವಾಗಿ ಆಗಿತ್ತು. ಆದ್ದರಿಂದ ಕೆಪ್ಪಣ್ಣ ಹೆಂಡತಿಯ ಬಳಿ ಹೇಳಿಕೊಳ್ಳಲಿಲ್ಲ... ಹೇಳಿಕೊಳ್ಳಲೇನು ಕೆಪ್ಪಣ್ಣ ಚಿಕ್ಕ ಮಗುವೇ..? ಆ ವಿಷಯ ಇರಲಿ ಮದುವೆಯ ಊಟಕ್ಕೆ ಬರೋಣ. ಬರಿಯ ಬೂಂದಿ ಪಾಯಸದಲ್ಲೇ ಮದುವೆಯಾಗುತ್ತಿದ್ದ ಕಾಲವದು. ಅಂತಹದ್ದರಲ್ಲಿ ಬೂಂದಿಯ ಬದಲಾಗಿ ಬಾದಾಮಿ ಹಾಲು ಚಿರೋಟಿ. ಪಾಯಸಕ್ಕೆ ಬದಲಾಗಿ ರಸ್ ಮಲಾಯಿ ಮಾಡಿಸಲಾಗಿತ್ತು. ಕೆಪ್ಪಣ್ಣ ಮದುವೆ ಊಟಕ್ಕೆ ಕುಂತಾಗ ತಾನು ಊಟ ಮಾಡುತ್ತಿರುವ ಸಿಹಿ ತಿಂಡಿಯ ಹೆಸರೇನು ಎಂದು ಸಹ ಗೊತ್ತಿರಲಿಲ್ಲ. ಚಿರೋಟಿಯನ್ನು ಎಲೆಯ ಮೇಲೆ ಇಟ್ಟಾಗ ಇದು ಪೂರಿಯಿರಬೇಕೆಂದು ತಿಳಿದು ಉಪ್ಪಿನಕಾಯಿ ಜೊತೆ ಮುರಿದುರೊಂಡು ತಿಂದಿದ್ದ. ಚಿತ್ರನ್ನಾಕ್ಕೆ ಬದಲಾಗಿ ಘಮ ಘಮಿಸುವ ಘೀ ರೈಸ್ ಎಲೆಯ ಮೇಲೆ ಬಿದ್ದಾಗ ಕೆಪ್ಪಣ್ಣ ಒಂದು ಸಲ ಖುಷಿಯಿಂದ ಧೀರ್ಘ ಉಸಿರನ್ನು ಎಳೆದುಕೊಂಡು ಘಮ ಘಮಿಸುವ ವಾಸನೆಯನ್ನು ಪಡೆದು ಸಂಭ್ರಮಿಸಿದ್ದ. ಅಲ್ಲಿ ಮದುವೆ ಊಟದ ಮೊದಲ ರುಚಿ ನೋಡುತ್ತಿರುವವರು ಬರೀ ಕೆಪ್ಪಣ್ಣ ಮಾತ್ರವಿರಲಿಲ್ಲ. ಕೆಪ್ಪಣ್ಣನ ತರಹ ಹಲವಾರು ಜನ ಹಳ್ಳಿಗರು ಅಲ್ಲಿದ್ದರು. ಅಮೇಲೇನಾಯಿತೋ ತಿಳಿಯಲಿಲ್ಲ ಊಟದ ಹಾಲ್ ನಲ್ಲಿ ಸ್ವಲ್ಪ ಕೋಲಾಹಲ ಉಂಟಾಯಿತು. ಜನ ತಮ್ಮ ತಮ್ಮ ಮೂಗುಗಳನ್ನು ಮುಚ್ಚಿಕೊಂಡು ಕೆಪ್ಪಣ್ಣನನ್ನು ಶಪಿಸುತ್ತಿದ್ದರು. ಕೆಪ್ಪಣ್ಣ ತನ್ನ ಹೆಗಲ ಮೇಲಿದ್ದ ಟವಲನ್ನು ತೆಗೆದುಕೊಂಡು ಒದ್ದೆಯಾಗಿದ್ದ ತನ್ನ ಮುಕುಳಿಗೆ ಕಟ್ಟಿಕೊಂಡು ಟಾಯ್ ಲೆಟ್ ಕಡೆಗೆ ಓಡಿ ಹೋದ. ಆಗ ಗಂಡಸರು ಏನು ಮಾತನಾಡದಿದ್ದರೂ ಹೆಂಗಸರು ಮಾತ್ರ ಕೆಪ್ಪಣ್ಣನ ಈ ಕೃತ್ಯಕ್ಕೆ ಈರವ್ವ ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಂದು ಈರವ್ವನಿಗಾದ ಅವಮಾನ ಅಷ್ಟಿಷ್ಟಲ್ಲ....
ಇನ್ನೊಂದು ಸಲ ಕೆಪ್ಪಣ್ಣನ ತಮ್ಮನ ಮೊಮ್ಮಗನ ನಾಮಕರಣ ಇತ್ತು. ಕೆಪ್ಪಣ್ಣನ ತಮ್ಮ ಅತ್ತಿಗೆಯನ್ನು ಮಾತ್ರ ನಾಮಕರಣಕ್ಕೆ ಬರುವಂತೆ ಹೇಳಿ ಹೋಗಿದ್ದನು. ಕೆಪ್ಪಣ್ಣನಿಗೆ ತಮ್ಮನ ಮನೆಯ ಕಾರ್ಯಕ್ರಮಕ್ಕೆ ಹೋಗದೇ ಇರಲು ಆಗಲಿಲ್ಲ. ತನ್ನ ಜೀವ ತಮ್ಮನ ಮನೆಯ ಕಡೆಗೇ ಎಳೆಯುತ್ತಿತ್ತು. ಕೆಪ್ಪಣ್ಣನ ಈ ಮನೋಸ್ಥಿತಿಯನ್ನು ನೋಡಲಾರದೇ ಎದುರುಮನೆಯ ತರ್ಲೆ ಹುಡುಗ ಸಿದ್ದ ಕೆಪ್ಪಣ್ಣನಿಗೆ ತರ್ಲೆ ಐಡಿಯವನ್ನು ಕೊಟ್ಟನು. ನಾಮಕರಣಕ್ಕೆ ಹೋಗುವಂತೆ ಕೆಪ್ಪಣ್ಣನನ್ನು ಹುರಿದುಂಬಿಸಿದ. ಸಿದ್ದನ ಅಕ್ಕ ಆಗ ತಾನೆ ಬೆಂಗಳೂರಿನಿಂದ ಬಂದಿದ್ದಳು. ಅಕ್ಕ ತನ್ನ ಮಗುವಿಗಾಗಿ ತಂದಿದ್ದ ಡೈಪರ್ಸ ಪಾಕೇಟೊಂದರಲ್ಲಿ ಸಿದ್ದ ಒಂದನ್ನು ಕದ್ದು ತಂದು ಕೆಪ್ಪಣ್ಣನಿಗೆ ಕೊಟ್ಟನು..
"ಕೆಪ್ಪಣ್ಣ ಇದು ಡೈಪರ್ಸ ಅಂತ. ಟೌನಲ್ಲಿರೊ ಜನ ಬಳಸ್ಥಾರಂತೆ. ಅಂದ್ರೆ ಮಕ್ಕಳಿಗೆ ಮಾತ್ರ... ಎಲ್ಲಾದ್ರೂ ಊರಿಗೆ, ಮದುವೆಗೆ ಹೋದಾಗ ಮಕ್ಕಳು ಇದರಲ್ಲಿ ಮಲ ಮಾಡಿದರೆ ಯಾರಿಗೂ ಏನೂ ಗೊತ್ತಾಗಲ್ಲಂತೆ.. ನೀನು ಇದನ್ನು ಹಾಕಿಕೊಂಡು ನಾಮಕರಣಕ್ಕೆ ಯಾಕಣ್ಣ ಹೋಗಬಾರದು"
ಸಿದ್ಧ ಹಾಗೆಂದ ಕೂಡಲೇ ಕೆಪ್ಪಣ್ಣ ಸಿದ್ದನ ಕೈಲಿದ್ದ ಡೈಪರ್ಸ ನ್ನು ಕಿತ್ತುಕೊಂಡು ನಾಲ್ಕೈದು ಸಲ ತಿರುವಿ ತಿರುವಿ ಪರೀಕ್ಷಿಸಿ ನೋಡಿದನು...
"ಅಣ್ಣ ಸೈಜ್ ಚಿಕ್ಕದು ... ಕತ್ತದ ದಾರ ಕಟ್ಟಿ ದೊಡ್ಡದು ಮಾಡಿ ಕೊಡ್ತೀನಿ. ನಿನಗೆ ಆಗೋ ತರ"
ಸಿದ್ದ ಹಾಗೆಂದ ಕೂಡಲೇ ಕೆಪ್ಪಣ್ಣ ತಲೆ ಅಲ್ಲಾಡಿಸಿದನು. ತಮ್ಮನ ಮನೆಗೆ ಹೋಗುವ ಆತುರದಲ್ಲಿ ಕೆಪ್ಪಣ್ಣನಿಗೆ ಸಿದ್ದನ ತರ್ಲೆ ಐಡಿಯಾ ಸಹ ಒಪ್ಪಿಗೆಯಾಗಿತ್ತು. ಕೆಪ್ಪಣ್ಣನ ಈ ರೋಗವೇ ಬೀದಿಯ ಮಕ್ಕಳಿಗೆ ತಮಾಷೆಯಾಗಿ ಹೋಗಿತ್ತು. ತಮ್ಮನ ಮನೆಯಲ್ಲೂ ಕೆಪ್ಪಣ್ಣನಿಗೆ ಅವಮಾನ ತಪ್ಪಲಿಲ್ಲ. ಮುಕುಳಿಯ ಒದ್ದೆ ಕಾಣಿಸದಿದ್ದರೂ ವಾಸನೆ ಮುಚ್ಚಿಡಲಾದೀತೇ...? ಬೆಂಕಿ ಇದ್ದಾಗ ಹೊಗೆಯಾಡದೇ ಇರುತ್ತದೆಯೇ...? ಅಂದಿನ ಈ ಅಪಮಾನದ ಘಟನೆಯೇ ಕೊನೆ, ಈರವ್ವ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿಯೇ ಬಿಟ್ಟಳು....
ಇಷ್ಟೆಲ್ಲಾ ಆದರೂ ಈರವ್ವ ಕೆಪ್ಪಣ್ಣನ ಜೊತೆಯಲ್ಲಿ ಸಂಸಾರ ಮಾಡುವುದಕ್ಕೆ ಒಂದು ಕಾರಣವಿದೆ. ಈರವ್ವ ಮದುವೆಯಾಗಿ ಬಂದಾಗ ಕೆಪ್ಪಣ್ಣನ ಬಳಿ ತಂದೆಯಿಂದ ಬಂದ ಒಂದು ಎಕರೆ ನೀರಾವರಿ ಮಾತ್ರ ಇತ್ತು. ಕೆಪ್ಪಣ್ಣ ಕಷ್ಟ ಜೀವಿ. ತನ್ನ ಜೋಡು ಎತ್ತುಗಳನ್ನು ತೆಗೆದುಕೊಂಡು ಗದ್ದೆಗೆ ಹೊರಟರೆ ಸಂಜೆಯ ವರೆಗೂ ಕಷ್ಟಪಟ್ಟು ದುಡಿಯುತ್ತಿದ್ದ. ಮಳೆ ಬಿಸಿಲು ಇದಾವುದು ಇವನಿಗೆ ಲೆಕ್ಕವಿರಲಿಲ್ಲ. ದುಡಿಮೆಯ ವೇಳೆಯಲ್ಲಿ ಯಾರಾದರು ಕರೆದರೆ ಆ ಗಡೆ ಗಮನ ಕೊಡುತ್ತಿರಲಿಲ್ಲ. ಕೂಗಿ ಕೂಗಿ ಕರೆದರೂ 'ಓ' ಎನ್ನದ ಇವನನ್ನು ಜನ ಕೆಪ್ಪಣ್ಣ ಎಂದು ಕರೆಯಲಾರಂಬಿಸಿದರು. ನಮ್ಮೂರಿನಲ್ಲಿ ಕಿವಿ ಸರಿಯಾಗಿ ಕೇಳಿಸುತ್ತಿದ್ದರೂ ಕೆಪ್ಪಣ್ಣ ಎಂಬ ಹೆಸರನ್ನು ಕರೆಸಿಕೊಂಡವನೆಂದರೆ ಇವನೆ. ಇವನ ಹೆಸರು ರತೀಂದ್ರ ಅಂತೆ. ನನಗೂ ಇವನ ನಿಜ ನಾಮಧೇಯ ಗೊತ್ತಾಗಿದ್ದು ಮೊನ್ನೆ ಊರಿಗೆ ಹೋದಾಗಲೆ....
ಕೆಪ್ಪಣ್ಣನ ದುಡಿಮೆಯಿಂದ ಒಂದು ಎಕರೆ ಇದ್ದ ನೀರಾವರಿ ಜಮೀನನ್ನು ಐದು ಎಕರೆಗೆ ಬೆಳೆಸಿದ್ದ. ಅದರಲ್ಲಿ ಮೂರು ಎಕರೆಗೆ ಅಡಿಕೆಯನ್ನು ಕಟ್ಟಿ ಒಳ್ಳೆ ಫಸಲು ಬರುವ ಹಾಗೆ ಮಾಡಿದ್ದಾನೆ...
ಈರವ್ವ ಮದುವೆಯಾದ ವರ್ಷದ ಕೊನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದಳು. ಎಲ್ಲಾ ಸರಿಸಾಗಿಯೇ ಇತ್ತು ಎನ್ನುವಾಗಲೇ ಈರವ್ವಳಿಗೆ 'ಸನ್ನಿ' ಎಂಬ ಬಾಣಂತನದ ರೋಗ ಅಂಟಿಕೊಂಡಿತ್ತು. ಆಗ ಈರವ್ವ ಒಂದು ರೀತಿ ಹುಚ್ಚಿಯಂತಾಗಿದ್ದಳು. ಒಂದೆರಡು ಸಲ ಮಾನಸಿಕ ಒತ್ತಡವನ್ನು ತಾಳಲಾರದೇ ಈರವ್ವ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆಗ ಅವಳನ್ನು ಮಗುವಿನಂತೆ ಕಾಪಾಡಿದ್ದು ಇದೇ ಕೆಪ್ಪಣ್ಣ. ಹಗಲು ರಾತ್ರಿ ಎನ್ನದೇ ಖಂಡಪ್ಪ ಡಾಕ್ಟರ್ ಮನೆ ಬಾಗಿಲು ಬಡಿದು ಅವರನ್ನು ಚಿಕಿತ್ಸೆಗಾಗಿ ಮನೆಗೆ ಕರೆ ತರುತ್ತಿದ್ದನು. ಕೆಪ್ಪಣ್ಣ ಎರಡು ತಿಂಗಳು ಸರಿಯಾಗಿ ನಿದ್ದೆಯೂ ಮಾಡದೇ ಈರವ್ವನ ಸೇವೆ ಮಾಡಿ ಆಕೆಯನ್ನು ಉಳಿಸಿಕೊಂಡನು. ಎರಡನೇ ಮಗುವಾದಾಗ ಈರವ್ವ ಬಲಹೀನತೆಯಿಂದ ಆರು ತಿಂಗಳು ಬಳಲಿದ್ದಳು. ಆಗಲೂ ಕೆಪ್ಪಣ್ಣ ಈರವ್ವನ ಸೇವೆ ಮಾಡಿ ಉಳಿಸಿಕೊಂಡಿದ್ದ. ಈಗ ಅವನಿಗೆ ಇಬ್ಬರು ಗಂಡು ಮಕ್ಕಳು ಸುಖವಾದ ಸಂಸಾರ. ದೊಡ್ಡ ಮಗನಿಗೆ ಊರಿನಲ್ಲಿ ಜಮೀನ್ದಾರ ಎಂಬ ಬಿರುದು ಚಿಕ್ಕ ಮಗ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ದೇಶ ವಿದೇಶವೆಲ್ಲಾ ಸುತ್ತುತ್ತಾನೆ. ಎಲ್ಲಾ ಕೆಪ್ಪಣ್ಣನ ದುಡಿಮೆಯ ಫಲ. ಈ ಫಲ ಅನುಭವಿಸುವ ಸಮಯ ಬಂದಾಗಲೇ ಕೆಪ್ಪಣ್ಣನಿಗೆ ತನ್ನ ಐವತ್ತೆರಡನೇ ವಯಸ್ಸಿನಲ್ಲಿ ಮಲರೋಗ, ವಾಸಿಯಾಗದ ಮಲರೋಗ ಎಲ್ಲಾ ವಿಧಿ ಲಿಖಿತ...
ಮೊನ್ನೆ ನಾನು ಊರಿಗೆ ಹೋದಾಗ ಕೆಪ್ಪಣ್ಣನ ಮನೆಯ ಮುಂದೆ ತರ್ಲೆ ಸಿದ್ದ ಕುಳ್ಳಿಗೆ ಬೆಂಕಿ ಹಾಕಿ ಹೊಗೆ ಎಬ್ಬಿಸುತ್ತಿದ್ದ. ಕೆಪ್ಪಣ್ಣನ ಮನೆಯಿಂದ ಅಳುವ ಶಬ್ಧ ಕೇಳಿಸುತ್ತಿತ್ತು. ಕೆಪ್ಪಣ್ಣನ ಹೆಣದ ಮುಂದೆ ಈರವ್ವ ಮುಗಿಲು ಮುಟ್ಟುವಂತೆ ರೋಧಿಸುತ್ತಿದ್ದಳು. ನಾನು ಈರವ್ವನನ್ನು ಸಮಾಧಾನ ಪಡಿಸುತ್ತಿದ್ದೆ. ತಂದೆ ಸತ್ತ ಸುದ್ದಿ ತಿಳಿದರೂ ದೊಡ್ಡಮಗ ಇನ್ನು ಬಂದಿರಲಿಲ್ಲ. ಅಪ್ಪನ ಮಲಬಾಧೆ ರೋಗಕ್ಕೆ ಸಾಕಾಗಿ ದೊಡ್ಡ ಮಗ ಹೆಂಡತಿ ಮಾತು ಕೇಳಿ ಬೇರೆ ಮನೆ ಮಾಡಿಕೊಂಡಿದ್ದ. ತರ್ಲೆ ಸಿದ್ದ ನಾಲ್ಕೈದು ಆಳುಗಳನ್ನು ಸೇರಿಸಿ ಚಟ್ಟ ರೆಡಿ ಮಾಡಿಸಿಟ್ಟು. ಸ್ಮಶಾನಕ್ಕೆ ಕಟ್ಟಿಗೆಯನ್ನು ಸಾಗಿಸಿದ್ದ. ನಂತರ ಬಂದ ದೊಡ್ಡ ಮಗ ಸ್ವಲ್ಪ ಸಮಯ ಕಣ್ಣೀರು ಹಾಕಿ ಮಣ್ಣಿನ ಮಡಕೆ ಹೊತ್ತು ಸ್ಮಶಾನದ ಕಡೆ ಹೆಜ್ಜೆ ಹಾಕುತ್ತಿದ್ದ. ಹಿಂದೆ ಕೆಪ್ಪಣ್ಣನು ಸಂಸಾರದ ಜಂಜಾಟವನ್ನೆಲ್ಲಾ ಮರೆತು, ಚಟ್ಟದ ಮೇಲೆ ಚಿರ ನಿದ್ರೆ ಮಾಡುತ್ತಾ ಸುಖವಾಗಿ ಅಂತಿಮ ಯಾತ್ರೆಗೆ ಹೊರಟಿದ್ದ. ಶವಸಂಸ್ಕಾರದ ಪದ್ದತಿಗಳೆಲ್ಲಾ ಮುಗಿಯಿತು. ಇನ್ನೇನು ಚಟ್ಟಕ್ಕೆ ಬೆಂಕಿ ಹತ್ತಿಸಬೇಕು ಎನ್ನುವಷ್ಟರಲ್ಲಿ ಚಿಕ್ಕ ಮಗ ಕಾರಿನಿಂದ ಇಳಿದು ಬಂದನು. ಮಕ್ಕಳಿಬ್ಬರೂ "ಅಪ್ಪಾ ..ಅಪ್ಪಾ.. ನಮ್ಮ ಕ್ಷಮಿಸಪ್ಪ" ಎಂದು ಹೇಳುತ್ತಾ ಕಾಲ ಬುಡದಲ್ಲಿ ಬಿದ್ದರು. ಮಕ್ಕಳಿಗೆ ವಿದ್ಯಭ್ಯಾಸ, ಆಸ್ಥಿ, ಎಲ್ಲವನ್ನು ಮಾಡಿಟ್ಟು ತನ್ನ ಕರ್ತವ್ಯ ಮಾಡಿ ಮುಗಿಸಿ ಕೆಪ್ಪಣ್ಣ ಸುಖವಾಗಿ ಮಲಗಿದ್ದ. ಇನ್ನೊಂದು ಕಡೆ ಮಕ್ಕಳು ವೃದ್ದ ತಂದೆ ತಾಯಿಯರಿಗೆ ಮಾಡಬೇಕಾದ ಕರ್ತವ್ಯಕ್ಕೆ ಲೋಪ ಬಗೆದು ತಮ್ಮ ಮನಸಾಕ್ಷಿಗೆ ದ್ರೋಹ ಬಗೆದು ಮಾನಸಿಕ ತೊಳಲಾಟದಿಂದ ಮಕ್ಕಳಿಬ್ಬರು ರೋಧಿಸುತ್ತಾ ನಿಂತಿದ್ದರು......

                                                                                          -ಪ್ರಕಾಶ್ ಎನ್ ಜಿಂಗಾಡೆ 

Friday, 25 March 2016

ಒಲವಿನ ಬಣ್ಣ

ಒಲವಿನ ಬಣ್ಣ...


ಅಂದು ಹೋಲಿ ಹಬ್ಬ. ರಂಗಿನ ಓಕುಳಿಯನ್ನು ಚೆಲ್ಲಲು ನಾನು ಶಾಲು ಮನೆಯ ಮುಂದೆ ಹೋಗಿ ನಿಂತೆ. ಕೈಯಲ್ಲಿ ಪಿಚಕಾರಿ ಹಿಡಿದು ನಿಂತು ಅವಳು ಆಗ ಹೊರಗೆ ಬರಬಹುದು, ಈಗ ಬರಬಹುದು ಎಂದು ನನ್ನ ಕಣ್ಣುಗಳು ಅವಳ ಮನೆಯ ಬಾಗಿಲ ಕಡೆಯೇ ನೋಡುತ್ತಿದ್ದವು. ನಾನು ಹಿಡಿದುಕೊಂಡು ನಿಂತಿದ್ದ ಪಿಚಕಾರಿಯನ್ನು ಆಕೆ ಟೆರೇಸ್ ಮೇಲಿನಿಂದಲೇ ನೋಡಿಬಿಟ್ಟರೆ...? ಎಂಬ ಅನುಮಾನವೂ ನನಗಿತ್ತು. ನಾನು ನಿಂತಿರುವುದನ್ನು ನೋಡಿದರೆ ಆಕೆ ಖಂಡಿತ ಹೊರಗೆ ಬರಲಾರಳು.. ಏನ್ಮಾಡೋದು ಹೇಳಿ ...ಬಣ್ಣತುಂಬಿದ ಆ ಪಿಚಕಾರಿಯನ್ನು ನಾನು  ರಾಜಾರೋಷವಾಗಿ ಹಿಡಿದು ಅವಳನ್ನು ಬಣ್ಣದಲ್ಲಿ ಮುಳುಗಿಸಲು ಅಲ್ಪ ಸ್ವಲ್ಪ ಸಹಾಸವೂ ಮಾಡಬೇಕಾಗುತ್ತದೆ. ನೇರವಾಗಿ ಮನೆಯೊಳಗೆ ನುಗ್ಗಿ ಬಣ್ಣ ಹಾಕುವ ಧೈರ್ಯವೂ ನನಗೆ ಇರಲಿಲ್ಲ. ಪಿಚಕಾರಿಯನ್ನು ಆಗಾಗ ಬೆನ್ನ ಹಿಂದೆಯೇ ಮುಚ್ಚಿಕೊಂಡು ಮರೆಮಾಚಿಸಲು ಪ್ರಯತ್ನಿಸುತ್ತಿದ್ದೆ. ಆಕೆಯ ದೇಹವನ್ನು ಸಂಪೂರ್ಣವಾಗಿ ವರ್ಣಮಯವನ್ನಾಗಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಬಂದಿದ್ದೆ. ನನ್ನ ಯೋಜನೆ ವಿಫಲವಾಗಬಾರದೆಂದು ನಾನು ತುಂಬಾ ಎಚ್ಚರಿಕೆಯಿಂದಲೇ ಇದ್ದೆ.

ಶಾಲೂ ತುಂಟಿ ಹುಡುಗಿ. ತುಂಟತನದಲ್ಲಿ ನನಗಿಂತಲೂ ಒಂದು ಕೈ ಮುಂದೆ. ಹೋದ ವರ್ಷ ಹೋಳಿ ಹಬ್ಬದಂದು ಮಾಡಿದ ಅವಳ ಆ ತುಂಟತನ ಹೇಗೆ ಮರೆಯಲು ಸಾದ್ಯ ಹೇಳಿ.?  ಕಳೆದ ಸಲ ಹೋಲಿ ಹಬ್ಬದಂದು ನಾನು ಇನ್ನು ಮಲಗಿರುವಾಗಲೇ ಬೆಳ್ಳಂಬೆಳಗ್ಗೆ ಸೀದ ಮನೆಯೊಳಗೆ ನುಗ್ಗಿ ನನ್ನನ್ನು ಎಬ್ಬಿಸಿ ನನ್ನನ್ನು ಮನೆಯಿಂದ ಹೊರಗೆ ಕರೆದು ರಂಗಿನ ಓಕುಳಿಯನ್ನು ಹಾಕಲು ಪ್ಲಾನ್ ಹಾಕಿಕೊಂಡೇ ಬಂದಿದ್ದಳು. ಎಂತಹ ಪ್ಲಾನ್ ಅಂತಿರಾ...? ಆ ಪ್ಲಾನ್ ಗೆ ಆಕೆಯ ಸುಂದರ ಮುಖ ಆಕೆಗೆ ಸಹಕಾರ ನೀಡಿತ್ತು. ನನ್ನನ್ನು ಮೋಸಗೊಳಿಸಿದ ಆವಳ ಆ ಸುಂದರ ರೂಪ, ಅವಳ ಆ ನಗುವಿಗೆ ಎಂಥವನಾದರೂ ಬೀಳದೇ ಇರಲು ಸಾಧ್ಯವಿರಲಿಲ್ಲ. ಅವಳ ಆ ಮುಗ್ದ ಸೌಂದರ್ಯದ ಹಿಂದೆ ನನ್ನನ್ನು ಮೋಸಗೊಳಿಸಿ ಓಕುಳಿ ಹಾಕಿದ ಆ ಘಟನೆ ಮರೆಯಲು ಸಾಧ್ಯವೇ ಇರಲಿಲ್ಲ. ಅವಳು ಆ ದಿನ ಅಪ್ಸರೆಯಂತೆ ಕಂಗೊಳಿಸುತ್ತಾ ನನ್ನ ಮುಂದೆ ಬಂದು ಕೆನ್ನೆಯ ವರೆಗೂ ಇಳಿಬಿದ್ದಿರುವ ತನ್ನ ಮುಂಗುರುಳನ್ನು ಸರಿಪಡಿಸಿಕೊಳ್ಳುತ್ತಾ...

"ಲೋ...ಪ್ರಕಾಶ,  ಪ್ಲೀಸ್ ಸ್ವಲ್ಪ ಐಶು ಮನೆಗೆ ಹೋಗಿ ಬರೋಣ ಬಾರೋ... ನಾಳೆ ಎಕ್ಸಾಮ್ ಇದೆ ಐಶು ಹತ್ರ ನೋಟ್ಸ ಇಸ್ಕೊಂಡ್ ಬರ್ಬೇಕಿತ್ತು... ಪ್ಲೀಸ್"

ಆಕೆ ಬೇಡಿಕೊಂಡ ಆ ಪರಿಯನ್ನು ನೋಡಿದರೆ ಒಪ್ಪಿಕೊಳ್ಳದಿರುವುದಕ್ಕೆ ಸಾಧ್ಯವೇ ಇರಲಿಲ್ಲ.
ಮುಗುಳ್ನಗೆಯನ್ನು ಬೀರುತ್ತಾ, ತನ್ನ ದೇಹವನ್ನು ಬಳ್ಳಿಯಂತೆ ಬಳುಕಿಸುತ್ತಾ ಹೇಳಿದಳು. ಇನ್ನೂ ಮಲಗ ಬೇಕೆಂದಿದ್ದ ನನಗೆ ಆಕೆಯ ಮುದ್ದು ಮುಖ ನೋಡಿದ ಕೂಡಲೇ ಎಂಥದೋ ಪುಳಕ ಮೈ ಮನವನ್ನೆಲ್ಲಾ ಆವರಿಸಿಕೊಂಡಿತ್ತು. ಹುಡುಗಿ ಬಂದು ಸಹಾಯ ಕೇಳಿದ್ರೆ ಯಾರು ಇಲ್ಲ ಅಂತಾರೆ ಹೇಳಿ...!! ಮೊದಲೇ ಹುಡುಗಿಯರು ಕೊಡುವ ಇಂತಹ ಅವಕಾಶಕ್ಕಾಗಿ ಎಷ್ಟೋ ಹುಡುಗರು ಕಾಯುತ್ತಿರುತ್ತಾರೆ. ಹಾಗಿರುವಾಗ ನಾನು ಬಿಟ್ಟೇನೇ...?
 ಅವಳನ್ನು ನನ್ನ ಬೈಕಿನ ಹಿಂದೆ ಕೂರಿಸಿಕೊಂಡು ಐಶು ಮನೆಯವರೆಗೂ ಹೋಗುವ ಆ ಕಲ್ಪನೆ ಇದೆಯಲ್ಲಾ... ಆ ಕ್ಷಣದಿಂದಲೇ ನನ್ನ ಮೆದುಳಿನಲ್ಲಿ ದೃಶ್ಯದಂತೆ ಕಣ್ಣ ಮುಂದೆ ಬರಲಾರಂಬಿಸಿತು. ನಾನು ಮುಂದೆ, ನನ್ನ ಹಿಂದೆ ಅವಳು... ಹಂಪ್ ಬಂದಾಗ ಬ್ರೇಕ್ ಹಾಕಿದ ಕೂಡಲೇ ನನ್ನನ್ನು ಗಟ್ಟಿಯಾಗಿ ತಬ್ಬಿ ಹಿಡಿಯುವ ಆ ಸನ್ನಿವೇಶ... ಆಹಾ..! ಆ ನೆನಪೇ ಎಂತಹ ಮಜಾ..
ಬೇಗ ಬೇಗನೆ ಎದ್ದು ಷರಟನ್ನು ಹಾಕಿಕೊಂಡೆ...

"ಈ ಷರಟು ಬೇಡ ಕಣೋ... ಮೊನ್ನೆ ಹೊಸದಾದ ಬಿಳಿ ಷರಟ್ ತಗೊಂಡಿದ್ದೆಯಲ್ಲ ಅದನ್ನೇ ಹಾಕ್ಕೊ ನೀನು ಅದರಲ್ಲಿ ತುಂಬಾ ಚನ್ನಾಗಿ ಕಾಣಿಸ್ತಿಯಾ" ಅಂದ್ಲು

ಬಿಳಿ ಷರ್ಟಲ್ಲಿ ನಾನು ಅಷ್ಟೊಂದು ಸುಂದರವಾಗಿ ಕಾಣಿಸುತ್ತನೆಯೇ..? ಆ ಮಾತು ಕೇಳಿ ಕರ್ಣಾನಂದವಾಯಿತು. ಮನಸು ಹುಚ್ಚೆದ್ದು ಕುಣಿಯಿತು. ಅದೂ ಶಾಲೂ ಅಂತಹ ಸುಂದರ ಹುಡುಗಿಯಿಂದ ಹೊಗಳಿಕೆ ಬೇರೆ. ನನಗೆ ಸ್ವರ್ಗಕ್ಕೆ ಮೂರೇ ಗೇಣು.. ಒಂದುವರೆ ಸಾವಿರ ರೂಪಾಯಿ ಕೊಟ್ಟು ಖರೀದಿಸಿದ ನನ್ನ ತುಂಬಾ ಇಷ್ಟದ ಬಿಳಿ ಷರಟನ್ನು ತೆಗೆದು ಹಾಕಿಕೊಂಡೆ. ಕಣ್ಣು ಕುಕ್ಕುವಂತಹ ಆ ಶುಭ್ರ ಬಿಳಿ ಷರಟಿನಲ್ಲಿ ನಾನು ಅಪ್ಪಟ ಮದು ಮಗನಂತೆ ಕಾಣುತ್ತಿದ್ದೆ. ನನ್ನನ್ನು ಅವಳು ಕೈಹಿಡಿದು ಕೊಂಡೇ ಹೊರಗೆ ಕರೆದೊಯ್ಯುತ್ತಿದ್ದಳು. ನಾನು ಮದುಮಗನಾದರೆ ಆಕೆ ಮದುಮಗಳಾಗಿ ನನ್ನ ಕೈಹಿಡಿದುಕೊಂಡು ಸಪ್ತಪದಿ ಹಾಕುತ್ತಿರುವಳೋ ಎಂಬಂತೆ ಬಾಸವಾಯಿತು...
ಸುಮಾರು ಏಳು ಹೆಜ್ಜೆ ಪೂರ್ಣಗೊಂಡಿತ್ತು. ಆಷ್ಟರಲ್ಲಿ ನಾನು ನನ್ನ ಮನೆಯ ಹೊರಗಿನ ಗೇಟ್ ವರಗೆ ಬಂದು ನಿಂತಿದ್ದೆ. ಮೊದಲೇ ಹಾಕಿಕೊಂಡ ಪ್ಲಾನ್ ನಂತೆ ಶಾಲೂ ತನ್ನ ಗೆಳತಿ ಐಶು ಮತ್ತು ತಮ್ಮ ಬಾಲು ಜೊತೆ ಸೇರಿಕೊಂಡು ನನ್ನ ಮೇಲೆ ರಂಗಿನ ಮಳೆಗೆರೆದರು. ಅವರ ರಂಗು ರಂಗಿನ ಆ ಓಕುಳಿಗೆ ನಾನು ಸಂಪೂರ್ಣವಾಗಿ ಬಣ್ಣದಲ್ಲಿ ಮುಳುಗಿ ಹೋಗಿದ್ದೆ. ನಾನು ಇಷ್ಟ ಪಟ್ಟು ಖರೀದಿಸಿದ ಬಿಳಿ ಷರಟು ಹಾಳಾಗಿದ್ದು ನನಗೆ ತಂಬಾ ನೋವನ್ನುಂಟು ಮಾಡಿತ್ತು. ಆ ತರಲೆ ಶಾಲೂ ನನ್ನ ಹೊಸ ಷರಟನ್ನು ಟಾರ್ಗೆಟ್ ಮಾಡಿ ಹಾಳು ಮಾಡಿದ್ದಳು. ಅದಕ್ಕೆ ನನ್ನಮ್ಮಳು ಸಹ ಅವಳಿಗೆ ಸಾಥ್ ನೀಡಿದ್ದಳು.

"ಪಾಪ ಹುಡುಗಿ.... ನಿನಗೆ ತಮಾಷೆ ಮಾಡದೇ ಇನ್ನಾರಿಗೆ ಮಾಡುತ್ತಾಳೋ..?"

ಎಂದು ಹೇಳಿ ಅಮ್ಮ ನನ್ನ ಕೋಪವನ್ನು ಶಾಂತಗೊಳಿಸಿದಳು.

"ತಮ್ಮನ ಮಗಳು ಅಂತ ಜಾಸ್ತಿ ಸಲುಗೆ ಕೊಟ್ಟಿದ್ದೀಯಮ್ಮ... ಇರಲಿ ನನಗೂ ಟೈಮ್ ಬರುತ್ತೆ"

ಪ್ರತಿಕಾರದ ಧ್ವನಿಯಲ್ಲೇ ಹೇಳಿದೆ...

ಶಾಲೂ ಇನ್ನು ಅಲ್ಲೇ ನಗುತ್ತಾ ನಿಂತಿದ್ದಳು. ಅಲ್ಲೇ ಅಮ್ಮ ನಲ್ಲಿಯ ಕೆಳಗೆ ಒಂದು ಬಕೆಟ್ ನೀರನ್ನು ತುಂಬಿ ಇಟ್ಟಿದ್ದಳು. ತಕ್ಷಣ ಶಾಲೂವಿನ ಕೈ ಹಿಡಿದೆಳೆದು ಆ ಬಕೇಟ್ ನೀರನ್ನು ಅವಳ ತಲೆಯ ಮೇಲೆ ಸುರಿದು ಬಿಟ್ಟೆ...
ಅವಳು 'ಅಯ್ಯೊ ಬಿಡೊ' ಎನ್ನುತ್ತಾ ನನ್ನ ಬಿಗಿ ಹಿಡಿತದಿಂದ ನುಣುಚಿಕೊಂಡು ಓಡಿದಳು ಬಟ್ಟೆಯಲ್ಲಾ ಒದ್ದೆಯಾಗಿತ್ತು. ಮೈ ಗಂಟಿಗಂಡಿದ್ದ ಅವಳ ಆ ಒದ್ದೆ ಬಟ್ಟೆಯನ್ನು ನೋಡಿ ನಾನು ಕ್ಷಣಕಾಲ ರೋಮಾಂಚಿತನಾದೆ....ಅವಳು ಹಾಕಿದ್ದ ತೆಳು ಬಟ್ಟೆಯು ರೇಷ್ಮೆಯಂತಹ ಅವಳ ಮೈಯೊಂದಿಗೆ ಬಿಗಿಯಾಗಿ ಅಪ್ಪಿಕೊಂಡಿತ್ತು. ಬೇಲೂರಿನ ಶಿಲಾಬಾಲಿಕೆ ನೆನಪಾದದ್ದು ಸುಳ್ಳಲ್ಲ. ಹೆಣ್ಣನ್ನು ನಾಜೂಕಾಗಿ ಕಡೆದ ಆ ಶಿಲ್ಪಿ ಅದೆಂತ ಅದ್ಭುತ ಕಲೆಗಾರ. ಹೆಣ್ಣನ್ನು ಸುಂದರವಾಗಿ ಚಿತ್ರಿಸಿ ಗಂಡನ್ನು ಆಕರ್ಷಿಸುವಂತಹ ಆ ಸಮ್ಮೋಹನ ಲೀಲೆಯನ್ನು ಅವಳಲ್ಲಿ ಅದು ಹೇಗೆ ಬೆರೆಸಿ ಸೃಷ್ಠಿಸಿದನೋ...!!!  ಆ ದಿನ ಶಾಲೂ ವನ್ನು ಮರೆಯಲಾಗಲಿಲ್ಲ. ಶಾಲೂಗೆ ಮದುವೆಯಾಗುವಂತೆ ಅಮ್ಮ ಹಲವು ಸಲ ಬೇಡಿಕೆಯಿಟ್ಟಿದ್ದರೂ ನಾನು ನಿರಾಕರಿಸಿದ್ದೆ. ಆದರೆ ಈ ದಿನ ಶಾಲೂ ಮನಸಿಗೆ ತೀರ ಹತ್ತಿರವಾಗಿದ್ದಳು. ಪ್ರಕೃತಿಯ ಸಹಜವಾದ ನೈಜ ಆಕರ್ಷಣೆ ಶಾಲೂವಿನ ಮೇಲಾಯಿತು.ಅಂದಿನಿಂದ ಶಾಲೂ ಮನಸ್ಸಿಗೆ ಹತ್ತಿರವಾದಂತೆ ಬಾಸವಾಯಿತು. ಅಮ್ಮ ಶಾಲೂ ಮತ್ತು ನನ್ನ ಮದುವೆಯ  ಬಗ್ಗೆ ಮತ್ತೆ ನನಗೆ ಕೇಳಬಹುದೇನೋ ಎಂದು ನಿರೀಕ್ಷಿಸಿದ್ದೆ. ಆದರೆ ಅಮ್ಮ ಕೇಳಲೇ ಇಲ್ಲ. ಇಷ್ಟು ದಿನ ಮದುವೆ ನಿರಾಕರಿಸುತ್ತಲೇ ಬಂದ ನಾನು ಶಾಲೂವಿನ ಪ್ರೀತಿಯವಿ ಬಿದ್ದಿದ್ದೆ.  ಶಾಲೂ ಮಾತ್ರ ಅಂದು ನನ್ನ ಹೃದಯವನ್ನೇ ಕದ್ದಿದ್ದಳು....

ಹಿಂದಿನ ವರ್ಷದ ಈ ಘಟನೆ ಮತ್ತೆ ಮನಸಿಗೆ ಮುದ ನೀಡುತ್ತಿತ್ತು. ಈ ವರ್ಷ ಹೋಳಿ ಬಂದಾಗ ಪದೇ ಪದೇ ಆ ನನ್ನ ಬಿಳಿ ಷರಟು ನೆನಪಿಗೆ ಬಂದಿತು. ಹಿಂದಿನ ವರ್ಷ ಶಾಲೂ ನನ್ನ ಮೇಲೆ ಓಕುಳಿ ಹಾಕಿದಂತೆ ನಾನೂ ಮೋಸದಿಂದ ಹಾಕಲು ನಿರ್ಧರಿಸಿದೆ ಹಿಂದಿನ ವರ್ಷದ ಸೇಡು ತೀರಿಸಿಕೊಳ್ಳುವುದು ಬೇಡವೇ... ನಾನು ಕೂಡ ಪ್ಲಾನ್ ಮಾಡಿಕೊಂಡು ಅವಳ ಮನೆಯ ಗೇಟಿನ ಬಳಿ ಇರುವ ಮರದ ಮರೆಯಲ್ಲಿ ನಿಂತುಕೊಂಡು ಕಾಯುತಲಿದ್ದೆ. ಕಳೆದ ವರ್ಷ ಬಣ್ಣಗಳಿಂದ ಹಾಳಾಗಿದ್ದ ಅದೇ ಬಿಳಿ ಬಣ್ಣದ ಷರಟನ್ನು ಹಾಕಿಕಂಡಿದ್ದೆ. ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಮನೆಯ ಆಚೆಗಿನ ತುಳಸಿ ಕಟ್ಟೆಯ ಹತ್ತಿರ ಕುಳಿತು ಓದುತ್ತಿದ್ದ ಅವಳು ಈ ದಿನ ಬರಲೇ ಇಲ್ಲ.ಮನೆಯೊಳಗೆ ಕಳ್ಳ ದೃಷ್ಠಿ ಬೀರಿದೆ. ಮನೆ ಶಾಂತವಾಗಿತ್ತು. ಎಷ್ಟು ಸಮಯವಾದರೂ ಕಾದು ಶಾಲೂವಿನ ಮೈಯನ್ನು ರಂಗು ರಂಗಿನ ಬಣ್ಣದಿಂದ ಒದ್ದೆ ಮಾಡಬೇಕು. ಹೊರಗೆ ಬಂದೇ ಬರುತ್ತಾಳೆ ನೋಡೋಣ ಎಂದು  ಮರದ ಮರೆಯಲ್ಲಿ ಕಾಯುತ್ತಲೇ ಇದ್ದೆ... 

ನನ್ನ ಹಿಂದೆ ಏನೋ ಸದ್ದಾಯಿತು. ತಕ್ಷಣ ತಿರುಗಿ ನೋಡಿದೆ. ಪಿಚಕಾರಿಯ ಕೊಳವೆಯಿಂದ ಎರಗಿ ಬಂದ ಕೆಂಪು ಬಣ್ಣವೊಂದು ಮುಖಕ್ಕೆ ಅಪ್ಪಳಿಸಿತು. ಇನ್ನೊಂದು ಪಿಚಕಾರಿಯಿಂದ ಬಂದ ನೇರಳೆ ಬಣ್ಣದ ನೀರು ನನ್ನ ಬಟ್ಟೆಯನ್ನು ರಂಗಾಗಿಸಿತು. ಮತ್ತೊಂದರಿಂದ ಬಂದ ಹಳದಿ ಬಣ್ಣದ ನೀರು ನನ್ನ ದೇಹವನ್ನು ತೊಯ್ದು ತೆಪ್ಪೆಯಾಗಿಸಿತು. ನನ್ನ ಹಿಂದೆ ಶಾಲೂ, ಐಶು, ಮತ್ತು ಬಾಲು ನನ್ನ ಮೇಲೆ ಮೂರು ಮೂರು ಪಿಚಕಾರಿಯನ್ನು ಹಿಡಿದು ರಂಗಿನ ನೀರನ್ನು ನನ್ನ ಮೇಲೆರೆದು ನಗುತ್ತಾ ನಿಂತಿದ್ದರು. ನಾನು ಹಿಂದಿನ ವರ್ಷದಂತೆಯೇ ಶಾಲೂವಿನ ಮುಂದೆ ಮತ್ತೆ ಮೋಸಹೋದೆ. ನನ್ನ ಮತ್ತು ಶಾಲೂವಿನ ಮದುವೆ ಕೇವಲ ಇನ್ನೊಂದು ವಾರ ಮಾತ್ರ ಉಳಿದಿತ್ತು. ಈ ಸಮಯದಲ್ಲಿ ಶಾಲೂ ನಾಚಿಕೆಯಿಂದ ಇರುವಳು. ಈ ಸಮಯವನ್ನು ನಾನೇ ಸದೂಪಯೋಗ ಪಡಿಸಿಕೊಂಡು ಶಾಲೂ ಮೇಲೆ ರಂಗಿನ ಮಳೆಗೆರೆಯಬಹುದು ಎಂದು ಕೊಂಡಿದ್ದೆ. ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ನಾನು ಶಾಲೂವಿನಿಂದ ಮತ್ತೆ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದಿತ್ತೇನೋ... ಶಾಲೂ ಹಾಗೆ ಮಾಡಲಾರಳು ಎಂದು ಭಾವಿಸಿದ್ದೇ ನನ್ನ ತಪ್ಪಾಯಿತು. ಏನೇ ಆಗಲಿ ಪ್ಲಾನ್ ಮಾಡಿ ನನ್ನಂತಹ ಹುಡುಗರನ್ನು ಯಾಮಾರಿಸುವುದರಲ್ಲಿ  ಹುಡುಗಿಯರು ಎತ್ತಿದ ಕೈ. ನನ್ನ ಕೈಗೆ ಸಿಕ್ಕಿದ್ದರೆ ಆಕೆಯನ್ನು ನನ್ನ ಎದೆಯ ಗೂಡಿನಲ್ಲಿ ಬಿಗಿಯಾಗಿ ಬಂಧಿಸಬೇಕೆಂದಿದ್ದೆ.  ಅವಳ ಕೈ ಹಿಡಿದುಕೊಂಡು ಬರ ಸೆಳೆದುಕೊಂಡೆ. ಇನ್ನೇನು ನನ್ನ ಬಾಹು ಬಂಧನದಲ್ಲಿ ಬಂಧಿಯಾಗಿ ನಾಚಿಕೆಯಿಂದ ಕರಗುವಳೆನೋ ಎನ್ನುವಾಗಲೇ. ಆಕೆ ನನ್ನಿಂದ ನುಣುಚಿಕೊಂಡು ದೂರ ಸರಿದು ಕೊಲೆಗಾರನಿಗೆ ಬಂದೂಕು ಹಿಡಿದು ನಿಂತಂತೆ ನನ್ನ ಎದೆಯನ್ನು ಗುರಿಯಾಗಿರಿಸಿಕೊಂಡು ಮತ್ತೆ ಪಿಚಕಾರಿಯನ್ನು ಹಿಡಿದು ನಿಂತಳು.

ಆಕೆಯ ಮೈ ಮೇಲೆ ಒಂಚೂರು ಹೋಳಿಯ ರಂಗು ತಾಕಿರಲಿಲ್ಲ. ಆದರೂ ಶಾಲೂ ತನ್ನ ಸಹಜ ಸೌಂದರ್ಯದಿಂದ ನನ್ನ ಕಣ್ಣಿಗೆ ಕಲರ್ ಫುಲ್ ಆಗಿ ಕಾಣುತ್ತಿದ್ದಳು. ನಾಚಿಕೆಯ ಆಭರಣ ಧರಿಸಿದ್ದ ಅವಳ ಮುಖ ಬೆಳದಿಂಗಳ ಚಂದಿರನಂತೆ ಬಿಳುಪಾದ ಹಾಲಿನ ಬಣ್ಣ ಪಡೆದಿತ್ತು. ರೇಷಿಮೆಯಂತಹ ಅವಳ ಕೆನ್ನೆಯು ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಆಸೆಯ ಕುಡಿನೋಟದ ಅವಳ ಕಣ್ಣುಗಳು ನೀಲಾಕಾಶದ ಬಣ್ಣದಿಂದ ಮುಳುಗಿತ್ತು. ಜೇನಿನ ಅಧರವಾಗಿದ್ದ ಅವಳ ತುಟಿಗಳು ತೊಂಡೆ ಹಣ್ಣಿನ ಕೆಂಪು ರಂಗನ್ನು ಪಡೆದಿತ್ತು. ಗಾಳಿಯೊಂದಿಗೆ ಸರಸವಾಡುತ್ತಿರುವ ಅವಳ ಮುಂಗುರುಳಿನದು ಕಪ್ಪು ಮೊಡದ ಬಣ್ಣ. ಅವಳು ಕುಣಿದು ಕುಪ್ಪಳಿಸುವಾಗ ನವಿಲುಗರಿಯ ಬಣ್ಣ. ನಡೆಯುವಾಗ ವಸುಂದರೆಯ ಹಸಿರ ಬಣ್ಣ. ತುಂಟತನದಲ್ಲಿ ಕಾಮನ ಬಿಲ್ಲಿನ ಏಳು ಬಣ್ಣ. ಒಟ್ಟಾರೆ  ಅವಳು ಬಣ್ಣಗಳ ಮಿಶ್ರಣ, ಅವಳ ಪಿಚಕಾರಿಯಿಂದ ಅಪ್ಪಳಿಸಿ  ಬಂದ ಬಣ್ಣಗಳಿಂದ ಮಿಂದ  ನಾನು ಅವಳದೆ ಬಣ್ಣಗಳ ಸಮ್ಮಿಶ್ರಣ.....

                                                                                           - ಪ್ರಕಾಶ್ ಎನ್ ಜಿಂಗಾಡೆ

Thursday, 3 March 2016

ದೇವರು ಧರ್ಮ

ದೇವಸ್ಥಾನದಲ್ಲಿ ಘಂಟೆಯ ಸದ್ದು ಕೇಳಿಸುತ್ತಿತ್ತು. ಬಹುಷಃ ಸ್ವಲ್ಪ ಲೇಟಾಗಿ ಬಂದಿರಬಹುದು ಎಂದುಕೊಂಡು ಆತುರವಾಗಿ ಹೆಜ್ಜೆ ಹಾಕಿದೆ. ಬುಟ್ಟಿಯಲ್ಲಿ ತಂದ ಹಣ್ಣು ಕಾಯಿಗಳೊಂದಿಗೆ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿ ಒಳಗೆ ಪ್ರವೇಶಿಸಿದೆ. ಮಹಾಮಂಗಳಾರತಿಯ ದಿವ್ಯ ಪ್ರಭೆಯು ಪ್ರಾಂಗಣದ ತುಂಬೆಲ್ಲಾ ಪ್ರಜ್ವಲಿಸುತ್ತಿತ್ತು. ಮಿಂಚಿನ ಆ ಬೆಳಕಲ್ಲಿ ಭಕ್ತಿ ಪೂರ್ವಕವಾಗಿ ತಲ್ಲೀನ ಗೊಂಡಿರುವಾಗಲೇ ಮುದ್ದಾದ ಮುಖವೊಂದು ಕಣ್ಣ ಮುಂದೆ ಬಂದಂತಾಯಿತು. ಎಲ್ಲೋ ನೋಡಿದ ಪರಿಚಿತ ಎಂದೆನಿಸಿತು. ಆಕೆಯ ಗುಲಗಂಜಿಯಂತಿರುವ ಕಣ್ಣುಗಳ ಮೇಲೆ ನವಿಲು ಗರಿಯನ್ನು ಇಟ್ಟು ಯಾರೋ ಹುಬ್ಬುಗಳನ್ನು ತಿದ್ದಿ ತೀಡಿದ್ದಾರೆ ಎಂದೆನಿಸಿತು. ಕೆನ್ನೆಗಳು ಗುಲಾಬಿ ರಂಗಿನ ಹೊಳಪನ್ನು ಧರಿಸಿದ್ದವು. ಅಧರಗಳು ಜೇನು ಸವರಿದ ಒದ್ದೆಯಂತೆ ಫಳ ಫಳಿಸುತ್ತಿದ್ದವು.  ಬಯಸದ ಸೌಂದರ್ಯವೊಂದು ಕಣ್ಣ ಮುಂದೆ ಬಂದು ನನ್ನ ಮನಸನ್ನು ಪುಳಕಿತಗೊಳಿಸಿತು. ಆಕೆಯನ್ನು ದಿಟ್ಟಿಸಿ ನೋಡಿದೆ.

"ಅರೆ... ನೀವು ಸಲೋನಿ...!!  ಮೊನ್ನೆ ಚರ್ಚ್ ನಲ್ಲಿ  ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲವೆ...?"

ಎಂದು ಆಶ್ಚರ್ಯದಿಂದ ಕೇಳಿದೆ

"ಹೂಂ....ಹೌದು.... "
ಎಂದಳು

"ಮೊನ್ನೆ ಚರ್ಚ್ ಎದುರುಗಡೆಯ ಹಾಲ್ ನಲ್ಲಿ ನಡೆದ ನ್ಯಾನ್ಸಿಯ ಮದುವೆಗೆ ನಾನು ಬಂದಿದ್ದೆ... ಆಗ ನಿಮ್ಮನ್ನು ನೋಡಿದ್ದೆ... .. ಆಗ ನ್ಯಾನ್ಸಿ ನನ್ನ ಪರಿಚಯಿಸಿದ್ದು ನೀವು ಮರೆತಿರಬೇಕು"
ಎಂದೆನು.

"ಇಲ್ಲ, ಇಲ್ಲ , ಮರೆತಿಲ್ಲ....ನಿಮ್ಮ ಹೆಸರು ಪ್ರಕಾಶ್, ನೀವು ಬರೆಯುತ್ತಿರುವ ಪಿ,ಹೆಚ್,ಡಿ ಪ್ರಬಂಧಕ್ಕೆ ನನ್ನ ಸಹಾಯ ಕೇಳಲು ಬಂದಿದ್ರಿ ಅಲ್ಲವೇ....? "

ಸಲೋನಿ ನನ್ನ ನೆನಪಿಸಿಕೊಂಡು ಹೇಳಿದಳು.

"ಹೌದು... ಅಂದು ನೀವು ಕೊಟ್ಟ ಕೆಲವು ಮಾಹಿತಿಗಳು ನನ್ನ ಪ್ರಬಂದಕ್ಕೆ ಅನುಕೂಲವಾಯಿತು
 "ಆದರೆ ನೀವು ಈ ದೇವಸ್ಥಾನದಲ್ಲಿ...?"
ಅನುಮಾನದಿಂದ ಕೇಳಿದೆ.

"ಯಾಕೆ..? ಬರಬಾರದೇನು...? ಚರ್ಚ್ ನಲ್ಲಿ ಪ್ರಾರ್ಥಿಸುವವಳು ದೇವಸ್ಥಾನದಲ್ಲಿ ಅಂತ ಅನುಮಾನನಾ...?"

ನಗುತ್ತಾ ಕೇಳಿದಳು. ಆಕೆಯ ಆ ನಗು ಮಿಂಚಿನ ಬೆಳಕು ಚೆಲ್ಲಿದಂತಿತ್ತು.

ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠ ಎಂದು ಕಿತ್ತಾಡಿಕೊಳ್ಳುವ ಈ ಸಮಾಜದಲ್ಲಿ ಅನ್ಯ ಧರ್ಮವನ್ನು ಗೌರವಿಸುವ ಸಲೋನಿಯಂತಹ ಹುಡುಗಿಯನ್ನು ಕಂಡರೆ ಆಶ್ಚರ್ಯವಾಗುವುದೇನೋ ಸಹಜ.

" ಹಾಗೇನಿಲ್ಲ .. ಬರಬಹುದು, ಕೆಲವರು ವಿಗ್ರಹಾರಾದನೆಯನ್ನು ನಂಬುವುದಿಲ್ಲವಲ್ಲ. ಅದಕ್ಕೆ ಕೇಳಿದೆ"
ಎಂದು ಸಮಾಧಾನದಿಂದ ಉತ್ತರಿಸಿದೆ.

"ನೋಡಿ ದೇವರು ಮೂರ್ತ ಸ್ವರೂಪವೋ, ಅಮೂರ್ತ ಸ್ವರೂಪವೋ ನನಗೆ ತಿಳಿಯದು, ನನ್ನ ಪ್ರಕಾರ ದೇವರು ಒಬ್ಬನೆ, ದೈವ ಶಕ್ತಿ ಇರುವುದೂ ಒಂದೇ ಎಂದು ನಂಬಿದವಳು ನಾನು. ಕೆಲವರು ಅದನ್ನೇ ವಿಭಿನ್ನ ಹೆಸರಿನಲ್ಲಿ, ವಿಭಿನ್ನ ಧರ್ಮದ ಅಡಿಯಲ್ಲಿ ಆರಾಧಿಸುತ್ತಾರೆ. ಕೆಲವರು ಆ ಶಕ್ತಿಯನ್ನು ವಿಗ್ರಹದ ರೂಪದಲ್ಲಿ  ಪೂಜಿಸಿದರೆ, ಮತ್ತೆ ಕೆಲವರು ಅದೇ ಶಕ್ತಿಯನ್ನು ಅಮೂರ್ತ ಸ್ವರೂಪದಲ್ಲಿ ಪೂಜಿಸುತ್ತಾರೆ. ಇರುವ ಭೂಮಿಯೂ ಒಂದೇ... ಕುಡಿವ ನೀರು ಒಂದೇ... ವಾಯು,ಅಗ್ನಿ, ಸೂರ್ಯ, ಚಂದ್ರ, ಆಕಾಶ, ಗ್ರಹ, ತಾರೆ, ಇಡೀ ಜಗತ್ತು ಎಲ್ಲವೂ ಎಲ್ಲರ ಕಣ್ಣಿಗೆ ಒಂದೇ ರೀತಿಯಾಗಿ ಕಾಣುತ್ತಿರಬೇಕಾದರೆ, ದೇವರು ಮಾತ್ರ ಬೇರೆ ರೀತಿಯಾಗಿ ಕಾಣಲು ಹೇಗೆ ಸಾದ್ಯ ಹೇಳಿ...? ಗುರಿ ತಲುಪಲು ಯಾವ ಮಾರ್ಗ ಆರಿಸಿಕೊಂಡರೇನು.. ? ಎಷ್ಟೋ ಜನ ಮಾರ್ಗ ಮಧ್ಯದಲ್ಲಿಯೇ ನನ್ನ ದಾರಿಯೇ ಶ್ರೇಷ್ಠವೆಂದು ವಾದಿಸಿ, ಜಗಳ ಮಾಡಿ, ಇನ್ನೊಬ್ಬರನ್ನು ತೊಂದರೆಗೆ ಸಿಲುಕಿಸಿ, ತಾವು ತೊಂದರೆಗೆ ಸಿಲುಕುತ್ತಾರೆ. ಇಂಥವರು ಗುರಿ ಕಾಣದೇ ಪರಿತಪಿಸುತ್ತಾರೆ. ಮಾರ್ಗಕ್ಕಿಂತ ಗುರಿ ಮುಖ್ಯವಲ್ಲವೇ..?"

ಸಲೋನಿ ಹಾಗೆ ಹೇಳಬೇಕಾದರೆ. ಆಕೆ ಬರೆದ 'ದೇವರು ಮತ್ತು ಧರ್ಮ' ಎಂಬ ಪುಸ್ತಕ ಓದಿದ ನೆನಪು ಬಂದಿತು. ಆಕೆ ಧರ್ಮದ ಬಗ್ಗೆ ಬರೆದ ಆ ಪುಸ್ತಕ ಎಲ್ಲಾ ಧರ್ಮದವರನ್ನು ಬೆರಗು ಗೊಳಿಸಿತ್ತು. ಆ ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವೂ ಬಂದಿತ್ತು. ಆ ಪುಸ್ತಕ ಓದಿದಾಗಿನಿಂದ ನಾನು ಅವಳ ಅಭಿಮಾನಿಯಾಗಿ ಬಿಟ್ಟೆ. ಚಿಕ್ಕ ವಯಸ್ಸಿನಲ್ಲಿಯೇ ಅದೆಂತಹ ಸಾದನೆ ಅವಳದು. ನ್ಯಾನ್ಸಿಯ ಮದುವೆಯಲ್ಲಿ  ಬರಹಗಾರ್ತಿ ಸಲೋನಿ ಬರುತ್ತಾಳೆ ಎಂಬ ವಿಷಯ ಗೊತ್ತಾದ ಕೂಡಲೇ ಸಲೋನಿಯನ್ನು ನನಗೆ ಪರಿಚಯಿಸುವಂತೆ ನ್ಯಾನ್ಸಿಯನ್ನು ಒಂದು ವಾರದಿಂದ ದಂಗಾಲು ಬಿದ್ದಿದ್ದೆ.

"ನನ್ನ ಮದುವೆಗಿಂತ ಸಲೋನಿ ಪರಿಚಯವೇ ನಿನಗೆ ಮುಖ್ಯವೇ...?  ಹಾಗಿದ್ದರೆ ನನ್ನ ಮದುವೆಗೆ ನೀನೇನು ಬರುವುದು ಬೇಡ"

ಎಂದು ನ್ಯಾನ್ಸಿ ನನಗೆ ಹಲವು ಸಲ ಬೈದಿದ್ದಳು. ಆದರೂ ಬೆನ್ನು ಬಿಡದ ಬೇತಾಳದಂತೆ ನ್ಯಾನ್ಸಿಯನ್ನು ಒಪ್ಪಿಸಿ ಸಲೋನಿಯನ್ನು ಪರಿಚಯ ಮಾಡಿಕೊಂಡಿದ್ದೆ. ಅದಕ್ಕೆ ಒಂದು ಕಾರಣವೂ ಇತ್ತು. ನಾನು ಬರೆಯ ಹೊರಟಿದ್ದ  "ಧರ್ಮದ ತತ್ವ ಮತ್ತು ಸಿದ್ಧಾಂತಗಳು"  ಎಂಬ ಪಿ,ಹೆಚ್,ಡಿ, ಪ್ರಬಂಧಕ್ಕೆ ಸಲೋನಿಯ ಸಹಾಯ ನನಗೆ ಅವಶ್ಯವಾಗಿತ್ತು.

ಇಂದು ಸಲೋನಿಯು ಮತ್ತೆ ದೇವಸ್ಥಾನದಲ್ಲಿ ಸಿಕ್ಕಿದ್ದು ನನ್ನ ಮತ್ತು ಅವಳ ಗೆಳೆತನ ಇನ್ನಷ್ಟು ಭದ್ರವಾಯಿತು.  ಧರ್ಮದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಬೇಕೆನಿಸಿದರೂ ಆ ಕ್ಷಣಕ್ಕೆ ನನ್ನ ತಲೆಗೆ ಏನೂ ಹೊಳೆಯಲಿಲ್ಲ. ಆಕೆಯ ಮದ್ದಾದ ಮುಖವು ನನ್ನ ಮನಸ್ಸನ್ನು ಆಗಾಗ ವಿಷಯಾಂತರ ಮಾಡಿಸುತ್ತಿತ್ತು. ಕಣ್ಣುಗಳು ನಾಚಿಕೊಂಡು ಅತ್ತಿತ್ತ ನೋಡುವಂತೆ ನಟಿಸುತ್ತಿದ್ದವು.

"ಸರಿ ನಾನು ಬರುತ್ತೇನೆ"

ಎಂದು ಹೇಳಿ ಸಲೋನಿ ದೇವಾಲಯದ ಮೆಟ್ಟಿಲು ಇಳಿದಳು. ಹಾಗೆ ಇಳಿಯುವಾಗ ಆಕೆಯ ಗೆಜ್ಜೆಯ ಸದ್ದು ಎದೆಯೊಳಗೆ ನನ್ನ ಎದೆಯೊಳಗೆಯೇ ಮಾರ್ಧನಿಸಿದಂತಾಯಿತು. ಎದೆಯಲ್ಲಿ ಎಂಥದೊ ತಕಧಿಮಿತದ ಮಧುರ ರಾಗ ಮೀಟಿ ಹೋದಂತಾಯಿತು..

ಸಲೋನಿ ಮತ್ತೆ ನನಗೆ ಭೇಟಿಯಾಗಿದ್ದು ನ್ಯಾನ್ಸಿಯ ಮನೆಯಲ್ಲಿ. ಕ್ರಿಸ್ ಮಸ್ ಹಬ್ಬಕ್ಕೆಂದು ನ್ಯಾನ್ಸಿ ನನ್ನನ್ನು ಕರೆದಿದ್ದಳು. ಅಲ್ಲಿಗೆ ಸಲೋನಿಯೂ ಬಂದಿದ್ದಳು. ಅಷ್ಟೊತ್ತಿಗೆ ನಾನು ಸಲೋನಿ ಬರೆದ ಪುಸ್ತಕದ ಕೆಲವು ಮಾಹಿತಿಯನ್ನು ನನ್ನ ಪಿ,ಹೆಚ್,ಡಿ, ಪ್ರಬಂಧಕ್ಕೆ ಅಳವಡಿಸಿಕೊಂಡಿದ್ದೆ. ಅಳವಡಿಸಿಕೊಳ್ಳುವುದು ನನಗೆ ಅನಿವಾರ್ಯವಾಗಿತ್ತು. ಅಂದು ಸಲೋನಿಗೆ ನನ್ನ ಪ್ರಬಂಧವನ್ನು ತೋರಿಸಿ ಒಪ್ಪಿಗೆ ಪಡೆಯಬೇಕಿತ್ತು. ಕ್ರಿಸ್ ಮಸ್ ಹಬ್ಬದ ಆಚರಣೆ ಊಟದ ನಂತರ ಮನೆಯ ಟೆರೇಸ್ ಮೇಲೆ ನನ್ನ ಪ್ರಬಂಧದ ಪುಟಗಳನ್ನು ತೋರಿಸಿದೆ. ಸಲೋನಿ ಪ್ರಬಂಧವನ್ನು ಓದಿ ನನಗೆ ಹಲವು ಕಡೆ ಸಲಹೆಗಳನ್ನು ನೀಡಿದಳು. ನನಗಿಂತ ಒಂದೆರಡು ವರ್ಷ ಚಿಕ್ಕವಳಾದ ಸಲೋನಿಗೆ ಇಷ್ಟೊಂದು ಜ್ಞಾನ ಸಂಪಾದಿಸಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಾನು ಬರೆದ ಪ್ರಬಂಧ ಚೆನ್ನಾಗಿದೆ ಎಂದು ಹೇಳಿ ನನ್ನ ಬೆನ್ನು ತಟ್ಟಿದಳು.

"ನೀವು ಬರೆದ 'ದೇವರು ಮತ್ತು ಧರ್ಮ' ಎಂಬ ಕೃತಿಯಲ್ಲಿ ಎಷ್ಟೊಂದು ಸಹಿಷ್ಣುತೆಯ ವಿಚಾರಗಳನ್ನು ಬರೆದಿದ್ದೀರಿ. ಎಲ್ಲಾ ಧರ್ಮದ ತತ್ವಗಳನ್ನು ಮನ ಮುಟ್ಟುವಂತೆ ಹೇಳಿದ್ದೀರಿ ಇದೆಲ್ಲಾ ಹೇಗೆ ಸಾದ್ಯವಾಯಿತು..?"

ನಾನು ಕುತೂಹಲದಿಂದ ಕೇಳಿದೆ.

"ನನ್ನ ಮನೆಯ ವಾತಾವರಣವೇ ನನ್ನನ್ನು ಈ ಪುಸ್ತಕ ಬರೆಯಲು ಪ್ರೋತ್ಸಾಹ ಸಿಕ್ಕಿತು. ನಮ್ಮ ಮನೆಯಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಪ್ರಾಶಸ್ತ್ಯವಿದೆ. ಅಪ್ಪ ರಾಬರ್ಟ್, ಕ್ರಿಶ್ಚಿಯನ್ ಧರ್ಮದವರಾದರೆ, ಅಮ್ಮ ಶಾರದಾ ಸುಸಂಸ್ಕೃತ ಹಿಂದೂ ಮನೆತನದವಳು. ಇಬ್ಬರದೂ ಪ್ರೇಮ ವಿವಾಹ. ನಾನು ಹುಟ್ಟುವ ಮುನ್ನ ಅಪ್ಪ ನನ್ನ ಅಮ್ಮಳನ್ನು ತನ್ನ ಧರ್ಮಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದರಂತೆ, ಅಮ್ಮ ಇದಕ್ಕೆ ಒಪ್ಪಲಿಲ್ಲ. ಒಮ್ಮೆ ಪಾಸ್ಟರ್ ಫರ್ನಾಂಡಿಸ್ ರವರನ್ನು ಅಪ್ಪ ನಮ್ಮ  ಮನೆಗೆ ಕರೆಯಿಸಿದ್ದರು. ಫಾಸ್ಟರ್ ರವರಿಂದ ಬುದ್ಧಿವಾದ ಹೇಳಿಸಿದರೆ ಅಮ್ಮಳನ್ನು ಕ್ರಿಶ್ಚಿಯನ್ ಆಗಿ ಮತಾಂತರಗೊಳಿಸಬಹುದೆಂದು ಅಪ್ಪನ ಲೆಕ್ಕಾಚಾರವಾಗಿತ್ತು. ಅದರಂತೆ ಅವರು ಅಮ್ಮನನ್ನು ಮತಾಂತರಿಸಲು ಮನವೊಲಿಸಿದರು. ಪಾಸ್ಟರ್ ರವರು ಹೇಳಿದ್ದು ಸರಿಯಾಗಿತ್ತು...

"ಹೆಣ್ಣಾದವಳು ಗಂಡನ ಧರ್ಮ ಪಾಲಿಸುವುದು ಸೂಕ್ತ. ಗಂಡನ ಸಂಸೃತಿ ಸಿದ್ಧಾಂತಗಳನ್ನು ಗೌರವಿಸಬೇಕು. ಗಂಡನೊಂದಿಗೆ ತಾನೂ ಅದೇ ಧರ್ಮವನ್ನು ಪಾಲಿಸಬೇಕು. ಇಬ್ಬರೂ ಒಟ್ಟಾಗಿದ್ದರೆ ಸೂಕ್ತ. ಆಗ ಸಂಸಾರವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಮೋಕ್ಷ ಪಡೆಯುವ ದಾರಿ ಇಬ್ಬರದೂ ಒಂದೇಯಾಗಿರಬೇಕು. ಯಾವಾಗ ಗುರಿ ಮತ್ತು ದಾರಿ ಒಂದೇ ಆಗಿರುತ್ತದೆಯೋ ಆಗ ಸ್ನೇಹ ಪ್ರೀತಿ ಸಹಜವಾಗಿ ಬೆಳೆಯುತ್ತಾ ಹೋಗುತ್ತದೆ. ದಾಂಪತ್ಯವೂ ಸುಖಕರವಾಗಿರುತ್ತದೆ".

 ಎಂದು ಬುದ್ಧಿವಾದ ಹೇಳಿದ್ದರು. ಆಗ ಅಮ್ಮ ಪಾಸ್ಟರ್ ರವರ ಮಾತನ್ನು ಗೌರವಿಸಿದಳು. ಚರ್ಚಗೆ ಹೋಗಿ ಅಪ್ಪನ ಧರ್ಮಕ್ಕೆ ಬದಲಾದಳು.

ಮಾರನೆಯ ದಿನ ಅಮ್ಮ ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ಚರ್ಚ್ ಗೆ ಹೋದಳು. ಚರ್ಚ್ ನ ಪ್ರಶಾಂತವಾದ ವಾತಾವರಣ, ಏಸು ಸ್ವಾಮಿಯ ದಿವ್ಯ ಶಕ್ತಿ ಅಮ್ಮನನ್ನು ಭಕ್ತಿಯಲ್ಲಿ ಮುಳುಗಿಸಿತು. ಕ್ಷಣಕಾಲ ಅಪ್ಪನೊಂದಿಗೆ ಬೈಬಲ್ ನ ವಾಕ್ಯಗಳನ್ನು ಪಠಿಸಿದಳು. ಪ್ರಾರ್ಥನೆಯಾದ ನಂತರ ಪಾಸ್ಟರ್ ಅಮ್ಮನನ್ನು ಕರೆದು ಮಾತನಾಡಿಸಿದರು.
ಅಮ್ಮನ ಎರಡು ಕೈಯನ್ನು ಹಿಡಿದು ಪ್ರಾರ್ಥಿಸಿದರು. ಒಳ್ಳೆಯದಾಗಲಿ ಎಂದು ಹರಸಿದರು. ಹೀಗೆ ಒಂದು ವಾರ ಕಳೆಯಿತು.

ಒಂದು ದಿನ ಪಾಸ್ಟರ್ ಅಮ್ಮನನ್ನು ಕರೆದು

"ಈಗ ಹೇಗನ್ನಿಸುತ್ತಿದೆ...?"
ಎಂದು ಕೇಳಿದರು. 

ಆಗ ಅಮ್ಮ

"ಮನಸ್ಸು ಶಾಂತವಾಗಿದೆ. ದೇವರ ವಾಕ್ಯಗಳು ಮನಸ್ಸನ್ನು ಮುದಗೊಳಿಸಿವೆ. ಮನಸ್ಸು ಉಲ್ಲಾಸದಿಂದ ಕುಣಿಯುತ್ತಿದೆ ಎಂದೆನಿಸುತ್ತಿದೆ. ಸತ್ಯ, ಶಾಂತಿ, ಸಂತೋಷ ನನಗೆ ಸಿಕ್ಕಿದೆ ಎಂಬಂತೆ ಬಾಸವಾಗುತ್ತಿದೆ....
ಆದರೆ
ಒಂದು ವಿಷಯ ಪಾಸ್ಟರ್... ಮೊನ್ನೆ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಎದುರುಗಡೆ ದೇವಾಲಯದಲ್ಲಿಯ ಘಂಟೆಯ ಸದ್ಧು ಕೇಳಿಸಿತು. ಅದರ ಮಾರ್ಧನಿ ನನ್ನ ಹೃದಯದೊಳಗೆಯೇ ಪ್ರತಿಧ್ವನಿಸಿದಂತಾಯಿತು. ಕೂಡಲೇ ಹೊರಗೆ ಬಂದೆ ದೇವಾಲಯದ ಒಳಗಿನಿಂದ ಪಠಣೆಯಾಗುತ್ತಿದ್ದ ವೇದ ಮಂತ್ರ ಘೋಷಗಳು ನನ್ನ ಕಿವಿಯನ್ನು ಹೊಕ್ಕಾಗ ಮಹದಾನಂದವಾಯಿತು. ಯಾವುದೋ ಸೆಳೆತ, ಏನೋ ಒಂದು ರೀತಿಯ ತೃಪ್ತಿಯ ಭಾವ ಆ ಮಂತ್ರ ಘೋಷದಲ್ಲಿ ಕಂಡಂತಾಯಿತು. ಬೈಬಲ್ ಓದಿದಾಗ ಮನಸ್ಸು ಶಾಂತವಾಯಿತು. ವೇದ ಮಂತ್ರ ಘೋಷಗಳಿಂದ ಮನಸು ಅತ್ಯಾನಂದ ಅನುಭವಿಸಿತು. ಹಾಗಂದ ಮಾತ್ರಕ್ಕೆ ನನಗೆ ಭಗವದ್ಗೀತೆ ದೋಡ್ಡದೆಂದಾಗಲೀ ಅಥವಾ ಬೈಬಲ್ ದೊಡ್ಡದೆಂದಾಗಲೀ ಯಾವ ಭೇದ ಭಾವವೂ ಇಲ್ಲ. ನಾನು ಚಿಕ್ಕಂದಿನಿಂದ ಪಾಲಿಸಲ್ಪಟ್ಟ ಹಿಂದೂ ಸಂಸ್ಕೃತಿಯ ಕಾರಣದಿಂದ ಗೀತೆಯ ವೇದ ಘೋಷಗಳು ನನ್ನನ್ನು ಈ ರೀತಿ ಆಕರ್ಷಿಸಿರಬಹುದು. ಅಗಕ್ಕೆ ಒಂದು ಕಾರಣವೂ ಇದೆ..

ನಾನು ಚಿಕ್ಕವಳಿರುವಾಗ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದೆನಂತೆ. ಖಾಯಿಲೆ ಹೆಚ್ಚಾಗಿ ಸಾಯುವ ಹಂತಕ್ಕೆ ತಲುಪಿದ್ದೆ. ಯಾವ ಚಿಕಿತ್ಸೆಗೂ ನನ್ನ ದೇಹ ಸ್ಪಂದಿಸುತ್ತಿರಲಿಲ್ಲ. ಆಗ ನನ್ನ ತಾಯಿ ಊರ ದೇವಿಗೆ ಹರಕೆ ಹೊತ್ತಳು. ಪ್ರತಿ ಶುಕ್ರವಾರ ಮತ್ತು ಮಂಗಳವಾರ ದೇವಿಗೆ ತುಪ್ಪದ ದೀಪ ಹಚ್ಚಿದಳು ಇದರಿಂದ ನನ್ನ ಖಾಯಿಲೆಯೂ ಗುಣ ಮುಖವಾಗುತ್ತಾ ಬಂದಿತಂತೆ. ದೇವಿಯ ಆಶೀರ್ನವಾದದಿಂದ ನಾನು ಪುನರ್ಜೀವ ಪಡೆದೆನಂತೆ.  ಅಂದಿನಿಂದ ಪ್ರತಿ ಶುಕ್ರವಾರ ಮತ್ತು ಮಂಗಳವಾರ ನಾನು ಅಮ್ಮನ ಜೊತೆಗೆ ದೇವಾಲಯಕ್ಕೆ ಹೋಗುವ ಅಭ್ಯಾಸವಾಯಿತು. ದೇವಾಲಯದ ಒಳಗೆ ಹೋದ ಕೂಡಲೆ ನಾನು ಅಮ್ಮನ ಜೊತೆಯಲ್ಲಿ ಭಕ್ತಿಯಲ್ಲಿ ತಲ್ಲೀನನಾಗುತ್ತಿದ್ದೆ. ಇಂದಿಗೂ ದೇವಾಯಲದ ಘಂಟೆ, ಶಂಖ, ಜಾಗಟೆಗಳ ಧ್ವನಿ ಕೇಳಿದ ಕೂಡಲೆ ಯಾವುದೋ ಒಂದು ಸೆಳೆತ ನನ್ನನ್ನು ಆವರಿಸಿಕೊಂಡಾಂತಾಗುತ್ತದೆ. ಚಿಕ್ಕಂದಿನಿಂದಲೂ ಬೆಳೆದುಬಂದ ಆ ಭಾವನೆಗಳು ನನ್ನಿಂದ ತೆಗೆದು ಹಾಕಲಾಗುತ್ತಿಲ್ಲ. ಮನಸ್ಸಿನಲ್ಲಿಯೇ ಶಾಶ್ವತವಾಗಿ ಅವಿರ್ಭಸಿರುವ ಆ ನೆನಪುಗಳನ್ನು ನಾನು ಹೇಗೆ ತೆಗೆದು ಹಾಕಲಿ. ಬಾಲ್ಯದ ಸುಂದರ ಕನಸುಗಳೊಂದಿಗೆ ಬೆರೆತಿರುವ ಈ  ಮಂತ್ರ ಘೋಷಗಳನ್ನು ನಾನು ಹೇಗೆ ಮರೆಯಲಿ. ಗೆಳೆತಿಯರೊಂದಿಗೆ ಗಣೇಶನ ದೇವಾಲಯದಲ್ಲಿ ಹಾಡಿದ ಭಕ್ತಿ ಗೀತೆಯನ್ನು ಹೇಗೆ ಮರೆಯಲಿ,  ಬಣ್ಣ ಬಣ್ಣದ ರಂಗನ್ನು ಹಾಕಿ ಗೆಳತಿಯರೊಂದಿಗೆ ಜಗಳಕ್ಕಿಳಿದ ಆ ಹೋಳಿ ಹಬ್ಬವನ್ನು ಹೇಗೆ ಮರೆಯಲಿ?  ಹೊಸ ಬಟ್ಟೆ ಹಾಕಿ ಪಟಾಕಿ ಸಿಡಿಸಿದ ಸಂಭ್ರಮವನ್ನು ಮರೆಯಲು ಸಾದ್ಯವೇ..? ಯಾವುದನ್ನು ಹೇಗೆ ಮರೆಯಲಿ ... ಈ ಎಲ್ಲಾ ಧಾರ್ಮಿಕ ನಿಷ್ಠೆಗಳು ನನ್ನ ದೇಹದೊಂದಿಗೆ ಬಿಡಿಸಲಾಗಂತೆ ತಳುಕು ಹಾಕಿಕೊಂಡಿವೆ.  ನನಗೆ ಜನ್ಮ ನೀಡಿದ ಹೆತ್ತ ತಾಯಿ ದೇವರ ಹಾಡನ್ನು ಹಾಡುತ್ತಾ ತೊಟ್ಟಿಲನ್ನು ತೂಗುತ್ತಿದ್ದಳಂತೆ ಅಮ್ಮನ ಜೊತೆ ಆ ಹಾಡನ್ನು ಹೇಳಿಕೊಂಡು ಮಾಡಿದ ದೇವರ ಪೂಜೆಯನ್ನು ಮರೆಯುವುದಾದರೂ ಹೇಗೆ...? ಇದ್ದಕ್ಕಿದ್ದಂತೆ ನೀವು ನನ್ನ ಹೆತ್ತ ತಾಯಿ ಇವಳಲ್ಲ ಎಂದು ಹೇಳಿ ಬೇರೆ ಯಾವುದೋ ಸ್ತ್ರೀ ಯನ್ನು ತೋರಿಸಿ ಇವಳೇ ನಿನ್ನ ತಾಯಿ ಎಂದರೆ ಹೇಗೆ ಸ್ವೀಕರಿಸಲಿ ಪಾಸ್ಟರ್.....  ನನ್ನ ಆ ನೆನಪುಗಳು ನನ್ನ ಉಸಿರಿನೊಂದಿಗೆ ಬೆರೆತು ಬಿಟ್ಟಿವೆ... ನನಗೆ ಸ್ವಲ್ಪ ದಿನ ಕಾಲಾವಕಾಶ ಕೊಡಿ ನನ್ನಲ್ಲೇನಾದರೂ ಬದಾಲಾವಣೆಯಾದರೆ ಖಂಡಿತ ನಾನು ಗಂಡನೊಂದಿಗೆ ಮೇಣದಬತ್ತಿಯನ್ನು ಹಚ್ಚುತ್ತೇನೆ, ಇಲ್ಲದಿದ್ದರೆ ಗಂಡನಿಗೆ ತಕ್ಕ ಹೆಂಡತಿಯಾಗಿ ಕರ್ಪೂರವನ್ನು ಹಚ್ಚುತ್ತೇನೆ...."

 ಅಂದು ಅಮ್ಮ ಹೇಳಿದ ಆ ಮಾತುಗಳು ಪಾಸ್ಟರ್ ಗೆ ಮನವರಿಕೆಯಾಯಿತೋ ಇಲ್ಲವೋ ತಿಳಿಯದು. ಆದರೆ  ಮಹಾನ್ ಸಹಿಷ್ಣುತಾವಾದಿಯಾದ ಅವರು ಅಪ್ಪನಿಗೆ ಅಮ್ಮನ ಭಾವನೆಗಳನ್ನು ಮನವರಿಕೆ ಮಾಡಿಸಿದರು. ಅಮ್ಮನ ಇಚ್ಛೆಯಂತೆ ಮನೆಯಲ್ಲೂ ಸಹ ಎರಡೂ ಧರ್ಮಕ್ಕೆ ಪ್ರಾಶಸ್ತ್ಯವನ್ನು ನೀಡಲಾಯಿತು. ಎಲ್ಲಾ ಧರ್ಮವನ್ನು ಗೌರವಿಸುವಂತೆ ಅಪ್ಪನಿಗೆ ಹೇಳಿಕೊಟ್ಟ ಆ ಪಾಸ್ಟರ್ ನಿಜಕ್ಕೂ ದೈವ ಸ್ವರೂಪಿಗಳು. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠವೆಂದು ವಾದಿಸುವ ಈ ದಿನಗಳಲ್ಲಿ ಪಾಸ್ಟರ್ ಫರ್ನಾಂಡೀಸ್ ದೈವಸ್ವರೂಪಿಗಳಾಗಿದ್ದರು. ಸಾಕ್ಷಾತ್ ಏಸುವಿನ ಪ್ರತಿರೂಪದಂತೆ ಕಂಡರು. ತಮ್ಮ ಧರ್ಮದ ಜೊತೆಗೆ ಇನ್ನೊಂದು ಧರ್ಮವನ್ನು ಗೌರವಿಸುವ ಮಹಾನ್ ಸರ್ವ ಧರ್ಮ ಸಹಿಷ್ಣಿತಾವಾದಿಗಳಂತೆ ಗೋಚರಿಸಿದರು.

ಸಲೋನಿ ತನ್ನ ತಾಯಿಯ ಜೀವನದಲ್ಲಿ ನಡೆದ ಈ ಘಟನೆಯನ್ನು ಸವಿವರವಾಗಿ ವಿವರಿಸಿ ಹೇಳಿದಳು. ಧರ್ಮ, ಧರ್ಮ ಎಂದು ಕಿಚ್ಚಾಡುತ್ತಿರುವ ಇಂದಿನ ಸಮಾಜದಲ್ಲಿ ಸಲೋನಿಯ ಕುಟುಂಬವು ನನಗೆ ಮಾದರಿಯಾದಂತೆ ಕಂಡಿತು. ಸಲೋನಿಯು ನನ್ನ ನಡುವೆ ಇರುವ ಪ್ರೀತಿಯ ಆಪ್ತ ಸಂಗಾತಿ ಎಂಬಂತೆ ಅನುಭವವಾಯಿತು. ಜೊತೆಗೆ ಸಲೋನಿಯೂ ಸಹ ನನ್ನ ಮನಸಿಗೆ ಇನ್ನು ಹತ್ತಿರವಾದಳು.

"ನನ್ನ ಮದುವೆ ಆಗ್ತೀರಾ...?"

ಎಂದು ಕೇಳಿದೆ

ಸಲೋನಿ ಏನೂ ಮಾತನಾಡದೇ ಕ್ಷಣ ಕಾಲ ಮೌನ ವಹಿಸಿದಳು. ಮೌನದಲ್ಲೂ ಮುದ್ದಾಗಿ ಕಾಣುತ್ತಿದ್ದ ಆಕೆಯ ಮುಖ ಚೆಂದವಾಗಿ ಮನಸ್ಸನ್ನು ಮುದಗೊಳಿಸಿತು. ಉದ್ದವಾದ ಆಕೆಯ ಮುಂಗುರುಳು ಗಾಳಿಯೊಂದಿಗೆ ಹಾರಾಡುತ್ತಾ ಆಕೆಯ ಮುದ್ದಾದ ಕೆನ್ನೆಯನ್ನು ಸೋಕುತ್ತಿದ್ದವು. ಕಣ್ಣುಗಳು ನಾಚಿಕೆಯ ಆಭರಣಗಳನ್ನು ಧರಿಸಿದ್ದವು. ಪಟ ಪಟನೆ ಮುದ್ದಾಗಿ ಮಾತನಾಡುತ್ತಿದ್ದ ಅವಳ ನಾಲಿಗೆ ನನ್ನ ಪ್ರಶ್ನೆಗೆ ಉತ್ತರಿಸದಂತಾಯಿತು. ಆಕೆಯ ಮುದ್ದು ಮುಖ ಚಂದಿರನ ಬೆಳದಿಂಗಳನ್ನು ಮೀರಿಸುವಂತಿಹ ಕಾಂತಿ ಚೆಲ್ಲುತ್ತಿತ್ತು. ಆಕೆಯ ಸೌಂದರ್ಯಕ್ಕೆ ಮಾರು ಹೋದ ನನಗೆ ಕ್ಷಣ ಕಾಲ ಆಕೆ ಯಾವ ಧರ್ಮದವಳು ಎಂಬುದು ಮರೆತೇ ಹೋಗಿತ್ತು. ಆ ಕ್ಷಣ ನಮ್ಮಿಬ್ಬರ ಪ್ರೀತಿಗೆ ಜಾತಿಯಾಗಲಿ ಧರ್ಮವಾಗಲಿ ನೆನಪಿಗೆ ಬರಲೇ ಇಲ್ಲ.ಅದೊಂದು ಪ್ರಕೃತಿ ಸಹಜವಾಗಿ ಗಂಡು ಹೆಣ್ಣಿನ ಮನಸ್ಸಿನಲ್ಲಿ ಮೋಳಕೆಯೊಡೆಯುವಂತಹ ಸಹಜ, ನಿರ್ಮಲವಾದ ಪ್ರೀತಿ.  ಮನುಷ್ಯ ಹಾಕಿಕೊಂಡ ಧರ್ಮ ಮತ್ತು ಜಾತಿಯ ಕಟ್ಟುಪಾಡುಗಳನ್ನು ಮೀರಿನಿಂತ ದೈವದತ್ತವಾದ ಪ್ರೀತಿಯದು. ದೇವರು ಸೃಷ್ಟಿಸಿದ ಗಿಡ ಮರ, ಬೆಟ್ಟ ಗುಡ್ಡ ಭೂಮಿ ಆಕಾಶ, ನದಿ ಸಮುದ್ರದಂತೆಯೇ ಈ ಪ್ರೀತಿಯೂ ಸಹ ಸಹಜವಾದದ್ದು. ಧರ್ಮಕ್ಕೆ ಹೊರತಾಗಿ ನಿಂತಿರುವ, ಮತ್ತು ಮೇಲು, ಕೀಳು, ಮೈಲಿಗೆ ಎಂಬ ಪದಗಳೇ ಗೊತ್ತಿರದ ಭಾವನೆಯದು. ಪ್ರಕೃತಿಯಂತೆ  ಪ್ರೀತಿಯೂ ಸಹ ನಿರ್ಮಲ ಮತ್ತು  ನಿಷ್ಕಲ್ಮಶವಾದುದು. ಅದಕ್ಕೆ ಮನುಷ್ಯ ನಿರ್ಮಿಸಿಕೊಂಡ ಕಟ್ಟುಪಾಡುಗಳು ಅನ್ವಯಿಸದು....
 
ನನಗಾಗಲೀ ಸಲೋನಿಗಾಗಲೀ ಜಾತಿ ಮತ ಧರ್ಮಗಳ ಮೇಲೆ ಅಷ್ಟಾಗಿ ನಂಬಿಕೆಯಿರಲಿಲ್ಲ.  ದೇವರು ಧರ್ಮಗಳನ್ನು ಸೃಷ್ಠಿಸಿದನೋ.. ಅಥವಾ ಮಾನವನೇ ದೇವರನ್ನು ಸೃಷ್ಠಿಸಿಕೊಂಡು ಧರ್ಮವೆಂಬ ಬೇಲಿಯನ್ನು ಹಾಕಿಕೊಂಡನೋ ತಿಳಿಯದು. ಎಲ್ಲಾ ನಡೆ ನುಡಿಯಲ್ಲಿ ಧರ್ಮದ ವಿಧಿ ವಿಧಾನಗಳನ್ನು ವಿಧಿಸಿ ಮಾನವನ ನಡತೆಯನ್ನು ನಿಯಂತ್ರಿಸ ಬಹುದು. ಆದರೆ ಈ ಪ್ರೀತಿ ಅನ್ನೋ ಭಾವನೆಯನ್ನು ನಿಯಂತ್ರಿಸಲು ಯಾವ ಧರ್ಮಗಳೂ ಇನ್ನು ಸೃಷ್ಠಿಯಾಗಿಲ್ಲ. ಇಲ್ಲಿರುವ ಧರ್ಮಗಳು ಪ್ರೀತಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದರೂ ಸಹ ಪ್ರೀತಿ ಮಾತ್ರ ಆಗಾಗ ಪ್ರಕೃತಿಯ ಸಹಜ ಧರ್ಮದತ್ತ ವಾಲುತ್ತಲೇ ಇರುತ್ತವೆ. ಆಗಾಗ ಅಂತರ್ಜಾತೀಯ ಅಂತರ್ ಧರ್ಮೀಯ ವಿವಾಹಗಳು ನಡೆದು ಮಾನವ ಧರ್ಮವನ್ನು ಪರಿಪಾಲಿಸುತ್ತಲೇ ಇರುತ್ತವೆ....

ಕ್ಷಣ ಕಾಲದ ನಮ್ಮಿಬ್ಬರ ನಡುವಿನ ಮೌನದ ಮಧ್ಯೆಯೇ ಮನಸ್ಸು ಬಿಡುವು ಮಾಡಿಕೊಂಡು ಏನೇನೋ ಯೋಚಿಸಿತು. ಮತ್ತೆ ಸಲೋನಿಯನ್ನು ನೋಡಿದೆ. ಅದೇ ನೀರವ ಮೌನ. ಸೌಂದರ್ಯೋಪಸಕನಾದ ಶಿಲ್ಪಿಯೊಬ್ಬನು ಕಡೆದ ಬೊಂಬೆಯಂತೆಯೇ ಸಲೋನಿಯು ಸುಂದರ ಕಲಾಕೃತಿಯಂತೆ ನನ್ನ ಮುಂದೆ ನಿಂತಿದ್ದಳು. ನಮ್ಮಿಬ್ಬರ ನಡುವೇ ಯಾವ ಧರ್ಮವೂ ಇರಲಿಲ್ಲ. ಇದ್ದದ್ದು ಪ್ರಕೃತಿಯ ಸಹಜ ಧರ್ಮ ಒಂದೇ... ನಕ್ಷತ್ರದಂತಿರುವ ಆಕೆಯ ಕಣ್ಣುಗಳು ಹೊಳಪಿನಿಂದ ಕೂಡಿದ ಬೆಳಕಿನ ಧರ್ಮ ಸೂಚಿಸುತ್ತಿತ್ತು. ಸಂಪಿಗೆಯಂತಿರುವ ಅವಳ ನಾಸಿಕವು ಹೂವಿನ ಧರ್ಮಕ್ಕೆ ಸೇರಿತ್ತು. ಜೇನಿನಂತೆ  ಸವಿಯಂತಿರುವ ಅವಳ ತುಟಿಗಳು ಸಿಹಿಯಾದ ಧರ್ಮವನ್ನು ತೋರಿಸಿತ್ತು. ನಯವಾದ ಕೆನ್ನೆಗಳು ಮೃದುವಾದ ಧರ್ಮ ಹೊಂದಿತ್ತು. ಅವಳ ಬಳುಕುವ ಶರೀರವು ಪ್ರಕೃತಿಯಲ್ಲಿಯೇ ಬಳ್ಳಿಯಾಗಿ ಬಳುಕುವ  ಸಸ್ಯ ಧರ್ಮವನ್ನು ಸೂಚಿಸುತ್ತಿತ್ತು. ನನ್ನ ಕಣ್ಣಿಗೆ ಅವಳೊಂದು ಹೆಣ್ಣು ಧರ್ಮ,  ನಾನೊಂದು ಗಂಡು ಧರ್ಮ,  ದೇವರು ಸೃಷ್ಟಸಿದ ಈ ಎರಡು ಧರ್ಮಗಳು ಎಂದಾದರೂ ಕೋಮು ಗಲಭೆ ನಡೆಸಿದ್ದವೆ...?  ಪ್ರೀತಿ ಮೊಳಕೆಯೊಡೆಯುವಾಗ ಯಾವ ಧರ್ಮವು ನಮಗೆ ಅಡ್ಡಬರಲಿಲ್ಲ. ನಾವು ಸೌಂದರ್ಯವನ್ನು ಆಸ್ವಾಧಿಸುವಾಗಲೂ ಧರ್ಮದ ಗುರುತು ನಮಗೆ ಸಿಗಲೇ ಇಲ್ಲ....
ನನ್ನ ಮದುವೆ ಆಗ್ತಿರಾ...? 
ಎಂದು ನಾನು ಕೇಳಿದ ಪ್ರಶ್ನೆಗೆ ಸಲೋನಿಯ ಕೆನ್ನೆಯ ರಂಗು ಇನ್ನಷ್ಟು ಅಧಿಕವಾದಂತೆ ಕಂಡಿತು. ಆಕೆಯ ಮುದ್ದು ಮುಖಕ್ಕೆ ಮೆರಗು ನೀಡಿದ್ದ ಅವಳ ಗುಳಿಕೆನ್ನೆಯಲ್ಲಿಯೇ, ನಾನು ಗಿರಿಗಿಟ್ಟಲೆ ಹೊಡೆದು ಧರ್ಮಕ್ಕೂ ಆಚೆಯಿರುವ  ಪ್ರೀತಿ ಎಂಬ ಗುಡಿಯೊಳಗೆ ಬಿದ್ದಿದ್ದೆ.  ಕ್ಷಣ ಕಾಲ ನನ್ನ ಹುಟ್ಟಿಗೆ ಧರ್ಮದ ಹಣೆಪಟ್ಟಿ ಕೊಟ್ಟವರೂ ಸಹ ನೆನಪಿಗೆ ಬರಲೇ ಇಲ್ಲ. ಸಲೋನಿಯನ್ನು ನೋಡಿದಾಗ ಧರ್ಮವನ್ನು ಮರೆಸುವ ಇನ್ನೊಂದು ಆಕರ್ಷಣೆ ಇದೆ ಎನ್ನಿಸಿತು. ಧರ್ಮಕ್ಕೂ ಮಿಗಿಲಾದ ಭಾವವೊಂದಿದೆ ಎನ್ನಿಸಿತು. ಅಥವಾ ಈ ಆಕರ್ಷಣೆಯೇ ನಿಜವಾದ ಧರ್ಮವೇ..?  ಯಾಕಾಗಿರಬಾರದು..ಅದು ಗಂಡು ಮತ್ತು ಹೆಣ್ಣು ಎಂಬ ಎರಡೇ ಧರ್ಮ.. ಎರಡೇ ಜಾತಿ.. ಹೀಗೆ ಧರ್ಮ ಬಗ್ಗೆ ಎದ್ದಿರುವ ಗೊಂದಲಮಯವಾದ ಹಲವು ಪ್ರಶ್ನೆಗಳು ನನ್ನ ಮನದಲ್ಲಿ ಮೂಡುತ್ತಿರುವಾಗಲೇ ಸಲೋನಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಬಿಟ್ಟಳು.. 
ಆಕೆಯ ಆ ಸ್ಪರ್ಶದಲ್ಲಿ ಎಲ್ಲವನ್ನೂ ಮರೆಸುವ ಶಕ್ತಿಯಿತ್ತು..
ನವಿರಾದ ಸ್ಪರ್ಶ.. ಹಿತವಾದ ಭಾವ... ಬೌತಿಕ ಜಗತ್ತಿನಾಚೆ ವಿಹರಿಸಿಂತಹ ಅನುಭಾವ..
ಆ ಸ್ಪರ್ಶದಲ್ಲಿ ನಾನು ಅನುಭವಿಸಿದ್ದು ಪ್ರಕೃತಿಯ ಸಹಜ ಧರ್ಮ ಮಾತ್ರ. ಜಗತ್ತಿನ ಸೃಷ್ಠಿಗೆ ಮತ್ತು ಜೀವ ಜಗತ್ತಿನ ಇರುವಿಕೆಗೆ  ಕಾರಣವಾಗಿರುವ ಪ್ರೀತಿಯ ಧರ್ಮ, ಅದೊಂದೇ ನಿತ್ಯ ನಿರಂತರ....
                     
                        - ಪ್ರಕಾಶ್ ಎನ್ ಜಿಂಗಾಡೆ.