Friday 5 February 2016

ಕನ್ನಡ ಪಾಠ

ಕನ್ನಡ ಪಾಠ (ಸಣ್ಣ ಕತೆ)

ಬಿಡುವಿನ ವೇಳೆ ನಾನು, ರಾಕೇಶ್ ಮತ್ತು ಗೌರಿಶಂಕರ್ ಸ್ಟ್ಯಾಫ್ ರೂಮಲ್ಲಿ ಕುಳಿತು ಆಗಾಗ ತಮಾಷೆ ಮಾಡಿಕೊಂಡು ನಗುತ್ತಿದ್ದೆವು.ರಾಕೇಶ್ ಕನ್ನಡ ಕಲಿಯುವ ಇಂಗಿತ ವ್ಯಕ್ತಪಡಿಸಿದ..
ಆತ ಬಿಹಾರ್ ನವನು. ಬೆಂಗಳೂರಿಗೆ ಬಂದು ಎರಡು ವರ್ಷ ಮಾತ್ರ ಆಗಿತ್ತು. ಈತ ನಮ್ಮ ಶಾಲೆಯ ಹಿಂದಿ ಪಂಡಿತ.
"ಇಬ್ಬರು ಕನ್ನಡ ಟೀಚರ್ ನನ್ನ ಜೊತೆಯಲ್ಲಿದ್ದೀರಿ...ಜೊತೆಯಲ್ಲೇ ಕೂರುತ್ತೇವೆ ಸ್ವಲ್ಪ ಕನ್ನಡವಾದರೂ ಕಲಿಸುತ್ತೀರಾ....?
ಎಂದು ನನ್ನ ಮತ್ತು ಗೌರಿಶಂಕರ್ ಕಡೆ ತಿರುಗಿ ಹೇಳಿದ.ಆತನ ಉತ್ಸಾಹ ನೋಡಿ ನಾವು ಕನ್ನಡ ಕಲಿಸಲು ಒಪ್ಪಿಕೊಂಡೆವು. ಬಿಹಾರದವನು ಕನ್ನಡ ಕಲಿಯುತ್ತೇನೆ ಎಂದಾಗ ನಮಗೂ ಖುಷಿಯಾಯಿತು.ಅಂದಿನಿಂದ ಪ್ರತಿದಿನ ಐದದು ಕನ್ನಡ ಪದಗಳನ್ನು ಇಂಗ್ಲಿಷಿನಲ್ಲಿ ಬರೆದುಕೊಂಡು ಕಲಿಯತೊಡಗಿದ...
ಎಷ್ಟೇ ಪ್ರಯತ್ನಿಸಿದರೂ ಕನ್ನಡ ನಾಲಿಗೆಗೆ ಬರುತ್ತಿರಲಿಲ್ಲ. ತನ್ನ ಈ ಕಷ್ಟವನ್ನು ಒಂದು ದಿನ ನಮ್ಮ ಶಾಲೆಯ ಬಸ್ ಕಂಡಕ್ಟರ್ ಬಳಿ ಹೇಳಿಕೊಂಡ. ಆತ
" ಮೊದಲು ಕನ್ನಡದ ಕೆಟ್ಟ ಕೆಟ್ಟ ಪದಗಳನ್ನು ಕಲಿಯಿರಿ. ಉಳಿದ ಪದಗಳು ತಾನಾಗಿಯೇ ಬರುತ್ತವೆ"
ಎಂಬ ತರ್ಲೆ ಐಡಿಯಾವನ್ನು ರಾಕೇಶನ ಕಿವಿಯಲ್ಲಿ ತುಂಬಿದ. ಬಸ್ ಕಂಡಕ್ಟರ್ ನ ಸಲಹೆ ರಾಕೇಶನಿಗೆ ಬಹಳ ಹಿಡಿಸಿತು.ಅಂದಿನಿಂದ ಅವನ ಚಿತ್ತ ಕೆಟ್ಟ ಪದಗಳ ಕಡೆಗೆ ನೆಟ್ಟಿತ್ತು. ಶಾಲೆಯ ಹೊರಗೆ. ಬೀದಿಯಲ್ಲಿ, ಸಂತೆಯಲ್ಲಿ, ಪೋಕರಿ ಹುಡುಗರ ಜಗಳ, ಹೀಗೆ ಹಲವು ಕಡೆಯಲ್ಲಿ ಕೇಳಿದ ಹೊಸ ಪದಗಳನ್ನು ನೆನಪಿಟ್ಟುಕೊಂಡು ನಮ್ಮಿಂದ ಅರ್ಥ ತಿಳಿದುಕೊಳ್ಳುತ್ತಿದ್ದ.
"ಬೇಡ ಈ ರೀತಿ ಕಲಿಯುವುದು ಬೇಡ, ಕಲಿತರೆ ಸರಿಯಾಗಿ ಕಲಿ. ಇಂತಹ ಪದಗಳಿಗೆ ಅರ್ಥ ಹೇಳುವುದು ನಮಗೂ ಮುಜುಗರವಾಗುತ್ತೆ"
ಎಂದು ಹೇಳಿ ನಾನು ಕನ್ನಡ ಕಲಿಸುವುದನ್ನು ನಿಲ್ಲಿಸಿಬಿಟ್ಟೆ. ಆದರೆ ಅವನು ಮಾತ್ರ ಬಿಡಲಿಲ್ಲ.
ಅವನು ವಾಸವಾಗಿದ್ದ ಮನೆಯ ಎರಡನೇ ಅಂತಸ್ತಿನಲ್ಲಿ ಗಂಡ ಹೆಂಡತಿಯರಿಬ್ಬರು ವಾಸವಾಗಿದ್ದರು.ಅವರು ಏನೇ ಮಾತನಾಡಿದರೂ ರಾಕೇಶನ ಮನೆಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆಗಾಗ ಆ ದಂಪತಿಗಳ ಜಗಳ ನಡೆಯುತ್ತಲೇ ಇತ್ತು. ಒಂದು ದಿನ ಆ ಜಗಳ ಭಯಾನಕ ರೂಪ ಪಡೆದುಕೊಂಡಿತ್ತು. ರಾತ್ರಿಯಲ್ಲೆಲ್ಲಾ ಅವರದು ರುದ್ರತಾಂಡವ.ಬೈಗುಳಗಳ ಸರಮಾಲೆಯೇ ಹರಿಯುತು.ಆದರೆ ಈ ಮಹಾಶಯ ಗೋಡೆಗೆ ಕಿವಿಯಿಟ್ಟು ಕೆಲವು ಕನ್ನಡ ಪದಗಳನ್ನು ತನ್ನ ಮೆದುಳಿನಲ್ಲಿ ಸಂಗ್ರಹಿಸಿಕೊಂಡ. ಆ ದಿನ ರಾಕೇಶನ ಶಬ್ಧಕೋಶದಲ್ಲಿ ಹೊಸ ಹೊಸ ಪದಗಳು ಸೇರಿಕೊಂಡಿದ್ದವು.
ಮಾರನೇ ದಿನ ಶಾಲೆಗೆ ಬಂದಾಗ ರಾಕೇಶ್ ಮನೆಯಲ್ಲಿ ನಡೆದ ಗಂಡ ಹೆಂಡತಿಯರ ಜಗಳದ ವಿಷಯವನ್ನು ಚರ್ಚಿಸಿದನು.
" ಇಲ್ಲಿಯ ಜನರಲ್ಲಿ ಅದೇನು ಸಂಸ್ಕೃತಿ.....? ಅದೇನು ಗೌರವ......? ಜಗಳದಲ್ಲೂ ಹೆಂಡತಿಯು ಗಂಡನಿಗೆ ಅದೆಷ್ಟು ಗೌರವ ಕೊಡುತ್ತಾಳೆ..."
ಎಂದನು
ಆತನ ಮಾತು ನನಗೆ ನಂಬಲಾಗಲಿಲ್ಲ
"ಏನು...???!!!! ..ಜಗಳದಲ್ಲೂ ಗಂಡನಿಗೆ ಮರ್ಯಾದೆಯೇ...?"
ಎಂದು ಕೇಳಿದೆ.
"ಹೌದು...ಗಂಡ ಹೆಂಡತಿಗೆ ಭಯಂಕರವಾಗಿ ಬಯ್ಯುತ್ತಿದ್ದರೂ...ಹೆಂಡತಿ ಮಾತ್ರ ಗಂಡನಿಗೆ ನೀನು ನಾರದ ಮುನಿ, ನಾರದ ಮುನಿ, ಎಂದು ಅಷ್ಟು ಮಾತ್ರ ಬಯ್ಯುತ್ತಿದ್ದಳು...ಯಾರಿಗೋ ನಾರದಮುನಿಯಂತೆ ಫಿಟ್ಟಿಂಗ್ ಇಟ್ಟಿರಬೇಕು.ಅದಕ್ಕೆ ಈ ಜಗಳ ನಡೆಯುತ್ತಿತ್ತು...ನಮ್ಮ ಬಿಹಾರದಲ್ಲಾಗಿದ್ದರೆ ಹಂಡತಿಯರ ಬಾಯಲ್ಲಿ ಒಳ್ಳೆ ಮಾತುಗಳು ಬರುತ್ತಿರಲಿಲ್ಲ..? ಇಲ್ಲಿಯವರು ಗಂಡ ತಪ್ಪು ಮಾಡಿದರೂ ಗಂಡನನ್ನು ಗೌರವದಿಂದಲೇ ಕಾಣುತ್ತಾರೆ. ಆ ಹೆಂಗಸು ಅಷ್ಟು ಕೆಟ್ಟ ಪದಗಳನ್ನು ಗಂಡನ ಮೇಲೆ ಉಪಯೋಗಿಸಲಿಲ್ಲ...ಜಗಳದಲ್ಲೂ ಗಂಡನಿಗೆ ಕೊಡಬೇಕಾದ ಗೌರವ ಕೊಡುತ್ತಿದ್ದಳು....!!
ಎಂದು ಹೇಳಿ ಸುಮ್ಮನಾದ
ರಾಕೇಶನ ಮಾತು ನನಗೆ ಆಶ್ಚರ್ಯ ತರಿಸಿತು.
"ಕನ್ನಡದಲ್ಲಿ ನಾರದಮುನಿ, ನಾರದಮುನಿ ಅಂತ ಯಾರೂ ಬೈಯ್ದಿದ್ದು ಇದುವರೆಗೂ ನಾನು ಕೇಳಿಲ್ಲ. ಹಾಗೆ ಯಾರೂ ಬೈಯ್ಯಲ್ಲ....ಅದೂ ಜಗಳದ ವಿಷಯದಲ್ಲಿ ಈ ಪದ ಉಪಯೋಗಿಸುವುದು ಕಡಿಮೆಯೇ ...!!! ಅವಳು ಬಳಸಿದ ಆ ಪದವನ್ನು ಸರಿಯಾಗಿ ನೆನಪಿಸಿಕೊಂಡು ಹೇಳು..."
ಎಂದೆ
ಅದಕ್ಕೆ ಆತ " ನನಗೆ ಸರಿಯಾಗಿ ನೆನಪಿದೆ ಹೆಂಡತಿ ಪ್ರತಿ ಸಾರಿ ಗಂಡನಿಗೆ ದೇವರ್ಷಿ.. ದೇವರ್ಷಿ ಎಂದು ನಾರದಮುನಿಗೆ ಹೊಲಿಸುತ್ತಿದ್ದಳು ಆಕೆಯ ಈ ಮಾತು ಈಗಲೂ ನನ್ನ ಕಿವಿಯಲ್ಲಿ ಗುಂಯ್ಯ್ ಗುಟ್ಟುತ್ತಿದೆ " ಎಂದನು.
ನನಗೆ ಮತ್ತು ಗೌರಿಶಂಕರಗೆ ನಗು ತಡೆಯಲಾಗಲಿಲ್ಲ.
"ಅಯ್ಯೋ ಮಾರಾಯ....ಅದು ದೇವರ್ಷಿಯಲ್ಲ ಬೇವರ್ಸಿ ಅಂತ "
ಎಂದು ಹೇಳಿ ಅದರ ಅರ್ಥ ವಿವರಿಸಿದಾಗ ರಾಕೇಶನು ತನ್ನ ಕಣ್ಣು ಗುಡ್ಡೆಗಳನ್ನು ದಡ್ಡದಾಗಿಸಿಕೊಂಡು ಕಕ್ಕಾಬಿಕ್ಕಿಯಾಗಿ ಅತ್ತಿತ್ತ ನೋಡಿ ತಲೆತಿರುಗಿ ಬೀಳುವ ಹಂತಕ್ಕೆ ತಲುಪಿದ್ದ.......
ಯಾವುದೇ ಕಾರ್ಯ ಒಳ್ಳೆಯತನದಿಂದಲೇ ಪ್ರಾರಂಭಿಸಬೇಕು. ಅದರಲ್ಲೂ ಕಲಿಕೆಯಂತಹ ವಿಷಯ ಉತ್ತಮ ಅಂಶಗಳಿಂದ ಪ್ರೇರಣೆಗೊಳ್ಳಬೇಕು. ಆಗ ಮಾತ್ರ ಸರಸ್ವತಿ ಒಲಿಯುತ್ತಾಳೆ.
                                               
               - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment