Saturday 3 December 2016

ಪಟ್ಟಣ

ನಮ್ಮೂರು ಬಸವಾಪಟ್ಟಣ ದಾವಣಗೆರೆ ಜಿಲ್ಲೆಯ ಚಿಕ್ಕ ಹಳ್ಳಿ. ಹುಟ್ಟಿದಂದಿನಿಂದ ಊರನ್ನು  ನೋಡುತ್ತಲೇ ಬೆಳೆದೆ. ನಾನು ಉದ್ದ ಬೆಳೆದೆನೆ ಹೊರತು ಊರು ಮಾತ್ರ ಒಂದಿಂಚು ಸಹ ಬೆಳೆಯಲಿಲ್ಲ.. ನಮ್ಮೂರು ಯಾವಾಗ ಪಟ್ಟಣದ ರೂಪ ಪಡೆಯುತ್ತದೆಯೋ ಎಂದು ಕಾದು ಕಾದು ನನಗೂ ಸಾಕಾಯಿತು. ನಮ್ಮೂರಿನ ಹೆಸರಿನಲ್ಲಿ 'ಪಟ್ಟಣ' ಎಂಬ ಹೆಸರು ಇದೆಯಾದರೂ ಅದು ಇವತ್ತಿನವರೆಗೂ ವಾಸ್ತವವಾದ ಪಟ್ಟಣದ ಸ್ವರೂಪವನ್ನು ಪಡೆಯಲೇ ಇಲ್ಲ. ಹೆಸರಲ್ಲಿ ಮಾತ್ರ ಬಸವಾ'ಪಟ್ಟಣ' ಎಂದು ಚಿರ ನೂತನವಾಗಿ ಉಳಿದಿದೆ.

ಇಪ್ಪತ್ತೆರಡು ವರ್ಷದ ಹಿಂದೆ ನಮ್ಮ ಭಾವನವರು ನಮ್ಮಕ್ಕನನ್ನು ನೋಡಲು ಹುಬ್ಬಳ್ಳಿಯಿಂದ ಬಂದಿದ್ದರು ನಮ್ಮೂರಿನ ಹೆಸರನ್ನು ಕೇಳಿ ಕೂಡಲೇ ಇದು ಯಾವುದೋ ದೊಡ್ಡ ಪಟ್ಟಣವಿರಬೇಕೆಂದು ಊಹಿಸಿಕೊಂಡು ಬಂದಿದ್ದರಂತೆ. ನಮ್ಮೂರಿಗೆ ಕಾಲಿಟ್ಟಾಲೇ ಅವರಿಗೆ ಗೊತ್ತಾಗಿದ್ದು ನಮ್ಮೂರಿನ ಉದ್ದ ಅಗಲ ವಿಸ್ತೀರ್ಣ ಎಷ್ಟು ಎಂದು. ಆದರೂ ಪ್ರಕೃತಿ ಮಾತೆ ತನ್ನ ಸೌಂದರ್ಯವನ್ನು ನಮ್ಮೂರಿನಲ್ಲಿ ಸ್ವಲ್ಪ ಹೆಚ್ಚಾಗಿಯೇ ಹರಡಿ ಅಚ್ಚ ಹಸಿರಿನಿಂದ ಕಂಗೊಳಿತ್ತಿದ್ದಾಳೆ ಎನ್ನಿ.....

ನಮ್ಮೂರಿನಲ್ಲಿರುವ ಚಿರಡೋಣಿ ಎಂಬ ರೋಡಿನ ಬಲಭಾಗದ ಪ್ರದೇಶವು ತುಂಬಾ ಅಭಿವೃದ್ಧಿ ಕಂಡಿದೆ. ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡ ಹೊಂದಿದ ಹೆಗ್ಗಳಿಕೆ ನಮ್ಮೂರಿಗಿದೆ. ಶಾಂಘೈ ಟವರ್ ಗಿಂತಲೂ ಸುಂದರವಾದ ಮಿನಾರ್ ನಿರ್ಮಾಣವಾಗಿದೆ. ನಮ್ಮೂರಿನ ದುರ್ಗಾಂಬಿಕಾ ಬೆಟ್ಟದ ಮೇಲಿಂದ ಊರನ್ನು  ನೋಡಿದರೆ ಹೊಸದಾಗಿ ನಿರ್ಮಿತವಾದ ಆ ಊರಿನ ಸೌಂದರ್ಯ ವರ್ಣಿಸಲಾಗದು. ಎಲ್ಲಾ ಹೈ ಟೆಕ್ ಸಿಟಿಗಳನ್ನ ಹಿಂದೆ ಹಾಕಿದೆ. ಗೌಡನಕಟ್ಟೆ ಎಂಬ ನಾಲೆಯ ಪಕ್ಕದಲ್ಲೇ ಬೃಹತ್ ಬೌದ್ಧ ದೇವಾಲಯವೊಂದು ನಿರ್ಮಾಣವಾಗುತ್ತಿದೆ. ಹೊನ್ನಿನಂತೆ ಹೊಳೆಯುತ್ತಿರುವ ಸಂಪೂರ್ಣವಾದ ಸುವರ್ಣಮಂದಿರವದು. ಇದನ್ನೆಲ್ಲಾ ನೋಡಿದ ಮೇಲೆ ನನ್ನ ಜೀವ ತಡೆಯಲಿಲ್ಲ. ಹೊಸ ಊರಿನ ಸೌಂದರ್ಯ ಸವಿಯಬೇಕು ಎಂಬ ಆಸೆ ಮೂಡಿತು.  ಅಲ್ಲಿರುವ ಬುದ್ದನ ಸುವರ್ಣ ಮಂದಿರ ಹತ್ತಿರದಿಂದಲೇ ಕಣ್ಣು ತುಂಬಿಕೊಳ್ಳುವ ಬಯಕೆ ಅತಿಯಾಯಿತು. ಇನ್ನೇನು ಹೊಸ ಊರಿನೊಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಅಲ್ಲೇ ನಾಲೆಯಲ್ಲಿ ಎಮ್ಮೆಯ ಮೈ ತೊಳೆಯುತ್ತಿದ್ದ ಹುಡುಗನೊಬ್ಬ

"ಸರ್.... ಆಕಡೆ ಹೋಗ ಬೇಡಿ. ಅದು ನಮ್ಮ ದೇಶವಲ್ಲ. ಕೌಲಲಂಪುರ ಅನ್ನೋ ದೇಶ ನಿರ್ಮಾಣವಾಗುತ್ತಿದೆ. ವೀಸಾ ಪಾಸ್ ಪೋರ್ಟ್ ಇಲ್ದೇ ಹೋದರೆ ಅರೆಸ್ಟ್ ಆಗಿ ಹೋಗ್ತೀರಾ"

ಎಂದನು.

ಅರೆ.... ನಾನು ಎಷ್ಟೋ ಸಲ ಇದೇ ಮಾರ್ಗವಾಗಿ ಸಂಗಾಹಳ್ಳಿಗೆ ಹೋಗಿದ್ದನ್ನು ನೆನಪಿಸಿಕೊಂಡೆ. ಆಗ ಇದ್ದ ಸ್ವಾತಂತ್ರ ಈಗ ಇಲ್ಲದ್ದನ್ನು ಕಂಡು ಮನಸು ಬೇಸರವಾಯಿತು. ಇದ್ಯಾವ ದೇಶ ನಮ್ಮೂರಿಗೆ ಅಂಟಿಕೊಂಡೇ ನಿರ್ಮಾಣವಾಗುತ್ತಿದೆಯಲ್ಲಾ ಎಂದು ಯೋಚಿಸಿ ಗೂಗಲ್ ಸರ್ಚ್ ಮಾಡಿದೆ. which another country is situated inside of south India ಎಂದು ಟೈಪ್ ಮಾಡಿ ನೋಡಿದೆ. ಗೂಗಲ್ ಸಂಪೂರ್ಣ ಮಾಹಿತಿಯೊದಗಿಸಿತು. ಊರಿನ ಜನ ಮಾತನಾಡಿಕೊಳ್ಳುವಂತೆ ಅದು ಕೌಲಲಂಪುರ ಅನ್ನೋ ದೇಶವಾಗಿರಲಿಲ್ಲ. ಗೂಗಲ್ ಮಾಹಿತಿಯ ಪ್ರಕಾರ  "ಘಯಾನಾ" ಅನ್ನೋ ದೇಶವದು. ನಮ್ಮೂರಿನ ಪಕ್ಕದಲ್ಲೇ ನಿರ್ಮಾಣವಾಗುತ್ತಿದೆ.  ಹಿಂದೆ ಹದಿನಾರನೇ ಶತಮಾನದಲ್ಲಿ ಬಸವಾಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರನಾದ ಕೆಂಗಣ್ಣನಾಯಕನು ಫ್ರೆಂಚರೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿದ್ದನಂತೆ. ಬಸವಾಪಟ್ಟಣವನ್ನು ಸ್ವತಂತ್ರವಾಗಿ ಬಿಟ್ಟರೆ ಬಲಭಾಗದ ಹತ್ತು ಮೈಲು ಗಳಷ್ಟು ಭೂಮಿಯನ್ನು ಫ್ರೆಂಚರಿಗೆ ಬಿಟ್ಟು ಕೊಡುವುದಾಗಿ ಹೇಳಿದ್ದನಂತೆ. ಅದೇ ಪ್ರಕಾರ ಫ್ರೆಂಚರು ಕೆಂಗಣ್ಣನಾಯಕನಿಂದ ಕಾನೂನಾತ್ಮಕವಾಗಿ ಒಪ್ಪಂದ ಮಾಡಿಕೊಂಡು ಆ ಭೂಮಿಯನ್ನು ಪಡೆದುಕೊಂಡರಂತೆ. ಹದಿನೇಳನೇ ಶತಮಾನದಲ್ಲಿ ಇಂಗ್ಲಿಷರ ಪ್ರಭಾವ ಹೆಚ್ಚಾಗಿದ್ದರಿಂದ ಫ್ರೆಂಚರು ತಮ್ಮ ದೇಶಕ್ಕೆ ಮರಳಿದರು...

ಮತ್ತೆ 2016 ರಲ್ಲಿ ಮತ್ತೆ ಕ್ಯಾತೆ ತೆಗೆದ ಫ್ರೆಂಚರು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಮತ್ತೆ ನಮ್ಮೂರಿನ ಪಕ್ಕದ ಹತ್ತು ಮೈಲಿ ಭೂ ಪ್ರದೇಶವನ್ನು ಮರಳಿ ಪಡೆದರು. ಈಗ ಅದೇ ಭೂ ಪ್ರದೇಶದಲ್ಲಿ ವೈಭವಯುತವಾದ 'ಘಯಾನಾ" ದೇಶ ನಿರ್ಮಾಣವಾಗುತ್ತಿದೆ. ಅದರ ಸೌಂದರ್ಯ ಕಣ್ಣು ಕುಕ್ಕುತ್ತಿದೆ. ಆದರೆ ಒಳಗೆ ಹೋಗಲಾರದೇ ಮನಸು ವಿಲ ವಿಲನೆ ಒದ್ದಾಡುತ್ತಿದೆ...

ಇಂದು ಬೆಳ್ಳಂಬೆಳಗ್ಗೆ ಬಿದ್ದ ಈ ವಿಚಿತ್ರ ಕನಸು ಹೇಗೆ ಅರ್ಥೈಸಿಕೊಳ್ಳಬೇಕೋ.....!!  ಕನಸನ್ನು ವ್ಯಾಖ್ಯಾನಿಸುವವರು, ಜ್ಯೋತಿಷ್ಯ ತಿಳಿದವರು ಯಾರಾದರೂ ಇದ್ದರೆ ಅರ್ಥೈಸಿರಿ.... ಮುಂಜಾನೆಯ ಕನಸುಗಳು ನಿಜ ಆಗುತ್ತೆ ಅಂತಾನೆ ಎಲ್ಲರೂ ಹೇಳ್ತಾರೆ. ಆದರೆ ನಮ್ಮೂರಿನ ಪಕ್ಕದಲ್ಲಿ ಮತ್ತೊಂದು ದೇಶ ನಿರ್ಮಾಣವಾಗೋ ಮಾತು  ತಿಪ್ಪರ್ ಲಾಗ ಹಾಕಿದರೂ ನಿಜವಾಗಲಾರದು. ಆದರೆ ಹಿಂದಿನ ಜನ್ಮದಲ್ಲಿ ನಾನೇನಾದರೂ ಪಾಳೆಯಗಾರ ಕೆಂಗಣ್ಣನಾಯಕ ಆಗಿದ್ದೆನೋ ಅಥವಾ ಫ್ರೆಂಚ್ ವೈಸ್ ರಾಯ್ ಏನಾದರೂ ಆಗಿರಬಹುದೆಂಬ ಒಂದು ಸಣ್ಣ ಶಂಕೆ ಮೂಡುತ್ತಿದೆ......

                              ಪ್ರಕಾಶ್ ಎನ್ ಜಿಂಗಾಡೆ

No comments:

Post a Comment