Tuesday, 16 August 2016

ಬಸ್ಸು

ಬೆಳಗ್ಗೆ ಒಂಬತ್ತು ಆಗಿತ್ತು. ಬಸ್ ಸ್ಟ್ಯಾಂಡ್ ಕಡೆ ತಿರುಗಿ ಬರೋಣ ಬಾ ಎಂದು ಸತ್ಯ ನನ್ನನ್ನು ಬಲವಂತ ಮಾಡುತ್ತಿದ್ದ. ನಾನು ಬರಲ್ಲ ಎಂದರೂ ಸತ್ಯ ನನ್ನನ್ನು ಬಲವಂತವಾಗಿ ಬಸ್ಟ್ಯಾಂಡ್ ಗೆ ಕರೆದುಕೊಂಡು ಹೋದ. ಗಜಾನನ ಬಸ್ಸಿಗಾಗಿ ಸುಮಾರು ಹೊತ್ತು ಕಾದಿದ್ದಾಯಿತು. ಬಸ್ಸು ಸರಿಯಾದ ವೇಳೆಗೆ ಬರದಿದ್ದರಿಂದ ನನಗೆ ಒಳಗೊಳಗೆ ಸತ್ಯನ ಮೇಲೆ  ಕೋಪ ಬರಲಾರಂಬಿಸಿತು. ಏನೋ ಸಬೂಬು ಹೇಳಿ ಮನೆಯ ಕಡೆಗೆ ವಾಪಸ್ಸು ಹೋದರಾಯಿತು ಎಂದು ನಿರ್ಧರಿಸಿಕೊಂಡೆ. ಅಷ್ಟರಲ್ಲೇ ಆ ಡಕೋಟ ಬಸ್ಸು
"ಬುರ್ ರ್ ರ್ ರ್........." 
ಎಂದು ಸೌಂಡು ಮಾಡುತ್ತಾ ತನ್ನ ಜೊತೆ ಜೊತೆಗೆ ಧೂಳನ್ನೆಬ್ಬಿಸಿಕೊಂಡು ನಮ್ಮ ಕಡೆಗೆ ಬರುತ್ತಿತ್ತು.

"ನೋಡೋ ಸತ್ಯ....ಇವತ್ತೇ ಕೊನೆ, ಇನ್ಮೇಲೆ ನನ್ನನ್ನು ಬಸ್ ಸ್ಟಾಂಡ್ ಗೆ ವರೆಗೆ ಕರೆಯಬೇಡ, ಬೇಕಿದ್ದರೆ ನೀನೊಬ್ಬನೆ ಬಂದು ಹೋಗು... ನೀನುಂಟು ಅವಳುಂಟು. ನಿಮ್ಮಿಬ್ಬರ ಮದ್ಯೆ ನಾನ್ಯಾಕೋ... ಶಿವಪೂಜೆಯ ಮದ್ಯೆ ಕರಡಿಯಂತೆ"

ಸುಮಾರು ಹೊತ್ತು ಬಸ್ಸಿಗಾಗಿ ಕಾದ ಸಿಟ್ಟು ನನ್ನನ್ನು ಹಾಗೆ ಹೇಳಿಸಿತು.

"ಸರಿ ಸರಿ ಬಿಡು....!!!  ಬಸ್ ಬಂದಾಯ್ತು ಕ್ಯಾತೆ ತಗೆಯಬೇಡ. ಸ್ವಲ್ಪ ಹೊತ್ತು ಸುಮ್ನಿರು"
ಅಂದ

ಆಗಲೇ ಸತ್ಯನ ದೃಷ್ಠಿ ಬಸ್ಸಿನ ವಿಂಡೋ ಸೀಟ್ ನಲ್ಲಿ ಕುಳಿತಿದ್ದ ಮಾನಸ ಕಡೆಗೆ ನೆಟ್ಟಿತ್ತು. ..... ಅವಳೂ ಸಹ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ಸತ್ಯನ ಇರುವಿಕೆಯನ್ನೇ ನಿರೀಕ್ಷಿಸಿದ್ದಳು. ಬಸ್ಸು ಬಂದು ನಿಂತ ಕೂಡಲೇ ಸತ್ಯ ಅವಳನ್ನೇ ಎವೆ ಇಕ್ಕಿ ನೋಡತೊಡಗಿದ. ಅವಳು ಸತ್ಯನ ಕಡೆಗೊಮ್ಮೆ ನೋಡಿ ಮಿಂಚಿನಂತಹ ಸ್ಮೈಲ್ ಕೊಟ್ಟಳು. ನನಗೆನೋ ಅವಳು ಕೊಟ್ಟ ಆ ಸ್ಮೈಲು ಸತ್ಯನ ಹೃದಯಕ್ಕೇ ಸಿಡಿಲು ಬಡಿದ ತರಹನೇ ಕಂಡಿತು. ಸತ್ಯ ಆ ಸ್ಮೈಲಿಗೆ ಕ್ಲೀನ್ ಬೋಲ್ಡ ಆಗಿ ಹೋದ. ಕರೆಂಟ್ ಹೊಡೆದ ಕಾಗೆ ತರಹ ನಿಂತ. ಸತ್ಯ ತನ್ನ ಹೃದಯವನ್ನು ಹಿಡಿದು ಕೊಂಡು ಅವಳ ಜೊತೆ ಮಾತನಾಡಲು ಬಸ್ಸ್ ಹತ್ತಿಯೇ ಬಿಟ್ಟ. ನಾನು ಒಂಟಿಯಾಗಿ ನಿಂತು ಅವರಿಬ್ಬರಿರು ಹತ್ತಿರುವ ಬಸ್ಸು ಕಣ್ಣಿಂದ ದೂರವಾಗುವವರೆಗೂ ನೋಡುತ್ತಾ ನಿಂತೆ.  ಬಸ್ಸು ಮತ್ತೆ ಧೂಳನ್ನೆಬ್ಬಿಸುತ್ತಾ ಮುಂದೆ ಸಾಗುತ್ತಿತ್ತು.

ಮಾನಸ ಮುದ್ದಾದ ಹುಡುಗಿ. ಹಳ್ಳಿ ಹುಡುಗಿಯಾದರೂ ರೂಪದಲ್ಲಿ ಯಾವ ಅಪ್ಸರೆಗಿಂತಲೂ ಕಡಿಮೆಯಿರಲಿಲ್ಲ. ಅಂದು ಮುಂಜಾನೆಯ ಹೊಂಬಣ್ಣದಲ್ಲಿ ಅವಳ ಮುಖ ತಾಜಾತನದಿಂದ ಕಂಗೊಳಿಸುತ್ತಿತ್ತು. ಕಣ್ಣಂಚಿನಲ್ಲಿ ತೀಡಿದ್ದ ಕಾಡಿಗೆಯಿಂದ ಅವಳ ಕಣ್ಣು ಮೀನಿನಂತೆ ಕಾಣುತ್ತಿತ್ತು. ತಲೆಯ ಮೇಲಿಂದ ಇಳಿಬಿದ್ದ ಮುಂಗುರುಳುಗಳು ಆಕೆಯ ಮುದ್ದಾದ ಕೆನ್ನೆಯನ್ನು ಸ್ಪರ್ಶಿಸುತ್ತಿದ್ದವು. ಮಾನಸಳ ಆ ಸೌಂದರ್ಯ ನೈಜತೆಯಿಂದಲೂ, ಪ್ರಕೃತಿಯ ಸಹಜತೆಯಿಂದಲೂ ಕೂಡಿತ್ತು.ಅವಳ ಸುಂದರ ಸರಳ ಸೌಂದರ್ಯಕ್ಕೆ ಸತ್ಯ ಪ್ರೇಮ ಪೂಜಾರಿಯಾಗಿ ಬಿಟ್ಟಿದ್ದ.

ಮಾನಸ ಕಾಲೇಜ್ ಓದುತ್ತಿದ್ದ ಹುಡುಗಿ. ತನ್ನೂರಲ್ಲಿ ಕಾಲೇಜ್ ಇಲ್ಲವಾದ್ದರಿಂದ ದಿನಾ ಗಜಾನನ ಬಸ್ಸಿನಲ್ಲಿ ತನ್ನೂರಾದ ಗೊರವನಹಳ್ಳಿಯಿಂದ ಹೊನ್ನವಳ್ಳಿಗೆ ಓದಲು ಹೋಗುತ್ತಿದ್ದಳು. ಅದರ ಮಧ್ಯದಲ್ಲಿರುವುದೇ ನಮ್ಮೂರು ಬಸಾಪುರ. ನಮ್ಮ ಸತ್ಯ ಒಂದು ದಿನ ಹೊನ್ನವಳ್ಳಿಗೆ ಹೋಗುವಾಗ ಈ ಮಾನಸಳನ್ನು ನೋಡಿದ್ದನಂತೆ. ಅವಳ ಸುಂದರ ರೂಪ ಕಂಡು ಬಸ್ಸಲ್ಲೇ ಗರ ಬಡಿದವನಂತೆ ನಿಂತು ಕೊಂಡನಂತೆ. ಅಲ್ಲೇ ಪ್ರೇಮ ಲೋಕದ ಕನಸು ಕಾಣುತ್ತಾ ಮದುವೆಯಾದರೆ ಇವಳನ್ನೇ ಎಂದು ನಿರ್ಧರಿಸಿದ್ದನಂತೆ. ಅಂದಿನಿಂದ ಸತ್ಯ ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಬಸ್ ಸ್ಟಾಂಡ್ ಗೆ ಹೋಗೋದು. ಬಸ್ ಹತ್ತುವುದು ಮನಸ್ಸು ತೃಪ್ತಿಯಾಗುವವರೆಗೂ ಮಾನಸ ಜೊತೆ ಮಾತನಾಡುವುದು. ಮತ್ತೆ ಮುಂದಿನ ಸ್ಟಾಪಲ್ಲಿ ಇಳಿಯುವುದು. ಹೀಗೆ ದಿನಾಲೂ ಅಭ್ಯಾಸ ಮಾಡಿಕೊಂಡಿದ್ದ. ಒಂದೊಂದು ಸಲ ಮಾತು ಮುಗಿಯದೇ ಇದ್ದಾಗ ಅಥವಾ ಮಾನಸ ಸುಂದರವಾಗಿ ಕಂಡಾಗ ಸತ್ಯ ಹೊನ್ನವಳ್ಳಿಯ ವರೆಗೂ ಪ್ರಯಾಣ ಮಾಡಿದ ಎಷ್ಟೋ ಉದಾಹರಣೆಗಳಿವೆ. ಮನೆಯಲ್ಲಿ ಅವರಮ್ಮ ಮಗ ಎಲ್ಲಿ ಹೋಗಿದ್ದಾನೆ ಟಿಫನ್ ಮಾಡಲು ಬರಲಿಲ್ಲ ಎಂದು ಕಾಯುತ್ತಿದ್ದರೆ ಸತ್ಯ ಮಾತ್ರ ಮಾನಸಗಾಗಿ ಬಸ್ ಸ್ಟಾಂಡ್ ಕಾಯುತ್ತಿದ್ದ. ಮಾನಸಳ ಸುಂದರ ರೂಪ ನೋಡುವ ಸಲುವಾಗಿಯೇ ಎಷ್ಟೋ ಸಲ ಬೆಳಗಿನ ಉಪಹಾರ ವಿಲ್ಲದೆ ಉಪವಾಸ ಅನುಭವಿಸಿದ್ದೂ ಇದೆ.

ನನಗೇನು ಸತ್ಯನ ಲವ್ ಸ್ಟೋರಿಯಲ್ಲಿ ವಿಶೇಷತೆ ಕಾಣುತ್ತಿರಲಿಲ್ಲ. ಅವನು ಹುಡುಗಿಯರಿಗೆ ಕಾಳು ಹಾಕುವುದರಲ್ಲಿ ನಿಸ್ಸೀಮ. ಅವನ ಮನೆಯ ಹತ್ತಿರದಲ್ಲೆ ಹೈಸ್ಕೂಲ್ ಇತ್ತು.  ಈ ಹೈಸ್ಕೂಲ್ ಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯಿಂದ ಹುಡುಗರು ಹುಡುಗಿಯರು ಓದಲು ಬರುತ್ತಿದ್ದರು. ಮಾನಸ ಸಿಗುವುದಕ್ಕಿಂತ ಮೊದಲು ಹೈಸ್ಕೂಲ್ ನಲ್ಲಿದ್ದ ಸುಂದರ ಹುಡುಗಿಯರನ್ನು ಪಟಾಯಿಸುವುದೇ ಇವನ ಕೆಲಸವಾಗಿತ್ತು. ತನ್ನ ಚಿಕ್ಕಪ್ಪನ ಬುಕ್ ಸ್ಟಾಲ್ ಅಂಗಡಿಯಲ್ಲಿ ಕುಳಿತುಕೊಂಡು ಹುಡುಗಿಯರನ್ನು ಪಟಾಯಿಸಲು ಬಣ್ಣ ಬಣ್ಣದ ಮಾತುಗಳನ್ನಾಡುತ್ತಿದ್ದ. ಅಬ್ಬಾ....!!! ಈ ಹುಡುಗಿಯರೋ......!!! ಅವರೇನು ಕಡಿಮೆಯಿರಲಿಲ್ಲ ಕೆಲವರು ಅವನ ಬಣ್ಣದ ಮಾತಿಗೆ ಮರುಳಾಗಿ ಹೋಗಿದ್ದರು. ನನಗೆ ಗೊತ್ತಿರುವಂತೆ ಅವನು ಹಾಕಿದ ಕಾಳಿಗೆ ನಾಲ್ಕೈದು ಹುಡುಗಿಯರು ಬಲೆಗೆ ಬಿದ್ದಿದ್ದು ಉಂಟು. ಅವರಲ್ಲಿ ನಮ್ಮನೆ ಹತ್ತಿರದ ಹುಡುಗಿ ಶಬಾನಾ ಒಬ್ಬಳು. ಅವಳು ಪ್ರೇಮಿಗಳದಿನದಂದು ಸತ್ಯನಿಗೆ "ಐ ಲವ್ ಯೂ"  ಅಂತ ಬರೆದು ಗ್ರಿಟಿಂಗ್ಸ ಕಾರ್ಡು ಕೊಟ್ಟಿದ್ಲು. ಕೆಇಬಿ ಆಫೀಸ್ ನಲ್ಲಿ ಕ್ಲರ್ಕ್ ಆಗಿದ್ದ ತುಳಜಾ ನಾಯ್ಕನ ಮಗಳು ಲಲಿತ ಸಹ ಅತಿ ಉದ್ದವಾದ ಪ್ರೇಮ ಪತ್ರವನ್ನು ಕಳುಹಿಸಿದ್ದಳು. ಕೋಟೆ ಮಲ್ಲೂರಿನ ಹುಡುಗಿ ಲಕ್ಷ್ಮೀ ಶಾಲೆಯ ಬಿಡುವಿನ ವೇಳೆಯಲ್ಲಿ ಪೆನ್ಸಿಲ್ ರಬ್ಬರ್ ಕೊಳ್ಳುವ ನೆಪದಲ್ಲಿ ಸತ್ಯನನ್ನು ನೋಡಲು ಆಗಾಗ ಬುಕ್ ಸ್ಟಾಲ್ ನಲ್ಲಿ ಹಾಜರಾಗುತ್ತಿದ್ದಳು. ಕಣಿವೆ ಹಳ್ಳದಿಂದ ಬರುತ್ತಿದ್ದ ಹುಡುಗಿ ಶೋಭ ಸತ್ಯನನ್ನು ನೋಡಲೆಂದೇ ಹೈಸ್ಕೂಲ್ ಗೆ ಬರುತ್ತಿದ್ದೇನೆ ಎಂಬಂತೆ ವರ್ತಿಸುತ್ತಿದ್ದಳು. ಇನ್ನು ಎಷ್ಟು ಹುಡುಗಿಯರು ಸತ್ಯನ ಬಣ್ಣದ ಮಾತಿಗೆ ಮರುಳಾಗಿದ್ದರೋ ನನಗೆ ಅಷ್ಟಾಗಿ ತಿಳಿಯದು...

"ಲೋ... ಸತ್ಯ ಯಾಕೋ ಈ ಹುಡುಗಿಯರ ತಲೆ ಕೆಡಿಸ್ತಿಯಾ...?  ಲವ್ವು ಗಿವ್ವು ಅಂತ ಸಿರಿಯಸ್ಸಾಗಿ ತಗೊಂಡ್ರೆ ಏನೋ ಮಾಡ್ತಿಯಾ..? ಪಾಪ ಓದಲು ಬಂದ ಹುಡುಗಿಯರನ್ನ ಈ ತರ ಸತಾಯಿಸಬಾರದು.."

ಅಂತ ಒಂದು ಸಲ ಬುದ್ದಿವಾದ ಹೇಳಿದೆ.
ನನ್ನ ಎದುರಿಗೆ "ಹ್ಞೂಂ.... ಸತಾಯಿಸಲ್ಲ ಬಿಡು" ಎಂದು ಹೇಳುತ್ತಿದ್ದನೇ ಹೊರತು ಹುಡುಗಿಯರನ್ನು ಚುಡಾಯಿಸುವುದು, ಅವರನ್ನು ಪಟಾಯಿಸುವುದು ಮಾತ್ರ ಬಿಟ್ಟಿರಲಿಲ್ಲ. ದಿನ ಬೆಳಗ್ಗೆ ಹೈಸ್ಕೂಲ್ ಗೆ ಬರುವ ಹುಡುಗಿಯರ ದಾರಿಯನ್ನೇ ಕಾಯುತ್ತಾ ನಿಂತಿರುತ್ತಿದ್ದ..

ಸತ್ಯನ ಕಾಲೇಜು ವ್ಯಾಸಂಗ ನಮ್ಮೂರಲ್ಲಿ ಮುಗಿದಾಗ ಉನ್ನತ ವ್ಯಾಸಂಗಕ್ಕೆ ಮೈಸೂರಿಗೆ ಹೋಗಬೇಕಾಗಿ ಬಂತು. ಸರ್ಕಾರಿ ಖೋಟದ ಡಿಪ್ಲಮೋ ಸೀಟು ಮೈಸೂರಿನಲ್ಲಿ ಸಿಕ್ಕಿತ್ತು. ಸತ್ಯನ ಜೊತೆ ಮೈಸೂರಿಗೆ ಹೋಗಲು ಅವರ ಚಿಕ್ಕಪ್ಪ ನನ್ನನ್ನೂ ಕಳುಹಿಸಿದರು. ನಾನು ಸತ್ಯನ ಜೊತೆ ಮೈಸೂರಿಗೆ ಹೋಗಿ ಕಾಲೇಜಿನಲ್ಲಿ  ಅಡ್ಮಿಷನ್ ಮಾಡಿಸಿದೆ. ಉಳಿದುಕೊಳ್ಳಲು ನಮ್ಮೂರಿನ ಕಡೆಯವರೇ ಆದ ಮೂರ್ನಾಲ್ಕು ಹುಡುಗರನ್ನು ಕೌನ್ಸಿಲಿಂಗ್ ನಲ್ಲೇ ಗುರುತಿಸಿ, ಒಟ್ಟಾಗಿ ಸೇರಿಸಿ ಹಾಲ್ ಅಡಿಗೆ ಕೋಣೆ ಇರುವಂತಹ ಚಿಕ್ಕ ಮನೆಯ ವ್ಯವಸ್ಥೆಯನ್ನೂ ಮಾಡಿದ್ದಾಯಿತು. ಹುಡುಗರೆಲ್ಲರೂ ಒಟ್ಟಿಗೆ ಸೇರಿ ಕಷ್ಟ ಪಟ್ಟು ಓದಲಾರಂಬಿಸಿದರು. ಹುಡುಗಿಯರನ್ನು ಪಟಾಯಿಸಲು ಐಲು ಬೈಲಾಗಿ ವರ್ತಿಸುತ್ತಿದ್ದ ನಮ್ಮ ಸತ್ಯನಿಗೆ ಇನ್ನಾದರೂ ಹುಡುಗತನದ ಬುದ್ಧಿ ಹೊರಟು ಹೋಗಿ ಜವಬ್ದಾರಿಯಿಂದ ವರ್ತಿಸುತ್ತಾನೆ ಅಂತ ನಾನು ಊಹಿಸಿದ್ದೆ. ಆದರೆ ನನ್ನ ಊಹೆ ತಪ್ಪಾಗಿ ಹೋಯಿತು. ಊರಲ್ಲಿ ಹುಡುಗಿಯರಿಗೆ ಕಾಳು ಹಾಕಿ ಹಾಕಿ ಪಟಾಯಿಸುವ ಅಭ್ಯಾಸ ಮಾಡಿಕೊಂಡಿದ್ದ ಸತ್ಯ ಅದನ್ನು ಮೈಸೂರಿನಲ್ಲಿಯೂ ಮುಂದುವರೆಸಿದ.
ಸತ್ಯನ ಮೈಸೂರಿ ಪ್ರೇಮ ಪುರಾಣ ನನಗೆ ಗೊತ್ತಾಗಿದ್ದು ಆತ ಓದು ಮುಗಿಸಿ ನಮ್ಮೂರಿಗೆ ವಾಪಸ್ಸು ಬಂದಾಗಲೇ. ಅಲ್ಲಿಯ ವರೆಗೂ ಸತ್ಯ ಮೈಸೂರಿನಲ್ಲಿ ಚನ್ನಾಗಿ ಓದುತ್ತಿದ್ದಾನೆ. ಎಂದೇ ನಾನು ತಿಳಿದು ಕೊಂಡಿದ್ದೆ. ಅವನು ಓದು ಪೂರೈಸಿ ಬಂದ ಕೂಡಲೇ ಅವನಿಗೆ ನೌಕರಿ ಹುಡುಕಿ ಓದಿರುವ ಕನ್ಯೆಯನ್ನೇ ನೋಡಿ ಮದುವೆ ಮಾಡಿದರಾಯಿತು ಎಂದು ಅವನ ಚಿಕ್ಕಪ್ಪ ಯೋಚಿಸುತ್ತಿದ್ದರೆ. ಸತ್ಯ ಊರಿಗೆ ಬಂದು ಮೂರ್ನಾಲ್ಕು ತಿಂಗಳು ಕಳೆದರೂ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದ. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಗೆಳೆಯರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಗರ ಬಡಿದವನಂತೆ ಏನೋ ಯೋಚನೆ ಮಾಡಿಕೊಂಡೇ ಕುಳಿತಿರುತ್ತಿದ್ದ. ಇದನ್ನೆಲ್ಲಾ ಗಮನಿಸಿದ ಅವನ ಚಿಕ್ಕಪ್ಪ ಒಂದು ದಿನ ನಮ್ಮ ಮನೆಗೆ ಬಂದರು.

"ಸತ್ಯ ಮೈಸೂರಿನಿಂದ ವಾಪಾಸ್ಸಾದಾಗಿನಿಂದ ಸರಿಯಾಗಿ ವರ್ತಿಸುತ್ತಿಲ್ಲ. ಸರಿಯಾಗಿ ಊಟಾನೂ ಮಾಡುತ್ತಿಲ್ಲ. ಬಹುಷಃ ಮೈಸೂರಿನಲ್ಲಿ ಏನೋ ಘಟನೆ ನಡೆದಿರಬೇಕು. ಏನಂತ ಸ್ವಲ್ಪ ತಿಳ್ಕೊ ಅವನಿಗೆ ಸರಿಯಾಗಿ ಬುದ್ಧಿವಾದ ಹೇಳು. ಎಷ್ಟೇ ಆದರೂ ತಂದೆ ಇಲ್ಲದ ಹುಡುಗ"

ಅವನ ಚಿಕ್ಕಪ್ಪ ಸ್ವಲ್ಪ ಆತಂಕದಿಂದಲೇ ಹೇಳಿದರು.
ಹಿರಿಯರಾಗಿ ಅವರು ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ನಿರ್ವಹಿಸಲೇ ಬೇಕಿತ್ತು. ಒಂದು ದಿನ ಹೊರಗೆ ಕರೆದುಕೊಂಡು ಆತ್ಮೀಯವಾಗಿ ಮಾತನಾಡಿಸಿ ಅವನ ಮನಸ್ಸಿನಲ್ಲಿರುವ ವಿಚಾರವನ್ನು ಹೊರಗೆ ತಗೆದೆ. ಆಗ ಅವನು ಹೇಳಿದ್ದು "ಸಮ್ರೀನ್ ತಾಜ್' ಎನ್ನು ಸುಂದರ ಹುಡುಗಿಯ ಕತೆಯನ್ನ......

ಸಮ್ರೀನ್ ತಾಜ್ ಮೈಸೂರಿನಲ್ಲಿದ್ದಾಗ ಸಿಕ್ಕ ಹುಡುಗಿ. ಸುಕೋಮಲವಾದ ಸುಂದರವಾದ ಕನ್ಯೆ. ಪ್ರತಿದಿನ ಕಾಲೇಜಿಗೆ ಹೋಗುತ್ತಿದ್ದಳು. ಸತ್ಯನ ಮನೆಯ ಪಕ್ಕದಲ್ಲೇ ಇದ್ದವಳು. ಬಟ್ಟೆ ಒಣಗಿಸಲೆಂದು ಟೆರೇಸ್ ಮೇಲೆ ಬಂದಾಗಲೇ ಸತ್ಯ ಆ ಸುಂದರ ಹುಡುಗಿಯನ್ನು  ಮೊದಲು ನೋಡಿದ್ದು. ಹಳ್ಳಿ ಹುಡುಗಿಯರನ್ನು ನೋಡಿ ಬೆಳೆದ ಸತ್ಯನಿಗೆ ಮೈಸೂರು ಹುಡುಗಿಯ ನಯ ನಾಜೂಕುತನ ಸುಂದರ ರೂಪ ಬಹುವಾಗಿ ಆಕರ್ಷಿಸಿತ್ತು. ಅವಳ ಜಿಂಕೆಯಂತಹ ನಡೆ, ಕೋಗಿಲೆಯಂತಹ ಸುಮಧುರ ಸ್ವರ, ಮಿಂಚಿನಂತೆ ಹೊಳೆಯುತ್ತಿದ್ದ ಆಕೆಯ ಬಟ್ಟಲು ಕಣ್ಣುಗಳು. ಬಳ್ಳಿಯಂತೆ ಬಳುಕುವ ಅವಳ ನಡು. ಅವಳು ಹೆಜ್ಜೆ ಹಾಕಿ ನಡೆಯುತ್ತಿದ್ದರೆ ಅದರ ಗೆಜ್ಜೆಯ ಸದ್ದು ಹೃದಯದೊಳಗೆ ಮಾರ್ಧನಿಸುತ್ತಿದೆಯೇನೋ ಎಂಬಂತಹ ಅಂತರ್ನಾದ. ಇವೆಲ್ಲಾ ರೂಪ ಹೊಂದಿದ್ದ ಸಮ್ರೀನ್ ರೂಪದಲ್ಲಿ ಶ್ರಿಮಂತಿಕೆಯಿಂದ ಕಂಗೊಳಿಸುತ್ತಿದ್ದಳು. ಸಮ್ರೀನ್ ಎದುರಿಗೆ ಬಂದಾಗಲೆಲ್ಲಾ ಸತ್ಯನ ಹೃದಯದಲ್ಲಿ ಅದೆಂತದೋ ಒಲವಗೀತೆ ಹಾಡಿದಂತಾಗುತ್ತಿತ್ತು. ಪದೇ ಪದೇ ತನ್ನ ಹೃದಯದಲ್ಲಿ ಕಚಗುಳಿಯಿಡುತ್ತಿದ್ದ ಆ ನವಿರು ಭಾವನೆ ಸತ್ಯನ ಮನಸಿನಲ್ಲಿ ಬೆಳೆಯುತ್ತಾ ಹೋಯಿತು.....
ಸಮ್ರೀನ್ ಕಾಲೇಜ್ ಗೆ ಹೋಗುವ ಸಮಯ ಮತ್ತು ಸತ್ಯನ ಸಮಯ ಒಂದೇಯಾದ್ದರಿಂದ ಆಗಾಗ ದಾರಿಯಲ್ಲಿಯೂ ಸಿಗುತ್ತಿದ್ದಳು. ಮೊದ ಮೊದಲು ಕಣ್ಣುಗಳಲ್ಲೇ ಮಾತು. ಸನ್ನೆಗಳು. ಆಗಾಗ ಟೆರೆಸ್ ಮೇಲೆ ಮೌನ ಮಾತುಗಳು, ಮನಸುಗಳು ಏನೆನೋ ಮಾತನಾಡಿದಂತೆ ಇಬ್ಬರಿಗೂ ಹಿತ ಅನುಭವವನ್ನು ನೀಡಿದ್ದವು. ಸತ್ಯ ಹೇಗೋ ಅವಳ ತಮ್ಮನ ಗೆಳೆತನ ಮಾಡಿ ಸಮ್ರೀನ್ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲಾರಂಭಿಸಿದ. ಸಮ್ರೀನ್ ಗೂ ಸಹ ಅವಳ ತಮ್ಮನೇ ಮದ್ಯವರ್ತಿಯಾಗಿದ್ದ. ಹೇಗೋ ಇಬ್ಬರ ಪ್ರೇಮ ಸುಭದ್ರವಾಯಿತು. ಅವರ ಪ್ರೇಮ ಸುಭದ್ರವಾಗಲು ಹೆಚ್ಚಿನ ಸಮಯ ತೆಗೆದು ಕೊಂಡಿದ್ದರಿಂದಲೋ ಏನೋ ಆಗಲೇ ಸತ್ಯನ ಓದು ಅಂತಿಮ ಹಂತಕ್ಕೆ ಬಂದಿತ್ತು. ಇನ್ನೇನಿದ್ದರೂ ಸತ್ಯನ ಓದು ಮೈಸೂರಿನಲ್ಲಿ ಬರಿಯ ಒಂದು ತಿಂಗಳು ಮಾತ್ರ ಬಾಕಿ ಉಳಿದಿತ್ತು. ಪರೀಕ್ಷೆಯೆಲ್ಲಾ ಮುಗಿದ ಮೇಲೆ ಗಂಟು ಮೂಟೆ ಕಟ್ಟಿಕೊಂಡು ಬಸಾಪುರಕ್ಕೆ ವಾಪಸ್ಸಾಗಬೇಕಿತ್ತು. ವಾಪಸ್ಸು ಹೋಗುವುದಾದರೂ ಹೇಗೆ.....?  ಸಮ್ರೀನ್ ಪ್ರೀತಿಯನ್ನು ಬಿಟ್ಟು ಬರಬೇಕೇ....? ಅವಳು ಜೊತೆಗೆ ಬರಲು ಒಪ್ಪಿಗೆ ಸೂಚಿಸಿದಳಾದರೂ ಇನ್ನೂ ಹದಿನೆಂಟರ ಹೊಸ್ತಿಲಲ್ಲಿರುವ ಅಪ್ರಾಪ್ತೆ. ಕೋಮು ಗಲಬೆಗಳು ನಡೆಯುತ್ತಿದ್ದ ಆ ಸಂದರ್ಭದಲ್ಲಿ ಸಮ್ರೀನ್ ಳನ್ನು ಊರಿಗೆ ತರುವುದಾದರೂ ಹೇಗೆ...?  ಮನೆಯಲ್ಲಿ ಸಮ್ರೀನ್ ಳನ್ನು ಒಪ್ಪುವರೇ...? ಇನ್ನೂ ಸ್ವಂತ ಕಾಲಲ್ಲಿ ನಿಲ್ಲದೇ, ಕೆಲಸವೇ ಇಲ್ಲದಿರುವಾಗ ಪ್ರೀತಿಯನ್ನು ಹೇಗೆ ಮುನ್ನಡೆಸಬೇಕು...? ಇಷ್ಟೆಲ್ಲಾ ಸಮಸ್ಯೆಯನ್ನು ಹೊತ್ತು ಕೊಂಡು ಊರಿಗೆ ವಾಪಾಸ್ಸಾದ ಸತ್ಯ ಹೇಗಿರಲು ಸಾಧ್ಯ ಹೇಳಿ.... ? ಅವಳದೇ ಯೋಚನೆ... ಮನಸಿನಲ್ಲಿ ಅವಳೇ ತುಂಬಿರುವಾಗ ವಾಸ್ತವದಲ್ಲಿ ನಡೆಯುವ ಪ್ರಾಪಂಚಿಕ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಾದರೂ ಹೇಗೆ...?  ದೇಹವೆಲ್ಲೋ.... ಮನಸ್ಸು ಎಲ್ಲೋ.... ಸರಿಯಾಗಿ ಮಾತಿಲ್ಲ.... ಹೊಟ್ಟೆಗೆ ಊಟವಿಲ್ಲ.... ಮನಸು ಏನೋ ಕಳೆದುಕೊಂಡಿದೆ ಎನ್ನುವಂತಹ ನಶ್ವರ ಭಾವ. ಊರಿಗೆ ವಾಪಸ್ಸು ಬಂದಿದ್ದು ಸತ್ಯನ ದೇಹವೇ ಹೊರತು ಮನಸ್ಸಲ್ಲ.

ಮೈಸೂರಿನಲ್ಲೇ ಇದ್ದ ಅವನ ಮನಸ್ಸನ್ನು  ಅವನಿಗೂ ತಿಳಿಯದಂತೆ ನಿಧಾನವಾಗಿ ವಾಪಸ್ಸು ತರಲಾರಂಭಿಸಿದೆ. ನೌಕರಿ ಹುಡುಕುವಂತೆ ಹೇಳುತ್ತಿದ್ದೆ. ಹಿರಿಯ ಮಗನಾಗಿ ತನ್ನ ಜವಬ್ದಾರಿಯನ್ನು ಸ್ವಲ್ಪ ಸ್ವಲ್ಪವೇ ಗಮನಕ್ಕೆ ತಂದೆ. ಮನೆಯ ಪರಿಸ್ಥಿತಿ ತಾನು ಮಾಡಬೇಕಾದ ಕೆಲಸಗಳು ಎಲ್ಲವೂ ಚರ್ಚಿಸುತ್ತಿದ್ದೆವು. ನಿಧಾನವಾಗಿ ಸಮ್ರೀನ್ ಮನಸ್ಸಿನಿಂದ ದೂರವಾಗಲಾರಂಭಿಸಿದಳು. ಸಮ್ರೀನ್ ಗಿಂತ ದುಡಿಮೆಯ ಅವಶ್ಯಕ ಯಾವಾಗ ಜಾಸ್ತಿಯಾಯಿತೋ ಅವಳು ನಿಧಾನವಾಗಿ ಮನಸ್ಸಿನಿಂದ ದೂರವಾಗಿಯೇ ಬಿಟ್ಟಳು..

ಕೆಲಸ ದುಡಿಮೆ ಅಂತ ಆತ ಹೋರಾಡಿದ್ದರಿಂದಲೋ ಏನೋ ಆತ ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಿದ. ಪ್ರಾರಂಭದಲ್ಲಿ ಕುಂಟುತ್ತಾ ನಡೆಯಿತಾದರೂ ಮೂರ್ನಾಲ್ಕು ತಿಂಗಳಲ್ಲಿ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲಾರಂಭಿಸಿದ. ತಿಂಗಳಿಗೆ ಐವತ್ತು ಅರವತ್ತು ಸಾವಿರ ರೂಪಾಯಿಗಳ ಲಾಭ ಸಿಗುತ್ತಿತ್ತು. ತಾನಂದುಕೊಂಡಂತೆ ಸಂಪಾದನೆಯಾಗುತ್ತಿರುವಾಗ ಸಮ್ರೀನ್ ತಾಜ್ ಮತ್ತೆ ನೆನಪಿಗೆ ಬಂದಳು. ಅದಾಗಲೇ ಕಾಲ ಮಿಂಚಿಯಾಗಿತ್ತು. ಅವಳನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ದುಡಿಮೆ ಹಣ ಅಂತ ಸಿಕ್ಕಾಗ ಪ್ರಿತಿ ಕಣ್ಮರೆಯಾಗಿತ್ತು. ಸಮ್ರೀನ್ ಳನ್ನು ಪಡೆಯುವ ಸಮಯವೂ ಮೀರಿ ಹೋಗಿತ್ತು...

ಒಂದು ದಿನ ಹೊನ್ನವಳ್ಳಿಗೆ ಗಜಾನನ ಬಸ್ಸಿನಲ್ಲಿ ಹೋಗುವಾಗ ಸಮ್ರೀನ್ ತಾಜ್ ನಂತೆಯೇ ಕಾಣುತ್ತಿದ್ದ ಮಾನಸಳನ್ನು ಕಂಡ. ಅವಳಲ್ಲಿ ಸಮ್ರೀನ್ ರೂಪ ಗುಣಗಳೆಲ್ಲಾ ಇದ್ದವು. ಅದೇ ಮಾತು, ಅದೇ ನಡೆ, ಯಾವುದರಲ್ಲಿಯೂ ಸಮ್ರೀನ್ ಳನ್ನು ತೆಗೆದು ಹಾಕುವಂತಿರಲಿಲ್ಲ. ಮನಸ್ಸಿನಲ್ಲಿ ಅವಿರ್ಭವಿಸಿಕೊಂಡಿದ್ದ ಪ್ರೀತಿಯ ಭಾವನೆಗಳು ಮತ್ತೆ ಚಿಗುರೊಡೆಯಲಾರಂಭಿಸಿದ್ದವು. ಮಾನಸಳನ್ನು ಹಿಂಬಾಲಿಸಿದ.  ದಿನಾಲೂ ಅವಳಿಗಾಗಿ ಬಸ್ ಸ್ಟ್ಯಾಂಡ್ ಕಾದ. ಅವಳ ಪ್ರೀತಿ ಪಡೆಯಲು ಕೆಲಸ ವಿಲ್ಲದಿದ್ದರೂ ಹೊನ್ನವಳ್ಳಿಯವರೆಗೂ ಹೋದ. ಅವಳೂ ಒಪ್ಪಿಕೊಂಡಳು. ಸಮ್ರೀನ್ ಗಿಂತಲೂ ಹೆಚ್ಚಾಗಿಯೇ ಹತ್ತಿರವಾದಳು. ಸತ್ಯನಿಗೆ ಈಗ ಯಾವುದೇ ಸಮಸ್ಯೆಗಳಿರಲಿಲ್ಲ.  ಕೈ ತುಂಬಾ ಸಂಪಾದನೆ. ಮದುವೆಯ ವಯಸ್ಸು ಬೇರೆ. ಮನೆಯವರನ್ನು ಎದುರಿಸುವಷ್ಟು ಧೈರ್ಯವೂ ಬಂದಿತ್ತು.  ಜೊತೆಗೆ ತಾನೇ ಇಷ್ಟಪಟ್ಟ ಸುಂದರ ಹುಡುಗಿ, ಮಾನಸಳ ಸಂಪೂರ್ಣ ಒಪ್ಪಿಗೆಯೂ ಇತ್ತು... ಇನ್ನೇನು ವಾಲಗ ಊದಿಸುವುದೊಂದೇ ಬಾಕಿ ಇತ್ತು....

ಅಷ್ಟರಲ್ಲಿ ನನ್ನ ವ್ಯವಹಾರ ಕೈ ಕೊಟ್ಟಿತ್ತು. ನಾನು ಊರು ಬಿಟ್ಟು ಬೆಂಗಳೂರು ಸೇರಿಕೊಂಡೆ. ಅಲ್ಲಿಂದ ಮುಂದೆ ಸತ್ಯ ಮತ್ತು ಮಾನಸಳ ಪ್ರೀತಿ ಏನಾಯಿತೋ ತಿಳಿಯಲಿಲ್ಲ.....
ಸತ್ಯ ಮತ್ತೆ ನನಗೆ ಸಿಕ್ಕಿದ್ದು ಎರಡು ವರ್ಷಗಳ ನಂತರ. ತನ್ನ ವಿವಾಹ ಸಮಾರಂಭದ ಆಹ್ವಾನ ಪತ್ರಿಕೆ ನೀಡಲು ಬೆಂಗಳೂರಿಗೆ ಬಂದಾಗ. ತನ್ನ ವಿವಾಹದ ಮೊದಲ ಪತ್ರಿಕೆ ನಿನಗೆ ಕೊಡುತ್ತಿದ್ದೇನೆ ಬರಲೇ ಬೇಕು ಎಂದು ಆಹ್ವಾನಿಸಿದನು. ಕುತೂಹಲಕ್ಕೆ ಪತ್ರಿಕೆಯನ್ನು ತೆಗೆದು ಓದಲಾರಂಭಿಸಿದೆ. ನನಗೆ ಆಶ್ಚರ್ಯವಾಯಿತು. ವದುವಿನ ಹೆಸರು "ಸಿಂಚನ" ಎಂದು ಬರೆದಿತ್ತು. ಹಾಗಾದರೆ ಮಾನಸ ಏನಾದಳು...? ಅವಳೇನಾದರೂ ಸತ್ಯನನ್ನು ತಿರಸ್ಕರಿಸಿದಳೆ....? ಪ್ರೇಮ ವಿವಾಹಕ್ಕೆ ಮನೆಯವರೇನಾದರೂ ಅಡ್ಡ ಬಂದರೆ....?  ಪ್ರೇಮ ವಿವಾಹದಿಂದಾಗುವ ತೊಂದರೆಗಳಿಗೆ ಸತ್ಯ ಹೆದರಿದನೇ....? ಹೀಗೆ ಹಲವು ಪ್ರಶ್ನೆಗಳು ಮೂಡಿದವು. ಮಾನಸ ವಿಷಯದ ಬಗ್ಗೆ ಸತ್ಯನನ್ನು ಕೇಳಲು ಮನಸ್ಸಾಗಲಿಲ್ಲ. ಸಿಂಚನಾ ಬಾಳ ಸಂಗಾತಿಯಾಗಿ ಆಯ್ಕೆಯಾದ ಮೇಲೆ ಮನಸ ವಿಷಯವನ್ನು ಕೆದಕುವುದು ಸರಿಯೇ..? ಒಂದು ವೇಳೆ ಕೇಳಿದೆ ಎನ್ನಿ ಅದು ಅವನಿಗೆ ಕಹಿ ನೆನಪಾಗಿರಬಹುದು. ಅಥವಾ ಮಾನಸಾಳನ್ನು ಬಿಡಲು ಕಾರಣವಾದ ಆ ಘಟನೆ ಅವನಿಗೆ ನೋವು ತರಬಹುದು. ಎಂದು ಕೊಂಡು ಸುಮ್ಮನಾದೆ.

ಬೆಂಗಳೂರಿನ ಇನ್ನಿತರ ಮನೆಗಳಿಗೆ ಆಹ್ವಾನ ಪತ್ರಿಕೆ ಹಂಚಲು ಸತ್ಯನೊಂದಿಗೆ ಹೊರಟೆ. ಹತ್ತಾರು ಮನೆಗಳಿಗೆ ತಿರುಗಿದ ನಂತರ ಕೋರಮಂಗಲಕ್ಕೆ ಹೊರಟೆವು. ಕೋರಮಂಗಲದಲ್ಲಿರುವವರು ತುಂಬಾ ಬೇಕಾದವರು ಅಲ್ಲಿಗೆ ಹೋಗಲೇ ಬೇಕು ಎಂದು ಸತ್ಯ ಹಲವು ಬಾರಿ ಒತ್ತಿ ಒತ್ತಿ ಹೇಳಿದ್ದ. ಕೋರಮಂಗಲ ತಲುಪಿದ ಕೂಡಲೇ ಸತ್ಯನಷ್ಟೇ ವಯಸ್ಸಾದ ತರುಣನೊಬ್ಬ ಮನೆಗೆ ಕರೆದುಕೊಂಡು ಹೋದ. ಚಿಕ್ಕದಾದ ಮನೆ. ಹಾಲ್ನಲ್ಲಿ ಟಿ.ವಿ. ಯಾರಾದರೂ ಬಂದರೆ ಕುಳಿತುಕೊಳ್ಳಲು ದಿವಾನ್ ಕಾಟನ್ನು ಹಾಕಿದ್ದರು. ನವಜೋಡಿಗಳು ಆಗ ತಾನೆ ಹೊಸದಾಗಿ ಸಂಸಾರ ಹೂಡಿದಂತೆ ಕಂಡಿತು. ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನನಗೊಂದು ಆಶ್ಚರ್ಯ ಕಾದಿತ್ತು. ಆ ತರುಣನ ಜೊತೆಗೆ ಮಾನಸ ಪತ್ನಿಯಂತೆ ನಿಂತಿದ್ದಳು. ಅದೇ ಮಾನಸ.....!!!  ಗಜಾನನ ಬಸ್ಸಿನಲ್ಲಿ ಸತ್ಯನಿಗೆ ದಿನವೂ ಸಿಗುತ್ತಿದ್ದವಳು.

ಅವಳನ್ನು ಗಮನಿಸಿ ನೋಡಿದೆ. ಕೊರಳಲ್ಲಿ ಅರಿಶಿಣ ಕುಂಕುಮದಿಂದ ಶೋಭಿತವಾದ ಮಾಂಗಲ್ಯ ಸರ ಕಾಣಿಸಿತು. ಸಂಸಾರದ ಜಂಜಾಟಗಳಿಗೆ ಸಿಲುಕಿ ಮಾನಸಳ ಮುಖ ಸ್ವಲ್ಪ ಬಾಡಿ ಹೋಗಿತ್ತು. ಅವಳ ಮನಸಿನಲ್ಲಿ ಹಲವು ಗೊಂದಲಗಳು ಇವೆಯೇನೋ ಎಂಬಂತೆ ಮುಖದ ಚರ್ಯೆ  ಪ್ರಶ್ನಾತೀತವಾಗಿ ಕಾಣಲಾರಂಭಿಸಿತು. ಸತ್ಯನನ್ನು ಕಂಡ ಕೂಡಲೇ ಮುಖದಲ್ಲಿ ಮೌನತೆ ಆವರಿಸಿಕೊಂಡಿತು. ಸತ್ಯ ಮದುವೆಗೆ ಬರಲೇ ಬೇಕು ಎಂದು ಆಹ್ವಾನಿಸಿದ. ಮಾನಸ   'ಹ್ಞೂಂ'  ಎಂದು ಹೇಳಿದಳು ನಾವು ಅಲ್ಲಿಂದ ಹೊರಟಾಗ ಮಾನಸ ವಿನಮ್ರತೆಯಿಂದ ಕೈ ಮುಗಿದು ನಿಂತಿದ್ದಳು. ನನ್ನ ಮನಸಿನಲ್ಲಿ ಮೂಡಿದ ಹಲವು ಪ್ರಶ್ನೆಗಳಿಗೆ ಸತ್ಯನಲ್ಲಿ ಮಾತ್ರ ಉತ್ತರವಿತ್ತು.  ಎಲ್ಲಿ ಸತ್ಯ ಮಾನಸಳ ಪ್ರೀತಿಯನ್ನು  ತಿರಸ್ಕರಿಸಿದನೋ ಎಂದೆನಿಸಿತು. ನಾನು ಮಾನಸಳ ವಿಷಯ ಕೇಳಬೇಕು ಎನ್ನುವಷ್ಟರಲ್ಲಿ ಸತ್ಯ ಎಲ್ಲ ಕತೆಯನ್ನು ಹೇಳಲಾರಂಭಿಸಿದ..........

ಪ್ರತಿದಿನವೂ ಮಾನಸಳಿಗಾಗಿ ಗಜಾನನ ಬಸ್ಸಲಿ ಹತ್ತಿಕೊಂಡು ಮನಃಸ್ಪೂರ್ತಿಯಾಗಿ ಮಾತನಾಡಿ ಮುಂದಿನ ಊರಾದ ದೋನಿಯ ಕಟ್ಟೆಯಲ್ಲಿ ಇಳಿಯುತ್ತಿದ್ದೆ. ಜಾಸ್ತಿ ಮಾತು ಇದ್ದಾಗ ಹೊನ್ನವಳ್ಳಿಯ ವರೆಗೂ ಹೋಗಿ ಬರುತ್ತಿದ್ದೆ. ಹೀಗೆ ನಮ್ಮ ಪ್ರೀತಿ ಎರಡು ವರ್ಷದ ವರೆಗೂ ಮುಂದುವರೆಯಿತು. ಇದ್ದಕ್ಕಿದ್ದಂತೆ ಒಂದು ದಿನ ಮಾನಸ ತುಂಬಾ ದುಃಖದಿಂದ ಇದ್ದಳು ಕಾರಣ ಮನೆಯಲ್ಲಿ ಅವಳಿಗೆ ಗಂಡು ನೋಡಿದ್ದರು. ನಿಶ್ಚಿತಾರ್ಥ ಮುಂದಿನ ರವಿವಾರ ನಿಶ್ಚಯವೂ ಆಗಿತ್ತು. ಮಾನಸಳಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಮಗೆ ಓಡಿ ಹೋಗಿ ಮದುವೆಯಾಗುವುದೊಂದೇ ದಾರಿ. ಒಂದು ದಿನ ಅದಕ್ಕೆಂದೇ ನಿರ್ಧರಿಸಿಕೊಂಡೆವು. ಆ ದಿನ ಮಾನಸ ಕಾಲೇಜ್ ಹೋಗುವ ನೆಪದಲ್ಲಿ ಹೊನ್ನವಳ್ಳಿಗೆ ಬಂದಳು. ನಾನೂ ಸಹ ಹೊನ್ನವಳ್ಳಿಗೆ ಹೋಗಿದ್ದೆ. ಮಠದಲ್ಲಿ ಸ್ವಲ್ಪ ಹೊತ್ತು ಕುಳಿತು ಮಾತನಾಡಿಕೊಂಡೆವು.
ಮಾನಸ ಅವರ ಮನೆಯಲ್ಲಿ ಹಿರಿಯ ಮಗಳು. ಚಿಕ್ಕಂದಿನಲ್ಲೇ ತಂದೆ ತೀರಿಕೊಂಡಿದ್ದರು. ಇರುವ ಎರಡು ಎಕರೆ ನೀರಾವರಿ ಜಮೀನಿನಿಂದ ಬರುವ ಆದಾಯದಲ್ಲಿ ಮಕ್ಕಳ ಓದು ಮನೆತನ ಎಲ್ಲಾ ನಡೆಯಬೇಕಿತ್ತು. ಮಾನಸಾಗೆ ಇಬ್ಬರು ಪುಟ್ಟ ತಂಗಿಯರು. ಒಬ್ಬಳು ಎಂಟನೇ ತರಗತಿ ಮತ್ತೊಬ್ಬಳು ಆರನೇ ತರಗತಿಯಲ್ಲಿ ಓದುತ್ತಿದ್ದರು. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಮದುವೆ ಮಾಡಿ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿಸಲು ಮಾನಸ ತಾಯಿ ಹಗಲಿರಳು ಶ್ರಮಿಸುತ್ತಿದ್ದಳು. ಗಂಡು ಮಕ್ಕಳಿಲ್ಲದ ಕುಟುಂಬಕ್ಕೆ ಹಿರಿಯ ಮಗಳ ಜವಾಬ್ದಾರಿ ಹೆಚ್ಚಿರುತ್ತದೆ. ಇಬ್ಬರು ತಂಗಿಯರ ಜವಾಬ್ದಾರಿ ಹೋರಬೇಕಾದ ಅಕ್ಕಳೇ ಮನೆತನದ ಗೌರವವನ್ನು ಧಿಕ್ಕರಿಸಿ ಓಡಿ ಹೋಗಿ ಮದುವೆ ಆಗುವುದು ಸಾಧ್ಯವೇ...?  ಏನೂ ತಪ್ಪು ಮಾಡದ ಆ ಪುಟ್ಟ ತಂಗಿಯರನ್ನು ಯಾರಾದರೂ ಮದುವೆಯಾಗುತ್ತಾರೆಯೇ...? ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂದು ಜನ ಮಾತನಾಡಿಕೊಳ್ಳದೇ ಇರುತ್ತಾರೆಯೇ...?  ತನ್ನ ಈ ಪ್ರೇಮ ವಿವಾಹದಿಂದ ಇಬ್ಬರು ತಂಗಿಯರ ಜೀವನ ಹಾಳಾಗುತ್ತದೆಯೆಂದರೆ ಆ ಮದುವೆ ಯಾರಿಗೆ ಸುಖ ಸಂತೋಷ ನೀಡುತ್ತೆ ಹೇಳಿ....?  ನನ್ನ ಪರಿಸ್ಥಿತಿಯೂ ಸಹ ಮಾನಸಳ ಪರಿಸ್ಥಿತಿಗಿಂತ ಭಿನ್ನವೇನಿರಲಿಲ್ಲ. ನಾನು ಏಳನೇ ತರಗತಿ ಓದುವಾಗ ಅಪ್ಪ ತೀರಿಕೊಂಡರು. ಅಮ್ಮನಿಗೆ ಬರುವ ಪೆನ್ಷನ್ ಹಣದಿಂದ ನಮ್ಮ ಜೀವನ. ಅಪ್ಪ ಸತ್ತಾಗ ಬಂದ ಹಣದಿಂದ ನಾವು ಮೂವರು ಮಕ್ಕಳ ಭವಿಷ್ಯಕ್ಕೆಂದು ಹಣವನ್ನು ಬ್ಯಾಂಕಲ್ಲಿ ಇರಿಸಿದ್ದರು. ಆ ಹಣವೂ ಸಹ ವಿದ್ಯಾಭ್ಯಾಸಕ್ಕೆಂದು ಖಾಲಿಯಾಗಿ ಹೋಗಿತ್ತು. ಈಗ ನಾನು ದುಡಿಮೆಯ ಕಡೆಗೆ ಆದ್ಯತೆ ಕೊಡಬೇಕಿತ್ತು. ತಮ್ಮನ ಭವಿಷ್ಯವೂ ರೂಪಿಸಬೇಕಿತ್ತು. ಇಷ್ಟೆಲ್ಲಾ ಜವಾಬ್ದಾರಿಯಿರುವ ನಾವಿಬ್ಬರೂ ಮನೆತನದ ಗೌರವಗಳನ್ನು ಹರಾಜು ಹಾಕಿ ಓಡಿಹೋಗುವುದು ಸರಿ ಕಾಣಲಿಲ್ಲ. ನಿಜವಾದ ಪ್ರೀತಿ ಎಂದರೆ ಮದುವೆ ಆಗುವುದು ಒಂದೇನಾ....? ಹಾಗೆ ಮಾಡಿದರೆ ಅದು ಸ್ವಾರ್ಥ ಎನಿಸುವುದಿಲ್ಲವೇ... ನಮ್ಮಿಬ್ಬರ ಮದುವೆಯಿಂದ ನಮಗೆ ಅವಲಂಬಿಸಿದ ಇತರ ಸದಸ್ಯರ ಜೀವನ ಹಾಳಾಗುತ್ತೆ ಎನ್ನುವುದಾದರೆ ಅಂತಹ ಮದುವೆ ಯಾಕಾದರೂ ಆಗಬೇಕು...?  ನಿಜವಾದ ಪ್ರೀತಿ ಅಡಗಿರುವುದು ತ್ಯಾಗದಲ್ಲಿ. ನಿಸ್ವಾರ್ಥ ಯೋಚನೆಯಲ್ಲಿ...... ನಿಜವಾದ ಪ್ರೀತಿ ಇರುವುದು ಕರ್ತವ್ಯವನ್ನು ನಿಭಾಯಿಸುವುದರಲ್ಲಿ. ಮನೆತನದ ಗೌರವಗಳನ್ನು ಕಾಪಾಡುವುದರಲ್ಲಿ.... ನಿಜವಾದ ಪ್ರೀತಿ ಅಡಗಿರುವುದು ನಮ್ಮನ್ನು ಹೆತ್ತ ತಂದೆ ತಾಯಿಗಳಿಗೆ ನೋವನ್ನುಂಟು ಮಾಡದೇ ಇರುವುದು......
ತ್ಯಾಗ ಪ್ರೀತಿಯ ಇನ್ನೊಂದು ಮುಖ. ತ್ಯಾಗ ಮತ್ತು ಪ್ರೀತಿ ನಾಣ್ಯದ ಎರಡು ಮುಖಗಳಿದ್ದಂತೆ. ನಾಣ್ಯವನ್ನು ಚಿಮ್ಮಿ ಟಾಸ್ ಹಾಕಿದಾಗ ಕೆಲವರಿಗೆ ಪ್ರೀತಿಯ ಮುಖ ಕಾಣುತ್ತದೆ. ಮತ್ತೆ ಕೆಲವರಿಗೆ ತ್ಯಾಗದ ಮುಖ ಕಾಣುತ್ತದೆ. ಆದರೆ ನಾವು ಎಷ್ಟು ಸಲ ನಾಣ್ಯವನ್ನು ಚಿಮ್ಮಿ ಟಾಸ್ ಹಾಕಿದರೂ ಸಹ  ತ್ಯಾಗದ ಮುಖವೇ ಕಾಣ ಸಿಗುತ್ತಿತ್ತು. ದೇವರು ನಮಗೆ ಪ್ರೀತಿಯ ಮುಖವನ್ನು ತೋರಿಸಲೇ ಇಲ್ಲ. ಕೊನೆಗೆ ಇಬ್ಬರೂ ನಿರ್ಧರಿಸಿ ತ್ಯಾಗವನ್ನೇ ಆರಿಸಿಕೊಂಡೆವು. ಅಂದು ತೆಗೆದುಕೊಂಡು ಹೋಗಿದ್ದ ಇಪ್ಪತ್ತು ಸಾವಿರ ಹಣ ಮಾನಸಳ ವಿವಾಹಕ್ಕೆ ಅನುಕೂಲವಾಗಲೆಂದು ಅವಳ ಕೈಗೆ ನೀಡಿದೆ. ಮಗಳ ಮದುವೆಗೆಂದು ಹಗಲಿರುಳು ಶ್ರಮ ವಹಿಸಿ ಸಾಲ ಸೋಲ ಮಾಡಿಕೊಂಡಿದ್ದ ಅವಳ ತಾಯಿಗೆ ಇದರಿಂದ ಸ್ವಲ್ಪ ಸಹಾಯವೂ ಆಯಿತು. ಅಲ್ಲಿಂದ ನಮ್ಮಿಬ್ಬರ ಸ್ವಾರ್ಥದ ಪ್ರೀತಿ ಮುಕ್ತಾಯವಾಗಿ... ತ್ಯಾಗದ ನಿಜವಾದ ಪ್ರೀತಿ ಪ್ರಾರಂಭವಾಯಿತು. ಅಲ್ಲಿಂದ ಇಬ್ಬರೂ ಸಂಪರ್ಕವನ್ನು ಕಳೆದುಕೊಂಡೆವು.  ಫೋನ್ ಸಹ ಮಾಡುವುದಿಲ್ಲ. ಗಂಡನ ಜೊತೆ ಆಕೆ ಎದುರು ಸಿಕ್ಕಾಗಲೂ ಸಹ ನಾವಿಬ್ಬರು ಮಾತನಾಡುವುದಿಲ್ಲ. ಆದರೆ ಈಗಲೂ ಪ್ರೀತಿಸುತ್ತೇವೆ.  ಸ್ನೇಹಿತರಂತೆ.... ಒಂದೇ ಕುಟುಂಬದಲ್ಲಿ ಬೆಳೆದ ಸದಸ್ಯರಂತೆ..... ತಾಯಿಯ ಮಮತೆಯಂತೆ.... ತಂದೆಯ ಆರೈಕೆಯಂತೆ... ಸೋದರನ ಅಕ್ಕರೆಯಂತೆ.... ಪ್ರೇಮಿಗಳ ಕನಸಿನಂತೆ ಅಷ್ಟೇ..... ಈಗ ಅವಳ್ಯಾರೋ.... ನಾನ್ಯಾರೋ... ಇದು ಇಬ್ಬರೂ ಮಾಡಿಕೊಂಡ ನಿರ್ಧಾರ"

ಅಷ್ಟು ಹೇಳಿ ಸತ್ಯ ಸುಮ್ಮನಾದ.......

ಸತ್ಯನ ಮದುವೆಯಾಗಿ ಒಂದು ತಿಂಗಳಾಗಿತ್ತು. ನಾನು ಸಹ ಊರಲ್ಲೇ ಇದ್ದೆ. ಇಬ್ಬರೂ ಗೌಡನ ಕಟ್ಟೆ ಚಾನಲ್ ಮುಂದೆ ಕಾರಿನಲ್ಲಿ ಕುಳಿತು ಜ್ಯೂಸ್ ಕುಡಿಯುತ್ತಿದ್ದವು. ನಾನು ಬೇಕಂತಲೇ ಮಾನಸ ಈಗ ಹೇಗಿದ್ದಾಳೋ ಎಂದೆ...
"ಯಾರವಳು...?"
ನನ್ನನ್ನೇ ಪ್ರಶ್ನಿಸಿದ
"ಸಿಂಚನಾ ಹೇಗಿದ್ದಾಳೋ...?"  ಎಂದೆ
"ನಿಜವಾಗಿಯೂ ನಾನು ಪುಣ್ಯವಂತ ಅವಳಂತವರು ಹೆಂಡತಿಯಾಗಿ ಸಿಗುವುದು ಲಕ್ಷಕ್ಕೊಬ್ಬರಿಗೆ ಮಾತ್ರ. ನನಗೆ, ನಮ್ಮ ಮನೆಯ ಪರಿಸರಕ್ಕೆ ಚನ್ನಾಗಿ ಹೊಂದಿಕೊಂಡಿದ್ದಾಳೆ. ನಮ್ಮ ತಂದೆ ತಾಯಿಯರು ಮಾಡಿದ ಪುಣ್ಯದ ಫಲದಿಂದಲೋ ಏನೋ ನನಗೆ ಒಳ್ಳೆಯ ಹೆಂಡತಿ ಸಿಕ್ಕಿದ್ದಾಳೆ"

ಸತ್ಯ ಸಂತೋಷದಿಂದ ಹೇಳಿದ...

ನಾನು ಸತ್ಯನ ಮಾತನ್ನು ಕೇಳಿ ಇನ್ನೊಂದು ಸಿಪ್ ಜ್ಯೂಸ್ ಹೀರಲಾರಂಬಿಸಿದೆ. ಅಷ್ಟರಲ್ಲಿ ಗಜಾನನ ಬಸ್ಸು ಜೋರಾಗಿ ಬರುತ್ತಿತ್ತು. ಈ ಸಲ ಬಸ್ಸು ಧೂಳನ್ನೆಬ್ಬಿಸಲಿಲ್ಲ. ಏಕೆಂದರೆ ಆ ರಸ್ತೆಯಲ್ಲಿ ಹೊಸದಾಗಿ ಟಾರ್ ಹಾಕಿದ್ದರು......

Monday, 8 August 2016

musuku

ಮುಸುಕು.....(Story)

ಮನೆಯಿಂದ ಅವಸರವಾಗಿ ಹೆಜ್ಜೆಹಾಕುತ್ತಾ ಆಫೀಸಿಗೆ ಬಂದೆ. ನಡೆದು ಬಂದ ಅವಸರಕ್ಕೆ ಆಗಲೇ ಮೈ ಬೆವರಲಾರಂಭಿಸಿತ್ತು. ಇಂದು ಆಫೀಸಿನಲ್ಲಿ ಕೆಲಸ ಒತ್ತಡ ಬೇರೆ ಜಾಸ್ತಿ ಇತ್ತು. ನೆನ್ನೆಯೇ ಮಾಡಿ ಮುಗಿಸಬೇಕಾದ ಪ್ರಾಜೆಕ್ಟ್ ಇನ್ನೂ ಪೂರ್ಣಗೊಂಡಿರಲಿಲ್ಲ. ಆ ಪ್ರಾಜೆಕ್ಟ್ ನ ಸಂಪೂರ್ಣ ಡಿಟೈಲ್ಸನ್ನು ಸಂಗ್ರಹಿಸಿ ಇವತ್ತು ಬಾಸ್ ಗೆ ಕೊಡಲೇಬೇಕಿತ್ತು. ಮೊದಲೇ ನಮ್ಮ ಬಾಸ್ ಸಿಡುಕು ಮುಖದವನು. ಯಾವಾಗಲೂ ಉಗ್ರ ನರಸಿಂಹನ ರೂಪ ಧರಿಸಿಕೊಂಡೇ ಇರುತ್ತಾರೆ. ಇಂತಹ ವ್ಯಕ್ತಿತ್ವವಿರುವವನಿಗೆ ನನ್ನಂತಹ ಅರ್ದಂಬರ್ದ ಕೆಲಸ ಮಾಡಿದ ಮಿಕನೊಬ್ಬನು ಸಿಕ್ಕರೆ ಮುಗೀತು. ಹಿರಣ್ಯ ಕಶಿಪುವಿನಂತೆ ನಮ್ಮನ್ನು ತೋಡೆಯ ಮೇಲೆ ಮಲಗಿಸಿಕೊಂಡು ನಮ್ಮ ಕರುಳನ್ನು ಬಗೆದೇ ಬಿಡುತ್ತಾನೆ. ಅಂತಹ ಉಗ್ರ ರೂಪ ಅವನದು. ಆತನ ಈ ಉಗ್ರ ರೂಪ ನನ್ನ ಕಣ್ಣ ಮುಂದೆ ಬಂದಂತಾಯಿತು. ನಾನು ಒಮ್ಮೆ ಹೆದರಿದೆನು. ಹೇಗಾದರೂ ಮಾಡಿ ಈ ಕೆಲಸವನ್ನು ಪೂರ್ಣಗೊಳಿಸಲೇ ಬೇಕು ಇಲ್ಲದಿದ್ದರೆ ಬಾಸ್ ನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು ಎಂದು ನಿರ್ಣಯಿಸಿಕೊಂಡೆ. ಆತುರದಿಂದ ಕಂಪ್ಯೂಟರನ್ನು ಆನ್ ಮಾಡಿ ಕೆಲಸ ಮಾಡಲಾರಂಬಿಸಿದೆ....

ಕೆಲಸಕ್ಕೆ ಕೂತು ಅರ್ದ ಗಂಟೆಯೂ ಆಗಿರಲಿಲ್ಲ. ರಂಜಿನಿ ತನ್ನ ಉದ್ದವಾದ ಕೂದಲನ್ನು ಹಾರಾಡಿಸಿಕೊಂಡು ಆಗ ತಾನೆ ಆಫೀಸಿಗೆ ಬರುತ್ತಿದ್ದಳು. ಗಾಳಿಯೊಂದಿಗೆ ಉಯ್ಯಾಲೆಯಾಡುತ್ತಿದ್ದ ಆ ರೇಷಿಮೆಯಂತಹ ಕೇಶರಾಶಿ ಮತ್ತು ಅವಳ ಸುಂದರ ರೂಪ ಕಂಡೊಡನೆ ನನ್ನ ಹೃದಯದಲ್ಲಿ ಏನೋ ಆಹ್ಲಾದಕರವಾದ ಅನುಭವವಾಯಿತು.
ಆಕೆಯ ಬಿಳಿಯ ಕೆನ್ನೆಗಳು ಮುಂಜಾನೆಯ ಆ ಹೊಂಬೆಳಕಿನಲ್ಲಿ ಎಂದಿಗಿಂತ ಸ್ವಲ್ಪ ಹೆಚ್ಚಾಗಿಯೇ ಹೊಳಪನ್ನು ಪಡೆದುಕೊಂಡಿದ್ದವು. ಜೀನ್ಸ್ ಪ್ಯಾಂಟಿಗೆ ಹಾಕಿದ್ದ ಆಕೆಯ ಬಿಳಿಯ ಟಾಪ್ ಕಣ್ಣಿಗೆ ಕುಕ್ಕುವಂತಿತ್ತು. ಇನ್ನು ಆಕೆಯ ರೂಪ ಯಾವ ಅಪ್ಸರೆಗಿಂತಲೂ ಕಡಿಮೆಯೇನಿರಲಿಲ್ಲ. ಸಿಕ್ಕರೆ ಇಂತಹ ಹುಡುಗಿ ಸಿಗಬೇಕು ಎಂದು ನನ್ನ ಮನಸ್ಸು ಅವಳನ್ನು ಬಯಸಲಾರಂಬಿಸಿತು. ಆಕೆಯ ಮುದ್ದಾದ ರೂಪ ಕಂಡ ಕೂಡಲೇ ನನಗೆ ಯಾಕೋ ಕೆಲಸ ಮಾಡಲು ಮನಸ್ಸಾಗಲಿಲ್ಲ. ಒಂದು ರೀತಿ ಮೇನಕೆಯು ವಿಶ್ವಾಮಿತ್ರನ ತಪಸ್ಸು ಭಂಗ ಮಾಡಿದಂತೆಯೇ ರಂಜು ನನ್ನ ಕೆಲಸವನ್ನು ಭಂಗ ಮಾಡುತ್ತಿರುವಳೋ ಎಂದೆನಿಸಿತು. ಆಕೆಯ ಬಗ್ಗೆಯೇ ಕನಸು ಕಾಣಲಾರಂಬಿಸಿದೆ. ಸುಂದರ ಹೂ ದೋಟದ ನಡುವೆ ರಂಜಿನಿಯ ಮುದ್ದು ಮುಖ ಕಂಡಂತಾಯಿತು. ಹೂಗಳ ಮೇಲೆ ನಡೆಯುತ್ತಾ ನನ್ನ ಹೃದಯಕ್ಕೆ ಲಗ್ಗೆ ಹಾಕಲು ಬರುತ್ತಿರುವಂತೆ ಬಾಸವಾಯಿತು. ಹೀಗೆ ಮನಸು ಪ್ರೇಮ ಲೋಕದಲ್ಲಿ ವಿಹರಿಸುತ್ತಿರುವಾಗಲೇ ತಕ್ಷಣ ನಮ್ಮ ಬಾಸ್ ನ ಉಗ್ರ ರೂಪ ಕಣ್ಣ ಮುಂದೆ ಬಂದಂತಾಯಿತು. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಉಗ್ರ ನರಸಿಂಹ ಹಿರಣ್ಯ ಕಶಿಪುವಿನ ಕರಳು ಬಗೆದ ದೃಶ್ಯ ಕಣ್ಣ ಮುಂದೆ ಬಂದಂತಾಯಿತು. ನಮ್ಮ ಬಾಸ್ ಆ ನರಸಿಂಹನ ಅವತಾರದಲ್ಲಿ ನಿಂತುಕೊಂಡು ನನ್ನನ್ನೇ ನುಂಗಿ ಬಿಡುವಂತೆ ನೋಡುತ್ತಿದ್ದ. ಆತನ ಆ ಸಿಡುಕು ಮುಖವನ್ನು ನೆನದು ಕೊಂಡೆ. ಈ ರೀತಿ ಕೆಲಸ ಮಾಡಿದರೆ ಖಂಡಿತ ಇವತ್ತು ಬಾಸ್ ನಿಂದ ಮಂಗಳಾರತಿಯಾಗುತ್ತೆ ಎಂದು ಹೆದರಿಕೊಂಡು ಮತ್ತೆ ಕೆಲಸದಲ್ಲಿ ತಲ್ಲೀನನಾದೆ..
ರಂಜಿನಿ ನಮ್ಮ ಕಂಪನಿಗೆ ಸೇರಿ ಸರಿಯಾಗಿ ಇನ್ನೂ ಆರು ತಿಂಗಳೂ ಆಗಿರಲಿಲ್ಲ. ಎಲ್ಲರಿಂದಲೂ ರಂಜು... ರಂಜು ..ಎಂದು ಕರೆಯುವಷ್ಟು ಆತ್ಮೀಯತೆಯನ್ನು ಬೆಳಸಿಕೊಂಡುದ್ದಳು. ಕೆಲಸದಲ್ಲಿ ಅಷ್ಟೇ ಉತ್ಸಾಹ ಮತ್ತು ಶ್ರದ್ಧೆಯನ್ನು ಬೆಳಸಿಕೊಂಡಿದ್ದಳು. ಯಾರು ಯಾವ ಕೆಲಸವನ್ನೇ ಹೇಳಲಿ ಬುದ್ಧಿವಂತಿಕೆಯಿಂದ ಮಾಡಿ ಮುಗಿಸುತ್ತಿದ್ದಳು. ಎಲ್ಲರನ್ನು ನಗು ನಗುತಾ ಮಾತನಾಡುವ ಗುಣ, ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವ ಪರಿ, ಎಂತಹ ಕೆಲಸ ಕೊಟ್ಟರೂ ಮಾಡಿ ಮುಗಿಸಬೇಕೆನ್ನು ಛಲ, ಈ ಗುಣಗಳೇ ಅವಳನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತಿದ್ದವು. ನಾನು ಸಹ ಅವಳಂತೆ ಉತ್ಸಾಹ ದಿಂದ, ನಗು ಮುಖದಿಂದ ಕೆಲಸ ಮಾಡಬೇಕೆಂದು ಎಷ್ಟೋ ಸಲ ಪ್ರಯತ್ನ ಪಟ್ಟಿದ್ದುಂಟು. ಆದರೆ ನನ್ನಲ್ಲಿರುವ ಹೆಚ್ಚಿನ ಜವಾಬ್ದಾರಿ, ಮನೆಯ ಬಡತನದ ಪರಿಸ್ಥಿತಿ, ಇಬ್ಬರು ತಂಗಿಯರನ್ನು ಸಾಕುವ ಹೊಣೆ, ಈ ಎಲ್ಲಾ ಒತ್ತಡದಿಂದ ನಾನು ರಂಜಿನಿಯಂತೆ ಅತ್ಯುತ್ಸಾಹದಿಂದ ಕೆಲಸ ಮಾಡಲು ಸಾಧ್ಯವಿರಲಿಲ್ಲ. ರಂಜಿನಿಯಲ್ಲಿ ಶ್ರೀಮಂತ ಹುಡುಗಿಯ ಎಲ್ಲಾ ಲಕ್ಷಣಗಳಿದ್ದವು. ತಂದೆ ತಾಯಿಯರು ಮುದ್ದಿನಿಂದ ಸಾಕಿರಬೇಕು. ಎಲ್ಲಾ ಸುಖ ಸೌಲಭ್ಯಗಳನ್ನು ಪಡೆದುಕೊಂಡು ಬೆಳೆದ ಹುಡುಗಿಯೊಬ್ಬಳು ಓದಿನಲ್ಲೂ ಕೆಲಸದಲ್ಲೂ ಯಶಸ್ಸು ಗಳಿಸದೇ ಇರುತ್ತಾಳೆಯೇ...? ಅವಳಿಗಿರುವ ಆ ಭಾಗ್ಯ ನನ್ನಲ್ಲಿ ಇರದುದಕ್ಕೆ ಈ ಒತ್ತಡ ಎದುರಿಸುತ್ತಿದ್ದೆನೆಯೇ..? ಬಡತನದ ಬೇಗೆ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಕಷ್ಟ ನನಗೆ ಬಂದುದರಿಂದಲೋ ಏನೋ ನನ್ನಲ್ಲಿ ನಗುಮುಖ ಕಣ್ಮರೆಯಾಗಿತ್ತು. ನಾನು ಸಹ ರಂಜಿನಿಯಂತೆ ಸ್ವತಂತ್ರವಾಗಿ ಹಾರಾಡುವ ಹಕ್ಕಿಯಂತೆ ಇರಬೇಕು. ಸಂತೋಷದಿಂದ ಕೆಲಸ ಮಾಡಬೇಕು ಎಂದೆನಿಸಿದರು ಅದು ಸಾದ್ಯವಾಗುತ್ತಿರಲಿಲ್ಲ. ಕೋಪದಿಂದ ಮುಖ ಗಂಟಿಕ್ಕಿಕೊಂಡೇ ಕೆಲಸ ಮಾಡುತ್ತಿದ್ದೆ. ಕೆಲವೊಮ್ಮೆ ನಗು ಧರಿಸಿಕೊಂಡರೂ ಅದು ಕೃತಕ ಮಾತ್ರ.
"ಸರ್.... ಬಾಸ್ ಕರೀತಿದಾರೆ. ಹಾಗೆಯೇ ಬೆಂಗಳೂರಿನ ವಿಲ್ಲಾಸ್ ಗಳ ಪ್ರಾಜೆಕ್ಟನ ಫೈಲ್ ತೆಗೆದುಕೊಂಡು ಹೋಗಬೇಕಂತೆ"
ಆಫೀಸ್ ಬಾಯ್ ರಾಜು ಹೇಳಿದಾಗ ನಾನು ಸ್ವಲ್ಪ ಹೆದರಿದೆ. ಫೈಲ್ ಇನ್ನೂ ಪೂರ್ಣಗೊಂಡಿರಲಿಲ್ಲ. ಬಾಸ್ ನಿಂದ ಮುಖಕ್ಕೆ ಮಂಗಳಾರತಿ ಖಂಡಿತ ಎಂದು ಹೆದರುತ್ತಲೇ ಬಾಸ್ ಕ್ಯಾಬಿನ್ ನತ್ತ ಹೆಜ್ಜೆ ಹಾಕಿದೆ.
ಆಫೀಸೊಳಗೆ ಕಾಲಿಟ್ಟಾಗ ಬಾಸ್ ಮುಂದೆ ರಂಜಿನಿ ಸಹ ನಿಂತಿದ್ದಳು. ನಾನು ಫೈಲನ್ನು ಬಾಸ್ಗೆ ಕೊಟ್ಟು ಅವರಿಂದ ಬೈಯ್ಯಿಸಿಕೊಳ್ಳಲು ಸಿದ್ಧನಾಗಿನಿಂತೆ.
"ಕಂಗ್ರ್ಯಾಟ್ಸ್ ಪ್ರಸಾದ್..... ಬೆಂಗೂರಿನ ವಿಲ್ಲಾಸ್ ನ ಪ್ರಾಜೆಕ್ಟ ಯಶಸ್ವಿಯಾಗಿ ಮುಗಿಸಿದ್ದೀರಿ... ಆದರೆ ಒಂದು ವಿಷಯ ನೆನಪಿನಲ್ಲಿ ಇಟ್ಟು ಕೊಳ್ಳಿ.... ನಿಮಗೆ ವಹಿಸಿದ್ದ ಈ ಕೆಲಸ ಒಂದೆರಡು ದಿನ ನಿಧಾನವಾಯಿತು. ಈ ಪ್ರಾಜೆಕ್ಟ್ ನ ದಾಖಲಾತಿ ಸಂಗ್ರಹಿಸುವ ಕೆಲಸ ರಂಜಿನಿಗೆ ವಹಿಸಿದ್ದೆ. ನಿನ್ನಿಂದ ತಡವಾದ ಈ ಕೆಲಸ ರಂಜಿನಿ ಮುಗಿಸಿದ್ದಾಳೆ. ನಿನ್ನ ಈ ಅಪೂರ್ಣ ಫೈಲ್ ಈಗ ಬೇಡ... ಕ್ಯಾಬಿನ್ ನಲ್ಲೇ ಇಟ್ಟು ಬಿಡು... ನಾಳೆಯಿಂದ ಮೈಸೂರಿನ ಪ್ರಾಜೆಕ್ಟ ಕೆಲಸ ನಿನಗೇ ವಹಿಸುತ್ತಿದ್ದೇನೆ... ಈ ಕೆಲಸವಾದರೂ ಹೇಳಿದ ಟೈಮ್ಗೆ ಮುಗಿಸಲು ಪ್ರಯತ್ನಿಸು. ರಂಜಿನಿಯನ್ನು ಸಹ ನಿನ್ನ ಸಹಾಯಕ್ಕೆ ನಿಯಮಿಸಿದ್ದೇನೆ."
ಬಾಸ್ ಹಾಗೆ ಹೇಳಿದ ಕೂಡಲೆ ನನಗೆ ಸಂತೋಷವಾಯಿತು. ಜೊತೆಗೆ ನನಗೆ ಗೊತ್ತಿಲ್ಲದೇ ನನ್ನ ಕೆಲಸಕ್ಕೆ ಸಹಾಯ ಮಾಡಿದ ರಂಜಿನಿಯ ಬಗ್ಗೆ ನನಗೆ ಹೆಮ್ಮೆಯೆನಿಸಿತು. ಆ ದಿನ ರಂಜು ನನ್ನ ಹತ್ತಿರ ವಿಲ್ಲಾಸ್ ಗಳ ಪ್ಲಾನ್ ನ ಡಿಟೈಲ್ಸ ಕೇಳೋಕೆ ಬಂದಾಗ ನಾನು ಅವಳ ಮೇಲೆ ರೇಗಿದ್ದೆ. ಕೋಪದಿಂದ ಬೈಯ್ದಿದ್ದೆ.
" ನನ್ನ ಕೆಲಸದ ಮದ್ಯೆ ತಲೆ ಹಾಕುವ ಯೋಗ್ಯತೆ ನಿನಗಿಲ್ಲ"
ಎಂದು ಮನ ಬಂದಂತೆ ಮಾತನಾಡಿದ್ದೆ. ಪಾಪ ರಂಜಿನಿ ಆಗ ತಾನೆ ಕೆಲಸಕ್ಕೆ ಹೊಸದಾಗಿ ಸೇರಿಕೊಂಡಿದ್ದಳು. ನನ್ನ ಬೈಗುಳಕ್ಕೆ ಅವಳು ದಿನ ಪೂರ್ತಿ ಅತ್ತಿದ್ದಳು. ಈಗ ಅದೇ ರಂಜಿನಿ ನನಗೆ ಏನೂ ಹೇಳದೆ ಪ್ರಾಜೆಕ್ಟ್ ನ ಎಲ್ಲಾ ಕೆಲಸ ಮುಗಿಸಿ ನನಗೆ ಸಹಾಯ ಮಾಡಿದ್ದಳು. ಅವಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ.. ಅವಳೊಂದಿಗೆ ನಾನು ಕೆಟ್ಟದಾಗಿ ವರ್ತಿಸಿದ್ದರಿಂದ ನನಗೆ ಅತೀವ ನಾಚಿಕೆಯಾಯಿತು. ಈ ದಿನ ರಂಜಿನಿಗೆ ಕ್ಷಮೆ ಕೇಳಬೇಕು ಎಂದು ನಿರ್ಧರಿಸಿಕೊಂಡೆ. ಮತ್ತೆ ರಂಜಿನಿಯ ಮುದ್ದಾದ ಮುಖ ಕಣ್ಣ ಮುಂದೆಯೇ ಬಂದಂತಾಯಿತು. ಈ ದಿನ ರಂಜು ನನ್ನ ಮನಸ್ಸಿಗೆ ಮೊದಲಿಗಿಂತ ಹಿತವಾಗಿ ಕಂಡಳು....
ಕೆಲಸ ಮುಗಿದ ಮೇಲೆ ರಂಜಿನಿಗೆ ನನ್ನ ಜೊತೆ ಕಾಫಿ ಡೇಗೆ ಬರುವಂತೆ ಬೇಡಿಕೊಂಡೆ. ಅವಳು ಒಪ್ಪಿಕೊಂಡಳು. ಸಂಜೆ ಇಬ್ಬರೂ ಬೇಟಿಯಾದೆವು. ರಂಜಿನಿ ನನ್ನ ಎದುರು ಕುಳಿತ್ತಿದ್ದಳು. ಮಾತು ಹೇಗೆ ಪ್ರಾರಂಬಿಸಬೇಕೆಂದು ತಿಳಿಯಲಿಲ್ಲ. ರಂಜಿನಿಯನ್ನೊಮ್ಮೆ ನೋಡಿದೆ. ಆಕೆಯ ಮುಖದಲ್ಲಿ ಕೆಲಸ ಮಾಡಿದ ಆಯಾಸ ಕಾಣುತ್ತಿರಲಿಲ್ಲ. ಮುಖ ಇನ್ನೂ ತಾಜಾತನದಿಂದ ಕಂಗೊಳಿಸುತ್ತಿತ್ತು. ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಆಕೆಯ ಮುಂಗುರುಳುಗಳು ಮುದ್ದಾದ ಕೆನ್ನೆಯೊಡನೆ ಚಕ್ಕಂದವಾಡುತ್ತಿದ್ದವು. ಆಕೆಯ ಚೆಂದದ ರೂಪಕ್ಕೆ ಮನಸೋತಿದ್ದರಿಂದ ನನ್ನಿಂದ ಮಾತು ಹೊರಡಲಿಲ್ಲ.
"ಏನಾದರೂ ಮಾತನಾಡಿ..."
ರಂಜಿನಿ ಮೌನ ಮುರಿದಳು
"ಐ ಯಾಮ್ ವೆರಿ ಸಾರಿ ರಂಜಿನಿ.... ನೀನು ಹೊಸದಾಗಿ ಕೆಲಸಕ್ಕೆ ಸೇರಿದ ಆ ದಿನಗಳಲ್ಲಿ . ನಿನ್ನ ಜೊತೆ ಕೋಪದಿಂದ ವರ್ತಿಸಿದೆ. ಆದರೂ ನೀ ನನಗೆ ಸಹಾಯ ಮಾಡಿದೆ."
ನಾನು ವಿನಯದಿಂದಲೇ ಹೇಳಿದೆ.
" ಪರವಾಗಿಲ್ಲ ಬಿಡಿ.... ಹೌದು ..!! ನೀವು ಯಾವಾಗಲೂ ಯಾಕೆ ಅಷ್ಟು ಸಿರಿಯಸ್ ಆಗಿಯೇ ಕೆಲಸ ಮಾಡುತ್ತಿರುತ್ತಿರಿ ...ಸ್ವಲ್ಪ ನಗು ನಗುತ್ತಾ ಇರಿ. ನೀವು ನೋಡೋಕೆ ಎಷ್ಟು ಹ್ಯಾಂಡ್ ಸಮ್ಮಾಗಿ ಕಾಣುತ್ತೀರಿ... ಆದರೆ ಮುಖ ಮಾತ್ರ ಸಿಡುಕು.... ಯಾಕ್ರಿ ಇದೆಲ್ಲಾ, ನಾವೆನೂ ಪ್ರಪಂಚದ ಎಲ್ಲಾ ಜವಾಬ್ದಾರಿಯನ್ನೆಲ್ಲಾ ಹೊತ್ತು ಕೊಂಡಿದ್ದೇವೆಯೇ...? ಇರುವ ನಾಲ್ಕು ದಿನ ಎಲ್ಲರೊಂದಿಗೆ ನಗು ನಗುತಾ ಇರಬೇಕು ತಾನೆ"
ರಂಜಿನಿ ನಗುತ್ತಲೇ ಹೇಳಿದಳು
"ನಿನ್ನ ಮಾತು ಸರಿ ರಂಜಿನಿ.... ಏನ್ಮಾಡೋದು ಹೇಳು. ನನ್ನ ಜೀವನದಲ್ಲಿ ಕೆಲವು ಅಹಿತಕರವಾದ ಘಟನೆಗಳು ನಡೆದವು. ಅಪ್ಪ ಅಮ್ಮ ಇಬ್ಬರೂ ಆಕ್ಸಿಡೆಂಟಲ್ಲಿ ತೀರಿಕೊಂಡಾಗ ಆಗ ನಾನಿನ್ನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಇಬ್ಬರು ಪುಟ್ಟ ತಂಗಿಯರು, ಆ ವಯಸ್ಸಿನಲ್ಲೇ ಅವರನ್ನು ನೋಡಿಕೊಳ್ಳು ಹೊಣೆಗಾರಿಕೆ. ಹಣಕ್ಕೇನೂ ಕೊರತೆಯಿಲ್ಲ. ಅಪ್ಪ ಮಾಡಿದ ಆಸ್ತಿ ಚನ್ನಾಗಿಯೇ ಇದೆ.ತಿಂಗಳಿಗೆ ಎಂಬತ್ತು ಸಾವಿರ ರೂಪಾಯಿ ಮನೆಗಳ ಬಾಡಿಗೆ ಬರುತ್ತದೆ. ಆದರೂ ಬಡತನದ ಪ್ರಜ್ಞೆ ಕಾಣುತ್ತಿದೆ. ನನ್ನ ಚಿಕ್ಕಪ್ಪನವರೂ ಸಹಾಯ ಮಾಡುತ್ತಾರೆ. ಎಲ್ಲರೂ ಚೆನ್ನಾಗಿ ಓದುತ್ತಿದ್ದಾರೆ. ನಾನು ಸಹ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ್ದೇನೆ. ಆದರೂ ತಂದೆ ತಾಯಿಯರ ಪ್ರೀತಿಯ ಕೊರತೆ ನನ್ನನ್ನು ಕಾಡುತ್ತಿದೆ. ನನಗೂ ನಿನ್ನಂತೆ ಇರಬೇಕೆಂಬ ಆಸೆಯೇನೋ ಇದೆ. ನಿನ್ನಂತ ಸುಂದರ ಹುಡುಗಿಯನ್ನು ಮದುವೆಯಾಗುವ ಆಸೆಯೂ ಇದೆ.... ಏನ್ಮಾಡೋದು ಎಲ್ಲಾ ವಿಧಿ ಲಿಖಿತ"
ಸ್ವಲ್ಪ ದುಃಖದಿಂದಲೇ ಹೇಳಿದೆನು...
"ಸಾರಿ.... ನಿಮ್ಮ ಹಿಂದೆ ದುಃಖದ ಕತೆಯೊಂದಿದೆ ಎಂದು ಗೊತ್ತಿರಲಿಲ್ಲ"
ರಂಜಿನಿ ಭಾವುಕಳಾಗಿ ಉತ್ತರಿಸಿದಳು.
ಅಷ್ಟರಲ್ಲಿ ವೇಟರ್ ಬಿಲ್ಲನ್ನು ತಂದು ಕೊಟ್ಟನು
ರಂಜಿನಿ ತಾನೆ ಬಿಲ್ ಕೊಡಲು ಮುಂದಾದಳು. ಆದರೆ ನಾನು ಬಿಡಲಿಲ್ಲ...
ಮಾರನೆಯ ದಿವಸ ರಂಜಿನಿಯು ಆಫೀಸಿಗೆ ಬಂದಾಗ ಎಂದಿಗಿಂತಲೂ ನನಗೆ ತುಂಬಾ ಹತ್ತಿರದವಳಂತೆ ಕಂಡಳು. ನನ್ನತ್ತ ಮುಗುಳ್ನಗೆ ಬೀರಿದಳು. ಅವಳ ಆ ನಗೆಯಲ್ಲಿ ಮಿಂಚಿನ ಸಂಚಾರವಿತ್ತು. ಆ ಮೋಹಕ ನಗೆ ನನ್ನ ಹೃದಯವನ್ನು ಇರಿಯುವಂತೆ ಇತ್ತು. ಮದುವೆ ಅಂತ ಆದರೆ ಇವಳನ್ನೇ ಎಂದು ನಿರ್ಧರಿಸಿಕೊಂಡೆ. ಸೀದಾ ಅವಳತ್ತ ಹೋದವನೆ
"ರಂಜಿನಿ ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು"
ಎಂದೆ.
"ಹೇಳಿ" ರಂಜಿನಿ ನಗುತ್ತಲೇ ಹೇಳಿದಳು.
" ಹೇಗೆ ಪ್ರಾರಂಭಿಸುವುದೋ ತಿಳಿಯುತ್ತಿಲ್ಲ. ನಿನ್ನಂತಹ ಬುದ್ಧಿವಂತ ಶ್ರೀಮಂತ ಕನ್ಯೆಗೆ ನನ್ನ ಅಭಿಲಾಷೆಯು ಒಪ್ಪಿಗೆ ಆಗುವುದಿಲ್ಲವೇನೋ ಎಂಬ ಭಯ. ಹೇಳಿದಾಗ ನನ್ನ ಮೇಲೆ ಕೋಪಿಸಿಕೊಳ್ಳಬಾರದು"
ಅಷ್ಟು ಹೇಳಿ ಮೌನವಾಗಿ ನಿಂತೆ.
"ಪರವಾಗಿಲ್ಲ ಹೇಳಿ .. ನೀವು ನನ್ನನ್ನು ಇಷ್ಟಪಡುತ್ತಿದ್ದೀರಿ. ನನ್ನನ್ನು ಮದುವೆಯಾಗಬೇಕೆಂಬ ಅಭಿಲಾಷೆ ನಿಮ್ಮ ಮಾತಿನಲ್ಲಿ ಇದೆ ಅಲ್ಲವೇ.....?
ರಂಜಿನಿ ಅಷ್ಟು ಹೇಳಿ ಮುಗಿಸಿರಲಿಲ್ಲ. ಅವಳ ಮೊಬೈಲ್ ರಿಂಗಣಿಸಿತು. ಒಂದೆರಡು ನಿಮಿಷ ಮೊಬೈಲ್ ನಲ್ಲಿ ಮಾತನಾಡಿಕೊಂಡಳು. ಆಕೆಯ ಕಣ್ಣುಗಳು ದುಃಖದಿಂದ ಹನಿಗೂಡಿದವು.
"ಅಪ್ಪನಿಗೆ ಸೀರಿಯಸ್ ಅಂತೆ....ಆಸ್ಪತ್ರೆಯಲ್ಲಿದ್ದಾರೆ, ನಾನು ಊರಿಗೆ ಹೋಗಲೇ ಬೇಕು. ಎಂದು ಹೇಳುತ್ತಾ ರಂಜಿನಿ ಆಫೀಸಿನಿಂದ ಹೊರಟೇ ಬಿಟ್ಟಳು.
ರಂಜಿನಿ ಹೋಗಿ ನಾಲ್ಕು ದಿನವಾಗಿತ್ತು. ಬಾಸ್ ರವರ ಮಹತ್ವಕಾಂಕ್ಷೆಯ ಮೈಸೂರಿನ ಪ್ರಾಜೆಕ್ಟ್ ರಂಜಿನಿ ಇಲ್ಲದೆ ಸೊರಗಿ ನಿಂತಿತ್ತು. ರಂಜಿನಿಯ ಮೊಬೈಲ್ ಸಹ ನಾಲ್ಕು ದಿನದಿಂದ ಸ್ವಿಚ್ ಆಫ್ ಆಗಿತ್ತು. ಬಾಸ್ ರಂಜಿನಿಯ ಊರಿನ ವಿಳಾಸವನ್ನು ಕೊಟ್ಟು ವಿಚಾರಿಸಿ ಬರುವಂತೆ ನನ್ನನ್ನು ಕಳುಹಿಸಿ ಕೊಟ್ಟರು.
ರಂಜಿನಿಯದು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಎಂಬುದೊಂದು ಚಿಕ್ಕ ಗ್ರಾಮ. ಊರು ಹತ್ತಿರವಾಗುತ್ತಿದ್ದಂತೆ ಸುತ್ತಲೂ ಕಾಣುತ್ತಿದ್ದ ಹಸಿರು ನನ್ನ ಮನಸ್ಸನ್ನು ಸೂರೆಗೊಳಿಸಿತು.

ಸುತ್ತಲೂ ಬೆಟ್ಟ, ಬೆಟ್ಟದ ನಡುವೆಯಿರುವ ಊರಿನತ್ತ ನನ್ನ ಕಾರು ಚಲಿಸಿತು. ರಂಜಿನಿಯ ಮನೆಯೇನೋ ತಲುಪಿದೆ. ಮನೆಯ ಹತ್ತಿರ ನೂರಾರು ಜನ ಸೇರಿದ್ದರು. ರಂಜಿನಿಯ ತಂದೆ ಆಗ ತಾನೆ ತೀರಿಕೊಂಡಿದ್ದರು. ಅಪ್ಪನ ಹೆಣದ ಮುಂದೆ ಕುಳಿತು ರಂಜಿನಿ ಕಣ್ಣೀರು ಹಾಕುತ್ತಿದ್ದಳು. ಆಕೆಯ ಗೋಳು ಮುಗಿಲು ಮುಟ್ಟಿತ್ತು.
ನಾನು ಕಾರಿನಿಂದ ಇಳಿದ ಕೂಡಲೇ ಬಿಳಿಯ ವಸ್ತ್ರಧಾರಿ ವ್ಯಕ್ತಿಯೊಬ್ಬ ನನ್ನ ಕಡೆಗೆ ಬಂದನು.
"ನೀವು ಪ್ರಸಾದ್ ಅಲ್ಲವೇ.....? ರಂಜಿನಿಯನ್ನು ಆಮೇಲೆ ಮಾತನಾಡಿಸುವಿರಂತೆ ಬನ್ನಿ"
ಎಂದು ಹೇಳಿ ಅವರ ಮನೆಗೆ ಕರೆದುಕೊಂಡು ಹೋಗಿ ನನ್ನನ್ನು ಪಡಸಾಲೆಯಲ್ಲಿ ಕೂರಿಸಿದರು.
"ನೋಡಿ ನನ್ನ ಹೆಸರು ಮ್ಯಾಥ್ಯೂ ಅಂತ... ಇಲ್ಲೇ ಚರ್ಚನಲ್ಲಿ ಫಾದರ್ ಆಗಿದ್ದೇನೆ"
ನಾನು ಕುತೂಹಲದಿಂದ ಅವರನ್ನೇ ನೋಡುತ್ತಿದ್ದೆ. ಮತ್ತೆ ಮಾತು ಮುಂದುವರೆಸಿದರು
"ನೋಡಿ .. ರಂಜಿನಿ ಬಡ ಹುಡುಗಿ. ಅವಳು ಹುಟ್ಟಿದ ಕೂಡಲೇ ತಾಯಿ ಸ್ವರ್ಗಸ್ಥರಾದರು. ಸಂಬಂದಿಕರು ರಂಜಿನಿಯನ್ನು ಅಪಶಕುನದ ಕೂಸೆಂದು ಕರೆದರು. ರಂಜಿನಿ ಏಳನೇ ತರಗತಿಯಲ್ಲಿದ್ದಾಗ ತಂದೆ ಕಾಲನ್ನು ಕಳೆದುಕೊಂಡರು. ಮನೆಯಲ್ಲಿ ದುಡಿಮೆ ಮಾಡುವ ತಂದೆಯೇ ಕುಂಟನಾದಾಗ ಊಟಕ್ಕೂ ಗತಿಯಿಲ್ಲದಂತಾಯಿತು. ರಂಜಿನಿ ಅವರಿವರ ಮನೆಯ ಮುಸುರೆ ಕೆಲಸ ಮಾಡಿ ತಂದೆಯನ್ನು ಸಾಕತೊಡಗಿದಳು. ಚನ್ನಾಗಿ ಓದುವ ಹೆಣ್ಣು ಮಗುವೊಂದು ಅವರಿವರ ಮನೆಯ ಕೆಲಸಕ್ಕೆ ಹೋಗುವುದು ಬೇಡವೆಂದು ನಾನೇ ಅವಳನ್ನು ಸಾಕಿ ಓದಿಸಿದ್ದೇನೆ. ಕೆಲಸವೂ ಸಿಕ್ಕಿದೆ. ಅವಳಿಗೊಂದು ಮದುವೆ ಮಾಡಿಬಿಡಬೇಕು ಎಂಬ ಆಸೆಯಿಂದಲೇ ಅವರ ತಂದೆ ಕಣ್ಣು ಮುಚ್ಚಿಕೊಂಡರು. ನನಗೂ ವಯಸ್ಸಾಗಿದೆ. ನಾನು ಸಹ ಆಗಲೋ ಈಗಲೋ ಎಂದು ದಿನಗಳನ್ನು ಏಣಿಸುತ್ತಿದ್ದೇನೆ. ನಿಮ್ಮ ಬಗ್ಗೆ ರಂಜಿನಿ ಎಲ್ಲಾ ಹೇಳಿದ್ದಾಳೆ......"
ಫಾದರ್ ಅಷ್ಟು ಹೇಳಿ ಮೌನವಾದರು.
ರಂಜಿನಿಯ ಪರಿಸ್ಥಿತಿ ಕಂಡು ನನ್ನ ಕಣ್ಣುಗಳು ತುಂಬಿ ಬಂದವು. ಇಷ್ಟೆಲ್ಲಾ ಕಷ್ಟದಿಂದ ಬೆಳೆದ ಹುಡುಗಿಯೊಬ್ಬಳು ಮೂರು ತಿಂಗಳ ವರೆಗೆ ನಮ್ಮ ಜೊತೆಯಲ್ಲಿದ್ದರೂ ಸಹ ಎಂದಿಗೂ ತನ್ನ ಕಷ್ಟವನ್ನು ಹೇಳಿಕೊಂಡವಳಲ್ಲ. ತಂದೆ ಸಂಪಾದಿಸಿದ ಆಸ್ತಿ ಅಂತಸ್ತು ಎಲ್ಲಾ ಇದ್ದರೂ ಸಹ ನಾನು ತುಂಬಾ ಕಷ್ಟದಲ್ಲಿರುವೆಯೇನೋ ಎಂಬಂತೆ ನೊಂದು ಕೊಳ್ಳುತ್ತಿದ್ದೆ. ಆದರೆ ರಂಜಿನಿ ಇನ್ನೊಬ್ಬರ ಮನೆ ಕೆಲಸ ಮಾಡಿ ಬೆಳೆದವಳು. ಕಷ್ಟದಲ್ಲೂ ತಂದೆಯನ್ನು ಸಾಕಿದವಳು. ತನ್ನ ಜೀವನಕ್ಕೆ ಗುರಿಯನ್ನಿಟ್ಟುಕೊಂಡು ಬೆಳೆದವಳು. ರಂಜಿನಿಯ ಕಷ್ಟದ ಮುಂದೆ ನನ್ನದು ಏನೂ ಇಲ್ಲ. ಎಲ್ಲಾ ಸುಖ ಸಂತೋಷ ನನಗಿದ್ದರೂ ನಾನು ಅದನ್ನು ಪಡೆದುಕೊಳ್ಳುವಲ್ಲಿ ವಿಫಲನಾಗಿದ್ದೆ. ಸುಖ ಸಂತೋಷವೇ ಇಲ್ಲದ ರಂಜಿನಿ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಸುಖ ಸಂತೋಷವನ್ನು ಗಳಿಸುವತ್ತ ಹೆಜ್ಜೆ ಹಾಕಿದ್ದಳು. ಬಂದ ಅತಿ ಸಣ್ಣ ಕಷ್ಟವನ್ನು ಎದುರಿಸಲಾಗದ ನಾನು ಅತಿ ದೊಡ್ಡ ಕಷ್ಟದಲ್ಲಿ ಮುಳುಗಿದ್ದೇನೆ ಎಂಬ ಭ್ರಮೆಯಲ್ಲಿ ಮುಳುಗಿದ್ದೆ. ಕಷ್ಟಗಳು ಮನುಷ್ಯನಿಗಲ್ಲದೆ ಕಲ್ಲಿಗೆ ಬರುತ್ತದೆಯೇ...? ಕಷ್ಟವಿದೆ ಕಷ್ಟವಿದೆ ಎಂದು ಹೇಳಿಕೊಂಡು, ಅದೇ ಭ್ರಮೆಯಿಂದ ಗೆಳೆಯರೊಂದಿಗೆ ಸಿಡುಕು ಮುಖ ಹಾಕಿಕೊಂಡು ಕೆಲಸ ಮಾಡುತ್ತಿದ್ದ ನನಗೆ ಜೀವನದ ಕೆಲವು ಸಂತಸದ ಕ್ಷಣಗಳನ್ನು ಕಳೆದುಕೊಂಡಿದ್ದೇನೆ ಎಂದೆನಿಸಿತು. ಎಲ್ಲವನ್ನು ಮರೆತು ನಗುನಗುತ್ತಾ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ರಂಜಿನಿಯು ನನಗೆ ದೇವತೆಯಂತೆ ಕಂಡಳು. ನಾವು ಯಾವಾಗಲೂ ನಮಗಿಂತ ಕಷ್ಟದಲ್ಲಿರುವವರನ್ನು ನೋಡಿ ಜೀವನದ ಪಾಠಗಳನ್ನು ಕಲಿಯಬೇಕೆ ವಿನಃ ನಮಗಿಂತ ಶ್ರೀಮಂತರಾಗಿರುವವರನ್ನು ನೋಡಿ ಅಲ್ಲ. ಎಲ್ಲಾ ಶ್ರೀಮಂತಿಕೆಯ ಹಿಂದೆ ಪರಿಶ್ರಮ ಇದ್ದೇ ಇರುತ್ತದೆ. ಕಷ್ಟ ಕಷ್ಟವೆಂದು ಸದಾಕಾಲ ಕೊರಗುತ್ತಿರುವ ಮನುಷ್ಯನನ್ನು ಯಾವೊಬ್ಬನೂ ಸಹ ಸ್ನೇಹಿತನಂತೆ ಕಾಣಲಾರನು. ಅವನನ್ನು ಸಮಾಜ ಒಪ್ಪಿಕೊಳ್ಳುವುದು ಸಹ ಅಷ್ಟಕ್ಕಷ್ಟೆ. ಅದೇ ನಗುವನ್ನು ಹೊಂದಿರುವ ವ್ಯಕ್ತಿಯನ್ನು ನೋಡಿ ಆತ ಎಲ್ಲರಿಗೂ ಇಷ್ಟವಾಗುತ್ತಾನೆ. ನಗುವವನಿಗೆ ಸಾವಿರಾರು ಗೆಳೆಯರು. ಅಳುವವನಿಗೆ ಕ್ಷಣ ಕಾಲದ ಗೆಳೆಯರು. ಬಹುಷಃ ಈ ಸೂತ್ರ ರಂಜಿನಿಗೆ ಸರಿಯಾಗಿ ಅರ್ಥವಾಗಿರಬೇಕು. ಆಕೆ ನಗು ನಗುತ್ತಲೇ ಯಶಸ್ಸನ್ನು ಕಂಡುಕೊಂಡಿದ್ದಳು. ನಗುತಾ ಬಾಳುವಂತೆ ನನಗೂ ಒಂದೆರಡು ಸಾರಿ ಹೇಳಿದ್ದುಂಟು. ದೇವರು ಕೊಟ್ಟ ಈ ಅಲ್ಪಾಯುಷ್ಯವನ್ನು ನಗು ನಗುತಾ ಕಳೆಯಬೇಕೆ ವಿನಃ ದುಃಖದಿಂದಲ್ಲ. ಮುಂದೆ ಮತ್ತೆ ಮಾನವ ಜನ್ಮ ಸಿಗುತ್ತೆ ಅನ್ನೂ ಯಾವ ಖಾತ್ರಿಯೂ ಇಲ್ಲ. ಕಷ್ಟಗಳನ್ನು ಎದುರಿಸಿ ನಿಲ್ಲಬೇಕು. ಖಾಯಿಲೆ ಬಂದಾಗ ಔಷದಿಯನ್ನು ತೆಗೆದುಕೊಂಡು ನಿವಾರಿಸಿಕೊಳ್ಳಬೇಕೆ ವಿನಃ ಆ ಖಾಯಿಲೆಯನ್ನು ಇನ್ನೊಬ್ಬರಿಗೆ ಹರಡುವುದಲ್ಲ. ಕಷ್ಟಗಳೂ ಸಹ ಖಾಯಿಲೆಯಂತೆಯೇ......
ಹಿಂದೆ ಯಾರೋ ನನ್ನ ಹೆಗಲ ಮೇಲೆ ಕೈಯಿಟ್ಟಂತಾಯಿತು. ತಿರುಗಿ ನೋಡಿದೆ. ರಂಜಿನಿ ಅಳುತ್ತಾ ನಿಂತಿದ್ದಳು. ಶವಸಂಸ್ಕಾರ ಎಲ್ಲಾ ಮುಗಿದಿತ್ತು. ನಾನು ಅವಳ ಕಣ್ಣೀರನ್ನು ಒರೆಸಿದೆ.ಅವಳು ನನ್ನ ಆಸರೆಯನ್ನು ಬಯಸಿ ನನ್ನೆದೆ ಗೂಡಿನಲ್ಲಿ ಸೇರಿಕೊಂಡಳು. ನನ್ನ ಬಲಗೈಯ ಬೆರಳುಗಳೊಂದಿ ತನ್ನ ಬೆರಳುಗಳನ್ನು ಸೇರಿಸಿ ಹಿಡಿದು ನಿಂತಳು. ರಂಜಿನಿಯ ಸ್ಪರ್ಶದಿಂದ ಮನದ ಮುಸುಕು ದೂರ ಸರಿದಂತಾಯಿತು.....
                                                     
                                                                                                   ಪ್ರಕಾಶ್ ಎನ್ ಜಿಂಗಾಡೆ.

musuku

ಮುಸುಕು.....(Story)

ಮನೆಯಿಂದ ಅವಸರವಾಗಿ ಹೆಜ್ಜೆಹಾಕುತ್ತಾ ಆಫೀಸಿಗೆ ಬಂದೆ. ನಡೆದು ಬಂದ ಅವಸರಕ್ಕೆ ಆಗಲೇ ಮೈ ಬೆವರಲಾರಂಭಿಸಿತ್ತು. ಇಂದು ಆಫೀಸಿನಲ್ಲಿ ಕೆಲಸ ಒತ್ತಡ ಬೇರೆ ಜಾಸ್ತಿ ಇತ್ತು. ನೆನ್ನೆಯೇ ಮಾಡಿ ಮುಗಿಸಬೇಕಾದ ಪ್ರಾಜೆಕ್ಟ್ ಇನ್ನೂ ಪೂರ್ಣಗೊಂಡಿರಲಿಲ್ಲ. ಆ ಪ್ರಾಜೆಕ್ಟ್ ನ ಸಂಪೂರ್ಣ ಡಿಟೈಲ್ಸನ್ನು ಸಂಗ್ರಹಿಸಿ ಇವತ್ತು ಬಾಸ್ ಗೆ ಕೊಡಲೇಬೇಕಿತ್ತು. ಮೊದಲೇ ನಮ್ಮ ಬಾಸ್ ಸಿಡುಕು ಮುಖದವನು. ಯಾವಾಗಲೂ ಉಗ್ರ ನರಸಿಂಹನ ರೂಪ ಧರಿಸಿಕೊಂಡೇ ಇರುತ್ತಾರೆ. ಇಂತಹ ವ್ಯಕ್ತಿತ್ವವಿರುವವನಿಗೆ ನನ್ನಂತಹ ಅರ್ದಂಬರ್ದ ಕೆಲಸ ಮಾಡಿದ ಮಿಕನೊಬ್ಬನು ಸಿಕ್ಕರೆ ಮುಗೀತು. ಹಿರಣ್ಯ ಕಶಿಪುವಿನಂತೆ ನಮ್ಮನ್ನು ತೋಡೆಯ ಮೇಲೆ ಮಲಗಿಸಿಕೊಂಡು ನಮ್ಮ ಕರುಳನ್ನು ಬಗೆದೇ ಬಿಡುತ್ತಾನೆ. ಅಂತಹ ಉಗ್ರ ರೂಪ ಅವನದು. ಆತನ ಈ ಉಗ್ರ ರೂಪ ನನ್ನ ಕಣ್ಣ ಮುಂದೆ ಬಂದಂತಾಯಿತು. ನಾನು ಒಮ್ಮೆ ಹೆದರಿದೆನು. ಹೇಗಾದರೂ ಮಾಡಿ ಈ ಕೆಲಸವನ್ನು ಪೂರ್ಣಗೊಳಿಸಲೇ ಬೇಕು ಇಲ್ಲದಿದ್ದರೆ ಬಾಸ್ ನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು ಎಂದು ನಿರ್ಣಯಿಸಿಕೊಂಡೆ. ಆತುರದಿಂದ ಕಂಪ್ಯೂಟರನ್ನು ಆನ್ ಮಾಡಿ ಕೆಲಸ ಮಾಡಲಾರಂಬಿಸಿದೆ....

ಕೆಲಸಕ್ಕೆ ಕೂತು ಅರ್ದ ಗಂಟೆಯೂ ಆಗಿರಲಿಲ್ಲ. ರಂಜಿನಿ ತನ್ನ ಉದ್ದವಾದ ಕೂದಲನ್ನು ಹಾರಾಡಿಸಿಕೊಂಡು ಆಗ ತಾನೆ ಆಫೀಸಿಗೆ ಬರುತ್ತಿದ್ದಳು. ಗಾಳಿಯೊಂದಿಗೆ ಉಯ್ಯಾಲೆಯಾಡುತ್ತಿದ್ದ ಆ ರೇಷಿಮೆಯಂತಹ ಕೇಶರಾಶಿ ಮತ್ತು ಅವಳ ಸುಂದರ ರೂಪ ಕಂಡೊಡನೆ ನನ್ನ ಹೃದಯದಲ್ಲಿ ಏನೋ ಆಹ್ಲಾದಕರವಾದ ಅನುಭವವಾಯಿತು. ಆಕೆಯ ಬಿಳಿಯ ಕೆನ್ನೆಗಳು ಮುಂಜಾನೆಯ ಆ ಹೊಂಬೆಳಕಿನಲ್ಲಿ ಎಂದಿಗಿಂತ ಸ್ವಲ್ಪ ಹೆಚ್ಚಾಗಿಯೇ ಹೊಳಪನ್ನು ಪಡೆದುಕೊಂಡಿದ್ದವು. ಜೀನ್ಸ್ ಪ್ಯಾಂಟಿಗೆ ಹಾಕಿದ್ದ ಆಕೆಯ ಬಿಳಿಯ ಟಾಪ್ ಕಣ್ಣಿಗೆ ಕುಕ್ಕುವಂತಿತ್ತು. ಇನ್ನು ಆಕೆಯ ರೂಪ ಯಾವ ಅಪ್ಸರೆಗಿಂತಲೂ ಕಡಿಮೆಯೇನಿರಲಿಲ್ಲ. ಸಿಕ್ಕರೆ ಇಂತಹ ಹುಡುಗಿ ಸಿಗಬೇಕು ಎಂದು ನನ್ನ ಮನಸ್ಸು ಅವಳನ್ನು ಬಯಸಲಾರಂಬಿಸಿತು. ಆಕೆಯ ಮುದ್ದಾದ ರೂಪ ಕಂಡ ಕೂಡಲೇ ನನಗೆ ಯಾಕೋ ಕೆಲಸ ಮಾಡಲು ಮನಸ್ಸಾಗಲಿಲ್ಲ. ಒಂದು ರೀತಿ ಮೇನಕೆಯು ವಿಶ್ವಾಮಿತ್ರನ ತಪಸ್ಸು ಭಂಗ ಮಾಡಿದಂತೆಯೇ ರಂಜು ನನ್ನ ಕೆಲಸವನ್ನು ಭಂಗ ಮಾಡುತ್ತಿರುವಳೋ ಎಂದೆನಿಸಿತು. ಆಕೆಯ ಬಗ್ಗೆಯೇ ಕನಸು ಕಾಣಲಾರಂಬಿಸಿದೆ. ಸುಂದರ ಹೂ ದೋಟದ ನಡುವೆ ರಂಜಿನಿಯ ಮುದ್ದು ಮುಖ ಕಂಡಂತಾಯಿತು. ಹೂಗಳ ಮೇಲೆ ನಡೆಯುತ್ತಾ ನನ್ನ ಹೃದಯಕ್ಕೆ ಲಗ್ಗೆ ಹಾಕಲು ಬರುತ್ತಿರುವಂತೆ ಬಾಸವಾಯಿತು. ಹೀಗೆ ಮನಸು ಪ್ರೇಮ ಲೋಕದಲ್ಲಿ ವಿಹರಿಸುತ್ತಿರುವಾಗಲೇ ತಕ್ಷಣ ನಮ್ಮ ಬಾಸ್ ನ ಉಗ್ರ ರೂಪ ಕಣ್ಣ ಮುಂದೆ ಬಂದಂತಾಯಿತು. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಉಗ್ರ ನರಸಿಂಹ ಹಿರಣ್ಯ ಕಶಿಪುವಿನ ಕರಳು ಬಗೆದ ದೃಶ್ಯ ಕಣ್ಣ ಮುಂದೆ ಬಂದಂತಾಯಿತು. ನಮ್ಮ ಬಾಸ್ ಆ ನರಸಿಂಹನ ಅವತಾರದಲ್ಲಿ ನಿಂತುಕೊಂಡು ನನ್ನನ್ನೇ ನುಂಗಿ ಬಿಡುವಂತೆ ನೋಡುತ್ತಿದ್ದ. ಆತನ ಆ ಸಿಡುಕು ಮುಖವನ್ನು ನೆನದು ಕೊಂಡೆ. ಈ ರೀತಿ ಕೆಲಸ ಮಾಡಿದರೆ ಖಂಡಿತ ಇವತ್ತು ಬಾಸ್ ನಿಂದ ಮಂಗಳಾರತಿಯಾಗುತ್ತೆ ಎಂದು ಹೆದರಿಕೊಂಡು ಮತ್ತೆ ಕೆಲಸದಲ್ಲಿ ತಲ್ಲೀನನಾದೆ..
ರಂಜಿನಿ ನಮ್ಮ ಕಂಪನಿಗೆ ಸೇರಿ ಸರಿಯಾಗಿ ಇನ್ನೂ ಆರು ತಿಂಗಳೂ ಆಗಿರಲಿಲ್ಲ. ಎಲ್ಲರಿಂದಲೂ ರಂಜು... ರಂಜು ..ಎಂದು ಕರೆಯುವಷ್ಟು ಆತ್ಮೀಯತೆಯನ್ನು ಬೆಳಸಿಕೊಂಡುದ್ದಳು. ಕೆಲಸದಲ್ಲಿ ಅಷ್ಟೇ ಉತ್ಸಾಹ ಮತ್ತು ಶ್ರದ್ಧೆಯನ್ನು ಬೆಳಸಿಕೊಂಡಿದ್ದಳು. ಯಾರು ಯಾವ ಕೆಲಸವನ್ನೇ ಹೇಳಲಿ ಬುದ್ಧಿವಂತಿಕೆಯಿಂದ ಮಾಡಿ ಮುಗಿಸುತ್ತಿದ್ದಳು. ಎಲ್ಲರನ್ನು ನಗು ನಗುತಾ ಮಾತನಾಡುವ ಗುಣ, ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವ ಪರಿ, ಎಂತಹ ಕೆಲಸ ಕೊಟ್ಟರೂ ಮಾಡಿ ಮುಗಿಸಬೇಕೆನ್ನು ಛಲ, ಈ ಗುಣಗಳೇ ಅವಳನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತಿದ್ದವು. ನಾನು ಸಹ ಅವಳಂತೆ ಉತ್ಸಾಹ ದಿಂದ, ನಗು ಮುಖದಿಂದ ಕೆಲಸ ಮಾಡಬೇಕೆಂದು ಎಷ್ಟೋ ಸಲ ಪ್ರಯತ್ನ ಪಟ್ಟಿದ್ದುಂಟು. ಆದರೆ ನನ್ನಲ್ಲಿರುವ ಹೆಚ್ಚಿನ ಜವಾಬ್ದಾರಿ, ಮನೆಯ ಬಡತನದ ಪರಿಸ್ಥಿತಿ, ಇಬ್ಬರು ತಂಗಿಯರನ್ನು ಸಾಕುವ ಹೊಣೆ, ಈ ಎಲ್ಲಾ ಒತ್ತಡದಿಂದ ನಾನು ರಂಜಿನಿಯಂತೆ ಅತ್ಯುತ್ಸಾಹದಿಂದ ಕೆಲಸ ಮಾಡಲು ಸಾಧ್ಯವಿರಲಿಲ್ಲ. ರಂಜಿನಿಯಲ್ಲಿ ಶ್ರೀಮಂತ ಹುಡುಗಿಯ ಎಲ್ಲಾ ಲಕ್ಷಣಗಳಿದ್ದವು. ತಂದೆ ತಾಯಿಯರು ಮುದ್ದಿನಿಂದ ಸಾಕಿರಬೇಕು. ಎಲ್ಲಾ ಸುಖ ಸೌಲಭ್ಯಗಳನ್ನು ಪಡೆದುಕೊಂಡು ಬೆಳೆದ ಹುಡುಗಿಯೊಬ್ಬಳು ಓದಿನಲ್ಲೂ ಕೆಲಸದಲ್ಲೂ ಯಶಸ್ಸು ಗಳಿಸದೇ ಇರುತ್ತಾಳೆಯೇ...? ಅವಳಿಗಿರುವ ಆ ಭಾಗ್ಯ ನನ್ನಲ್ಲಿ ಇರದುದಕ್ಕೆ ಈ ಒತ್ತಡ ಎದುರಿಸುತ್ತಿದ್ದೆನೆಯೇ..? ಬಡತನದ ಬೇಗೆ ಮತ್ತು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಕಷ್ಟ ನನಗೆ ಬಂದುದರಿಂದಲೋ ಏನೋ ನನ್ನಲ್ಲಿ ನಗುಮುಖ ಕಣ್ಮರೆಯಾಗಿತ್ತು. ನಾನು ಸಹ ರಂಜಿನಿಯಂತೆ ಸ್ವತಂತ್ರವಾಗಿ ಹಾರಾಡುವ ಹಕ್ಕಿಯಂತೆ ಇರಬೇಕು. ಸಂತೋಷದಿಂದ ಕೆಲಸ ಮಾಡಬೇಕು ಎಂದೆನಿಸಿದರು ಅದು ಸಾದ್ಯವಾಗುತ್ತಿರಲಿಲ್ಲ. ಕೋಪದಿಂದ ಮುಖ ಗಂಟಿಕ್ಕಿಕೊಂಡೇ ಕೆಲಸ ಮಾಡುತ್ತಿದ್ದೆ. ಕೆಲವೊಮ್ಮೆ ನಗು ಧರಿಸಿಕೊಂಡರೂ ಅದು ಕೃತಕ ಮಾತ್ರ.
"ಸರ್.... ಬಾಸ್ ಕರೀತಿದಾರೆ. ಹಾಗೆಯೇ ಬೆಂಗಳೂರಿನ ವಿಲ್ಲಾಸ್ ಗಳ ಪ್ರಾಜೆಕ್ಟನ ಫೈಲ್ ತೆಗೆದುಕೊಂಡು ಹೋಗಬೇಕಂತೆ"
ಆಫೀಸ್ ಬಾಯ್ ರಾಜು ಹೇಳಿದಾಗ ನಾನು ಸ್ವಲ್ಪ ಹೆದರಿದೆ. ಫೈಲ್ ಇನ್ನೂ ಪೂರ್ಣಗೊಂಡಿರಲಿಲ್ಲ. ಬಾಸ್ ನಿಂದ ಮುಖಕ್ಕೆ ಮಂಗಳಾರತಿ ಖಂಡಿತ ಎಂದು ಹೆದರುತ್ತಲೇ ಬಾಸ್ ಕ್ಯಾಬಿನ್ ನತ್ತ ಹೆಜ್ಜೆ ಹಾಕಿದೆ.
ಆಫೀಸೊಳಗೆ ಕಾಲಿಟ್ಟಾಗ ಬಾಸ್ ಮುಂದೆ ರಂಜಿನಿ ಸಹ ನಿಂತಿದ್ದಳು. ನಾನು ಫೈಲನ್ನು ಬಾಸ್ಗೆ ಕೊಟ್ಟು ಅವರಿಂದ ಬೈಯ್ಯಿಸಿಕೊಳ್ಳಲು ಸಿದ್ಧನಾಗಿನಿಂತೆ.
"ಕಂಗ್ರ್ಯಾಟ್ಸ್ ಪ್ರಸಾದ್..... ಬೆಂಗೂರಿನ ವಿಲ್ಲಾಸ್ ನ ಪ್ರಾಜೆಕ್ಟ ಯಶಸ್ವಿಯಾಗಿ ಮುಗಿಸಿದ್ದೀರಿ... ಆದರೆ ಒಂದು ವಿಷಯ ನೆನಪಿನಲ್ಲಿ ಇಟ್ಟು ಕೊಳ್ಳಿ.... ನಿಮಗೆ ವಹಿಸಿದ್ದ ಈ ಕೆಲಸ ಒಂದೆರಡು ದಿನ ನಿಧಾನವಾಯಿತು. ಈ ಪ್ರಾಜೆಕ್ಟ್ ನ ದಾಖಲಾತಿ ಸಂಗ್ರಹಿಸುವ ಕೆಲಸ ರಂಜಿನಿಗೆ ವಹಿಸಿದ್ದೆ. ನಿನ್ನಿಂದ ತಡವಾದ ಈ ಕೆಲಸ ರಂಜಿನಿ ಮುಗಿಸಿದ್ದಾಳೆ. ನಿನ್ನ ಈ ಅಪೂರ್ಣ ಫೈಲ್ ಈಗ ಬೇಡ... ಕ್ಯಾಬಿನ್ ನಲ್ಲೇ ಇಟ್ಟು ಬಿಡು... ನಾಳೆಯಿಂದ ಮೈಸೂರಿನ ಪ್ರಾಜೆಕ್ಟ ಕೆಲಸ ನಿನಗೇ ವಹಿಸುತ್ತಿದ್ದೇನೆ... ಈ ಕೆಲಸವಾದರೂ ಹೇಳಿದ ಟೈಮ್ಗೆ ಮುಗಿಸಲು ಪ್ರಯತ್ನಿಸು. ರಂಜಿನಿಯನ್ನು ಸಹ ನಿನ್ನ ಸಹಾಯಕ್ಕೆ ನಿಯಮಿಸಿದ್ದೇನೆ."
ಬಾಸ್ ಹಾಗೆ ಹೇಳಿದ ಕೂಡಲೆ ನನಗೆ ಸಂತೋಷವಾಯಿತು. ಜೊತೆಗೆ ನನಗೆ ಗೊತ್ತಿಲ್ಲದೇ ನನ್ನ ಕೆಲಸಕ್ಕೆ ಸಹಾಯ ಮಾಡಿದ ರಂಜಿನಿಯ ಬಗ್ಗೆ ನನಗೆ ಹೆಮ್ಮೆಯೆನಿಸಿತು. ಆ ದಿನ ರಂಜು ನನ್ನ ಹತ್ತಿರ ವಿಲ್ಲಾಸ್ ಗಳ ಪ್ಲಾನ್ ನ ಡಿಟೈಲ್ಸ ಕೇಳೋಕೆ ಬಂದಾಗ ನಾನು ಅವಳ ಮೇಲೆ ರೇಗಿದ್ದೆ. ಕೋಪದಿಂದ ಬೈಯ್ದಿದ್ದೆ.
" ನನ್ನ ಕೆಲಸದ ಮದ್ಯೆ ತಲೆ ಹಾಕುವ ಯೋಗ್ಯತೆ ನಿನಗಿಲ್ಲ"
ಎಂದು ಮನ ಬಂದಂತೆ ಮಾತನಾಡಿದ್ದೆ. ಪಾಪ ರಂಜಿನಿ ಆಗ ತಾನೆ ಕೆಲಸಕ್ಕೆ ಹೊಸದಾಗಿ ಸೇರಿಕೊಂಡಿದ್ದಳು. ನನ್ನ ಬೈಗುಳಕ್ಕೆ ಅವಳು ದಿನ ಪೂರ್ತಿ ಅತ್ತಿದ್ದಳು. ಈಗ ಅದೇ ರಂಜಿನಿ ನನಗೆ ಏನೂ ಹೇಳದೆ ಪ್ರಾಜೆಕ್ಟ್ ನ ಎಲ್ಲಾ ಕೆಲಸ ಮುಗಿಸಿ ನನಗೆ ಸಹಾಯ ಮಾಡಿದ್ದಳು. ಅವಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ.. ಅವಳೊಂದಿಗೆ ನಾನು ಕೆಟ್ಟದಾಗಿ ವರ್ತಿಸಿದ್ದರಿಂದ ನನಗೆ ಅತೀವ ನಾಚಿಕೆಯಾಯಿತು. ಈ ದಿನ ರಂಜಿನಿಗೆ ಕ್ಷಮೆ ಕೇಳಬೇಕು ಎಂದು ನಿರ್ಧರಿಸಿಕೊಂಡೆ. ಮತ್ತೆ ರಂಜಿನಿಯ ಮುದ್ದಾದ ಮುಖ ಕಣ್ಣ ಮುಂದೆಯೇ ಬಂದಂತಾಯಿತು. ಈ ದಿನ ರಂಜು ನನ್ನ ಮನಸ್ಸಿಗೆ ಮೊದಲಿಗಿಂತ ಹಿತವಾಗಿ ಕಂಡಳು....
ಕೆಲಸ ಮುಗಿದ ಮೇಲೆ ರಂಜಿನಿಗೆ ನನ್ನ ಜೊತೆ ಕಾಫಿ ಡೇಗೆ ಬರುವಂತೆ ಬೇಡಿಕೊಂಡೆ. ಅವಳು ಒಪ್ಪಿಕೊಂಡಳು. ಸಂಜೆ ಇಬ್ಬರೂ ಬೇಟಿಯಾದೆವು. ರಂಜಿನಿ ನನ್ನ ಎದುರು ಕುಳಿತ್ತಿದ್ದಳು. ಮಾತು ಹೇಗೆ ಪ್ರಾರಂಬಿಸಬೇಕೆಂದು ತಿಳಿಯಲಿಲ್ಲ. ರಂಜಿನಿಯನ್ನೊಮ್ಮೆ ನೋಡಿದೆ. ಆಕೆಯ ಮುಖದಲ್ಲಿ ಕೆಲಸ ಮಾಡಿದ ಆಯಾಸ ಕಾಣುತ್ತಿರಲಿಲ್ಲ. ಮುಖ ಇನ್ನೂ ತಾಜಾತನದಿಂದ ಕಂಗೊಳಿಸುತ್ತಿತ್ತು. ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಆಕೆಯ ಮುಂಗುರುಳುಗಳು ಮುದ್ದಾದ ಕೆನ್ನೆಯೊಡನೆ ಚಕ್ಕಂದವಾಡುತ್ತಿದ್ದವು. ಆಕೆಯ ಚೆಂದದ ರೂಪಕ್ಕೆ ಮನಸೋತಿದ್ದರಿಂದ ನನ್ನಿಂದ ಮಾತು ಹೊರಡಲಿಲ್ಲ.
"ಏನಾದರೂ ಮಾತನಾಡಿ..."
ರಂಜಿನಿ ಮೌನ ಮುರಿದಳು
"ಐ ಯಾಮ್ ವೆರಿ ಸಾರಿ ರಂಜಿನಿ.... ನೀನು ಹೊಸದಾಗಿ ಕೆಲಸಕ್ಕೆ ಸೇರಿದ ಆ ದಿನಗಳಲ್ಲಿ . ನಿನ್ನ ಜೊತೆ ಕೋಪದಿಂದ ವರ್ತಿಸಿದೆ. ಆದರೂ ನೀ ನನಗೆ ಸಹಾಯ ಮಾಡಿದೆ."
ನಾನು ವಿನಯದಿಂದಲೇ ಹೇಳಿದೆ.
" ಪರವಾಗಿಲ್ಲ ಬಿಡಿ.... ಹೌದು ..!! ನೀವು ಯಾವಾಗಲೂ ಯಾಕೆ ಅಷ್ಟು ಸಿರಿಯಸ್ ಆಗಿಯೇ ಕೆಲಸ ಮಾಡುತ್ತಿರುತ್ತಿರಿ ...ಸ್ವಲ್ಪ ನಗು ನಗುತ್ತಾ ಇರಿ. ನೀವು ನೋಡೋಕೆ ಎಷ್ಟು ಹ್ಯಾಂಡ್ ಸಮ್ಮಾಗಿ ಕಾಣುತ್ತೀರಿ... ಆದರೆ ಮುಖ ಮಾತ್ರ ಸಿಡುಕು.... ಯಾಕ್ರಿ ಇದೆಲ್ಲಾ, ನಾವೆನೂ ಪ್ರಪಂಚದ ಎಲ್ಲಾ ಜವಾಬ್ದಾರಿಯನ್ನೆಲ್ಲಾ ಹೊತ್ತು ಕೊಂಡಿದ್ದೇವೆಯೇ...? ಇರುವ ನಾಲ್ಕು ದಿನ ಎಲ್ಲರೊಂದಿಗೆ ನಗು ನಗುತಾ ಇರಬೇಕು ತಾನೆ"
ರಂಜಿನಿ ನಗುತ್ತಲೇ ಹೇಳಿದಳು
"ನಿನ್ನ ಮಾತು ಸರಿ ರಂಜಿನಿ.... ಏನ್ಮಾಡೋದು ಹೇಳು. ನನ್ನ ಜೀವನದಲ್ಲಿ ಕೆಲವು ಅಹಿತಕರವಾದ ಘಟನೆಗಳು ನಡೆದವು. ಅಪ್ಪ ಅಮ್ಮ ಇಬ್ಬರೂ ಆಕ್ಸಿಡೆಂಟಲ್ಲಿ ತೀರಿಕೊಂಡಾಗ ಆಗ ನಾನಿನ್ನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಇಬ್ಬರು ಪುಟ್ಟ ತಂಗಿಯರು, ಆ ವಯಸ್ಸಿನಲ್ಲೇ ಅವರನ್ನು ನೋಡಿಕೊಳ್ಳು ಹೊಣೆಗಾರಿಕೆ. ಹಣಕ್ಕೇನೂ ಕೊರತೆಯಿಲ್ಲ. ಅಪ್ಪ ಮಾಡಿದ ಆಸ್ತಿ ಚನ್ನಾಗಿಯೇ ಇದೆ.ತಿಂಗಳಿಗೆ ಎಂಬತ್ತು ಸಾವಿರ ರೂಪಾಯಿ ಮನೆಗಳ ಬಾಡಿಗೆ ಬರುತ್ತದೆ. ಆದರೂ ಬಡತನದ ಪ್ರಜ್ಞೆ ಕಾಣುತ್ತಿದೆ. ನನ್ನ ಚಿಕ್ಕಪ್ಪನವರೂ ಸಹಾಯ ಮಾಡುತ್ತಾರೆ. ಎಲ್ಲರೂ ಚೆನ್ನಾಗಿ ಓದುತ್ತಿದ್ದಾರೆ. ನಾನು ಸಹ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ್ದೇನೆ. ಆದರೂ ತಂದೆ ತಾಯಿಯರ ಪ್ರೀತಿಯ ಕೊರತೆ ನನ್ನನ್ನು ಕಾಡುತ್ತಿದೆ. ನನಗೂ ನಿನ್ನಂತೆ ಇರಬೇಕೆಂಬ ಆಸೆಯೇನೋ ಇದೆ. ನಿನ್ನಂತ ಸುಂದರ ಹುಡುಗಿಯನ್ನು ಮದುವೆಯಾಗುವ ಆಸೆಯೂ ಇದೆ.... ಏನ್ಮಾಡೋದು ಎಲ್ಲಾ ವಿಧಿ ಲಿಖಿತ"
ಸ್ವಲ್ಪ ದುಃಖದಿಂದಲೇ ಹೇಳಿದೆನು...
"ಸಾರಿ.... ನಿಮ್ಮ ಹಿಂದೆ ದುಃಖದ ಕತೆಯೊಂದಿದೆ ಎಂದು ಗೊತ್ತಿರಲಿಲ್ಲ"
ರಂಜಿನಿ ಭಾವುಕಳಾಗಿ ಉತ್ತರಿಸಿದಳು.
ಅಷ್ಟರಲ್ಲಿ ವೇಟರ್ ಬಿಲ್ಲನ್ನು ತಂದು ಕೊಟ್ಟನು
ರಂಜಿನಿ ತಾನೆ ಬಿಲ್ ಕೊಡಲು ಮುಂದಾದಳು. ಆದರೆ ನಾನು ಬಿಡಲಿಲ್ಲ...
ಮಾರನೆಯ ದಿವಸ ರಂಜಿನಿಯು ಆಫೀಸಿಗೆ ಬಂದಾಗ ಎಂದಿಗಿಂತಲೂ ನನಗೆ ತುಂಬಾ ಹತ್ತಿರದವಳಂತೆ ಕಂಡಳು. ನನ್ನತ್ತ ಮುಗುಳ್ನಗೆ ಬೀರಿದಳು. ಅವಳ ಆ ನಗೆಯಲ್ಲಿ ಮಿಂಚಿನ ಸಂಚಾರವಿತ್ತು. ಆ ಮೋಹಕ ನಗೆ ನನ್ನ ಹೃದಯವನ್ನು ಇರಿಯುವಂತೆ ಇತ್ತು. ಮದುವೆ ಅಂತ ಆದರೆ ಇವಳನ್ನೇ ಎಂದು ನಿರ್ಧರಿಸಿಕೊಂಡೆ. ಸೀದಾ ಅವಳತ್ತ ಹೋದವನೆ
"ರಂಜಿನಿ ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು"
ಎಂದೆ.
"ಹೇಳಿ" ರಂಜಿನಿ ನಗುತ್ತಲೇ ಹೇಳಿದಳು.
" ಹೇಗೆ ಪ್ರಾರಂಭಿಸುವುದೋ ತಿಳಿಯುತ್ತಿಲ್ಲ. ನಿನ್ನಂತಹ ಬುದ್ಧಿವಂತ ಶ್ರೀಮಂತ ಕನ್ಯೆಗೆ ನನ್ನ ಅಭಿಲಾಷೆಯು ಒಪ್ಪಿಗೆ ಆಗುವುದಿಲ್ಲವೇನೋ ಎಂಬ ಭಯ. ಹೇಳಿದಾಗ ನನ್ನ ಮೇಲೆ ಕೋಪಿಸಿಕೊಳ್ಳಬಾರದು"
ಅಷ್ಟು ಹೇಳಿ ಮೌನವಾಗಿ ನಿಂತೆ.
"ಪರವಾಗಿಲ್ಲ ಹೇಳಿ .. ನೀವು ನನ್ನನ್ನು ಇಷ್ಟಪಡುತ್ತಿದ್ದೀರಿ. ನನ್ನನ್ನು ಮದುವೆಯಾಗಬೇಕೆಂಬ ಅಭಿಲಾಷೆ ನಿಮ್ಮ ಮಾತಿನಲ್ಲಿ ಇದೆ ಅಲ್ಲವೇ.....?
ರಂಜಿನಿ ಅಷ್ಟು ಹೇಳಿ ಮುಗಿಸಿರಲಿಲ್ಲ. ಅವಳ ಮೊಬೈಲ್ ರಿಂಗಣಿಸಿತು. ಒಂದೆರಡು ನಿಮಿಷ ಮೊಬೈಲ್ ನಲ್ಲಿ ಮಾತನಾಡಿಕೊಂಡಳು. ಆಕೆಯ ಕಣ್ಣುಗಳು ದುಃಖದಿಂದ ಹನಿಗೂಡಿದವು.
"ಅಪ್ಪನಿಗೆ ಸೀರಿಯಸ್ ಅಂತೆ....ಆಸ್ಪತ್ರೆಯಲ್ಲಿದ್ದಾರೆ, ನಾನು ಊರಿಗೆ ಹೋಗಲೇ ಬೇಕು. ಎಂದು ಹೇಳುತ್ತಾ ರಂಜಿನಿ ಆಫೀಸಿನಿಂದ ಹೊರಟೇ ಬಿಟ್ಟಳು.
ರಂಜಿನಿ ಹೋಗಿ ನಾಲ್ಕು ದಿನವಾಗಿತ್ತು. ಬಾಸ್ ರವರ ಮಹತ್ವಕಾಂಕ್ಷೆಯ ಮೈಸೂರಿನ ಪ್ರಾಜೆಕ್ಟ್ ರಂಜಿನಿ ಇಲ್ಲದೆ ಸೊರಗಿ ನಿಂತಿತ್ತು. ರಂಜಿನಿಯ ಮೊಬೈಲ್ ಸಹ ನಾಲ್ಕು ದಿನದಿಂದ ಸ್ವಿಚ್ ಆಫ್ ಆಗಿತ್ತು. ಬಾಸ್ ರಂಜಿನಿಯ ಊರಿನ ವಿಳಾಸವನ್ನು ಕೊಟ್ಟು ವಿಚಾರಿಸಿ ಬರುವಂತೆ ನನ್ನನ್ನು ಕಳುಹಿಸಿ ಕೊಟ್ಟರು.
ರಂಜಿನಿಯದು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಎಂಬುದೊಂದು ಚಿಕ್ಕ ಗ್ರಾಮ. ಊರು ಹತ್ತಿರವಾಗುತ್ತಿದ್ದಂತೆ ಸುತ್ತಲೂ ಕಾಣುತ್ತಿದ್ದ ಹಸಿರು ನನ್ನ ಮನಸ್ಸನ್ನು ಸೂರೆಗೊಳಿಸಿತು.
ನಾನು ಕಾರಿನಿಂದ ಇಳಿದ ಕೂಡಲೇ ಬಿಳಿಯ ವಸ್ತ್ರಧಾರಿ ವ್ಯಕ್ತಿಯೊಬ್ಬ ನನ್ನ ಕಡೆಗೆ ಬಂದನು.
ಸುತ್ತಲೂ ಬೆಟ್ಟ, ಬೆಟ್ಟದ ನಡುವೆಯಿರುವ ಊರಿನತ್ತ ನನ್ನ ಕಾರು ಚಲಿಸಿತು. ರಂಜಿನಿಯ ಮನೆಯೇನೋ ತಲುಪಿದೆ. ಮನೆಯ ಹತ್ತಿರ ನೂರಾರು ಜನ ಸೇರಿದ್ದರು. ರಂಜಿನಿಯ ತಂದೆ ಆಗ ತಾನೆ ತೀರಿಕೊಂಡಿದ್ದರು. ಅಪ್ಪನ ಹೆಣದ ಮುಂದೆ ಕುಳಿತು ರಂಜಿನಿ ಕಣ್ಣೀರು ಹಾಕುತ್ತಿದ್ದಳು. ಆಕೆಯ ಗೋಳು ಮುಗಿಲು ಮುಟ್ಟಿತ್ತು.
"ನೀವು ಪ್ರಸಾದ್ ಅಲ್ಲವೇ.....? ರಂಜಿನಿಯನ್ನು ಆಮೇಲೆ ಮಾತನಾಡಿಸುವಿರಂತೆ ಬನ್ನಿ"
ಎಂದು ಹೇಳಿ ಅವರ ಮನೆಗೆ ಕರೆದುಕೊಂಡು ಹೋಗಿ ನನ್ನನ್ನು ಪಡಸಾಲೆಯಲ್ಲಿ ಕೂರಿಸಿದರು.
"ನೋಡಿ ನನ್ನ ಹೆಸರು ಮ್ಯಾಥ್ಯೂ ಅಂತ... ಇಲ್ಲೇ ಚರ್ಚನಲ್ಲಿ ಫಾದರ್ ಆಗಿದ್ದೇನೆ"
ನಾನು ಕುತೂಹಲದಿಂದ ಅವರನ್ನೇ ನೋಡುತ್ತಿದ್ದೆ. ಮತ್ತೆ ಮಾತು ಮುಂದುವರೆಸಿದರು
"ನೋಡಿ .. ರಂಜಿನಿ ಬಡ ಹುಡುಗಿ. ಅವಳು ಹುಟ್ಟಿದ ಕೂಡಲೇ ತಾಯಿ ಸ್ವರ್ಗಸ್ಥರಾದರು. ಸಂಬಂದಿಕರು ರಂಜಿನಿಯನ್ನು ಅಪಶಕುನದ ಕೂಸೆಂದು ಕರೆದರು. ರಂಜಿನಿ ಏಳನೇ ತರಗತಿಯಲ್ಲಿದ್ದಾಗ ತಂದೆ ಕಾಲನ್ನು ಕಳೆದುಕೊಂಡರು. ಮನೆಯಲ್ಲಿ ದುಡಿಮೆ ಮಾಡುವ ತಂದೆಯೇ ಕುಂಟನಾದಾಗ ಊಟಕ್ಕೂ ಗತಿಯಿಲ್ಲದಂತಾಯಿತು. ರಂಜಿನಿ ಅವರಿವರ ಮನೆಯ ಮುಸುರೆ ಕೆಲಸ ಮಾಡಿ ತಂದೆಯನ್ನು ಸಾಕತೊಡಗಿದಳು. ಚನ್ನಾಗಿ ಓದುವ ಹೆಣ್ಣು ಮಗುವೊಂದು ಅವರಿವರ ಮನೆಯ ಕೆಲಸಕ್ಕೆ ಹೋಗುವುದು ಬೇಡವೆಂದು ನಾನೇ ಅವಳನ್ನು ಸಾಕಿ ಓದಿಸಿದ್ದೇನೆ. ಕೆಲಸವೂ ಸಿಕ್ಕಿದೆ. ಅವಳಿಗೊಂದು ಮದುವೆ ಮಾಡಿಬಿಡಬೇಕು ಎಂಬ ಆಸೆಯಿಂದಲೇ ಅವರ ತಂದೆ ಕಣ್ಣು ಮುಚ್ಚಿಕೊಂಡರು. ನನಗೂ ವಯಸ್ಸಾಗಿದೆ. ನಾನು ಸಹ ಆಗಲೋ ಈಗಲೋ ಎಂದು ದಿನಗಳನ್ನು ಏಣಿಸುತ್ತಿದ್ದೇನೆ. ನಿಮ್ಮ ಬಗ್ಗೆ ರಂಜಿನಿ ಎಲ್ಲಾ ಹೇಳಿದ್ದಾಳೆ......"
ಫಾದರ್ ಅಷ್ಟು ಹೇಳಿ ಮೌನವಾದರು.
ರಂಜಿನಿಯ ಪರಿಸ್ಥಿತಿ ಕಂಡು ನನ್ನ ಕಣ್ಣುಗಳು ತುಂಬಿ ಬಂದವು. ಇಷ್ಟೆಲ್ಲಾ ಕಷ್ಟದಿಂದ ಬೆಳೆದ ಹುಡುಗಿಯೊಬ್ಬಳು ಮೂರು ತಿಂಗಳ ವರೆಗೆ ನಮ್ಮ ಜೊತೆಯಲ್ಲಿದ್ದರೂ ಸಹ ಎಂದಿಗೂ ತನ್ನ ಕಷ್ಟವನ್ನು ಹೇಳಿಕೊಂಡವಳಲ್ಲ. ತಂದೆ ಸಂಪಾದಿಸಿದ ಆಸ್ತಿ ಅಂತಸ್ತು ಎಲ್ಲಾ ಇದ್ದರೂ ಸಹ ನಾನು ತುಂಬಾ ಕಷ್ಟದಲ್ಲಿರುವೆಯೇನೋ ಎಂಬಂತೆ ನೊಂದು ಕೊಳ್ಳುತ್ತಿದ್ದೆ. ಆದರೆ ರಂಜಿನಿ ಇನ್ನೊಬ್ಬರ ಮನೆ ಕೆಲಸ ಮಾಡಿ ಬೆಳೆದವಳು. ಕಷ್ಟದಲ್ಲೂ ತಂದೆಯನ್ನು ಸಾಕಿದವಳು. ತನ್ನ ಜೀವನಕ್ಕೆ ಗುರಿಯನ್ನಿಟ್ಟುಕೊಂಡು ಬೆಳೆದವಳು. ರಂಜಿನಿಯ ಕಷ್ಟದ ಮುಂದೆ ನನ್ನದು ಏನೂ ಇಲ್ಲ. ಎಲ್ಲಾ ಸುಖ ಸಂತೋಷ ನನಗಿದ್ದರೂ ನಾನು ಅದನ್ನು ಪಡೆದುಕೊಳ್ಳುವಲ್ಲಿ ವಿಫಲನಾಗಿದ್ದೆ. ಸುಖ ಸಂತೋಷವೇ ಇಲ್ಲದ ರಂಜಿನಿ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಸುಖ ಸಂತೋಷವನ್ನು ಗಳಿಸುವತ್ತ ಹೆಜ್ಜೆ ಹಾಕಿದ್ದಳು. ಬಂದ ಅತಿ ಸಣ್ಣ ಕಷ್ಟವನ್ನು ಎದುರಿಸಲಾಗದ ನಾನು ಅತಿ ದೊಡ್ಡ ಕಷ್ಟದಲ್ಲಿ ಮುಳುಗಿದ್ದೇನೆ ಎಂಬ ಭ್ರಮೆಯಲ್ಲಿ ಮುಳುಗಿದ್ದೆ. ಕಷ್ಟಗಳು ಮನುಷ್ಯನಿಗಲ್ಲದೆ ಕಲ್ಲಿಗೆ ಬರುತ್ತದೆಯೇ...? ಕಷ್ಟವಿದೆ ಕಷ್ಟವಿದೆ ಎಂದು ಹೇಳಿಕೊಂಡು, ಅದೇ ಭ್ರಮೆಯಿಂದ ಗೆಳೆಯರೊಂದಿಗೆ ಸಿಡುಕು ಮುಖ ಹಾಕಿಕೊಂಡು ಕೆಲಸ ಮಾಡುತ್ತಿದ್ದ ನನಗೆ ಜೀವನದ ಕೆಲವು ಸಂತಸದ ಕ್ಷಣಗಳನ್ನು ಕಳೆದುಕೊಂಡಿದ್ದೇನೆ ಎಂದೆನಿಸಿತು. ಎಲ್ಲವನ್ನು ಮರೆತು ನಗುನಗುತ್ತಾ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ರಂಜಿನಿಯು ನನಗೆ ದೇವತೆಯಂತೆ ಕಂಡಳು. ನಾವು ಯಾವಾಗಲೂ ನಮಗಿಂತ ಕಷ್ಟದಲ್ಲಿರುವವರನ್ನು ನೋಡಿ ಜೀವನದ ಪಾಠಗಳನ್ನು ಕಲಿಯಬೇಕೆ ವಿನಃ ನಮಗಿಂತ ಶ್ರೀಮಂತರಾಗಿರುವವರನ್ನು ನೋಡಿ ಅಲ್ಲ. ಎಲ್ಲಾ ಶ್ರೀಮಂತಿಕೆಯ ಹಿಂದೆ ಪರಿಶ್ರಮ ಇದ್ದೇ ಇರುತ್ತದೆ. ಕಷ್ಟ ಕಷ್ಟವೆಂದು ಸದಾಕಾಲ ಕೊರಗುತ್ತಿರುವ ಮನುಷ್ಯನನ್ನು ಯಾವೊಬ್ಬನೂ ಸಹ ಸ್ನೇಹಿತನಂತೆ ಕಾಣಲಾರನು. ಅವನನ್ನು ಸಮಾಜ ಒಪ್ಪಿಕೊಳ್ಳುವುದು ಸಹ ಅಷ್ಟಕ್ಕಷ್ಟೆ. ಅದೇ ನಗುವನ್ನು ಹೊಂದಿರುವ ವ್ಯಕ್ತಿಯನ್ನು ನೋಡಿ ಆತ ಎಲ್ಲರಿಗೂ ಇಷ್ಟವಾಗುತ್ತಾನೆ. ನಗುವವನಿಗೆ ಸಾವಿರಾರು ಗೆಳೆಯರು. ಅಳುವವನಿಗೆ ಕ್ಷಣ ಕಾಲದ ಗೆಳೆಯರು. ಬಹುಷಃ ಈ ಸೂತ್ರ ರಂಜಿನಿಗೆ ಸರಿಯಾಗಿ ಅರ್ಥವಾಗಿರಬೇಕು. ಆಕೆ ನಗು ನಗುತ್ತಲೇ ಯಶಸ್ಸನ್ನು ಕಂಡುಕೊಂಡಿದ್ದಳು. ನಗುತಾ ಬಾಳುವಂತೆ ನನಗೂ ಒಂದೆರಡು ಸಾರಿ ಹೇಳಿದ್ದುಂಟು. ದೇವರು ಕೊಟ್ಟ ಈ ಅಲ್ಪಾಯುಷ್ಯವನ್ನು ನಗು ನಗುತಾ ಕಳೆಯಬೇಕೆ ವಿನಃ ದುಃಖದಿಂದಲ್ಲ. ಮುಂದೆ ಮತ್ತೆ ಮಾನವ ಜನ್ಮ ಸಿಗುತ್ತೆ ಅನ್ನೂ ಯಾವ ಖಾತ್ರಿಯೂ ಇಲ್ಲ. ಕಷ್ಟಗಳನ್ನು ಎದುರಿಸಿ ನಿಲ್ಲಬೇಕು. ಖಾಯಿಲೆ ಬಂದಾಗ ಔಷದಿಯನ್ನು ತೆಗೆದುಕೊಂಡು ನಿವಾರಿಸಿಕೊಳ್ಳಬೇಕೆ ವಿನಃ ಆ ಖಾಯಿಲೆಯನ್ನು ಇನ್ನೊಬ್ಬರಿಗೆ ಹರಡುವುದಲ್ಲ. ಕಷ್ಟಗಳೂ ಸಹ ಖಾಯಿಲೆಯಂತೆಯೇ......
ಹಿಂದೆ ಯಾರೋ ನನ್ನ ಹೆಗಲ ಮೇಲೆ ಕೈಯಿಟ್ಟಂತಾಯಿತು. ತಿರುಗಿ ನೋಡಿದೆ. ರಂಜಿನಿ ಅಳುತ್ತಾ ನಿಂತಿದ್ದಳು. ಶವಸಂಸ್ಕಾರ ಎಲ್ಲಾ ಮುಗಿದಿತ್ತು. ನಾನು ಅವಳ ಕಣ್ಣೀರನ್ನು ಒರೆಸಿದೆ.ಅವಳು ನನ್ನ ಆಸರೆಯನ್ನು ಬಯಸಿ ನನ್ನೆದೆ ಗೂಡಿನಲ್ಲಿ ಸೇರಿಕೊಂಡಳು. ನನ್ನ ಬಲಗೈಯ ಬೆರಳುಗಳೊಂದಿ ತನ್ನ ಬೆರಳುಗಳನ್ನು ಸೇರಿಸಿ ಹಿಡಿದು ನಿಂತಳು. ರಂಜಿನಿಯ ಸ್ಪರ್ಶದಿಂದ ಮನದ ಮುಸುಕು ದೂರ ಸರಿದಂತಾಯಿತು.....
                                                     
                                   

                ಪ್ರಕಾಶ್ ಎನ್ ಜಿಂಗಾಡೆ.