Friday 8 September 2017

ಅಂತ... ಆತಂಕ (ಭಾಗ-4)

ಅಂತ... ಆತಂಕ (ಭಾಗ-4)

ಕಾರಿನಿಂದ ಇಳಿದ ಕೂಡಲೇ ತನಿಷ್ಕ, ರೋಹನ್ ಮತ್ತು ತಂದೆ ತಾಯಿಯರೊಂದಿಗೆ ಅಲ್ಲೇ ಇರುವ ಚಿಕ್ಕ ಬೆಟ್ಟದಂತಿರುವ ದಿಬ್ಬವನ್ನು ಏರಿದರು. ತಾಯಿ ಸರೋಜಮ್ಮ ಮಾತ್ರ ಬಹಳ ಪ್ರಯಾಸದಿಂದಲೇ ದಿಣ್ಣೆಯನ್ನು ಏರಿದಳು. ಇನ್ನೇನು ಸರೋಜಮ್ಮ ಪೂರ್ತಿ ದಿಣ್ಣೆ ಏರಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇತ್ತು. ಒಂದು ಕಾಲು ದಿಣ್ಣೆಯ ತುದಿಯಲ್ಲಿತ್ತು ಇನ್ನೇನು ಅದನ್ನು ಮೇಲಿಟ್ಟಿದ್ದರೆ ದಿಣ್ಣೆಯ ತುದಿಯನ್ನು ಮುಟ್ಟಿ ಮತ್ತೊಂದು ಪಾರ್ಶ್ವಕ್ಕೆ ಹೊರಳಿ ಆ ದುಷ್ಟರಿಂದ ಕಣ್ಮರೆಯಾಗ ಬೇಕು  ಎನ್ನುವಷ್ಟರಲ್ಲಿ, ಕಾರಿನಿಂದ ಇಳಿದ ದುಷ್ಟರು ಬಂದೂಕಿನಿಂದ ಗುಂಡನ್ನು ಹಾರಿಸಲಾರಂಬಿಸಿದರು. ಒಂದು ಗುಂಡು ಸರೋಜಮ್ಮನ ಕಾಲಿಗೆ ತಗುಲಿಯೇ ಬಿಟ್ಟಿತು. ಮೊದಲೇ ಆಯಾಸವಾಗಿದ್ದ ಸರೋಜಮ್ಮಳಿಗೆ ಗುಂಡಿನ ಏಟು ತಗುಲಿದ್ದು ಸಹಿಸಲಾಗಲಿಲ್ಲ. ಮಗಳು ತನಿಷ್ಕ ಅಮ್ಮನನ್ನು ಮೇಲೆಳೆದುಕೊಂಡು ರಕ್ಷಿಸಿದಳು...

ಅವರ ಬೆನ್ನು ಬಿದ್ದ ದುಷ್ಟರು ಸುಮ್ಮನೇ ಇರಲಿಲ್ಲ. ಅವರನ್ನು ಹಿಡಿಯಲು ಆ ಚಿಕ್ಕ ಬೆಟ್ಟವನ್ನು ಏರಲಾರಂಬಿಸಿದರು. ಇನ್ನೇನು ಆ ದಿಣ್ಣೆ ಏರಿದರೆ ಸಾಕು ಸಿಕ್ಕೇ ಸಿಗುವರು ಎಂಬ ಆತುರತೆ ಆ ದುಷ್ಟ ನಾಯಕನ ಮುಖದಲ್ಲಿ ಕಾಣುತ್ತಿತ್ತು. ಇನ್ನೇನು ಸಿಕ್ಕೇ ಬಿಟ್ಟರು ಎನ್ನುವಂತೆ ಆ ದುಷ್ಟರ ನಾಯಕ ಸಂತೋಷದಿಂದ ಚೀರಲಾರಂಭಿಸಿದ. ಆ ಆರು ಜನ ದುಷ್ಟರು ಬೇಗ ಬೇಗನೇ ಬೆಟ್ಟವನ್ನೇರಲಾರಂಬಿಸಿದರು. ಎಲ್ಲರೂ ಅವಸರವಸರವಾಗಿ ಬೆಟ್ಟ ಏರಿದರು. ಬೆಟ್ಟವನ್ನೇರಿ ನೋಡಿದರು. ಆದರೆ ಅವರ ಸುಳಿಯೂ ಎಲ್ಲಿಯೂ ಕಾಣಿಸಲಿಲ್ಲ.

"ಅರೆ ಈಗ ತಾನೆ ದಿಣ್ಣೆಯನ್ನೇರಿದವರು ಎಲ್ಲಿ ಮಾಯವಾದರೂ....!!"

ಎಲ್ಲರ ಮುಖದಲ್ಲಿ ಆಶ್ಚರ್ಯದ ಭಾವ ಕಾಣಲಾರಂಬಿಸಿತು. ಜಿಂಕೆಯನ್ನು ಹಿಡಿಯುವ ಹಸಿದ ಹುಲಿಯಂತೆ ಸುತ್ತಲೂ ತಡಕಾಡಿದರೂ ಆದರೂ ಅವರಿರುವ ಸುಳಿವು ಎಲ್ಲಿಯೂ ಕಾಣಲಿಲ್ಲ. ಬೆಟ್ಟ ಏರಿದ ಕೂಡಲೇ ಎಲ್ಲಾ ಕಡೆಯೂ ಬಯಲು ಪ್ರದೇಶವೇ ಇತ್ತು.  ಜೊತೆಗೆ ವಾಹನಗಳು ಚಲಿಸುವ ಮಣ್ಣಿನ ರಸ್ತೆಯೊಂದಿತ್ತು. ಆ ದುಷ್ಟರಲ್ಲಿ ಒಬ್ಬ ಪಂಟನು ಮಣ್ಣಿನ ರಸ್ತೆಯಲ್ಲಿ ಸ್ವಲ್ಪ ದೂರ ಹೋಗಿ ಮುಂದೆ ಬಲಕ್ಕೆ ತಿರುಗಿಕೊಳ್ಳುವ ರಸ್ತೆಯ ತಿರುವಿನ ವರೆಗೂ ಹೋಗಿ ಅವರನ್ನು ಹುಡುಕಿದನು. ಆದರೆ ಅಲ್ಲಿಯೂ ಅವರ ಸುಳಿವು ಕಾಣಲಿಲ್ಲ. ..

"ಅಣ್ಣ ಅವರು ಮುಂದಕ್ಕೆ ಹೋಗಿರಲು ಸಾಧ್ಯವೇ ಇಲ್ಲ. ಇಲ್ಲೇ ಎಲ್ಲಾದರೂ ಅವಿತುಕೊಂಡಿರಬೇಕು. ಇರುವ ಐದ್ಹತ್ತು ನಿಮಿಷದ ಸಮಯದಲ್ಲಿ ಅವರು ಬಹಳ ದೂರದ ವರೆಗೂ ಹೋಗಲು ಸಹ ಸಾಧ್ಯವೇ ಇಲ್ಲ. ಅಣ್ಣ.., ಅಲ್ಲಿ ಕಾಣುವ ಕಲ್ಲಿನ ಗೋಡೆಯಿರುವ ಪಾಳು ಮನೆಯಲ್ಲಿ ಹೋಗಿರಬೇಕು. ನಿಜವಾಗಿಯೂ ಅಲ್ಲಿ ಅವರು ಸಿಕ್ಕೇ ಸಿಗುತ್ತಾರೆ "

ಆ ಪಂಟನು ಹಾಗೆ ಹೇಳಿದ ಕೂಡಲೇ ಎಲ್ಲರೂ ಬಂದೂಕನ್ನು ಹಿಡಿದು ಆ ಪಾಳು ಮನೆಯತ್ತ ಧಾವಿಸಿದರು. ಹೊಂಚು ಹಾಕಿ ಕುಳಿತ ಮೃಗಗಳಂತೆ ನಿಧಾನವಾಗಿ ಹೆಜ್ಜೆ ಇಡಲಾರಂಬಿಸಿದರು. ಬಂದೂಕನ್ನು ಗುಂಡು ಹಾರಿಸಲು ಸಿದ್ಧವಾಗಿರಿಸಿಕೊಂಡು ಕಲ್ಲಿನ ಗೊಡೆಯ ಅಂಚಿನಲ್ಲಿ ನಿಧಾನವಾಗಿ ಹೆಜ್ಜೆ ಇಡಿಸಿ ಒಳ ಹೋಗಲು ಇಣುಕಿ ನೋಡಿದರು. ಆದರೆ ಒಳಗೆ ಯಾರೂ ಕಾಣಿಸಲಿಲ್ಲ. ಆ ದುಷ್ಟ ನಾಯಕನ ನಿರೀಕ್ಷೆ ಸುಳ್ಳಾಗಿದ್ದರಿಂದ ಆತ ಕಾಲನ್ನು ಜೋರಾಗಿ ನೆಲಕ್ಕೆ ಬಡಿದು ತನ್ನ ಕೋಪವನ್ನು ಪ್ರದರ್ಶಿಸಿದನು....

"ಅಣ್ಣ ಬಹುಷಃ ಅವರು ಇಲ್ಲೇ ಎಲ್ಲೋ ಬಚ್ಚಿಟ್ಟು ಕೊಂಡಿದ್ದಾರೆ. ಅಗೋ ಅಲ್ಲಿ ರಸ್ತೆ ರಿಪೇರಿಗೆ ಅಂತ ಹಾಕಿರೋ ಜಲ್ಲಿ ಕಲ್ಲಿನ ಹಿಂಬಾಗದಲ್ಲಿ ಅವಿತುಕೊಂಡಿರ ಬಹುದು.."

ಇನ್ನೊಬ್ಬ ಪಂಟ ಹಾಗೆ ಹೇಳಿದ ಕೂಡಲೇ ಎಲ್ಲರೂ ಆ ಜಲ್ಲಿ ಕಲ್ಲಿನ ಕಡೆಗೆ ಧಾವಿಸಿದರು. ಅಲ್ಲಿಯೂ ಅವರು ಕಾಣಲಿಲ್ಲ. ದುಷ್ಟರ ಆ ನಾಯಕನು ಕೋಪದಿಂದ ಅಬ್ಬರಿಸಿದನು...

"ನನ್ನ ತಮ್ಮನ ಜೀವ ತೆಗೆದ ಅವರನ್ನು ನಾನು ಸುಮ್ಮನೇ ಬಿಡುವುದಿಲ್ಲ. ಅವರು ಯಾವ ಪಾತಾಳದಲ್ಲೇ ಅಡಗಿಕೊಂಡಿರಲಿ ನೆಲವನ್ನು ಬಗಿದರೂ ಪರವಾಯಿಲ್ಲ. ಅವರನ್ನು ಸಾಯಿಸದೇ ಇರುವುದಿಲ್ಲ..."

ಹಾಗೆ ಹೇಳುವಾಗ ಆ ದುಷ್ಟನ ಕಣ್ಣಲ್ಲಿ ಕೋಪದ ಜ್ವಾಲೆ ರಕ್ತದಂತೆ ಕೆಂಪಾಗಿತ್ತು. ಮತ್ತೆ ಆತ ಸುತ್ತಲೂ ನೋಡಿದನು. ಅವರು ಎಲ್ಲಿಯೂ ಕಾಣಲಿಲ್ಲ. ಸುತ್ತಲೂ ಬರಿ ಬಯಲು. ಮನೆಗಳೇ ಇಲ್ಲದ ಆ ನಿರ್ಜನ ಪ್ರದೇಶದಲ್ಲಿ ಅವರು ಎಲ್ಲಿ ಹೋಗಲು ಸಾಧ್ಯ ಎಂದು ಎಲ್ಲರೂ ತಲೆ ಕೆರೆದುಕೊಂಡು ಯೋಚಿಸಿದರು. ಆದರೂ ಸಹ ಅವರು ಇರುವಿಕೆಯ ಸುಳಿವು ಎಲ್ಲಿಯೂ ಕಾಣಲಿಲ್ಲ. ಅಷ್ಟರಲ್ಲಿ ಮತ್ತೊಬ್ಬ ಪಂಟನು..

"ಅಣ್ಣ ಬರಿ ಐದೇ ನಿಮಿಷದ ಅಂತರದಲ್ಲಿ ಇವರು ಹೀಗೆ ನಮ್ಮಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ. ಒಂದು ವೇಳೆ ಇಲ್ಲೇ ಅವಿತುಕೊಂಡಿದ್ದರೆ ಇಷ್ಟರೊಳಗೆ ನಮ್ಮ ಕಣ್ಣಿಗೆ ಬೀಳಲೇ ಬೇಕಿತ್ತು.... ಅಣ್ಣ ನನಗೊಂದು ಅನುಮಾನ. ಇವರು ಈ ದಿಬ್ಬವನ್ನು ಏರಿದ ಕೂಡಲೇ ಯಾವುದೋ ಒಂದು ವಾಹನ ಬಂದಿರಬಹುದು. ಇವರು ಆ ವಾಹನದಲ್ಲಿ ಲಿಫ್ಟ್ ತೆಗೆದುಕೊಂಡು ಮುಂದೆ ಹೋಗಿರಬಹುದು. ನಾವು ಈ ದಿಣ್ಣೆಯನ್ನು ಹತ್ತುವುದರೊಳಗೆ ಆ ವಾಹನ ನಮ್ಮ ಕಣ್ಣಿನಿಂದ ದೂರ ಹೋಗಿದ್ದರಿಂದ ನಮಗೆ ಗೊತ್ತಾಗದೇ ಇರಬಹುದು. ಹೀಗೆ ಬಿಟ್ಟರೆ ಅವರು ನಮ್ಮಿಂದ ಇನ್ನೂ ದೂರಕ್ಕೆ ತಪ್ಪಿಸಿಕೊಂಡು ಹೋಗಬಹುದು, ಬೇಗ ಈ ರಸ್ತೆಯಲ್ಲಿ ಹೋಗೋಣ"

ಎಂದು ಹೇಳಿದನು.

ಎಲ್ಲರಿಗೂ ಅವನ ಮಾತು ಸರಿಯಂತೆ ಕಂಡಿತು.

"ಲೋ .. ಸೀನ ಕೆಳಗೆ ಹೋಗಿ ಗಾಡಿ ತಗಂಡ್ ಬಾರ್ಲಾ, ನಾನು ನೋಡೇ ಬಿಡ್ತೀನಿ, ಅದೆಷ್ಟು ದೂರ ಹೋಗ್ತಾರೆ ಅಂತ, ಈ ಮಹದೇವನ ಕೋಟೆಯಿಂದ ಅದೆಂಗೆ ತಪ್ಪಿಸಿಕೊಂಡು ಹೋಗ್ತಾರೆ ಅಂತ ನಾನು ನೋಡೇ ಬಿಡ್ತೀನಿ..."

ಆ ದುಷ್ಟರ ನಾಯಕ ಹಾಗೆ ಹೇಳಿದ ಕೂಡಲೇ ಆ ಪಂಟ ಸೀನ ಕೂಡಲೇ ಕೆಳಗೆ ಇಳಿದು ಮತ್ತೆ ತಮ್ಮ ಕಾರನ್ನು ತೆಗೆದನು. ಆ ಚಿಕ್ಕ ಬೆಟ್ಟದಂತಿರುವ ದಿಣ್ಣೆಯ ಮೇಲೆ ಬರಲು ಇದ್ದ ಒಂದು ಸುತ್ತಿನ ಮಣ್ಣ ರಸ್ತೆಯನ್ನು ಬಳಸಿಕೊಂಡು ಮೇಲೆ ಬಂದನು. ಕೂಡಲೇ ಕಾರನ್ನೇರಿದ ದಷ್ಟರು ಪೂರ್ವ ದಿಕ್ಕಿನ ಕಡೆಗೆ ಕಾರನ್ನು ಜೋರಾಗಿ ಚಲಿಸಿಕೊಂಡು ಹೋದರು.

ಅವರು ಹೋದ ಕೂಡಲೆ. ಪಾಳು ಮನೆಯ ಹಿಂಬಾಗದಲ್ಲಿರುವ ಪಾಳು ಬಾವಿಯಲ್ಲಿ ಅವಿತ್ತಿದ್ದ ರೋಹನ್ ಮತ್ತು ತನಿಷ್ಕ ನಿಟ್ಟುನಿರು ಬಿಟ್ಟರು. ಗುಂಡು ತಗುಲಿದ್ದರಿಂದ ಸರೋಜಮ್ಮನ ಕಾಲಿನಿಂದ ರಕ್ತ ಸುರಿಯಲಾರಂಬಿಸಿತು. ಸರೋಜಮ್ಮಳಿಗಂತೂ ಈಗ ನಡೆಯಲು ಸಾಧ್ಯವೇ ಇರಲಿಲ್ಲ ಒಂದು ವೇಳೆ ಆ ದುಷ್ಟರು ಮತ್ತೆ ತಿರುಗಿ ಬಂದರೆ ನಮ್ಮ ಗತಿ ಏನು...!!! ಇದನ್ನು ನೆನದ ಕೂಡಲೇ ಎಲ್ಲರ ಮುಖದಲ್ಲಿ ಭಯ ಆತಂಕಗಳೆರಡು ಕಾಣತೊಡಗಿದವು.

ಆ ಪಾಳು ಬಾವಿಯಿಂದ ನಿಧಾನವಾಗಿ ಮೇಲೆದ್ದು, ಪಾಳು ಬಿದ್ದಿರುವ ಮನೆಯೊಳಗೆ ಬಂದರು. ತಾಯಿ ಸರೋಜಮ್ಮ ನೋವಿನಿಂದ ನರಳುತ್ತಿದ್ದಳು. ವಿಶ್ರಾಂತಿಗಾಗಿ ಅಲ್ಲೇ  ಮಲಗಿಸಿದರು.

"ಅಪ್ಪ... ಯಾರಪ್ಪ ಇವರು ? ನಮ್ಮನ್ನ ಯಾಕೆ ಹಿಡಿದಿದ್ದಾರಪ್ಪ ? ಆ ದುಡ್ಡಿನ ಲಾರಿ...!! ಮತ್ತೊಂದು ಕಾರಿನಲ್ಲಿದ್ದ ಕೊಂಪೆ ಕೊಂಪೆ ನೋಟುಗಳು. ಏನಪ್ಪ ಇವೆಲ್ಲಾ,  ನಮ್ಮನ್ನೆಲ್ಲಾ ಹಿಡಿದ ಇವರ ಉದ್ದೇಶ ಏನಪ್ಪಾ..? ಬ್ಯಾಂಕ್ ಏನಾದ್ರೂ ದರೋಡೆ ಮಾಡಿದ್ರಾ...? ಹೇಳಪ್ಪ ನನಗಂತೂ ಒಂದೂ ಅರ್ಥ ಆಗ್ತಾ ಇಲ್ಲ"

ತನಿಷ್ಕ ಕುತೂಹಲದಿಂದ ಕೇಳಿದಳು.

ನಾಲಿಗೆಯ ತುದಿಯಲ್ಲೇ ಇದ್ದ ಕುತೂಹಲಕರವಾದ ಹಿಂದಿನ ರಹಸ್ಯವನ್ನು ಚಂದ್ರ ಶೇಖರರು ಹೇಳಲಾರಂಬಿಸಿದರು...

"ನಾನೊಬ್ಬ ಬೆಂಗಳೂರಿನಲ್ಲಿರುವ ರಿಜರ್ವ ಬ್ಯಾಂಕಿನ ಉಪ ಶಾಖೆಯೊಂದರ ಬ್ಯಾಂಕ್ ಮ್ಯಾನೆಜರ್ ಅಂತ ನಿನಗೆ ಗೊತ್ತಿದೆ. ಸುಮಾರು ಇಪ್ಪತ್ತೈದು ವರ್ಷದಿಂದ ನೆಮ್ಮದಿಯಿಂದ ಬ್ಯಾಂಕ್ ಕೆಲಸ ಮಾಡುತ್ತಿದ್ದ ನನಗೆ ಹೀಗೊಂದು ಆಘಾತ ಬರುತ್ತದೆ ಎಂದು ಯಾವತ್ತೂ ಕನಸಿನಲ್ಲಿಯೂ ಊಹಿಸಿರಲಿಲ್ಲ. ಮೊನ್ನೆ ಅಂದರೆ ಐದಾರು ದಿನದ ಹಿಂದೆ ಕೇಂದ್ರ ಸರ್ಕಾರವು ಹಳೆಯ ಐನೂರು ಮತ್ತು ಸಾವಿರರ ನೋಟುಗಳನ್ನು ಬ್ಯಾನ್ ಮಾಡಿತು. ಅವತ್ತಿನಿಂದ ನಮ್ಮ ಬ್ಯಾಂಕಿನ ಕೆಲಸದಲ್ಲಿ ಒತ್ತಡ ಜಾಸ್ತಿಯಾಯಿತು. ರಿಸರ್ವ ಬ್ಯಾಂಕಿನಿಂದ ಬಂದ ಹೊಸ ನೋಟುಗಳು ಮೊದಲು ನಮ್ಮ ಶಾಖೆಗೆ ಬರುತ್ತದೆ. ನಂತರ ಆ ಹೊಸ ನೋಟುಗಳನ್ನು ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕುಗಳಿಗೂ ವಿತರಿಸುವುದು ನಮ್ಮ ಬ್ಯಾಂಕಿನ ಜವಬ್ದಾರಿ. ನೋಟ್ ಬ್ಯಾನ್ ಆದ ನಂತರ ಸಾರ್ವಜನಿಕ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಜನ ಹೊಸ ಹಣ ಪಡೆಯಲು ಎಲ್ಲಾ ಬ್ಯಾಂಕಿನ ಮುಂದೆ ಉದ್ದುದ್ದ ಕ್ಯೂ ನಿಲ್ಲಲಾರಂಬಿಸಿತು. ಜನರ ಈ ಬೇಡಿಕೆಯನ್ನು ಪೂರೈಸಲು ಕೇಂದ್ರದ ರಿಜರ್ವ ಬ್ಯಾಂಕು ಹೊಸ ನೋಟುಗಳನ್ನು ಎಲ್ಲಾ ರಾಜ್ಯಗಳಲ್ಲಿರುವ ತನ್ನ ಉಪ ಶಾಖೆಗಳಿಗೂ ಕಳಿಸಲಾರಂಬಿಸಿತು. ಅದರಂತೆಯೇ ಕರ್ನಾಟಕದ ನಮ್ಮ ಶಾಖೆಗೂ ಐವತ್ತು ಐವತ್ತು ಕೋಟಿ ಹೊತ್ತ ನಾಲ್ಕು ಟೆಂಪೋ ಲಾರಿಗಳು ನಿನ್ನೆ ಶನಿವಾರ ನಮ್ಮ ಬ್ಯಾಂಕಿಗೆ ಬಂದವು. ಹಳೆ ನೋಟುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವ ಮಾಫಿಯಾ ದಂಧೆ ಕೆಲವು ಬ್ಯಾಂಕುಗಳಲ್ಲಿ ಕಮಿಷನ್ ಆಧಾರದ ಮೇಲೆ ನಡೆಯಲಾರಂಬಿಸಿತು. ಹಾಗೆಯೇ ನಾಲ್ಕೈದು ದಿನದ ಹಿಂದೆ ಒಬ್ಬ ವ್ಯಕ್ತಿ ನನ್ನನ್ನು ಬೇಟಿಯಾಗಲು ಬ್ಯಾಂಕಿಗೆ  ಬಂದ. ಆತ ನೋಟುಗಳನ್ನು ಬದಾಲಾಯಿಸಿಕೊಳ್ಳಲು  ಹಣದ ಆಮಿಷವನ್ನು ತೋರಿದ. ಶನಿವಾರ ರಿಸರ್ವ ಬ್ಯಾಂಕಿನಿಂದ  ಐವತ್ತು ಐವತ್ತು ಕೋಟಿಗಳಿರು  ಹೊಸ ನೋಟುಗಳಿರುವ ಟೆಂಪೋ ಲಾರಿಗಳು ನಮ್ಮ ಬ್ಯಾಂಕಿಗೆ ಬರುವ ಮಾಹಿತಿ ಆತನಿಗೆ ನಮಗಿಂತ ಮೊದಲೇ ಅದು ಹೇಗೋ ತಿಳಿದು ಬಿಟ್ಟಿತ್ತು. ಆತ ಸಂಪೂರ್ಣ ಐವತ್ತು ಕೋಟಿಯಿರುವ ಒಂದು ಟೆಂಪೋ ಲಾರಿಯ ಡೀಲ್ ಬೇಕು ಎಂದು ಕೇಳಿದ. ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಟ್ಟರೆ ಇಪ್ಪತ್ತು ಪರ್ಸೆಂಟ್ ಹಣ ನಿಮಗೆ ಕೊಡುತ್ತೇನೆ ಎಂದ. ಅಂದರೆ ಹೊಸ ನೋಟುಗಳನ್ನು ಹಳೇ ನೋಟುಗಳಿಗೆ ಬದಲಾಯಿಸಿದರೆ ನಮಗೆ ಹತ್ತು ಕೋಟಿ ಕಮಿಷನ್ ಸಿಗುತ್ತಿತ್ತು. ಈ ಬಹು ದೊಡ್ಡ ಮೊತ್ತದ ಡೀಲ್ ಗೆ ಬ್ಯಾಂಕಿ ಒಂದೆರಡು ಅಧಿಕಾರಿಗಳು ಸಮ್ಮತಿಸಿದರು. ತಮ್ಮ ಜೀವಮಾನದಲ್ಲೇ ದುಡಿಯಲು ಸಾಧ್ಯವಿಲ್ಲದ ಹಣ ಹೀಗೆ ಸಿಗುತ್ತಿದೆ ಎಂದರೆ ಯಾರು ತಾನೆ ಬಿಟ್ಟಾರು..? ಅವರು ನನ್ನನ್ನು ಸಹ ಒಪ್ಪಿಸಲು ಪ್ರಯತ್ನಿಸಿದರು. ಬ್ಯಾಂಕಿನ ಸಂಪೂರ್ಣ ಜವಬ್ದಾರಿ ಹೊತ್ತ ನನಗೆ ಈ ಕೆಲಸ ಮಾಡಲು ಮನಸ್ಸು ಒಪ್ಪಲಿಲ್ಲ. ಕಾಳ ಸಂತೇಕೋರರನ್ನು ಮಟ್ಟ ಹಾಕಲು ಸರ್ಕಾರ ಪ್ರಯತ್ನಿಸುತ್ತಿರಬೇಕಾದರೆ ನಾವುಗಳೇ ಈ ರೀತಿಯ ದಂಧೆಗೆ ಇಳಿದರೆ ದೇಶ ಹೇಗೆ ಉದ್ಧಾರವಾಗಲು ಸಾಧ್ಯ ಹೇಳು..? ನಾನು ಯಾವ ಕಾರಣಕ್ಕೂ ಈ ಕೆಲಸಕ್ಕೆ ಒಪ್ಪಲಿಲ್ಲ. ಯಾವಾಗ ನನ್ನ ನಿರ್ಧರ ಗಟ್ಟಿಯಾಯಿತೋ ಅಲ್ಲಿಂದ ನನಗೆ ದಿನವೂ ಬೆದರಿಕೆಯ ಕರೆಗಳು ಬರಲಾರಂಬಿಸಿದರು. ನಾನು ಹೆದರಲಿಲ್ಲ. ಆದರೆ ಯಾವಾಗ ಈ ತರಹದ ಅನ್ಯಾಯದ ಕೆಲಸಕ್ಕೆ ನಮ್ಮ ಬ್ಯಾಂಕ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆಂದು ತಿಳಿಯಿತೋ ಆಗ ನನ್ನ ಮೇಲೆ ಅತಿಯಾದ ಒತ್ತಡ ಬರಲಾರಂಬಿಸಿತು. ಶನಿವಾರ ಮಧ್ಯಾಹ್ನದಿಂದಲೇ ಬ್ಯಾಂಕಿಗೆ ಮೂರು ದಿನ ರಜೆ ಹಾಕಿದೆ. ಅಲ್ಲಿಂದ ಮುಂದೆ ಆಗುವ ಅನಾಹುತಗಳಿಗೆ ಬ್ಯಾಂಕಿನ ಇತರ ಸಿಬ್ಬಂದಿಗಳು ಹೊಣೆಯಾಗಿರುತ್ತಾರೆ. ನನ್ನ ಕೈ ಕೆಳಗಿರುವ ಅಸಿಸ್ಟೆಂಟ್ ಮ್ಯಾನೇಜರ್ ನಾನು ಮೂರು ದಿನ ರಜೆ ಹಾಕಿದ್ದು ಕಂಡು ಸಂತೋಷ ಪಟ್ಟ. ಆದರೆ ಕೇಂದ್ರ ರಿಜರ್ವ್ ಬ್ಯಾಂಕ್ ಸ್ವಲ್ಪ ಬುದ್ದಿವಂತಿಕೆಯನ್ನು ಪ್ರದರ್ಶಿಸಿ ಹೊಸ ನೋಟುಗಳಿರುವ ಟೆಂಪೋ ಲಾರಿಯನ್ನು ಆಧುನಿಕ ತಂತ್ರ ಜ್ಞಾನವನ್ನು ಬಳಸಿತು. ಅದರ ಪಾಸ್ ವರ್ಡ್ ನ್ನು ಒಂದು ದಿನದ ನಂತರ ಬ್ಯಾಂಕಿನ ಮುಖ್ಯ ಮ್ಯಾನೇಜರ್ ಗೆ ಮಾತ್ರ ಸಿಗುವಂತೆ ಮಾಡಿತು. ಆದ್ದರಿಂದ ನಾನಿಲ್ಲದೇ ಆ ಹೊಸ ನೋಟುಗಳಿರುವ ಲಾರಿಯನ್ನು ತೆರೆಯಲು ಸಾಧ್ಯವೇ ಇಲ್ಲದಂತಾಯಿತು. ಕಪ್ಪು ಹಣವನ್ನು ಬಿಳಿ ಮಾಡುವ ದುಷ್ಟರ ತಂತ್ರವೆಲ್ಲಾ ವಿಫಲವಾಯಿತು. ಇದರ ಫಲವಾಗಿ ನಾನಿಂದು ದುಷ್ಟರ ಕಪಿ ಮುಷ್ಠಿಯಲ್ಲಿ ಸಿಲುಕಿದ್ದೇನೆ.."

ಚಂದ್ರ ಶೇಖರರು ಸವಿವರವಾಗಿ ಎಲ್ಲವನ್ನು ಹೇಳಿದರು.

ಕುತೂಹಲದಿಂದ ಕೇಳುತ್ತಿದ್ದ ರೋಹನ್ ತನಿಷ್ಕಳ ಕೈಯಿಂದ ಮೊಬೈಲನ್ನು ಕಿತ್ತುಕೊಂಡು,

"ಈ ದುಷ್ಟರನ್ನು ನಾವು ಸುಮ್ಮನೆ ಬಿಡುವುದು ಬೇಡ, ಅವರ ಕೈಯಲ್ಲಿ  ನಾವುಗಳು ಸಿಲುಕಿ ಹಾಕಿಕೊಳ್ಳುವ  ಮೊದಲೇ ನಾವು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡೋಣ. ಆಗ ಮಾತ್ರ ದುಷ್ಟರನ್ನು ನಿಯಂತ್ರಿಸ ಬಹುದು. ನಾವೂ ಸಹ ಸುರಕ್ಷಿತವಾಗಿ ಈ ದುಷ್ಟರ ಜಾಲದಿಂದ ಹೊರ ಬರ ಬಹುದು..."

ಎನ್ನುತ್ತಾ ರೋಹನ್ ಮೊಬೈಲ್ ನಲ್ಲಿ ತಾವು ಚಿತ್ರೀಕರಿಸಿದ ವಿಡಿಯೋವೊಂದನ್ನು ತೆಗೆದ ಇನ್ನೇನು ಅಪ್ ಲೋಡ್ ಮಾಡಬೇಕು ಎನ್ನುವಷ್ಟರಲ್ಲಿ ಮೊಬೈಲ್ನಲ್ಲಿ ಯಾವ ನೆಟ್ ವರ್ಕ್ ಇಲ್ಲದಿರುವುದು ಗಮನಕ್ಕೆ ಬಂತು. 'ಛೆ.....!!!' ಎಂದು ಬೇಸರದಿಂದ ಮತ್ತೆ ಮೊಬೈಲನ್ನು ತನಿಷ್ಕಗೆ ಹಿಂದಿರುಗಿಸಿದ....

ಕೂಡಲೇ ತನಿಷ್ಕ ಏನೋ ಆದಂತೆ ಚಿಟ್ಟನೆ ಚೀರಿದಳು. ಅವಳು ಹಾಗೆ ಚೀರಿದ ರಭಸಕ್ಕೆ ಒಂದು ಕ್ಷಣ ಭೂಮಿಯೇ ನಡುಗಿದಂತೆ ಭಾಸವಾಯಿತು..

ಹಿಂದೆ ತಿರುಗಿ ನೋಡಿದರೆ ರಾಕ್ಷಸರಂತೆ ಭಯಾನಕವಾಗಿ ಕಾಣುತ್ತಿದ್ದ ಇಬ್ಬರು ವ್ಯಕ್ತಿಗಳು ಉದ್ದನೆಯ ಕೋಲನ್ನು ಹಿಡಿದು ನಿಂತಿದ್ದರು. ಅವರ ಹಣೆಯಿಂದ ರಕ್ತ ಸುರಿಯುತ್ತಿತ್ತು. ತೊಟ್ಟ ಬಟ್ಟೆಗಳು ರಕ್ತದ ಕಲೆಯಿಂದ ಕೂಡಿತ್ತು. ಅವರ ಕಣ್ಣುಗಳು ರಕ್ತದಿಂದ ಅದ್ದಿ ತೆಗೆದಂತೆ ಕೆಂಪಾಗಿ ಭಯಂಕರವಾಗಿ ಕಾಣುತ್ತಿದ್ದವು...

ಹೌದು ಅದು ಅವರೇ, ಕಾರಿನಲ್ಲಿ ಕುಳಿತ್ತಿದ್ದಾಗ ಬಂದೂಕು ಹಿಡಿದು ಕಾವಲಿದ್ದ ಇಬ್ಬರು ವ್ಯಕ್ತಿಗಳು. ಅವರ ತಲೆಗೆ ಹೊಡೆದು ಗುಂಡಿಯಲ್ಲಿ ಹಾಕಿ ಅವರಿಬ್ಬರನ್ನು ಕಟ್ಟಿ ಹಾಕಿದ್ದರಲ್ಲಾ... ಅದೇ ವ್ಯಕ್ತಿಗಳು....!!!
ಅದು ಹೋಗೋ ತಪ್ಪಿಸಿಕೊಂಡು ಬಂದು, ಹಸಿದ ಹೆಬ್ಬುಲಿಗಳಂತೆ ಇವರ ಮುಂದೆ ಬಂದು ನಿಂತಿದ್ದರು. ಹೇಗೋ ಆ ದುಷ್ಟರಿಂದ ತಪ್ಪಿಸಿಕೊಂಡೆವು ಎಂದು ನಿಟ್ಟುಸಿರು ಬಿಟ್ಟಿದ್ದ ಇವರಿಗೆ ಮತ್ತೊಂದು ಆತಂಕ ಕಣ್ಣ ಮುಂದೆಯೇ ಬಂದು ನಿಂತಿತ್ತು.

ಸೇಡಿನ ಜ್ವಾಲೆಯಿಂದ ಕೆಕ್ಕರಿಸಿ ನೋಡುತ್ತಿದ್ದ ಅವರು ಇದ್ದಕ್ಕಿಂದ್ದಂತೆಯೇ ಕೈಯಲ್ಲಿದ್ದ ಕೋಲಿನ್ನು ತೆಗೆದುಕೊಂಡು ತನಿಷ್ಕಳ ಮೇಲೆ ಬೀಸಿದರು.....

(ಮುಂದುವರೆಯುವುದು)

No comments:

Post a Comment