Monday 19 September 2016

ಬೆಂಕಿ ಪಟ್ಟಣ

 ಈಗಿನ ಊರು ಚೆಂದವೋ ಎಂದು. ಒಂದು ನನಗೆ  ಬದುಕನ್ನು ಕಲಿಸಿದ ಊರು.  ಇನ್ನೊಂದು ಬದುಕನ್ನು ಕಟ್ಟಿಕೊಟ್ಟ ಊರು. ಯಾವ ಊರು ಚೆಂದ ಎಂದು ಹೇಳುವುದೇ ಒಂದು ತರಹದ ಜಿಜ್ಞಾಸೆ. ಕಷ್ಟ, ಮತ್ತು ಯಕ್ಷಪ್ರಶ್ನೆ....

ಸಾಮಾನ್ಯವಾಗಿ ಎಲ್ಲರಿಗೂ ಅವರು ಹುಟ್ಟಿದ ಊರೇ ಅವರಿಗೆ ಚೆಂದ ಎನಿಸುತ್ತದೆ. ತಾವು ಎಲ್ಲೇ ಇದ್ದರೂ ಹುಟ್ಟಿದ ಊರಿನ ನೆನಪುಗಳು... ಬಾಲ್ಯದ ಆಟಗಳನ್ನೂ ಯಾರೂ ಮರೆಯಲಾರರು.... ಕಲಿತ ವಿದ್ಯೆ., ಶಾಲೆ,  ಶಿಕ್ಷಕರು, ಗಳಿಸಿದ ಸ್ನೇಹಿತರು, ಹುಟ್ಟಿ ಬೆಳೆದ ಮನೆ, ತಂದೆ,ತಾಯಿ, ಬಂಧುಗಳ ಪ್ರೀತಿ ಎಲ್ಲಾವನ್ನು ಪಡೆದುಕೊಂಡಿದ್ದು ಹುಟ್ಟೂರಿನಲ್ಲಿ.  ಹೀಗೆ ಎಲ್ಲವನ್ನೂ ಪಡೆದುಕೊಂಡ ಹುಟ್ಟಿದ ಊರಿನ ಜೊತೆಗೆ... ಎಲ್ಲಾವನ್ನು ಗಳಿಸಿಕೊಂಡ ನೆಲಸಿದ ಊರಿಗೆ ಹೋಲಿಸಿಕೊಂಡಾಗ, ಒಂದು ಗುಲಗಂಜಿಯಷ್ಟು ಹೆಚ್ಚಿನ ತೂಕವನ್ನು ನಾನು ಹುಟ್ಟಿ ಬೆಳೆದ ನಮ್ಮೂರಿಗೆ ನೀಡಿದೆ..

 ಹೀಗೆ ನಮ್ಮೂರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ... ನಮ್ಮೂರು ಒಂದು ಸುಂದರವಾದ ಊರು ಎಂಬ ಕಲ್ಪನೆಯಲ್ಲಿ ಇರುವಾಗಲೇ ನನ್ನ ಹತ್ತಿರದ ಸಂಬಂಧಿಕರೊಬ್ಬರು ನಮ್ಮೂರಿನ ಬಗ್ಗೆ ಋಣಾತ್ಮಕವಾದ ಅಭಿಪ್ರಾಯವನ್ನು ಮಂಡಿಸಿದರು.

"ನಿಮ್ಮೂರು ಬಿಡಪ್ಪ... ಬೆಂಕಿ ಪಟ್ಟಣ ಇದ್ದಹಾಗೆ....ಕಿಚ್ಚು ಹತ್ತಿಸಿಕೊಂಡು ಯಾವಾಗಲೂ ಕಚ್ಚಾಡಿಕೊಂಡು ಇರುತ್ತೀರಿ,  ಕಡ್ಡಿ ಹಚ್ಚಿ ಬಿಟ್ಟು ಬಿಡುತ್ತೀರಿ ಅದರ ಕಿಚ್ಚು ಎಲ್ಲಾ ಕಡೆ ಹಬ್ಬುತ್ತೆ ಎಂದರು"

ನಮ್ಮೂರಿನ ಬಗ್ಗೆ ಹಾಗೆ ಅಭಿಪ್ರಾಯ ವ್ಯಕ್ತವಾಗುತ್ತಿರುವುದಕ್ಕೆ ನನಗೆ ಸ್ವಲ್ಪ ಬೇಸರವಾಯಿತು. ಬಸವಾಪಟ್ಟಣ ಎಂಬ ಹೆಸರಿಗೆ ಯಾರೋ ಕುಚೇಷ್ಟೆಯ ಬುದ್ದಿ ಇರುವವರು ಹೀಗೆ "ಬೆಂಕಿ ಪಟ್ಟಣ" ಎಂಬ ಪ್ರಾಸ ಪದವನ್ನು ಸೇರಿಸಿರಬಹುದೇ..? ಎಂದು ಯೋಚಿಸಿದೆ.
ಪರ ಊರಿನವರು ಹೀಗೆ ನಮ್ಮೂರಿಗೆ ಬೆಂಕಿಪಟ್ಣ ಕರೆಯುವುದಕ್ಕೆ ಕೆಲವು ಕಾರಣಗಳಿವೆ.  ನಮ್ಮೂರಿನಲ್ಲಿ ಸಾಕಷ್ಟು ಒಳ ಜಗಳಗಳಿವೆ, ಗಾಸಿಪ್ ಗಳಿವೆ, ಜನರು ಸುಖಾ ಸುಮ್ಮನೆ ಒಬ್ಬರನ್ನೊಬ್ಬರು ಕಾಲ್ಕೆರೆದುಕೊಂಡು ಜಗಳ ಮಾಡುತ್ತಾರೆ.  ಹೀಗೆ ಕಿಚ್ಚು ಹಚ್ಚುವಂತಹ ಹಲವು ಸಂಗತಿಗಳು ನಿಮ್ಮೂರಲ್ಲಿ ಸ್ವಲ್ಪ ಹೆಚ್ಚಾಗಿಯೇ ಇರುತ್ತವೆಯೆಂದು ನಮ್ಮೂರಿನ ಬಗ್ಗೆ ಪರ ಊರಿನ ಜನ ಏನೇನೋ ಹೇಳಿಕೊಳ್ಳುವುದುಂಟು....

ಒಂದು ಸಲ ಯೋಚಿಸಿದಾಗ ಪರ ಊರಿನವರು ಹೀಗೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎನಿಸಿತು. ಅಂತಹ ಕೆಲವೂಂದು ಘಟನೆಗಳು ನಮ್ಮೂರಿನಲ್ಲಿ ಅದರಲ್ಲೂ ನಮ್ಮ ಸಮುದಾಯದಲ್ಲಿ ನಡೆದಿರಬಹುದು. ನಮ್ಮ ಸಮಾಜದ ಬಾಂದವರು ಸ್ವಲ್ಪ ಕಲಹ ಪ್ರಿಯರು ಎಂದು ಹೇಳಬಹುದೆನೋ....!!! ನಮ್ಮ ಸಮುದಾಯದಲ್ಲಿ ನಡೆಯುವಂತಹ  ದಿಂಡಿ ಉತ್ಸವ, ಹೊರಬೀಡಿನ ಹಬ್ಬ, ಮತ್ತು ವಿಶೇಷ ಸಂದರ್ಭಗಳಲ್ಲಿ ಸಭೆ ಸೇರುತ್ತಾರೆ. ಹೀಗೆ ಸೇರಿದ ಸಭೆಯಲ್ಲಿ ಸದಸ್ಯರಲ್ಲಿ ಚರ್ಚೆಗಳು ಶಾಂತ ರೀತಿಯಲ್ಲಿ ನಡೆದಿರುವುದೇ ಅಪರೂಪ. ಅಲ್ಲಿ ಒಂದು ಅತಿ ಸಾಮಾನ್ಯವಾದ ವಿಷಯವನ್ನು ದೊಡ್ಡದು ಮಾಡಿಕೊಂಡು ಭಯಂಕರವಾದ ಚರ್ಚೆಯಲ್ಲಿ ತೊಡಗುತ್ತಾರೆ. ಹೀಗೆ ನಡೆಯುವ ಚರ್ಚೆಗಳು ಬರುಬರುತ್ತಾ ತೀಕ್ಣ ರೂಪವನ್ನು ಪಡೆದುಕೊಂಡು ಶಿವನ ತಾಂಡವದಂತೆ ರುದ್ರ ನೃತ್ಯವೇ ನಡೆದು ಬಿಡುತ್ತದೆ. ಬಹುದಿನಗಳಿಂದಲೂ ಮನಸ್ಸಿನಲ್ಲಿ ಇಟ್ಟುಕೊಂಡಿರುವಂತಹ ಸೇಡಿನ ಜ್ವಾಲೆಯು ಇಲ್ಲಿ ಜಗಳದ ರೂಪವನ್ನು ಪಡೆದುಕೊಂಡು ಬಿಡುತ್ತದೆ...

ನನಗೆ ತಿಳಿದಿರುವಂತೆ   ಎರಡು ಸಾವಿರ ಇಸ್ವಿಯ ಆಸುಪಾಸಿನಲ್ಲಿ ನಮ್ಮೂರಿನಲ್ಲಿ ಒಂದು ಸಲ ಭಯಂಕರವಾದ ಸಭೆ ನಡೆಯಿತು. ಆ ಸಭೆಯಲ್ಲಿ ಸಮುದಾಯದ ಭಾಂದವರೆಲ್ಲಾ ಸೇರಿದ್ದರು. ಸಂತೋಷದಿಂದ ಪ್ರಾರಂಭವಾದ ಚರ್ಚೆ ಬರು ಬರುತ್ತಾ ಉಗ್ರ ರೂಪ ಪಡೆಯಿತು. ಸಮಾಜದ ಮುಖಂಡರು ತಮ್ಮ ತಮ್ಮ ವಯಕ್ತಿಕವಾದ ಸೇಡಿಗಾಗಿ ಜಗಳ ಮಾಡಿಕೊಂಡು ಸಮಾಜವನ್ನು ಇಬ್ಬಾಗವನ್ನಾಗಿ ಹೊಡೆದರು. ಒಂದು ಗುಂಪಿಗೆ ಸೇರಿದವರು ಮತ್ತೊಂದು ಗುಂಪಿಗೆ ಸೇರಿದ ಮನೆಯ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ. ಮದುವೆ ಮುಂಜಿಯಂತಹ ಸಮಾರಂಭಗಳಿಗೆ ಕಾಲಿಡುವಂತಿಲ್ಲ ಎಂಬ ಸುಗ್ಗಿವಾಜ್ಞೆಯನ್ನು ಆಯಾ ಪಂಗಡಕ್ಕೆ ಸೇರಿದ ಮುಖಂಡರು ಜಾರಿಗೊಳಿಸಿದರು. ಮೊದ ಮೊದಲು ಈ ಕಾನೂನು ಬಹು ಶಿಸ್ತುಬದ್ಧವಾಗಿ ಪಾಲಿನೆಯಾಯಿತು. ಆದರೆ ಕೆಲವು ವಿದ್ಯಾವಂತರು ಯುವಕರು ಸುಮ್ಮನಿರಲಿಲ್ಲ.  ಬಹುದಿನಗಳಿಂದ ನಡೆದು ಬಂದ ಗೆಳೆತನವನ್ನು ಯಾರೋ ಮಾಡಿದ ಪೂರ್ವಗ್ರಹ ಪೀಡಿತವಾದ ಇಂತಹ ಕಾನೂನುಗಳಿಗೆ ಬಲಿಯಾಗಲು ಬಿಡಲಿಲ್ಲ. ಅವರ ಕಾನೂನುಗಳನ್ನು ಧಿಕ್ಕರಿಸಿ. ಅವರ ಮನೆಗಳಿಗೆ ಹೋದರು. ಮದುವೆಗಳಿಗೆ ಹಾಜರಾದರು. ಹಿರಿಯರ ಈ ಕಾನೂನುಗಳನ್ನು ಧಿಕ್ಕರಿಸಿ ಮತ್ತೆ ಎಂದಿನಂತೆಯೇ ಇರಲಾರಂಭಿಸಿದರು. ಮೂರ್ನಾಲ್ಕು ವರ್ಷಗಳಲ್ಲಿಯೇ ಬೇರ್ಪಡೆಯಾದ ಸಮಾಜಗಳು ಒಗ್ಗೂಡಿದವು..... 

ಇಷ್ಟೇ ಅಲ್ಲ ..ಇಂತಹ ಘಟನೆಗಳು ನಮ್ಮೂರಿನಲ್ಲಿ ಇನ್ನೂ ಹಲವಾರಿವೆ. ಕೆಲವೊಂದು ಘಟನೆಗಳು ಕೇಳಲು ನಗುವನ್ನು ಉಕ್ಕಿಸುತ್ತವೆ. ಯಾರೋ ಒಬ್ಬ  ಮುಂದಾಳತ್ವ ವಹಿಸಿ ಒಳ್ಳೆ ಬನ್ನೂರು ಕುರಿ ಕಡಿಸಿ ಹಬ್ಬ ಚನ್ನಾಗಿ ನಡೆಯಲು ಸಹಕರಿಸಿದ ಎನ್ನಿ. ಮಟನ್ ಸರಿಯಾಗಿ ಬೆಂದಿಲ್ಲವೆಂದು ಜಗಳ ತೆಗೆಯುತ್ತಾರೆ. ದಿಂಡಿ ಉತ್ಸವದ ಲೆಕ್ಕ ಸರಿಯಾಗಿಲ್ಲ ಎಂದು ಕ್ಯಾತೆ ತೆಗೆಯುತ್ತಾರೆ.  ಉತ್ಸವದಲ್ಲಿ ಸರಿಯಾಗಿ ಊಟಬಡಿಸಿಲ್ಲವೆಂದೋ...... ಉತ್ಸವದಲ್ಲಿ ಉಳಿದ ಸಿಹಿಯನ್ನು ಸರಿಯಾಗಿ ವಿತರಣೆ ಆಗಿಲ್ಲವೆಂದೋ.... ಸಮಾಜದ ಅಧ್ಯಕ್ಷ  ಅತಿಯಾಗಿ ಮುಂದಾಳತ್ವ ವಹಿಸಿಕೊಂಡು ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಾನೆ ಎಂದೋ..... ಹಿರಿಯರೇನಾದರು ಇದ್ದರೆ ತನಗೆ ಸಿಗಬೇಕಾದ ಗೌರವಗಳು ಸಿಗುತ್ತಿಲ್ಲವೆಂದೋ.....ಹೀಗೆ ಜಗಳಕ್ಕೆ ಹಲವಾರು ಕಾರಣಗಳು.. ಈ ಎಲ್ಲವನ್ನೂ ಹತ್ತಿರದಿಂದಲೇ ವೀಕ್ಷಿಸಿಕೊಂಡು ಬಂದ ಪರವೂರಿನ ಬಾಂಧವರು ನಮ್ಮೂರಿಗೆ ಬೆಂಕಿಪಟ್ಣ ಎಂದು ಅನ್ವರ್ಥನಾಮವನ್ನು ಕೊಟ್ಟಿರಬಹುದು....

ಆದರೆ ಈ ಮಾತನ್ನು ನಾನು ಒಪ್ಪುವುದಿಲ್ಲ. ಯಾವ ಊರಿನಲ್ಲಿ ಜಗಳವಿಲ್ಲ ಹೇಳಿ. ಹಳ್ಳಿ ಎಂದ ಮೇಲೆ ಇಂತಹ ನೂರಾರು ಘಟನೆಗಳು ನಡೆದೇ ನಡೆಯುತ್ತವೆ. ನಿಮ್ಮೂರಲ್ಲಿ ನಡೆಯುವುದಿಲ್ಲವೇ...? ನಮ್ಮೂರಿನ ಬೇರಿನಿಂದ ಪಸರಿಸಿದ ರಂಭೆ ಕೊಂಬೆಗಳು ಸುತ್ತಲೂ ನೂರು ಕಿ. ಮೀ. ವರೆಗೂ ಹಬ್ಬಿವೆ. ಹೀಗಿರುವಾಗ ನಮ್ಮ ಊರಿನ ಬಗ್ಗೆ ಇತರರು ಆಡಿಕೊಳ್ಳುವುದು ಸಹಜವೇ..

ಸುಂದರವಾಗಿರುವ ನಮ್ಮೂರನ್ನು ಯಾರೋ ಬೆಂಕಿಪಟ್ಟಣ ವೆಂದು ಕರೆದ ಮಾತ್ರಕ್ಕೆ ನಮ್ಮೂರು ಚೆನ್ನಾಗಿಲ್ಲ ಎಂದು ಹೇಳಲಾಗದು. ಸ್ವಲ್ಪ ಜನಕ್ಕೆ ನಮ್ಮೂರು ಬೇಸರ ತರಿಸಿರಬಹುದು. ಆದರೆ ಅದಕ್ಕಿಂತಲೂ ಹೆಚ್ಚು ಜನರು ನಮ್ಮೂರನ್ನು ಮತ್ತು ನಮ್ಮೂರಿನ ಪರಿಸರವನ್ನು ಮೆಚ್ಚಿಕೊಂಡಿದ್ದಾರೆ. ಆಧುನಿಕ ನಗರವಾಸಿಗಳೆಂದು ಕರೆಸಿಕೊಂಡ ಜನ ನಮ್ಮೂರಿಗೆ ಬಂದಾಗ ಬೆಟ್ಟದ ಮೇಲೆ ನಿಂತು ಸುತ್ತಲೂ ಹಸಿರಾದ ಪ್ರಕೃತಿ ಸೌಂದರ್ಯವನ್ನು ಸವಿದು....
 'ವಾವ್ ವಾಟ್ ಎ ಬ್ಯೂಟಿಫುಲ್'.....
  ಎಂದು ಉದ್ಘರಿಸಿದ್ದನ್ನು ನಾನು ನನ್ನ ಕವಿಯಾರೆ ಕೇಳಿಸಿಕೊಂಡು ಸಂತೋಷ ಪಟ್ಟಿದ್ದೇನೆ. ಸೌಂದರ್ಯವನ್ನು ಸವಿಯಲೂ ಸಹ ಸುಂದರ ಮನಸ್ಸಿರಬೇಕು. ನಾವು ನೋಡುವ ದೃಷ್ಟಿಕೋನ ಸುಂದರವಾಗಿರಬೇಕು. ನಮ್ಮ ದೃಷ್ಟಿಕೋನ ಮತ್ತು ಯೋಚನೆಗಳು ಒಳ್ಳೆಯದಾಗಿದ್ದರೆ ನಾವು ನೋಡುವ ವಸ್ತುವೂ ಸಹ ಸುಂದರವಾಗಿ ಕಾಣುತ್ತದೆ. ನಮ್ಮ ದೃಷ್ಟಿಕೋನವೇ ಕಳಪೆಯಾಗಿದ್ದರೆ ನಾವು ನೋಡುವ ಎಲ್ಲಾ ವಿಷಗಳು ನಮಗೆ ಕೆಟ್ಟದ್ದಾಗಿಯೇ ಕಾಣುತ್ತದೆ.  

ನೀವು ಗಾಜಿನ ಮನೆಯನ್ನು ಹೊಕ್ಕ ನಾಯಿಯ ಕತೆಯನ್ನು ಕೇಳಿರಬೇಕು. ಗಾಜಿನ ಮನೆಯನ್ನು ಹೊಕ್ಕ ನಾಯಿಗೆ ಗಾಜಿನ ಗೊಡೆಯ ಸುತ್ತಲೂ ತನ್ನದೇ ಪ್ರತಿಬಿಂಬ...!!! ಹಿಂದೆ ಮುಂದೆ ಎಲ್ಲಿ ನೋಡಿದರೂ ನಾಯಿಗಳೇ ಕಾಣುತ್ತಿದ್ದವು. ನಾಯಿಯು ಸಿಟ್ಟಿನಿಂದ ಬೊಗಳಲು ಪ್ರಾರಂಭಿಸಿತು. ಆದರೆ ಈ ನಾಯಿಗೆ ಗಾಜಿನ ಗೋಡೆಯ ನಾಯಿಯೇ ತನಗಿಂತಲೂ ಜೋರಾಗಿ ಬೊಗಳಿದಂತೆ ಕಂಡಿತು. ಸಿಟ್ಟಿನಿಂದ ಚಂಗನೆ ಜಿಗಿದು ಎದುರು ಗೋಡೆಯ ನಾಯಿಯನ್ನು ಕಚ್ಚಿತು. ಪರಚಲು ಪ್ರಯತ್ನಿಸಿತು. ಗಾಜಿನ ಗೊಡೆಗೆ ಡಿಕ್ಕಿ ಹೊಡೆದು ಹೊಡೆದ ಕಾರಣ ನೋವಿನಿಂದ ನೆಲಕ್ಕುರುಳಿತು. ಕೊನೆಗೆ ಸತ್ತು ಹೋಯಿತು... ಆನಂತರ ಇನ್ನೊಂದು ನಾಯಿ ಗಾಜಿನ ಮನೆಯನ್ನು ಪ್ರವೇಶಿಸಿತು. ಗಾಜಿನ ಗೋಡೆಯಲ್ಲಿ ಕಂಡ ತನ್ನದೇ ಪ್ರತಿಬಿಂಬದ ನಾಯಿಗೆ ಪ್ರೀತಿಯಿಂದ ಬಾಲ ಅಲ್ಲಾಡಿಸಿತು. ಪ್ರೀತಿಯಿಂದಲೇ ಸ್ವಲ್ಪ ಸಮಯವನ್ನು ಕಳೆದು ಗಾಜಿನ ಮನೆಯಿಂದ ಹೊರಬಂದಿತು...ಪ್ರೀತಿ ತೋರಿದ ನಾಯಿ ಬದುಕುಳಿಯಿತು. ದ್ವೇಷ ಅಸೂಯೆಯಿಂದ ಒಳ ಹೊಕ್ಕ ನಾಯಿ ಕೊನೆ ಉಸಿರೆಳೆಯಿತು. 

ನಮ್ಮೂರು ಸಹ ಒಂದು ರೀತಿಯಲ್ಲಿ ಗಾಜಿನ ಮನೆಯಂತೆಯೇ ಪ್ರೀತಿ ಅಸೂಯೆಯಿಂದ ಒಳಬಂದ ಜನರಿಗೆ ಬೊಗಸೆ ತುಂಬಾ ಪ್ರೀತಿ ಸಿಗುತ್ತದೆ. ದ್ವೇಷ ಮತ್ಸರದಿಂದ ಬಂದರೆ ನಿಮ್ಮದೇ ಪ್ರತಿರೂಪ ಕಾಣುತ್ತದೆ. ನಿಮ್ಮ ನಿಮ್ಮ ಪ್ರತಿಬಿಂಬಗಳಿಗೆ ಈ ಗಾಜಿನಮನೆ ಏನು ಮಾಡಲು ಸಾಧ್ಯ ಹೇಳಿ...?

 ಯಾರು ಏನಾದರೂ ಹೇಳಿಕೊಳ್ಳಲ್ಲಿ ನನ್ನ ದೃಷ್ಷಿಯಲ್ಲಿ ನಮ್ಮೂರಿನಲ್ಲಿ ನಡೆಯುವ ಈ ಜಗಳಗಳೆಲ್ಲಾ ಪ್ರೀತಿಯ ಜಗಳಗಳೇ. ಎಲ್ಲಿ ಪ್ರೀತಿ ಅತಿಯಾಗಿ ನೆಲಸಿರುತ್ತದೆಯೋ ಅಲ್ಲಿ ಕಲಹಗಳು ಇದ್ದೇ ಇರುತ್ತವೆ. ಸುಖ ದುಃಖಗಳು ಜೀವನದಲ್ಲಿ ಎಷ್ಟು ಮುಖ್ಯವೋ ಕಲಹ ಪ್ರೀತಿಗಳು ಅಷ್ಟೇ ಮುಖ್ಯ...

ನಮ್ಮೂರಿನ ಜನ ತೋರುವ ಪ್ರೀತಿ ವಿಶಿಷ್ಟವಾದುದು. ಮೊನ್ನೆ ಊರಿಗೆ ಹೋಗಲೇಬೇಕಾದ ಪ್ರಸಂಗ ಬಂದಿತು. ತಂದೆ ಬೆಂಗಳೂರಿನಲ್ಲಿ ಮರಣ ಹೊಂದಿದರೂ ಸಹ ದಹನ ಕ್ರಿಯೆಗೆ ಹುಟ್ಟಿ ಬೆಳೆದ ನಮ್ಮೂರನ್ನೇ ಆಯ್ಕೆ ಮಾಡಿಕೊಂಡೆವು. ನಮ್ಮೂರು ತಲುಪಿದ ಕೂಡಲೇ ಅಂತಿಮ ದರ್ಶನಕ್ಕಾಗಿ ಮನೆಯ ಪಡಸಾಲೆಯಲ್ಲಿರುವ ಮಂಚದ ಮೇಲೆ ಮಲಗಿಸಿದೆವು. ಸಂಸಾರದ ಎಲ್ಲಾ ಜಂಜಾಟಗಳನ್ನು ತೊರೆದು ಮಲಗಿದ್ದ ತಂದೆಯ ತಲೆಯ ಬಳಿ ದೀಪವೊಂದು ಮಂದವಾಗಿ ಉರಿಯುತ್ತಿತ್ತು. ಅಲ್ಲಿ ಹಿರಿಯರೊಬ್ಬರು ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ "ಇಂದಿನಿಂದ ಮನೆಯ  ಜವಬ್ದಾರಿಗಳು ನಿಮ್ಮದು. ನೀವು ಕರ್ತೃಗಳಾಗಿ ಬಿಟ್ಟಿರಿ. ನಿಮ್ಮ ತಂದೆ ತಾಯಿ ನಡೆಸಿಕೊಂಡು ಬಂದ ಸಂಪ್ರದಾಯಗಳೆಲ್ಲೂ ನಿರ್ವಹಿಸುವ ಹೊಣೆ ನಿಮ್ಮೆಲ್ಲರ ಮೇಲಿದೆ.  ಎಂದು ಹೇಳಿದರು. ಸಾಮಾನ್ಯವಾಗಿ ಅನುಕಂಪ ವ್ಯಕ್ತ ಪಡಿಸುವ ಸನ್ನಿವೇಶವದು. ಆದರೆ ಅವರ ದನಿಯಲ್ಲಿ ಎಚ್ಚರಿಕೆಯೇ ಹೆಚ್ಚಾಗಿ ಕಂಡು ಬಂತು. ಆ ಸಂದರ್ಭದಲ್ಲಿಯೂ ಅವರು ನಮ್ಮ ಬಾಧ್ಯತೆಯನ್ನು ಒತ್ತಿ ಹೇಳಿದರು. ಅವರ ಪರಿಪಕ್ವವಾದ ದೃಷ್ಟಿ ಸಂದ ಜೀವದ ಕಡೆಗಿಂತ ಹೆಚ್ಚಾಗಿ ಬದುಕಿ ದುಡಿಯಬೇಕಾದ ಜೀವದ ಕಡೆಗೆ ಇತ್ತು. ಸಾವು ದೊಡ್ಡ ಸಮಸ್ಯೆಯಲ್ಲ, ದೊಡ್ಡ ಸಮಸ್ಯೆಯೆಂದರೆ ಜೀವನ. ತಂದೆ ಸತ್ತ ದುಃಖಕ್ಕಿಂತ ಹೆಚ್ಚಾಗಿ ಬಂಧುಗಳು ತೋರಿದ ಸಹಾನುಭೂತಿ, ಉತ್ತರ ಕ್ರಿಯೆಗಳು ನಡೆಯುವಾಗ ಅವರು ಹೆಜ್ಜೆ ಹೆಜ್ಜೆಗೂ ಕೊಟ್ಟ ಬೆಂಬಲ, ಅವರ ಹಿತ ನುಡಿಗಳು ... ಇವೆಲ್ಲಾ ಅಚ್ಚಳಿಯದೇ ನಿಂತಿವೆ...

ಹುಟ್ಟಿದ ಊರನ್ನು ಪ್ರೀತಿಸುವುದು ಸಹಜವೇ ಎಂದು ನೀವು ನನ್ನ ಮಾತನ್ನು ಜರೆಯಬಹುದು. ನಮ್ಮೂರು ನಮಗೆ ಕೆಲವೊಂದು ಸಲ ಬೇಸರ ತರಿಸುವುದೂ ಉಂಟು. ಹಲವು ವರ್ಷಗಳ ಹಿಂದೆ ನಾನು ನೆಲಸಿದಾಗ ಇದ್ದ ನಮ್ಮೂರಿನ ಚಿತ್ರಣಕ್ಕೂ .. ಈಗಿನ ವಾಸ್ತವ ಚಿತ್ರಣಕ್ಕೂ ಸಾಕಷ್ಟು ವ್ಯತ್ಯಾಸಗಳು ಕಂಡಾಗ ನಮ್ಮೂರು ನಮಗೆ ರುಚಿಸುವುದಿಲ್ಲ. ಅಂದು ನಮ್ಮೊಂದಿಗೆ ಕಳೆದ ಗೆಳೆಯರು ಸಿಗದಿರಬಹುದು. ಸಿಕ್ಕರೂ ಮೊದಲಿನ ಆತ್ಮಿಯತೆಯಾಗಲಿ, ಸಂತೋಷವಾಗಲಿ ಅವರಲ್ಲಿ ಕಾಣದೇ ಇರಬಹುದು.
ಮೊನ್ನೆ ಊರಿಗೆ ಹೋದಾಗ ನನ್ನ ಕಲ್ಪನೆಯ ನಮ್ಮೂರಿಗಿಂತಲೂ ವಾಸ್ತವದ ನಮ್ಮೂರು ಸಾಕಷ್ಟು ಬದಲಾದಂತೆ ಕಂಡಿತು. ನನ್ನ ಕಲ್ಪನೆಯ ಊರು ವಾಸ್ತವದಿಂದ ದೂರವಾಗಿದೆ ಎಂಬ ಭಾವನೆ ಮನಸ್ಸಿನಲ್ಲಿ ಮೂಡಿದೊಡನೆ ಊರು ಸಹ ನನ್ನ ಮನಸಿನಿಂದ ದೂರವಾಗುತ್ತಿದೆಯೇನೋ ಎಂದೆನಿಸಿತು.ನಮ್ಮೊಡನೆ ಅಂದು ಬೆರೆತ್ತಿದ್ದ ಕೆಲವು ಗೆಳೆಯರು ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗ ಮಾಡಿಕೊಂಡು ಬೇರೆ ಬೇರೆ ಊರುಗಳನ್ನು ಸೇರಿಕೊಂಡಿದ್ದರು. ಹಿಂದೆ ನನ್ನೊಟ್ಟಿಗೆ ಸೆಳೆದಿದ್ದ ಅನುಭವಗಳು ಕೆಲವು ಮಾಸಿ ಮಂಕಾಗಿ ಹೋಗಿದ್ದವು. ಮನಸ್ಸಿನ ಅಂತರಾಳದಲ್ಲಿ ಶಾಶ್ವತವಾಗಿ ನೆಲಸಿದ ಆ ನೆನಪುಗಳು ಆಗಾಗ ಮತ್ತೆ ಸ್ಮೃತಿ ಪಟಲದಲ್ಲಿ ಮೂಡಿದರೂ ವಾಸ್ತವವಾಗಿ ನಮ್ಮೂರಿನಲ್ಲಿ ಅವುಗಳನ್ನು ಹುಡುಕುವುದು ಕಷ್ಟವಾಗಿತ್ತು. ಹದಿನೈದು ವರ್ಷದ ಹಿಂದೆ ಇದ್ದ ಆ ಆತ್ಮಿಯತೆಗಳಾಗಲಿ, ಮಾತುಗಳಾಗಲಿ ಕಾಲವೆಂಬ ಪ್ರವಾಹದಲ್ಲಿ ಕೊಚ್ಚಿ ಹೋಗಿವೆಯೇನೋ ಎನ್ನಿಸಿತು...
ನಮ್ಮೂರಿನ ಬೆಟ್ಟದ ಮೇಲೆ ದುರ್ಗಾಂಬಿಕ ದೇವಾಲಯವಿದೆ. ನಾನು ಬಾಲ್ಯದಲ್ಲಿ ಕಂಡಂತಹ ಆ ದೇವಾಲಯವನ್ನು ಕೆಡವಿ ಹಾಕಿದ್ದರು. ಅದೇ ಜಾಗದಲ್ಲಿ ಹೊಸದಾದ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿತ್ತು.

 ಆ ದೇವಾಲಯದ ಒಳಗೆ ಹೋಗುವಂತಿರಲಿಲ್ಲ. ಆ ಗುಡಿಯಲ್ಲಿ ನೆಲಸಿದ ನನ್ನ ಪ್ರಿಯವಾದ ದೇವತೆ ಸ್ಥಳಾಂತರಗೊಂಡಿದ್ದಳು. ಅಲ್ಲೇ ಸ್ವಲ್ಪ ದೂರದಲ್ಲಿ ನಾಲ್ಕೈದು ಕಂಬಗಳನ್ನು ನೆಟ್ಟು ತಾತ್ಕಾಲಿಕವಾಗಿ ಮಂಟಪವನ್ನು ನಿರ್ಮಿಸಿ ಅದರಲ್ಲಿ ದುರ್ಗಾಂಬಿಕೆಯ ವಿಗ್ರಹವನ್ನಿಟ್ಟಿದ್ದರು. ನನಗೆ ಗುಡಿಯಲ್ಲಿರುವ ವಿಗ್ರಹ ದೇವತೆಯಲ್ಲ. ಅಥವಾ ದೇವರೆಂದರೆ ವಿಗ್ರಹ ಮಾತ್ರವೇ ಅಲ್ಲ. ಅಲ್ಲಿಯ ಅರೆಗತ್ತಲಿನ ವಾತಾವರಣ, ಸೊಡರುಗಳಿಂದ ಎಣ್ಣೆ ಹರಿದು ಅಲ್ಲಲ್ಲಿ ಕಪ್ಪಾಗಿರುವ ಕಂಬಗಳು. ಅಲ್ಲೇ ಕಟ್ಟೆಯ ಮೇಲಿಟ್ಟಿರುವ ಅರಿಸಿಣ ಕುಂಕುಮದ ಗೊಂಡೆಗಳು, ಗರ್ಭಗುಡಿಯ ಹೊರಭಾಗದಲ್ಲಿ ಇಟ್ಟಿರುವ ಇತರ ದೇವತೆಗಳ ಪಟಗಳು, ನೇತು ಬಿದ್ದಿರುವ ಗಂಟೆಗಳು. ದೇವಿಯ ಅರ್ಚನೆಗೆ ಪರದೆಯನ್ನು ಎಳೆದು ಪೂಜಿಸುವ ಅರ್ಚಕರು. ಮಂಗಳಾರತಿಯ ಸಮಯದಲ್ಲಿ ಮೊಳಗುವ ಘಂಟನಾದ, ನಾಸಿಕಕ್ಕೆ ಬಡಿಯುತ್ತಿರುವ ಕರ್ಪೂರ ಊದು ಬತ್ತಿಯ ವಾಸನೆ, ಸರ್ವಾಲಂಕೃತವಾಗಿ ಪೂಜಾ ಸಾಮಾಗ್ರಿಯ ಬುಟ್ಟಿಯನ್ನು ಹಿಡಿದು ತರುವ ಮುತ್ತೈದೆಯರು... ಇವೆಲ್ಲವೂ ಕಣ್ಣಿಗೆ ಕಟ್ಟಿದಂತೆ  ಇರುವಾಗ ನನ್ನ ಪ್ರೇಮ ಮತ್ತು ಭಕ್ತಿಯು ಈ ಎಲ್ಲಾ ದೃಶ್ಯದೊಂದಿಗೆ ಬೆರೆತಂತೆ ಕಂಡಿತು. ಆ ಗರ್ಭ ಗುಡಿಯ ಕತ್ತಲೂ ಸಹ ನನಗೆ ಪ್ರಿಯವಾದದ್ದು. ಅದು ಪರಮಾತ್ಮನ ಸಂಬಂಧದ ಸಂಕೇತ. ನಾವು ಅಜ್ಞಾನದಲ್ಲಿ ಯಾವುದನ್ನು ಬೆಳಕೆಂದು ಬಾವಿಸುತ್ತೇವೆಯೋ ಅದರಿಂದ ವಿಮುಖವಾಗಿ ಕೆಲಕಾಲ ಅಸ್ಪಷ್ಟವಾದ ಪ್ರಪಂಚದಲ್ಲಿ ತೊಳಲಿದ ಮೇಲೆಯೇ ದೈವ ಸನ್ನಿಧಿಯ ಅರಿವಾಗುವುದು....
ನಮ್ಮೂರಿನ ದುರ್ಗಾಂಬಿಕೆಯು ಉಗ್ರ ರೂಪದ್ದಲ್ಲ. ರಾಕ್ಷಸರ ಸಂಹಾರವಾದ ನಂತರ ಶಾಂತಳಾಗಿ ಪ್ರಸನ್ನಮಯವಾದ ರೂಪ ಧರಿಸಿದಂತೆ ನಗುಮುಖದಿಂದ ನಿಂತಿರುವಳು. ದೇವಿಗೆ ಮಾಡಿಸಿದ ಬೆಳ್ಳಿಯ ಕಣ್ಣುಗಳು ಮತ್ತು ಧರಿಸಿರುವ ಇತರ ಆಭರಣಗಳು ಮಂದವಾದ ದೀಪದ ಬೆಳಕಿನಲ್ಲಿಯೂ ಹೊಳೆಯುತ್ತಿರುತ್ತದೆ. ಹಸಿರು ಸೀರೆಯನ್ನು ಧರಿಸಿ ಅಲಂಕಾರ ಮಾಡಿದರೆಂದರೆ ಸಾಕ್ಷಾತ್ ದೇವಿಯೇ ಕಣ್ಣಮುಂದೆಯೇ ಪ್ರತ್ಯೆಕ್ಷಳಾದಂತೆ ಕಾಣುತ್ತಿದ್ದಳು. ಊರಿಗೆ ಯಾವುದೇ ರೀತಿಯ ತೊಂದರೆ ಬಂದರೆ ದೇವಿಯು ಕಾಪಾಡಿದ ಉದಾಹರಣೆಗಳಿವೆ. ಊರಿನಲ್ಲಿ ಮಳೆ ಇಲ್ಲದೇ ಬರಗಾಲ ಬಿದ್ದಾಗ ದೇವಿ ಊರನ್ನು ಕಾಪಾಡಿದ ಉದಾಹರಣೆಗಳಿವೆ. ಮನೆಯಲ್ಲಿ ಯಾವ ಸಮಸ್ಯೆಗಳೇ ಇರಲಿ ಅದನ್ನು ದೇವಿಯ ಸಾನಿಧ್ಯಕ್ಕೆ ಒಪ್ಪಿಸಿ ನಿರುಮ್ಮಳವಾಗುವ ಜನ ಹಲವು ತೊಂದರೆಗಳನ್ನು ನಿವಾರಿಸಿಕೊಂಡದ್ದೂ ಉಂಟು. ನಾಸ್ತಿಕರು ಇವನ್ನೆಲ್ಲಾ ನಂಬದಿರಬಹುದು. ಆದರೆ ನಮ್ಮ ಎಲ್ಲಾ ಸಮಸ್ಯೆಗಳನ್ವು ನಿವಾರಿಸುವ ಶಕ್ತಿಯೊಂದಿದೆ. ನಾವು ತಪ್ಪು ಮಾಡಿದರೆ ನಾವು ಅಧೀನರಾದ ದೇವತೆಗೆ ಉತ್ತರ ಕೊಡಬೇಕಾಗುತ್ತದೆ ಎಂಬ ಭಯ ಅಥವಾ ಭಕ್ತಿಯೇ ನಮ್ಮನ್ನು ಉತ್ತಮ ಪಥದೆಡೆಗೆ ಕೊಂಡೊಯ್ಯುತ್ತದೆ. ಈ ಭಾವನೆಯನ್ನು ಅನುಸರಿಸುವರೆಲ್ಲರೂ ಅಸ್ತಿಕರೇ. ಈ ಭಯವನ್ನು ಮೀರಿ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ನಾಸ್ತಿಕನೂ ಸಹ ಒಂದಲ್ಲಾ ಒಂದು ನಿಯಮಗಳಿಗೆ ಬದ್ದನಾಗಿ ನಡೆಯುವುದುಂಟು. ಮನದಲ್ಲಿ ದೇವರ ಅಸ್ತಿತ್ವಕ್ಕೆ ಹಲವು ಪ್ರಶ್ನೆಗಳಿದ್ದರೂ ಸಹ ... ಅವನು ಬೆಳಸಿಕೊಂಡ ನೈತಿಕತೆಯ ಹಾದಿಯು ಅವನನ್ನು ಮತ್ತೆ ಆಸ್ತಿಕನನ್ನಾಗಿ ಮಾಡಿ ಬಿಡುತ್ತದೆ. ನಾಸ್ತಿಕ ಎನ್ನುವುದು ಬಾಹ್ಯ ತೋರಿಕೆಯಷ್ಟೆ. ಅಂತರಾಳದಲ್ಲಿ ಹುದುಗಿರುವ ಆತನ ಒಳ್ಳೆತನವೇ ದೇವರು. ಹಾಗಾಗಿ ಪ್ರಪಂಚದಲ್ಲಿ ನಾಸ್ತಿಕರು ಅಂತ ಯಾರೂ ಇಲ್ಲ. ಮಾನವೀಯತೆಯನ್ನು ಮರೆತು ಕ್ರೂರವಾಗಿ ನಡೆದುಕೊಳ್ಳುವವನು ಮಾತ್ರ ನಾಸ್ತಿಕ. ದೇವರ ಅಸ್ತಿತ್ವವನ್ನು ಪ್ರಶ್ನಿಸುವವನು ನಾಸ್ತಿಕನಲ್ಲ...

  ಮೊನ್ನೆ ಹೋದಾಗಲೂ ಜಾತ್ರೆಯು ನಾನು ಬಾಲ್ಯದಲ್ಲಿ ನೋಡಿದ ಜಾತ್ರೆಗಿಂತಲೂ ವಿಭಿನ್ನವಾಗಿ ಕಂಡಿತು. ಬರಿ ಜಾತ್ರೆ ಮಾತ್ರ ಅಲ್ಲ ನನ್ನ ಬಾಲ್ಯದ ಗೆಳೆಯರೂ ಸಹ ಬದಲಾಗಿದ್ದರು. ಜಾತ್ರೆಗೆ ಹೋದಾಗ ಪರಿಚಿತರಾದ ಹಲವು ಸ್ನೇಹಿತರು. ಕೆಲಸ ಎಲ್ಲಿ..? ಸಂಬಳ ಎಷ್ಟು ? ಬೆಂಗಳೂರಿನಲ್ಲಿ ವಾಸವಾಗಿರುವುದೆಲ್ಲಿ..? ಸಾಧ್ಯವಾದರೆ ನನ್ನ ತಮ್ಮನಿಗೊಂದು ಕೆಲಸ ನೋಡು..? ಇತ್ಯಾದಿ ಲೋಕಾರೂಢಿಯ ಮಾತುಗಳು ನಡೆದವೇ ವಿನಃ ಮೊದಲಿನಂತೆ ದಿನಾ ಬೆಳಗ್ಗೆ ಎದ್ದು ಬೆಟ್ಟವನ್ನು ಹತ್ತಿ ಪುಣ್ಯಸ್ಥಳ ಎಂಬ ಹಳ್ಳಿಯವರೆಗೆ ನನ್ನ ಜೊತೆ ಯಾರೂ ವಾಕಿಂಗ್ ಮಾಡುವುದು. ಭದ್ರಾ ನಾಲೆಯಲ್ಲಿ ಜೊತೆಯಾಗಿ ಈಜುವುದು. ಪ್ರತಿ ಸೋಮವಾರ ರಾತ್ರಿ ಸೆಕೆಂಡ್ ಷೋ ಸಿನಿಮಾಗೆ ಹೋಗವುದು. ಈ ಕೆಲಸಗಳಿಗೆ ಯಾವ ಗೆಳೆಯನಲ್ಲಿಯೂ ಉತ್ಸಾಹವಿರಲಿಲ್ಲ. ಹುಣ್ಣಿಮೆಯ ರಾತ್ರಿಯಲ್ಲಿ ಹಾಲಸ್ವಾಮಿ ಗಿರಿಯಲ್ಲಿ ನಡೆಯುತ್ತಿದ್ದ ಕೀರ್ತನೆ, ಉಪನ್ಯಾಸಗಳಿಗೆ ಬರುತ್ತೀಯಾ ಎಂದು ನನ್ನ ಕೇಳುತ್ತಿದ್ದ ಅಂದಿನ ಆ ದಿನಗಳೆಲ್ಲಿ ಹೋದವು...? ಆಗಿನ ಗೆಳೆಯರೆಲ್ಲಿ ? ಕಾಲ ಇಷ್ಟೊಂದು ಬದಾಲಾವಣೆ ತಂದೀತೆ ಎಂದೆನಿಸಿತು. ಗೆಳೆಯರೆಲ್ಲಾ ಜೀವನ ಎಂಬ ಕಾಲ ಪ್ರವಾಹದಲ್ಲಿ ಸಿಲುಕಿಕೊಂಡು ಮೊದಲಿನ ಆತ್ಮೀಯತೆ ಸಂತೋಷ ಎಲ್ಲವನ್ನು ಕಳೆದು ಕೊಂಡಿದ್ದಾರೆ ಎಂದೆನಿಸಿತು. ಕೆಲವು ಗೆಳೆಯರ ಮನೆಗೆ ಭೇಟಿ ನೀಡಿದೆ. ಸಂಸಾರ ಎಂಬ ಜಂಜಾಟದಲ್ಲಿ ಸಿಲುಕಿ ಕೆಲವರು ಕೃತಕ ಪ್ರೀತಿಯಲ್ಲಿ  ಬೆಳಸಿಕೊಂಡಿದ್ದಾರೆಯೇ...? ಎಂದೆನಿಸಿತು. ಆದರೆ ಆತಿಥ್ಯದಲ್ಲಿ ಕಡಿಮೆಯೇನೂ ಇರಲಿಲ್ಲ. ತಿಂಡಿ, ಕಾಫಿ, ಊಟಕ್ಕೇನೂ ಕೊರತೆ ಇರಲಿಲ್ಲ ಆದರೆ ಕೊರತೆ ಇದ್ದದ್ದು ಮಾತಿನಲ್ಲಿ... ಸಹಜತೆಯಲ್ಲಿ...

ಅಂದು ಗೆಳೆಯರೊಂದಿಗೆ ಮಾಡಿದ ಹಾಸ್ಯ, ಅಬ್ಬರ, ಕುಣಿತ, ನಲಿವು, ಈಜು ಈಗ ಬರಿಯ ಕನಸು ಎಂದೆನಿಸಿತು. ಸ್ನೇಹಿತರೆಲ್ಲರೂ ಯೌವ್ವನವನ್ನು ಕಳೆದುಕೊಂಡು ಮಧ್ಯವಯಸ್ಸನ್ನು ತಲುಪಿದಾಗ ಯೌವ್ವನದ ಆ ಉತ್ಸಾಹಗಳು ಏಕೆ ಕಳೆದುಕೊಳ್ಳುತ್ತಾರೋ ಎಂಬ ಪ್ರಶ್ನೆ ಚಿಂತನೆಗೀಡು ಮಾಡಿತು. ಮೊದಲಿನಂತೆ ಅವರಲ್ಲಿ ಜೀವನವನ್ನು ಲಘು ದೃಷ್ಠಿಕೋನದಿಂದ ನೋಡುವಂತಹ ಶಕ್ತಿ ಕುಗ್ಗಿ ಹೋಗಿತ್ತು. ಮುಖದಲ್ಲಿ ನಗೆಗಿಂತ ಹೆಚ್ಚಾಗಿ ಕೃತಕತೆಯೇ ತುಂಬಿತ್ತು. ಕಂಡೊಡನೆ ಅಪ್ಪಿಕೊಳ್ಳುವ ಪ್ರೀತಿ. ಮಾತಿನಲ್ಲೇ ಹಾಸ್ಯ ಚಟಾಕಿ ಹಾರಿಸುತ್ತಿದ್ದ ಆ ಸಹಜತೆ ಈಗ ಅವರಲ್ಲಿ ಹುಡುಕುವುದೂ  ಸಾಧ್ಯವಿರಲಿಲ್ಲ. ಯೌವ್ವನದಲ್ಲಿ, ಬಾಲ್ಯದಲ್ಲಿ ಅನುಭವಿಸಿದ ಆ ಸಂತೋಷದ ಕ್ಷಣಗಳನ್ನು ಸಂಸಾರ ನೌಕೆಯೊಂದಿಗೆ ಸಾಗುತ್ತಿದ್ದ ನನ್ನ ಸ್ನೇಹಿತರಲ್ಲಿ ಇವುಗಳನ್ನು ನಿರೀಕ್ಷಿಸುವುದು ಸಹ ಸಾಧ್ಯವಿರಲಿಲ್ಲ. ಎಂದೋ ಕಳೆದ ಸಂತಸದ ಕ್ಷಣಗಳು ನಮ್ಮ ಜೀವನದುದ್ದಕ್ಕೂ ಹಾಗೇ ಇರುತ್ತೆ ಅಂದು ಕೊಳ್ಳುವುದು  ತಪ್ಪು. ಜೀವನವೆಂಬುದು ನಾವು ಓದುವ ಪುಸ್ತಕದಂತಲ್ಲ. ಓದಿ ನಿಲ್ಲಿಸಿದ ಪುಸ್ತಕವನ್ನು ಮತ್ತೆ ನಿಲ್ಲಿಸಿದ ಕಡೆಯಿಂದಲೇ ಪ್ರಾರಂಭಿಸಬಹುದು. ಆದರೆ ಜೀವನ ಹಾಗಲ್ಲ ..ನಾವು ನಿಂತಕಡೆಯಿಂದ ಮತ್ತೆ ಆರಂಭಿಸುವುದು ಸಾಧ್ಯವಿಲ್ಲ. ಜೀವನ ಚಲಿಸುತ್ತಿರುತ್ತದೆ. ನಾನು ನಿಲ್ಲಿಸಿದ ಜೀವನವನ್ನು ಮತ್ತೆ ಅಲ್ಲಿಂದಲೇ ಪ್ರಾರಂಭಿಸಬೇಕು ಎಂದು ಬಯಸಿದ್ದು. ನನ್ನದೇ ತಪ್ಪು. ನನ್ನ ಬಾಲ್ಯದ ಗೆಳೆಯರು ಇದ್ದಂತೆಯೇ ಇರಬೇಕೆಂದು ಕೊಂಡರೆ ಹೇಗೆ ಸಾಧ್ಯ ಹೇಳಿ. ಕಾಲ ಬದಲಾದಂತೆ ಹೋದರೆ ಎಲ್ಲವೂ ಬದಲಾಗುತ್ತಿರುತ್ತದೆ..ಬಾಲ್ಯದಲ್ಲಿಯ ಚೇಷ್ಟೆಗಳು. ಯೌವ್ವನದಲ್ಲಿಯ ತರಲೆಗಳು, ಪ್ರೀತಿ ಪ್ರೇಮ ಹಾಸ್ಯ ಮುಂತಾದ ಮಾತುಗಳು ಆಯಾ ಹಂತಕ್ಕೆ ಸೀಮಿತವಾಗಿ ಬಿಡುತ್ತವೆ...


ಸಂಸಾರದಲ್ಲಿ ನೋವು ಅನುಭವಿಸುವವನು ಸುಖ ಸಂತೋಷಗಳಿಂದ ವಂಚಿತನಾಗಿ ಬಿಡುತ್ತಾನೆ. ಏನೇ ಕಷ್ಟಗಳು ಬರಲಿ ನಗು ನಗುತ್ತಾ ಕಾಲ ಕಳೆಯಲು ಬಯಸಿದರೆ ಬಂದ ಕಷ್ಟಗಳೂ ದೂರವಾಗುತ್ತವೆ.  ನೀವು ಮೊದಲಿನಂತೆ ನಗು ನಗುತ್ತಾ ಕಾಲ ಕಳೆದರೂ ಸಹ ನಿಮ್ಮ ಜೀವ, ನಿಮ್ಮ ಶರೀರ ಅಂತಿಮವಾಗಿ ಪ್ರಕೃತಿಯೊಡನೆ ಲೀನವಾಗುತ್ತದೆ. ಅಥವಾ ಸಂಸಾರದ ಜಂಜಾಟಗಳನ್ನು ತಲೆಯ ಮೇಲೆ ಹೊತ್ತು ಕಾಲ ಕಳೆದರೂ ಸಹ ನಿಮ್ಮ ಶರೀರ ಪ್ರಕೃತಿಯೊಂದಿಗೆ ಲೀನವಾಗಲೇ ಬೇಕು. ನೀವು ಜೀವನದಲ್ಲಿ ಅತಿಯಾಗಿ ಕಷ್ಟ ಅನುಭವಿಸಿದವರು ಸ್ವಲ್ಪಕಾಲ ಸುಖವನ್ನು ಅನುಭವಿಸಿಕೊಂಡು ಬರಲಿ ಎಂದು ದೇವರು ನಿಮ್ಮ ಆಯಸ್ಸನ್ನು ಹೆಚ್ಚಿಸುವುದಿಲ್ಲ. ದೇಹ ಪ್ರಕೃತಿಯಲ್ಲಿ ಲೀನ ವಾಗುವುದು ನಿಶ್ಚಿತವೇ ಆಗಿರುವಾಗ ಸತ್ಯದ ಮಾರ್ಗವನ್ನುಸರಿಸುವುದೋ... ಸುಳ್ಳಿನ ಮಾರ್ಗವನ್ನನುಸರಿಸುವುದೋ... ಈ ಹುಟ್ಟು ಸಾವಿನ ಮಧ್ಯ ನಮ್ಮ ನಡವಳಿಕೆಗಳು ಹೇಗಿರಬೇಕೆಂದು ಆಯ್ಕೆ ಮಾಡಿಕೊಳ್ಳುವುದು ಮಾತ್ರ ನಿಮಗೆ ಸೇರಿರುತ್ತದೆ. ನಗುವವನಿಗೆ ನೂರು ಗೆಳೆಯರು ಅಳುವವನಿಗೆ ನಾಲ್ಕೇ ಗೆಳೆಯರು ಎಂಬ ತತ್ವ ನಿಮಗೆ ತಿಳಿದುಕೊಂಡರೆ ಚೆನ್ನ..

ಊರಿನ ವಿಷಯ ಬಿಟ್ಟು ವಿಷಯಾಂತರ ಮಾಡಿದೆ ಕ್ಷಮಿಸಿ......ನಮ್ಮೂರು ಹಿಂದಿನ ಜನಪದ  ಸಂಸ್ಕೃತಿಯಿಂದಲೂ ದೂರವಾದಂತೆ ಕಂಡಿತು. ನಾನು ಬಾಲ್ಯದಲ್ಲಿ ನೋಡಿದ ಜಾತ್ರೆಯ ವೈಭವೇ ಬೇರೆ..... ಇಂದು ನೋಡುತ್ತಿರು ಜಾತ್ರೆಯ ವೈಭವವೇ ಬೇರೆ ಎಂದೆನಿಸಿತು. ಇಂದಿನ ಜಾತ್ರೆ ನನ್ನ ಮನಸಿಗೆ ರುಚಿಸಲಿಲ್ಲ. ದಂಡೆ ದಂಡೆಯಾಗಿ ಬರುತ್ತಿದ್ದ ಹಳ್ಳಿಯ ಜನರ ಸಂಖ್ಯೆ ಕಡಿಮೆಯಾದಂತೆ ಕಂಡಿತು. ಮೊಣಕಾಲಿನ ಮೇಲಕ್ಕೆ ಪಂಚೆಯನ್ನು ಕಟ್ಟಿಕೊಂಡು ಜಾತ್ರೆಗೆ ಲಗ್ಗೆ ಇಡುತ್ತಿದ್ದ ಹಳ್ಳಿಗರಲ್ಲಿ ಬದಲಾವಣೆ ಕಂಡಿತು. ಜನಪದ ಸಂಸ್ಕೃತಿಯನ್ನು ನೆನಪನ್ನು ತರುತ್ತಿದ್ದ ನಮ್ಮ ಹಳ್ಳಿಯ ತರುಣರಲ್ಲಿ  ಪಂಚೆಯ ಬದಾಲಾಗಿ ಪಾಶ್ಚ್ಯಾತ್ಯರ ಪ್ಯಾಂಟ್ ಅವರ ಸೊಂಟವನ್ನು ಏರಿ ಕುಳಿತ್ತಿದ್ದನ್ನು ನೋಡಿ ಹಳ್ಳಿಗಳು ಸಹ ನಮ್ಮ ಸಂಸ್ಕೃತಿಯಿಂದ
ದೂರವಾಗುತ್ತಿವೆಯೇನೋ ಎಂದೆನಿಸಿತು. ಘಲ್,ಘಲ್ ಸದ್ಧಿನೊಂದಿಗೆ ಹೇರಳವಾಗಿ ಬರುತ್ತಿದ್ದ ಎತ್ತಿನ ಗಾಡಿಯನ್ನು ನೋಡಿದೆ. ಕೆಲವು ಮಾತ್ರ ಇದ್ದವು. ಈ ಹಿಂದೆ ನಾನು ನೋಡಿದ ದುರ್ಗಾಂಬಿಕ ಜಾತ್ರೆಯ ಚಿತ್ರಣಕ್ಕೂ ವಾಸ್ತವ ಚಿತ್ರಣಕ್ಕೂ ಸಂಪೂರ್ಣ ಭಿನ್ನವಾದಂತೆ ಗೋಚರಿಸಿತು. ಅಂದಿನ ಆ ವೈಭವಗಳು, ಜಾತ್ರೆಯ ಗದ್ದಲಗಳು, ಡಳ್ಳು ಕುಣಿತ, ಛದ್ಮ ವೇಷ ಧರಿಸಿದ ವಿರಗಾಸೆಯ ಕಲಾವಿದರು, ತಮಟೆಯ ಸದ್ಧಿಗೆ ಹೆಜ್ಜೆ ಹಾಕುವ ಹುಲಿ ಕುಣಿತ, ಈ ಎಲ್ಲವೂ ಕಾಲದ ಮಹಿಮೆಯ ಪರಿಣಾಮವಾಗಿ ಕಣ್ಮರೆಯಾದಂತೆ ಕಂಡವು.  ನನ್ನ ನೆನಪಿನಲ್ಲಿ ಭದ್ರವಾಗಿದ್ದ ಆ ವೈಭವಗಳು ವಾಸ್ತವಕ್ಕೆ ದೂರವಾಗುತ್ತಲೇ ಹೋಗುತ್ತಿದ್ದವು. ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದ್ದ ಆ ವೈಭವಗಳು ಎಲ್ಲೋ ಕಳೆದು ಹೋಗಿವೆ ಎಂದೆನಿಸಿತು. ಆದರೆ ಬೌಗೊಳಿಕವಾಗಿ ನಮ್ಮೂರು ಹಾಗೇ ಇದ್ದಿದ್ದು ಸ್ವಲ್ಪ ಸಮಾಧಾನ ನೀಡಿತು. ಆ ಜಾತ್ರೆ, ಆ ಬೆಟ್ಟ,  ಬೆಟ್ಟವನ್ನು ಸುತ್ತುವರೆದು ಹರಿಯುತ್ತಿರುವ ಭದ್ರಾ ನಾಲೆ,  ಪವಾಡ ಪುರುಷರೆಂದು ಕರೆದು ಕೊಂಡಿರುವ ಹಾಲಸ್ವಾಮಿಯ ಗಿರಿ, ಗುಂಡಿ ಬಿದ್ದ ರಸ್ತೆಗಳು, ಎಲ್ಲವೂ ನೆನಪಿನ ಚಿತ್ರಣದಲ್ಲಿ ನೆಲೆಯೂರಿದಂತೆ ವಾಸ್ತವದಲ್ಲಿ ಅಲ್ಪ ಸ್ವಲ್ಪ ಬದಾಲಾವಣೆಯೊಂದಿಗೆ ಕಂಡವು. ಜಾತ್ರೆಗೆ ಮಾತ್ರ ಸ್ವಲ್ಪ ಆಧುನಿಕತೆಯ ಮೆರಗು ಬಂದಂತೆ ಇತ್ತು.....


  ನಾನು ಬಾಲ್ಯದಲ್ಲಿ ಕಂಡ ನಮ್ಮೂರಿನ ನೆನಪುಗಳು ನನ್ನ ಮನಸ್ಸಿನ ಸ್ಪೃತಿ ಪಟಲದಲ್ಲಿ ಚಿತ್ರದಂತೆ ಮೂಡಿತ್ತು, ಬೆಟ್ಟವನ್ನು ಸುತ್ತಿ ಹರಿವ ಭದ್ರಾ ನಾಲೆ, ದುರ್ಗಾಂಗಿಕ ಬೆಟ್ಟ, ಪವಾಡ ಪುರುಷರೆಂದು ಕರೆಸಿಕೊಂಡ ಹಾಲಸ್ವಾಮಿಯವರು ತಪಸ್ಸಿಗೆ ಕುಳಿತ ಗುಹೆ, ಮನಸ್ಸನ್ನು ರಂಜಿಸುತ್ತಿದ್ದ ಎರಡು ಸಿನಿಮಾ ಟೆಂಟುಗಳು, ಈ ಎಲ್ಲ ಚಿತ್ರಗಳು ಮನಸ್ಸಿನ ಮೂಲೆಯಲ್ಲಿ ಅಭಿಮಾನದ ಚಿತ್ತಾರವನ್ನು ಮೂಡಿಸಿದ್ದವು. ಮನಸು ಧ್ಯಾನಿಸುತ್ತಿದ್ದ ನಮ್ಮೂರಿನ ಚಿತ್ರ ಪಟಕ್ಕೆ ಕುಂಚ, ಬಣ್ಣ, ರೇಖೆ, ವಿನ್ಯಾಸಗಳನ್ನು ಗೀಚಿಕೊಂಡು ಅದನ್ನು ವರ್ಣಮಯವಾಗಿಸಿ ಕೊಂಡಿದ್ದು ನನ್ನ ಮನಸ್ಸು. ಅಂದು ಕಂಡ ಈ ವರ್ಣಮಯ ಚಿತ್ರವು ರಂಗು ಮಾಸದೇ ಹಾಗೇ ಇರಬೇಕೆಂದುಕೊಳ್ಳುವುದು ಸರಿಯಲ್ಲ. ಅಥವಾ ಊರು ಮೊದಲಿಗಿಂತಲೂ ಈಗ  ರಂಗು ಹೊಂದಿದ್ದರೂ ಸಹ ಬಾಲ್ಯದ ಚಿತ್ರಣಗಳು ಮನದಾಳಕ್ಕೆ ಅಚ್ಚೊತ್ತಿರುವುದರಿಂದಲೋ... ಅಥವಾ ಹಿಂದೆ ಕಂಡದ್ದನ್ನೇ ಕಾಣಲು ಮನಸ್ಸು ಹಾತೋರೆಯುತ್ತಿರುವುದರಿಂದಲೋ ಊರು ಸುಂದರವಾಗಿ ಕಾಣಿಸದಿರಬಹುದು. ಇದು ಒಂದು ರೀತಿಯ ಬಣ್ಣದ ಜಗತ್ತು ಇದ್ದಂತೆ. ಯೌವ್ವನದಲ್ಲಿ ಕಂಡದ್ದಲ್ಲ ನಮಗೆ ಹಿತವೆನಿಸುತ್ತದೆ. ಕನಸುಗಳು ಹುಟ್ಟುವ ಯೌವ್ವನದ  ಉತ್ಕರ್ಷದಲ್ಲಿ ಕಂಡದ್ದೆಲ್ಲಾ ಹಿತವೆನಿಸುತ್ತದೆ. ಯೌವ್ವನದಲ್ಲಿ ನೋಡಿದ ಸಿನಿಮಾ. ಅಥವಾ ಕೇಳಿದ ಹಾಡುಗಳು ನಮಗೆ ಹಿತವೆನಿಸುತ್ತವೆ.  ಆ ಸಿನಿಮಾ ಅಥವಾ ಸಿನಿಮಾದ ಹಾಡಿನೊಂದಿಗೆ ನಾವು ನಮ್ಮ ಕನಸಿನ ಕನ್ಯೆಯನ್ನು    ಕಾಣುತ್ತೇವೆ. ಅವಳೊಂದಿಗೆ ಮರ ಸುತ್ತುತ್ತಾ  ಡ್ಯೂಯೆಟ್ ಹಾಡಿಕೊಳ್ಳುತ್ತೇವೆ. ನಮ್ಮ ಮನಸ್ಸಿನಲ್ಲಿ ಅಮೂರ್ತ ಸ್ವರೂಪದಲ್ಲಿ ನೆಲಸಿದ್ದ ಕಾಲ್ಪನಿಕ ಕನ್ಯೆಯೊಬ್ಬಳು ಮೂರ್ತ ಸ್ವರೂಪವನ್ನು ಪಡೆಯುತ್ತಾಳೆ.  ಅಪ್ಸರೆಯಂತಹ ಆ ಹುಡುಗಿಗೆ ನಮ್ಮ ಹೃದಯದಲ್ಲೊಂದು ಸ್ಥಾನ ಕೊಟ್ಟು ಬಿಡುತ್ತೇವೆ. ಹಾಗಾಗಿ ಈ ಹಾಡು.. ಹಾಡಿನಲ್ಲಿ ಕಲ್ಪಿಸಿಕೊಂಡ ಹುಡುಗಿ ಎಲ್ಲವೂ ಮನದೊಳಗೆ ರಂಗು ರಂಗಿನ ಚಿತ್ತಾರವನ್ನು ಮೂಡಿಸಿ ಮನಸ್ಸಿನಲ್ಲಿ ಹಿತವಾದ ಭಾವನೆಯನ್ನು ಮೂಡಿಸುತ್ತವೆ. ಇದೇ ಕಾರಣಕ್ಕೆ ನಾವು ಯೌವ್ವನಗಳಲ್ಲಿ ಕೇಳಿದ ಹಾಡುಗಳೆ ನಮಗೆ ಜೀವನದುದ್ದಕ್ಕೂ ಮುದ ನೀಡುತ್ತವೆ. ಇಳಿ ವಯಸ್ಸಿನಲ್ಲಿಯೂ ಆ ಹಾಡು ನಮ್ಮನ್ನು ಕಾಡದೇ ಬಿಡದು. ಏಕೆಂದರೆ ಆ ಹಾಡಿನೊಂದಿಗೆ ಅಂದಿನ ನಮ್ಮ ಕನಸುಗಳು ಬೆರೆತಿರುತ್ತವೆ.  ಅಂದು ನಮ್ಮ ಮನಸ್ಸಿಗೆ ಹಿತ ನೀಡಿದ ಆ ಕನಸಿನ ರಾಜಕುಮಾರಿಯೂ ಅಲ್ಲಿ ಶಾಶ್ವತವಾಗಿ ನೆಲೆಸಿರುತ್ತಾಳೆ. ಈ ಕಾರಣದಿಂದಲೇ ಯೌವ್ವನದಲ್ಲಿ ನಾವು ಕೇಳಿದ ಈ ಹಾಡುಗಳು ನಮಗೆ ಜೀವನದುದ್ದಕ್ಕೂ ಮುದ ನೀಡುತ್ತವೆ.  ಇದನ್ನು ನೆನಪಿಸಿಕೊಂಡಾಗಲೆಲ್ಲಾ ಮನಸು ಯಾವುದೋ ಲೋಕದಲ್ಲಿ ತೇಲಿ ಹೋಗುತ್ತದೆ. ಇಷ್ಟೊಂದು ಹಿತವನ್ನೂ, ಮುದವನ್ನೂ ಅನುಭವಿಸಿದ ನಾವು ಆ ಹಾಡುಗಳನ್ನೂ ಮತ್ತು ಆ ಕನಸುಗಳನ್ನೂ ಎಂದಿಗೂ ಮರೆಯುವುದಿಲ್ಲ. ವೃದ್ದಾಪ್ಯದ ಹಂತವನ್ನು ತಲುಪಿದರೂ ಸಹ ಅವರು ಯೌವ್ವನದಲ್ಲಿ ಕೇಳಿದ ಹಾಡುಗಳನ್ನೇ ನೆನಪಿಸಿ ಕೊಳ್ಳುತ್ತಾರೆ. ಅವರಿಗೆ ಈಗಿನ ಯಾವ ಹಾಡುಗಳು ಸಹ ರುಚಿಸುವುದಿಲ್ಲ. ಕಾರಣ ಕನಸುಗಳಿಲ್ಲದ, ಉತ್ಸಾಹಗಳಿಲ್ಲದ ವೃದ್ದಾಪ್ಯದ ಹಂತದಲ್ಲಿ ಈಗಿನ ಹಾಡುಗಳು ರುಚಿಸುವುದಾದರೂ ಹೇಗೆ...? ಜೊತೆಗೆ ಈಗಿನ ಹಾಡುಗಳನ್ನು ಕೇಳಿ ಅವರು ..


" ಆಗ ಬರುತ್ತಿದ್ದ ಹಾಡುಗಳು ಈಗೆಲ್ಲಿ ಸಿಕ್ಕಾವು. ಅವತ್ತಿನ ಹಾಡುಗಳೆಂದರೆ... ಅದೇನು ಅರ್ಥ. ಅದೇನು ಸ್ವರ..?

ಎಂದು ಗೊಣಗುತ್ತಾರೆ.

ಇದು ಇಲ್ಲಿಗೇ ನಿಲ್ಲುವುದಿಲ್ಲ. ಇಂದಿನ ಯುವಕರು ಸಹ ತಾವು ಕೇಳಿದ ಹಾಡುಗಳೊಂದಿಗೆ ಇಂದು  ಕಲ್ಪಿಸಿಕೊಂಡ ಚಿತ್ರಣಗಳನ್ನೇ ಮುಂದೆ ವೃದ್ದಾಪ್ಯದ ಹಂತದಲ್ಲಿ ನೆನಪಿಸಿಕೊಳ್ಳುವುದುಂಟು. ಅವರೂ ಸಹ ತಮ್ಮ ಯೌವ್ವನದ ನೆನಪುಗಳನ್ನು  ಹೊಗಳಲೇ ಬೇಕು ..ಇಳಿ ವಯಸ್ಸು ತಲುಪಿದಾಗ ಅವರಿಗೂ ಆ ಕಾಲದ ಹಾಡುಗಳು ಹಿತವೆನಿಸುವುದಿಲ್ಲ. ಏಕೆಂದರೆ ಉತ್ಸಾಹ ಮತ್ತು ಕನಸುಗಳು ಮೂಡದ ಹಂತವದು...


ಊರಿನ ವಿಷಯದಲ್ಲಿಯೂ ಸಹ  ಹೆಚ್ಚು ಕಡಿಮೆ ಇದೇ ರೀತಿಯ ಭಾವನೆಗಳಿರುತ್ತವೆ.  ಅತ್ಯುತ್ಸಾಹದಲ್ಲಿ ಕಳೆದ ಊರಿನ ನೆನಪುಗಳು ಮುಂದೆ ಹದಿನೈದು ಇಪ್ಪತ್ತು ವರ್ಷಗಳ ನಂತರ ಊರಿಗೆ ಹೋದಾಗ ನಿಮಗೆ ಆ ಚಿತ್ರಣಗಳು ಕಾಣದೇ ಹೋಗಬಹುದು. ಜನರೆಲ್ಲರೂ ಅಪರಿಚಿತರಂತೆ ಕಾಣಬಹುದು. ಊರು ನಿಮ್ಮದಾದರೂ ಅಲ್ಲಿಯ ಜನ ನಿಮ್ಮವರೆಂದಿಸುವುದಿಲ್ಲ. ಎಲ್ಲಾ ಹೊಸ ಮುಖಗಳೇ.  ಅಂದು ಚಿಕ್ಕವರಿದ್ದವರೆಲ್ಲಾ ಇಂದು ಯೌವ್ವನದ ಉತ್ತರಾಧಿಕಾರವನ್ನು ವಹಿಸಿಕೊಂಡಿರುತ್ತಾರೆ. ನಿಮ್ಮದೇ ಊರಿನಲ್ಲಿ ನೀವು ಅನಾಥರಾದ ಭಾವನೆ ಮೂಡಬಹುದು. ಆಗ ನಿಮಗೆ ಬಾಲ್ಯದಲ್ಲಿ ಕಳೆದ ನೆನಪುಗಳು ಮರುಕಳಿಸದೇ ಇರಲಾರದು. ನಿಮ್ಮ ಕಣ್ಣುಗಳು ಮತ್ತೆ ಆ ನೆನಪಿನ ಚಿತ್ರಣಗಳು ಮರುಕಳಿಸುತ್ತವೆಯೇನೋ ಎಂದು ಹುಡುಕದೇ ಇರಲಾರದು....


ಮೊನ್ನೆ ಊರಿಗೆ ಹೋದಾಗ ಭದ್ರಾ ನಾಲೆಯಲ್ಲಿ ಈಜಬೇಕೆನಿಸಿತು. 'ಗಂಡಸರ ಮೆಟ್ಟಿಲು' ಎಂದು ಕರೆಯಿಸಿಕೊಳ್ಳುವ ಜಾಗಕ್ಕೆ ಹೋಗಿ ಶಾಂತವಾಗಿ ಹರಿಯುತ್ತಿರುವ ಶೀತಲವಾದ ನೀರಿನಲ್ಲಿ ನಿಧಾನವಾಗಿ ನನ್ನ ದೇಹವನ್ನು ಮುಳುಗಿಸಿದೆ. ಮುಂಜಾನೆಯ ಆ ಚಳಿ ಮತ್ತು ಆ ಶೀತಲವಾದ ನೀರಿನಲ್ಲಿ ಮುಳುಗಿದ್ದರಿಂದಲೋ ಏನೋ ಆ ಶೀತಕ್ಕೆ ನಡುಗಿ ಮೈ 'ಜುಂ...' ಎಂದಿತು. ಆ ಮೆಟ್ಟಿಲಿನ ಪಕ್ಕದಲ್ಲಿರುವ ದಿಬ್ಬವೊಂದಿದೆ. ಬಾಲ್ಯದಲ್ಲಿ ಆ ದಿಬ್ಬದ ಮೇಲೆ ನಿಂತು ನಾಲೆಗೆ ಹಾರುತ್ತಿದ್ದವು. ಆದರೆ ಈಗ ಆ ದಿಬ್ಬದ ಮೇಲೆ ನಿಂತು ನಾಲೆಗೆ ಹಾರುವ ಉತ್ಸಾಹವಿರಲಿಲ್ಲ. ಈಗಲೂ ಹಲವು ಯುವಕರು ಓಡೋಡಿ ಬಂದು ದಿಬ್ಬದ ಮೇಲೆ ಕಾಲಿಟ್ಟು ಮೇಲಿಂದ ಲಾಗ ಹಾಕಿ ನಾಲೆಗೆ ಧುಮುಕುತ್ತಿದ್ದರು. ನಾನು ಮಾತ್ರ ಮೆಟ್ಟಿಲ ಮೇಲೆಯೇ ಕುಳಿತು ನೀರಿನೋಂದಿಗೆ ಚೆಲ್ಲಾಟವಾಡುತ್ತಾ ಸ್ನಾನ ಮಾಡುತ್ತಿದ್ದೆ. ಇದನ್ನೆಲ್ಲಾ ಗಮನಿಸುತ್ತಿದ್ದ ವ್ಯಕ್ತಿಯೊಬ್ಬ

"ಲೋ ಪಕ್ಕ.... ನಾನ್ ಯಾರು ಅಂತ ಗೊತ್ತಾಯ್ತೆನೋ...?"

ಆತನನ್ನೇ ದಿಟ್ಟಿಸಿ ನೋಡಿದೆ.....

"ದೊಡ್ಡ ರಂಗಯ್ಯನ ಮಗ ರಾಮಸ್ಸಾಮಿ ಅಲ್ವೆನೋ...? 

ಆತ ಕಾಲೇಜು ದಿನಗಳಲ್ಲಿ ನನ್ನ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದ. ನಾಲಿಗೆಗೆ ಬಾರದ ಇಂಗ್ಲಿಷನ್ನು ರಸ್ತೆಯುದ್ದಕ್ಕೂ ಕಷ್ಟಪಟ್ಟು ಮಾತನಾಡಿಕೊಂಡು ಹೋಗುತ್ತಿದ್ದೆವು. ದಿನಕ್ಕೆ ಒಂದು ಗಂಟೆಯಾದರೂ  ಇಂಗ್ಲಿಷ್ ಮಾತನಾಡಬೇಕೆನ್ನುವುದು ನಮ್ಮಿಬ್ಬರ ತೀರ್ಮಾನವಾಗಿತ್ತು. ಆಗ ನಾವು ಮಾತನಾಡುತ್ತಿದ್ದ ಬಟ್ಲರ್ ಇಂಗ್ಲಿಷನ್ನು ಕೇಳಿ ರಸ್ತೆಯಲ್ಲಿ ಹಲವರು ನಕ್ಕಿದ್ದೂ ಉಂಟು...

" ಯಾಕೋ ಬೆಂಗಳೂರು ಬಿಟ್ಟು ಬಂದೆಂತೆ...? ಹಳ್ಳೀಲಿ ಯಂತ ಕೆಲ್ಸ ಮಾಡ್ತಿಯೋ... ನಿಮ್ದು ಜಮೀನು ಬೇರೆ ಇಲ್ಲ.. ಜೀವನಕ್ಕೆ ಏನು ಮಾಡ್ಕೊಂಡಿದ್ದೀಯಾ...?

ನಾನು ಕುತೂಹಲದಿಂದ ಕೇಳಿದೆ

"ಬೆಂಗಳೂರಿನ ಜಂಜಾಟದ ಬದುಕು ಬೇಸರವಾಯ್ತು. ನನಗೆ ನಮ್ಮೂರಿನಲ್ಲಿ ಇದ್ದಷ್ಟು ಸಮಾಧಾನ ಬೆಂಗಳೂರಿನಲ್ಲಿ ಇದ್ದಾಗ ಸಿಗಲಿಲ್ಲ. ನಮ್ಮೂರಿನ ರಾಜ ಬೀದಿಯಲ್ಲಿ ಒಂದು ಸುತ್ತು ತಿರಿಗಿದರೆ ಸಾಕು ಅಲ್ಲಿ ಸಿಗುವ ತೃಪ್ತಿ ಲಕ್ಷ ರೂಪಾಯಿ ಕೊಟ್ಟರೂ ನನಗೆ ಸಿಗದು'

ಅಂದ

'ಜೀವನಕ್ಕೆ....?"

ಎಂದು ಕೇಳಿದೆ.. 

"ಏನಾದ್ರೂ ದುಡಿಯೋಣ ಅಂತ ಇದ್ದೀನಿ"
ಸ್ವಲ್ಪ ನಿರುತ್ಸಾಹ ದಿಂದ ಹೇಳಿದ
"ಮತ್ತೆ ಮದುವೆ......?"

ನಾನು ಹಾಗೆ ಕೇಳಿದಾಹ ಮುಖದಲ್ಲಿ ಮತ್ತಷ್ಟು ಬೇಸರ ಕಂಡಿತು..

"ರಾಂ ಪುರ ದಲ್ಲಿ ಹುಡುಗಿ ಫಿಕ್ಸ ಆಗಿತ್ತು... ನಿಶ್ಚಿತಾರ್ಥನೂ ಆಗಿತ್ತು. ಯಾರೋ ಊರಿನವರು ಹುಡುಗ ಓದಿದ್ರೂ ಕೆಲ್ಸ ಮಾಡದೇ ಊರಲ್ಲಿ ಗೂಳಿಯಂಗೆ ತಿರುಗ್ತಾನೆ ಅಂತ ಚಾಡಿ ಹೇಳಿ ನನ್ನ ಮದುವೆಗೆ ಬೆಂಕಿ ಇಟ್ಟು ಬಿಟ್ರು... ನಮ್ಮೂರು ಬೆಂಕಿಪಟ್ಣ ನೋಡು.. ಅವರು ಯಾರು ಅಂತ ಗೊತ್ತಾದ್ರೆ ನಾನೂ ಸುಮ್ನಿರಲ್ಲ.. ಬುಡಕ್ಕೆ ಬೆಂಕಿ ಇಡ್ತೀನಿ"
ಸ್ವಲ್ಪ ಸಿಟ್ಟಿನಿಂದ ಹೇಳಿದ 

"ಅಲ್ಲೋ ಊರ ಮೇಲಿನ ಮಮಕಾರದಿಂದ, ಬದುಕು ಕಟ್ಟಿಕೊಳ್ಳೋದನ್ನು ಮರೆತೆಯಲ್ಲೋ ದಡ್ಡ... ದುಡಿಯೋ ವಯಸ್ಸಲ್ಲಿ ನನಗೆ ಆ ಊರು ಇಷ್ಟವಿಲ್ಲ ಈ ಊರು ಇಷ್ಟವಿಲ್ಲ ಅಂದ್ರೆ ಜೀವನ ಹೆಂಗೋ ಸಾಗುತ್ತೆ.... ಎಲ್ಲರಿಗೂ ಅವರವರ ಊರಿನ ಮೋಲೆ ಗೌರವ ವಿಶ್ವಾಸಗಳಿರುತ್ತವೆ. ಹಾಗಂತ ನಮ್ಮ ನಮ್ಮ ಬದುಕು ಕಟ್ಟಿಕೊಳ್ಳೋದು ಬೇಡವೇ... ಚಿನ್ನದ ಸೂಜಿ ಅಂತ ಕಣ್ಣಿಗೆ ಚುಚ್ಚಿ ಕೊಳ್ಳೋಕೆ ಆಗುತ್ತೇನೋ.... ಸಿಕ್ಕ ಒಳ್ಳೆ ಕೆಲಸಾನೂ ಬಿಟ್ಟು ಬಂದೆ... ಕಷ್ಟ ಪಟ್ಟು ಓದಿಸಿದ ತಂದೆ ತಾಯಿಗೆ ಹೇಗೋ ಸಾಕ್ತೀಯಾ..."

 ಅಂದೆ

ನನ್ನ ಮಾತುಗಳು ಅವನಿಗೆ ಹಿಡಿಸಲಿಲ್ಲ. ಏನೋ ನೆಪ ಹೇಳಿ ಅಲ್ಲಿಂದ ಕಾಲ್ಕಿತ್ತ....

ಕಾಲಘಟ್ಟಗಳು ದಾಟಿದ ನಂತರವೂ ಊರಿನ ಬಗ್ಗೆ ನಮಗೂ ಪ್ರೀತಿ ವಿಶ್ವಾಸಗಳು ಇದ್ದೇ ಇರುತ್ತವೆ. ಆದರೆ ನಮಗೆ ಊರು  ಹಳೆಯದಾದಂತೆ ಜನ ಹೊಸಬರು ಅನ್ನಿಸಬಹುದು.. ನಮ್ಮೂರಿನ ಜನ ನಮಗೆ ಅಪರಿಚಿತರು ಎಂದು ಬಾಸವಾಗಬಹುದು ..ಆದರೆ ನಮ್ಮೂರಿನ ನೆನಪುಗಳು ಮಾತ್ರ ಅಮರ.  

ಬದುಕು ಯಾವಾಗ ತುಕ್ಕು ಹಿಡಿಯುವತ್ತ ಸಾಗುತ್ತದೆಯೋ... ಆಗ ನಾವು ಮತ್ತೊಂದು ಊರಿಗೆ ಹೋಗಲೇ ಬೇಕು. ಹೊಸ ಬದುಕನ್ನು ಕಟ್ಟಿಕೊಳ್ಳಲೇ ಬೇಕು. 

"ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ....?"

 ಎಂದು ನೀವೇನಾದರೂ ಕೇಳಿದರೆ
ನಾನೂ ಸಹ ಕೆ, ಎಸ್ ನರಸಿಂಹ ಸ್ವಾಮಿಯವರ ಈ ಸಾಲನ್ನೇ ಹೇಳಬೇಕಾಗುತ್ತದೆ.

"ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ ..? ಎನ್ನರಸ ಸುಮ್ಮನಿರಿ ಅಂದಳಾಕೆ"

                                                                 -ಪ್ರಕಾಶ್ ಎನ್ ಜಿಂಗಾಡೆ

Sunday 11 September 2016

ನಮ್ಮೂರು (poem )

ನಮ್ಮೂರು

ದೆವ್ವ ಅಂತೆ ದೆವ್ವ (poem)

ದೆವ್ವ ಅಂತೆ ದೆವ್ವ

ಹೋಗ್ರಿರೀ...ದೆವ್ವ ಅಂತೆ ದೆವ್ವ..!!
ನಾನ್ ಬದುಕಿ ನಾಲ್ಕ್ ದಶಕ ಕಳೆದ್ರೂ
ಯಾವ್ ಅಬ್ಬೆಪಾರಿ ದೆವ್ವನೂ ಬಂದು
ನನ್ನ ಯೋಗಕ್ಷೇಮ ಕೇಳ್ಲಿಲ್ಲ,

ಸಾವಿರಕ್ಕೊಬ್ಬ ಸತ್ತವನು ದೆವ್ವ ಅನ್ಕೊಂಡಿದ್ರೂ
ಯಾವ್ ಮೋಹಿನಿನೂ ತನ್ ರೂಪ ತೋರ್ಸಿಲ್ಲ
ಯಾವ್ ಬೇತಾಳನೂ ನನ್ನ ಬೆನ್ನಟ್ಟಲಿಲ್ಲ
ಪ್ರೇತದ ಪ್ರೀತಿಯಂತೂ ಸಿಕ್ಕೇ ಇಲ್ಲ.

ಸ್ಮಶಾನ,ಪಾಳು ಬಂಗಲೆಯನ್ನೂ ಸುತ್ತಿದೆ
ಮರದ ಸಂದಿಗೊಂದಿಯಲಿ ಕಣ್ಣಾಡಿಸಿದೆ
ಬೀದಿಯಲಿ ಅಮವಾಸ್ಯೆ ರಾತ್ರಿ ಕಳೆದೆ
ಯಾವ ದೆವ್ವವೂ ಗೋಚರಿಸಲಿಲ್ಲ...

ನಾ ಕಂಡದ್ದು  ಹಗಲಿನ ದೆವ್ವಗಳು
ಬಿಳಿ ಟೋಪಿ ಖಾದಿ ದಿರಿಸಿನ ಬೇತಾಳಗಳು
ಅಧಿಕಾರದಾಸೆಗೆ ರಕ್ತ ಹೀರುವ ಪ್ರೇತಗಳು
ಹಣಕ್ಕೆ ಬಾಯ್ ತೆರೆದ ಸತ್ತ ಹೆಣಗಳು....

ಸುಳ್ಳು ಬರವಸೆಗಳ ಕ್ರೂರ ರೂಪ
ಇದ್ದದ್ದು ಸೌಧದಲಿ ಬಂಗಲೆಯಲಿ
ಈ ಭಯಾನಕ ಕ್ರೂರ ಪಿಶಾಚಿಗಳ ನಡುವೆ
ಮಾನವೀಯ ದೆವ್ವಗಳು ಎಲ್ಲಿ ಕಂಡಾವು..?

ಹೋಗ್ರಿರಿ ದೆವ್ವ ಅಂತೆ ದೆವ್ವ.......!!!!!

                    -ಪ್ರಕಾಶ್. ಎನ್. ಜಿಂಗಾಡೆ

ತಲೆಗಳು (poem)

ತಲೆಗಳು

ಇಂದು ಕ್ಷೌರದಂಗಡಿಗೆ ಹೋಗಿದ್ದೆ
ಅವದೇನು ಕಲೆ ಅದೆಂತಹ ಮಾತ್ರಿಕ ಸ್ಪರ್ಶ
ಕ್ಷೌರಿಕನ ತಾಳ ಲಯಬದ್ದವಾದ ಬಡಿತಕೆ
ಎಷ್ಟೋ ತಲೆಗಳು ಸೋತಿದ್ದವು
ಎಷ್ಟೋ ತಲೆಗಳು ನಿದ್ರೆಗೆ ಜಾರಿದ್ದವು
ಅದೆಷ್ಟೋ ತಲೆಗಳು ಅಮಲೇರಿದ್ದವು
ಸುಖದಿಂದಲೂ ಮುಳುಗಿ ಯಾವುದೋ
ಹೊಸದೊಂದು ಲೋಕಕ್ಕೆ ಜಾರುತ್ತಿದ್ದವು

ಕೆಲವರದು ಚಿಕ್ಕದಾದ ನಯವಾದ ತಲೆ
ಕೆಲವರದು ದೊಡ್ಡದಾದ ತಗಡು ತಲೆ
ಮತ್ತೆ ಕೆಲವರದು ಕೊಳಕಾದುದು,ಸ್ವಚ್ಛವಾದುದು
ಜಾಣತನದ್ದು, ಮೊಂಡುತನದ್ದು,
ಬುದ್ದಿಹೀನದ್ದು ಲಜ್ಜೆಗೆಟ್ಟದ್ದು
ವಿಧವಿದವಾದದ್ದು ವಿಭಿನ್ನ ವಾದದ್ದು
ಆದರೆ ಅದರೊಳಗಿನ ಯೋಚನಾ ಲಹರಿಯೋ ?
ಬ್ರಹ್ಮನೊಬ್ಬನೆ ಅರಿವನು.....

ನನಗೊಂದು ಆಶ್ಚರ್ಯ
ಬ್ರಹ್ಮ ಅದೆಂತಹ ಅದ್ಭುತ ಕುಂಬಾರನೋ
ಯಾವ ಕೈಗಳಿಂದ ನಿರ್ಮಿಸಿದನೋ
ಅದ್ಯಾವ ಮಂತ್ರಶಕ್ತಿಯನು ತುಂಬಿದನೋ
ಜೀವರಾಶಿಗಳಿಗೂ ಮಿಗಿಲಾಗಿ
ಇಂದ್ರಜಾಲ ಅದರೊಳಗೆ ತುಂಬಿಸಿ
ಕಲ್ಪನಾ ಯೋಚನಾ ಶಕ್ತಿಗಳನು ಬೆರೆಸಿ
ಧರೆಯೊಳಗೆ ತಂದು ಬಿಟ್ಟನು....

ಜೋಪಾನವಾಗಿಡುವುದರಲ್ಲಿ ನಾವು ಜಾಣರು
ಅಮ್ಮ ಕೊಟ್ಟ ಬಂಗಾರ ಕಾಪಾಡುತ್ತೇವೆ
ಅಪ್ಪ ಕೊಟ್ಟ ಆಸ್ತಿ ಕಾಯುತ್ತೇವೆ
ದೇವರು ಕೊಟ್ಟ ಈ ತಲೆಯನ್ನು ಕಾಪಾಡಿಕೊಳ್ಳದೇ
ಹೊಲಸಾಗಿಸಿ ಮಲಿನಗೊಳಿಸಿದ್ದೇವೆ
ದುರ್ವಿಚಾರಗಳನು ತುಂಬಿಕೊಂಡು
ಕಳಕು ಕೊಚ್ಚೆಯೆಡೆಗೆ ಸಾಗುತ್ತಿದ್ದೇವೆ
ಎಲ್ಲವೂ ಸ್ವಾರ್ಥಕ್ಕಾಗಿ .......

           ಪ್ರಕಾಶ್. ಎನ್. ಜಿಂಗಾಡೆ.

ಮುಗ್ಧರು (poem)

Lovely children.....poem

ಮುಗ್ಧರು

ಪಾಠಿ ಚೀಲ ಹೊತ್ತು
ಸಾಲಿಗೆ ಹೊರಟ ಮಕ್ಕಳು
ಬೆನ್ನ ಹಿಂದೆ ಹೊತ್ತಿದ್ದು ಹೊತ್ತಿಗೆಯಲ್ಲ
ಕನಸಿನ ಮೂಟೆಗಳು....

ವಾಹನಗಳ ಮದ್ಯೆ ಪರದಾಡಿ
ಅವಸರದಿ ಹೆಜ್ಜೆಹಾಕಿ
ಗಣಿತದ ನಡುವೆ ಕಂಗೆಟ್ಟು
ಎಲ್ಲೋ ಕಳೆದು ಹೋಗುವರು...

ವಾತ್ಸಲ್ಯ ತೋರದ ಹೆತ್ತವರು
ಅನ್ಯರ ಪ್ರೀತಿಯ ಬೇಡುವ ಮುಗ್ದರು
ಬಯಸಿದ್ದೆಲ್ಲಾ ಪಡೆವ ಶ್ರೀಮಂತರು
ಪ್ರೀತಿಯಲಿ ಕಡು ಬಡವರು...

ಹೆತ್ತವರ ಪ್ರತಿಷ್ಟೆಯ ಜಗಳಗಳು
ದೊಡ್ಡತನದ ಅಹಂಭಾವಗಳು
ಮುದ್ದು ಕಂದಮ್ಮಗಳ ಲೆಕ್ಕಸದೆ
ವಿಚ್ಛೇದನದ ತೀರ್ಮಾನಗಳು....

ಅರಳುವ ಹೂಗಳ ಚಿವುಟುವ
ಅಧಿಕಾರ ಕೊಟ್ಟವರಾರು...?
ಯಾರದೋ ತಪ್ಪಿಗೆ
ಇನ್ನಾರಿಗೋ ಶಿಕ್ಷೆ...

                            - ಪ್ರಕಾಶ್ ಎನ್ ಜಿಂಗಾಡೆ

ಇಷ್ಟವಿಲ್ಲ

ನೆಲ ಜಲ ಸಂಸ್ಕೃತಿಯನರಿಯದೆ
ಅನ್ಯ ಅಸಂಸ್ಕೃತಿಯ ಆಲಂಗಿಸಿ
ವಿಷ ವರ್ತುಲ ಬಯಸುವ ಜನರು
ನನಗಿಷ್ಟವಿಲ್ಲ...

ಅಭಿಮಾನವ ತೋರದೆ
ನನ್ನದೇ ಶ್ರೇಷ್ಠ ಧರ್ಮವೆನ್ನುತ್ತಾ
ಇತರ ಧರ್ಮವ ಜರಿಯುವವರ ಸಂಗ
ನನಗಿಷ್ಟವಿಲ್ಲ....

ಅತಿಯಾದ ಆಡಂಬರವ ತೋರಿ
ಮೊದಲ ಪಂಕ್ತಿಯವನಾಗಿ ನಿಂತು
ದುಃಖ ದುಗುಡನರಿಯದ ಅಗ್ರಜರು
ನನಗಿಷ್ಟವಿಲ್ಲ...

ಸಹಿಷ್ಣುಗಳಾಗಿರದ ದೇಶವಾಸಿಗಳು
ಯಾರದೋ ಸಿದ್ಧಂತಕ್ಕೆ ಬಲಿಯಾಗಿ
ತಮ್ಮತನವ ಮಾರಿಕೊಂಡವರು
ನನಗಿಷ್ಟವಿಲ್ಲ....

ಇತಿಹಾಸ ತಿರುಚಿ ಮಹಾನೀಯರಾದವರು
ಧರ್ಮ ಸಿದ್ಧಾಂತ ತಪ್ಪಾಗಿ ಅರ್ಥೈಸಿಕೊಂಡವರು
ಕಾಣದ ಮರೀಚಿಕೆಗಳನ್ನು ನಂಬುವರು
ಇವರಿಗೆ ನನ್ನಿಷ್ಟಗಳು ಹೇಗೆ ತಿಳಿದಾವು....?

        ಪ್ರಕಾಶ್ ಎನ್ ಜಿಂಗಾಡೆ

Saturday 10 September 2016

ಸಿಗದವಳು

ಸಿಗದವಳು

ಜಾನಪದದ ಹುಡುಗಿ
ನನ್ನ ಸುಂದರ ಬೆಡಗಿ
ದಾವಣಿಯ ಸೊಗಸಿನಲಿ
ಲಾವಣಿಯ ಕಥೆ ಹೇಳಿ
ಕಣ್ಣೋಟದಿ ಸನ್ನೆ ಮಾಡಿ
ನನ್ನಯ ಕರೆದಿಹಳು.....

ಕೋಲಾಟದ ಕುಣಿತದಿ
ಗೆಜ್ಜೆಯ ನಾದವ
ಎದೆಯಲಿ ತುಂಬಿ
ಸೀರೆಯ ಸೊಬಗಲಿ
ಲಜ್ಜೆಯ ತೋರಿ
ಎದೆಯಲಿ ತಕಧಿಮಿ ಬೆರೆಸಿಹಳು....

ಬರಸೆಳೆದು ಬಿಗಿದಪ್ಪಿದರೆ
ತತ್ವ ಪದದ ಲಾಸ್ಯವು
ಜಿನುಗುವುದು
ನುಣುಚುವಳು ನುಲಿಯುವಳು
ದೂರ ಸರಿದು
ಒಗಟಾಗಿ ನಿಂತಿಹಳು....

                    - ಪ್ರಕಾಶ್ ಎನ್ ಜಿಂಗಾಡೆ

ವ್ಯಾಕರಣ (poem)

ನನ್ನವಳೊಂದು ವ್ಯಾಕರಣ...

ಅವಳೂಂದು ಕಥೆ
ನಾ ಅದರ ಸಾಲಾಗಬೇಕು
ಅವಳ ಅಲಂಕಾರವೋ
ಚೆಂದದ ಉಪಮೆ ರೂಪಕಕ್ಕೆ ಮನಸೋತು
ನಾ ಅದರ ಪದವಾಗಲು ಹೊರಟು
ವಿಫಲನಾಗಿದೆ...

ಅವಳು ಚೆಂದದ ಛಂದಸ್ಸಾದಾಗ
ನಾ ಲಘು ಗುರು ಹಾಕಲು ಯತ್ನಿಸಿದೆ
ವೃತ್ತದ ಯಾವ ನಿಯಮಗಳು ಅನ್ವಯಿಸಲಿಲ್ಲ
ವ್ಯಾಕರಣಕ್ಕೆ ಸಿಗದ ಕಾವ್ಯವಾದಳು
ತಿದ್ದಿದೆ ಗೀಚಿದೆ ತಿಳಿಯದೆ
ಪೆದ್ದನಾಗಿ ಉಳಿದೆ...

ಅವಳು ತತ್ಸಮವಾದಗ
ತದ್ಭವ ಪದ ಹುಡುಕಿದೆ
ವಿರುದ್ಧ ಪದಗಳೇ ಸಿಕ್ಕವು
ಬರಿಯ ನಿಷೇದಾರ್ಥಕ ರೂಪಗಳು
ನನ್ನದೇ ಸಾಲಿನಲಿ
ಆವಳದೇ ಪೂರ್ಣವಿರಾಮ...

ಹಿರಿಯರು ಹೊಂದಿಸಿ ಬರೆದರು
ಸಮಾನಾರ್ಥಕ ಪದ ಹುಡುಕಿ ಕೊಟ್ಟರು
ಈಗವಳು ಪುಸ್ತಕ
ನಾನದರ ಪುಟಗಳು
ಪುಟಗಳು ತೆರೆಯುತ್ತಲಿವೆ
ಜೀವನ ಸಾಗುತ್ತಲಿದೆ....
         
                   -ಪ್ರಕಾಶ್.ಎನ್. ಜಿಂಗಾಡೆ

Sunday 4 September 2016

ಐಸ್ ಕ್ರೀಮ್

ಐಸ್ ಕ್ರೀಮ್ (small story )


ತೀರ್ಥಹಳ್ಳಿ... ಮಲೆನಾಡಿನ ಒಂದು ಸುಂದರ ತಾಣವದು. ಹೇಳಿಕೊಳ್ಳುವಂತಹ ದೊಡ್ಡ ನಗರವಲ್ಲದಿದ್ದರೂ. ಚಿಕ್ಕ ಹಳ್ಳಿಯಂತೂ ಆಗಿರಲಿಲ್ಲ. ಆ ನಗರದ ರಾಜಬೀದಿಗೆ ಹೊಂದಿಕೊಂಡಂತೆ ಜನಪ್ರಿಯವಾದ ಐಸ್ ಕ್ರೀಮ್ ಪಾರ್ಲರ್ ಇದೆ.  ಬಣ್ಣ ಬಣ್ಣದ ಚಿಟ್ಟೆಗಳು ಹೇಗೆ ಹೂವುಗಳನ್ನು ಮುತ್ತಿಕೊಂಡಿರುತ್ತವೆಯೋ ಹಾಗೆಯೇ ಹರೆಯಕ್ಕೆ ಕಾಲಿಟ್ಟ ಕಾಲೇಜು ಕನ್ಯೆಯರು ಆ ಐಸ್ ಕ್ರೀಮ್ ಪಾರ್ಲರನ್ನು ಮುತ್ತಿಕೊಂಡಿರುತ್ತಾರೆ. ಈ ಐಸ್ ಕ್ರೀಮ್ ಪಾರ್ಲನ ಹೊರಾಂಗಣದಲ್ಲಿ ಹಾಕಿರುವ ಟೇಬಲ್ ಮೇಲೆ ಕುಳಿತ ಹುಡುಗಿಯರು ಹರಟೆ ಹೊಡೆಯುತ್ತಾ ಬಣ್ಣ ಬಣ್ಣದ ರುಚಿ ರುಚಿಯಾದ ಐಸ್ ಕ್ರೀಮನ್ನು ಸವಿಯುತ್ತಾ ಹೊಟ್ಟೆ ತಂಪಾಗಿಸಿಕೊಳ್ಳುತ್ತಾರೆ.  ಹುಡುಗಿಯರ ಹೊಟ್ಟೆ ಐಸ್ ಕ್ರೀಮ್ ನಿಂದ ತಣ್ಣಾಗಾದರೆ ಹುಡುಗರಿಗೆ ಅವರನ್ನು ನೋಡಿಯೇ ಕಣ್ಣುಗಳು ತಂಪಾಗಿ ಬಿಡುತ್ತಿದ್ದವು. ಎಷ್ಟೋ ಹುಡುಗರು ಐಸ್ ಕ್ರೀಮ್ ತಿನ್ನುವ ಆಸೆಗಿಂತಲೂ ಹೆಚ್ಚಾಗಿ ಕಣ್ಣು ತಂಪು ಮಾಡಿಕೊಳುವ ಆಸೆಗಾಗಿ ಈ ಐಸ್ ಕ್ರೀಮ್ ಪಾರ್ಲರ್ ಗೆ ಬರುತ್ತಿದ್ದರು.

ಅಂದು ತಣ್ಣನೆಯ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಸೆಲ್ವಾರ್ ಕಮೀಜನ್ನು ತೊಟ್ಟ ಸುಂದರ ಹುಡುಗಿಯೊಬ್ಬಳು ಕುಳಿತ್ತಿದ್ದಳು. ತನ್ನ ಬಳುಕುವ ಸೊಂಟದ ಮೇಲೆ ತನ್ನ ಒಂದು ಕೈಯನ್ನು ಇಟ್ಟುಕೊಂಡು ಕುಳಿತ್ತಿದ್ದ ಆ ಪರಿ.... ಆ ಶೈಲಿ.....ಆಕರ್ಷಕವಾಗಿತ್ತು. ಮುಖದ ಮೇಲೆ ಬಿದ್ದ ಹೊಂಬೆಳಕು ಅವಳ ಸೌಂದರ್ಯಕ್ಕೆ ಇನ್ನಷ್ಟು ಮೆರಗು ನೀಡಿತ್ತು... ಅವಳ ಮೈ ಬಣ್ಣ ರೇಶಿಮೆಯಂತೆ ಹೊಳೆಯುತ್ತಿತ್ತು. ಚಂದಿರನನ್ನೂ ನಾಚಿಸುವಂತಹ ಅವಳ ರೂಪ. ಅವಳ ಮಂದಹಾಸದ ನಗು ಎಂತಹ ಹುಡುಗರನ್ನು ಸೆಳೆಯುವಂತೆ ಇತ್ತು. ಕಣ್ಣಿಗೆ ಕಾಡಿಗೆ ಹಚ್ಚಿದ್ದರಿಂದ ಕಣ್ಣುಗಳು ಚಿಟ್ಟೆಯಂತೆ ಕಾಣುತ್ತಿದ್ದವು. ಯಾರದೋ ನಿರೀಕ್ಷೆಯಲ್ಲಿದ್ದ ಅವಳ ಆ  ಕಣ್ಣುಗಳು ಐಸ್ ಕ್ರೀಮ್ ಪಾರ್ಲರ್ ನ ಒಳಭಾಗದ ಕಡೆಗೆ ನೆಟ್ಟಿದ್ದವು. . . ಅಷ್ಟರಲ್ಲಿ ಜೀನ್ಸ್ ಪ್ಯಾಂಟ್ ಮತ್ತು ಟೀ ಷರಟ್ ಹಾಕಿದ ಯುವಕನೊಬ್ಬ  ಐದಾರು ವಿಧದ ಬಣ್ಣದ ಐಸ್ ಕ್ರೀಮನ್ನು ಹಾಕಿದ್ದ  ಎರಡು ಉದ್ದನೆಯ ಗ್ಲಾಸ್ ನ್ನು ತಂದು ಅವಳ ಮುಂದೆ ಇಟ್ಟ. ಇಬ್ಬರೂ ಐಸ್ ಕ್ರೀಮನ್ನು ಸವಿಯಲಾರಂಭಿಸಿದರು...

"ಕೃತಿಕ... ಪ್ಲೀಸ್ ಏನಾದರು ಮಾತನಾಡು... ನಾಚಿಕೆ ಏಕೆ...?"
ಹುಡುಗ ಮೌನ ಮುರಿದ..
ಹಾಗೆಂದ ಕೂಡಲೇ ಕೃತಿಕ ಕಣ್ಣಿನ ವರೆಗೂ ಇಳಿಬಿದ್ದ ತನ್ನ ಮುಂಗುರಳನ್ನು ಸರಿ ಪಡಿಸಿಕೊಳ್ಳುತ್ತಾ ತನ್ನ ಎದುರಿಗಿದ್ದ ಹುಡುಗನನ್ನು ನೋಡಿದಳು. ಆಕೆಯ ಸುಂದರ ನೋಟಕ್ಕೆ ಆ ಯುವಕನ ಕಣ್ಣುಗಳೇ ಒಮ್ಮೆ ನಾಚಿಕೊಂಡವು..
"ಹೇಳಿ ರಂಜಿತ್ ನಾಚಿಕೆಯೇನೂ ಇಲ್ಲ... ನೀವು ಸುಮ್ಮನೆ ಇದ್ದಿರಲ್ಲ ಅಂತ ಮಾತನಾಡಲು ಹೋಗಲಿಲ್ಲ. ಹೇಳಿ ನಿಮ್ಮ ಬಿಸಿನೆಸ್ ಹೇಗಿದೆ.... ಬೆಂಗಳೂರಿನಲ್ಲಿ ನಿಮ್ಮದೇ ಹೋಟಲ್ ಇದೆ. ವಿವಿದ ರೀತಿಯ ಐಸ್ ಕ್ರೀಮ್ ತಯಾರಿಸುತ್ತೀರಿ.... ಹಾಗಿರುವಾಗ ನಮ್ಮ ಈ ಚಿಕ್ಕ ಊರಿನಲ್ಲಿ ಐಸ್ ಕ್ರೀಮ್ ತಿನ್ನಲು ನಿಮಗೆ ಬೇಸರವಾಗುವುದಿಲ್ಲವೇ....? ನಿಮಗೆ ನಿಜವಾಗಲೂ ಈ "ಗಡ್ ಬಡ್" ಐಸ್ ಕ್ರೀಮ್ ತುಂಬಾ ಇಷ್ಟನಾ...? ಅಥವಾ ನನಗೋಸ್ಕರ ತಿನ್ನುತ್ತಿರುವಿರಾ....? ನನಗೆ ಗೊತ್ತು ನೀವು ನನ್ನಿಷ್ಟದ ಎಲ್ಲಾ ತಿನಿಸುಗಳನ್ನು ಈಗಾಗಲೇ ತಿಳಿದುಕೊಂಡಿರುವಿರಿ... ನೀವು ನನ್ನನ್ನು ನೋಡಲು ಬಂದಾಗ ನನ್ನ ಇಷ್ಟದ ತಿನಿಸುಗಳ ಬಗ್ಗೆ ನಿಮ್ಮಮ್ಮ ಕೇಳಿದ್ದರು ..... ವಧು ಶಾಸ್ತ್ರದಲ್ಲಿ ನಾಚಿಕೊಳ್ಳಬಾರದು ವರನ ಕಡೆಯವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಧೈರ್ಯದಿಂದ ಉತ್ತರಿಸು ಅಂತ ಅಮ್ಮ ನನಗೆ ಹೇಳಿದ್ದರು.ನಾನು ಹೇಳಿದ ಕೆಲವು ತಿನಿಸುಗಳಲ್ಲಿ ಗಡ್ ಬಡ್ ಐಸ್ ಕ್ರೀಮ್ ಸಹ ಹೆಸರಿಸಿದ್ದೆ...  ಅದಕ್ಕೆ ಅಂತ ತೋರುತ್ತೆ ನೀವು ಪ್ರತಿ ಸಾರಿ ನನ್ನ ನೋಡಲು ತೀರ್ಥಹಳ್ಳಿಗೆ ಬಂದಾಗ ನೀವು ನನಗೆ ಐಸ್ ಕ್ರೀಮನ್ನು ತಿನ್ನಿಸುವುದು ತಪ್ಪಿಸುವುದಿಲ್ಲ......ನನಗೋಸ್ಕರ ನೀವೂ ಸಹ ತಿನ್ನುವಂತಹ ಪರಿಸ್ಥಿತಿ. ನಿಮಗೆ ಇಷ್ಟವಿಲ್ಲವೆಂದು ಕಾಣುತ್ತದೆ. ನನ್ನಿಂದಾಗಿ ಈ ಐಸ್ ಕ್ರೀಮ್ ತಿನ್ನುವ ಶಿಕ್ಷೆ ನಿಮಗೆ....ಅಲ್ಲವೇ..?"

"ಇಲ್ಲ ಹಾಗೇನಿಲ್ಲ ಈ ಗಡ್ ಬಡ್ ಐಸ್ ನಮ್ಮ ಜೀವನದ ದಿಕ್ಕನ್ನೇ ಬದಲಿಸಿತು. ಅದಕ್ಕಾಗಿಯೇ ಈ ಐಸ್ ಕ್ರಿಮ್ ಮೇಲೆ ನನಗೂ ಅಷ್ಟೇ ಪ್ರೀತಿ ಇದೆ... ಅದಕ್ಕಿಂತಲೂ ಮಿಗಿಲಾಗಿ ನಿಮ್ಮನ್ನ ನನ್ನ ಎದುರುಗಡೆನೇ ಕೂರಿಸಿಕೊಂಡು ನಿಮ್ಮ ಸೌಂದರ್ಯ ಸವಿಯಬಹುದಲ್ಲ ಎಂಬ ಆಸೆಯಿಂದ ಇಲ್ಲಿಗೆ ಕರೆದುಕೊಂಡು ಬಂದೆ. ಈ ತರಹದ ಲವರ್ ಗಳ ಸ್ಪಾಟ್ ನಿಮ್ಮ ಊರಿನಲ್ಲಿ ಬೇರೆ ಯಾವುದಿದೆ ಹೇಳಿ...?  ನಿನ್ನ ನೋಡುತ್ತಾ ಒಂದ್ ನಾಲ್ಕು ಮಾತನಾಡಿ ನಿನ್ನ ಜೊತೆ ಇಲ್ಲಿ ಕಾಲ ಕಳೆಯಬಹುದು ಎಂಬ ಆಸೆಯೂ ಇದೆ. ನೀನು ಐಸ್ ಕ್ರಿಮ್ ತಿಂದು ಹೊಟ್ಟೆ ತಂಪು ಮಾಡಿಕೊಂಡರೆ... ನಾನು ನಿನ್ನ ಈ ಅಪ್ಸರೆಯಂತಹ ಸೌಂದರ್ಯ ಸವಿದು ಕಣ್ಣು ತಂಪಾಗಿಸಿ ಕೊಳ್ಳುತ್ತೇನೆ.....ಈ ಅವಕಾಶ ಇಲ್ಲಿ ಬಿಟ್ಟು ಬೇರೆ ಯಾವ ಹೋಟಲ್ ನಲ್ಲಿ ಸಿಗುತ್ತೆ ಹೇಳಿ..?"
ರಂಜಿತ್ ಹಾಂಗೆಂದ ಕೂಡಲೇ ಕೃತಿಕ ನಾಚಿ ನೀರಾಗಿ  ಹೋದಳು. ಕಣ್ಣುಗಳು ರಂಜಿತನ ಮಾತಿಗೆ ಸೋತು ನೆಲವನ್ನು ನೋಡ ತೊಡಗಿದವು. ಎದೆಯಿಂದ ಸ್ವಲ್ಪ ಕೆಳಗೆ ಜಾರಿದ ದುಪ್ಪಟ್ಟವನ್ನು ಮತ್ತೆ  ಹೊದ್ದುಕೊಂಡು ನಾಚಿಕೆಯ ಆಭರಣವನ್ನು ಧರಿಸಿ ಕುಳಿತಳು. ಕೃತಿಕ ರಂಜಿತ್ ನನ್ನು ನೋಡುತ್ತಿರುವುದೇ ಇದು ಮೂರನೇ ಸಾರಿ. ಮೊದಲನೇ ಸಲ ವಧು ಶಾಸ್ತ್ರದಲ್ಲಿ. ನಂತರ ಮತ್ತೆ ಹತ್ತು ದಿನದ ನಂತರ ದೀಪಾವಳಿ ಹಬ್ಬಕ್ಕೆ ಬಂದಾಗ. ಈಗ ಮದುವೆಯ ಕಲ್ಯಾಣ ಮಂಟಪ ಗೊತ್ತು ಮಾಡಲು ಬಂದಾಗ. ಹೀಗೆ ಪ್ರತಿ ಸಾರಿ ಬಂದಾಗಲೂ ದೇವಸ್ಥಾನಕ್ಕೆ ಎಂದು ಅವಳ ಮನೆಯಲ್ಲಿ ಸುಳ್ಳು ಹೇಳಿ ಕೃತಿಕಾ ಳನ್ನು ಈ ಐಸ್ ಕ್ರೀಮ್ ಪಾರ್ಲರ್ಗೆ ಕರೆದುಕೊಂಡು ಬರುತ್ತಿದ್ದ. ಇಲ್ಲಿ ಅವಳನ್ನು ಚುಡಾಯಿಸಿ, ಸತಾಯಿಸಿ, ಅವಳನ್ನು ತನ್ನ ಹತ್ತಿರದ ವರೆಗೂ ಸೆಳೆದುಕೊಳ್ಳಲು ಏನೆನೋ ಪ್ರಯತ್ನ ಮಾಡುತ್ತಿದ್ದ. ಅವಳ ಸೌಂದರ್ಯವನ್ನು ಹೊಗಳುತ್ತಿದ್ದ. ಗಂಡನಾಗುವ ಹುಡುಗನ ಮುಂದೆ ಕುಳಿತುಕೊಳ್ಳಲು ಮೊದಲೇ ನಾಚಿಕೊಳ್ಳುತ್ತಿದ್ದ ಹುಡುಗಿಗೆ ತನ್ನ  ಸೌಂದರ್ಯ ಕುರಿತು ಹೊಗಳಿದರೆ ಪಾಪ ಅವಳಿಗೆ ಹೇಗಾಗುವುದು ಬೇಡ ಹೇಳಿ..!!! ಮೊದಲೇ ಹಳ್ಳಿ ಸಂಪ್ರದಾಯದ ಹುಡುಗಿ. ತನ್ನ ವಿವಾಹವಾಗ ಹೊರಟ ಹುಡುಗನೊಬ್ಬ ಹೀಗೆ ಯದ್ವ ತದ್ವ ಹೊಗಳಿದರೆ ಅವಳು ಸಹ ಐಸ್ ಕ್ರೀಮ್ ನಂತೆ ಕರಗಿ ಹೋಗುತ್ತಿದ್ದಳು....
ಸ್ವಲ್ಪ ಹೊತ್ತು ಮೌನ ಆವರಿಸಿತು....ಇಬ್ಬರೂ ತುಟಿ ಬಿಚ್ಚಲಿಲ್ಲ. ಅಷ್ಟರಲ್ಲಿ ಗಡ್ ಬಡ್ ಐಸ್ ಇದ್ದ ಗ್ಲಾಸ್ ಅರ್ಧ ಖಾಲಿಯಾಗಿತ್ತು.

"ಏನದು... ಗಡ್ ಬಡ್ ಐಸು ನಿಮ್ಮ ಜೀವನದ ದಿಕ್ಕು ಬದಲಿಸಿತು ಎಂದು ಹೇಳಿದಿರಿ...?  ಹೇಗೆ...? ನನಗೆ ಅರ್ಥವಾಗಲಿಲ್ಲ....

ಕೃತಿಕ ತನಗೆ ಆಗಿದ್ದ ನಾಚಿಕೆಯಿಂದ ಸುಧಾರಿಸಿಕೊಂಡು ಮೌನ ಮುರಿದು ಕೇಳಿದಳು..

ಆಗ ರಂಜಿತ್ ತನಗೂ ತಮ್ಮ ಮನೆತನಕ್ಕೂ ಇದ್ದ ಈ ಐಸ್ ಕ್ರೀಮಿನ ಸಂಬಂಧವನ್ನು ಎಳೆ ಎಳೆಯಾಗಿ ಬಿಚ್ಚಿ ಹೇಳತೊಡಗಿದ....

"ಅದು ಅರವತ್ತರ ದಶಕದ ಮಾತು...ಆಗ ನನ್ನ  ತಾತ ತೀರ್ಥಹಳ್ಳಿಯಲ್ಲೇ ಮದುವೆಯಾಗಿದ್ದು...ಹೊಸದಾಗಿ ಹುಡುಗಿ ನೋಡಲು ತೀರ್ಥ ಹಳ್ಳಿಗೆ ಬಂದಾಗ ನಮ್ಮ ತಾತ ಡಾ. ರಾಜ್ ರವರು ಕಣ್ತೆರೆದು ನೋಡು ಸಿನಿಮಾದಲ್ಲಿ ಹಾಕಿದ್ದ ರೀತಿಯಲ್ಲಿಯೇ ಮೂರು ಗುಂಡಿಯ ಕಾಟನ್ ಷರಟು ಮತ್ತು ಪಂಚೆಯನ್ನು ಹಾಕಿಕೊಂಡು ಹುಡುಗಿ ನೋಡಲು ಬಂದಿದ್ದರಂತೆ. ನಮ್ಮ ತಾತನ ಮನಸ್ಸಿನಲ್ಲಿ ಹುಡುಗಿ ಲೀಲಾವತಿಯಂತೆಯೇ ಸುಂದರವಾಗಿರಬೇಕು ಎಂದು ಕನಸು ಕಂಡಿದ್ದರಂತೆ. ಹತ್ತಾರು ಹುಡುಗಿ ನೋಡಿದ ನಂತರ ತಾತನಿಗೆ ಇಷ್ಟವಾದದ್ದು ಈ ತೀರ್ಥಹಳ್ಳಿಯ ಹುಡುಗಿ. ತಾತಾ ಕನ್ಯೆ ನೋಡುವ ಶಾಸ್ತ್ರ ಮುಗಿದ ಕೂಡಲೇ ಖುಷಿ ಖುಷಿಯಾಗಿ ಬೆಂಗಳೂರಿಗೆ ವಾಪಸ್ಸಾದರಂತೆ...
ತಾತನದು ಮಲ್ಲೇಶ್ವರಂ ನ 8ನೇ ಕ್ರಾಸ್ ನಲ್ಲಿ ಚಿಕ್ಕ ಹೋಟಲ್ ಇತ್ತು. ಆಗ ಹೋಟಲ್ ನಲ್ಲಿ ಈಗಿರುವಂತೆ ಹೆಚ್ಚು ಜನ ಬರುತ್ತಿರಲಿಲ್ಲ. ಪರ ಊರಿನಿಂದ ಬಂದವರು ಮಾತ್ರ ಊಟಕ್ಕಾಗಿ ಹೋಟಲ್ಗೆ ಬರುತ್ತಿದ್ದರು. ಆಗ ದೋಸೆ. ಚಪಾತಿ , ಅನ್ನ ಸಾಂಬಾರ್ ಟೀ ಕಾಫಿಯ ಮತ್ತು ಐಸ್ ಕ್ರೀಮ್ ಮಾತ್ರ ಹೋಟಲ್ ನಲ್ಲಿ ಸಿಗುತ್ತಿತ್ತು. ತೀರ್ಥಹಳ್ಳಿಯ ಹುಡುಗಿ ಚಿತ್ರನಟಿ ಲೀಲಾವತಿಯಂತೆ ದುಂಡುಮುಖ ಹೊಂದಿದ್ದಳು. ಅಂದು ತಾತ ಲೀಲಾವತಿ ನಟಿಸಿದ್ದ  ಕಣ್ತೆರೆದು ನೋಡು ಚಿತ್ರದ ಗ್ರಾಮ ಫೋನ್ ಪ್ಲೇಟನ್ನು  ಖರೀದಿಸಿ ಗ್ರಾಮ್ ಫೋನ್ ನಲ್ಲಿ ಹಾಕಿಕೊಂಡು ಕೇಳಿದ್ದೇ ಕೇಳಿದ್ದು.... ಹಾಡಿನ ಜೊತೆ ಜೊತೆಗೆ ತಾತ ಅಂದು ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಕನಸನ್ನು ಕಟ್ಟಿ ಕೊಂಡಿದ್ದರು.

ತಾತ ಮತ್ತೊಮ್ಮೆ ತೀರ್ಥಹಳ್ಳಿಗೆ ಹೋದಾಗ ಹುಡುಗಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಇದೇ ಹೋಟಲ್ಗೆ ಕರೆದುಕೊಂಡು ಬಂದರಂತೆ. ಆಗ ಇದು ಸಾಮಾನ್ಯ ಹೋಟಲ್ ಆಗಿತ್ತು. ಈಗಿನಂತೆ ಐಸ್ ಕ್ರೀಮ್ ಪಾರ್ಲರ್ ಆಗಿರಲಿಲ್ಲ.  ಆಗ ಹುಡುಗಿಯರು ಹೋಟಲ್ ಕಡೆ ಸುಳಿಯುವುದು ತುಂಬಾ ಅಪರೂಪ. ಆಗ ಹದಿನೆಂಟರ ಯೌವ್ವನ ಹೊಂದಿದ್ದ ನಮ್ಮಜ್ಜಿ ನಾಚಿಕೊಳ್ಳುತ್ತಲೇ ಹೋಟಲ್ ಗೆ ಬಂದಳಂತೆ. ತಾತ ತನ್ನ ಮನ ಮೆಚ್ಚಿದ ಹುಡುಗಿಗಾಗಿ ಐಸ್ ಕ್ರೀಮನ್ನು ಆರ್ಡರ್ ಮಾಡಿದರು.... ಆರ್ಡರ್ ತೆಗೆದುಕೊಂಡ ಹೋಟಲ್ ಮಾಲೀಕ ಒಳಗೆ ಹೋಗಿ ನೋಡಿದರೆ ಐಸ್ ಕ್ರೀಮ್ ಖಾಲಿಯಾಗಿತ್ತು. ಹೋಟಲ್ ಮಾಲೀಕನಿಗೆ ಅಪರೂಪಕ್ಕೆ ಬಂದ ನವ ಜೋಡಿಗಳನ್ನು ಇಲ್ಲ ಎಂದು ಹೇಳಿ ಕಳುಹಿಸಲು ಮನಸ್ಸಾಗಲಿಲ್ಲ.  ತಳದಲ್ಲಿ ಉಳಿದ ಎಲ್ಲಾ ಬಗೆಯ ಅಲ್ಪ ಸ್ವಲ್ಪ ಐಸ್ ಕ್ರೀಮನ್ನು ಎರಡು ಗ್ಲಾಸ್ ಗಳಿಗೆ ಹಾಕುತ್ತಾ ಬಂದರಂತೆ. ಅದೂ ಸಾಲದಾದಾಗ ಹೇಗಾದರೂ ಮಾಡಿ ಗ್ಲಾಸ್ ತುಂಬಿಸಬೇಕೆಂಬ ಅವಸರದಲ್ಲಿ ಕತ್ತರಿಸಿದ ಹಣ್ಣಿನ ಹೋಳು ಮೇಲೆ ಸ್ವಲ್ಪ ಗೋಡಂಬಿ ದ್ರಾಕ್ಷಿಗಳನ್ನು ಹಾಕಿ ಐಸ್ ಕ್ರೀಮಿನ ಕಪ್ಪನ್ನು ಹೇಗೋ ತುಂಬಿಸಿದ ಹೋಟಲ್ ಮಾಲೀಕ ನವ ಜೋಡಿಗಳಿಗೆ ಕೊಟ್ಟನಂತೆ. ಅಂದು ಮೂರ್ನಾಲ್ಕು ವಿಧದ ಐಸ್ಕ್ರೀಮನ್ನು ಸವಿದ ನವ ಜೋಡಿಗಳು ಬಾಯಿ ಚಪ್ಪರಿಸಿ ಸವಿದರಂತೆ....

ಅದಾದ ಹದಿನೈದು ದಿನಗಳ ನಂತರ ತಾತಾನ ಮದುವೆಯಿತ್ತು. ಬೆಂಗಳೂರಿನಿಂದ ತುಂಬಿದ ಲಾರಿ ಮದುವೆಗೆಂದು ಬಂದಿತ್ತು. ಆಗೆಲ್ಲಾ ಬಸ್ಸಿನ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಮದುವೆ, ದಿಬ್ಬಣದಂತಹ  ಸಮಾರಂಭಕ್ಕೆ ಹೋಗಲು ಜನ ಲಾರಿಯಲ್ಲೇ ಬರುತ್ತಿದ್ದರಂತೆ. ತೀರ್ಥಹಳ್ಳಿ ಸಮೀಪವಾದ ಕೂಡಲೇ ತಾತನಿಗೆ ಮತ್ತೆ ಆ ಹೊಸ ತರಹದ ಐಸ್ ಕ್ರೀಮನ್ನು ಸವಿಯುವ ಆಸೆಯಾಯಿತಂತೆ. ಹೋಟಲ್ ಮುಂದೆ ಲಾರಿಯನ್ನು ನಿಲ್ಲಿಸಿ ಎಲ್ಲರಿಗೂ ಐಸ್ ಕ್ರೀಮ್ ಆರ್ಡರ್ ಮಾಡಿದರಂತೆ. ಹೋಟಲ್ ಮಾಲೀಕನೊಂದಿಗೆ ತಾನೆ ಖುದ್ದು ಮಾತನಾಡಿ ಅಂದು ಹುಡುಗಿಯೊಂದಿಗೆ ಬಂದಾಗ ನೀಡಿದ ವಿಶೇಷ ಐಸ್ ಕ್ರೀಮನ್ನೇ ನೀಡಲು ಹೇಳಿದರಂತೆ. ಹಾಗೆಯೇ ಆ ಹೋಟಲ್ ಮಾಲೀಕನಿಗೆ ಆ ಐಸ್ ಕ್ರೀಮಿನ ಹೆಸರು ಕೇಳಿದರಂತೆ. ಹೋಟಲ್ ಮಾಲಿಕನಿಗೆ ತಕ್ಷಣ ಅದರ ಹೆಸರೇನು ಹೇಳಬೇಕೆಂದು ಹೊಳೆಯಲೇ ಇಲ್ಲ. ಅವಸರದಲ್ಲಿ ಗಡಿಬಿಡಿಯಿಂದ ಮಾಡಿದ ಆ ಐಸ್ ಕ್ರೀಮನ್ನು ಇಂದು ಒಂದು ಲಾರಿಯಷ್ಟು ಜನಕ್ಕೆ ಮಾಡಿಕೊಂಡುವ ಅವಕಾಶ ಬರುತ್ತದೆಯೆಂದು ಆ ಹೋಟಲ್ ಮಾಲೀಕ ಕನಸಿನಲ್ಲಿಯೂ ನೆನಸಿರಲಿಲ್ಲ. ಗಡಿಬಿಡಿಯಲ್ಲಿ ತಯಾರಿಸಿದ ಆ ಐಸ್ ಕ್ರೀಮ್ ಗೆ  "ಗಡ್ ಬಡ್" ಎಂದು ಏನೋ ಹೆಸರು ಹೇಳಿದನಂತೆ...

ಅಂದು ಹುಟ್ಟಿದ ಈ ಗಡ್ ಬಡ್ ಐಸ್ ಕ್ರೀಮಿನ ಜನಪ್ರಿಯತೆ ಇಂದಿಗೂ ಮುಂದುವರೆದಿದೆ. ನಿಮ್ಮ ತೀರ್ಥಹಳ್ಳಿ ಅಂದಿನ ಆ ಹೋಟಲ್ ಇಂದು ಬರಿ ಐಸ್ ಕ್ರೀಮ್ ಪಾರ್ಲರ್ ಆಗಿ ಜನಪ್ರಿಯತೆ ಗಳಿಸಿದೆ. 1961 ರಲ್ಲಿ ನಡೆದ ಈ ಘಟನೆ ಹೋಟಲ್ನ ದಿಕ್ಕು ದೆಸೆಯನ್ನೇ ಬದಲಾಯಿಸಿತು. ಇಂದು ಗಡ್ ಬಡ್ ಎಂಬ ಐಸ್ ಕ್ರೀಮ್ ಏನಾದರೂ ಜನ ದೇಶದಾದ್ಯಂತ ತಿನ್ನುತ್ತಿದ್ದಾರೆಂದರೆ ಅದು ನಮ್ಮ ಕರ್ನಾಟಕದ ತೀರ್ಥಹಳ್ಳಿಯೇ ಕಾರಣ. ಮೊದಲು ಗಡ್ ಬಡ್ ತಿಂದ ಕೀರ್ತಿ ನಮ್ಮ ತಾತನಿಗೆ ಸಲ್ಲುತ್ತದೆ. ಅಂದು ಪರಿಚಿತವಾದ ಆ ಗಡ್ ಬಡ್ ಐಸನ್ನು ನಮ್ಮ ತಾತಾ ಬೆಂಗಳೂರಿನಲ್ಲಿಯೂ ಪ್ರಾರಂಭಿಸಿದರಂತೆ. ಇಂದು ಈ ಐಸ್ ಕ್ರೀಮ್ ನ ಪ್ರಭಾವದಿಂದಾಗಿಯೇ ನಾವೂ ಸಹ ಶ್ರೀಮಂತರಾಗಿದ್ದೇವೆ. ಈ ಘಟನೆಯಿಂದಾಗಿ ತೀರ್ಥಹಳ್ಳಿಯಲ್ಲಿರುವ ಈ ಹೋಟಲ್ ನ ಅದೃಷ್ಟ ಮಾತ್ರ ಬದಲಾಗಲಿಲ್ಲ. ನಮ್ಮ ಜೀವನದ ದಿಕ್ಕನ್ನು ಸಹ ಬದಲಾಯಿಸಿತು. ಅದಕ್ಕೆನೇ ನಿನಗೆ ಇದೇ ಹೋಟಲ್ ಗೆ ಕರೆದುಕೊಂಡು ಬಂದಿದ್ದು. ನಮ್ಮ ತಾತನೂ ಸಹ ನಿನ್ನ  ಹುಡುಗಿಯನ್ನು ಇದೇ ಐಸ್ ಕ್ರಿಮ್ ಪಾರ್ಲರ್ ಗೆ ಕರೆದುಕೊಂಡು ಹೋಗುವಂತೆ ಎರೆಡೆರಡು ಸಲ ತಾಕೀತು ಮಾಡಿ ಹೇಳಿದ್ದಾರೆ.... ಎಷ್ಟೇ ಆದರೂ ತಾತನ ಆಜ್ಞೆ ಪಾಲಿಸಬೇಕಲ್ಲವೆ...!!!"

ರಂಜಿತ್ ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ಕೃತಿಕ ತನ್ನ ಗ್ಲಾಸ್ ನಲ್ಲಿದ್ದ ಐಸ್ ಕ್ರೀಮನ್ನು ತಿಂದು ಮುಗಿಸಿದ್ದಳು.
ತಾನು ಮದುವೆಯಾಗುವ ಹುಡುಗನ ಮುಂದೆ ಕುಳಿತ್ತಿದ್ದ ಕೃತಿಕ ಸ್ವಲ್ಪ ನಾಚಿಕೊಂಡೇ ಇದ್ದಳು. ನಾಚಿಕೆಯ ಮೈ ಮರೆಯುವಿಕೆಯಲ್ಲಿದ್ದ ಕೃತಿಕ ತನ್ನ ತುಟಿಯಂಚಿನಲ್ಲಿ ಮೆತ್ತಿಕೊಂಡಿದ್ದ ಸ್ವಲ್ಪ ಐಸ್ ಕ್ರೀಮ್ ನ್ನು ಒರೆಸಿಕೊಳ್ಳುವುದನ್ನೇ ಮರೆತಳು. ಕೃತಿಕಳ ತುಟಿಯ ಅಂಚಿನಲ್ಲಿ ಮೆತ್ತಿಕೊಂಡಿದ್ದ ಆ ಐಸ್ ಕ್ರಿಮನ್ನು ರಂಜಿತ್ ತನ್ನ ಕೈ ಬೆರಳಿನಿಂದ ಒರೆಸಿದ. ಐಸ್ ಕ್ರೀಮ್ ಒರೆಸುವ ನೆಪದಲ್ಲಿ ಕೃತಿಕಳ ಜೇನಿನ ಅಧರಗಳನ್ನು ಸಂಪೂರ್ಣವಾಗಿ ಸವರಿದನು. ಎರಡು ಬೆರಳುಗಳಿಂದ ಕೆಳ ತುಟಿಗಳನ್ನು ಪ್ರೀತಿಯಿಂದ ಹಿಡಿದುಕೊಂಡನು. ಕೃತಿಕಳಿಗೆ ಆ ಮೊದಲ ಸ್ಪರ್ಶದಿಂದ ಮೈ ಯಲ್ಲೆಲ್ಲಾ ವಿದ್ಯುತ್ ಸಂತರಿಸಿದಂತಾಯಿತು. ಕಣ್ಣುಗಳು ನಾಚುತ್ತಾ ಹಾಗೇ ಮುಚ್ಚಿಕೊಂಡವು. ಕೆನ್ನೆಗಳು ಗಲಾಬಿ ಹೂವಿನಂತೆ ಕೆಂಪು ರಂಗನ್ನು ಪಡೆದವು.  ಕಣ್ಣು ಮುಚ್ಚಿದ್ದ ಆ ಕತ್ತಲೆಯ ಪ್ರಪಂಚದಲ್ಲಿ ಕೃತಿಕ ಏನೆನೋ ಕನಸು ಕಂಡಳು.....
ಅಂದು ಸಂಜೆ ರಂಜಿತ್ ಹೊರಡಲು ಸಿದ್ಧನಾದ. ಕೃತಿಕಳ ತಾಯಿ ಭಾವಿ ಅಳಿಯನಿಗೆ ಸಿಹಿ ತಿನಿಸಿನ ಪೊಟ್ಟಣವನ್ನು ಕೊಟ್ಟಳು. ಕೃತಿಕ ತನ್ನ ಭಾವಿ ಪತಿಯನ್ನು ಬೀಳ್ಕೊಡಲು ಮನೆಯ ಹೊರಗೆ ನಿಂತಿದ್ದ ಕಾರಿನವರೆಗೂ ಬಂದಳು. ಕೃತಿಕಳ ತಾಯಿ ಮರೆಯಾಗಿದ್ದನ್ನು ಗಮನಿಸಿದ ರಂಜಿತ್ ಕೃತಿಕಳ ಕೈಯನ್ನು ಹಿಡಿದೆಳೆದು ತನ್ನ ಹತ್ತಿರಕ್ಕೆ ಸೆಳೆದುಕೊಂಡನು.  ಅವಳ ಕಿವಿಯ ಹತ್ತಿರಕ್ಕೆ  ಹೋಗಿ

"ಮುಂದಿನ ಸಾರಿ ಅದೇ ಹೋಟಲ್ಗೆ ಐಸ್ ಕ್ರೀಮ್ ತಿನ್ನಲು ಹೋಗೋಣ.... ಮತ್ತೆ ತುಟಿಯ ಅಂಚಿನಲ್ಲಿ ಐಸ್ ಕ್ರೀಮ್ ಉಳಿಸುವುದನ್ನು ಮರೆಯಬೇಡ"

ಎಂದು ಮೆಲ್ಲಗೆ ಉಸುರಿದನು...

ಮುಖದ ತೀರ ಸಮೀಪದ ವರೆಗೂ ಆವರಿಸಿದ ರಂಜಿತ್ ನ ಆ ಬಿಸಿ ಉಸಿರಿಗೆ ಕೃತಿಕ ಸಂಪೂರ್ಣವಾಗಿ ಐಸ್ ಕ್ರೀಮ್ ನಂತೆ ಕರಗಿ ನಾಚಿ ನೀರಾಗಿ ಹೋದಳು.....
                     ಪ್ರಕಾಶ್ ಎನ್ ಜಿಂಗಾಡೆ...