Thursday, 15 March 2018

ಭಿಕ್ಷುವಿನ ಪ್ರೇಮಾಲಾಪ

ಭಿಕ್ಷುವಿನ ಪ್ರೇಮಾಲಾಪ..

ಮೋರಿಯಂಚಿನಲಿ ಮಲಗಿದ
ತಿರುಕಿ ಕೊಳಾಕಾಂಗಿಗೆ
ಚಿಂದಿ ತೇಪೆ ಧಿರಿಸಿನ
ಬಿಕ್ಷುಕನ ಪ್ರೇಮ ಆಲಾಪನೆಯಿದು....

ಪ್ರಿಯೆ ...
ನಿನ್ನ ಮುಂಗುರುಳು
ಗಂಟು ಬಿದ್ದ ನೂಡಲ್ಸ್ ನಂತೆ
ಕಿವಿಗಳು
ಮಡಚಿದ ಮೋ..ಮೋ..ಗಳಂತೆ

ನಾಸಿಕದ ಸೊಗಸು
ಚಂಪಾಕಲಿಯ ಸೊಬಗು
ಚಳಿಗಾಲದ ನೆಗಡಿಯಂತೆ
ತೊಟ್ಟಿಕ್ಕವ ರಸಧಾರೆ ......

ಕಣ್ಣು ಗುಡ್ಡೆಗಳು
ಜಾಮೂನಿನ ಉಂಡೆಗಳು
ಸುತ್ತಲೂ ಪ್ರೀತಿಯಿಂದ
ಮುತ್ತಿಕ್ಕಿದ ನೊಣಗಳು.....

ಗಲ್ಲಗಳು
ಸೀದಿಟ್ಟ ರೊಟ್ಟಿಯ ಕರುಕಲು
ಮುತ್ತಿಟ್ಟರೆ
ತುಟಿಗೆ ಕಪ್ಪಾದ ರಂಗು...

ಹೊಗಳಿಕೆಯ ಭಾವ ಬೇರೆ
ಜೋಗಿ ಪಡೆದದ್ದು ಜೋಗಿಗೆ
ಅವರ ಉಡುಗೆಗೆ ರೂಪಕ್ಕೆ
ವಾಕರಿಸುವ ನಾವುಗಳೆಷ್ಟು ಶುಭ್ರರು....?

ಕೊಳಕು ಮನಸಿನ ಬಣ್ಣದ ಮಾತಿಗಿಂತ
ಕೊಳಕು ರೂಪ ಹಿತವಾಗಿಹುದು...
ಜಗದ ಕಠೋರ ನಿಂದನೆ ಪಡೆದ
ಅವರ ಮೌನ ಬೇಡಿಕೆಯೊಂದೇ
ನಾವೂ ಮನುಷ್ಯರು- ಎಂದು

                   - ಪ್ರಕಾಶ್ ಎನ್ ಜಿಂಗಾಡೆ

ವಚನಾಮೃತ -8

ಬೇಟೆಯನು ಕಲಿತ ಸಿಂಹವೊಂದನು
ಯಾವ ಕಾಡಿಗೆ ತಳ್ಳಿದೊಡೆನಯ್ಯ
ಸಿಂಗಂ ಗಾವಸಿಂಗಂ ಆಗಿ
ಬೇಟೆಯಾಡುವುದನು ಮರೆತು
ಅದು ಉಪಾವಾಸ ಇರುವುದೇ ಅಯ್ಯ

ವಿದ್ಯೆಯಂ ಕಲಿತ ಮಾನವಂಗೆ
ಯಾವ ಊರಾದೊಡೇನು
ವೃತ್ತಿಯನೀಡಿ ಸಲುಹಿದೆನೆಂಬ
ಗರ್ವಿಯನು ಮೆಟ್ಟಿ ನಿಲುವನಯ್ಯಾ
Bosseಶ್ವರನ ಮೆದುಳಿನಾಣೆಗೂ ದಿಟವಯ್ಯ..

ಪ್ರಕಾಶ್ ಎನ್ ಜಿಂಗಾಡೆ

ಹೇ..! ಮಾನವ


ಹೇ..! ಮಾನವ
ನಿನ್ನದೂ ಎಂತಹ ಸ್ವಾರ್ಥ ಬದುಕು..?
ನದಿಯ ನೀರನೇ ಕುಡಿವೆ
ನದಿಯನೇ ನಾಶಗೈಯುವೆ
ಒಣಗಿ ನಿಂತಿಹ, ಬತ್ತಿ ಬಾಡಿಹ
ಜಲ ವಿನಾಶಕೆ ಕಾರಣನಾಗಿ
ಜ್ಞಾನಿ ಎಂದು ಮೆರೆಯುತಿರುವೆ...

ಹೇ..! ಮಾನವ
ಎಲ್ಲಿದೆ ನಿನ್ನಲಿ ಪಾವಿತ್ರ್ಯತೆ ..?
ಸಪ್ತ ನದಿಯ ಮಂತ್ರವ ಹೇಳುವೆ
ಪವಿತ್ರ ಜಲವೆಂಬಂತೆ ಪ್ರಾರ್ಥಿಸುವೆ
ಮಲ ಮಲಿನ ಹೆಣಗಳನು ಹಾಕಿ
ಜೀವ ಜಲಕೆ ವಿಷವನು ಬೆರೆಸಿ
ಮಡಿ ಮಡಿಯೆಂದು ಬೀಗುತಿರುವೆ...

ಹೇ..! ಮಾನವ
ಎಲ್ಲಿಹುದು ನಿನ್ನಲಿ ಸಂಸ್ಕಾರ ?
ತುಂಬಿದ ನದಿಗೆ ಬಾಗಿಣ ನೀಡುವೆ
ಬತ್ತಿ ಬಸವಳಿದಾಗ ಹಿಂದೆ ಸರಿವೆ
ಸ್ವಾರ್ಥ ಕೃತ್ಯಕೆ ನಿಸರ್ಗವ ದೂಷಿಸಿ
ಜಲ ಜೀವನಾಡಿಯ ಸಂಹರಿಸಿ
ಪ್ರಕೃತಿ ರಕ್ಷಕನೆಂದು ಸೋಗು ಹಾಕಿರುವೆ..

ಹೇ..! ಮಾನವ
ನದಿಯೊಂದು ಹರಿವು ಮಾತ್ರವೇ ?
ಅವಳು ಪವಿತ್ರಳು ನಮಗಾಗಿ ಹುಟ್ಟಿಹಳು
ಶಿವನ ಜಟಧಾರಿ ಗಂಗೆಯವಳು
ಅಗಸ್ತ್ಯ ಕಮಂಡಲವಾರಿ ಕಾವೇರಿಯವಳು
ಎಲ್ಲಿಹುದು ಆ ಭಕ್ತಿ ಆ ಕೃತಜ್ಞತೆ
ಸುಮ್ಮನೆ ಭಕ್ತನೆಂಬ ಮುಖವಾಡ ಧರಿಸಿರುವೆ. 

ಹೇ..! ಮಾನವ
ಕಟುಕನಾಗಬೇಡ ಪ್ರಕೃತಿಯ ಮುಂದೆ
ಇಂದು ಅಟ್ಟಹಾಸ ನಿನದಾದರೆ
ನಾಳೆ ಪ್ರಕೃತಿಯದು ಮರಣ ಮೃದಂಗ
ಎಚ್ಚೆತ್ತು ಕೋ ಮಾನವ..ಎಚ್ಚೆತ್ತು ಕೋ
ಇಲ್ಲವಾದರೆ ಪೃಥ್ವಿಯನೇ ಬಲಿಗೈದ
ದುರಂತ ಅಧ್ಯಾಯಕೆ ಸಾಕ್ಷಿಯಾಗುವೆ..

ಸ್ವಾರ್ಥ ನಡೆ

ಏನಿದೇನಿದೆಲ್ಲವೂ
ಸ್ವಾರ್ಥ ಬದುಕಿನ ನಡೆಗಳು
ನಮ್ಮದೇ ವ್ಯಾಖ್ಯಾನದ
ಅಧರ್ಮದ ನುಡಿಗಳು
ಬದಲಾದ ಬದುಕಿನ ಪರಿಗಳು

ಕತ್ತೆಗೆ ಭಾರವ ಕೊಟ್ಟು
ಆನೆಗೆ ಅಂಕುಶ ಹಾಕಿ
ನಾಯಿಗೆ ಚೈನನು ಬಿಗಿದು
ಎಮ್ಮೆಯ ಕೆಚ್ಚಲು ಕಿವುಚಿ
ಬಳಸುವೆವೆಲ್ಲಾ ಸ್ವಾರ್ಥದಿ..

ನೀಚ ಬದುಕಿನ ನಡೆಗಳು
ಜಾತಿ ಧರ್ಮದ ಗೋಡೆಗಳು
ಮೇಲು ಕೀಳೆಂಬ ಭಾವಗಳು 
ಎಲ್ಲವೂ ನರನದೆ ಸೃಷ್ಠಿ
ಏನಿದರ ದ್ವಂದ್ವ..?

ಹೇ..! ಏಸು ಕೃಷ್ಣ ಪೈಗಂಬರರೇ
ಮತ್ತೊಮ್ಮೆ ಕೇಳ ಬನ್ನಿರಿ
ನಿಮ್ಮ ಉಪದೇಶಗಳನು
ಅನರ್ಥೈಸಿಕೊಂಡಿರುವ
ಜನರ ನಡೆ ನುಡಿ ತತ್ವಗಳನು...

ಕಾವ್ಯ ರಚನೆ

ಬರೆಯಲೇ ಬೇಕು
ಕಟ್ಟಲೇ ಬೇಕು
ಎಂದು ಹೊರಟವನ
ಲೇಖನಿಯ ಮೂಸೆಯಿಂದ
ಕವಿತೆ ಅರಳದು...

ಪದಗಳ ಲಾಲಿತ್ಯದಲಿ
ಭಾವಗಳ ಚಕ್ಕಂದದಲಿ
ಲೇಖನಿಯ ಮೊನಚಿನಲಿ
ಜ್ಞಾನದ ಕಟ್ಟೆಯೊಡೆದಾಗಲೇ
ಕಾವ್ಯವು ಘಮಿಸುವುದು..

     ಪ್ರಕಾಶ್ ಎನ್ ಜಿಂಗಾಡೆ

ಜೈ ಅಂದು ಬಿಡಿ

ತೊದಲಾಗಲಿ ತುಂಡಾಗಲಿ
ಅರಹುವೆವು ನಾನು
ಆಂಗ್ಲವನು ಸೊಕ್ಕಿನಲಿ

ಅರಿವಾಗಲಿ ಅನರ್ಥವಾಗಲಿ
ನೋಡುವೆವು ನಾವು
ಪರಭಾಷೆ ಬೆಳ್ದೆರೆಗಳನು..

'ಅರಿ' ಯಾರಿಹರೆಂದು
ಹುಡುಕುವೆವು ಕನ್ನಡಕೆ
ಹೆಗಲ ಮುಟ್ಟಿ ನೋಡಬಾರದೇಕೆ...?

ನವಂಬರೇಶ್ವರ ಬಂದಿಹನು
ಒಮ್ಮೆ ಜೈ ಎಂದುಬಿಡಿ
ಕನ್ನಡದ ಸೋಗಿನಲಿ...

   -ಪ್ರಕಾಶ್ ಎನ್ ಜಿಂಗಾಡೆ

ವಚನಾಮೃತ -7

ಕಣ್ಣಿಗೆ ಕಣ್ಣೀರೆ ಅಂದವಯ್ಯ
ಸಂತಸಕೆ ನೋವಿದ್ದರೆ ಚೆಂದವಯ್ಯ
ಸುಖವೊಂದಿದ್ದರೆ ಸಂಸಾರ ಸುಖಿಸದು
ದಃಖವಿಲ್ಲದಿರೆ ಪ್ರೀತಿ ದೊರಕದು
ನಾಲ್ಕು ದಿನದ ಬಾಳ ದಾರಿಯಲಿ
ನೋವ ಮರೆತು ಸುಖಿಸುವವನೆ
ನಿಜ ಪಯಣಿಗನಯ್ಯ ..
   
             -ಪ್ರಕಾಶ್ ಎನ್ ಜಿಂಗಾಡೆ