Tuesday 2 February 2016

ಒಂದು ಪ್ರೀತಿಯ ಸುತ್ತ

ಒಂದು ಪ್ರೀತಿಯ ಸುತ್ತ. ( small story ....small feel )
ಶಂಕರಘಟ್ಟದಲ್ಲಿರುವ ಕುವೆಂಪುಯೂನಿವರ್ಸಿಟಿಯಲ್ಲಿ ಎಂ,ಎ, ಸೀಟು ಸಿಕ್ಕಿತ್ತು. ನಮ್ಮೂರಿನ ಕಿಟ್ಟಿಗೂ ಸಹ ಸಿಕ್ಕಿತ್ತು. ಓದಿನಲ್ಲಿ ನಾನು ಮತ್ತು ಕಿಟ್ಟಿ ಯಾವಾಗಲೂ ಮುಂದು.ಒಂದನೇ ತರಗತಿಯಂದಲೂ ನಾವಿಬ್ಬರೂ ಜೊತೆಯಾಗಿಯೇ ಓದಿದವರು.ಅವನು ಒಂಥರಾ ಗಾಂಧಿ ಇದ್ದಂತೆ. ಹುಡುಗಿ,ಲವ್ವು-ಗಿವ್ವುಅನ್ನೋದು ನಮ್ ಕಿಟ್ಟಿಗೆ ಆಗಿ ಬರೋಲ್ಲ. ಅವನ ಪ್ರಭಾವದಿಂದ ನಾನು ಸಹ ಸಿನ್ಸಿಯರ್ ಆಗಿದ್ದೆ.ಒಂದ್ ವರ್ಷದ್ ವರೆಗೆ ಲವ್ವು ಗಿವ್ವು ಅಂತ ಯಾವ್ ಸುದ್ದಿಗೂ ಹೋಗಿರ್ಲಿಲ್ಲ. ಸ್ವಲ್ಪ ನನ್ ಮನಸು ಆಚೆ ಈಚೆಗೆ ಹರಿಸಿದ್ರೆ ಸಾಕು ಕಿಟ್ಟಿ ಗಾಂಧಿಗಿರಿಯ ಉಪನ್ಯಾಸ ಶುರು ಹಚ್ಕೊಳ್ತಿದ್ದ. ಒಂದೊಂದ್ ಸಾರಿ ಕಿವಿಲೀ ರಕ್ತನೇ ಬರ್ತಿತ್ತು, ಅಷ್ಟ್ ಕೊರಿತಾ ಇದ್ದ. ಇವನ್ ಸಹವಾಸದಿಂದ ನಾನು ಸಹ ಒಂದ್ ವರ್ಷ ತೆಪ್ಪಗಿದ್ದೆ.

ಎಕ್ನಾಮಿಕ್ಸ ಡಿಪಾರ್ಟಮೆಂಟಿನ ಶಾಲಿನಿಯನ್ನ ಎಲ್ಲರೂ ಬ್ಯೂಟಿ ಕ್ವೀನ್ ಅಂತ ಕರೀತಿದ್ರೂ. ನನ್ನ ಮಂದೆ ಹಾದು ಹೋಗುವಾಗ ಆಕೆ ಸಾಕ್ಷಾತ್ ಮೇನಕೆ,
ಅಂತಹ ವಿಶ್ವಾಮಿತ್ರನ ತಪಸ್ಸೇ ಭಂಗ ಆಗಿರೋವಾಗ...!! ನಾವೆಲ್ಲಾ ಯಾರು...?
ಮನಸ್ಸು ಸಂಪೂರ್ಣವಾಗಿ ಶಾಲಿನಿಯ ಹಿಂದೆಯೇ ಅಲೆಯುತ್ತಿತ್ತು. ಗಾಂಧಿ ಕಿಟ್ಟಿ ಮತ್ತೆ ಅಡ್ಡ ಬಂದ.ಪ್ರತಿ ಸಲವೂ ನನಗೆ ಪ್ರೀತಿ ಮಾಡುವುದು ತಪ್ಪು ಎನ್ನವುದರ ಬಗ್ಗೆ ಗಂಟೆಗಟ್ಟಲೆ ಹೇಳ್ತಾಇದ್ದ. ನನಗೂ ಕಿಟ್ಟಿಯ ಸಹವಾಸ ಸಾಕಾಗಿ ಹೋಗಿತ್ತು. ಈ ವಯಸ್ಸಲ್ಲಿ ಲವ್ ಮಾಡಕಾಗ್ದೆ ಮುದುಕ ಆದಾಗ ಮಾಡೋಕೆ ಆಗ್ತದ ಎಂದು ಧೈರ್ಯ ತಂದ್ಕಂಡು
"ಏನಲೇ ಗಾಂಧಿ.... ನಮ್ಮಪ್ಪನಿಗ್ ಹೇಳ್ತಿಯೇನಲೇ... ಹೇಳ್ಕೊ ಹೋಗ್, ಇವತ್ತೇ ನಮ್ಮೂರಿಗೆ ಹೋಗಿ ಚಾಡಿ ಹೇಳಿ ಬಾ... ನಾ ಮಾತ್ರ ಶಾಲಿನಿ ಹಿಂದೆ ಅಲಿಯೋದು ನಿಲ್ಸಲ್ಲ....ಅದೇನ್ ಕಿಸಿದು ಗುಡ್ಡೆ ಹಾಕ್ತಿಯೋ ಹಾಕ್ಕೊ ಹೋಗ್"
ಅಂತ ಬೈಯ್ದೆ...
"ಬ್ಯಾಡ ಕಣ್ಲೇ ಪಕ್ಕಾ...!! ಓದೋ ವಯಸ್ಸಲ್ಲಿ ಹುಡುಗರು ಪ್ರೀತಿ ಗೀತಿ ಅಂತ ಅಲಿಬಾರ್ದು"
ಅಂತ ಬುದ್ದಿವಾದ ಹೇಳಿದ
ಅವನ ಮಾತು ಕೇಳಿ ತಿರಸ್ಕಾರದ ನೋಟ ಬೀರಿದೆ. ನನ್ನ ನಿರ್ಧಾರ ಸ್ಪಷ್ಟವಾಗಿತ್ತು.
ನನ್ನ ದೃಢ ನಿರ್ದಾರದಿಂದ ಕಿಟ್ಟಿ ಆಶ್ಚರ್ಯವಾಗಿತ್ತು.ಅವನು ಕನ್ನಡಕದೊಳಗಿನಿಂದ ತನ್ನ ಕಣ್ಣು ಗುಡ್ಡೆಗಳನ್ನು ದೊಡ್ಡದಾಗಿ ಮಾಡಿಕೊಂಡು ಆಶ್ಚರ್ಯದಿಂದ ನನ್ನತ್ತ ನೋಡಿದ್ದ..!!
ಅಂದಿನಿಂದ ಶಾಲಿನಿಯನ್ನು ಪಟಾಯಿಸಲು ಏನೇನೋ ಸರ್ಕಸ್ ಮಾಡಿದೆ. ಶಾಲಿನಿಯ ಸ್ವಬಾವವೂ ಚಂಚಲವಾಗಿತ್ತು. ನನ್ನತ್ತ ನೋಡಿ ಆಗಾಗ ಸ್ಮೈಲ್ ಕೊಡ್ತಿದ್ಳು. ಹ್ಯಾಂಡ್ ಸಮ್ ಆಗಿ ಕಾಣೋದ್ರಲ್ಲಿ ನಾನೇನು ಕಡಿಮೆ ಇರ್ಲಿಲ್ಲ ಅನ್ನಿ.....
ಇನ್ನೇನು ಶಾಲಿನಿ ನನಗೆ ಕ್ಲೀನ್ ಬೋಲ್ಡ್ ಆಗಬೇಕು ಅನ್ನುವಷ್ಟರಲ್ಲಿ ಅಡ್ಡ ಬಂದಿದ್ದು..!!
ಛೇ...!!! ಛೇ....!!! ನೀವು ಯೋಚಿಸಿದ್ದು ತಪ್ಪು.
ಕಿಟ್ಟಿ ಅಲ್ಲಾರಿ...
ಆ ಸೋಡಾ ಗ್ಲಾಸ್ ಸುಬ್ಬಲಕ್ಷ್ಮಿ....ಶಾಲಿನಿಯ ಜೊತೆಗಾತಿ. ಶಾಲಿನಿಯ ಊರವಳು.ತನ್ನ ಕನ್ನಡಕದೊಳಗಿನಿಂದ ಹುಡುಗರತ್ತ ಓರೆ ನೋಟ ತೋರಿಸಿದರೆ ಸಾಕು ಎಂಥವನಾದರೂ ಸುಬ್ಬಿಯ ಸೌಂದರ್ಯಕ್ಕೆ ಬೌಲ್ಡ್ ಆಗಿ ಬಿಡುತ್ತಿದ್ದರು. ಸೌಂದರ್ಯದ ವಿಷಯದಲ್ಲಿ ಅವಳೇನು ಕಡಿಮೆ ಇರ್ಲಿಲ್ಲ....ಆದ್ರೆ ಗಾಂಧಿಗಿರಿಯಲ್ಲಿ ನಮ್ ಕಿಟ್ಟಿಗಿಂತ ಒಂದ್ ಕೈ ಮೇಲು... ಡಬಲ್ ಗಾಂಧಿವಾದ ಅವಳ್ ಮೈಂಡಲ್ಲಿ ಸೇರ್ಕೊಂಡಿತ್ತು..!!! ಶಾಲಿನಿಯ ಬಾಡಿಗಾರ್ಡನಂತೆ ಯಾವಾಗಲೂ ಜೊತೆಲ್ಲೇ ಇರ್ತಿದ್ಲು. ಶಾಲಿನಿ ಕೆಮ್ಮಿದ್ರೂ ಸಹ ಈ ಸುಬ್ಬಿ ಅವರಪ್ಪಂಗೆ ವಿಷಯ ಮುಟ್ಟಿಸುತ್ತಿದ್ದಳು.ಸುಬ್ಬಿಗೆ ಲವ್ವು-ಗಿವ್ವು ಆಗಿ ಬರಲ್ವಂತೆ. ಪ್ರೀತಿ ಪ್ರೇಮ ಅಂತ ಆಚೆ ಈಚೆ ಹೋಗದಂತೆ ಶಾಲಿನಿಯನ್ನೂ ಸಹ ನೋಡಿಕೊಳ್ಳುವ ಜವಬ್ದಾರಿಯನ್ನು ಈ ಸುಬ್ಬಿ ವಹಿಸಿಕೊಂಡಿದ್ದಳಂತೆ
ಯಾವ್ ಜನ್ಮದ ಕರ್ಮನೋ..ಏನೋ...
ನನ್ ಜೊತೆ ಕಿಟ್ಟಿ.....ಅವಳ್ ಜೊತೆ ಈ ಸುಬ್ಬಿ.....
"ಪ್ರೀತಿ"..... ಅಂತ ಕನಸಲ್ಲಿ ಕನವರಿಸಿದ್ರು ಕೂಡ, ಇವರು ಕೆಂಡ ತುಳಿದವರಂತೆ ಹೌಹಾರಿಬಿಡುತ್ತಿದ್ರು....
ಸತ್ಯ ಹರಿಶ್ಚಂದ್ರನಿಗೆ ನಕ್ಷತ್ರಿಕನ ಕಾಟ ಇದ್ದಂತೆ ನಮಗೆ ಇವರಿಬ್ಬರದು.ಇಂತವರ ಸಹವಾಸದಿಂದ ನಾವ್ ತಲುಪಿದ್ದು ಬರೀ ಫ್ರೆಂಡ್ ಶಿಪ್ ವರೆಗೆ ಮಾತ್ರ...ಕಾಲೇಜ್ ಮುಗಿದು ನಮ್ ನಮ್ ಮನೆಗೆ ಹಿಂತಿರುಗುವಾಗ ನಾವು ಗಳಿಸಿದ್ದು ಕ್ಲೋಸ್ ಆಗಿ ಮಾತಾಡುವಷ್ಟು ಗೆಳೆತನ ಮಾತ್ರ....
ಊರಿಗೆ ಹೋದ ಮೇಲೆ ಕಿಟ್ಟಿ ಅಪ್ಪ
" ನೀನು ಓದಿರೋ ಎಮ್ಮೆಗೆ ಅದ್ಯಾವ್ ನನ್ಮಗ ಕೆಲ್ಸ ಕೊಡ್ತಾನೆ... ಅಂಗಡಿ ನೋಡ್ಕಂಡು ಬಿದ್ದಿರು ನನಗೂ ವಯಸ್ಸಾಗಿದೆ" ಅಂತ ಹೇಳಿ ಕಿರಾಣಿ ಅಂಗಡಿಯ ಜವಬ್ದಾರಿಯನ್ನು ಸಂಪೂರ್ಣವಾಗಿ ಕಿಟ್ಟಿಗೆ ಬಿಟ್ಟು ಕೊಟ್ಟಿದ್ದರು. ನಾನು ರಿಸಲ್ಚ ಬಂದ್ ಮೇಲೆ ಕೆಲಸ ಹುಡುಕುವ ಅಂತ ಸುಮ್ಮನಿದ್ದೆ.
ರಿಸಲ್ಟ್ ಬಂದ ದಿನ ನಾನು ಕಿಟ್ಟಿ ಶಂಕರಘಟ್ಟಕ್ಕೆ ಹೋದ್ವಿ. ಶಾಲಿನಿನೂ ಬಂದಿದ್ಲು...
ಅಬ್ಬಾ...!!!! ಸದ್ಯ ಆ ಸುಬ್ಬಿ ಶಾಲಿನಿಯ ಜೊತೆಗೆ ಬಂದಿರಲಿಲ್ಲ...
ಆ ದಿನ ಮನಸ್ಸು ತೃಪ್ತಿಯಾಗೊ ವರೆಗೂ ಮಾತಾಡ್ವಿ...ಆದ್ರೆ ಪ್ರೀತಿ ಹೇಳಿಕೊಳ್ಳುವಷ್ಟು ಧೈರ್ಯ ನನಗೆ ಬರಲಿಲ್ಲ.
ಅವಳಿಂದ ವಿಳಾಸ ಪಡ್ಕೊಂಡೆ...
"ಅಪ್ಪಾ ತುಂಬಾ ಸ್ಟಿಕ್ಟು.... ಪತ್ರ ಬರೆಯೋದಾದ್ರೆ ಸುಬ್ಬಿಯ ಬ್ಯೂಟಿ ಪಾರ್ಲರ್ ವಿಳಾಸಕ್ಕೆ ಬರೀರಿ"
ಅಂದ್ಲು ...
ಊರಿಗ್ಹೋದ ಮೇಲೆ ಸುಬ್ಬಿ ಬ್ಯೂಟಿ ಪಾರ್ಲರ್ ತೆರೆದಿದ್ದಳು.
"ಅಯ್ಯೋ.... ಸುಬ್ಬಿ ವಿಳಾಸನಾ..... !!!"
ಎಂದೆ
" ಸುಬ್ಬಿ ಮೊದಲಿನಂತಿಲ್ಲ ಪರ್ವಾಗಿಲ್ಲ... ಬರೀರಿ" ಅಂದ್ಲು....
ಅಲ್ಲಿಂದ ನಮ್ಮ ನಿಜವಾದ ಪ್ರೕಮ ನಿವೇದನೆಗಳು ಪ್ರಾರಂಭವಾದವು.....
ನಾನು ಅಪ್ಪನಿಗೆ ಹೆದರುತ್ತಿದ್ದರಿಂದ ಕಿಟ್ಟಿಯ ಕಿರಾಣಿ ಅಂಗಡಿ ವಿಳಾಸ ಕೊಟ್ಟಿದ್ದೆ....
ಈಗ ನಮ್ಮಿಬ್ಬರ ಪ್ರೀತಿಗೆ ಕಿಟ್ಟಿ ಮತ್ತು ಸುಬ್ಬಿಯರೇ ಸೇತುವೆಯಾಗಿ ನಿಂತಿದ್ದರು..... ಪ್ರೀತಿಗೆ ಸಹಕಾರ ಕೊಡೊ ಬುದ್ಧಿ ಇವರಿಗೆ ಆಗಲೇ ಇದ್ದಿದ್ದರೆ ಇಷ್ಟೊತ್ತಿಗೆ ನಾನು ಮತ್ತು ಶಾಲಿನಿ ಒಂದು ಹಂತಕ್ಕೆ ಬಂದು ನಿಲ್ಲುತ್ತಿದ್ದೆವು. ಕಿಟ್ಟಿಗೆ ಒಳ್ಳೆ ಬುದ್ದಿ ಬಂದಿತ್ತು. ನನಗೆ ಸಹಾಯ ಮಾಡುವುದಾಗಿ ಹೇಳಿದ. ಊರಿಗೆ ಬಂದು ಒಂದು ವಾರದೊಳಗೆ ಶಾಲಿನಿಗೊಂದು ಕವಿತೆ ಬರೆದೆ...
"ಕಣ್ಣಿಂದ ದೂರವಾದರೇನು
ಕಣ್ಣು ಮುಚ್ಚಿ ನೆನದರೆ ಸಾಕು
ನಿನ್ನ ಕಣ್ಣ ರೆಪ್ಪೆಯಲ್ಲೇ ನಾ ನೆಲೆಸಿರುವೆ....
ದಾರಿ ದೂರವಾದರೇನು
ಒಮ್ಮೆ ಕರೆದರೆ ಸಾಕು
ನಿನ್ನ ಹೆಜ್ಜೆಯ ಗುರುತಲ್ಲೇ ನಾನಿರುವೆ....."
ಈ ಪತ್ರಕ್ಕೆ ಶಾಲಿನಿ ತುಂಬಾ ಪುಳಕಿತಗೊಂಡಳು.
ಮತ್ತೆ ಅದೇ ತರಹದ ಕವನಗಳನ್ನು ಬರೆಯಿರಿ ಎಂದು ಹೇಳಿ ನನ್ನನ್ನು ಹುರಿದುಂಬಿಸುತ್ತಿದ್ದಳು
ನಾನು ಸಾಕಷ್ಟು ಕವಿತೆಗಳನ್ನು ರಚಿಸಿದ್ದೆ....
ಅವಳು ನನಗಾಗಿ ಬರೆದ ಕವಿತೆಗಳು ನಾ ಬರೆದ ಕವಿತೆಗಿಂತ ಚನ್ನಾಗಿದ್ದವು.....ನಾನು ಶಾಲಿನಿಯನ್ನು ಹೊಗಳಿ ಪತ್ರ ಬರೆಯುತ್ತಿದೆ. ನನ್ನ ಪತ್ರವನ್ನು ಆ ಸುಬ್ಬಿ ಕದ್ದು ಮುಚ್ಚಿ ಓದಿ ಬಿಟ್ಟರೆ...?? ಎಂದು ಅನುಮಾನ ವ್ಯಕ್ತ ಪಡಿಸಿದೆ. ಸುಬ್ಬಿ ಅಂತವಳಲ್ಲ ಎಂದು ಶಾಲಿನಿ ಹೇಳಿದ ಮೇಲೆ ನಾನು ಇನ್ನಷ್ಟು ಒಳ್ಳೆ ಕವನಗಳನ್ನು ಬರೆದು ಕಳುಹಿಸುತ್ತಿದ್ದೆ. ಕಿಟ್ಟಿಯೂ ಸಹ ಶಾಲಿನಿ ಬರೆದ ಪತ್ರಗಳನ್ನು ಒಡೆದು ಓದದೆಯೇ ನನಗೆ ಮುಟ್ಟಿಸುತ್ತಿದ್ದ.ಪ್ರೇಮಿಗಳ ಪತ್ರ ಓದಬಾರದು ಎಂಬ ವಿಷಯ ಅವರಿಬ್ಬರಿಗೂ ಚನ್ನಾಗಿ ತಿಳಿದಿತ್ತು. ಹೀಗೆ ನಾವಿಬ್ಬರೂ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದವು...ಆರು ತಿಂಗಳಲ್ಲೇ ನಮ್ಮ ಪ್ರೀತಿ ಸುಭದ್ರವಾಯಿತು.....
ಕಿಟ್ಟಿ ನಾಲ್ಕೈದು ದಿನ ರಜೆ ಹಾಕಿ ಯಾವುದೋ ಊರಿಗೆ ಹೋಗಿದ್ದ . ಕಿಟ್ಟಿ ನನಗೆ ಹೇಳದೇ ಊರಿಗೆ ಹೋಗಿದ್ದು ಇದೇ ಮೊದಲು. ನಾನು ಏನೊ ಪರ್ಸನಲ್ ವಿಷಯ ವಿರಬೇಕು ಎಂದು ಸುಮ್ಮನಾದೆ. ಆದರೆ ಕಿಟ್ಟಿ ಊರಿಗೆ ಹೋಗುತ್ತಿರುವ ವಿಷಯ ತನ್ನ ಮನೆಯಲ್ಲೂ ತಿಳಿಸಿರಲಿಲ್ಲ. ಕಿಟ್ಟಿ ತಂದೆ ನನಗೆ ಎರಡು ಮೂರು ಸಲ ಕೇಳಿ ಸುಮ್ಮನಾದರು. ನನ್ನ ತಂದೆಯೂ ಸಹ ನಾನೆನೋ ಮುಚ್ಚು ಮರೆ ಮಾಡುತ್ತಿದ್ದೇನೆಂದು ನನಗೆ ಬೈಯ್ದರು.
ಕಿಟ್ಟಿ ಊರಿಗೆ ವಾಪಸ್ಸಾದ ವಿಷಯ ತಿಳಿಯಿತು
ಆ ದಿನ ಕಿಟ್ಟಿಯ ಮನೆಯಲ್ಲಿ ಜಗಳ ನಡೆಯುತ್ತಿತ್ತು.ಇಪ್ಪತ್ತು ಮೂವತ್ತು ಜನ ಸೇರಿದ್ದರು. ನಮ್ಮಪ್ಪ ಕಿಟ್ಟಿಯ ಅಪ್ಪನ ಜೊತೆ ಸೇರಿಕೊಂಡು ಬೈಯ್ಯುತ್ತಿದ್ದರು. ನನಗೆ ಒಂದು ಸಲ ಜಂಘಾಬಲವೇ ಕುಸಿದು ಹೋದಂತಾಯಿತು. ನನ್ನ ಪತ್ರ ವ್ಯವಹಾರ ನಮ್ಮಪ್ಪನಿಗೆ ಗೊತ್ತಾಗಿದೆ ಎನ್ನುವ ವಿಚಾರ ಈಗ ನನಗೆ ಸ್ಪಷ್ಟವಾಯಿತು. ಅಲ್ಲೇ ಹಾದು ಹೋಗುತ್ತಿದ್ದ ನನ್ನನು ನಮ್ಮಪ್ಪ ಸಿಟ್ಟಿನಿಂದ
"ಬಾರೋ ಇಲ್ಲಿ......"
ಎಂದು ಕರೆದರು. ಅವರ ಧ್ವನಿಗೆ ನಾನು ಸ್ವಲ್ಪ ಬೆಚ್ಚಿಬಿದ್ದೆ..ನಮ್ಮಪ್ಪ ನನ್ನ ಕೈಹಿಡಿದು ಕೋಪದಿಂದ ಕಿಟ್ಟಿಯ ಮನೆ ಒಳಗೆ ಎಳೆದುಕೊಂಡು ಹೋದರು....
ಒಳಗಡೆ ಕಿಟ್ಟಿ ತಲೆ ತಗ್ಗಿಸಿ ನಿಂತಿದ್ದ..
ಅವನನ್ನು ಒಮ್ಮೆ ಗಮನಿಸಿದೆ..ಬಿಳಿ ಪಂಚೆ, ಬಿಳಿ ಷರ್ಟು.. ಕೊರಳಲ್ಲಿ ಹೂವಿನ ಹಾರ ಧರಿಸಿ ಮದುಮಗನಾಗಿ ನಿಂತಿದ್ದ...
ಯಾರಿಗೂ ಹೇಳದೇ ಕೇಳದೇ ರಿಜಿಸ್ಟರ್ ಮದುವೆಯಾಗಿ ಬಂದಿದ್ದ......
ನಾನು ಕಿಟ್ಟಿಯ ಹತ್ತಿರ ಹೋಗಿ
"ಏನೋ ಗಾಂಧಿ ಇದು...!!!
ಆಶ್ಚರ್ಯದಿಂದ ಕೇಳಿದೆ. ಕಿಟ್ಟಿಯು ತನ್ನ ಲವ್ ಮ್ಯಾಟರ್ ನನಗೂ ಗೊತ್ತಾಗದಂತೆ ಅತಿ ರಹಸ್ಯದಿಂದ ಇಟ್ಕೊಂಡಿದ್ದ. ಅವನ ಜೊತೆ ಇರುತ್ತಿದ್ದರಿಂದ ನನಗೂ ಆ ದಿನ ಸರಿಯಾಗಿ ಪೂಜೆ ನಡೆಯಿತು. ಹುಡುಗಿ ಕಡೆಯವರು ಜಗಳ ನಿಲ್ಲಿಸಿ ಸಂಧಾನ ಮಾಡಿಕೊಂಡರು. ಗಲಾಟೆ ಶಾಂತವಾದಾಗ ನಾನು ಅಲ್ಲೇ ತಲೆ ತಗ್ಗಿಸಿ ನಿಂತಿದ್ದ ಮದುಮಗಳೊಮ್ಮೆ ನೋಡಿದೆ
"ಅರೆ...... ಸುಬ್ಬಿ....!!!!!!!"
ನನ್ನ ಕಣ್ಣುಗಳು ನಂಬದಾದವು.
ಸುಬ್ಬಿ -ಕಿಟ್ಟಿ ಜೋಡಿಯಾಗಿದ್ದು ಹೇಗೆ...??
ಸಾದ್ಯವೇ ಇಲ್ಲ....!!! ಎಂದೆನಿಸಿತು.
ಅಪ್ಪನ ಕೈಯಲ್ಲಿ ಕೆಲವು ಪತ್ರಗಳಿದ್ದವು....ಒಂದನ್ನು ತೆಗೆದು ಓದಿದೆ.
ಅರೆ ...!! ನಾನೇ ಬರೆದ ಕವನಗಳು..!!
ಸುಬ್ಬಿ ತನ್ನ ಹಸ್ತಾಕ್ಷರದಿಂದ ಕಿಟ್ಟಿಗಾಗಿ ಬರೆದಿದ್ದಳು....ಕಿಟ್ಟಿಯನ್ನು ಆ ಪತ್ರದಲ್ಲಿ ಸಾಕಷ್ಟು ಹೊಗಳಿದ್ದಳು. ಅದು ನಾನು ಶಾಲಿನಿಗೆ ಹೊಗಳಿ ಬರೆದಂತೆಯೇ ಇತ್ತು..ಪತ್ರವೆಲ್ಲಾ ನನ್ನದೇ...ಆಗಿತ್ತು..!!!
ಸುಬ್ಬಿ ತಂದೆ ಹಿಡಿದು ಕೊಂಡಿದ್ದ ಪತ್ರವೊಂದನ್ನು ಪಡೆದು ಓದಿದೆ..
ಅರೆ...!!! ಶಾಲಿನಿ ನನಗಾಗಿ ಬರೆದ ಕವನಗಳು ...
ಕಿಟ್ಟಿ ತನ್ನ ಹಸ್ತಾಕ್ಷರದಿಂದ ಸುಬ್ಬಿಗೆ ಬರೆದಿದ್ದ.
ಶಾಲಿನಿ ನನಗಾಗಿ ಗೀಚಿದ ಕವನಗಳನ್ನು ಕಿಟ್ಟಿ ಸುಬ್ಬಿಗಾಗಿ ಬರೆದಿದ್ದ...!!
ನನಗೆ ಏನೂ ತೋಚದಂತಾಯಿತು....
ಸ್ವಲ್ಪ ಯೋಚಿಸಿದಾಗ ನಿಧಾನವಾಗಿ ನನ್ನ ಅರಿವಿಗೆ ಬರಲಾರಂಭಿಸಿತು...
ನಾ ಶಾಲಿನಿಗೆ ಬರೆದ ಕವನಗಳನ್ನು ಸುಬ್ಬಿ ಕದ್ದು ಓದಿ ತಾನೇ ಬರೆದಂತೆ ಕಿಟ್ಟಿಗೆ ಬರೆಯುವುದು..ಶಾಲಿನಿ ನನಗಾಗಿ ಬರೆದ ಕವನಗಳನ್ನು ಕಿಟ್ಟಿ ಓದಿ ತಾನೇ ಬರೆದಂತೆ ಸುಬ್ಬಿಗೆ ಬರೆಯುವುದು.
ಹೀಗೆ ಇವರಿಬ್ಬರೂ ಪತ್ರ ಬರೆದುಕೊಂಡು ತಮ್ಮ ತಮ್ಮ ಪ್ರೀತಿಯನ್ನು ಬೆಳೆಸಿಕೊಂಡಿದ್ದರು.
ನಮ್ಮ ಪತ್ರಗಳನ್ನು ಯಾರೂ ಒಡೆದು ಓದಲಾರರು
ಎಂದುಕೊಂಡು ನಾವಿಬ್ಬರು ಮೂರ್ಖರಾಗಿದ್ದೆವು. ಕಿಟ್ಟಿ 'ಕ್ಷಮಿಸು' ಎನ್ನುವಂತೆ ಕಣ್ಣಲ್ಲೇ ಕೈಮುಗಿದ. ಯಾರೋ ಬರೆದ ಪತ್ರಗಳು ಮತ್ತ್ಯಾರಿಗೋ ಲಾಭ ತಂದು ಕೊಟ್ಟಿದ್ದವು.. ನಾವು ಬರೆದುಕೊಂಡ ಕವನಗಳಿಗೆ ಇನ್ಯಾರೋ ಪುಳಕಿತಗೊಂಡಿದ್ದರು. ನಮ್ಮ ಪ್ರೀತಿ ಇನ್ನೇನು ಭದ್ರವಾಯಿತೆಂದುಕೊಳ್ಳುವಾಗ ಇನ್ಯಾರೋ ಬದುಕನ್ನು ಕಟ್ಟಿಕೊಂಡರು.
ಅಲ್ಲಿಂದ ಶಾಲಿನಿಯ ಪತ್ರ ಬರುವುದು ನಿಂತಿತು...
ಒಂದು ತಿಂಗಳ ನಂತರ ಸುಬ್ಬಿ ನನ್ನ ಭೇಟಿಯಾದಳು. ನನ್ನ ಮುಂದೆ ಕೈಮುಗಿದು.
" ನನ್ನನ್ನು ಕ್ಷಮಿಸಿ ಬಿಡಿ.... ನಾ ಕಿಟ್ಟಿ ಜೊತೆ ಬಂದಾಗಿನಿಂದ ಶಾಲಿನಿ ಮನೆಯಲ್ಲೂ ಗಲಾಟೆಯಾಯಿತು. ಅವರಪ್ಪ ನೀನು ಸುಬ್ಬಿ ತರ ಆಗಬೇಡ ಎಂದು ಬೈದು ಹತ್ತಿರದ ಸಂಬಂದಿಯರಡನೆ ನಿಶ್ಚಿತಾರ್ಥ ಮುಗಿಸಿದ್ದಾರೆ"
ಬೇಸರದಿಂದ ಹೇಳಿದಳು.
ಸುಬ್ಬಿ ನಮ್ಮೂರಿಗೆ ಸೊಸೆಯಾಗಿ ಬಂದಿದ್ದರಿಂದ ನನ್ನ ಮತ್ತು ಶಾಲಿನಿಯ ಪ್ರೇಮ ಸೇತುವೆಯೂ ಮುರಿದು ಬಿತ್ತು. ಕಿಟ್ಟಿ - ಸುಬ್ಬಿಯ ಮದುವೆಯೇ ನನ್ನ ಪ್ರೀತಿ ಮುರಿದು ಬೀಳಲು ಪ್ರಮುಖ ಕಾರಣವಾಯಿತು.
ಕೆಲವೊಮ್ಮೆ ಯಾರದೋ ಪ್ರೀತಿಗೆ ಇನ್ಯಾರೋ ಕನಸು ಕಟ್ಟಿಕೊಳ್ಳುತ್ತಾರೆ.ಯಾರದೋ ಕತೆಗೆ ಇನ್ಯಾರೋ ಮುನ್ನುಡಿ ಬರೆದು ಕೊಳ್ಳುತ್ತಾರೆ.. ಯಾರದೋ ಪಾತ್ರಕ್ಕೆ ಮತ್ತ್ಯಾರದೋ ಅಭಿನಯ... ನನ್ನ ಮತ್ತು ಶಾಲಿನಿಯ ಪಾತ್ರಕ್ಕೆ ಇನ್ಯಾರದ್ದೋ ಪರಕಾಯ ಪ್ರವೇಶ...ನಮ್ಮಿಬ್ಬರ ಪ್ರೇಮ ಕತೆಗೆ ಇನ್ಯಾರೋ ನಾಯಕ - ನಾಯಕಿಯಾಗಿ ಮೆರೆದಿದ್ದರು........
-ಪ್ರಕಾಶ್ ಎನ್ ಜಿಂಗಾಡೆ

No comments:

Post a Comment